Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬರ-ಬರಡು ಭೂಮಿಯ ಬಾಗೇಪಲ್ಲಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ದಂಡು

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬರ-ಬರಡು ಭೂಮಿಯ ಬಾಗೇಪಲ್ಲಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ದಂಡು

- Advertisement -
- Advertisement -

ಆಂಧ್ರ ಪ್ರದೇಶದ ಗಡಿಗೆ ಅಂಟಿಕೊಂಡಿರುವ ಗುಡ್ಡಗಾಡು ಮತ್ತು ಬಯಲು ಪ್ರದೇಶಗಳಿಂದ ಕೂಡಿದ ಬಾಗೇಪಲ್ಲಿ ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದು. ಸತತ ಬರ ಅಪ್ಪಳಿಸಿದ ಪರಿಣಾಮ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ ಹಿಂದುಳಿದ ತಾಲ್ಲೂಕುಗಳೆನಿಸಿದ ಬಾಗೇಪಲ್ಲಿ, ಗುಡಿಬಂಡೆ ಮತ್ತು ಹೊಸದಾಗಿ ರಚನೆಯಾದ ಚೇಳೂರುಗಳನ್ನು ಸೇರಿಸಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ರಚನೆಯಾಗಿದೆ. ಇಲ್ಲಿನ ಬಡ ಕೂಲಿಕಾರರನ್ನು ಸಂಘಟಿಸಿ ಹೋರಾಟ ರೂಪಿಸಿದ್ದ ಸಿಪಿಎಂ ಪಕ್ಷದ ನೆಲೆ ಇದಾಗಿದೆ. ಮೂರು ಬಾರಿ ಸಿಪಿಎಂ ಪಕ್ಷ ಇಲ್ಲಿ ಜಯಗಳಿಸಿತ್ತು. ಹಾಗಾಗಿಯೇ ಇತ್ತೀಚೆಗೆ ಸಿಪಿಎಂ ಪಕ್ಷದ ರಾಜ್ಯ ಸಮ್ಮೇಳನವನ್ನು ಬಾಗೇಪಲ್ಲಿಯಲ್ಲಿ ನಡೆಸಿ, ಕೇರಳ ಸಿಎಂ ಪಿಣರಾಯಿ ವಿಜಯನ್‌ರವರನ್ನು ಅತಿಥಿಗಳಾಗಿ ಆಹ್ವಾನಿಸಲಾಗಿತ್ತು.

ದಿವಂಗತ ಜಿ.ವಿ ಶ್ರೀರಾಮರೆಡ್ಡಿಯವರು ಬಾಗೇಪಲ್ಲಿಯಲ್ಲಿ ನೂರಾರು ಹೋರಾಟಗಳನ್ನು ಮುನ್ನಡೆಸಿದ್ದ ಖ್ಯಾತಿ ಹೊಂದಿದ್ದಾರೆ. ಆ ಹೋರಾಟಗಳ ಫಲವಾಗಿ ಅಲ್ಲಿನ ಜನರು ಅವರನ್ನು ಎರಡು ಬಾರಿ ಗೆಲ್ಲಿಸಿ ವಿಧಾನಸಭೆಗೆ ಕಳಿಸಿಕೊಟ್ಟಿದ್ದರು. ವಿಧಾನಸಭೆಯಲ್ಲಿ ಶ್ರೀರಾಮರೆಡ್ಡಿಯವರು ನಾಡಿನ ಶೋಷಿತರ ಪರ ದನಿಯೆತ್ತಿದ್ದರು. 8 ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಅವರು 6 ಬಾರಿ ಸೋತರೂ ಸಹ ಕ್ಷೇತ್ರದಿಂದ ವಿಮುಖರಾಗಲಿಲ್ಲ. ಜನರೊಟ್ಟಿಗೆ ಇದ್ದು ಹೋರಾಟಗಳಲ್ಲಿ ನಿರತರಾದರು. ಈಗಲೂ ಅವರು ಮಾಡಿದ ಕೆಲಸಗಳು ಅವರನ್ನು ಕ್ಷೇತ್ರದಲ್ಲಿ ಜೀವಂತವಾಗಿರಿಸಿವೆ. ಜಿ.ವಿ ಶ್ರೀರಾಮರೆಡ್ಡಿಯವರ ಹೆಸರಿಗೆ ಈಗಲೂ ಬಾಗೇಪಲ್ಲಿಯಲ್ಲಿ ಗೌರವವಿದೆ.

ಜಿ.ವಿ ಶ್ರೀರಾಮರೆಡ್ಡಿ

ಅತಿಹೆಚ್ಚು ತೆಲುಗು ಭಾಷೆ ಮಾತನಾಡುವ ಇಲ್ಲಿನ ಜನ ಅಭಿವೃದ್ದಿಯಿಂದ ವಂಚಿತರಾಗಿದ್ದಾರೆ. ಸಮರ್ಪಕ ನೀರಾವರಿ ಸೌಲಭ್ಯ ಇಲ್ಲದೆ ತತ್ತರಿಸಿದ್ದಾರೆ. ಇಲ್ಲಿಂದ ಗೆದ್ದವರು ಬೆಂಗಳೂರಿನಲ್ಲಿ ನೆಲೆಸುತ್ತಾರೆ, ಕ್ಷೇತ್ರದ ಜನರ ಕಷ್ಟನಷ್ಟಗಳಿಗೆ ಬೆನ್ನುತಿರುಗಿಸುತ್ತಿದ್ದಾರೆ ಎಂಬ ಅಳಲು ಕಂಡುಬರುತ್ತಿದೆ. ಇಲ್ಲಿ ನಡೆದಿರುವ ಒಟ್ಟು 13 ಚುನಾವಣೆಗಳಲ್ಲಿ ಕಾಂಗ್ರೆಸ್ 8 ಬಾರಿ ಜಯ ಕಂಡರೆ, ಸಿಪಿಎಂ 3 ಬಾರಿ ಗೆಲುವು ಸಾಧಿಸಿದೆ. ಎರಡು ಬಾರಿ ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇಲ್ಲಿ ಹಸ್ತ ಮತ್ತು ಸುತ್ತಿಗೆ-ಕುಡುಗೋಲು ಗುರುತುಗಳು ಹಿರಿಯರಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿವೆ. ಹಾಗಾಗಿ ಈ ಎರಡು ಪಕ್ಷಗಳ ನಡುವೆಯೇ ನೇರ ಹಣಾಹಣಿ ಇರುತ್ತದೆ. ಹಾಗಾಗಿ ಜೆಡಿಎಸ್, ಬಿಜೆಪಿ ಒಮ್ಮೆಯೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಗೌರಿಬಿದನೂರು: ಶಿವಶಂಕರ್‌ರೆಡ್ಡಿಯವರ ಸತತ 6ನೇ ಗೆಲುವಿಗೆ ಪುಟ್ಟಸ್ವಾಮಿಗೌಡರ ಅಡ್ಡಿ?

1978ರವರೆಗೆ ಮೀಸಲು ಕ್ಷೇತ್ರವಾಗಿದ್ದರಿಂದ ಪ.ಜಾ ಶಾಸಕರಿದ್ದರು. ಆನಂತರ ರೆಡ್ಡಿ ಮತ್ತು ಬಲಿಜ ಸಮುದಾಯದವರೆ ಕ್ಷೇತ್ರದ ಶಾಸಕರಾಗುತ್ತಾ ಬಂದಿದ್ದಾರೆ. ಇಂದಿಗೂ ಕ್ಷೇತ್ರದಲ್ಲಿ ಈ ಎರಡು ಸಮುದಾಯಗಳೇ ಪ್ರಾಬಲ್ಯ ಮೆರೆಯುತ್ತಿವೆ.

ಚುನಾವಣಾ ಇತಿಹಾಸ

1962ರಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರವನ್ನು ರಚಿಸಲಾಗಿತ್ತು. 1978ರವರೆಗೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದ ಅದು ತದನಂತರ ಸಾಮಾನ್ಯ ಕ್ಷೇತ್ರವಾಗಿ ಬದಲಾಗಿದೆ. ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಸುಬ್ಬರಾಯಪ್ಪನವರು ಸ್ವತಂತ್ರ ಅಭ್ಯರ್ಥಿ ಕೆ.ಎಂ ಮುನಿಯಪ್ಪನವರನ್ನು ಕೇವಲ 393 ಮತಗಳ ಅಂತರದಿಂದ ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. 1967ರ ಚುನಾವಣೆಯಲ್ಲಿ ಎ. ಮುನಿಯಪ್ಪನವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸಿಪಿಎಂ ಪಕ್ಷದ ಆದಿನಾರಾಯಣರವರನ್ನು 7,109 ಮತಗಳಿಂದ ಸೋಲಿಸಿ ಶಾಸಕರಾದರು. 1972ರಲ್ಲಿ ರೇಣುಕಾ ರಾಜೇಂದ್ರನ್‌ರವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತು. ಟಿಕೆಟ್ ವಂಚಿತ ಎ.ಮುನಿಯಪ್ಪನವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಗೆಲ್ಲಲಾಗಲಿಲ್ಲ. ರೇಣುಕಾ ರಾಜೇಂದ್ರನ್‌ರವರು 12,571 ಮತಗಳಿಂದ ಗೆಲುವು ಸಾಧಿಸಿದರು.

ಸಾಮಾನ್ಯ ಕ್ಷೇತ್ರ

1978ರ ಚುನಾವಣೆಯಲ್ಲಿ ಬಾಗೇಪಲ್ಲಿ ಪ.ಜಾ ಮೀಸಲು ರದ್ದಾಗಿ ಸಾಮಾನ್ಯ ಕ್ಷೇತ್ರವಾಯಿತು. ಆಗ ಇಂದಿರಾ ಕಾಂಗ್ರೆಸ್ ಪಕ್ಷದ ಎಸ್ ಮುನಿರಾಜುರವರು, ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದ ಬ್ರಾಹ್ಮಣ ಸಮುದಾಯದ ವಿ.ಕೃಷ್ಣರಾವ್‌ರವರನ್ನು 16,715 ಮತಗಳಿಂದ ಮಣಿಸಿ ಶಾಸಕರಾದರು.

ಖಾತೆ ತೆರೆದ ಸಿಪಿಎಂ

ಕೂಲಿ ಕಾರ್ಮಿಕರ ಪರವಾಗಿ ಹೋರಾಟ ನಡೆಸಿದ್ದ ಸಿಪಿಎಂ ಪಕ್ಷ 1983ರ ಚುನಾವಣೆಯಲ್ಲಿ ಬಾಗೇಪಲ್ಲಿಯಲ್ಲಿ ಜಯ ಗಳಿಸಿತು. ಪಕ್ಷದ ರೆಡ್ಡಿ ಸಮುದಾಯದ ಎ.ವಿ ಅಪ್ಪಸ್ವಾಮಿರೆಡ್ಡಿಯವರು ಕಾಂಗ್ರೆಸ್ ಅಭ್ಯರ್ಥಿ ಎಸ್ ಮುನಿರಾಜುರವರನ್ನು 11,542 ಮತಗಳಿಂದ ಸೋಲಿಸಿದರು. ಆ ಮೂಲಕ ಮೊದಲ ಬಾರಿಗೆ ಕಾಂಗ್ರೆಸ್ಸೇತರ ವ್ಯಕ್ತಿ ಕ್ಷೇತ್ರದ ಶಾಸಕರೆನಿಸಿಕೊಂಡರು.

ರೇಣುಕಾ ರಾಜೇಂದ್ರನ್‌

1985ರ ಚುನಾವಣೆಯಲ್ಲಿ ಸಿಪಿಎಂ ಪಕ್ಷದಿಂದ ರೆಡ್ಡಿ ಸಮುದಾಯದ ಜಿ.ವಿ ಶ್ರೀರಾಮರೆಡ್ಡಿಯವರು ಕಣಕ್ಕಿಳಿದರು. ಕಾಂಗ್ರೆಸ್ ಪಕ್ಷ ಬಿ.ನಾರಾಯಣಸ್ವಾಮಿಯವರಿಗೆ ಟಿಕೆಟ್ ನೀಡಿತು. ಇವರಿಬ್ಬರ ನಡುವಿನ ಜಿದ್ದಾಜಿದ್ದಿನ ಹೋರಾಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ನಾರಾಯಣಸ್ವಾಮಿ 2,010 ಮತಗಳ ಅಂತರದಿಂದ ಗೆದ್ದುಬಂದರು. 1989ರ ಚುನಾವಣೆಯಲ್ಲಿ ಸಿಎಪಿಂನ ಜಿ.ವಿ ಶ್ರೀರಾಮರೆಡ್ಡಿ ಮತ್ತು ಕಾಂಗ್ರೆಸ್‌ನ ಬಲಿಜ ಸಮುದಾಯದ ಸಿ.ವಿ ವೆಂಕರಾಯಪ್ಪನವರ ನಡುವೆ ಪೈಪೋಟಿ ನಡೆಯಿತು. ಇಲ್ಲಿಯೂ ಸಹ ಶ್ರೀರಾಮರೆಡ್ಡಿಯವರು ಕೇವಲ 1,626 ಮತಗಳಿಂದ ಸೋತು ನಿರಾಸೆ ಅನುಭವಿಸಿದರು.

1994ರ ಚುನಾವಣೆಯಲ್ಲಿ ತಮ್ಮ ಮೂರನೇ ಪ್ರಯತ್ನದಲ್ಲಿ ಜಿ.ವಿ ಶ್ರೀರಾಮರೆಡ್ಡಿಯವರು ಯಶಕಂಡರು. ಆ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಪಿ.ಎನ್ ಪದ್ಮನಾಭರಾವ್‌ರವರನ್ನು 6,446 ಮತಗಳಿಂದ ಮಣಿಸಿ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಿದರು. ತಮ್ಮ ಬೀದಿಹೋರಾಟವನ್ನು ವಿಧಾನಸೌಧದಲ್ಲಿಯೂ ಮೊಳಗಿಸಿದರು.

