Homeಮುಖಪುಟಆಳುವವರ ತಲೆಕೆಳಗು ನೀತಿಗಳು ಹಾಗೂ ಕಂಗೆಟ್ಟ ರೈತರ ಬದುಕು

ಆಳುವವರ ತಲೆಕೆಳಗು ನೀತಿಗಳು ಹಾಗೂ ಕಂಗೆಟ್ಟ ರೈತರ ಬದುಕು

- Advertisement -
- Advertisement -

ಇಡೀ ದೇಶವನ್ನೇ ಆವರಿಸಿದ್ದ ಜಾಗತೀಕರಣದ ಪಿಡುಗು ರೈತರನ್ನು ಬಿಟ್ಟೀತೆ! ಕೃಷಿ ಮತ್ತು ರೈತರ ಬದುಕಿಗೆ ಆಘಾತ ಎಸಗಿದ ಮೂರು ಮುಖ್ಯ ಬೆಳವಣಿಗೆಗಳಲ್ಲಿ – ಮೊದಲನೆಯದು, ಜಾಗತೀಕರಣ+ಖಾಸಗೀಕರಣ+ಉದಾರೀಕರಣ; ಎರಡನೆಯದು, ವಿಶ್ವ ವಾಣಿಜ್ಯ ಸಂಸ್ಥೆಯ ಒಪ್ಪಂದ, ಅದರಲ್ಲಿ ಅಗ್ರಿಮೆಂಟ್ ಆನ್ ಅಗ್ರಿಕಲ್ಚರ್ ಎಂಬ ಕೃಷಿ ಒಪ್ಪಂದ ಹಾಗೂ ಟ್ರಿಪ್ಸ್ ಎಂಬ ಬೀಜ, ಔಷಧಿಗಳ ಮೇಲೆ ಹಾನಿಕರ ಪರಿಣಾಮ ಬೀರಿದ ಒಪ್ಪಂದ; ಮೂರನೆಯದು ಮೊದಲ ಬಾರಿಗೆ ಬಿಜೆಪಿ ಆಡಳಿತ, ವಾಜಪೇಯಿ ಸರ್ಕಾರದ ಘೋರ ನೀತಿಗಳು.

ಹಿಂದಿನ ಲೇಖನದಲ್ಲಿ ದೇಶದ ಒಟ್ಟಾರೆ ಆರ್ಥಿಕ ಹಾಗೂ ಜನರೆಲ್ಲರ ಬದುಕಿಗೆ ಹಾನಿಕರವಾದ ಜಾಗತೀಕರಣ ನೀತಿಗಳು ಮತ್ತು ಬಾಬ್ರಿ ಮಸೀದಿ ನಾಶ ಮತ್ತಿತರ ಬೆಳವಣಿಗೆಗಳ ಬಗ್ಗೆ ವಿವರಿಸಿದ್ದೇನೆ. ಆದರೆ ಕೃಷಿಯ ಹಾಗೂ ರೈತರ ಬದುಕಿನ ಮೇಲೆ ಮಾಡಿದ ದಾಳಿಯ ವಿವಿಧ ಆಯಾಮಗಳನ್ನು ಹಾಗೂ ರೈತ ಚಳವಳಿ ಎದುರಿಸಿದ ಬಗೆಗಳನ್ನು ಅಲ್ಲಿ ವಿವರಿಸಹೋಗಿಲ್ಲ.

ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಭೂ ಸುಧಾರಣೆಯ ತಿರುವು ಮುರುವು

ಭಾರತದ ಕೃಷಿಯ ಮುಖ್ಯ ಸಮಸ್ಯೆಯೇ ರಾಜಪ್ರಭುತ್ವ ಕಾಲದ ಪಾಳೆಯಗಾರಿ ಭೂಮಾಲೀಕತ್ವ. ರಾಜರು ಭೂಪತಿಗಳಾಗಿ ಮನಸ್ಸಿಗೆ ಬಂದಂತೆ ತಮ್ಮ ಆಡಳಿತದ ಜೊತೆಗಾರ ಪುರೋಹಿತರು, ದೇವಾಲಯಗಳು, ಸಾಮಂತರು ಮತ್ತಿತರರಿಗೆ ದಾನ ಮಾಡಿದ್ದು ಇತಿಹಾಸ. ಸಾವಿರಾರು ಎಕರೆಗಳು, ಕೆಲವೊಮ್ಮೆ ಲಕ್ಷಾಂತರ ಎಕರೆಗಳು ಒಂದು ಕುಟುಂಬದ ಒಡೆತನ ಮತ್ತು ಹಿಡಿತದಲ್ಲಿದ್ದವು. ಭೂಸುಧಾರಣೆ 70ರ ದಶಕದಲ್ಲಿ ಅರೆಬರೆಯಾಗಿ ನಡೆಯಿತು. ಕೇವಲ ನೇರ ಕೃಷಿಯಲ್ಲಿ ತೊಡಗದ ಭೂಮಾಲೀಕರ ಭೂಮಿ ಅದರ ಗೇಣೀದಾರರ ಕೈಗೆ ಸೇರಿತ್ತು. ಹಳೇ ಮೈಸೂರು ಸಂಸ್ಥಾನದ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿದರೆ ಬೇರೆಲ್ಲ ಜಿಲ್ಲೆಗಳಲ್ಲಿ ಇನ್ನೂ ನೂರಾರು ಎಕರೆ ಭೂಮಿ ಇಂತಹ ಪಾಳೆಯಗಾರಿ ಭೂಮಾಲಿಕರ ಬಳಿ ಉಳಿದಿತ್ತು. ಭೂಮಿತಿ ಕಾಯ್ದೆ ಜಾರಿಗೆ ಬಂದು ಭೂಹೀನ ದಲಿತರಿಗೆ ಮತ್ತಿತರ ಹಿಂದುಳಿದ ಜಾತಿಗಳಿಗೆ ಭೂಮಿ ದೊರೆಯುವುದು ಮರೀಚಿಕೆಯಾಗಿಯೇ ಉಳಿಯಿತು. ಕರ್ನಾಟಕದ ಮೂರು ಕರಾವಳಿ ಜಿಲ್ಲೆಗಳು ಮತ್ತು ಶಿವಮೊಗ್ಗ ಹೊರತುಪಡಿಸಿದರೆ ಬೇರಾವ ಜಿಲ್ಲೆಗಳಲ್ಲಿಯೂ ಗೇಣಿದಾರರು ಭೂಮಿ ಪಡೆಯಲಿಲ್ಲ. ಬದಲಾಗಿ ಗೇಣಿ, ಪಾಲುಗಳಿಗೆ ತಲೆತಲಾಂತರದಿಂದ ಪಡೆದ ಭೂಮಿಯಿಂದ ಅವರನ್ನು ಹೊರಕ್ಕೆಸೆಯಲಾಗಿತ್ತು.

ಹೈದರಾಬಾದ್ ಕರ್ನಾಟಕ, ಮುಂಬಯಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಲಕ್ಷಾಂತರ ಕುಟುಂಬಗಳು ಕೂಲಿಕಾರರಾದರು. ಆದರೂ 70ರ ದಶಕದ ನಂತರ ಈ ಸುಧಾರಣೆ ಮುಂದುವರೆಯಲೇ ಇಲ್ಲ. ಮುಂದಿನ ಎಲ್ಲ ಯೋಜನೆಗಳಲ್ಲಿ ಕೇವಲ ಭೂಸುಧಾರಣೆಯ ಪ್ರಸ್ತಾಪ ಮಾತ್ರ ಇತ್ತು. ಜಾಗತೀಕರಣದ ನಂತರ ಈ ಭೂಸುಧಾರಣೆಯ ಮಾತೇ ನಿಂತುಹೋಯಿತು ಮಾತ್ರವಲ್ಲ, ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ರಿವರ್ಸ್ ಭೂಸುಧಾರಣೆಗಳು ಆರಂಭವಾದವು. ಅಂದರೆ ಭೂಸುಧಾರಣಾ ಕಾನೂನುಗಳ ಮುಖ್ಯ ಅಂಶಗಳನ್ನು ಸಡಿಲಿಸಿ ಅಥವಾ ಕಿತ್ತುಹಾಕಿ ಒಬ್ಬರೇ ಹೆಚ್ಚುಹೆಚ್ಚು ಭೂಮಿಯ ಒಡೆತನ ಹೊಂದಲು ಅವಕಾಶ ಮಾಡಿಕೊಡಲಾಯಿತು.

ದಾವಾಸ್ ಗೌಡರಾದ ದೇವೇಗೌಡರು

ಕರ್ನಾಟಕದಲ್ಲಿ ಕೆಲಕಾಲ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ದೇವೇಗೌಡರ ಕಾಲದಲ್ಲಿಯೇ ಭೂಸುಧಾರಣೆಯ ರಿವರ್ಸ್ ತಿದ್ದುಪಡಿ ಆರಂಭವಾಯಿತು. ಅವರು 94ರಲ್ಲಿ ಮುಖ್ಯಮಂತ್ರಿಯಾದ ಕೆಲವೇ ದಿನಗಳಲ್ಲಿ ಅಂದಿನ ಪ್ರಧಾನಿ ನರಸಿಂಹರಾವ್‌ರವರು ದಾವಾಸ್‌ನಲ್ಲಿ ನಡೆಯಲಿದ್ದ ವಿಶ್ವ ಆರ್ಥಿಕ ಸಮ್ಮೇಳನಕ್ಕೆ ದೇವೇಗೌಡರನ್ನು ಆಹ್ವಾನಿಸಿದರು. ತಮ್ಮ ಜಾಗತೀಕರಣ ನೀತಿಗಳಿಗೆ ವಿರೋಧಪಕ್ಷಗಳ ಒಪ್ಪಿಗೆ ಸೃಷ್ಟಿಸುವುದು ಅವರ ತುರ್ತು. ದೇವೇಗೌಡರು ಅಲ್ಲಿ ವಿಶ್ವ ಬ್ಯಾಂಕ್‌ನ ’ಹೊಸ ಹೊಸ’ ವಿಚಾರ ಸರಣಿಯ ಪರಿಚಯ ಮಾತ್ರವಲ್ಲದೆ ಭಾರತದ ಬೃಹತ್ ಬಂಡವಾಳಗಾರರ ಜೊತೆಗೂ ಕೈ ಮಿಲಾಯಿಸಿದರು. ಅಲ್ಲಿ ರಿಲಯನ್ಸ್ ಮಾಲೀಕ ಕರ್ನಾಟಕದ ಪ್ರತಿ ತಾಲ್ಲೂಕಿನಲ್ಲಿ ರಫ್ತು ಮಾಡುವ ಬೆಳೆಗಳನ್ನು ಬೆಳೆಯುವ, ವಾರವೊಂದರಲ್ಲಿ ಹತ್ತು ವಿಮಾನಗಳ ಮೂಲಕ ಭಾರತದ ಇತರ ನಗರಗಳಿಗೂ ಕೇವಲ 24 ಗಂಟೆಯಲ್ಲಿ ತರಕಾರಿ, ಹಣ್ಣುಗಳನ್ನು ಒಯ್ಯುವ ಮಹಾ ಕನಸನ್ನು ಬಿತ್ತಿದರು. ಇಂತಹ ಯೋಜನೆಗೆ ಬೇಕಾದ ಭೂಮಿ ಪಡೆಯಲು ಕರ್ನಾಟಕದ ಭೂಸುಧಾರಣಾ ಕಾನೂನು ದೊಡ್ಡ ಅಡ್ಡಿಯಾಗಿದೆಯೆಂದೂ ಅದನ್ನು ಕೂಡಲೇ ತಿದ್ದುಪಡಿ ಮಾಡಬೇಕೆಂದೂ ಪ್ರಸ್ತಾಪಿಸಿದರು. ಭೂಸುಧಾರಣೆಯ ಕಾಲದಲ್ಲೂ ಅರಸುರವರಿಗೆ ವಿರೋಧ ಪಕ್ಷದಲ್ಲಿದ್ದ ದೇವೇಗೌಡರಿಗೆ ಭೂಸುಧಾರಣೆಯ ಬಗ್ಗೆ ಯಾವ ಪ್ರೀತಿಯೂ ಇರಲಿಲ್ಲ.

ದೇವೇಗೌಡರು ಅಲ್ಲಿಂದ ಬಂದಕೂಡಲೇ ಅತ್ಯಂತ ವೇಗವಾಗಿ ಬೆಳೆಯತೊಡಗಿದ ಭಾರತದ ಕಾರ್ಪೊರೇಟ್ ಧಣಿಯ ಇಚ್ಛೆಯನ್ನು ಪೂರೈಸಲು ತಕ್ಷಣವೇ ಭೂಸುಧಾರಣೆ ತಿದ್ದುಪಡಿ ಕೈಗೊಂಡರು. ಭೂಮಿತಿಯ ಕಾನೂನನ್ನು ಬದಲಾಯಿಸಿದರು. ಅಷ್ಟೇ ಅಲ್ಲದೆ ಹೊಸ ಕೃಷಿ ನೀತಿಯ ಹೆಸರಿನಲ್ಲಿ 1994-96ರ ಸಮಯದಲ್ಲೇ ಕಾಂಟ್ರಾಕ್ಟ್ ಫಾರ್ಮಿಂಗ್, ಎಪಿಎಂಸಿ ಕಾನೂನು ತಿದ್ದುಪಡಿ, ರಫ್ತು ಕೃಷಿಗೆ ಉತ್ತೇಜನ ಮುಂತಾದ ಅಂಶಗಳನ್ನು ಮೊದಲ ಬಾರಿಗೆ ಜಾರಿಗೆ ತರಲೆನಿಸಿದರು. ನಂತರದ ಎಲ್ಲ ಸರ್ಕಾರಗಳೂ ಎಪಿಎಂಸಿ ತಿದ್ದುಪಡಿ ಮಾಡಲು ಪ್ರಯತ್ನ ನಡೆಸಿವೆ.

ನಂತರದಲ್ಲಿ ಕಾಂಗ್ರೆಸ್ ಸೇರಿದ ಸಿದ್ಧರಾಮಯ್ಯನವರೂ ಕೂಡಾ ಭೂಮಿತಿಯನ್ನು ಮತ್ತೆ ದುಪ್ಪಟ್ಟು ಮಾಡುವ ತಿದ್ದುಪಡಿ ತಂದರು. ಮುಂದೆ ಯಡ್ಡಿಯೂರಪ್ಪನವರ ಸರದಿ. ಮೋದಿ ಸರ್ಕಾರದ ರೈತ ನಾಶಕ ಕಾನೂನುಗಳ ಜೊತೆಜೊತೆಗೇ ಕೇಂದ್ರ ಸರ್ಕಾರದ ಒಬ್ಬ ಅಧಿಕಾರಿಯ ಪತ್ರ ಬಂದಕೂಡಲೇ ಯಡಿಯೂರಪ್ಪನವರು ಜೀ ಹುಕುಂ ಎಂದು ಶಿರಸಾವಹಿಸಿ ಭೂಸುಧಾರಣೆಯ ಎಲ್ಲ ಮುಖ್ಯ ಅಂಶಗಳನ್ನು ಕಿತ್ತೆಸೆದರು. ಕೃಷಿಯೇತರರು ಕೃಷಿ ಭೂಮಿ ಕೊಳ್ಳುವಂತಿಲ್ಲ ಎಂಬ ನಿಷೇಧದ 79ಎ, 79ಬಿ ಕಲಂಗಳನ್ನು ಕೈಬಿಟ್ಟರು.

ಗೇಣಿ ಪದ್ಧತಿ ನಿಷೇಧದ ಕಲಂಗಳನ್ನೂ ತಿದ್ದುಪಡಿ ಮಾಡಿ ಕಾಂಟ್ರಾಕ್ಟ್ ಫಾರ್ಮಿಂಗ್
ಅಥವಾ ದೊಡ್ಡ ಕಂಪನಿಗಳ ಗುತ್ತಿಗೆ ಕೃಷಿಗೆ ಅವಕಾಶ ನೀಡಿದರು. ಭೂಮಿತಿಯನ್ನು ಊಹಿಸಲೂ ಆಗದ 216 ಎಕರೆಗಳಿಗೆ ಹಿಗ್ಗಿಸಿದರು. ಒಟ್ಟಿನಲ್ಲಿ ಭೂಸುಧಾರಣಾ ಕಾನೂನಿನ ಸಮಾಧಿಯಾಯಿತು. ಒಂದು ಮಾರ್ಪಾಡಿನ ಬೇಡಿಕೆಯೊಂದಿಗೆ ಜನತಾದಳ ನೀಡಿದ ಬೆಂಬಲವೇ ಈ ತಿದ್ದುಪಡಿಗಳು ಕಾನೂನಾಗಲು ಮುಖ್ಯ ಆಧಾರವಾಯಿತು.

ಹೀಗೆ ಜನತಾದಳ, ಕಾಂಗ್ರೆಸ್ ಮತ್ತು ಬಿಜೆಪಿ ಮೂರೂ ಪಕ್ಷಗಳು ಭೂಸುಧಾರಣಾ ಕಾನೂನನ್ನು ರಿವರ್ಸ್ ಮಾಡಿದರು. ಈ ಪರಸ್ಪರ ವಿರೋಧದ ತೋರಿಕೆಯ ನಡುವೆಯೂ ಇದ್ದ ಒಳ ಸಹಕಾರ, ಪಕ್ಷಗಳು ಬೇರೆಯಾದರೂ ಭೂಮಾಲಕ ಆಳುವ ವರ್ಗವೆಲ್ಲ ಒಂದೇ ಎಂಬುದನ್ನು ಸಾಬೀತುಪಡಿಸಿತು.

ಕೃಷಿಯಲ್ಲಿ ಸರ್ಕಾರದ ಹೂಡಿಕೆ ಕಡಿತ

ಭಾರತದ ಕೃಷಿಯಲ್ಲಿ ಬಹು ದೊಡ್ಡ ಸಂಖ್ಯೆಯ ಸಣ್ಣ, ಅತಿಸಣ್ಣ ರೈತರೇ ಇರುವುದರಿಂದ ಮತ್ತು ಮುಂಗಾರು ಹಿಂಗಾರು ಮಳೆಗಳ ಅನಿಶ್ಚಿತತೆಯಿಂದ ಕೃಷಿಯಲ್ಲಿ ಸರ್ಕಾರದ ಹೂಡಿಕೆ ಬಹಳ ಮುಖ್ಯ. ಹೂಡಿಕೆ ಎಂದರೆ ದೊಡ್ಡ ಮತ್ತು ಸಣ್ಣ ನೀರಾವರಿ, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣಾ ಕೇಂದ್ರಗಳು, ಭೂ ಸವಕಳಿ ತಪ್ಪಿಸುವ ಭೂ ಮತ್ತು ಜಲ ಸಂರಕ್ಷಣೆ, ಕೃಷಿ ಸಂಶೋಧನಾ ಕ್ಷೇತ್ರಗಳು ಮತ್ತು ಯೋಜನೆಗಳು, ಕೃಷಿಕರಿಗೆ ಹೊಸ ವೈಜ್ಞಾನಿಕ ವಿಧಾನಗಳ ಅರಿವು ಮೂಡಿಸುವ ವಿಸ್ತರಣಾ ಕಾರ್ಯ, ಬೀಜ ತಯಾರಿಕೆ, ಇತರ ಲಾಗುವಾಡುಗಳ ಉತ್ಪಾದನೆಯಲ್ಲಿ ಸಾರ್ವಜನಿಕ ಕ್ಷೇತ್ರದ ಕಂಪನಿಗಳ ಪ್ರಧಾನ ಪಾತ್ರ ಇತ್ಯಾದಿಗಳಲ್ಲಿ ಸರ್ಕಾರದ ಬಜೆಟ್ ವಿನಿಯೋಗ – ಇವುಗಳು.

ಸರ್ಕಾರದ ಇಂತಹ ಯೋಜನೆಗಳು ರೈತರು ತಮ್ಮದೇ ಬಂಡವಾಳ ಹೂಡಲು, ಕೃಷಿ ಯಂತ್ರೋಪಕರಣಗಳನ್ನು ಕೊಳ್ಳಲು ಸಹಾಯಕವಾಗುತ್ತದೆ. ಸರ್ಕಾರದ ಹೂಡಿಕೆ ತಗ್ಗಿದರೆ ಈ ಖಾಸಗೀ ಹೂಡಿಕೆಯೂ ತಗ್ಗುತ್ತದೆ.

ಈ ಎಲ್ಲ ಹೂಡಿಕೆಗಳೂ ಜಾಗತೀಕರಣದ ನಂತರ ಕುಗ್ಗಿ ಹೋದವು. ಎಲ್ಲ ಕ್ಷೇತ್ರಗಳ ಬಂಡವಾಳ ಹೂಡಿಕೆಯ ಶೇ.15ರಷ್ಟು ಪ್ರಮಾಣವನ್ನು 80-81ರಲ್ಲಿ ಮುಟ್ಟಿದ್ದ ಕೃಷಿ ಹೂಡಿಕೆ 2000ದ ವೇಳೆಗೆ ಶೇ.6ಕ್ಕೆ ಕುಸಿಯಿತು. ಇದು ಬಂಡವಾಳ ಹೂಡಲು ಸಾಧ್ಯವಿರುವ ಕೆಲ ಶ್ರೀಮಂತ ರೈತರನ್ನು ಬಲಪಡಿಸಿತು.

