ಬಿಹಾರ ವಿಧಾನಸಭಾ ಚುನಾವಣೆಗೆ ರೆಡಿಯಾಗಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಹೊಸ ಬದಲಾವಣೆಗಳು ಆರಂಭವಾಗಿವೆ. ಇಂದು(ಅ.14) ಲೋಕತಾಂತ್ರಿಕ ಜನತಾದಳದ ಮುಖ್ಯಸ್ಥ ಶರದ್ ಯಾದವ್ ಅವರ ಪುತ್ರಿ ಸುಭಾಷಿಣಿ ಯಾದವ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಸುಭಾಷಿಣಿ ಜೊತೆ ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಮುಖಂಡ ಮತ್ತು ಮಾಜಿ ಸಂಸದ ಕಾಳಿ ಪಾಂಡೆ ಕೂಡ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಬಿಹಾರ ಕಾಂಗ್ರೆಸ್ ಮುಖ್ಯಸ್ಥ ಮದನ್ ಮೋಹನ್ ಝಾ ಮತ್ತು ಬಿಹಾರದ ಎಐಸಿಸಿ ಕಾರ್ಯದರ್ಶಿ ದೇವೇಂದ್ರ ಯಾದವ್ ಇಬ್ಬರನ್ನು ಪಕ್ಷಕ್ಕೆ ಸ್ವಾಗತಿಸಿದರು.
ಕಾಂಗ್ರೆಸ್ಗೆ ಸೇರ್ಪಡೆಯಾದ ಇಬ್ಬರೂ ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಮತ್ತು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೋರಿದ್ದಾರೆ ಎನ್ನಲಾಗಿದೆ.
ಪಕ್ಷ ಸೇರ್ಪಡೆ ನಂತರ ಮಾತನಾಡಿದ ಸುಭಾಷಿಣಿ ಯಾದವ್ ಅವರು “ಬಿಹಾರದಲ್ಲಿ ’ಮಹಾಘಟಬಂಧನ್’ ಮುನ್ನಡೆಸುವ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತಿದ್ದೇನೆ, ಏಕೆಂದರೆ ನನ್ನ ತಂದೆ ಶರದ್ ಯಾದವ್ ಯಾವಾಗಲೂ ಇದನ್ನು ಬೆಂಬಲಿಸುತ್ತಾರೆ” ಎಂದಿದ್ದಾರೆ.
ಇದನ್ನೂ ಓದಿ: ತ್ರಿಪುರ BJP ಸರ್ಕಾರದಲ್ಲಿ ಬಿರುಕು; ದೆಹಲಿಗೆ ದೌಡಾಯಿಸಿದ ಬಂಡಾಯ ಶಾಸಕರು
ಸಮಾಜ ಸೇವಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸುಭಾಷಿಣಿ ಯಾದವ್ ’’ನನಗೆ ಈ ಅವಕಾಶ ನೀಡಿದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಶರದ್ ಯಾದವ್ ಅವರು ಅನಾರೋಗ್ಯ ಹಿನ್ನೆಲೆ ಬಿಹಾರ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿಲ್ಲ. ಅವರು ಯಾವಾಗಲೂ ’ಮಹಾಘಟಬಂಧನ್ಗೆ’ ಬೆಂಬಲ ನೀಡಿದ್ದಾರೆ. ಈಗ ಇದನ್ನು ಮುನ್ನಡೆಸುವ ಜವಾಬ್ದಾರಿ ನನ್ನದಾಗಿದೆ” ಎಂದರು.
‘1984ರಲ್ಲಿ ಲೋಕಸಭಾ ಸದಸ್ಯರಾಗಿದ್ದ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಬೆಂಬಲ ನೀಡಿದ್ದೆ. ಈಗ ಕಾಂಗ್ರೆಸ್ ಸೇರಿರುವುದು ಮತ್ತೆ ನನ್ನ ಹಳೆಯ ಮನೆಗೆ ವಾಪಸ್ ಬಂದಂತಾಗಿದೆ’ ಎಂದು ಮಾಜಿ ಸಂಸದ ಕಾಳಿ ಪಾಂಡೆ ಹೇಳಿದ್ದಾರೆ.
1980ರಲ್ಲಿ ಕಾಳಿ ಪಾಂಡೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಜಯಗಳಿಸಿದರು 1984ರ ಸಂಸತ್ ಚುನಾವಣೆಯಲ್ಲಿ ಗೋಪಾಲ್ಗಂಜ್ನಿಂದ ಸಂಸದರಾಗಿ ಆಯ್ಕೆಯಾಗಿದ್ದರು.
ಬಹುಭಾಷಾ ನಟಿ, ರಾಜಕಾರಣಿ ಖುಷ್ಬೂ ಸುಂದರ್ ಕಾಂಗ್ರೆಸ್ ತೊರೆದು ಅ.12 ರಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದ ನಟಿ ’ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಬಯಸುವ ನನ್ನಂತಹ ಜನರನ್ನು ತುಳಿಯಲಾಗುತ್ತಿದೆ ಎಂದಿದ್ದರು. ಜೊತೆಗೆ ’ಪಕ್ಷದಲ್ಲಿ ವಾಸ್ತವ ಪರಿಸ್ಥಿತಿಯ ಅರಿವಿಲ್ಲದವರು ಅಥವಾ ಸಾರ್ವಜನಿಕವಾಗಿ ಗುರುತಿಸಿಕೊಳ್ಳದ ವ್ಯಕ್ತಿಗಳು ನಿಯಂತ್ರಣ ಹೇರುತ್ತಿದ್ದಾರೆ’ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದರು.