Homeಮುಖಪುಟಕಳಚಿಕೊಂಡ ಬಂಗಾಳ ಸಿನಿಮಾ ಪುನರ್‌ನಿರ್ಮಾಣದ ಕೊಂಡಿ ಸೌಮಿತ್ರ ಚಟರ್ಜಿ

ಕಳಚಿಕೊಂಡ ಬಂಗಾಳ ಸಿನಿಮಾ ಪುನರ್‌ನಿರ್ಮಾಣದ ಕೊಂಡಿ ಸೌಮಿತ್ರ ಚಟರ್ಜಿ

ಸೌಮಿತ್ರ ಚಟರ್ಜಿ ನಿದನರಾದಾಗ ಪ.ಬಂಗಾಳದ ಕಡೆಯ ಸಾಂಸ್ಕೃತಿಕ ಐಕಾನ್ ಎಂದು ಅವರನ್ನು ಬಣ್ಣಿಸಲಾಯಿತು.

- Advertisement -
- Advertisement -

(ಈ ಪ್ರಬಂಧ ಹೊಸ ಬರಹದಲ್ಲಿದೆ ಕನ್ನಡ ನುಡಿಗೆ ಹೊಂದದ ಮಹಾಪ್ರಾಣಗಳನ್ನು ಕೈಬಿಡಲಾಗಿದೆ ಅಥವಾ ಮಿತವಾಗಿ ಬಳಸಲಾಗಿದೆ)

ಬಹುಶಃ ನಟ ದೇವಾನಂದ್ ಹೊರತುಪಡಿಸಿದರೆ ಸೌಮಿತ್ರ ಚಟರ್ಜಿಯೊಬ್ಬರೇ ತಮ್ಮ 85ನೆ ವಯಸ್ಸಿನಲ್ಲಿಯೂ ನಟನೆಯಲ್ಲಿ ಸಕ್ರಿಯರಾಗಿದ್ದರು. 2020ರ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ‘Borunbabur Bondhu’ ಸಿನಿಮಾದಲ್ಲಿ ಅವರು ಲೇಖಕ, ಎಡಪಂಥೀಯ ಚಿಂತಕ Borunbabur ಪಾತ್ರದಲ್ಲಿ ಅಬಿನಯಿಸಿದ್ದರು. 62 ವರ್ಶಗಳ ಈ ಸುದೀರ್ಘ ಪಯಣದಲ್ಲಿ ಅವರು ಬೀಳುಗಳನ್ನು ಎದುರಿಸಿದ್ದು ಇಲ್ಲವೇ ಇಲ್ಲ ಎನ್ನಬಹುದು. 1959ರಲ್ಲಿ ಸತ್ಯಜಿತ್ ರೇ ಅವರ ‘ಅಪೂ ಸಂಸಾರ್’ ಸಿನಿಮಾದಲ್ಲಿ ಪದವಿ ಮುಗಿಸದ ಯುವಕ ಅಪೂನ ಪಾತ್ರದ ಮೂಲಕ ಸಿನಿಮಾ ಜೀವನ ಆರಂಬಿಸುವ ಸೌಮಿತ್ರ ನಿಜಜೀವನದಲ್ಲಿ ಸಾಹಿತ್ಯದ ಸ್ನಾತಕೋತ್ತರ ಪದವೀದರ. ಐವತ್ತರ ದಶಕದ ಕೊನೆ, ಅರವತ್ತರ ದಶಕದ ಆರಂಬದಲ್ಲಿ ಸೌಮಿತ್ರ ಬಂಗಾಲಿ ಸಿನಿಮಾ ಪ್ರವೇಶಿಸಿದಾಗ ಅಲ್ಲಿ ನಟ ಉತ್ತಮ ಕುಮಾರ್ ಸೂಪರ್‌ಸ್ಟಾರ್. ಬಂಗಾಳಿ ‘ಬದ್ರಲೋಕ್’ಗೆ ಸೌಮಿತ್ರರ ನಗರದ ನಾಜೂಕುತನ, ಸಾಹಿತ್ಯ/ರಂಗಬೂಮಿ ಕಲಿಕೆ, ಮತ್ತು ಮದ್ಯಮವರ್ಗದ ನಾಜೂಕಿನ ವ್ಯಕ್ತಿತ್ವವು ಸಹಜವಾಗಿ ಆಕರ್ಶಕವಾಗಿ ಕಂಡಿತು. ಆಗ (1950-70) ಅಲ್ಲಿನ ಸಿನಿಮಾರಂಗದಲ್ಲಿ, ಸಾಂಸ್ಕೃತಿಕ ವಲಯದಲ್ಲಿ ಟ್ಯಾಗೋರ್‌ರ ಸಾಹಿತ್ಯದ ಸಂವೇದನೆ ಡಾಳಾಗಿತ್ತು. ಸೌಮಿತ್ರರಂತಹ ಸಾಹಿತ್ಯದ ಹಿನ್ನಲೆಯ ಒಬ್ಬ ಉದಯೋನ್ಮುಖ ಕಲಾವಿದನಿಗೆ ಈ ವಾತಾವರಣ ಪೂರಕವಾಗಿತ್ತು.

ಸೌಮಿತ್ರ ಚಟರ್ಜಿ ನಿದನರಾದಾಗ ಪ.ಬಂಗಾಳದ ಕಡೆಯ ಸಾಂಸ್ಕೃತಿಕ ಐಕಾನ್ ಎಂದು ಅವರನ್ನು ಬಣ್ಣಿಸಲಾಯಿತು. ಇದಕ್ಕೆ ಕಾರಣ ಸೌಮಿತ್ರ ಅವರು ಟ್ಯಾಗೋರ್‌ರ ಸಾಹಿತ್ಯ ಬೌದ್ದಿಕತೆಯ ವಿದ್ಯಾರ್ಥಿಯಾಗಿದ್ದು, ರೇ, ಮೃಣಾಲ್ ಸೇನ್, ತಪನ್ ಸಿನ್ಹಾರಂತಹ ನಿರ್ದೇಶಕರ ಜೊತೆ ಕೆಲಸ ಮಾಡಿದ್ದು, ಎಡಪಂಥೀಯ ರಾಜಕೀಯ ಒಲವು ಮತ್ತು ಮುಖ್ಯವಾಗಿ ಇವರ ಬ್ರಾಹ್ಮಣ ಜಾತಿಯ ಹಿನ್ನಲೆ ಎಲ್ಲವೂ ಕಾರಣವೆಂದರೆ ಅದು ಅವರ ನಟನಾ ಪ್ರತಿಬೆಯನ್ನು ಗೌಣಗೊಳಿಸುವುದಿಲ್ಲ. ಜೊತೆಗೆ ಟ್ಯಾಗೋರ್ ಸಂದರ್ಬದ ಬಂಗಾಳ ಪುನರುತ್ತಾನದ (ರಿನಾಯ್ಸೆನ್ಸ್) ಗತಕಾಲ ಮತ್ತು 20ನೆ ಶತಮಾನದ ಬಂಗಾಳದ ಸಮಾಜೋ-ರಾಜಕೀಯ-ಸಾಂಸ್ಕೃತಿಕ ಬಿಕ್ಕಟ್ಟುಗಳ ಒಂದು ಕೊಂಡಿಯಾಗಿ ಕಾಣಿಸಿಕೊಂಡಿದ್ದು ಸಹ ಸೌಮಿತ್ರರ ಸಾರ್ವಜನಿಕ ಬದುಕಿನ ಸಾರ್ಥಕತೆ ಎನ್ನಬಹುದು.

‘ಅಪೂ ಸಂಸಾರ್’ನಲ್ಲಿ ಶಿಕ್ಷಣವನ್ನು ಅರ್ದದಲ್ಲಿ ತೊರೆದ ಕನಸುಗಣ್ಣಿನ ಯುವಕ, ‘ಅರಣ್ಯೇ ದಿನ್ ರಾತ್ರಿ’ಯ ಮೇಲ್ದರ್ಜೆ ಉದ್ಯೋಗದಲ್ಲಿರುವ ಅಸೀಮ್, ‘ಆಕಾಶ್ ಕುಸುಮ್’ನ ಬಂಡವಾಳಿಗನಾಗಿ ಬೆಳೆಯಬೇಕೆಂದು ಕನಸು ಕಾಣುವ ಮಹತ್ವಾಕಾಂಕ್ಷಿ ಯುವಕ, ‘ಚಾರುಲತಾ’ದ ಅಮಲ್, ‘ಆಶಾನಿ ಸಂಕೇತ್’ನ ಕಾರ್ಯದೃಶ್ಟಿಯುಳ್ಳ ಟೀಚರ್, ‘ಸಂಪತಿ’ಯ ಅಮುಲ್ಯ, ‘ಸೋನಾರ್ ಕೆಲ್ಲಾ’ದ ಖಾಸಗಿ ಪತ್ತೇದಾರ ಫೆಲೂದ, ‘ಬಸಂತ್ ವಿಲಾಪ್’, ‘ಭುವನೇರ್ ಪಾರೆ’ನ ರೋಮ್ಯಾಂಟಿಕ್ ಹೀರೋ, ‘ಕೋನಿ’ಯ ಕೋಚ್, ‘ಆತಂಕ’ದ ನಿವೃತ್ತ ಶಿಕ್ಷಕ, ‘ಜಿಂದೇರ್ ಬೋಂಡಿ’ಯಲ್ಲಿ ನಾಯಕ ಉತ್ತಮ್ ಕುಮಾರ್ ಎದುರು ಖಳನಾಯಕ, ದಾಸ್ತೋವೆಸ್ಕಿಯ ‘ಈಡಿಯಟ್’ ಕತೆ ಆದರಿಸಿದ ‘ಅಪರಿಚಿತೋ’ದ ಮಾನಸಿಕ ತುಮುಲತೆಯ ಪಾತ್ರ, ಹೀಗೆ ಸೌಮಿತ್ರ ಅಬಿನಯಿಸಿದ ವಿಬಿನ್ನ ಪಾತ್ರಗಳ ಪಟ್ಟಿಯನ್ನು ಬರೆಯುತ್ತಾ ಹೋಗಬಹುದು. ಬಂಗಾಳಿ ಪ್ರೇಕ್ಷಕರಿಗೆ ಪ್ರತಿ ಸಂದರ್ಬದಲ್ಲಿಯೂ ‘ಮತ್ತೊಬ್ಬ ಕುಪಿತ, ಅಸಹಾಯಕ ಯುವಕ’, ‘ಮತ್ತೊಂದು ರೀತಿಯ ರೋಮ್ಯಾಂಟಿಕ್ ಹೀರೋ’, ‘ಮತ್ತೊಂದು ರೀತಿಯ ವ್ಯಕ್ತಿತ್ವದ ಮದ್ಯಮವರ್ಗದ ಮದ್ಯ ವಯಸ್ಕ’ ಹೀಗೆ ಅನೇಕ ಮತ್ತೊಂದುಗಳ ಪ್ರತಿನಿದಿಯಾಗಿ ಕಾಣಿಸಿಕೊಂಡರು. ಸಿದ್ದ ಮಾದರಿಯಲ್ಲಿ ಸಿಲುಕಿಕೊಳ್ಳಲು ನಿರಾಕರಿಸುವ, ಆದರೆ ಬಂಡಾಯವಲ್ಲದ ಈ ‘ಮತ್ತೊಂದು’ ಎನ್ನುವ ಇಮೇಜ್ ಸೌಮಿತ್ರರಂತಹ ಮೃದು ವ್ಯಕ್ತಿತ್ವದ, ಮಹತ್ವಾಕಾಂಕ್ಷಿಯಲ್ಲದ ಕಲಾವಿದನಿಗೆ ವರವಾಯಿತು ಮತ್ತು ಸೌಮಿತ್ರ ಇದನ್ನು ಸದುಪಯೋಗಪಡಿಸಿಕೊಂಡರು. ಜೊತೆಗೆ 60 ವರ್ಶಗಳಲ್ಲಿ ಪ್ರತಿ ಹಂತದಲ್ಲಿಯೂ ಸಮಕಾಲೀನವಾದ ಪಾತ್ರಗಳು ಒದಗಿಬಂದಿರುವುದೂ ಸಹ ಅವರ ‘ಗುಡ್‍ಲಕ್’ ಎಂದರೆ ಅವರ ಹಿರಿಮೆ ಅಲ್ಲಗೆಳೆದಂತಲ್ಲ.

Pc : Pinterest

ಸೌಮಿತ್ರ minimalist ನಟನಾಗಿದ್ದರು. ‘ಬದ್ರಲೋಕ್’ನ ಸ್ವಾರ್ಥಿಯಾಗಿ ನಟಿಸಿದಶ್ಟೆ ಲೀಲಾಜಾಲವಾಗಿ ಲುಂಪೆನ್, ಸಬಲ್ಟ್ರಾನ್ ಪಾತ್ರಗಳಲ್ಲಿ, ದ್ವಂದ, ಗೊಂದಲಗಳ ಹದಿಹರೆಯದವನ ರೂಹುಗಳಲ್ಲಿ ಈಜಿದರು. ‘ಕಮರ್ಶಿಯಲ್’ ಮತ್ತು ‘ಕಲಾತ್ಮಕ’ ಎಂಬ ವಿರುದ್ದ ದಿಕ್ಕುಗಳಲ್ಲಿ ಸರಾಗವಾಗಿ ಅಲೆದಾಡಿದರು. ಬಹುಶಃ ಸೌಮಿತ್ರ ತಮ್ಮನ್ನು ಬಂಗಾಳ ಸ್ಥಳೀಯತೆಗೆ, ಬಂಗಾಳಿ ತಾಯ್ನುಡಿಗೆ ಬದ್ದತೆಯಿಂದ ಸಮರ್ಪಿಸಿಕೊಂಡ ನಿಯತ್ತಿನ ಅಬಿಮಾನವೂ ಸಹ ಈ ಯಶಸ್ಸಿಗೆ ಕಾರಣ. ಒಬ್ಬ ವೃತ್ತಿಪರ ನಟನಾಗಿ ಸಜ್ಜನಿಕೆಯನ್ನು, ಸರಳತೆಯನ್ನು ಮೈಗೂಡಿಸಿಕೊಂಡಿದ್ದರು, ಆದರೆ ತಮ್ಮ ಸಮಕಾಲೀನರಾದ ರುತ್ವಿಕ್ ಘಟಕ್‍ರಂತಹ ಅಸಮಾನ್ಯ ನಿರ್ದೇಶಕನ ಸಿನಿಮಾದಲ್ಲಿ ಅಬಿನಯಿಸಲಿಲ್ಲ ಎನ್ನುವುದು ಸೌಮಿತ್ರರೊಳಗಿನ ‘ಮೇಲ್ಜಾತಿ ಮದ್ಯಮವರ್ಗ’ದ ವ್ಯಕ್ತಿತ್ವ ಕಾರಣ ಹೊರತಾಗಿ ರುತ್ವಿಕ್‍ರ ಅರಾಜಕತೆ ಅಲ್ಲ.

ಸತ್ಯಜಿತ್ ರೇ – ಸೌಮಿತ್ರ ಚಟರ್ಜಿ ಜೋಡಿಯು 14 ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಜಾಗತಿಕವಾಗಿ ಜಪಾನ್ ದೇಶದ ಅಕಿರೋ ಕುರಸೋವ- ತೋಶಿನೋ ಮಿಫುನೆ ಜೋಡಿ (16 ಸಿನಿಮಾಗಳು), ಇಟಲಿಯ ಫೆಡರಿಕೋ ಫೆಲಿನಿ-ಮಾರ್ಸೆಲೋ ಮಾಸ್ಟ್ರೋಯನ್ನಿ, ಸ್ವೀಡನ್‍ನ ಇಂಗ್ಮರ್ ಬರ್ಗಮನ್- ಮಾಕ್ಸ್ ವಾನ್ ಸಿಡೋ ರಂತಹ ‘ನಿರ್ದೇಶಕ-ನಟ’ ಜೋಡಿಯ ಜೊತೆಗೆ ರೇ-ಸೌಮಿತ್ರರನ್ನು ಯಾವುದೇ ಹಿಂಜರಿಕೆಯಲ್ಲದೆ ಹೋಲಿಸಬಹುದು. ಆದರೆ ಇವರಿಬ್ಬರದು ಪಕ್ಕಾ ಟೀಚರ್- ವಿದ್ಯಾರ್ಥಿ ಸಂಬಂದಂತಿತ್ತು. ಸೌಮಿತ್ರರಿಗೆ ನಿರ್ದೇಶಕ ರೇ ಕುರಿತು ಬಯಮಿಶ್ರಿತ ಗೌರವವಿತ್ತು, ವಿದೇಯತೆ ಇತ್ತು. ಆದೇಶವನ್ನು ಶಿರಸಾವಹಿಸಿ ಪಾಲಿಸುವ ನಿಶ್ಟಾವಂತ ಕಾರ್ಯಕರ್ತನ ರೀತಿಯಲ್ಲಿ ಕಾಪಾಡಿಕೊಂಡು ಬಂದಿದ್ದರು. ಮತ್ತೊಂದೆಡೆ ಕುರಸೋವ-ಮಿಫುನೆ ನಡುವೆ ಗೆಳೆಯರ ರೀತಿಯ ಒಡನಾಟವಿತ್ತು. ನಟ ಮಿಫುನೆ ನಿರ್ದೇಶಕ ಕುರಸೋವಾರನ್ನು ವಿಮರ್ಶೆ ಮಾಡುತ್ತಿದ್ದರು, ಸಲಹೆ ಕೊಡುತ್ತಿದ್ದರು. ಅಬಿಪ್ರಾಯ ಹಂಚಿಕೊಳ್ಳುತ್ತಿದ್ದರು. ಕಡಗೆ ಇವರಿಬ್ಬರು ಜಗಳವಾಡಿಕೊಂಡಿದ್ದರು. ಮೇಲಿನ ನಿರ್ದೇಶಕ-ನಟರ ಈ ಕೆಮಿಸ್ಟ್ರಿ, ನಿರ್ದೇಶಕ ಮತ್ತು ಆತನ protagonist ಮತ್ತು ಜಾಗತಿಕವಾಗಿ, ಪ್ರಾದೇಶಿಕವಾಗಿ ಅದರ ಪ್ರಬಾವ ಕುರಿತು ತೌಲನಿಕವಾಗಿ ಅದ್ಯಯನ ಮಾಡಬಹುದು. ಇದು ಒಂದು ಮೌಲಿಕ ಸಂಶೋದನೆಯಾಗುತ್ತದೆ.

ಸೌಮಿತ್ರ ಚಟರ್ಜಿಯವರ ಬದುಕು ಕೇವಲ ಸಿನಿಮಾಗೆ ಮಾತ್ರ ಸೀಮಿತಗೊಂಡಿರಲಿಲ್ಲ. ರಂಗಬೂಮಿಯಲ್ಲಿ ಅಬಿನಯಿಸಿದರು, ನಾಟಕಗಳನ್ನು ನಿರ್ದೇಶಿಸಿದರು. ಸುಮಾರು 30 ನಾಟಕಗಳನ್ನು ಬರೆದಿದ್ದಾರೆ. ನಿರ್ಮಲ್ಯ ಆಚಾರ್ಯ ಜೊತೆಗೂಡಿ Ekkhon ಸಾಹಿತ್ಯ ಪತ್ರಿಕೆಗೆ 18 ವರ್ಶಗಳ ಕಾಲ ಸಹ ಸಂಪಾದಕರಾಗಿದ್ದರು. ಕವಿತಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಸೃಜನಶೀಲ ಪೇಂಟರ್ ಆಗಿದ್ದರು. ‘ತಾರಾ ವರ್ಚಸ್ಸನ್ನು’ ಹಣೆಗೆ ಅಂಟಿಸಿಕೊಂಡು ಮೆರೆದಾಡುವ ಭಾರತೀಯ ಸಿನಿಮಾರಂಗದಲ್ಲಿ ಸೌಮಿತ್ರ ಎಡಪಂಥೀಯ ಚಿಂತನೆಯ ನಟರಾಗಿದ್ದರು ಎಂಬುದು ಕುತೂಹಲಕರ. ಬಲಪಂಥೀಯತೆಗೆ ಪರ್ಯಾಯವೆಂದರೆ ಅದು ಮಾರ್ಕ್ಸಿಸಂ ಎಂದು ಕಡೆಗಾಲದವರೆಗೂ ನಂಬಿದ್ದರು. ನಂದಿಗ್ರಾಮ್ ಮತ್ತು ಸಿಂಗೂರ್‌ನ ಚಳುವಳಿಯನ್ನು ಹತ್ತಿಕ್ಕಿ ಬಂಡವಾಳಿಶಾಹಿ ಪರ ವಹಿಸಿದ ಆಗಿನ ಮುಖ್ಯಮಂತ್ರಿ ಬುದ್ದದೇವ ಬಟ್ಟಾಚಾರ್ಯರನ್ನು ಬೆಂಬಲಿಸಿದರು. ಇದು ಜನಪರ ಚಳುವಳಿಗಳ ಅಂತಸ್ಸತವನ್ನು ಗ್ರಹಿಸಲು ವಿಫಲಗೊಂಡ ಅವರ ಮಿತಿಯನ್ನು ಸಹ ತೋರಿಸುತ್ತದೆ. ಸೈದ್ದಾಂತಿಕ ಬದ್ದತೆ ಏಕತಾನತೆ ಪಡೆದುಕೊಂಡರೆ ಅದು ಜಡಗೊಳ್ಳುತ್ತದೆ ಎಂದು ಅರಿಯಲು ಸೌಮಿತ್ರ ಅವರಿಗೆ ಸಾದ್ಯವಾಗಲಿಲ್ಲ. ಆದರೆ ಆತ್ಮವಂಚನೆಯಲ್ಲಿ, ಸುಳ್ಳುಗಳಲ್ಲಿ ಬದುಕಿದ ಇಂದಿನ ಬಹುತೇಕ ಕಲಾವಿದರಿಗೆ ಹೋಲಿಸಿದರೆ ಸೌಮಿತ್ರರ ಸೆಕ್ಯುಲರ್ ನಿಲುವು ಎಂತಹ ಅರ್ಥಪೂರ್ಣ ಎಂಬುದು ಮನವರಿಕೆಯಾಗುತ್ತದೆ. ಇವರು ನರೇಂದ್ರ ಮೋದಿಯ ಸರ್ವಾದಿಕಾರ ಆಡಳಿತದ ವಿರುದ್ದ ಕಟುವಾದ ವಿಮರ್ಶಕರಾಗಿದ್ದರು. ಸಿಎಎ-ಎನ್‍ಆರ್‌ಸಿ ವಿರುದ್ದದ ಹೋರಾಟಗಳನ್ನು ಬಹಿರಂಗವಾಗಿ ಬೆಂಬಲಿಸಿದ್ದರು. ಡಿಸೆಂಬರ್ 2019ರಲ್ಲಿ ‘ಈ ಶಾಸನಗಳು ಬಹುಸಂಖ್ಯೆಯಲ್ಲಿ ಜನರನ್ನು ಶೋಷಿಸುತ್ತದೆ’ ಎಂದು ಹೇಳಿಕೆ ನೀಡಿದ್ದರು. ಅಬಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ನಿರಂತರ ದನಿಯಾಗಿದ್ದರು. ನಟನೊಬ್ಬ ಇಶ್ಟೊಂದು ಆಯಾಮಗಳಲ್ಲಿ ರಾಜಕೀಯ ಸೈದ್ದಾಂತಿಕತೆಯನ್ನು ಬದ್ದತೆಯಿಂದ ರೂಡಿಸಿಕೊಂಡಿರುವುದು ಭಾರತೀಯ ಸಿನಿಮಾರಂಗದಲ್ಲಿ ವಿರಳವೆಂದೇ ಹೇಳಬಹುದು. ಈ ವಿರಳತೆಯೂ ಸಹ ಕಣ್ಮರೆಯಾಗುತ್ತಿರುವುದು ಆತಂಕದ ಸಂಗತಿ

ಸೌಮಿತ್ರ ಚಟರ್ಜಿಯ ಸಾವಿನಿಂದ ಕೇವಲ ನಟನನ್ನು ಮಾತ್ರ ಕಳೆದುಕೊಂಡಿಲ್ಲ. ಜೊತೆಗೆ ಮಾನವೀಯ ಪ್ರಜ್ಞೆಯ, ಸೂಕ್ಷ್ಮ ಸಂವೇದನೆಯ ನಾಗರಿಕನನ್ನು ಸಹ ಕಳೆದುಕೊಂಡಿದ್ದೇವೆ.

  • ಬಿ. ಶ್ರೀಪಾದ ಭಟ್

ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್‌ರವರು, ಹಿರಿಯ ಚಿಂತಕರು, ಬರಹಗಾರರು. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯರಾಗಿ, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿನ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ‘JNU ಅಂಗಳದಲ್ಲಿ ರಾಷ್ಟ್ರೀಯವಾದದ ಕ್ಲಾಸುಗಳು’, ‘ವಿಮೋಚಕಿಯ ಕನಸುಗಳು’ ಸೇರಿದಂತೆ ಹಲವು ಅತ್ಯಮೂಲ್ಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.


ಇದನ್ನೂ ಓದಿ: ’ಆಕ್ಟ್-1978’ ಚಿತ್ರ: ಸಾಮಾಜಿಕ ಜಾಗೃತಿ ಮೂಡಿಸುವ ಪೋಸ್ಟರ್‌ಗಳು ವೈರಲ್‌‌!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...