Homeಮುಖಪುಟಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

- Advertisement -
- Advertisement -

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ. 

ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಗುರುವಾರ ವಿ.ಡಿ. ಸತೀಶನ್ ಅವರನ್ನು ಕೇರಳದ ಮುಂದಿನ ಮತ್ತು 13 ನೇ ಮುಖ್ಯಮಂತ್ರಿಯಾಗಿ ಘೋಷಿಸಿದ್ದು, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ನಲ್ಲಿ ಸುಮಾರು 10 ದಿನಗಳ ಸಸ್ಪೆನ್ಸ್, ಆಂತರಿಕ ಲಾಬಿ ಮತ್ತು ತೀವ್ರ ಊಹಾಪೋಹಗಳಿಗೆ ಅಂತ್ಯ ಹಾಡಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ದೀಪಾ ದಾಸ್ ಮುನ್ಷಿ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷವು ಸರ್ವಾನುಮತದಿಂದ ಹೊಸ ನಾಯಕರ ನೇಮಕಾತಿಗೆ ಅಧಿಕಾರ ನೀಡಿದ್ದು, ಎಲ್ಲಾ ಚರ್ಚೆಗಳ ನಂತರ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಲೆಜಿಸ್ಲೇಟಿವ್ ಪಾರ್ಟಿ (ಸಿಎಲ್‌ಪಿ) ನಾಯಕರಾಗಿ ನೇಮಿಸಲು ನಿರ್ಧರಿಸಲಾಗಿದೆ ಎಂದು ಘೋಷಿಸಿದರು.

ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಸತೀಶನ್ ಅವರು ಯುಡಿಎಫ್ ಅಭಿಯಾನವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸೇರಿದಂತೆ ಮಿತ್ರಪಕ್ಷಗಳ ಬಲವಾದ ಬೆಂಬಲವನ್ನು ಪಡೆದಿದ್ದರು. 

ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ಅವರಂತಹ ಹಿರಿಯ ನಾಯಕರ ನಡುವಿನ ಸ್ಪರ್ಧೆಯ ನಂತರ ಹೈಕಮಾಂಡ್ ಅವರನ್ನು ಆಯ್ಕೆ ಮಾಡಿದೆ.

ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಗ್ಗೆ ಪ್ರತಿಕ್ರಿಯಿಸಿದ ವಿ.ಡಿ. ಸತೀಶನ್ ಅವರು ಈ ಜವಾಬ್ದಾರಿಯನ್ನು “ದೊಡ್ಡ ಜವಾಬ್ದಾರಿ ಮತ್ತು ದೈವಿಕ ನಿಯೋಜನೆ” ಎಂದು ಬಣ್ಣಿಸಿದ್ದಾರೆ. 

ಪಕ್ಷದ ನಾಯಕತ್ವ, ಯುಡಿಎಫ್ ಮಿತ್ರಪಕ್ಷಗಳು, ಕಾರ್ಯಕರ್ತರು ಮತ್ತು ಕೇರಳ ಜನತೆಯ ಬೆಂಬಲಕ್ಕೆ ಧನ್ಯವಾದಗಳನ್ನು ಅರ್ಪಿಸಿದ ಅವರು, ಈ ಗೆಲುವು ಸಾಮೂಹಿಕ ಪ್ರಯತ್ನದ ಫಲವೆಂದು ಹೇಳಿದರು. 

ರಮೇಶ್ ಚೆನ್ನಿತ್ತಲ ಅವರನ್ನು “ಪ್ರೀತಿಯ ನಾಯಕ” ಎಂದು ಉಲ್ಲೇಖಿಸಿದ ಅವರು, ಕೆ.ಸಿ. ವೇಣುಗೋಪಾಲ್ ಅವರಿಗೂ ವಿಶೇಷ ಮನ್ನಣೆ ನೀಡಿದರು.

ಕೇರಳ ಪ್ರಸ್ತುತ “ಸಂಕೀರ್ಣ ಪರಿಸ್ಥಿತಿ”ಯನ್ನು ಎದುರಿಸುತ್ತಿದೆ ಎಂದು ಒತ್ತಿ ಹೇಳಿದ ಸತೀಶನ್, ಹೊಸ ಸರ್ಕಾರ ಜನರ ಜೀವನ ಮಟ್ಟ ಸುಧಾರಿಸಲು ಸಕ್ರಿಯವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ವಿರೋಧ ಪಕ್ಷಗಳ ಸಹಕಾರವನ್ನೂ ಅವರು ಕೋರಿದರು.ಕೆ.ಸಿ. ವೇಣುಗೋಪಾಲ್ ಅವರು ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸುತ್ತಾ, “ಮೊದಲು ಕಾಂಗ್ರೆಸ್” ಎಂದು ಹೇಳಿ ಸತೀಶನ್ ನೇತೃತ್ವದ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು. ಆದರೆ ರಮೇಶ್ ಚೆನ್ನಿತ್ತಲ ಅವರು ನಾಯಕತ್ವ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ.

