2007 ರಲ್ಲಿ ಗುಜರಾತ್ನ ಜಾಮ್ನಗರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ವಿಧ್ವಂಸಕ ಕೃತ್ಯ ಮತ್ತು ಗಲಭೆ ಪ್ರಕರಣದಲ್ಲಿ ಬಿಜೆಪಿ ಶಾಸಕ ರಾಘವ್ಜಿ ಪಟೇಲ್ ಮತ್ತು ಇತರ ನಾಲ್ವರಿಗೆ ಗುಜರಾತ್ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಜಾಮ್ನಗರದ ಧ್ರೋಲ್ನಲ್ಲಿರುವ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮಂಗಳವಾರ ಶಿಕ್ಷೆಯನ್ನು ಘೋಷಿಸಿದರು. ನಂತರ ಐವರಿಗೂ ನ್ಯಾಯಾಲಯ ಜಾಮೀನು ನೀಡಿತು ಎಂದು ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ರಾಮ್ಸಿನ್ಹ ಭೂರಿಯಾ ಹೇಳಿದ್ದಾರೆ.
ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮತ್ತು ಸರ್ಕಾರಿ ನೌಕರರ ಮೇಲೆ ಹಲ್ಲೆ ಪ್ರಕರಣದಲ್ಲಿ ಜಾಮ್ನಗರ (ಗ್ರಾಮೀಣ) ಶಾಸಕ ರಾಘವ್ಜಿ ಪಟೇಲ್ ಮತ್ತು ಇತರ ನಾಲ್ವರನ್ನು ನ್ಯಾಯಾಲಯ ಶಿಕ್ಷೆಗೊಳಪಡಿಸಿದೆ. ಜೈಲು ಶಿಕ್ಷೆಯ ಹೊರತಾಗಿ, ನ್ಯಾಯಾಲಯವು ಪ್ರತಿಯೊಬ್ಬರಿಗೂ 10,000 ರೂಪಾಯಿ ದಂಡ ವಿಧಿಸಿತು.
2007ರ ಆಗಸ್ಟ್ನಲ್ಲಿ ಈ ಘಟನೆ ನಡೆದಾಗ ರಾಘವ್ಜಿ ಪಟೇಲ್ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದರು. ಬಿಜೆಪಿಗೆ ಸೇರ್ಪಡೆಯಾದ ನಂತರ ಪಟೇಲ್ ವಿರುದ್ಧದ ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕೆಂಬ ಸರ್ಕಾರದ ಮನವಿಯನ್ನು ನ್ಯಾಯಾಲಯ ಈ ಹಿಂದೆ ತಿರಸ್ಕರಿಸಿದೆ ಎಂದು ವಕೀಲ ಭೂರಿಯಾ ತಿಳಿಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರ ಮುಂದುವರಿಯಲು ಪ್ರಧಾನಿ ಮೋದಿಯಂತಹ ವ್ಯಕ್ತಿ ಬೇಕು: ಬಿಜೆಪಿ ಸೇರ್ಪಡೆ ಬಳಿಕ ನಟಿ ಖುಷ್ಬೂ
ಆಗಸ್ಟ್ 10, 2007 ರಂದು, ಶಾಸಕ ಮತ್ತು ಅವರ 8 ಮಂದಿ ಬೆಂಬಲಿಗರ ವಿರುದ್ಧ ಧ್ರೋಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು. ಸರ್ಕಾರಿ ಉದ್ಯೋಗಿ ತನ್ನ ಕರ್ತವ್ಯ ನಿರ್ವಹಿಸದಂತೆ ತಡೆ ಒಡ್ಡುವುದು, ಕಾನೂನುಬಾಹಿರ ಸಭೆ, ಗಲಭೆ, ಹಲ್ಲೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಸೇರಿದಂತೆ ಐಪಿಸಿ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾಗಿದ್ದ 8 ಮಂದಿಯಲ್ಲಿ ನ್ಯಾಯಾಲಯವು ರಾಘವ್ಜಿ ಪಟೇಲ್, ನರೇಂದ್ರಸಿಂಹ ಜಡೇಜಾ, ಜಿತು ಶ್ರೀಮಾಲಿ, ಜಯೇಶ್ ಭಟ್ ಮತ್ತು ಕರಣ್ಸಿನ್ಹ ಜಡೇಜಾ ಅವರನ್ನು ಶಿಕ್ಷೆಗೊಳಗಾಗಿದ್ದರೆ, ಸಬ್ಬೀರ್ ಚೌಡಾ, ಪಚಾವಾರು ಮತ್ತು ಲಗ್ಧೀರ್ಸಿನ್ ಜಡೇಜಾ ಎಂಬ ಮೂವರನ್ನು ಸಾಕ್ಷ್ಯಾಧಾರ ಕೊರತೆ ಎಂದು ಖುಲಾಸೆಗೊಳಿಸಲಾಗಿದೆ ಎಂದು ಭೂರಿಯಾ ತಿಳಿಸಿದ್ದಾರೆ.
ರಾಘವ್ ಜಿ ಪಟೇಲ್ 2017 ರ ಡಿಸೆಂಬರ್ನಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಜಮ್ ನಗರ (ಗ್ರಾಮೀಣ) ಕ್ಷೇತ್ರದಿಂದ ಜಯಗಳಿಸಿ, ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜಪಿ ಸೇರಿ, ಅಲ್ಲಿಂದಲೇ ಬಿಜೆಪಿ ಅಭ್ಯರ್ಥಿಯಾಗಿ 2019 ರ ವಿಧಾನಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು.