ದೇಶಕ್ಕಾಗಿ ನಿಮ್ಮ ಮನೆ ನಾಯಿ ಕೂಡ ಸತ್ತಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕ್ಷಮೆಯಾಚಿಸಬೇಕೆಂದು ಬಿಜೆಪಿ ಪಟ್ಟು ಹಿಡಿದಿದೆ. ಕ್ಷಮೆ ಕೇಳಲು ನಾವು ಬಿಜೆಪಿಯವರಲ್ಲ ಎಂದು ಖರ್ಗೆಯವರು ತಿರುಗೇಟು ನೀಡಿದ್ದು, ರಾಜ್ಯಸಭೆಯಲ್ಲಿ ವಾದ ವಿವಾದಗಳು ತಾರಕಕ್ಕೇರಿವೆ.
ರಾಹುಲ್ ಗಾಂಧಿಯವರ ಭಾರತ್ ಜೋಡೋ (ಐಕ್ಯತಾ) ಯಾತ್ರೆಯನ್ನು ಬಿಜೆಪಿಯು ಭಾರತ್ ತೋಡೋ (ವಿಭಜನೆ) ಯಾತ್ರೆ ಎಂದು ಟೀಕಿಸಿತ್ತು. ಇದನ್ನು ಖಂಡಿಸಿ ಮಲ್ಲಿಕಾರ್ಜುನ ಖರ್ಗೆಯವರು ರಾಜಸ್ಥಾನದ ಅಲ್ವರ್ನಲ್ಲಿ ಮಾತನಾಡುತ್ತಾ, “ಭಾರತದ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಪಕ್ಷವು ಹೋರಾಡಿ ಗಳಿಸಿದೆ. ಆನಂತರ ದೇಶಕ್ಕಾಗಿ ಪಕ್ಷದ ಮುಖಂಡರಾದ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಪ್ರಾಣತ್ಯಾಗ ಮಾಡಿದ್ದಾರೆ. ಆದರೆ ದೇಶಕ್ಕಾಗಿ ಬಿಜೆಪಿಯವರ ಮನೆಯ ಒಂದು ನಾಯಿ ಕೂಡ ಸತ್ತಿಲ್ಲ. ಆದರೂ ಅವರು ಮಹಾನ್ ದೇಶಭಕ್ತರೆಂದು ಪೋಸು ಕೊಡುತ್ತಾರೆ. ನಾವು ಏನಾದರೂ ಮಾತನಾಡಿದರೆ ನಮ್ಮನ್ನು ದೇಶದ್ರೋಹಿಗಳು ಎಂದು ಕರೆಯಲಾಗುತ್ತದೆ” ಎಂದು ಕಿಡಿಕಾರಿದ್ದರು.
ಭಾರತ – ಚೀನಾ ಗಡಿ ಸಂಘರ್ಷ ಸಮಸ್ಯೆ ಕುರಿತು ಪಾರ್ಲಿಮೆಂಟಿನಲ್ಲಿ ಮಾತನಾಡಲು ಅವಕಾಶ ಕೊಡದ ಸರ್ಕಾರದ ಕ್ರಮವನ್ನು ಖಂಡಿಸಿದ್ದ ಅವರು, “ಬಿಜೆಪಿ ಸರ್ಕಾರವು ತನ್ನನ್ನು ಸಿಂಹದಂತೆ ತೋರ್ಪಡಿಸಿಕೊಳ್ಳುತ್ತದೆ. ಆದರೆ ಅದು ಇಲಿ ರೀತಿ ವರ್ತಿಸುತ್ತದೆ” ಎಂದು ವ್ಯಂಗ್ಯವಾಡಿದ್ದರು.
ಖರ್ಗೆಯವರ ಹೇಳಿಕೆಯಿಂದ ಕುಪಿತಗೊಂಡ ಬಿಜೆಪಿಯು ಅವರು ಸಂಸತ್ತಿನಲ್ಲಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿತ್ತು. “ನಾವು ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಗಳನ್ನು ಖಂಡಿಸುತ್ತೇವೆ. ಅವರು ನಿಂದನಾ ಭಾಷೆಯಲ್ಲಿ ಸುಳ್ಳು ಹೇಳಿದ್ದಾರೆ. ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು” ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ರಾಜ್ಯಸಭೆಯಲ್ಲಿ ಒತ್ತಾಯಿಸಿದ್ದರು.
ಈ ಸಂದರ್ಭದಲ್ಲಿ ಉಪರಾಷ್ಟ್ರಪತಿಗಳಾದ ಜಗದೀಪ್ ಧಂಕರ್ರವರು ಖರ್ಗೆಯವರ ಹೇಳಿಕೆಗಳು ಪಾರ್ಲಿಮೆಂಟಿನ ಹೊರಗಿನಿಂದ ಬಂದಿವೆ. ಅದನ್ನು ಇಲ್ಲಿ ಚರ್ಚಿಸಲು ಸಾಧ್ಯವಿಲ್ಲ ಎಂದಿದ್ದರು.
ಕ್ಷಮೆ ಕೇಳಬೇಕು ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಖರ್ಗೆಯವರು, “ನಾನು ಮತ್ತೆ ಅದೇ ವಾಕ್ಯಗಳನ್ನು ಪುನರುಚ್ಚರಿಸಿದರೆ ಬಿಜೆಪಿಯವರಿಗೆ ತೊಂದರೆ ಅನಿಸಬಹುದು. ಏಕೆಂದರೆ ಅವರು ಬ್ರಿಟೀಷರ ಕ್ಷಮೆಯಾಚಿಸಿದ್ದರು. ಕ್ಷಮೆ ಯಾಚಿಸಲು ನಾವು ಬಿಜೆಪಿಯವರಲ್ಲ. ನಮ್ಮ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಬಿಜೆಪಿಯವರಲ್ಲಿ ಯಾರು ಪ್ರಾಣಕೊಟ್ಟಿದ್ದಾರೆ? ಒಂದು ಹೆಸರಾದರೂ ಹೇಳಿ” ಎಂದು ಮರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಡಿ.11ರಂದು ಒಳಮೀಸಲಾತಿ ಹೋರಾಟ ಸಂಘಟಿಸಿದ 10 ದಲಿತ ಮುಖಂಡರ ವಿರುದ್ಧ ಎಫ್ಐಆರ್
ಇದು ಕಾಂಗ್ರೆಸ್ ನ ತಾಕತ್ತು… ಕಾಂಗ್ರೆಸ್ ಅಂದ್ರೆ ಖರ್ಗೆ … ಖರ್ಗೆ ಅಂದ್ರೆ ತಾಂಗ್ರೆಸ್…. ಭಲೇ… ಖರ್ಗೆ … ಭಲೇ… ಕಾಂಗ್ರೆಸ್.