Homeಮುಖಪುಟಗಜ ಪ್ರಸವ ಮುಗಿದರೂ, ಇನ್ನೂ ಮುಗಿಯದ ಖಾತೆ ಖ್ಯಾತೆ..!

ಗಜ ಪ್ರಸವ ಮುಗಿದರೂ, ಇನ್ನೂ ಮುಗಿಯದ ಖಾತೆ ಖ್ಯಾತೆ..!

- Advertisement -
- Advertisement -

ಒಂದೆಡೆ ಸೋತು ಸಚಿವ ಸ್ಥಾನ ಮಿಸ್ ಮಾಡಿಕೊಂಡಿರುವವರ ಒತ್ತಡ, ಮತ್ತೊಂದೆಡೆ ಸಚಿವಗಿರಿ ಸಿಕ್ಕರೂ ಇಷ್ಟದ ಖಾತೆ ಸಿಗದೆ ಕ್ಯಾತೆ ತೆಗೆಯುತ್ತಿರುವವರ ಕಿರಿಕಿರಿ, ಸಾಲದ್ದಕ್ಕೆ `ಎಲ್ಲಿಂದಲೋ ಬಂದವರು’ ತಮ್ಮ ಪಕ್ಷದ ಸರ್ಕಾರದಲ್ಲಿ ಸಚಿವರಾಗೋದನ್ನು ಕಂಡು ಮರುಗುತ್ತಿರುವ ಮಂತ್ರಿಗಿರಿ ವಂಚಿತ ಮೂಲ ಬಿಜೆಪಿಗರ ಗೋಳಾಟ, ಹೈಕಮಾಂಡ್‍ನ ನಿರಂತರ ನಿರ್ಲಕ್ಷ್ಯ ಇವೆಲ್ಲವೂ ಮುಂದಿನ ದಿನಗಳಲ್ಲಿ ಯಡಿಯೂರಪ್ಪನವರ  ಸರ್ಕಾರಕ್ಕೆ ಸರಿಯಾಗೇ ಕಾಟಕೊಡಲು ಸಜ್ಜಾಗಿವೆ…..

ಕಳೆದ ಎರಡು ತಿಂಗಳಿನಿಂದ ಸಾಕ್ಷಾತ್ ಗಜ ಪ್ರಸವವೇ ಏನೋ ಎಂಬಂತೆ ಭಾಸವಾಗಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಿಎಂ ಬಿ.ಎಸ್.ಯಡಿಯೂರಪ್ಪ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು.

ಕೊನೆಗೆ ಉಮೇಶ್ ಕತ್ತಿ , ರೇಣುಕಾಚಾರ್ಯನಂತಹ ಸ್ವಪಕ್ಷೀಯ ಶಾಸಕರ ಅಸಮಾಧಾನದ ನಡುವೆಯೂ ಯಶಸ್ವಿಯಾಗಿ ಸಂಪುಟ ವಿಸ್ತರಿಸಿದ್ದ ಬಿಎಸ್‍ವೈ 10 ಜನ ವಲಸಿಗರಿಗೆ ಸಚಿವ ಸ್ಥಾನ ನೀಡುವ ಮೂಲಕ ಗಜ ಪ್ರಸವಕ್ಕೆ ಸ್ವಾಭಾವಿಕ ಹೆರಿಗೆಯನ್ನೇ ಮಾಡಿಸಿದ್ದರು. ಆದರೆ, ಸ್ವಾಭಾವಿಕ ಹೆರಿಗೆಯ ಖುಷಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ತುಂಬಾ ದಿನ ಉಳಿಯುವ ಯಾವುದೇ ಲಕ್ಷಣ ಸದ್ಯಕ್ಕೆ ಕಾಣಿಸುತ್ತಿಲ್ಲ.

 

ಕಾಂಗ್ರೆಸ್-ಜೆಡಿಎಸ್ ಪಕ್ಷದಿಂದ ಬಿಜೆಪಿ ವಲಸೆಬಂದ ಶಾಸಕರು ನಿರೀಕ್ಷೆಯಂತೆ ಉಪ-ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಹೇಶ್ ಕುಮಟಳ್ಳಿಗೆ ಹೊರತುಪಡಿಸಿ ಉಳಿದ ಎಲ್ಲಾ ಶಾಸಕರಿಗೂ ಸಂಪುಟ ದರ್ಜೆಯ ಸಚಿವ ಸ್ಥಾನವನ್ನೇನೋ ನೀಡಲಾಗಿದೆ.

ಆದರೆ, ಹೀಗೆ ಸಚಿವ ಸ್ಥಾನ ಪಡೆದಿರುವ ಶಾಸಕರು ಅಷ್ಟಕ್ಕೆ ತೃಪ್ತರಾಗದೆ ಇದೀಗ ಪ್ರತಿಯೊಬ್ಬರೂ ಇಂತಹದ್ದೇ ಖಾತೆ ಕೊಡಿ ಎಂದು ಬಿಎಸ್‍ವೈ ಎದುರು ಪ್ರಬಲ ಖಾತೆಗೆ ಬೇಡಿಕೆ ಇಡುತ್ತಿರುವುದು ಸಿಎಂ ತಲೆನೋವಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಮತ್ತೊಂದೆಡೆ ಮಹೇಶ್ ಕುಮಟಳ್ಳಿ ಪರ ಮಾತನಾಡುವ ಭರದಲ್ಲಿ ಬಿಜೆಪಿ ಶಾಸಕ ಬಸಡನಗೌಡ ಪಾಟೀಲ್ ಯತ್ನಾಳ್ ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ಬಿಜೆಪಿ ಸರ್ಕಾರ ಮತ್ತು ಸ್ವತಃ ಯಡಿಯೂರಪ್ಪನವರಿಗೆ ಮತ್ತಷ್ಟು ಮುಜುಗರಕ್ಕೀಡುಮಾಡುತ್ತಿದೆ.

ಬಿಜೆಪಿಯಲ್ಲಿ ಮುಗಿಯದ ಖಾತೆ ಖ್ಯಾತೆ

ಕಳೆದ ಜೂನ್ ತಿಂಗಳಲ್ಲಿ ಬಿಜೆಪಿ ಸರ್ಕಾರದ ರಚನೆ ವೇಳೆ ಬಿ.ಎಸ್. ಯಡಿಯೂರಪ್ಪ ತಾವು ಕೊಟ್ಟ ಮಾತಿನಂತೆ ಕೊನೆಗೂ 10 ಜನ ವಲಸಿಗ/ಅರ್ಹ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದಾರೆ. ಸ್ವಪಕ್ಷೀಯ ಹಿರಿಯ ನಾಯಕರು ಮತ್ತು ದೆಹಲಿಯ ಹೈಕಮಾಂಡ್ ನಾಯಕರ ವಿರೋಧ ಕಟ್ಟಿಕೊಂಡು ಕೊನೆಗೂ ಕೊಟ್ಟ ಮಾತು ಉಳಿಸಿಕೊಳ್ಳುವ ಮೂಲಕ ವಚನಭ್ರಷ್ಟ ಎಂಬ ಹಣೆಪಟ್ಟಿಯಿಂದ ತಪ್ಪಿಸಿಕೊಂಡಿದ್ದಾರೆ. ಆದರೆ, ಇದು ಇಲ್ಲಿಗೆ ಮುಗಿಯುವ ಕಥೆ ಅಲ್ಲ.

ಸೋಮವಾರ ರಾಜ್ಯಪಾಲರಿಗೆ ನೂತನ ಸಚಿವರ ಖಾತೆ ವಿವರದ ಪಟ್ಟಿಯನ್ನು ಕಳುಹಿಸಿದ್ದ ಬಿ.ಎಸ್. ಯಡಿಯೂರಪ್ಪ, ರಮೇಶ್ ಜಾರಕಿಹೊಳಿ – ಜಲ ಸಂಪನ್ಮೂಲ, ಡಾ.ಕೆ. ಸುಧಾಕರ್-ವೈದ್ಯಕೀಯ ಶಿಕ್ಷಣ, ಆನಂದ್ ಸಿಂಗ್-ಆಹಾರ ಮತ್ತು ನಾಗರಿಕ, ಶ್ರೀಮಂತ ಪಾಟೀಲ್- ಜವಳಿ ಇಲಾಖೆ, ನಾರಾಯಣ ಗೌಡ- ಪೌರಾಡಳಿತ ಮತ್ತು ತೋಟಗಾರಿಕೆ, ಎಸ್.ಟಿ. ಸೋಮಶೇಖರ್- ಸಹಕಾರ, ಶಿವರಾಂ ಹೆಬ್ಬಾರ್-ಕಾರ್ಮಿಕ, ಭೈರತಿ ಬಸವರಾಜು – ನಗರಾಭಿವೃದ್ಧಿ, ಗೋಪಾಲಯ್ಯ-ಸಣ್ಣ ಕೈಗಾರಿಕೆ ಹಾಗೂ ಬಿ.ಸಿ. ಪಾಟೀಲ್‍ಗೆ ಅರಣ್ಯ ಖಾತೆಯನ್ನು ನೀಡಿದ್ದರು.

 

ಆದರೆ, ಖಾತೆ ಹಂಚಿಕೆಯ ವಿವರಗಳು ಬಹಿರಂಗಗೊಳ್ಳುತ್ತಿದ್ದಂತೆ ಹಿರೇಕೆರೂರು ಕ್ಷೇತ್ರದ ಶಾಸಕ ಬಿ.ಸಿ. ಪಾಟೀಲ್ ಮತ್ತು ಕೋಲಾರದ ಶಾಸಕ ಡಾ. ಸುಧಾಕರ್ ಬಹಿರಂಗವಾಗಿಯೇ ತಗಾದೆ ತೆಗೆದಿದ್ದಾರೆ.

ಆರಂಭದಿಂದಲೂ ಬಿಸಿ ಪಾಟೀಲ್ ಗೃಹ ಇಲಾಖೆಯ ಮೇಲೆ ಕಣ್ಣಿಟ್ಟಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. “ಪೊಲೀಸ್ ಅಧಿಕಾರಿಯಾಗಿದ್ದ ನಾನು ಗೃಹ ಸಚಿವನಾಗಬೇಕು ಎಂಬುದು ಹಲವು ಪೊಲೀಸರ ಆಕಾಂಕ್ಷೆ” ಎಂದು ಅವರು ಬಹಿರಂಗವಾಗಿಯೇ ಹೇಳಿದ್ದರು. ಹೀಗಾಗಿ ಅರಣ್ಯ ಇಲಾಖೆ ಸ್ಥಾನಮಾನ ಸ್ವಾಭಾವಿಕವಾಗಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನೂ ಡಾ. ಸುಧಾಕರ್ ಆರಂಭದಲ್ಲೇ ತನಗೆ ಇಂಧನ ಖಾತೆ ನೀಡುವಂತೆ ಬಿಎಸ್‍ವೈ ಎದುರು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಬಿಎಸ್‍ವೈ ಸಹ ಸಮ್ಮತಿ ಸೂಚಿಸಿದ್ದರು ಎನ್ನಲಾಗುತ್ತಿದೆ. ಆದರೆ, ಇದೀಗ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆ ನೀಡಿರುವುದು ಸುಧಾಕರ್ ಅವರನ್ನು ಕೆರಳಿಸಿದೆ. ಹೀಗಾಗಿ ಈ ಇಬ್ಬರೂ ನಾಯಕರು ತಮಗೆ ಪ್ರಬಲ ಖಾತೆ ನೀಡುವಂತೆ ಬಹಿರಂಗವಾಗಿಯೇ ಪಟ್ಟು ಹಿಡಿದು ಕುಳಿತಿದ್ದಾರೆ.

ಪರಿಣಾಮ ಇವರನ್ನು ಸಮಾಧಾನಿಸಲು ಮುಂದಾಗಿರುವ ಸಿಎಂ ಬಿಎಸ್‍ವೈ ಮಂಗಳವಾರ ಮತ್ತೆ ಖಾತೆ ಮರುಹಂಚಿಕೆ ಮಾಡಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದ್ದ ಕೃಷಿ ಖಾತೆಯನ್ನು ಇದೀಗ ಬಿಸಿ ಪಾಟೀಲ್‍ಗೆ ವಹಿಸಲಾಗಿದೆ.

ಬಿ.ಸಿ. ಪಾಟೀಲ್ ಮಾತ್ರವಲ್ಲದೆ ಇನ್ನೂ ನಾಲ್ವರು ಸಚಿವರಿಗೆ ಖಾತೆ ಮರುಹಂಚಿಕೆ ಮಾಡಲಾಗಿದೆ. ಆನಂದ ಸಿಂಗ್‍ಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯ ಬದಲು ಅರಣ್ಯ ಹಾಗೂ ಜೈವಿಕ ಪರಿಸರ ಇಲಾಖೆಯನ್ನು ನೀಡಲಾಗಿದೆ. ಗೋಪಾಲಯ್ಯ ಅವರಿಗೆ ಸಣ್ಣ ಕೈಗಾರಿಕೆ ಬದಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಲಾಗಿದೆ.

