ಸರ್ಕಾರಿ ಬ್ಯಾಂಕ್ ಪಿಂಚಣಿದಾರಿಗೆ ಮತ್ತು ನಿವೃತ್ತಿ ವೇತನದಾರರಿಗೆ ಪಿಂಚಣಿ ಪರಿಷ್ಕರಣೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತಿ ವೇತನದಾರರ ಸಂಘಟನೆಗಳ ಸಮನ್ವಯ ಶನಿವಾರ ಉಪವಾಸ ಸತ್ಯಾಗ್ರಹ ನಡೆಸಿತು.
ಈ ವೇಳೆ ಮಾತನಾಡಿದ ಸಮನ್ವಯ ಅಧ್ಯಕ್ಷ ಕೆ.ವಿ ಆಚಾರ್ಯ, ಬ್ಯಾಂಕೇತರ ಸರ್ಕಾರಿ ನಿವೃತ್ತರಿಗೆ ಪಿಂಚಣಿ ಪರಿಷ್ಕರಣೆಯನ್ನು ಕಾಲಕಾಲಕ್ಕೆ ಮಾಡಲಾಗುತ್ತಿದೆ. ಆದರೆ, ಬ್ಯಾಂಕ್ ನಿವೃತ್ತರಿಗೆ ಸತತ 30 ವರ್ಷಗಳಿಂದ ಪರಿಷ್ಕರಣೆ ಮಾಡಿಲ್ಲ. ಕೇಂದ್ರ ಸರ್ಕಾರ ನಮ್ಮ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ 80 ವರ್ಷ ದಾಟಿರುವ ಪಿಂಚಣಿದಾರರಿಗೆ ಬರುವ ಅಲ್ಪಮೊತ್ತದ ಪಿಂಚಣಿಯಿಂದ ಜೀವನ ನಿರ್ವಹಣೆ ಮಾಡಲು ಕಷ್ಟವಾಗಿದೆ. ಇಲ್ಲಿ ಉಪಾವಾಸ ಮಾಡುತ್ತಿರುವ ಅನೇಕರು ಡೈಯಾಬಿಟೀಸ್ ಮುಂತಾದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಇಳಿ ವಯಸ್ಸಲ್ಲಿ ನಿಸ್ಸಹಾಯಕರಾಗಿ ನಾವು ಮಾಡುತ್ತಿರುವ ಪ್ರತಿಭಟನೆ ದೇಶದ ಜನಕ್ಕೆ ಮತ್ತು ಅಧಿಕಾರಸ್ಥರಿಗೆ ಕೇಳಬೇಕು ಎಂದು ಅವರು ಭಾವುಕರಾದರು.
ವೇತನದಲ್ಲಿನ ವಿಶೇಷ ಭತ್ಯೆಯ ಜೊತೆಗೆ ಪಿಂಚಣಿಯನ್ನು ಲೆಕ್ಕ ಹಾಕಲು ಪರಿಗಣಿಸುತ್ತಿಲ್ಲ. ಈ ಕಾರಣದಿಂದ, ಪಿಂಚಣಿಯನ್ನು ಸಂಬಳದ ಶೇ.50 ರಿಂದ 30ಕ್ಕೆ ಕಡಿತಗೊಳಿಸಲಾಗಿದೆ. 2012ರಲ್ಲಿ ಹಣಕಾಸು ಸಚಿವಾಲಯದ ಸಲಹೆಯಂತೆ ನೀಡಲಾಗಿರುವ ವೈದ್ಯಕೀಯ ವಿಮಾ ಯೋಜನೆ ಮಾರ್ಗದರ್ಶನವನ್ನು ಕಾರ್ಯಗತಗೊಳಿಸಿಲ್ಲ. ಕೇಂದ್ರದ ಹಲವು ಸಚಿವರನ್ನು ಭೇಟಿ ಮಾಡಿದ್ದರು, ಖಾಲಿ ಭರವಸೆ ದೊರೆತಿವೆಯೇ ವಿನಃ ಬೇಡಿಕೆ ಈಡೇರಲಿಲ್ಲ ಎಂದು ಸಮನ್ವಯದ ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು.
