ತಾರಮತ್ಯದಿಂದ ಕೂಡಿರುವ ‘ನೂತನ ಪಿಂಚಣಿ ಯೋಜನೆ’ (ಎನ್ಪಿಎಸ್) ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಸರ್ಕಾರಿ ನೌಕರರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಹಲವು ದಿನಗಳಿಂದ ನಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಹೋರಾಟ ಬಿರುಸಾಗಿದ್ದು, ಸುಮಾರು ಲಕ್ಷ ನೌಕರರು ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡಿದ್ದಾರೆ.
‘ಕರ್ನಾಟಕ ಸರ್ಕಾರಿ ಎನ್ಪಿಎಸ್ ನೌಕರರ ಸಂಘ’ದ ನೇತೃತ್ವದಲ್ಲಿ ರಾಜ್ಯದ 31 ಜಿಲ್ಲೆಗಳ ಸರ್ಕಾರಿ ನೌಕರರು ಹಾಗೂ ಅನುದಾನಿತ ಶಾಲಾ-ಕಾಲೇಜುಗಳ ಶಿಕ್ಷಕರು ಪಾಲ್ಗೊಂಡಿದ್ದು, ಒಂದು ಲಕ್ಷಕ್ಕೂ ಅಧಿಕ ನೌಕರರು ಫ್ರೀಡಂ ಪಾರ್ಕ್ನಲ್ಲಿ ಜಮಾಯಿಸಿದ್ದಾರೆ.
ಮೆಜೆಸ್ಟಿಕ್ ರೈಲ್ವೇ ನಿಲ್ದಾಣ, ಶೇಷಾದ್ರಿ ರಸ್ತೆ, ಫ್ರೀಡಂ ಪಾರ್ಕ್ ಮುಂಭಾಗದ ಪಾರ್ಕಿಂಗ್ ಸ್ಥಳ, ಫ್ರೀಡಂ ಪಾರ್ಕ್ ಪ್ರತಿಭಟನಾ ಸ್ಥಳ ಹಾಗೂ ಗಾಂಧಿನಗರದ ಮಹಾಬೋಧಿ ಸೊಸೈಟಿ ಮುಖ್ಯ ರಸ್ತೆಯಲ್ಲಿ ಸರ್ಕಾರಿ ನೌಕಕರರು ಜಮಾಯಿಸಿದ್ದಾರೆ. ಪ್ರೀಡಂ ಪಾರ್ಕ್ ಮುಂಭಾಗದಲ್ಲಿದ್ದ ಮುಖ್ಯ ವೇದಿಕೆಯಲ್ಲಿ ಜಾಗ ಸಾಕಾಗುವುದಿಲ್ಲ ಎಂಬ ಕಾರಣಕ್ಕೆ ಫ್ರೀಡಂ ಪಾರ್ಕ್ ಪ್ರತಿಭಟನಾ ಸ್ಥಳದಲ್ಲಿ ಬೃಹದಾಕಾರದಲ್ಲಿ ಶಾಮಿಯಾನ ಹಾಕಲಾಗಿದೆ. ಭಾಷಣ ಕೇಳಲು ಅನುಕೂಲವಾಗುವಂತೆ ಎಲ್ಇಡಿ ಪರದೆ ಅಳವಡಿಲಾಗಿದೆ.
ಪ್ರತಿಭಟನೆಯನ್ನು ಉದ್ದೇಶಿಸಿ ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಮಾತನಾಡಿ, “ಪಶ್ಚಿಮ ಬಂಗಾಳದಲ್ಲಿ ಆರಂಭದಲ್ಲೇ ಎನ್ಪಿಎಸ್ ವಿರೋಧಿಸಲಾಯಿತು. ಝಾರ್ಖಾಂಡ್, ಪಂಜಾಬ್ನಲ್ಲಿ ಹಳೆಯ ಪಂಚಣಿ ಯೋಜನೆಯೇ ಇದೆ. ಹಿಮಾಚಲ ಪ್ರದೇಶದಲ್ಲೂ ಮುಂದಿನ ದಿನಗಳಲ್ಲಿ ಹಳೆಯ ವ್ಯವಸ್ಥೆ ಬರುವ ಸಾಧ್ಯತೆ ಇದೆ. ಯಾಕೆಂದರೆ ಚುನಾವಣೆಯಲ್ಲಿ ಭರವಸೆ ನೀಡಿ ಗೆದ್ದಿರುವುದರಿಂದ ಎನ್ಪಿಎಸ್ ರದ್ದು ಮಾಡುತ್ತಾರೆಂದು ನಂಬೋಣ. ಹಲವು ರಾಜ್ಯಗಳು ಎನ್ಪಿಎಸ್ ವಿರೋಧಿಸಿ ನಿಲುವು ತಾಳುವುದಾದರೆ ಕರ್ನಾಟಕ ರಾಜ್ಯಕ್ಕೇಕೆ ಸಾಧ್ಯವಿಲ್ಲ?” ಎಂದು ಪ್ರಶ್ನಿಸಿದ್ದಾರೆ.
“2006ರ ಸಂದರ್ಭದಲ್ಲಿ ಅಧಿಕಾರದ ಪಾಲನ್ನು ಹಂಚಿಕೊಂಡಿದ್ದ ಪಕ್ಷದವರೇ 2018ರ ಬೆಳಗಾವಿ ಅಧಿವೇಶನದಲ್ಲಿ ಎನ್ಪಿಎಸ್ ಬೇಡ ಎಂಬುದರ ಪರವಾಗಿ ಮಾತನಾಡಿದ್ದಾರೆ. ಬಿಜೆಪಿ ನಾಯಕರಾದ ಗೋವಿಂದ ಕಾರಜೋಳ, ಬಿ.ಎಸ್.ಯಡಿಯೂಪ್ಪ, ವಿಶ್ವೇಶ್ವರ ಹೆಗಡೆ ಕಾಗೇರಿ, ಜಗದೀಶ್ ಶೆಟ್ಟರ್ ಅವರು ಹಳೆಯ ಪಿಂಚಣಿಗಾಗಿ ಆಗ್ರಹಿಸಿದ್ದಾರೆ. ಈಗ ಅವರೇ ಅಧಿಕಾರದಲ್ಲಿದ್ದಾರೆ. ಸರ್ಕಾರ ನಡೆಸುತ್ತಿರುವವರಿಗೆ ಪಾಪಪ್ರಜ್ಞೆ ಕಾಡಬೇಕು” ಎಂದರು.
“2018ರ ಬೆಳಗಾವಿ ಅಧಿವೇಶನದಲ್ಲಿ ಆಡಿದ್ದ ಮಾತುಗಳನ್ನು ಅನುಷ್ಠಾನಕ್ಕೆ ತರುವ ಸೌಭಾಗ್ಯ ತಮಗೆ ಬಂದಿದೆ ಎಂದು ಬಿಜೆಪಿ ನಾಯಕರು ಭಾವಿಸಬೇಕು. ವಿರೋಧ ಪಕ್ಷವೂ ಈ ಕುರಿತು ಮಾತನಾಡಬೇಕು. ಅವರಿಗೂ ಪಾಪಪ್ರಜ್ಞೆ ಕಾಡುತ್ತಿದ್ದರೆ ಈ ಅಧಿವೇಶನದಲ್ಲಿ ಒತ್ತಡವನ್ನು ತರಬೇಕು” ಎಂದು ಆಗ್ರಹಿಸಿದರು.
“ನಮ್ಮ ಆಗ್ರಹವನ್ನು ತಕ್ಷಣವೇ ಸರ್ಕಾರ ಒಪ್ಪದೇ ಇರಬಹುದು. ಹೀಗಾಗಿ ಹೋರಾಟ ಮುಂದುವರಿಸುತ್ತಾ ಹೋಗಬೇಕು. ನಿಶ್ಚಿತ ಪಿಂಚಣಿಯನ್ನು ಜಾರಿಗೆ ತರುವುದಾಗಿ ಕಡೆಯ ಪಕ್ಷ ಪ್ರಣಾಳಿಕೆಯಲ್ಲಾದರೂ ಹೇಳಬೇಕು. ಇದಾದರೆ ಹೋರಾಟದ ಯಶಸ್ಸೇ ಆಗಿರುತ್ತದೆ. ಮುಖ್ಯವಾಗಿ ಚುನಾವಣೆ ಮುಂಚಿತವಾಗಿಯೇ ಸರ್ಕಾರ ಹಳೆಯ ಪಿಂಚಣಿಯನ್ನು ಜಾರಿಗೆ ತರಲು ಕ್ರಮ ಜರುಗಿಸಬೇಕು. ಆಡಳಿತ ಮತ್ತು ವಿರೋಧ ಪಕ್ಷಗಳ ಮೇಲೆ ಜವಾಬ್ದಾರಿಗಳು ಹೆಚ್ಚಿವೆ” ಎಂದು ಅಭಿಪ್ರಾಯಪಟ್ಟರು.
“ರಾಜಕಾರಣಿಗಳ ಪಿಂಚಣಿಗೆ ಎನ್ಪಿಎಸ್ ಅನ್ವಯಿಸುವುದಿಲ್ಲ. ಬರೀ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯಿಸುತ್ತಿದೆ. ನಿಶ್ಚಿತ ಪಿಂಚಣಿ ಯೋಜನೆಯಲ್ಲೇ ರಾಜಕಾರಣಿಗಳು, ಮೇಲಧಿಕಾರಿಗಳು ಇದ್ದಾರೆ. ಸಾಮಾನ್ಯ ಸರ್ಕಾರಿ ನೌಕರರಿಗೆ ಮಾತ್ರ ಎನ್ಪಿಎಸ್ ಅನ್ವಯಿಸಲಾಗಿದೆ. ಇದು ಮಹಾ ಅನ್ಯಾಯ” ಎಂದು ಆಕ್ಷೇಪ ವ್ಯಕ್ತಪಡಿಸಿದರು.
ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮ್ ಮಾತನಾಡಿ, “ಕಳೆದ ಎಂಟು ವರ್ಷಗಳಿಂದ ಕರ್ನಾಟಕ ಸರ್ಕಾರಿ ಎನ್ಪಿಎಸ್ ನೌಕರರ ಸಂಘ ನಿರಂತರವಾಗಿ ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗಾಗಿ ಒತ್ತಾಯಿಸಿ ಹೋರಾಟ ಮಾಡುತ್ತಾ ಬಂದಿದೆ. 2006ರಲ್ಲಿ ಜಾರಿಗೆ ಬಂದಿರುವ ನೂತನ ಪಿಂಚಣಿ ಯೋಜನೆ ರದ್ದು ಮಾಡಬೇಕು” ಎಂದು ಒತ್ತಾಯಿಸಿದರು.
“ದೇಶದ ವಿವಿಧ ರಾಜ್ಯಗಳಲ್ಲಿ ಹೋರಾಟ ನಡೆಯುತ್ತಿದೆ. ವಿವಿಧ ರಾಜ್ಯಗಳಲ್ಲಿ ಎನ್ಪಿಎಸ್ ರದ್ದು ಮಾಡಿದಂತೆ ಕರ್ನಾಟಕ ಸರ್ಕಾರವೂ ಕ್ರಮ ಜರುಗಿಸಬೇಕು. ಸರ್ಕಾರ ನಮ್ಮ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ನಾವು ಅಂತಿಮ ಹೋರಾಟಕ್ಕೆ ಧುಮುಕಿದ್ದೇವೆ. ಅನಿರ್ಧಾಷ್ಟಾವಧಿ ಧರಣಿ ಮೂಲಕ, ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಕರೆ ಕೊಟ್ಟಿದ್ದೇವೆ” ಎಂದು ಗುಡುಗಿದ್ದಾರೆ.
“‘ವೋಟ್ ಫಾರ್ ಒಪಿಎಸ್’ ಎಂಬ ಅಭಿಯಾನ ಆರಂಭಿಸಿದ್ದೇವೆ. ನಿವೃತ್ತ ಸರ್ಕಾರಿ ನೌಕರರು ಒಂದು ಲಕ್ಷ ಜನ ನಮಗೆ ಬೆಂಬಲ ನೀಡಿದ್ದಾರೆ. 2.60 ಲಕ್ಷ ಸರ್ಕಾರಿ ನೌಕರರು ಹಾಗೂ 5 ಲಕ್ಷ ನಿಗಮ ಮಂಡಳಿ ಹಾಗೂ ಅನುದಾನರಹಿತ ಶಾಲೆಗಳ ನೌಕರರು ಸೇರಿ ಹೋರಾಟ ನಡೆಸುತ್ತಿದ್ದೇವೆ. ನಮ್ಮ ಎಲ್ಲ ಕುಟುಂಬದ ಸದಸ್ಯರು ಈ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಮ್ಮ ಕುಟುಂಬದ ಸದಸ್ಯರು ಹಾಗೂ ಆತ್ಮೀಯರ ವೋಟನ್ನು ಈ ಅಭಿಯಾನಕ್ಕಾಗಿ ಮೀಸಲಿಟ್ಟಿದ್ದೇವೆ” ಎಂದು ಎಚ್ಚರಿಸಿದ್ದಾರೆ.
ಮಂಡ್ಯ ಜಿಲ್ಲಾ ಆರೋಗ್ಯ ಇಲಾಖೆ ನೌಕರರಾದ ಪ್ರೇಮಾ ಮಾತನಾಡಿ, “ಎನ್ಪಿಎಸ್ ಎಂಬುದು ಸರ್ಕಾರಿ ನೌಕರರ ಪಾಲಿಗೆ ಮರಣ ಶಾಸನವಾಗಿದೆ. 2006ರಿಂದ ಸರ್ಕಾರಿ ಸೇವೆಗೆ ಸೇರಿದವರಿಗೆ ಒಂದು ತರಹದ ಪಿಂಚಣಿ, ಅದಕ್ಕೂ ಮೊದಲು ಸೇವೆಗೆ ಸೇರಿದವರಿಗೆ ಬೇರೆ ಪಿಂಚಣಿ ನೀಡಲಾಗುತ್ತಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ಕೇಳುತ್ತಿದ್ದೇವೆ. ಒಪಿಎಸ್ ಇಲ್ಲದೇ ಇರುವ ಕಾರಣಕ್ಕೆ ನಿವೃತ್ತ ನೌಕರರು ಗೌರವಯುತ ಹಾಗೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ” ಎಂದು ವಿಷಾದಿಸಿದ್ದಾರೆ.
ಹಾಸನ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಇಲಾಖೆ ನಿವೃತ್ತ ನೌಕರ ಎಚ್.ಪಿ.ಲಕ್ಷ್ಮಯ್ಯ ಮಾತನಾಡಿ, “ಬಿಲ್ ಕಲೆಕ್ಟರ್ ಆಗಿ ಹದಿನೈದು ವರ್ಷ ಸೇವೆ ಸಲ್ಲಿಸಿದ ನಂತರ 2014ರಲ್ಲಿ ನನ್ನ ಸೇವೆ ಖಾಯಂ ಮಾಡಿದರು. ಎಂಟು ವರ್ಷಗಳ ಸೇವೆ ಸಲ್ಲಿಸಿ 2022ರಲ್ಲಿ ನಿವೃತ್ತನಾಗಿದ್ದೇನೆ. ಎನ್ಪಿಎಸ್ ನಿಯಮಗಳ ಆಧಾರದಲ್ಲಿ ನನಗೆ ₹1130 ಮಾತ್ರ ಪಿಂಚಣಿ ಸಿಗುತ್ತಿದೆ. ಜೀವನ ನಿರ್ವಹಣೆಗೆ ಅಷ್ಟು ಸಾಕಾ? ಸರ್ಕಾರದ ವೃದ್ಧಾಪ್ಯ ವೇತನವೇ ಅಷ್ಟು ಬರುತ್ತದೆ. ₹300 ತಿಂಗಳ ಸಂಬಳದಿಂದ ಕೆಲಸ ಮಾಡಿಸಿಕೊಂಡಿದ್ದಾರೆ. ನಿವೃತ್ತಿಯಾಗುವ ಸಮಯದಲ್ಲಿ ಇಷ್ಟು ಕಡಿಮೆ ಪಿಂಚಣಿ ಕೊಟ್ಟು ಸರ್ಕಾರ ಅನ್ಯಾಯ ಮಾಡುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಏನಿದು ‘ವೋಟ್ ಫಾರ್ ಒಪಿಎಸ್’ ಅಭಿಯಾನ?
ಕಳೆದ ಒಂದು ತಿಂಗಳಿನಿಂದ ಒಪಿಎಸ್ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ‘ಕರ್ನಾಟಕ ಸರ್ಕಾರಿ ಎನ್ಪಿಎಸ್ ನೌಕರರ ಸಂಘ’, ಇದೀಗ ‘ವೋಟ್ ಫಾರ್ ಒಪಿಎಸ್’ ಅಭಿಯಾನಕ್ಕೆ ಕರೆ ಕೊಟ್ಟಿದೆ. ಅಂದರೆ, ಸರ್ಕಾರ ಒಪಿಎಸ್ ಜಾರಿ ಮಾಡಿದರೂ, ಬಿಟ್ಟರೂ ನಾವು ಒಪಿಎಸ್ ಪರವಾಗೇ ಮತ ಚಲಾಯಿಸುತ್ತೇವೆ. ಈಗಿನ ಸರ್ಕಾರ ನಮ್ಮ ಬೇಡಿಕೆ ಈಡೇರಿಸಿದರೆ, ನಾವು ಹಾಗೂ ನಮ್ಮ ಕುಟುಂಬದ ಸದಸ್ಯರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತ ಚಲಾಯಿಸುತ್ತೇವೆ. ಇಲ್ಲದಿದ್ದರೆ ಬಿಜೆಪಿ ವಿರುದ್ಧವಾಗಿ ಮತ ಚಲಾಯಿಸುತ್ತೇವೆ. ಒಟ್ಟಾರೆ ನಮ್ಮ ಮತ ಒಪಿಎಸ್ ಪರವಾಗಿ ಇರುತ್ತದೆ” ಎಂದು ಈ ಅಭಿಯಾನ ಆರಂಭಿಸಿದ್ದಾರೆ.
nps hatao ops bachao