ವಿ.ಡಿ. ಸತೀಶನ್ ಅವರು ಅನುಭವಿ ರಾಜಕಾರಣಿ ಮತ್ತು ವಕೀಲರಾಗಿದ್ದು, ಪರವೂರು ಕ್ಷೇತ್ರದಿಂದ ಬಹುಬಾರಿ ಆಯ್ಕೆಯಾಗಿದ್ದಾರೆ. ಅವರ ನೇತೃತ್ವದಲ್ಲಿ ಕೇರಳದಲ್ಲಿ ಹೊಸ ಯುಗ ಆರಂಭವಾಗುವ ನಿರೀಕ್ಷೆ ಹೆಚ್ಚಿದೆ. ಪ್ರಮಾಣ ವಚನ ಸಮಾರಂಭದ ದಿನಾಂಕ ಶೀಘ್ರದಲ್ಲಿ ಪ್ರಕಟವಾಗಲಿದೆ.

ವಿ.ಡಿ. ಸತೀಶನ್ : ಕೇರಳದ 13ನೇ ಮುಖ್ಯಮಂತ್ರಿ, ವಿದ್ಯಾರ್ಥಿ ಚಳವಳಿಯಿಂದ ಅಧಿಕಾರದ ಶೃಂಗಕ್ಕೆ

ವಿದ್ಯಾರ್ಥಿ ಚಳವಳಿಯಿಂದ ಆರಂಭಿಸಿ ದಶಕಗಳ ಕಾಲದ ಶಾಸಕಾಂಗ ಅನುಭವ, ವಕೀಲ ವೃತ್ತಿ ಮತ್ತು ಆಕ್ರಮಣಕಾರಿ ವಿರೋಧ ಪಕ್ಷದ ನಾಯಕತ್ವದ ಮೂಲಕ ಸತೀಶನ್ ಅವರು ರಾಜ್ಯ ರಾಜಕೀಯದ ಪ್ರಮುಖ ಮುಖವಾಗಿ ಬೆಳೆದಿದ್ದಾರೆ.

ದಿವಂಗತ ಕೆ. ದಾಮೋದರ ಮೆನನ್ ಮತ್ತು ವಿ. ವಿಲಾಸಿನಿ ಅಮ್ಮನವರ ಮಗನಾಗಿ ಜನಿಸಿದ ವಿ.ಡಿ. ಸತೀಶನ್, ನೆಟ್ಟೂರು ಮತ್ತು ಪನಂಗಾಡ್‌ನಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದರು. ತೇವರದ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡಿದ ನಂತರ ರಾಜಗಿರಿ ಸಮಾಜ ವಿಜ್ಞಾನ ಕಾಲೇಜಿನಿಂದ ಸಮಾಜ ಸೇವೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ, ತಿರುವನಂತಪುರದ ಕಾನೂನು ಅಕಾಡೆಮಿಯಿಂದ ಎಲ್‌ಎಲ್‌ಬಿ ಮತ್ತು ಸರ್ಕಾರಿ ಕಾನೂನು ಕಾಲೇಜಿನಿಂದ ಎಲ್‌ಎಲ್‌ಎಂ ಪದವಿ ಪಡೆದರು. 

ಕೇರಳ ಹೈಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದ ಸತೀಶನ್, 2001ರಲ್ಲಿ ಉತ್ತರ ಪರವೂರಿನಿಂದ ಕೇರಳ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. ಅಂದಿನಿಂದಲೂ ಅವರು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನಲ್ಲಿ ಪ್ರಮುಖ ವ್ಯಕ್ತಿಯಾಗಿ ಮುಂದುವರಿದಿದ್ದಾರೆ.

ಅವರ ರಾಜಕೀಯ ಪಯಣ ವಿದ್ಯಾರ್ಥಿ ದಿನಗಳಲ್ಲೇ ಆರಂಭವಾಯಿತು. ಕೇರಳ ವಿದ್ಯಾರ್ಥಿ ಒಕ್ಕೂಟ (ಕೆಎಸ್‌ಯು) ಮೂಲಕ ಚಳವಳಿಗೆ ತೊಡಗಿದ ಅವರು, ಎಂಜಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ನಂತರ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ)ನೊಂದಿಗೆ ಸಂಬಂಧ ಬೆಳೆಸಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸದಸ್ಯ ಮತ್ತು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಕಾರಿ ಸದಸ್ಯರಾಗಿ ಪಕ್ಷದಲ್ಲಿ ಬಲವಾದ ಸ್ಥಾನವನ್ನು ಗಳಿಸಿದರು.

ತಮ್ಮ ವಾಗ್ಮಿತೆ ಮತ್ತು ಶಾಸಕಾಂಗ ಹಸ್ತಕ್ಷೇಪಗಳಿಗೆ ಹೆಸರುವಾಸಿಯಾದ ಸತೀಶನ್, 2021ರಿಂದ 2026ರವರೆಗೆ ವಿರೋಧ ಪಕ್ಷದ ನಾಯಕರಾಗಿ ತೀವ್ರ ಆಕ್ರಮಣಕಾರಿ ನಿಲುವು ತಳೆದಿದ್ದರು. ಈ ಅವಧಿಯಲ್ಲಿ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಕೋಮುವಾದ ಎರಡಕ್ಕೂ ವಿರುದ್ಧ ದೃಢ ನಿಲುವು ತೆಗೆದುಕೊಂಡ ಅವರು, ಚುನಾವಣಾ ಲಾಭಕ್ಕಾಗಿ ಜಾತ್ಯತೀತ ಮೌಲ್ಯಗಳನ್ನು ರಾಜಿ ಮಾಡಿಕೊಳ್ಳಬಾರದು ಎಂದು ಪದೇ ಪದೇ ಒತ್ತಾಯಿಸಿದರು. 

ಆಡಳಿತಾರೂಢ ಸಿಪಿಐ(ಎಂ) ಸರ್ಕಾರವನ್ನು ರಾಜಕೀಯ ಅವಕಾಶವಾದ ಮತ್ತು ತುಷ್ಟೀಕರಣ ತಂತ್ರಗಳ ಆರೋಪದೊಂದಿಗೆ ತೀವ್ರವಾಗಿ ಟೀಕಿಸಿದ ಅವರು, ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ “ಬಹುಸಂಖ್ಯಾತ ಕೋಮುವಾದ”ವನ್ನು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿದ್ದರು. 

ವಿರೋಧ ಪಕ್ಷದ ನಾಯಕರಾಗಿ ಯುಡಿಎಫ್‌ನ ಪುನರ್ನಿರ್ಮಾಣಕ್ಕೆ ನಾಯಕತ್ವ ನೀಡಿದ ಸತೀಶನ್, 2026ರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ನಿರ್ಣಾಯಕ ಬಹುಮತ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ರಾಜಕೀಯದ ಜೊತೆಗೆ ಟ್ರೇಡ್ ಯೂನಿಯನ್ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದ ಅವರು, FACT, ಕೊಚ್ಚಿನ್ ರಿಫೈನರೀಸ್, TELK ಸೇರಿದಂತೆ ಹಲವು ಸಾರ್ವಜನಿಕ ಮತ್ತು ಖಾಸಗಿ ಕೈಗಾರಿಕೆಗಳ ಕಾರ್ಮಿಕ ಸಂಘಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 

ಅತ್ಯಾಸಕ್ತಿಯ ಓದುಗ, ಪ್ರಕೃತಿ ಪ್ರೇಮಿ ಮತ್ತು ಚಾರಣಿಗರಾದ ಸತೀಶನ್ ಅವರು ಶಾಸಕಾಂಗ ಕಾರ್ಯಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವುಗಳಲ್ಲಿ ಎ.ಎ. ರಹೀಮ್ ಸ್ಮಾರಕ ಪ್ರಶಸ್ತಿ, ಚೆರಿಯನ್ ಜೆ. ಕಪ್ಪನ್ ಸ್ಮಾರಕ ಪ್ರಶಸ್ತಿ ಮತ್ತು ಫೋಕಾನಾ, ಗ್ಲೋಬಲ್ ಮಲಯಾಳಿ ಕೌನ್ಸಿಲ್‌ನಂತಹ ಸಂಸ್ಥೆಗಳ ಗೌರವಗಳು ಸೇರಿವೆ. 

ಉತ್ತರ ಪರವೂರಿನಲ್ಲಿ ಶೈಕ್ಷಣಿಕ, ಆರೋಗ್ಯ ಮತ್ತು ಅಭಿವೃದ್ಧಿ ಉಪಕ್ರಮಗಳ ಮೂಲಕ ಬಲವಾದ ಕ್ಷೇತ್ರದ ಬೆಂಬಲವನ್ನು ವಿ.ಡಿ. ಸತೀಶನ್ ಕಾಯ್ದುಕೊಂಡಿದ್ದಾರೆ. 

1957ರಲ್ಲಿ ಕೇರಳ ರಾಜ್ಯ ರಚನೆಯಾದಾಗಿನಿಂದ ಒಟ್ಟು 12 ಮುಖ್ಯಮಂತ್ರಿಗಳನ್ನು ಕಂಡ ಕೇರಳವು ಈಗ ವಿ.ಡಿ. ಸತೀಶನ್ ಅವರ ಮೂಲಕ 13ನೇ ಮುಖ್ಯಮಂತ್ರಿಯನ್ನು ಪಡೆದಿದೆ. ಇದರೊಂದಿಗೆ ರಾಜ್ಯ ರಾಜಕೀಯದಲ್ಲಿ ಹೊಸ ನಿರೀಕ್ಷೆಗಳು ಹುಟ್ಟಿವೆ.

ಕೇರಳದಲ್ಲಿ ಈವರೆಗೆ ಅಧಿಕಾರ ನಡೆಸಿದ ಮುಖ್ಯಮಂತ್ರಿಗಳು ಮತ್ತು ಕಾಲಘಟ್ಟ

ಇ.ಎಂ.ಎಸ್. ನಂಬೂದಿರಿಪಾಡ್ (ಸಿಪಿಐ) — 1957–1959

ಪತ್ತಂ ಎ. ಥಾನು ಪಿಳ್ಳೈ (ಪಿಎಸ್‌ಪಿ) — 1960–1962

ಆರ್. ಶಂಕರ್ (ಐಎನ್‌ಸಿ) — 1962–1964

ಇ.ಎಂ.ಎಸ್. ನಂಬೂದಿರಿಪಾಡ್ (ಸಿಪಿಐ(ಎಂ)) — 1967–1969

ಸಿ. ಅಚ್ಯುತ ಮೇನನ್ (ಸಿಪಿಐ) — 1969–1970

ಸಿ. ಅಚ್ಯುತ ಮೇನನ್ (ಸಿಪಿಐ) — 1970–1977

ಕೆ. ಕರುಣಾಕರನ್ (ಐಎನ್‌ಸಿ) — 1977

ಎ.ಕೆ. ಆಂಟನಿ (ಐಎನ್‌ಸಿ) — 1977–1978

ಪಿ.ಕೆ. ವಾಸುದೇವನ್ ನಾಯರ್ (ಸಿಪಿಐ) — 1978–1979

ಸಿ.ಹೆಚ್. ಮುಹಮ್ಮದ್ ಕೋಯ (ಐಯುಎಂಎಲ್) — 1979

ಇ.ಕೆ. ನಾಯನಾರ್ (ಸಿಪಿಐ(ಎಂ)) — 1980–1981

ಕೆ. ಕರುಣಾಕರನ್ (ಐಎನ್‌ಸಿ) — 1981–1982

ಕೆ. ಕರುಣಾಕರನ್ (ಐಎನ್‌ಸಿ) — 1982–1987

ಇ.ಕೆ. ನಾಯನಾರ್ (ಸಿಪಿಐ(ಎಂ)) — 1987–1991

ಕೆ. ಕರುಣಾಕರನ್ (ಐಎನ್‌ಸಿ) — 1991–1995

ಎ.ಕೆ. ಆಂಟನಿ (ಐಎನ್‌ಸಿ) — 1995–1996

ಇ.ಕೆ. ನಾಯನಾರ್ (ಸಿಪಿಐ(ಎಂ)) — 1996–2001

ಎ.ಕೆ. ಆಂಟನಿ (ಐಎನ್‌ಸಿ) — 2001–2004

ಉಮ್ಮನ್ ಚಾಂಡಿ (ಐಎನ್‌ಸಿ) — 2004–2006

ವಿ.ಎಸ್. ಅಚ್ಯುತಾನಂದನ್ (ಸಿಪಿಐ(ಎಂ)) — 2006–2011

ಉಮ್ಮನ್ ಚಾಂಡಿ (ಐಎನ್‌ಸಿ) — 2011–2016

ಪಿನರಾಯಿ ವಿಜಯನ್ (ಸಿಪಿಐ(ಎಂ)— 2016–2021

ಪಿನರಾಯಿ ವಿಜಯನ್ (ಸಿಪಿಐ(ಎಂ) — 2021–2026 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...