Homeಮುಖಪುಟಭೂ ಹಂಚಿಕೆ ಏಕೆ ಮಾಡಬೇಕೆಂದರೆ?: ದೇವರಾಜ ಅರಸು ಭಾಷಣ

ಭೂ ಹಂಚಿಕೆ ಏಕೆ ಮಾಡಬೇಕೆಂದರೆ?: ದೇವರಾಜ ಅರಸು ಭಾಷಣ

ಭೂಮಿಯ ಒಡೆತನ - ಭೂಸುಧಾರಣೆ ಬಗ್ಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರು ಮಾಡಿದ್ದ ಭಾಷಣದ ತುಣುಕು

- Advertisement -
- Advertisement -

ಭಾರತದಲ್ಲಿ ಕೇವಲ ಕೃಷಿ ವಿಭಾಗವೊಂದೇ ಸಹಸ್ರಾರು ಸಂಖ್ಯೆಯ ನಿರುದ್ಯೋಗಿಗಳಿಗೆ ಅಥವಾ ಅಪೂರ್ಣ ಉದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಬಲ್ಲಂತಹ ಏಕೈಕ ವಿಭಾಗವಾಗಿದೆ. ಅದನ್ನು ಬಿಟ್ಟರೆ ಇಂತಹ ಅವಕಾಶವನ್ನು ಒದಗಿಸಿಕೊಡಬಲ್ಲ ಬೇರೆ ಯಾವುದೇ ವಿಭಾಗವಿಲ್ಲ ಎಂಬುದು ನನಗೆ ಮನದಟ್ಟಾಗಿದೆ. ನಾನೋರ್ವ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿ ಅದನ್ನು ಸಾಧಿಸಲಾಗದಿದ್ದರೂ, ನಾನು ಮಣ್ಣಿನ ಮಗನಾಗಿ, ಮಣ್ಣಿನಲ್ಲೇ ಬದುಕುತ್ತಿರುವುದರಿಂದ ಗ್ರಾಮಾಂತರ ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲಿ ನನ್ನ ಸುತ್ತಮುತ್ತಲ ಪರಿಸ್ಥಿತಿಗಳೇನಾಗಿವೆ ಎಂಬ ಬಗ್ಗೆ ಅಧ್ಯಯನ ಮಾಡುವ ಅವಕಾಶಗಳು ನನಗೆ ದೊರೆತಿವೆೆ. ನಾನು ಅಲ್ಲಿ ಈ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ಅರ್ಥಮಾಡಿಕೊಂಡಿದ್ದೇನೆ; ಈ ಅರ್ಥದಲ್ಲಿ ನೋಡಿದರೆ ನಾನು ಹುಟ್ಟಾ ಅರ್ಥಶಾಸ್ತ್ರಜ್ಞನಾಗಿದ್ದೇನೆ; ಈ ವಿಷಯಗಳೆಲ್ಲ ನನ್ನ ಮನಸ್ಸಿನಲ್ಲೇ ಇದ್ದವು.

ಈ ಕೃಷಿ ವಿಭಾಗದ ಹೊರತಾಗಿ ಬೇರೆ ಕ್ಷೇತ್ರದಲ್ಲಿ ನೀವು ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದಾದರೆ, ಕೇವಲ ಅತ್ಯಲ್ಪ ಶೇಕಡಾ ಪ್ರಮಾಣದ ಜನರಿಗೆ ಮಾತ್ರವೇ ನೀವು ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಬಹುದಾಗಿದೆ. ಐದನೆಯ ಪಂಚವಾರ್ಷಿಕ ಯೋಜನೆಯ ಶೇಕಡಾ 10ರಷ್ಟು ಅಥವಾ ಶೇ.20ರಷ್ಟು ಹೆಚ್ಚು ಜನರಿಗೆ ಉದ್ಯೋಗಾವಕಾಶ ನೀಡಿಕೆಯಲ್ಲಿ ಲಕ್ಷ್ಯವನ್ನೀಯಬಹುದೇ ಹೊರತು ಶೇಕಡಾ 100ರಷ್ಟು ಜನರಿಗೆ ಉದ್ಯೋಗಗಳನ್ನು ಕಲ್ಪಿಸಲಾಗುವುದಿಲ್ಲ. ಅದು ಅಸಾಧ್ಯವೂ ಕೂಡ. ಹಿಂದಿನ ನಾಲ್ಕು ಪಂಚವಾರ್ಷಿಕ ಯೋಜನೆಗಳಲ್ಲೂ ಇದೇನೂ ನಡೆದಿಲ್ಲ. ಎಂದಮೇಲೆ ಕೃಷಿವಿಭಾಗದಲ್ಲಿ ಅದು ಸಾಧ್ಯವಾಗಬಹುದೇ ಎಂಬುದು ಪ್ರಶ್ನೆ.

ನಾವು ಭೂಸುಧಾರಣೆಯನ್ನು ಕುರಿತು ಮಾತನಾಡುತ್ತಿರುವಾಗ ಅದು ವ್ಯಕ್ತಿನಿಷ್ಠವಾದಲ್ಲಿ ನಾವು ಸಂಪೂರ್ಣವಾಗಿ ಆ ಪ್ರವೃತ್ತಿಯನ್ನು ಅಥವಾ ಪ್ರಜ್ಞೆಯನ್ನೇ ಕಳೆದುಕೊಳ್ಳುತ್ತೇವೆ ಎಂದು ನನಗೆ ತೋರುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಈಗಾಗಲೇ ತನ್ನೊಡನಿದ್ದಷ್ಟು ಜಮೀನು ತನಗೆ ಇರಬೇಕೆಂದು ಅಪೇಕ್ಷಿಸುತ್ತಾನೆ. ಒಂದು ಪಕ್ಷ ಒಬ್ಬ ವ್ಯಕ್ತಿಗೆ 100 ಎಕರೆಗಳಷ್ಟು ಜಮೀನು ಇದ್ದಲ್ಲಿ ಅದು ನನಗೆ ಅವಶ್ಯಕವೆಂದು ಅವನು ಹೇಳುತ್ತಾನೆ. ಒಬ್ಬ ವ್ಯಕ್ತಿಗೆ 200 ಎಕರೆಗಳಷ್ಟು ಜಮೀನು ಇದ್ದರೆ ಅವನು ಸಹ ಅದು ತನಗೆ ಅವಶ್ಯಕವೆಂದು ಹೇಳುತ್ತಾನೆ. ಅವನು ಕೇವಲ ತನ್ನ ಪ್ರಸಕ್ತ ಜೀವನದ ಪರಿಸ್ಥಿತಿಗಳ ಸಂಬಂಧದಲ್ಲಿ ಮಾತ್ರವೇ ಚಿಂತಿಸದೆ, ನನ್ನ ಮಗ, ಮೊಮ್ಮಗ ಮತ್ತು ಮರಿಮಕ್ಕಳ ಹಿತದ ಬಗ್ಗೆಯೂ ಆಲೋಚನೆ ಮಾಡುತ್ತಾನೆ.

ಇದು ನಮ್ಮ ದೇಶದಲ್ಲಿನ ಸಾಂಪ್ರದಾಯಿಕ ಚಿಂತನೆಯಾಗಿ ಪರಿಣಮಿಸಿದೆ. ಆಧುನಿಕ ತಾಂತ್ರಿಕವಿಜ್ಞಾನದ ಈ ದಿನಗಳಲ್ಲಿ ನಿಮ್ಮಲ್ಲಿ ಟ್ರ‍್ಯಾಕ್ಟರ್ ಇದೆ, ಬುಲ್‌ಡೋಜರ್‌ಗಳಿವೆ ಮತ್ತು ಇತರ ಎಷ್ಟೋ ವಿಧದ ಯಾಂತ್ರಿಕ ಸಾಧನ ಸಲಕರಣೆಗಳಿವೆ. ಈಗ ನೀವು ಇಂತಹ ಯಂತ್ರಗಳಿಂದ 200 ಎಕರೆಯಷ್ಟು ಜಮೀನನ್ನು ಉಳಬಹುದು; 2000 ಎಕರೆಯಷ್ಟು ಜಮೀನನ್ನೂ ಉಳಬಹುದು. ಆದರೆ ಇಲ್ಲಿ ಸಮಸ್ಯೆಯೇನೆಂದರೆ, ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನುಳ್ಳ ನಮ್ಮ ದೇಶದಲ್ಲಿ ನಿಮಗೆ ರಾಜಕೀಯದಲ್ಲಿ ಸಮಾನ ಅವಕಾಶಗಳನ್ನು ನೀಡಿರುವಾಗ, ಆರ್ಥಿಕ ವ್ಯವಸ್ಥೆಯ ಕ್ಷೇತ್ರದಲ್ಲೂ ಸಹ ನಿಮಗೆ ಸಮಾನ ಅವಕಾಶಗಳನ್ನು ಒದಗಿಸಬೇಕಾಗುತ್ತದೆ. ಇವುಗಳೆರಡನ್ನು ಎಂದೂ ಬೇರ್ಪಡಿಸಲಾಗುವುದಿಲ್ಲ ಮತ್ತು ಪ್ರತ್ಯೇಕವಾಗಿರಬೇಕೆಂದು ಭಾವಿಸಲಿಕ್ಕೂ ಆಗುವುದಿಲ್ಲ.

ನೀವು ಪ್ರಜಾಸತ್ತೆಯನ್ನು ಸಂಪೂರ್ಣ ರಾಜಕೀಯ ರಚನೆ ಮತ್ತು ನೀತಿಯೆಂದು ಅಂಗೀಕರಿಸುವುದರಿಂದ ಮತ್ತು ಸಮಾನ ಅವಕಾಶಗಳನ್ನು ನೀಡುವುದನ್ನು ನೀವೊಂದು ಪ್ರಮುಖ ತತ್ವವೆಂದು ಒಪ್ಪಿಕೊಂಡಿರುವುದರಿಂದ ಆರ್ಥಿಕ ಕ್ಷೇತ್ರದಲ್ಲೂ ಸಹ ನೀವು ಅವರಿಗೆ ಸಮಾನ ಅವಕಾಶಗಳನ್ನು ನೀಡಬೇಕು. ನೀವು ಅವರ ಕನಿಷ್ಠತಮ ಅಗತ್ಯಗಳನ್ನಾದರೂ ಪೂರೈಸಬೇಕು ಮತ್ತು ಅವರಿಗೆ ಉದ್ಯೋಗಗಳನ್ನು ಒದಗಿಸಬೇಕು. ಇದು ಕೇವಲ ಸರ್ಕಾರದ ಕರ್ತವ್ಯ ಮಾತ್ರವೇ ಅಲ್ಲ, ನಿಮ್ಮೆಲ್ಲರ ಅನಿವಾರ್ಯ ಕರ್ತವ್ಯವೂ ಆಗಿದೆ. ಇದು ಕೇವಲ ಸರ್ಕಾರದ ಕೆಲಸ ಮಾತ್ರ ಅಲ್ಲ ಎಂಬ ಸಂಗತಿಯನ್ನು ನಾನು ಪುನಃ ಒತ್ತಿಹೇಳುತ್ತೇನೆ. ಇದು ಸಮಗ್ರ ಸಮಾಜವು ನಿರ್ವಹಿಸಬೇಕಾದ ಅನಿವಾರ್ಯ ಕರ್ತವ್ಯವೂ ಆಗಿದೆ. ಅನೇಕ ಜನರು ಈ ಬಗೆಯ ಅನಿವಾರ್ಯ ಕರ್ತವ್ಯಗಳು ಸಂಪೂರ್ಣವಾಗಿ ಸರ್ಕಾರ ಕೆಲಸಗಳಾಗಿವೆ ಎಂದೇ ಭಾವಿಸುತ್ತಾರೆ. ಸರ್ಕಾರವು ಪ್ರತ್ಯೇಕವಾದ ವಲಯವೆ? ಅದು ಜನತೆಯ ಪ್ರತಿನಿಧಿ, ಆದ್ದರಿಂದ ಪ್ರತಿಯೊಬ್ಬರಿಗೂ ಉದ್ಯೋಗ ದೊರೆಯುವಂತೆ ನೋಡಿಕೊಳ್ಳುವುದು ಜನತೆಯ ಮತ್ತು ಸಮಾಜದ ಅಗತ್ಯ ಕರ್ತವ್ಯವಾಗಿದೆ.

ನೀವು ಈ ಜಮೀನನ್ನು ನಮ್ಮಿಂದ ತೆಗೆದುಕೊಂಡರೆ, ಭೂಮಿ ಇಲ್ಲದ ಎಲ್ಲ ಜನರಿಗೂ ಜಮೀನನ್ನು ನೀಡಬಲ್ಲಿರಾ ಎಂದು ಕೆಲವರು ನಮ್ಮೊಡನೆ ವಾದಿಸುತ್ತಿದ್ದಾರೆ. ಅದು ಸಾಧ್ಯವಾಗುವುದಿಲ್ಲ ಎಂದು ಯಾರು ಬೇಕಾದರೂ ನೇರವಾಗಿ ಹೇಳಬಹುದು. ಅದು ಸಾಧ್ಯವಿಲ್ಲವೆಂಬ ಅಂಶವನ್ನು ನಾನು ಸಹ ಒಪ್ಪಿಕೊಳ್ಳುತ್ತೇನೆ. ಏಕೆಂದರೆ ನಮ್ಮಲ್ಲಿ ಲಭ್ಯವಾಗುವ ಜಮೀನಿನ ಪ್ರಮಾಣ ತೀರ ಕಡಿಮೆಯಾಗಿದ್ದು ಭೂರಹಿತರು ಅಧಿಕ ಸಂಖ್ಯೆಯಲ್ಲಿದ್ದಾರೆ. ಒಂದು ಪಕ್ಷ ನೀವು ಪ್ರತಿಯೊಬ್ಬರಿಗೂ ಜಮೀನನ್ನು ನೀಡಬಯಸುವಿರಾದರೆ ನಾನು ಈಗಾಗಲೇ ಹೇಳಿರುವಂತೆ ನೀವು ವ್ಯಕ್ತಿಯೊಬ್ಬನಿಗೆ ತಲಾ ಎರಡು ಎಕರೆಗಳಷ್ಟು ಭೂಮಿಯನ್ನು ಮಾತ್ರ ನೀಡಬಹುದಾಗಿದೆ. ಹಾಗಿದ್ದರೆ ನಮ್ಮ ಉದ್ದೇಶವೇನು? ಕೇವಲ ಜನರಿಂದ ಜಮೀನನ್ನು ತೆಗೆದುಕೊಳ್ಳುವುದು ಮತ್ತು ಅವುಗಳನ್ನು ವಿತರಣೆ ಮಾಡುವುದಷ್ಟೆ ನಮ್ಮ ಗುರಿಯಲ್ಲ, ಅಷ್ಟರಮಟ್ಟಿಗೆ ಭೂರಹಿತರ ಸಮಸ್ಯೆಯು ಪರಿಹರಿಸಲ್ಪಟ್ಟಿರುತ್ತದೆ.

ಉದಾಹರಣೆಗೆ ಮೈಸೂರಿನಲ್ಲಿ ಭೂಸುಧಾರಣೆಯನ್ನು ಅನುಷ್ಠಾನಕ್ಕೆ ತಂದ ಬಳಿಕ ನಾವು ವಿತರಣೆಯ ಸಲುವಾಗಿ 2 ರಿಂದ 4 ಲಕ್ಷ ಎಕರೆಯಷ್ಟು ಜಮೀನನ್ನು ಪಡೆಯಬಹುದೆಂದು ಸ್ಥೂಲವಾಗಿ ಲೆಕ್ಕಾಚಾರ ಮಾಡಲಾಗಿದೆ. ಆದರೆ ನಮ್ಮಲ್ಲಿ ಲಕ್ಷಾಂತರ ಜನರಿಗೆ ಭೂಮಿ ಇಲ್ಲ ಎಂದು ಜನರೇನೋ ಹೇಳಬಹುದು. ಕೇವಲ 2 ರಿಂದ 4 ಎಕರೆಗಳಷ್ಟು ಜಮೀನನ್ನು ಎಷ್ಟು ಜನರಿಗೆ ವಿತರಣೆ ಮಾಡಬಹುದು? ಬಹಳ ಹೆಚ್ಚೆಂದರೆ ನಾವು 3 ಎಕರೆಯಷ್ಟು ಅಥವಾ 4 ಎಕರೆಯಷ್ಟು ಜಮೀನನ್ನು ನೀಡಿದರೆ ಸುಮಾರು ಒಂದು ಲಕ್ಷದಷ್ಟು ಕುಟುಂಬಗಳಿಗೆ ದೊರೆಯಬಹುದು. ಆದರೆ ಉಳಿದ ಲಕ್ಷಾಂತರ ಜನರನ್ನು ಕುರಿತು ನಾವು ಆಲೋಚಿಸಬೇಕಾಗುತ್ತದೆ. “ನನ್ನಲ್ಲಿ 50 ಎಕರೆಯಷ್ಟು ಜಮೀನು ಇದೆ. ನೀವು 10 ಅಥವಾ 15 ಎಕರೆಯಷ್ಟು ಅಥವಾ ಹೆಚ್ಚೆಂದರೆ 18 ಎಕರೆಗಳಷ್ಟು ಭೂಮಿಯನ್ನು ನನಗೆ ಕೊಡುತ್ತಿದ್ದೀರಿ. ಉಳಿದುದನ್ನು ನೀವು ತೆಗೆದುಕೊಳ್ಳುತ್ತೀರಿ ಮತ್ತು ಅಷ್ಟರಮಟ್ಟಿಗೆ ನನ್ನ ಆದಾಯ ಕೈತಪ್ಪಿತು. ಈಗ ನಾನು ನನ್ನ ಮಕ್ಕಳಿಗೆ ನನ್ನ ಕುಟುಂಬದವರ ಭವಿಷ್ಯಕ್ಕಾಗಿ ಏನು ಮಾಡಲಿ”_ ಇದು ಅವರ ವಾದ. ಈ ವಾದಕ್ಕೆ ನನ್ನ ಉತ್ತರ ಇಷ್ಟೆ: ದೇವರು ಸೃಷ್ಟಿಸಿದ ಈ ಜಗತ್ತಿನಲ್ಲಿ ಬದುಕಿ ಉಳಿಯಬೇಕಾದವನು ನೀನೊಬ್ಬನೇ ಏನು? ಅಥವಾ ನಿನ್ನ ಒಂದೇ ಕುಟುಂಬ ಮಾತ್ರವೇ ಪ್ರಪಂಚದಲ್ಲಿ ಬದುಕಿ ಉಳಿಯುವಂತಹದೇನು? ನಾವು ಈ ಜಗತ್ತಿನಲ್ಲಿ ಸಮಾಜವಿಲ್ಲದೆ ಬದುಕಿ ಉಳಿಯಬಲ್ಲೆವೇ?

ನೀವು ಸಮಾಜವಿಲ್ಲದ ಜಗತ್ತಿನಲ್ಲಿ ಬದುಕಬಯಸುವಿರಾದರೆ, ನೀವು ಆಡಂ ಅಥವಾ ಮೊದಲ ಮಾನವನು ಏಕಾಂಗಿಯಾಗಿ ಬದುಕುತ್ತಿದ್ದಂತಹ ಸೃಷ್ಟಿಯ ಮೊದಲಿನ ಕಾಲಕ್ಕೆ ಹೋಗಬೇಕಾಗುತ್ತದೆ. ಆಗ ಇಡೀ ಪ್ರಪಂಚವೇ ನಿಮ್ಮದಾಗುತ್ತದೆ. ಪ್ರತಿಯೊಂದು ವಸ್ತುವೂ ನಿಮ್ಮದಾಗುತ್ತದೆ. ಆದರೆ ಮೊಟ್ಟಮೊದಲನೆಯದಾಗಿ ಮನುಷ್ಯನು ಸಂಘಜೀವಿ ಎಂದು ಹೇಳಲಾಗಿದೆ. ನೀವು ಸಮಾಜದಲ್ಲಿನ ಸಂಘಜೀವಿಯಾಗಿದ್ದರೆ ನಿಮಗೆ ಸಮಾಜ ಬೇಕಾಗುತ್ತದೆ. ನೀವು ಅವರನ್ನು ಅಪೇಕ್ಷಿಸುವುದಾದರೆ ಮತ್ತು ಅವರು ನಿಮ್ಮನ್ನು ಬಯಸಿದರೆ ಒಬ್ಬರು ಮತ್ತೊಬ್ಬರಿಗೆ ಪೂರಕವಾಗಿರುತ್ತಾರೆ. ಆದ್ದರಿಂದ ನೀವು ಸಾಮೂಹಿಕವಾಗಿ ಬದುಕಬೇಕಾಗಿದೆ.

ನಾವು ಸಹಕಾರಯುತವಾಗಿ ಬಾಳಬೇಕಾಗಿದೆ. ದೇವರು ಭೂಮಿಯನ್ನು ಮನುಷ್ಯನ ಬೆನ್ನಿಗೆ ಕಟ್ಟಿಯೇ ಅವನನ್ನು ಸೃಷ್ಟಿಸಿಲ್ಲ. ಭೂಮಿಯು ಮನುಷ್ಯನಿಂದ ಸೃಷ್ಟಿಯಾದುದೇನೂ ಅಲ್ಲ. ನಾವು ಸಮಾಜವನ್ನು ಯಾವ ರೀತಿಯಲ್ಲಿ ಬೆಳೆಸಿದ್ದೇವೆ ಎಂದರೆ ನಾವಾಗಿಯೇ ಭೂಮಿಯನ್ನು ನಮ್ಮದನ್ನಾಗಿ ಮಾಡಿಕೊಂಡಿದ್ದೇವೆ ಹಾಗೂ ಅದನ್ನು ನನ್ನ ಸ್ವಂತ ಜಮೀನು ಎಂದು ಕರೆದುಕೊಂಡಿದ್ದೇವೆ. ನಿಮ್ಮ ಧರ್ಮಶಾಸ್ತ್ರ, ಪುರಾಣಗಳು ಮತ್ತು ಉಪನಿಷತ್ತುಗಳಲ್ಲಿಯೂ ಸಹ ಯಾರೂ ಭೂಮಿಯು ಮನುಷ್ಯರದ್ದೆಂದು ಹೇಳಿಲ್ಲ. ನಾನು ಹೇಳಿದ್ದು ತಪ್ಪಾದರೆ, ಯಾವನಾದರೂ ಭೂಮಿಯು ಮನುಷ್ಯನಿಗೆ ಸೇರಿದ್ದು ಎಂಬುದನ್ನು ಉದಾಹರಿಸಿ ನನಗೆ ಹೇಳಬಲ್ಲನೇ ಎಂಬುದನ್ನು ನಾನು ತಿಳಿಯಬಯಸುತ್ತೇನೆ.

ನಮ್ಮ ಶ್ರೇಷ್ಠ ಚಿಂತಕರಾಗಿರುವ ವಿನೋಬಾಜಿಯವರು ಹಿಂದೊಮ್ಮೆ ಇಲ್ಲಿಗೆ ಬಂದಾಗ ಅವರು ಹೋದೆಡೆಯಲ್ಲೆಲ್ಲ ಪ್ರತಿಯೊಬ್ಬರೊಡನೆ, ಭೂಮಿಯು ಗೋಪಾಲನಿಗೆ ಸೇರಿದ್ದು ಎಂದು ಹೇಳಿದ್ದು ನನಗೆ ಈ ಕ್ಷಣದಲ್ಲಿ ನೆನಪಿಗೆ ಬರುತ್ತಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಗೋಪಾಲನೇ ದೇವರು, ಸೃಷ್ಟಿಕರ್ತ. ಆದ್ದರಿಂದ ಪ್ರಾರಂಭದಿಂದಲೂ ಈ ನೀತಿಯನ್ನು ನಾವೆಲ್ಲರೂ ನಂಬಿಕೊಂಡಿದ್ದೇವೆ. ಸಮಾಜವು ಬೆಳೆದಂತೆ ಮತ್ತು ಮನುಷ್ಯನು ಪ್ರಗತಿ ಹೊಂದಿದಂತೆ ಪ್ರಗತಿಪರ ಪ್ರವೃತ್ತಿಯ ವಿಶಿಷ್ಟ ಲಕ್ಷಣವೂ ಬೆಳೆಯಿತು. ದುರ್ಬಲ ವ್ಯಕ್ತಿಯನ್ನು ದಮನಮಾಡಲಾಯಿತು, ಬಲಿಷ್ಠ ವ್ಯಕ್ತಿಯು ಎಲ್ಲವನ್ನೂ ಪಡೆದುಕೊಂಡನು ಮತ್ತು ಎಲ್ಲವೂ ತನ್ನದೆಂದು ಹೇಳಲಾರಂಭಿಸಿದನು.

ನಿಮ್ಮ ನೆಮ್ಮದಿಯ ಜೀವನಕ್ಕಾಗಿಯೂ, ಮತ್ತು ನಿಮ್ಮ ಸ್ವಂತ ಸಂರಕ್ಷಣೆಗಾಗಿಯೂ ಸಹ ನಿಮ್ಮ ಜೀವನಕ್ಕೆ ನೆಮ್ಮದಿಯನ್ನುಂಟು ಮಾಡುವ ಹಾಗೂ ಸ್ಪರ್ಧಾತ್ಮಕವಾದ ಪರಿಸರವನ್ನು ಹೊಂದಿರಬೇಕಾಗುತ್ತದೆ. ಒಂದು ವೇಳೆ ನನಗೆ ಮನೆ ಇದೆ; ನಾನು ಜಮೀನನ್ನು ಮಾಡಿಕೊಂಡಿದ್ದೇನೆ; ನನ್ನ ಮನೆಯ ಸುತ್ತಮುತ್ತ ಹಸಿವಿನಿಂದ ಕಂಗಾಲಾದ ಜನರು ವಾಸ ಮಾಡುತ್ತಿದ್ದಾರೆ; ಅವರಿಗೆ ಹೊಟ್ಟೆಗಿಲ್ಲ ಎಂದ ಪಕ್ಷದಲ್ಲಿ ಇಂತಹ ಸ್ಥಳದಲ್ಲಿ ನಾನು ಸುರಕ್ಷಿತವಾಗಿ ಬದುಕಬಲ್ಲೆನೆ? ಹಸಿದ ಹೊಟ್ಟೆಯ, ಆಶ್ರಯರಹಿತರಾದ, ಉದ್ಯೋಗವಿಲ್ಲದ, ಉಣ್ಣಲು ಇಲ್ಲದ ಜನರೇ ತುಂಬಿರುವ ಇಂತಹ ವಾತಾವರಣದಲ್ಲಿ ನಿಮ್ಮನ್ನು ನೀವು ಸಂರಕ್ಷಿಸಿಕೊಳ್ಳಬಲ್ಲಿರಾ? ಆಗ ನಿಮಗೆ ರಾಜ್ಯದ ರಕ್ಷಣೆ ಬೇಕಾಗುತ್ತದೆ; ಪೊಲೀಸರ ರಕ್ಷಣೆ ಬೇಕಾಗುತ್ತದೆ; ಪೊಲೀಸರ ರಕ್ಷಣೆಯಿಲ್ಲದಿದ್ದರೆ ನೀವು ಕೊಲೆಯಾಗುತ್ತೀರಿ. ಆಗ ನೀವೂ ಇರುವುದಿಲ್ಲ; ನಿಮ್ಮ ಜಮೀನೂ ಇರುವುದಿಲ್ಲ. ಆದ್ದರಿಂದ ರಾಜ್ಯವು ನಿಮಗೆ ರಕ್ಷಣೆಯನ್ನೀಯಬೇಕೆಂದು ನೀವು ಬಯಸುತ್ತೀರಿ.

ಆದರೆ ಸರ್ಕಾರ ನಿಮಗೆ, ನಿಮ್ಮ ಸ್ವಂತ ಒಳಿತಿಗಾಗಿ, ನಿಮ್ಮ ಸ್ವಂತ ಕ್ಷೇಮಕ್ಕಾಗಿ, ನಿಮ್ಮ ಜಮೀನನ್ನು ಕಡೇ ಪಕ್ಷ ಕೆಲವು ಮಂದಿಗಾದರೂ ವಿತರಣೆಯಾಗುವಂತೆ ನೋಡಿಕೊಳ್ಳಿ ಎಂದು ಸ್ನೇಹದಿಂದ ಆತ್ಮೀಯತೆಯಿಂದ ಕೇಳಿದಾಗ ಸರ್ಕಾರವು ನಿಮ್ಮ ಜಮೀನನ್ನು ಕಿತ್ತುಕೊಳ್ಳುತ್ತದೆ ಎಂದೂ, ಎಲ್ಲ ವಿಧದ ನಿಯಮಗಳನ್ನು, ವಿಧಿವಿಧಾನಗಳನ್ನು, ಕೋರ್ಟಿನ ನಿರ್ಣಯಗಳನ್ನು ಜಾರಿಗೆ ಕೊಡುತ್ತದೆಯೆಂದೂ, ಸರ್ಕಾರವು ಹೀಗೆ ಮಾಡುವುದು ಸಾಧುವಲ್ಲ ಎಂದು ನೀವು ಭಾವಿಸುತ್ತೀರಿ. ಇವೆಲ್ಲ ನಮ್ಮ ಸಮಸ್ಯೆಗಳನ್ನು ಮತ್ತು ನಮ್ಮ ದೇಶದ ಲಕ್ಷಾಂತರ ಜನರ ಮೇಲೆ ಭಯಂಕರ ಪ್ರಭಾವವನ್ನು ಬೀರಿದಂತಹ ನಿರುದ್ಯೋಗ ಮತ್ತು ಅಪೂರ್ಣ ಉದ್ಯೋಗದಂತಹ ಸಮಸ್ಯೆಗಳನ್ನು ಬಗೆಹರಿಸುವಂತಿಲ್ಲ. ಆದ್ದರಿಂದ ಸರ್ಕಾರವು ಈ ರಾಜ್ಯದ ಒಂದು ಲಕ್ಷ ಜನರಿಗಾಗಲಿ ಅಥವಾ ಬೇರಾವುದೇ ರಾಜ್ಯದ ಎರಡು ಲಕ್ಷ ಜನರಿಗಾಗಲಿ ಭೂಮಿಯನ್ನು ವಿತರಣೆ ಮಾಡಬೇಕೆಂಬುದನ್ನೇ ತನ್ನ ಏಕೈಕ ಧ್ಯೇಯವನ್ನಾಗಿ ಇಟ್ಟುಕೊಂಡಿಲ್ಲ; ಆದರೆ ಅದಕ್ಕೂ ಮಿಗಿಲಾಗಿ, ನಿರುದ್ಯೋಗದಂತಹ ಭಯಂಕರ ಸಮಸ್ಯೆಯನ್ನು ಬಗೆಹರಿಸುವುದು ಅಥವಾ ಅದರ ತೀವ್ರತೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುವುದು ನಮ್ಮ ಈ ಸುಧಾರಣೆಯ ಧ್ಯೇಯವಾಗಿದೆ.

(23.01.1973 ರಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಭೂಸುಧಾರಣೆಗೆ ಸಂಬಂಧಿಸಿದ ವಿಚಾರಗೋಷ್ಠಿಯಲ್ಲಿ ಮಾಡಿದ ಭಾಷಣದ ಭಾಗವನ್ನು ಡಾ. ಹಾ.ಮಾ. ನಾಯಕ ಅವರು ಸಂಗ್ರಹಿಸಿದ್ದ ದೇವರಾಜ ಅರಸು ಅವರ ಭಾಷಣಗಳ ಸಂಗ್ರಹ ‘ಕರ್ನಾಟಕಕ್ಕೆ ಶುಭವಾಗಲಿ’ ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ)


ಇದನ್ನೂ ಓದಿ: ಸರ್ಕಾರಿ ಕಚೇರಿಗಳ ಹಲವು ಸಮಸ್ಯೆಗಳನ್ನು ಬಯಲಿಗೆಳೆಯುತ್ತಿರುವ KRS ಪಕ್ಷ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...