ಶಿವರಾಮ್ ಹೆಬ್ಬಾರ್ ಅವರಿಗೆ ಕಾರ್ಮಿಕ ಇಲಾಖೆ ಜೊತೆಗೆ ಸಕ್ಕರೆ ಖಾತೆಯನ್ನೂ ನೀಡಲಾಗಿದೆ. ಸಚಿವ ಸಿ.ಸಿ. ಪಾಟೀಲ್‍ಗೆ ಗಣಿ ಮತ್ತು ಭೂವಿಜ್ಞಾನ ಖಾತೆಯ ಜೊತೆಗೆ ಹೆಚ್ಚುವರಿಯಾಗಿ ವಾಣಿಜ್ಯ ಮತ್ತು ಕೈಗಾರಿಕೆ ಖಾತೆಯನ್ನು ನೀಡಲಾಗಿದೆ.

ಈ ಪರಿಷ್ಕøತ ಪಟ್ಟಿಯನ್ನು ಈಗಾಗಲೇ ರಾಜಭವನಕ್ಕೆ ಕಳುಹಿಸಲಾಗಿದೆ. ಆದರೆ, ಡಾ. ಸುಧಾಕರ್ ಅವರ ಖಾತೆ ಬದಲಾವಣೆ ಕುರಿತು ಈ ಪಟ್ಟಿಯಲ್ಲಿ ಎಲ್ಲೂ ಉಲ್ಲೇಖಿಸದಿರುವುದು ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾದರೂ ಅಚ್ಚರಿ ಇಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಎಸ್‍ವೈಗೆ ಬಿಡದ ಶಾಸಕ ಯತ್ನಾಳ್ ಎಂಬ ತಲೆನೋವು
ಸಂಪುಟ ವಿಸ್ತರಣೆಗೂ ಮುನ್ನವೇ ತನಗೆ ಸಚಿವ ಸ್ಥಾನ ಇಲ್ಲ ಎಂಬ ವಿಚಾರವನ್ನು ಅರಿತಿದ್ದ ಶಾಸಕ ಮಹೇಶ್ ಕುಮಟಳ್ಳಿ, “ಮುಖ್ಯಮಂತ್ರಿ ಯಡಿಯೂರಪ್ಪ ಪ್ರಾಣ ಬಿಟ್ಟರೂ ಬಿಟ್ಟಾರು ಆದರೆ, ಕೊಟ್ಟ ಮಾತು ಮಾತ್ರ ತಪ್ಪಲಾರರು. ಅವರು ನನಗೆ ಮಾತು ಕೊಟ್ಟಂತೆ ಸಚಿವ ಸ್ಥಾನ ನೀಡಿಯೇ ತೀರುತ್ತಾರೆ” ಎಂದು ವೀರಾವೇಶದ ಹೇಳಿಕೆ ನೀಡುವ ಮೂಲಕ ಹೊಸ ಆಟಕ್ಕೆ ಮುಂದಾಗಿದ್ದರು.

ಆದರೆ, ಇದ್ಯಾವುದಕ್ಕೂ ಕ್ಯಾರೆ ಎನ್ನದ ಯಡಿಯೂರಪ್ಪ ಬೆಳಗಾವಿಗೆ ಎರಡು ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಅಲ್ಲದೆ, ಶಾಸಕ ಮಹೇಶ್ ಕುಮಟಳ್ಳಿಗೆ ಎಂಎಸ್‍ಐಎಲ್ (ಮೈಸೂರು ಸೇಲ್ಸ್ ಇಂಟರ್‍ನ್ಯಾಷನಲ್ ಲಿಮಿಟೆಡ್) ನಿಗಮದ ಅಧ್ಯಕ್ಷ ಸ್ಥಾನ ನೀಡಿ ಕೈತೊಳೆದುಕೊಂಡಿದ್ದರು.

ತನಗೆ ಸಚಿವ ಸ್ಥಾನ ಲಭಿಸುವುದಿಲ್ಲ ಎಂಬ ಸತ್ಯ ಅರಿವಾದ ಮೇಲೆ ಕುಮಟಳ್ಳಿ ಸಹ ಸ್ವಲ್ಪ ಮೆತ್ತಗಾಗಿದ್ದಾರೆ. ಹಠವನ್ನು ಪಕ್ಕಕ್ಕಿಟ್ಟು “ನಾನು ಒಬ್ಬ ಸಿವಿಲ್ ಇಂಜಿನಿಯರ್. ಹೀಗಾಗಿ ಎಂಎಸ್‍ಐಎಲ್ ಬದಲು ಬೇರೆ ಯಾವುದಾದರೂ ನಿಗಮ ಅಥವಾ ಮಂಡಳಿ ಕೊಟ್ಟರೆ ಕೆಲಸ ಮಾಡಲು ಸಿದ್ಧನಿದ್ದೇನೆ” ಎಂದು ಹೇಳುವ ಮೂಲಕ ತಮ್ಮ ಅಸಮಾಧಾನದಿಂದ ಪಕ್ಷಕ್ಕೆ ಆಗಬಹುದಾದ ಮುಜುಗರವನ್ನು ತಪ್ಪಿಸಿದ್ದರು.

ಆದರೆ, ಸಚಿವ ಸ್ಥಾನ ಸಿಗದ ಕುರಿತಾಗಿ ಸ್ವತಃ ಮಹೇಶ್ ಕುಮಟಳ್ಳಿ ಸುಮ್ಮನಾದರೂ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸುಮ್ಮನಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ,

ಮಂಗಳವಾರ ವಿಜಯಪುರ ಜಿಲ್ಲೆಯಲ್ಲಿ ಈ ಕುರಿತು ಹೇಳಿಕೆ ನೀಡಿರುವ ಯತ್ನಾಳ್, “ಚುನಾವಣೆ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ತುಂಬು ಸಭೆಯಲ್ಲಿ ಕುಮಟಳ್ಳಿಯವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಹೀಗಾಗಿ ಅವರು ಕೊಟ್ಟ ಮಾತು ಉಳಿಸಿಕೊಳ್ಳಬೇಕು ಇಲ್ಲದಿದ್ದರೆ, ಹೆಚ್.ಡಿ. ಕುಮಾರಸ್ವಾಮಿಯವರನ್ನು ಈ ಹಿಂದೆ ವಚನಭ್ರಷ್ಟ ಎಂದು ಬೈದಿದ್ದ ಬಿಎಸ್‍ವೈ ಸ್ವತಃ ವಚನಭ್ರಷ್ಟ ಎಂದೆನಿಸಿಕೊಳ್ಳುತ್ತಾರೆ” ಎಂದು ಹೇಳುವ ಮೂಲಕ ಸಿಎಂಗೆ ಟಾಂಗ್ ನೀಡಿದ್ದಾರೆ.

ಯತ್ನಾಳ್ ಹೀಗೆ ಪಕ್ಷಕ್ಕೆ ಮುಜುಗರವಾಗುವಂತಹ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಪ್ರವಾಹದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡದ ಕುರಿತಾಗಿ ಬಹಿರಂಗವಾಗಿ ಅಸಮಾಧಾನ ಹೊರಹಾಕುವ ಮೂಲಕ ಪಕ್ಷದಿಂದ ಷೊಕಾಸ್ ನೋಟಿಸ್ ಪಡೆದಿದ್ದರು. ಶಿಸ್ತು ಕ್ರಮಕ್ಕೂ ಒಳಗಾಗಿದ್ದರು.
ಅಲ್ಲದೆ, ತನಗೂ ಸಿಎಂ ಆಗುವ, ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷನಾಗುವ ಯೋಗ್ಯತೆ ಇದೆ ಎಂದು ಹೇಳುವ ಮೂಲಕ ಪಕ್ಷದ ವರಿಷ್ಠರ ಕೋಪಕ್ಕೆ ತುತ್ತಾಗಿದ್ದರು. ನಳಿನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಎಂದು ಘೋಷಿಸಿದಾಗ ಬಹಿರಂಗವಾಗಿಯೇ ಕುಟುಕಿದ್ದರು.

ಒಂದೆಡೆ ಸಂಪುಟ ವಿಸ್ತರಣೆ, ಖಾತೆ ಹಂಚಿಕೆಯ ಖ್ಯಾತೆ ಸ್ವಪಕ್ಷೀಯರ ಬಂಡಾಯ ಮತ್ತು ಹೈಕಮಾಂಡ್ನ ನಿರಂತರ ಕಿರಿಕಿರಿಯಿಂದ ಈಗಾಗಲೇ ನಲುಗಿಹೋಗಿರುವ ಯಡಿಯೂರಪ್ಪನವರಿಗೆ ಯತ್ನಾಳ್ ಹೀಗೆ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಸರ್ಕಾರ ವರ್ಚಸ್ಸಿಗೆ ಧಕ್ಕೆ ತರುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...