ಉತ್ತರಪ್ರದೇಶದ ಸುಲ್ತಾನ್ಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರನ್ನು ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಶನಿವಾರ ಥಳಿಸಿ ಹತ್ಯೆ ಮಾಡಲಾಗಿದೆ.
ಶಾಸ್ತ್ರಿನಗರದ ನಿವಾಸಿ ಘನಶ್ಯಾಮ್ ತ್ರಿಪಾಠಿ (53) ಜೈಸಿಂಗ್ಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶನಿವಾರ ವೈಯಕ್ತಿಕ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದರು. ಸಂಜೆ ಆಟೋ-ರಿಕ್ಷಾ ಚಾಲಕನೋರ್ವ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಅವರ ಮನೆಯ ಹೊರಗೆ ಇಳಿಸಿ ಪರಾರಿಯಾಗಿದ್ದಾನೆ.
ವೈದ್ಯರ ಹತ್ಯೆಯ ಆರೋಪಿ ಅಜಯ್ ನಾರಾಯಣ್ ಸಿಂಗ್, ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಗಿರೀಶ್ ನಾರಾಯಣ್ ಸಿಂಗ್ ಅವರ ಸೋದರಳಿಯ ಎಂದು ತಿಳಿದು ಬಂದಿದೆ.
ನಾರಾಯಣಪುರದಲ್ಲಿ ವಾಸಿಸುವ ಅಜಯ್ ನಾರಾಯಣ್ ಸಿಂಗ್ ನನ್ನ ಪತಿಗೆ ದೈಹಿಕವಾಗಿ ಹಲ್ಲೆ ನಡೆಸಿದ್ದು, ಇದರಿಂದಾಗಿ ಮೃತಪಟ್ಟಿದ್ದಾರೆ ಎಂದು ಘನಶ್ಯಾಮ್ ಅವರ ಪತ್ನಿ ಹೇಳಿದ್ದಾರೆ.
ನನ್ನ ಪತಿ ಸಂಜೆ ಮನೆಗೆ ಬಂದು ನನ್ನಿಂದ 3,000 ರೂ. ನಕ್ಷೆ ತಯಾರಿಸುವ ವ್ಯಕ್ತಿಗೆ ಎಂದು ಹೇಳಿ ತೆಗೆದುಕೊಂಡು ಹೋಗಿದ್ದಾರೆ. ನಂತರ ಗಾಯಗೊಂಡ ಸ್ಥಿತಿಯಲ್ಲಿ ಅವರನ್ನು ರಿಕ್ಷಾದಲ್ಲಿ ತಂದು ಇಳಿಸಲಾಯಿತು ಎಂದು ತ್ರಿಪಾಠಿಯವರ ಪತ್ನಿ ಹೇಳಿದ್ದಾರೆ.
ತ್ರಿಪಾಠಿ ಅವರು ಸರಸ್ವತಿ ಶಿಶು ಮಂದಿರದ ಹಿಂದೆ ಭೂಮಿ ಖರೀದಿಸಿದ್ದರು ಮತ್ತು ಅದರ ಬಗ್ಗೆ ಪ್ರತಿದಿನ ಗಲಾಟೆ ನಡೆಯುತ್ತಿತ್ತು ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ‘ದಿ ವೈರ್’ ಸಂಪಾದಕರಿಂದ ವಶಪಡಿಸಿಕೊಂಡ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಹಿಂತಿರುಗಿಸಲು ಕೋರ್ಟ್ ಆದೇಶ