ಎನ್ಡಿಎ ಜೊತೆ ಜೆಡಿಎಸ್ ಮೈತ್ರಿ ಬೆನ್ನಲ್ಲೇ ಜೆಡಿಎಸ್ ನ ಕೆಲ ಶಾಸಕರು ತಮ್ಮ ಹೈಕಮಾಂಡ್ ನಿಲುವಿನ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ರಾಯಚೂರು ಜಿಲ್ಲೆ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.
ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಭಾರಿಯೂ ಬಿಜೆಪಿ ಮತ್ತು ಜೆಡಿಎಸ್ ನಡುವೆ ಪ್ರಬಲ ಪೈಪೋಟಿಗಳು ನಡೆಯುತ್ತಿದೆ. ದೇವದುರ್ಗ ವಿಧಾನಸಭಾ ಕ್ಷೇತ್ರದ ಹಾಲಿ ಜೆಡಿಎಸ್ನ ಶಾಸಕಿ ಕರೆಮ್ಮ.ಜಿ ನಾಯಕ ಅವರು ಕೂಡ ಬಿಜೆಪಿ ಜೊತೆಗೆ ತಾವು ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಶಾಸಕಿ ಕರೆಮ್ಮ. ಜಿ.ನಾಯಕ ಅವರು ಈ ಕುರಿತು ಮಾತನಾಡಿ, ಕ್ಷೇತ್ರದ ಜನರು ನನಗೆ ಜಾತ್ಯಾತೀತವಾಗಿ ಮತ ಕೊಟ್ಟು ಗೆಲ್ಲಿಸಿದ್ದಾರೆ. ಮೈತ್ರಿ ಬಗ್ಗೆ ದಿಢೀರ್ ಆಗಿ ನಿರ್ಧಾರ ಸರಿಯಾಗುವುದಿಲ್ಲ. ಈ ಬಗ್ಗೆ ಜನರ ಅಭಿಪ್ರಾಯವನ್ನು ನಾನು ನಮ್ಮ ವರಿಷ್ಠರಿಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕೆ ಇಳಿಸಬೇಕೆಂಬುವುದು ನಮ್ಮ ಆಗ್ರಹವಾಗಿದೆ. ನಮಗೆ ಬಿಜೆಪಿ ಜೊತೆಗೆ ಹೋಗಿ ಕೆಲಸ ಮಾಡಲು ಸಾಧ್ಯವಿಲ್ಲ. ದೇವದುರ್ಗದಲ್ಲಿ ಮೈತ್ರಿಗೆ ಕ್ಷೇತ್ರದ ಜನರು ಒಪ್ಪಲ್ಲ. ದೇವದುರ್ಗದಲ್ಲಿ ಬಿಜೆಪಿ ಕಾರ್ಯಕರ್ತರು ನಮಗೆ ತೊಂದರೆ ಕೊಟ್ಟಿದ್ದಾರೆ. ಬಿಜೆಪಿ ಕಾರ್ಯಕರ್ತರು ನನ್ನ ಮೇಲೆ ಅಟ್ಯಾಕ್ ಮಾಡಿದ್ದಾರೆ. ಜೆಡಿಎಸ್ ಕಾರ್ಯಕರ್ತರಿಗೆ ಚಪ್ಪಲಿಯಿಂದ ಹೊಡೆಯುವುದಾಗಿ ಬಿಜೆಪಿಯವರು ಹೇಳಿಕೆಗಳು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ದೇವದುರ್ಗದಲ್ಲಿ ಪಂಚರತ್ನ ಯಾತ್ರೆಯ ವಾಹನದ ಮೇಲೆ ಬಿಜೆಪಿಯವರು ಕಲ್ಲು ತೂರಾಟ ಮಾಡಿದ್ದಾರೆ. ಪಕ್ಷದ ಬ್ಯಾನರ್ ಹರಿದು ಹಾಕಿದ್ದಾರೆ. ನನ್ನ ಪಕ್ಷ ನನಗೆ ಮುಖ್ಯ, ನಮ್ಮ ವರಿಷ್ಠರ ಬಗ್ಗೆ ನಾನು ಮಾತನಾಡಲ್ಲ. ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ಜೊತೆಗೆ ಯಾವುದೇ ಹೊಂದಾಣಿಕೆ ಮಾಡಲ್ಲ ಎಂದು ಶಾಸಕಿ ಶಾಸಕಿ ಕರೆಮ್ಮ.ಜಿ ನಾಯಕ ಅವರು ಖಡಕ್ ಆಗಿ ಹೇಳಿದ್ದಾರೆ.
ಕ್ಷೇತ್ರದ ಜನರು ಮನಸ್ಸಿಗೆ ಧಕ್ಕೆ ಆಗದಂತೆ ನಾನು ನಡೆದುಕೊಳ್ಳುತ್ತೇನೆ. ಎಲ್ಲಿ ಬೇಕಾದರೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಆಗಲಿ ನಮ್ಮ ದೇವದುರ್ಗದಲ್ಲಿ ಮಾತ್ರ ಮೈತ್ರಿ ಇರುವುದಿಲ್ಲ ಎಂದು ಕರೆಮ್ಮ.ಜಿ ನಾಯಕ ಅವರು ಹೇಳಿದ್ದಾರೆ.
ಬಿಜೆಪಿಯ ವ್ಯಕ್ತಿ ಕುಮಾರಣ್ಣನಿಗೆ ಕೆಟ್ಟದಾಗಿ ಬೈದಿದ್ದಾರೆ ಅವರ ಜೊತೆ ನಾನು ಮೈತ್ರಿ ಮಾಡಿಕೊಳ್ಳಬೇಕಾ ಅದು ಸಾಧ್ಯನೇ ಇಲ್ಲ. ನನಗೆ ಬೈದರೇ ನಾನು ಸಹಿಸಿಕೊಳ್ಳುವೆ. ದೇವೇಗೌಡರ ಕುಟುಂಬಕ್ಕೆ ನಿಂದಿಸಿದ ವ್ಯಕ್ತಿಯ ಪಕ್ಷದೊಂದಿಗೆ ನಾನು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: NDA ಜೊತೆ JDS ಮೈತ್ರಿ: ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಶೈಫುಲ್ಲಾ ರಾಜೀನಾಮೆ