ರಫ್ತಿಗಾಗಿ ಕೃಷಿ

ಉದಾರ ರಫ್ತು ನೀತಿಗಳು, ರಫ್ತು ಪ್ರೋತ್ಸಾಹ, ಹಣ್ಣು, ತರಕಾರಿ ಸಂಸ್ಕರಣೆಗೆ ಹಾಗೂ ಕೋಲ್ಡ್ ಚೈನ್ ಎಂಬ ತಂಪಾಗಿಡುವ ಮತ್ತು ತಂಪಾಗಿ ಸಾಗಿಸುವ ವ್ಯವಸ್ಥೆಗೆ ಉದಾರ ಬ್ಯಾಂಕ್ ಸಾಲ ಇತ್ಯಾದಿಗಳು ವಿದೇಶಕ್ಕೆ ಹಣ್ಣು, ತರಕಾರಿ ರಫ್ತು ಮಾಡಿ ದಿಢೀರ್ ಶ್ರೀಮಂತರಾಗುವ ಕೆಲ ದೊಡ್ಡ ರೈತರ ಕನಸುಗಳಿಗೆ ನೀರೆರೆಯಿತು. ಸುಮಾರು ಒಂದು ಕೋಟಿ ಎಕರೆ ಭೂಮಿ, ಆಹಾರ ಉತ್ಪಾದನೆಯಿಂದ ಹೊರಗೆ ಹೋಗಿ ಇಂತಹ ರಫ್ತು ಕೃಷಿಗೆ ದಕ್ಕಿತು. ಎಕರೆಗೆ ಕೋಟಿಗಟ್ಟಲೆ ಹಣ ಹೂಡುವ ಗ್ರೀನ್ ಹೌಸ್‌ಗಳು ಇತ್ಯಾದಿಗಳು ಕಾಣತೊಡಗಿದವು.

ಬ್ಯಾಂಕ್ ಸಾಲ ನೀತಿ

ಬ್ಯಾಂಕ್‌ಗಳನ್ನು ವಿಶ್ವ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಬೇಕೆಂಬ ಸುಧಾರಣೆಗಳ ಹೆಸರಿನಲ್ಲಿ ಬ್ಯಾಂಕ್ ಶಾಖೆಗಳನ್ನು ತೆರೆಯುವುದಕ್ಕೆ ಕಡಿತ, ಅನೇಕ ಗ್ರಾಮೀಣ ಬ್ಯಾಂಕ್ ಶಾಖೆಗಳ ಮುಚ್ಚುವಿಕೆ, ಬ್ಯಾಂಕುಗಳ ವಿಲೀನ, ದೊಡ್ಡ ಬ್ಯಾಂಕುಗಳ ರಚನೆ. ಇವು 90ರ ದಶಕದಿಂದಲೇ ಆರಂಭವಾಗಿ ಇಂದು ಮೋದಿ ಆಡಳಿತದಲ್ಲಿ ಬಹಳ ವೇಗವಾಗಿ ಸಾಗಿವೆ. ಇಡೀ ದೇಶಕ್ಕೆ ಮುಖ್ಯವಾಗಿ ಕರ್ನಾಟಕದ ಜನತೆಗೆ ಹಣಕಾಸು ಸೇವೆ ಸಲ್ಲಿಸಿದ ಮೈಸೂರು ಬ್ಯಾಂಕ್, ಸಿಂಡಿಕೇಟ್, ವಿಜಯಾ, ಕಾರ್ಪೊರೇಷನ್ ಮೊದಲಾದ ಕರ್ನಾಟಕ ಮೂಲದ ಹಲವು ಬ್ಯಾಂಕುಗಳು ಇಂದು ಹೇಳಹೆಸರಿಲ್ಲದಂತಾಗಿವೆ.

ಮುಖ್ಯವಾಗಿ ಬ್ಯಾಂಕುಗಳ ಸಾಮಾಜಿಕ ಸಾಲ ನೀತಿಯನ್ನು ಕಿತ್ತೆಸೆಯಲಾಗಿದೆ. ಆದ್ಯತೆಯ ಕ್ಷೇತ್ರಗಳಿಗೆ ಶೇ.40ರಷ್ಟು ಹಾಗೂ ಕೃಷಿಗೆ ಶೇ.16ರಷ್ಟು ಮೀಸಲಿದ್ದ ಸಾಲದ ಪ್ರಮಾಣ 1988ರ ವೇಳೆಗೆ ಶೇ.44 ಹಾಗೂ ಶೇ.17 ರ ಪ್ರಮಾಣಕ್ಕೆ ಏರಿತ್ತು. 2001ರ ವೇಳೆಗೆ ಶೇ.33ಕ್ಕೆ ಹಾಗೂ ಶೇ.10ಕ್ಕೆ ಕುಗ್ಗಿತು.

ಈ ಒಂದೊಂದೂ ಶೇಕಡಾ ಪ್ರಮಾಣವೂ ಹತ್ತಾರು ಸಾವಿರ ಕೋಟಿಗಟ್ಟಲೆ ಹಣದ ಕುಗ್ಗುವಿಕೆಯನ್ನು ಸೂಚಿಸುತ್ತದೆ. 2004ರ ನಂತರ ಬಂದ ಯುಪಿಎ ಸರ್ಕಾರ ಕೃಷಿ ಸಾಲದ ಪ್ರಮಾಣವನ್ನು ಬಹಳ ಹೆಚ್ಚಿಸಿತು ಎಂದು ಕೊಚ್ಚಿಕೊಳ್ಳಲಾಗುತ್ತಿದೆ. ಆದರೆ ಈ ಹೆಚ್ಚಳವೆಲ್ಲಾ ಹೆಚ್ಚು ಬಂಡವಾಳ ಬೇಡುವ ರಫ್ತು ಮತ್ತಿತರ ಆಧುನಿಕ ಕೃಷಿಯ ಕಂಪನಿಗಳು ಮತ್ತು ಶ್ರೀಮಂತ ರೈತರ ಪಾಲಾಗಿದೆ.

ಬ್ಯಾಂಕುಗಳು ಒಟ್ಟು ನೀಡುವ 70 ಲಕ್ಷ ಕೋಟಿಗಳಿಗೂ ಹೆಚ್ಚಿನ ಸಾಲದಲ್ಲಿ, 1100 ಕಂಪನಿಗಳಿಗೆ 22 ಲಕ್ಷ ಕೋಟಿಗಳಷ್ಟು (ಒಂದೊಂದಕ್ಕೂ ನೂರು ಕೋಟಿಗಳಿಗಿಂತ ಹೆಚ್ಚಿನ ಸಾಲ), ಅಂದರೆ ಮೂರನೇ ಒಂದು ಭಾಗದಷ್ಟು ನೀಡಲಾಗಿದೆ. ಹತ್ತು ಕೋಟಿಗಿಂತ ಹೆಚ್ಚು ನೀಡಲಾಗಿರುವ ಸಾಲದ ಪ್ರಮಾಣ ಅರ್ಧಕ್ಕಿಂತ ಎಂದರೆ 35 ಲಕ್ಷ ಕೋಟಿಗಳಿಗಿಂತ ಹೆಚ್ಚು. ಕೃಷಿಗೆ ಹತ್ತಾರು ಲಕ್ಷ ಕೋಟಿ ಸಾಲ ನೀಡುತ್ತೇವೆಂದು ಹೇಳಲಾಗುತ್ತಿದ್ದರೂ ಅದರಲ್ಲಿ ಒಂದು ಕೋಟಿಗಿಂತ ಹೆಚ್ಚಿನ ಪ್ರಮಾಣದ ಸಾಲ ಮೂರನೇ ಒಂದು ಭಾಗದಷ್ಟು. ನಿಜವಾದ ಸಣ್ಣ ರೈತರಾದವರಿಗೆ ಎರಡು ಲಕ್ಷಕ್ಕಿಂತ ಕಡಿಮೆ ನೀಡಲಾದ ಸಾಲ ಕೇವಲ ಶೇ.40ರಷ್ಟು. ಕೃಷಿ, ಕೃಷಿಯೇತರ ಸಾಲಗಳೆಲ್ಲವೂ ಸೇರಿದರೆ ಎರಡು ಲಕ್ಷಕ್ಕಿಂತ ಕಡಿಮೆ ಸಾಲ ಶೇ.10 ಕ್ಕಿಂತ ಕಡಿಮೆ. 25,000ರೂಗಿಂತ ಕಡಿಮೆ ಸಾಲ ಕೇವಲ ಶೇ.0.5ಕ್ಕಿಂತ ಕಡಿಮೆ.

ಈ ಅವಧಿಯಲ್ಲಿ ಸಹಕಾರಿ ಬ್ಯಾಂಕ್‌ಗಳನ್ನು, ಸಹಕಾರಿ ಸಂಘಗಳನ್ನು ಅವ್ಯವಸ್ಥಿತಗೊಳಿಸಲು ಅನೇಕ ನೀತಿ ನಿರೂಪಣೆ ಮಾಡಲಾಗಿದೆ. ಅವುಗಳಿಂದ ಹೊಸ ಕೃಷಿ ಸಾಲ ಸಿಗುವುದೇ ಇಲ್ಲ. ಏನಿದ್ದರೂ ಹಳೇ ಸಾಲದ ರಿನ್ಯೂವಲ್ ಅಷ್ಟೇ ಎಂಬಂತಾಗಿದೆ.

ಇಂತಹ ಸಾಲ ನೀತಿಯಲ್ಲಿ ಮಧ್ಯಮ ಹಾಗೂ ಸಣ್ಣ ರೈತರು ಖಾಸಗಿ ಸಾಲಗಳಿಗೆ ಮೊರೆ ಹೋಗುವುದು ಬಹಳ ಸಾಮಾನ್ಯವಾಗಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ನಡೆದ ಗ್ರಾಮೀಣ ಸಮೀಕ್ಷೆಗಳಲ್ಲಿ ಖಾಸಗಿ ಸಾಲದ ಪ್ರಮಾಣ ಶೇ.60ರಿಂದ ಶೇ.90ರವರೆಗೆ ಇದೆ. ಕೆಲವೇ ಕೆಲವು ಹಳ್ಳಿಗಳಲ್ಲಿ ಇದು ಶೇ.50ಕ್ಕಿಂತ ಕಡಿಮೆ ಇದೆ.

ಜೊತೆಗೆ ಸ್ತ್ರೀಶಕ್ತಿ ಮತ್ತಿತರ ಗುಂಪುಗಳ ಮೂಲಕ ನೀಡಲಾಗುವ ಕಿರು ಸಾಲ ಹೆಚ್ಚಾಗಿದೆ. ಇದನ್ನೂ ಖಾಸಗಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ವಹಿಸಲಾಗಿದೆ. ಅವರು ಕೂಡಾ ಸಾಲದ ಬಡ್ಡಿ ದರ ಮತ್ತು ವಸೂಲಾತಿಯಲ್ಲಿ ಖಾಸಗಿ ಲೇವಾದೇವಿಗಾರರನ್ನು ಮೀರಿಸುತ್ತಾರೆ.

ಈ ಎರಡೂ ಖಾಸಗಿ ಸಾಲಗಳ ನೀಡಿಕೆಗೆ ಬ್ಯಾಂಕ್‌ಗಳೇ ಹಣ ಒದಗಿಸುವುದಾದರೂ ರೈತರನ್ನು ಲೂಟಿ ಮಾಡಲು, ಅವರ ಬೆವರ ಬೆಲೆಯನ್ನು ಗ್ರಾಮೀಣ ಖಾಸಗಿ ಬಡ್ಡಿ ಸಾಹುಕಾರ ಶೋಷಕರು ಹೆಚ್ಚುಹೆಚ್ಚು ಕಿತ್ತುಕೊಳ್ಳಲು ಅವಕಾಶವಾಗಿದೆ. ಇಂತಹ ಸಾಲ ನೀಡಿಕೆ ನೀತಿ, ಜಾಗತೀಕರಣ, ಖಾಸಗೀಕರಣ ನೀತಿಗಳೊಂದಿಗೆ ಕೂಡಿ ರೈತರು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು.

ಜಿ. ಎನ್. ನಾಗರಾಜ್

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್ 80ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.


ಇದನ್ನೂ ಓದಿ: ಹಳತು-ವಿವೇಕ; ನಮ್ಮ ಸರ್ಕಾರಗಳು ಮಾಡುತ್ತಿರುವ ಸಾಂಸ್ಥಿಕ ಬದಲಾವಣೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...