ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಡಿಸೆಂಬರ್ 11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಹೋರಾಟ ಹಮ್ಮಿಕೊಂಡಿದ್ದ ಹೋರಾಟಗಾರರ ಮೇಲೆ ಬೆಂಗಳೂರಿನ ಕಾಟನ್ಪೇಟೆ ಪೊಲೀಸರು ಪ್ರಕರಣ ದಾಖಸಿದ್ದಾರೆ.
ಮಳೆ, ಚಳಿ, ಬಿಸಿಲೆನ್ನದೆ ಸಾಮಾಜಿಕ ನ್ಯಾಯಕ್ಕಾಗಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟವು ಹತ್ತನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟಗಾರರ ಮೇಲೆ ಈಗ ಕಾನೂನಿನ ಕುಣಿಕೆ ಬೀಸಲಾಗಿದೆ.
ಸಾರ್ವಜನಿಕರಿಗೆ ಅಡ್ಡಿಪಡಿಸಿ, ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪವನ್ನು ಹತ್ತು ಜನ ಹೋರಾಟಗಾರರ ವಿರುದ್ಧ ಹೊರಿಸಲಾಗಿದೆ. ಕರ್ನಾಟಕ ಪೊಲೀಸ್ ಆಕ್ಟ್ 1963 ಸೆಕ್ಷನ್ 103, ಐಪಿಸಿ ಸೆಕ್ಷನ್ 341, 143, 149, 188ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಶಿವರಾಯ ಅಕ್ಕರಕಿ, ಒಳಮೀಸಲಾತಿ ಹೋರಾಟಗಾರದ ಮುಂಚೂಣಿ ನಾಯಕರಾದ ಅಂಬಣ್ಣ ಅರೋಲಿಕರ್, ಮಾದಿಗ ದಂಡೋರ ಸಮಿತಿಯ ಪಾವಗಡ ಶ್ರೀರಾಮ್, ಪ್ರಾದೇಶಿಕ ಮಾದಿಗ ಸಂಘದ ಶಂಕರ್ ಪೂಜಾರಿ, ಎಸ್ಎಸ್ಎಸ್ಒ ಅಧ್ಯಕ್ಷ ಭಾಸ್ಕರ್ ಪ್ರಸಾದ್, ದಸಂಸ ಮುಖಂಡರಾದ ಎನ್.ಮೂರ್ತಿ, ಬಿ.ಗೋಪಾಲ್, ಹೆಣ್ಣೂರ್ ಶ್ರೀನಿವಾಸ್, ಎಂಆರ್ಎಚ್ಎಸ್ ಮುಖಂಡರಾದ ಭಾಗ್ಯಮ್ಮ, ಎಂಡಿಎಸ್ಎಸ್ ಮುಖಂಡರಾದ ಲಿಂಗರಾಜು ಅವರನ್ನು ಕ್ರಮವಾಗಿ ಆರೋಪಿಗಳನ್ನಾಗಿ ಮಾಡಲಾಗಿದೆ.
ಎಫ್ಐಆರ್ನಲ್ಲಿ ಏನಿದೆ?
ಕಾಟನ್ಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಬಿ.ಬಾಲರಾಜು ಅವರ ದೂರುದಾರರಾಗಿದ್ದು, ಹೋರಾಟಗಾರರ ಮೇಲೆ ಆರೋಪಗಳನ್ನು ಹೊರಿಸಿದ್ದಾರೆ.
ಡಿಸೆಂಬರ್ 11ರಂದು ಒಳಮೀಸಲಾತಿ ಹೋರಾಟಗಾರರು ತಮ್ಮ ನೇತೃತ್ವದಲ್ಲಿ ಸುಮಾರು 2000-3000 ಜನರ ಅಕ್ರಮ ಕೂಟ ಸೇರಿಸಿಕೊಂಡು ರೈಲ್ವೆ ನಿಲ್ದಾಣದ ಆರ್ಎಂಎಸ್ ಗೇಟ್ ಮುಂಭಾಗದಲ್ಲಿ, ಶಾಂತಲಾ ಸರ್ಕಲ್ನಿಂದ ಖೋಡೆ ಸರ್ಕಲ್ ಕಡೆಗೆ ಹೋಗುವ ಸಾರ್ವಜನಿಕ ಮುಖ್ಯ ರಸ್ತೆಯ ವಾಹನಗಳನ್ನು ತಡೆದಿದ್ದಾರೆ. ಸುಮಾರು 11.30ರಿಂದ 12.30ರವರೆಗೆ ತಡೆದು ಮೆರವಣಿಗೆ ಮಾಡಲು ಏಕಾಏಕಿ ಬಂದು ಕೂಗಾಟ ನಡೆಸಿದ್ದಾರೆ ಎಂದು ದೂರಲಾಗಿದೆ.
