ಬೆಂಗಳೂರಿನ ದೇವರಚಿಕ್ಕನಹಳ್ಳಿ ಅಪಾರ್ಟ್ಮೆಂಟ್ನಲ್ಲಿ ನಡೆದ ಅಗ್ನಿದುರಂತದಲ್ಲಿ ಜನರ ಮುಂದೆಯೇ ತಾಯಿ ಮಗಳಿಬ್ಬರು ಸಜೀವ ದಹನವಾಗಿರುವ ದುರಂತ ಘಟನೆ ನಡೆದಿದೆ. ಫ್ಲ್ಯಾಟ್ನಲ್ಲಿ ಸಿಲಿಂಡರ್ ಸ್ಫೋಟಿಸಿ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ.
ನಿನ್ನೆ ಸಂಜೆ ಬೆಂಗಳೂರು ನಗರದ ದೇವರಚಿಕ್ಕನಹಳ್ಳಿಯ ಆಶ್ರಿತ್ ಅಪಾರ್ಟ್ಮೆಂಟ್ನಲ್ಲಿ ನಡೆದ ಅಗ್ನಿ ಅವಘಡಕ್ಕೆ ಸಿಲಿಂಡರ್ ಸ್ಫೋಟ ಕಾರಣ ಎನ್ನಲಾಗಿದೆ. ಅಗ್ನಿ ಅವಘಡ ದುರಂತದಲ್ಲಿ ಇಬ್ಬರು ಸಜೀವದಹನವಾಗಿದ್ದಾರೆ. ಫ್ಲ್ಯಾಟ್ನಲ್ಲಿದ್ದ ಮೂವರು ಹೊರಗೆ ಓಡಿ ಬಂದು ಅಪಾಯದಿಂದ ಪಾರಾಗಿದ್ದಾರೆ.
ದುರಂತದಲ್ಲಿ ಸಾವನ್ನಪ್ಪಿದ ತಾಯಿ ಲಕ್ಷ್ಮೀದೇವಿ (82 ವರ್ಷ), ಮಗಳು ಭಾಗ್ಯ ರೇಖಾ (59 ವರ್ಷ) ಅವರು ನಿನ್ನೆಯಷ್ಟೇ ಅಮೆರಿಕದಿಂದ ಬೆಂಗಳೂರಿಗೆ ಆಗಮಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಕುಟುಂಬವು ಫ್ಲ್ಯಾಟ್ ನಂಬರ್ 210ರಲ್ಲಿ ವಾಸವಿತ್ತು. ಬಾಲ್ಕನಿಯಲ್ಲಿ ರಕ್ಷಣೆಗಾಗಿ ಕಬ್ಬಿಣದ ಗ್ರಿಲ್ ಅಳವಡಿಸಲಾಗಿತ್ತು. ಬೆಂಕಿ ಅವಘಡ ಸಂಭವಿಸಿದಾಗ, ಗ್ರಿಲ್ನಿಂದಾಗಿ ಹೊರಗೆ ಬರಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ವೇಶ್ಯಾವಾಟಿಕೆ ಸಂಘಟಿತ ಅಪರಾಧ, ಇದನ್ನು ತಡೆಯಲು ಮುಂದಾಗಬೇಕು- ಸ್ಟ್ಯಾನ್ಲಿ
Fire at apartment called Ashrith Aspire near IIM #Bangalore #Karnataka. Fire engines rushed to spot. Locals says people are trapped. pic.twitter.com/O2PpnAEQzu
— Imran Khan (@KeypadGuerilla) September 21, 2021
ಈ ಭೀಕರ ದುರಂತಕ್ಕೆ ಅಪಾರ್ಟ್ಮೆಂಟ್ನ ನಿರ್ಲಕ್ಷವೇ ಕಾರಣವಾಯಿತಾ ಎಂಬ ಪ್ರಶ್ನೆ ಮೂಡಿದೆ. ಈ ಅಪಾರ್ಟ್ಮೆಂಟ್ನಲ್ಲಿ ಯಾವುದೇ ಮುಂಜಾಗ್ರತ ಕ್ರಮ ತೆಗೆದುಕೊಂಡಿರಲಿಲ್ಲ. ಬಿಬಿಎಂಪಿ ಹಾಗೂ ಅಪಾರ್ಟ್ಮೆಂಟ್ ಮಾಲೀಕರ ನಿರ್ಲಕ್ಷವೇ ಕಾರಣ ಎಂದು ಹೇಳಲಾಗುತ್ತಿದೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಅಪಾರ್ಟ್ಮೆಂಟ್ನಲ್ಲಿ ಯಾವುದೇ ವಾಟರ್ ಲೈನ್ ವ್ಯವಸ್ಥೆ, ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಇರಲಿಲ್ಲ. ಬೆಂಕಿ ಕಾಣಿಸಿಕೊಂಡರೆ ಕೂಗುವ ಸೈರನ್ ವ್ಯವಸ್ಥೆಯೂ ಇರಲಿಲ್ಲ ಎಂದು ಆರೋಪಿಸಲಾಗಿದೆ. ಇದೆ ಕಾರಣಕ್ಕೆ ಎರಡು ಅಮಾಯಕ ಜೀವಗಳು ಬಲಿಯಾಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಆಶ್ರಿತ್ ಅಪಾರ್ಟ್ಮೆಂಟ್ನಲ್ಲಿ ಒಟ್ಟು ನಾಲ್ಕು ಅಂತಸ್ತುಗಳಿದ್ದು, ಒಟ್ಟು 72 ಫ್ಲ್ಯಾಟ್ಗಳನ್ನು ನಿರ್ಮಿಸಲಾಗಿದೆ. ಆಶ್ರಿತ್ ಶೆಲ್ಟರ್ಸ್ ಪ್ರೈವೆಟ್ ಲಿ. ಒಡೆತನದ ಅಪಾರ್ಟ್ಮೆಂಟ್ ಇದಾಗಿದೆ. ದುರಂತದ ಬಳಿಕ 60ಕ್ಕೂ ಹೆಚ್ಚು ನಿವಾಸಿಗಳಿಗೆ ಸಮೀಪದ ಅಪಾರ್ಟ್ಮೆಂಟ್ ಕ್ಲಬ್ ಹೌಸ್ನಲ್ಲಿ ಆಶ್ರಯದ ವ್ಯವಸ್ಥೆ ಮಾಡಲಾಗಿದೆ. ಇಂದು ಎರಡು ತನಿಖಾ ತಂಡಗಳು ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದು ಪರಿಶೀಲನೆ ನಡೆಸಲಿವೆ.
ಇದನ್ನೂ ಓದಿ: ಗಾಂಧಿ ಕೊಂದವರು ನಾವು ಎಂದು ಸಿಎಂಗೆ ಕೊಲೆ ಬೆದರಿಕೆ: ಮತ್ತೆ ಮೂವರ ಬಂಧನ