1999ರಲ್ಲಿ ಬಾಗೇಪಲ್ಲಿಗೆ ಬಲಿಜ ಸಮುದಾಯದ ಎನ್.ಸಂಪಂಗಿ ಆಗಮಿಸಿದರು. ಹೊರಗಿನವರಾದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಿ.ವಿ ಶ್ರೀರಾಮರೆಡ್ಡಿಯವರ ವಿರುದ್ಧ 3,298 ಮತಗಳ ಅಂತರದಿಂದ ಗೆದ್ದು ಶಾಸಕರಾದರು. ಆದರೆ 2004ರ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದರೂ ಸಹ ಜಿ.ವಿ ಶ್ರೀರಾಮರೆಡ್ಡಿಯವರ ಎದುರು 11,135 ಮತಗಳ ಅಂತರದಿಂದ ಸೋಲು ಕಂಡರು. ಶ್ರಿರಾಮರೆಡ್ಡಿಯವರು ಎರಡನೇ ಬಾರಿಗೆ ಶಾಸಕರಾದರು.

ಚಿತ್ರನಟ ಸಾಯಿಕುಮಾರ್ ಕಣಕ್ಕೆ

ಪಟ್ಟು ಬಿಡದ ಸಂಪಂಗಿ 2008ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಕಣಕ್ಕಿಳಿದರು. ಸಿಪಿಎಂನಿಂದ ಜಿ.ವಿ ಶ್ರೀರಾಮರೆಡ್ಡಿ ಸ್ಪರ್ಧಿಸಿದರು. ಕನ್ನಡ ಚಿತ್ರನಟ ಸಾಯಿಕುಮಾರ್ ಬಿಜೆಪಿ ಅಭ್ಯರ್ಥಿಯಾದರು. ಜೆಡಿಎಸ್ ಪಕ್ಷವು ನಾಗರಾಜರೆಡ್ಡಿಯವರನ್ನು ಕಣಕ್ಕಿಳಿಸಿತು. ನಾಲ್ಕು ಜನರ ನಡುವಿನ ಪೈಪೋಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್ ಸಂಪಂಗಿ ಕೇವಲ 938 ಮತಗಳ ಅಂತರದಿಂದ ಗೆದ್ದು ಎರಡನೇ ಬಾರಿಗೆ ಶಾಸಕರಾದರು. ಅವರು 32,244 ಮತಗಳನ್ನು ಪಡೆದರೆ, ಜಿ.ವಿ ಶ್ರೀರಾಮರೆಡ್ಡಿಯವರು 31,306 ಮತಗಳನ್ನು ಪಡೆದರು. ಜೆಡಿಎಸ್‌ನ ನಾಗರಾಜರೆಡ್ಡಿಯವರು 27,926 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರೆ, ಬಿಜೆಪಿಯ ಸಾಯಿಕುಮಾರ್ 26,070 ಮತಗಳನ್ನು ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮುಳಬಾಗಿಲು: ಪಕ್ಷೇತರ ಅಭ್ಯರ್ಥಿಗಳ ಪಾರುಪತ್ಯಕ್ಕೆ ಈ ಬಾರಿ ಬ್ರೇಕ್…

ಚಿನ್ನಕಾಯಲಪಲ್ಲಿ ಎಸ್.ಎನ್ ಸುಬ್ಬಾರೆಡ್ಡಿಯವರು 2013ರ ಚುನಾವಣೆಗೆ ಧುಮುಕಿದರು. ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಅವರು, ಸಮೀಪದ ಪ್ರತಿಸ್ಪರ್ಧಿ ಜಿ.ವಿ ಶ್ರೀರಾಮರೆಡ್ಡಿಯವರನ್ನು 30,755 ಮತಗಳ ಬೃಹತ್ ಅಂತರದಿಂದ ಸೋಲಿಸಿ ಶಾಸಕರಾದರು. ಆ ಚುನಾವಣೆಯಲ್ಲಿ ಅವರು 66,227 ಮತಗಳನ್ನು ಪಡೆದರೆ ಜಿ.ವಿ ಶ್ರೀರಾಮರೆಡ್ಡಿಯವರು 35,472 ಮತಗಳನ್ನು ಪಡೆದರು. ಜೆಡಿಎಸ್ ಅಭ್ಯರ್ಥಿ ಹರಿನಾಥ್‌ರೆಡ್ಡಿ 16,779 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಎನ್.ಸಂಪಂಗಿ ಕೇವಲ 15,491 ಮತಗಳಿಗೆ ಸೀಮಿತಗೊಂಡರು. ಈ ಚುನಾವಣೆಯಲ್ಲಿ ಗೆದ್ದ ಸುಬ್ಬಾರೆಡ್ಡಿಯವರನ್ನು ಹೊರತುಪಡಿಸಿ ಸುಬ್ಬಾರೆಡ್ಡಿ ಹೆಸರಿನ ಇತರ ನಾಲ್ವರು ಅಭ್ಯರ್ಥಿಗಳು ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರೂ ಸಹ ಎಸ್.ಎನ್ ಸುಬ್ಬಾರೆಡ್ಡಿಯವರ ಗೆಲುವು ತಡೆಯಲಾಗಲಿಲ್ಲ!

ಸಾಯಿಕುಮಾರ್

2018ರ ಚುನಾವಣೆ ಹೊತ್ತಿಗೆ ಸ್ವತಂತ್ರ ಶಾಸಕ ಎಸ್.ಎನ್ ಸುಬ್ಬಾರೆಡ್ಡಿಯವರು ಕಾಂಗ್ರೆಸ್ ಸೇರಿ ಟಿಕೆಟ್ ಗಿಟ್ಟಿಸಿಕೊಂಡರು. ಟಿಕೆಟ್ ವಂಚಿತ ಮಾಜಿ ಶಾಸಕ ಸಂಪಂಗಿ ಕಣ್ಣೀರು ಸುರಿಸಿದರು. ವೀರಪ್ಪ ಮೊಯ್ಲಿ ವಿರುದ್ಧ ಕಿಡಿಕಾರಿದರು. ಅವರನ್ನು ಕಾಂಗ್ರೆಸ್ ಸಮಾಧಾನಪಡಿಸಿತು. ಆ ಚುನಾವಣೆಯಲ್ಲಿ ಎಸ್.ಎನ್ ಸುಬ್ಬಾರೆಡ್ಡಿಯವರು ಗೆಲುವು ಸಾಧಿಸಿ ಬಾಗೇಪಲ್ಲಿಯಲ್ಲಿ ಸತತ ಎರಡನೇ ಬಾರಿಗೆ ಗೆದ್ದ ಮೊದಲ ಶಾಸಕರೆನಿಸಿಕೊಂಡರು. ಅವರು 65,710 ಮತಗಳನ್ನು ಪಡೆದರೆ ಸಿಪಿಎಂನ ಜಿ.ವಿ ಶ್ರೀರಾಮರೆಡ್ಡಿಯವರು 51,697 ಮತಗಳನ್ನು ಪಡೆದು ಸತತ ಮೂರನೇ ಸೋಲು ಕಂಡರು. ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಡಾ.ಸಿ.ಆರ್ ಮನೋಹರ್‌ರವರು 38,302 ಮತ ಪಡೆದರು. ಬಿಜೆಪಿ ಟಿಕೆಟ್‌ನಡಿ ನಾಮಕಾವಸ್ಥೆಗೆ ಸ್ಪರ್ಧಿಸಿದ್ದ ಚಿತ್ರನಟ ಸಾಯಿಕುಮಾರ್ ಕೇವಲ 4,140 ಮತ ಪಡೆದರು.

ಜಾತಿವಾರು ಅಂದಾಜು ಮತಗಳು

ಸುಮಾರು 60,000ದಷ್ಟಿರುವ ರೆಡ್ಡಿ-ಒಕ್ಕಲಿಗ ಮತಗಳೆ ಇಲ್ಲಿ ನಿರ್ಣಾಯಕವಾಗಿವೆ. 50,000ದಷ್ಟು ದಲಿತ ಸಮುದಾಯದ ಮತಗಳಿವೆ. 25,000ದಷ್ಟು ಕುರುಬ ಸಮುದಾಯದ ಮತಗಳಿದ್ದರೆ, 23,000ದಷ್ಟು ಬಲಿಜ ಜನಾಂಗದ ಮತಗಳಿವೆ. 20,000ದಷ್ಟು ಮುಸ್ಲಿಂ ಮತಗಳಿದ್ದರೆ, ಸುಮಾರು 30,000ದಷ್ಟು ಇತರ ಸಮುದಾಯದ ಮತಗಳಿವೆ ಎನ್ನಲಾಗಿದೆ.

ಕ್ಷೇತ್ರದ ಸಮಸ್ಯೆಗಳು

ಬರನಾಡು ಬಾಗೇಪಲ್ಲಿ ಇಂದಿಗೂ ಅತಿ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಸಾಧ್ಯವಾಗಿಲ್ಲ. ಇಂದಿಗೂ ಹಲವು ಹಳ್ಳಿಗಳಿಗೆ ರಸ್ತೆಗಳಿಲ್ಲ. ಶಾಲಾ-ಕಾಲೇಜುಗಳು ಮೂಲಸೌಲಭ್ಯಗಳಿಂದ ವಂಚಿತವಾಗಿವೆ. ಶಿಕ್ಷಕರೆ ಕೊರತೆ ಎದ್ದುಕಾಣುತ್ತಿದೆ. ಗಡಿನಾಡು ಬಾಗೇಪಲ್ಲಿಗೆ ಬರಲು ಸರ್ಕಾರಿ ನೌಕರರು, ಶಿಕ್ಷಕರು ಹಿಂದೇಟು ಹಾಕುತ್ತಾರೆ. ಹಾಗಾಗಿ ಹಲವು ಶಾಲಾ-ಕಾಲೇಜುಗಳು ಮುಚ್ಚಿಹೋಗುವ ಅಪಾಯದಲ್ಲಿವೆ. ಯುವಜನರಿಗೆ ಉದ್ಯೋಗ ಸೃಷ್ಟಿಸುವ ಯಾವುದೇ ಯೋಜನೆಗಳು ತಾಲ್ಲೂಕಿನಲ್ಲಿಲ್ಲ. ಭ್ರಷ್ಟಾಚಾರ ವಿಪರೀತವಾಗಿದ್ದು, ಗ್ರಾ.ಪಂ.ಯಿಂದ ಹಿಡಿದು ಎಲ್ಲಾ ಹಂತದವರೆಗೆ ಭ್ರಷ್ಟಾಚಾರ ಮನೆ ಮಾಡಿದೆ.

ಅಕ್ರಮ ಗಣಿಗಾರಿಕೆ

ಅಕ್ರಮ ಗಣಿಗಾರಿಕೆ ಮಿತಿಮೀರಿದೆ. ಕಲ್ಲು ಕ್ವಾರಿಗಳು ಎಲ್ಲೆಂದರಲ್ಲಿ ತಲೆಎತ್ತಿವೆ. ಗಣಿ ಬ್ಲಾಸ್ಟ್‌ಗಳು ನಡೆಯುತ್ತಿದ್ದು ಇದರಿಂದ ಹಲವಾರು ಮನೆಗಳು ಬಿರುಕುಬಿಟ್ಟಿವೆ. ಟಿಪ್ಪರ್ ಲಾರಿಗಳ ಸದ್ದು ಹಗಲು ರಾತ್ರಿಯೆನ್ನದೆ ಗುಂಯ್‌ಗುಟ್ಟುತ್ತಿವೆ. ಇದರಿಂದ ರಸ್ತೆಗಳು ಕಿತ್ತುಹೋಗಿದ್ದು, ಎಲ್ಲಾ ಕಡೆ ಧೂಳು ತುಂಬಿಕೊಂಡಿದೆ. ಅಂತರ್ಜಲ ವಿಷಕಾರಿಯಾಗುತ್ತಿದ್ದು ಜನ ಭಯಭೀತರಾಗಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ಹೆಸರು ಕೇಳಿಬರುತ್ತಿದೆಯಾದರೂ ಅವರ ವಿರುದ್ಧ ಕ್ರಮ ಜರುಗಿಸಲು ಎಲ್ಲರೂ ಅಸಹಾಯಕರಾಗಿದ್ದಾರೆ. ಶಾಸಕ ಸುಬ್ಬಾರೆಡ್ಡಿಯವರು ಸಹ ಕೈಕಟ್ಟಿ ಕುಳಿತಿದ್ದಾರೆ.

ಎನ್.ಸಂಪಂಗಿ

ಹಾಲಿ ಪರಿಸ್ಥಿತಿ

ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿಯವರು ಸತತ ಎರಡು ಬಾರಿ ಶಾಸಕರಾದರೂ ಕ್ಷೇತ್ರವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಲು ವಿಫಲರಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ ಮತ್ತು ಸ್ವಜನಪಕ್ಷಪಾತ ಮಾಡುತ್ತಿದ್ದಾರೆ ಎಂದು ಜನ ದೂರುತ್ತಾರೆ.

2023ರ ಕಾಂಗ್ರೆಸ್ ಅಭ್ಯರ್ಥಿ

ಕಾಂಗ್ರೆಸ್ ಪಕ್ಷದಿಂದ ಟಿಕೆಟ್‌ಗಾಗಿ ಹಾಲಿ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಮತ್ತು ಮಾಜಿ ಶಾಸಕ ಎನ್ ಸಂಪಂಗಿ ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಹಾಲಿ ಶಾಸಕ ಸುಬ್ಬಾರೆಡ್ಡಿಗೆ ಮಣೆಹಾಕುವ ಸಾಧ್ಯತೆ ಹೆಚ್ಚಾಗಿದೆ.

ಸಿಪಿಎಂ

ಮೂರು ಬಾರಿ ಜಯ ಕಂಡಿರುವ ಸಿಪಿಎಂ ಪಕ್ಷ ಇತ್ತೀಚೆಗೆ ಇಲ್ಲಿಯೇ ರಾಜ್ಯ ಸಮ್ಮೇಳನ ನಡೆಸಿ ಬಲ ಪ್ರದರ್ಶನ ಮಾಡಿದೆ. ಪಕ್ಷದ ವತಿಯಿಂದ ಡಾ.ಅನಿಲ್ ಕುಮಾರ್ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ. ಕೊರೊನಾ ಸಮಯದಲ್ಲಿ ಎನ್‌ಜಿಓ ಜೊತೆ ಸೇರಿ ಬಹಳಷ್ಟು ಕೆಲಸ ಮಾಡಿರುವ ಅವರು ಜನಮನ್ನಣೆ ಗಳಿಸಿದ ವೈದ್ಯರೆನಿಸಿಕೊಂಡಿದ್ದಾರೆ. ಉಳಿದೆಲ್ಲಾ ಅಭ್ಯರ್ಥಿಗಳಿಗೆ ಹೋಲಿಸಿದ್ದಲ್ಲಿ, ಬಾಗೇಪಲ್ಲಿಯಲ್ಲಿಯೇ ಪೀಪಲ್ಸ್ ಆಸ್ಪತ್ರೆ ತೆರೆದು ನೆಲೆಸಿರುವ ಇವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಹೆಚ್ಚಿದೆ. ಇನ್ನು ಕರ್ನಾಟಕ ಪ್ರಾಂತ ರೈತ ಸಂಘದ ಪಿ ಮಂಜುನಾಥ್ ರೆಡ್ಡಿಯವರು ಸಹ ಸಿಪಿಎಂ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್

ಜೆಡಿಎಸ್ ಪಕ್ಷವು ಈ ಹಿಂದೆ ನಿಂತು ಸೋತಿದ್ದ ಡಿ.ಜೆ ನಾಗರಾಜ ರೆಡ್ಡಿಯವರಿಗೆ ಟಿಕೆಟ್ ಘೋಷಿಸಿದೆ. ಆದರೆ ಪಕ್ಷದಲ್ಲಿ ಹಲವರು ಅವರ ವಿರುದ್ಧ ಅಪಸ್ವರವೆತ್ತಿದ್ದಾರೆ. ಎಚ್.ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿರುವ ಹರಿನಾಥ್‌ರೆಡ್ಡಿ ಮತ್ತು ಒಕ್ಕಲಿಗ ಸಮುದಾಯದ ಗೊಟ್ಟಿಗೊರೆ ಮಂಜುನಾಥ್‌ಗೌಡ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.

ಬಿಜೆಪಿ

ಬಾಗೇಪಲ್ಲಿಯಲ್ಲಿ ಜೆಡಿಎಸ್‌ನಂತೆಯೆ ಬಿಜೆಪಿಗೆ ಕೂಡ ಒಮ್ಮೆಯೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಆದರೂ ಪಕ್ಷದ ಟಿಕೆಟ್‌ಗಾಗಿ ಆಕಾಂಕ್ಷಿಗಳ ದಂಡೇ ನೆರೆದಿದೆ. ಬಲಿಜ ಜನಾಂಗದ ಮುಖಂಡರು, ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಸಿ ಮುನಿರಾಜುರವರು ಹಲವಾರು ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಬಿಜೆಪಿ ಟಿಕೆಟ್‌ಗಾಗಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಸಾಕಷ್ಟು ಹಣ ಚೆಲ್ಲಲು ಸಹ ಸಿದ್ದರಿದ್ದಾರೆ. ಇನ್ನು ಹರಿಕೆರೆ ಕೃಷ್ಣಾರೆಡ್ಡಿ ಸಹ ತಮ್ಮ ಜಾತಿ ಬಲ ಬಳಸಿಕೊಂಡು ಟಿಕೆಟ್‌ಗಾಗಿ ಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶ್ರೀನಿವಾಸಪುರ: ರಮೇಶ್ ಕುಮಾರ್‌ರವರಿಗೆ ಒಲಿಯುವುದೇ ಹ್ಯಾಟ್ರಿಕ್ ಗೆಲುವು?

ಬಿಜೆಪಿ ಜಿಲ್ಲಾಧ್ಯಕ್ಷರಾದ ರಾಮಲಿಂಗಪ್ಪನವರು ಬಲಿಜ ಜನಾಂಗಕ್ಕೆ ಸೇರಿದ್ದು, 30 ವರ್ಷಗಳಿಂದ ಪಕ್ಷಕ್ಕೆ ದುಡಿದಿದ್ದೇನೆ, ನನಗೆ ಟಿಕೆಟ್ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇತ್ತೀಚೆಗೆ ಪಕ್ಷ ಸೇರಿರುವ ಕೋನಪ್ಪರೆಡ್ಡಿಯವರು ಸಹ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ನಾಲ್ವರ ಟಿಕೆಟ್ ರೇಸ್‌ನಲ್ಲಿ ಸಿ.ಮುನಿರಾಜು ಮುಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಜಿ.ವಿ ಶ್ರೀರಾಮರೆಡ್ಡಿಯವರು ಇಲ್ಲವಾದ ಮೇಲೆ..

ಜಿ.ವಿ ಶ್ರೀರಾಮರೆಡ್ಡಿಯವರು ಬಾಗೇಪಲ್ಲಿಯ ಕಟ್ಟಕಡೆಯ ವ್ಯಕ್ತಿಯನ್ನು ತಲುಪಿದ್ದಾರೆ. ಶಾಲೆ-ಕಾಲೇಜುಗಳನ್ನು ನಿರ್ಮಿಸಿದ್ದಾರೆ. ರೈತ, ಕಾರ್ಮಿಕ, ಮಹಿಳೆಯರ ಪರವಾದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಜಿ.ವಿ ಶ್ರೀರಾಮರೆಡ್ಡಿಯವರು ಪಕ್ಷದ ತತ್ವಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಸಿಪಿಎಂ ಜಿಲ್ಲಾ ಸಮಿತಿಯು ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಆನಂತರ ಅವರು 2020ರಲ್ಲಿ ಪ್ರಜಾ ಸಂಘರ್ಷ ಸಮಿತಿ (ಪಿಎಸ್‌ಎಸ್) ಎಂಬ ಪಕ್ಷ ಕಟ್ಟಿದರು. ಆದರೆ ಅವರು 2022ರ ಏಪ್ರಿಲ್‌ನಲ್ಲಿ ಹೃದಯಾಘಾತದಿಂದ ಕಾಲವಾದರು. ಈಗ ಈ ಪಕ್ಷದಿಂದಲೂ ಸಹ ಚುನಾವಣೆಯ ಕಣಕ್ಕಿಳಿಯಲು ಕೆಲವರು ತಯಾರಿ ನಡೆಸಿದ್ದಾರೆ. ಅವರಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ಮಿಥುನ್ ರೆಡ್ಡಿಯಾಗಿದೆ.

ಈ ಹಿಂದೆ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಮಿಥುನ್ ರೆಡ್ಡಿ ಈಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಯತ್ನಿಸುತ್ತಿದ್ದಾರೆ. ಅವರು ಶ್ರೀರಾಮ ರೆಡ್ಡಿಯವರ ಹಾದಿಯಲ್ಲಿ ನಡೆಯುವುದಾಗಿ ಭರವಸೆ ನೀಡಿದ ನಂತರ ಪ್ರಜಾ ಸಂಘರ್ಷ ಸಮಿತಿ ಅವರಿಗೆ ಬೆಂಬಲ ನೀಡಲು ಮುಂದಾಗಿದೆ ಎನ್ನಲಾಗಿದೆ.

ಅಲ್ಲದೆ ಡಾ.ಮಧು ಸೀತಪ್ಪ ಎಂಬುವವರು ಸಹ ಸ್ವಾಭಿಮಾನಿ ಪಿಎಸ್‌ಎಸ್ ಕಟ್ಟಿ ಈ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದಾರೆ.

ಹಾಗೆ ನೋಡಿದರೆ ಕಾಂಗ್ರೆಸ್ ಮತ್ತು ಸಿಪಿಎಂ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಲಾಬಿ ಮತ್ತು ಒಳಜಗಳ ಜೋರಾಗಿದೆ. ಹಾಗಾಗಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ನಡುವೆ ನೇರ ಪೈಪೋಟಿ ಏರ್ಪಡುವ ಸಂಭವವಿದೆ. ಜೊತೆಗೆ ಬಿಜೆಪಿಯ ಮುನಿರಾಜು, ಪ್ರಜಾ ಸಂಘರ್ಷ ಸಮಿತಿಯ ಮಿಥುನ್ ರೆಡ್ಡಿ ಮತ್ತು ಜೆಡಿಎಸ್‌ನ ಅಭ್ಯರ್ಥಿಗಳು ಕೂಡ ಒಂದಷ್ಟು ಮತ ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ. ಹಾಗಾಗಿ 2008ರಲ್ಲಾದಂತೆ ಮತಗಳು ಹಂಚಿಹೋಗುವ ಸಾಧ್ಯತೆಯಿದೆ. ಯಾರೇ ಗೆದ್ದರೂ ಮತಗಳ ಅಂತರ ಕಡಿಮೆ ಇರಲಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಗೌರಿ.ಕಾಂ ಶುದ್ಧ ಮತ್ತು ವಾಸ್ತವದ ವರದಿ ಕೊಡುತ್ತದೆ.ಅದರಲ್ಲಿ ಎರಡು ಮಾತಿಲ್ಲ.ಎಷ್ಟೋ ಮಾಧ್ಯಮಗಳು ಈವತ್ತು ತಮ್ಮ ಟಿ ಆರ್ ಪಿ ಗೆ ಏನೇನೋ ಕಸರತ್ತು ಮಾಡುತ್ತವೆ.ಅವುಗಳೆಲ್ಲದರ ಹೊರತಾಗಿ ಗೌರಿ.ಕಾಂ ನಿಷ್ಪಕ್ಷಪಾತವಾದ ನ್ಯಾಯಯುತವಾದ ಸುದ್ದಿ ಕೊಡುತ್ತದೆ.ಶುಭವಾಗಲಿ ಈ ಬಳಗಕ್ಕೆ.
    ಗುಡಿಬಂಡೆ ಫಯಾಜ್ ಅಹಮದ್ ಖಾನ್.
    ರಾಜ್ಯಾಧ್ಯಕ್ಷರು. ಕಸಾಪ
    ಕರುನಾಡು ಸಾಹಿತ್ಯ ಪರಿಷತ್ತು.

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...