“ಸಾರ್ವಜನಿಕ ಸಂಚಾರಕ್ಕೆ ಮತ್ತು ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸಿರುವ ಬಗ್ಗೆ ಮಾಹಿತಿ ಬಂದಿತು. ನಾನು (ಇನ್ಸ್ಪೆಕ್ಟರ್) ಸದರಿ ಸ್ಥಳಕ್ಕೆ ಸಿಬ್ಬಂದಿ ಜೊತೆಯಲ್ಲಿ ತೆರಳಿ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದೇನೆ. ಸದರಿ ಪ್ರತಿಭಟನಾಕಾರರನ್ನು ಮುಂಜಾಗ್ರತಾ ಕ್ರಮವಾಗಿ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ತಡೆಯಲಾಗಿದೆ. ಹೈಕೋರ್ಟ್ 03.03.2022ರಂದು ನೀಡಿರುವ ಆದೇಶದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ಹೊರತುಪಡಿಸಿ ಯಾವುದೇ ಸ್ಥಳದಲ್ಲಿ ಪ್ರತಿಭಟನೆ ಹಾಗೂ ಮೆರವಣಿಗೆಗೆ ಅವಕಾಶವಿಲ್ಲವೆಂದು ಹೇಳಲಾಗಿದೆ. 10.01.2022ರಲ್ಲಿ ಪ್ರಕಟನೆ ನೀಡಿದ ಬಗ್ಗೆ ವಿವರಿಸಿ ತಿಳಿಸಿದರೂ ನಮ್ಮ ಮಾತನ್ನು ಲೆಕ್ಕಿಸದೇ ಸುಮಾರು 3,000 ಜನರನ್ನು ಕರೆದುಕೊಂಡು ಸಾರ್ವಜನಿಕ ರಸ್ತೆಗಳನ್ನು ತಡೆದು ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ವರೆಗೂ ಕಾಲ್ನಡಿಗೆಯಲ್ಲಿ ಘೋಷಣೆ ಕೂಗುತ್ತಾ ರಸ್ತೆ ತಡೆದು ಮೆರವಣಿಗೆ ಹೊರಟ್ಟಿದ್ದರು” ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
“ಸಾರ್ವಜನಿಕ ಸ್ಥಳವಾದ ರೈಲ್ವೆ ಸ್ಟೇಷನ್ ಮುಂಭಾಗ ಏಕಾಏಕಿ ಅಕ್ರಮ ಕೂಟ ಸೇರಿಸಿಕೊಂಡು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಲಾಗಿದೆ. ಸಾರ್ವಜನಿಕ ರಸ್ತೆಯಲ್ಲಿ ವಾಹನಗಳನ್ನು ತಡೆದು ಸಾರ್ವಜನಿಕರ ಸಂಚಾರಕ್ಕೆ ಮತ್ತು ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗಿದೆ” ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ.
ಎಫ್ಐಆರ್ ವಿರುದ್ಧ ಹೋರಾಟಗಾರರ ಆಕ್ರೋಶ
ಒಳಮೀಸಲಾತಿ ಹೋರಾಟದ ನಾಯಕರಾದ ಅಂಬಣ್ಣ ಅರೋಲಿಕರ್ ಪ್ರತಿಕ್ರಿಯಿಸಿ, “ಡಿಸೆಂಬರ್ 11ರ ಹೋರಾಟದಲ್ಲಿ ಭಾಗವಹಿಸಿದ 10 ಜನರ ಮೇಲೆ ಕೇಸ್ ದಾಖಲಾಗಿದೆ. ನಮ್ಮ ಹೋರಾಟಕ್ಕೆ ಕಾರಣವಾದವರು ಮುಖ್ಯಮಂತ್ರಿ (ಆರೋಪಿ-1), ಗೃಹ ಸಚಿವ (ಆರೋಪಿ-2), ಸಮಾಜ ಕಲ್ಯಾಣ ಇಲಾಖೆ ಸಚಿವ (ಆರೋಪಿ-3) ಎಂದು ಸ್ವಯಂ ಪ್ರೇರಿತ ಕೇಸ್ ದಾಖಲಿಸದಿದ್ದರೆ ನಾವೇ ಪ್ರಕರಣ ದಾಖಲಿಸಲಿದ್ದೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.
ವಕೀಲರು ಹಾಗೂ ಹೋರಾಟಗಾರರಾದ ಪಾವಗಡ ಶ್ರೀರಾಮ್ ಮಾತನಾಡಿ, “ಎರಡು ದಶಕಗಳ ಹೋರಾಟದಲ್ಲಿ ನಮ್ಮ ವಿರುದ್ಧ 18 ಪ್ರಕರಣಗಳನ್ನು ದಾಖಲಿಸಲಾಗಿದೆ. ಎಲ್ಲ ಪ್ರಕರಣದಲ್ಲೂ ನಾನು ಆರೋಪಿ ನಂ.1 ಆಗಿದ್ದೆ. ಈ ಪ್ರಕರಣದಲ್ಲಿ ಆರೋಪಿ ನಂ.3 ಮಾಡಿದ್ದಾರೆ. ಎಲ್ಲ ಪಕ್ಷಗಳು ನಮಗೆ ಮೋಸ ಮಾಡಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಭರವಸೆ ನೀಡಿದ್ದ ಕಾರಣಕ್ಕಾಗಿ ಈ ಅಧಿವೇಶನದಲ್ಲಿ ಗಮನ ಸೆಳೆಯಲು ಹೋರಾಟ ಹಮ್ಮಿಕೊಂಡಿದ್ದೆವು. ನಾವು ಯಾವುದೇ ಆಸ್ತಿಪಾಸ್ತಿ ನಷ್ಟ ಮಾಡಿಲ್ಲ. ಆದರೂ ಪ್ರಕರಣ ದಾಖಲಿಸಲಾಗಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ” ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹೋರಾಟಗಾರ ಭಾಸ್ಕರ್ ಪ್ರಸಾದ್, “ನಾನು ರೈಲ್ವೇ ಸ್ಟೇಷನ್ ಕಡೆ ತಲೆ ಹಾಕಿಯೇ ಅದೆಷ್ಟೋ ತಿಂಗಳುಗಳಾಗಿವೆ ಎಂಬುದು ನಿಜ ಸಂಗತಿ. ಆ ಪ್ರತಿಭಟನೆಯ ದಿನ ನಾನು ಬೇರೆ ಬೇರೆ ಏರ್ಪಾಡುಗಳು ಹಾಗೂ ನನ್ನ ರಚನೆಯ ‘ಮಾದಿಗ ಭಾರತ’ ಪುಸ್ತಕ ಬಿಡುಗಡೆಯ ಕಾರಣಕ್ಕಾಗಿ, ಬೆಳಿಗ್ಗೆ 10 ಗಂಟೆಗೆ ಫ್ರೀಡಂ ಪಾರ್ಕಿಗೆ ಹೋಗಿದ್ದವನು ಅಂದು ಸಂಜೆ ಪೊಲೀಸರು ಹೋರಾಟಗಾರರನ್ನೆಲ್ಲ ಬಂಧಿಸಿ ಕರೆದೊಯ್ಯುವವರೆಗೂ ಫ್ರೀಡಂ ಪಾರ್ಕ್ ಬಿಟ್ಟು ಆಚೀಚೆ ಕದಲಿಲ್ಲ. ಆದರೂ ನಾನು ಪ್ರಕರಣದ ಆರೋಪಿಯಾಗಿದ್ದೇನೆ. ನಾನು ಈ ಪ್ರಕರಣದಿಂದ ಎಸ್ಕೇಪ್ ಆಗಲು ಈ ವಿವರಣೆ ನೀಡ್ತಿಲ್ಲ” ಎಂದಿದ್ದಾರೆ.
“ರೈಲ್ವೆ ಸ್ಟೇಷನ್ ಮತ್ತು ಫ್ರೀಡಂ ಪಾರ್ಕ್ನಲ್ಲಿ ಇದುವರೆಗೂ ಅದೆಷ್ಟು ಸಾವಿರಾರು ಪ್ರತಿಭಟನೆಗಳು ನಡೆದಿವೆ. ಅವುಗಳಿಗಾಗಿ ಅದೆಷ್ಟು ಜನರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಈಗ ಪೋಲಿಸರು ಹೇಳಬೇಕು. ತಾನು ಒಳಮೀಸಲಾತಿ ಪರ ಎಂದು ಬಿಜೆಪಿ ಸರ್ಕಾರ ಹೇಳಿಕೊಳ್ಳುತ್ತದೆ. ನಿಜವಾದ ಒಳಮೀಸಲಾತಿ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿದೆ” ಎಂದು ಟೀಕಿಸಿದ್ದಾರೆ.