2024-25ನೆ ಸಾಲಿನ ಎಕ್ಸ್ ಗ್ರೇಶಿಯಾ ಪುನರ್ ಪರಿಶೀಲನೆಯನ್ನು ಇದುವರೆಗೂ ಮಾಡಿಲ್ಲ. ವೇತನ ಒಪ್ಪಂದದ ಪ್ರಕಾರ ಖಾಸಗಿ ಬ್ಯಾಂಕ್ ಪಿಂಚಣಿದಾರರಿಗೆ ಕೊಡಬೇಕಾದ ಎಕ್ಸ್ ಗ್ರೇಶಿಯಾವನ್ನು ಖಾಸಗಿ ಬ್ಯಾಂಕ್ ಆಡಳಿತಗಳು ಕೊಡುತ್ತಿಲ್ಲ. ಈ ತಾರತಮ್ಯವನ್ನು ಕೇಂದ್ರ ಸರ್ಕಾರ ನಿವಾರಿಸಬೇಕು ಎಂದು ಕೃಷ್ಣಮೂರ್ತಿ ಆಗ್ರಹಿಸಿದರು.
ಒಂದು ಸಾವಿರಕ್ಕಿಂತ ಕಡಿಮೆ ಬ್ಯಾಂಕ್ ನಿವೃತ್ತರು ಈ ಹಿಂದೆ ಪಿಂಚಣಿ ಆಯ್ಕೆ ಮಾಡದ ಕಾರಣ ಪಿಂಚಣಿಯಿಂದ ವಂಚಿತರಾಗಿದ್ದಾರೆ. ಅಂತಹ ಪ್ರಕರಣಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ ಪರಿಗಣಿಸಲಾಗಿದೆ. ಆದರೆ ಬ್ಯಾಂಕ್ ನಿವೃತ್ತರಿಗೆ ಇದನ್ನು ವಿನಾಕಾರಣ ನಿರಾಕರಿಸಲಾಗುತ್ತಿದೆ. ಎಸ್ಬಿಐ ಬ್ಯಾಂಕ್ ಪಿಂಚಣಿದಾರರಿಗೆ ಕೊಡಬೇಕಾದ ಮೂಲ ವೇತನದ ಶೇ.50 ರಷ್ಟು ಪಿಂಚಣಿಯನ್ನು ಪೂರ್ವಾನ್ವಯಗೊಳಿಸಿ ನಿಗದಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಹೊಸ ಪಿಂಚಣಿ ಯೋಜನೆಯ ಏರಿಳಿತಗಳು ಮತ್ತು ಅನಿಶ್ಚಿತತೆಗಳಿಂದ ರಕ್ಷಿಸುವ ಸಲುವಾಗಿ ಸೇವೆಯಲ್ಲಿರುವ ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ಹೊಸ ಪಿಂಚಣಿ ಯೋಜನೆಯಿಂದ ಹಳೆಯ ಪಿಂಚಣಿ ಯೋಜನೆಗೆ ಬದಲಾಯಿಸಬೇಕು. ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಲಿಲ್ಲ ಎಂದರೆ ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೃಷ್ಣಮೂರ್ತಿ ಹೇಳಿದರು.
ಧರಣಿಯಲ್ಲಿ ಸಮನ್ವಯದ ಶಿವಪ್ರಕಾಶ್, ಎ.ಎನ್ ಕೃಷ್ಣಮೂರ್ತಿ, ಎಂ.ಆರ್.ಗೋಪಿನಾಥ್ ಮತ್ತಿತರರು ಉಪಸ್ಥಿತರಿದ್ದರು.
ಕೋಮು ದ್ವೇಷದಿಂದ ಶಾಲಾ ಟ್ಯಾಂಕ್ಗೆ ವಿಷ ಬೆರೆಸಿದ ಪ್ರಕರಣ: ದಿಗ್ಭ್ರಮೆ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ


