LPG ಸಿಲಿಂಡೆರ್ ರೇಟು ಮತ್ತೇ ಜಾಸ್ತಿಯಾಗಿದೆ. ಕೇಂದ್ರ ಸರ್ಕಾರ ದೆಹಲಿ ಚುನಾವಣೆ ಮುಗಿಯಲು ಕಾಯುತ್ತಿತ್ತೋ ಎಂಬಂತೆ ಫಲಿತಾಂಶದ ಮರುದಿನವೇ ದರವನ್ನು ಹೆಚ್ಚಿಸಿದೆ. ಈ ಮೂಲಕ ಸರಕಾರ ಜನರ ಕಿಸೆಗೆ ಕೈ ಹಾಕಿದೆ. ದೇಶದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಪರಿಸ್ಥಿತಿಯಲ್ಲಿ ಜನರನ್ನು ಲೂಟಿ ಮಾಡಿಯಾದರೂ ಸರಿ ಬೊಕ್ಕಸ ತುಂಬಿಕೊಳ್ಳಲು ಹೊರಟಂತಿದೆ ಸರಕಾರದ ನಡೆ. ಸರಕಾರದ ನೀತಿಯನ್ನು ಟೀಕಿಸಿದರೆಂದು ಜನರ ಬಾಯಿಯನ್ನು ಮುಚ್ಚಿಸಲು ಶತಾಯುಗತ ಪ್ರಯತ್ನಿಸುವ ಸರಕಾರ ತನ್ನ ಜನ ವಿರೋಧಿ ನೀತಿಯ ಕಡೆಗೆ ನೋಡಿ ಯಾವುದೇ ಸುಧಾರಣೆಯನ್ನು ಮಾಡುವ ಸಣ್ಣ ಪ್ರಯತ್ನ ಕೂಡಾ ಮಾಡುತ್ತಿಲ್ಲ.
ಈಗ ಎಲ್ಪಿಗಿ ಗ್ಯಾಸ್ಗೆ ಬರೋಬ್ಬರಿ 145ರೂ ಏರಿಸಲಾಗಿದೆ. 2014 ರ ನಂತರ ಬಾರಿಗೆ ಇದು ಅತೀ ಹೆಚ್ಚು ಏರಿಕೆಯಾಗಿದೆ. ಸಬ್ಸಿಡಿ ರಹಿತ ಸಿಲಿಂಡರಿನ ದರ ದೆಹಲಿಯಲ್ಲಿ 858.50 ರೂ, ಮುಂಬೈಯಲ್ಲಿ 829.50 ರೂ., ಕೋಲ್ಕೊತ್ತಾದಲ್ಲಿ 896 ರೂ., ಹಾಗೂ ಚೆನ್ನೈಯಲ್ಲಿ 734 ರೂ. ಆಗಲಿದೆ. 2009 ಜನವರಿಯಲ್ಲಿ ದೆಹಲಿಯಲ್ಲಿ 279.70 ರೂ ಸಿಗುತ್ತಿದ್ದ ಸಿಲಿಂಡರ್ ಈಗ ಬೆಲೆ 858.50 ರೂಗೇರಿದೆ ಅಂದರೆ ಅದರ ಪ್ರಮಾಣ ನೀವೇ ಊಹಿಸಿ.
ಈ ಹಿಂದೆ ಎಲ್ಪಿಜಿ ದರದ ಪಟ್ಟಿ ನೋಡಿ..
ತನ್ನ ತಪ್ಪುಗಳ ಬಗ್ಗೆ ಪ್ರಶ್ನೆಗಳು ಎದ್ದಾಗ ಕೇಂದ್ರದ ಬಿಜೆಪಿ ಸರ್ಕಾರ ಪ್ರತಿಬಾರಿಯೂ ಹಿಂದಿನ ಕಾಂಗ್ರೆಸ್ ಸರಕಾರವನ್ನು ಬೊಟ್ಟು ಮಾಡಿ ತೋರಿಸಿ ನುಣುಚಿಕೊಳ್ಳುತ್ತದೆ. ಅದರ ಮೇಲೆ ಸಣ್ಣ ಪ್ರಶ್ನೆಯನ್ನೂ ಹಾಕದೇ ಬಹು ಪರಾಕ್ ಹಾಕಿ ಸಮರ್ಥಿಸಿಕೊಳ್ಳುವ ಭಕ್ತಗಣವೂ ಈ ಸರ್ಕಾರಕ್ಕೆ ಇದೆ. ಹಿಂದೆಯೆಲ್ಲಾ ಒಂದು ಪೈಸೆ ಹೆಚ್ಚಾದರೂ ಜನರು ಪ್ರತಿಭಟನೆ ನಡೆಸುತ್ತಿದ್ದರು. ಈಗ ಪೆಟ್ರೋಲಿಗೆ ಐನೂರಾದರೂ ನಡೆದುಕೊಂಡೇ ಹೋಗಿ ಮೋದಿಗೆ ಮತ ಹಾಕುತ್ತೇವೆ ಎನ್ನುವವರು ಹುಟ್ಟಿಕೊಂಡಿದ್ದಾರೆ. ಇಂತಹ ಜನರಿರುವ ಕಾರಣದಿಂದಲೇ ಸರಕಾರ ಸರ್ವಾಧಿಕಾರಿಯಂತೆ ಮೆರೆಯುತ್ತಿದೆ. ಆದರೆ ಇದ್ಯಾವುದೂ ತಿಳಿಯದ ಸಾಮಾನ್ಯ ಜನರು ಇಲ್ಲಿ ಬಲಿಪಶುಗಳಾಗುತ್ತಾರೆ.
ಈಗ ಹೆಚ್ಚಾಗಿರುವ ಎಲ್ಪಿಜಿ ದರ
ಈ ಬಗ್ಗೆ ಮಂಗಳೂರಿನ ಗ್ರಾಹಕರ ವೇದಿಕೆ ಧರ್ಮೇಂದ್ರರವರನ್ನು ನಾನುಗೌರಿ.ಕಾಂ ಮಾತನಾಡಿಸಿತು. ಅವರು “ಬದುಕು ಕಟ್ಟಿಕೊಳ್ಳುವುದೇ ಕಷ್ಟವಾಗಿರುವ ಈ ಸಮಯದಲ್ಲಿ ದಿನನಿತ್ಯದ ಅನಿವಾರ್ಯ ಮತ್ತು ಅಗತ್ಯ ವಸ್ತುಗಳ ಬೆಲೆಏರಿಕೆಯ ಪ್ರಶ್ನೆಗಳಿಗೆ ಉತ್ತರ ಸಿಗುವುದೇ ಕಷ್ಟಕರವಾಗಿದೆ. ದೇಶದ ತಾಯಂದಿರು ಬೀದಿಗಿಳಿಯಬೇಕಾದ ಅನಿವಾರ್ಯತೆ ಇದೆ. ಪುರುಷರು ಹೇಗಾದರೂ ಬದುಕಿಕೊಳ್ಳಬಹುದೇನೊ ಆದರೆ ದೇಶದ ಮಹಿಳೆಯರು ಇದರ ಹೊಡೆತ ತಿನ್ನಬೇಕಾಗುತ್ತದೆ. ಇದು ದೇಶದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ” ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ವಕ್ತಾರರಾದ ಎ.ಎನ್ ನಟರಾಜೇಗೌಡರು “ಬಿಜೆಪಿ ಪಕ್ಷವು ಸೂಕ್ಷ್ಮತೆಯಿಲ್ಲದೇ ಸಂವೇದನಾಹೀನತೆಯಿಂದೆ ಬಳಲುತ್ತಿದೆ. ಅವರು ಎಲ್ಲಾ ರಾಜ್ಯ ಚುನಾವಣೆಗಳಲ್ಲಿ ಸೋಲುತ್ತಿರುವುದರಿಂದ ಜನರ ಮೇಲೆ ದ್ವೇಷ ಸಾಧಿಸುತ್ತಿದೆ. ಹಾಗಾಗಿ ಈ ರೀತಿ ಜನ ಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದಾರೆ. ಜನರು ಅಕ್ರೋಶಗೊಂಡಿದ್ದಾರೆ, ಇದು ಯಾವ ಸಮಯದಲ್ಲಾದರೂ ಸ್ಪೋಟಗೊಳ್ಳಬಹುದು. ಹಾಗಾಗಿ ಕೇಂದ್ರದ ಮೋದಿ ಸರ್ಕಾರ ತಕ್ಷಣವೇ ಇದನ್ನು ಹಿಂಪಡೆಯಬೇಕಿದೆ. ಕಾಂಗ್ರೆಸ್ ಪಕ್ಷದ ರಾಜ್ಯ ಮಹಿಳಾ ಘಟಕದಿಂದ ಇದರ ವಿರುದ್ಧ ರಾಜ್ಯ ವ್ಯಾಪಿ ಪ್ರತಿಭಟನೆ ನಡೆಸಲಿದ್ದೇವೆ” ಎಂದಿದ್ದಾರೆ.
ಬಿಜೆಪಿಯ ವಕ್ತಾರರಾದ “ವಾಮನಾಚಾರ್ಯ”ರನ್ನು ನಾನುಗೌರಿ.ಕಾಂ ಮಾತನಾಡಿಸಿ ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಬೆಲೆ ಏರಿಕೆಯಿಂದ ಜನರಿಗೆ ಆಗುವ ಸಮಸ್ಯೆಯನ್ನು ಒಪ್ಪುತ್ತಲೇ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಒಟ್ಟಾರೆಯಾಗಿ ಹೀಗೆ ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿರುವುದಕ್ಕೆ ಜನರ ನಿಷ್ಕ್ರಿಯತೆಯೇ ಕಾರಣವಾಗಿದೆ ಹೊರತು ಮತ್ತೇನಲ್ಲ ಎನಿಸುತ್ತದೆ. ಜನರು ಬೀದಿಗಿಳಿದಾಗ ಮಾತ್ರ ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ.