ಮುಸ್ಲಿಮರ ಮತದಾನದ ಹಕ್ಕನ್ನು ಹಿಂಪಡೆಯುವಂತೆ ಬಿಹಾರದ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಅವರು ಗುರುವಾರ ಒತ್ತಾಯಿಸಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರ ಹಕ್ಕುಗಳನ್ನು ನೀಡಬೇಕು ಎಂದು ಎಐಎಂಐಎಂ ನಾಯಕ ಅಖ್ತರುಲ್ ಇಮಾಮ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಈ ಮಾತನ್ನು ಹೇಳಿದ್ದಾರೆ. 1947ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಮುಸ್ಲಿಂ ಸಮುದಾಯಕ್ಕೆ ಪಾಕಿಸ್ತಾನದ ರೂಪದಲ್ಲಿ ತುಂಡು ಭೂಮಿ ನೀಡಲಾಗಿತ್ತು. ಅವರು ಅಲ್ಲಿಗೆ ಹೋಗಬೇಕಿತ್ತು. ಅವರು ಈ ದೇಶದಲ್ಲಿ ನಮಗೆ ಬೇಡ ಎಂದು ಠಾಕೂರ್ ಹೇಳಿದ್ದಾರೆ.
“ಮುಸ್ಲಿಮರು ಜನಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ ಮತ್ತು ಭಾರತವನ್ನು ಮುಸ್ಲಿಂ ದೇಶವನ್ನಾಗಿ ಮಾಡಲು ಬಯಸುತ್ತಾರೆ. ಮುಸ್ಲಿಂ ನಾಯಕರು ಪ್ರತಿ ದೇಶವನ್ನು ಇಸ್ಲಾಮಿಕ್ ರಾಜ್ಯವನ್ನಾಗಿ ಮಾಡುವ ಕಾರ್ಯಸೂಚಿಯನ್ನು ಹೊಂದಿದ್ದಾರೆ. ಹಾಗೆ ಆಗಲು ನಾವು ಬಿಡಲಾರೆವು. ಆದ್ದರಿಂದ ನಾವು ಅವರಿಂದ ಮತದಾನದ ಹಕ್ಕುಗಳನ್ನು ಹಿಂಪಡೆದು ಅವರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಬೇಕೆಂದು ನಾವು ಸರ್ಕಾರವನ್ನು ಒತ್ತಾಯಿಸಿದ್ದೇವೆ” ಎಂದು ಠಾಕೂರ್ ಹೇಳಿದ್ದಾರೆ.
ಇದನ್ನೂ ಓದಿ: ಹಿಂದೂ, ಮುಸ್ಲಿಂ ಯುವ ಮಿತ್ರರಿಗೆ ಶಿಕ್ಷಣ ತಜ್ಞ ಎಂ.ಜಿ.ಹೆಗಡೆ ಪತ್ರ
ದೇಶದಲ್ಲಿ ಅವರನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸಲಾಗುತ್ತದೆ ಎಂದು ಠಾಕೂರ್ ಹೇಳಿದ್ದಾರೆ. “ಮುಸ್ಲಿಮ್ ಸಮುದಾಯಕ್ಕೆ ಅಲ್ಪಸಂಖ್ಯಾತ ಎಂಬ ಪದವು ಸಂವಿಧಾನದ ಅಪಹಾಸ್ಯ ಎಂದು ನಾನು ಹೇಳುತ್ತೇನೆ. ಅವರು ಅಲ್ಪಸಂಖ್ಯಾತರಲ್ಲ. ಅವರ ಜನಸಂಖ್ಯೆಯು ನಿರಂತರವಾಗಿ ಹೆಚ್ಚುತ್ತಿದೆ” ಎಂದು ಅವರು ಹೇಳಿದ್ದಾರೆ.
ಈ ಹಿಂದೆ, ಅಖ್ತರುಲ್ ಇಮಾಮ್ ಅವರು ಮತ್ತು ಎಐಎಂಐಎಂನ ಇತರ ಸದಸ್ಯರು ವಂದೇ ಮಾತರಂ ಅನ್ನು ಯಾವುದೇ ಸಾರ್ವಜನಿಕ ವೇದಿಕೆಗಳಲ್ಲಿ ವಿಶೇಷವಾಗಿ ಬಿಹಾರ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಹಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು.
ಸಂಪ್ರದಾಯದ ಪ್ರಕಾರ, ಬಿಹಾರ ವಿಧಾನಸಭಾ ಅಧಿವೇಶನಗಳು ರಾಷ್ಟ್ರಗೀತೆ ಜನ ಗಣ ಮನ ಮತ್ತು ವಂದೇ ಮಾತರಂನೊಂದಿಗೆ ಪ್ರಾರಂಭವಾಗುತ್ತವೆ ಅಥವಾ ಕೊನೆಗೊಳ್ಳುತ್ತವೆ.
ವಂದೇ ಮಾತರಂ ಹಾಡುವುದಕ್ಕೆ ನಮ್ಮ ಆಕ್ಷೇಪವಿದೆ ಎಂದು ಅಖ್ತರುಲ್ ಇಮಾಮ್ ಹೇಳಿದ್ದರು.
ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣದ ಸಾಂವಿಧಾನಿಕ ಹಕ್ಕು ಮತ್ತು ಕರ್ನಾಟಕ ಸರ್ಕಾರದ ವೈಫಲ್ಯ
“ರಾಷ್ಟ್ರಗೀತೆಯನ್ನು ಹಾಡಲು ನನಗೆ ಯಾವುದೇ ಅಭ್ಯಂತರವಿಲ್ಲ, ಆದರೆ ವಂದೇ ಮಾತರಂ ಹೇಳಲು ಅಥವಾ ಹಾಡಲು ನನ್ನ ವಿರೋಧವಿದೆ. ವಂದೇ ಮಾತರಂ ಬದಲಿಗೆ, ನಾನು ಸಂತೋಷದಿಂದ ‘ಮದರ್-ಎ-ವತನ್’ ಎಂದು ಹೇಳುತ್ತೇನೆ” ಎಂದು ಇಮಾಮ್ ಹೇಳಿದ್ದಾರೆ.
“ವಂದೇ ಮಾತರಂ ಭೂಮಿ ಮತ್ತು ಇಸ್ಲಾಂ ಅನುಮತಿಸದ ವಸ್ತುಗಳನ್ನು ಪೂಜಿಸುವಂತೆ ಹೇಳುತ್ತದೆ. ಆದ್ದರಿಂದ, ಅದನ್ನು ನಾವು ಯಾವುದೇ ವೇದಿಕೆಯಲ್ಲಿ ಹಾಡಲು ನಿರಾಕರಿಸುತ್ತೇವೆ. ಬಿಹಾರದಲ್ಲಿ ಎನ್ಡಿಎ ಸರ್ಕಾರ ಬಹುಮತ ಹೊಂದಿದೆ. ಅವರು ವಿಧಾನ ಸಭಾ ಕಲಾಪದಿಂದ ವಂದೇ ಮಾತರಂ ಗೀತೆಯನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಭಾರತದ ಪ್ರಜಾಪ್ರಭುತ್ವವನ್ನು ಪ್ರದರ್ಶಿಸಲು ಅವರು ಪ್ರತಿಯೊಂದು ಜಾತಿ ಮತ್ತು ಧರ್ಮವನ್ನು ಗೌರವಿಸಬೇಕು” ಎಂದು ಇಮಾಮ್ ಹೇಳಿದ್ದಾರೆ.
“ವಿಧಾನಸಭಾ ಸ್ಪೀಕರ್ ವಿಜಯ್ ಸಿನ್ಹಾ ಅವರು ಉಭಯ ಸದನಗಳಲ್ಲಿ ಪ್ರತಿಯೊಬ್ಬ ಸದಸ್ಯರು ರಾಷ್ಟ್ರಗೀತೆ ಮತ್ತು ವಂದೇಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿದ್ದಾರೆ. ಇದನ್ನು ಅನುಸರಿಸದವರ ಸದನದ ಸದಸ್ಯತ್ವವನ್ನು ಸ್ಪೀಕರ್ ರದ್ದುಗೊಳಿಸಬೇಕು. ಎಐಎಂಐಎಂ ನಾಯಕರ ವರ್ತನೆ ನಮ್ಮ ದೇಶಕ್ಕೆ ಮಾಡಿದ ಅವಮಾನ. ವಂದೇ ಮಾತರಂ ಹಾಡಲು ಅವರಿಗೇಕೆ ಆಕ್ಷೇಪ?” ಎಂದು ಠಾಕೂರ್ ಹೇಳಿದ್ದಾರೆ.
ಇದನ್ನೂ ಓದಿ: ಸದ್ದಿಲ್ಲದೆ ಮುಸ್ಲಿಂ ವಿದ್ಯಾರ್ಥಿಗಳ ಡಾಟಾ ಸಂಗ್ರಹಿಸುತ್ತಿರುವ ರಾಜ್ಯ ಸರ್ಕಾರ!