ರಾಜ್ಯದ ಪ್ರಮುಖ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ರವಿ ಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಎರಡು ವರ್ಷಗಳ ಹಿಂದೆ ಪ್ರಾರಂಭವಾಗಿರುವ ‘ಕರ್ನಾಟಕ ರಾಷ್ಟ್ರ ಸಮಿತಿ’(KRS) ಪಕ್ಷವು, ‘ಭ್ರಷ್ಟರೇ, ಪವಿತ್ರವಾದ ರಾಜಕಾರಣವನ್ನು ಬಿಟ್ಟು ತೊಲಗಿ’ ಮತ್ತು ‘ ನಾಡಪ್ರೇಮಿಗಳೇ, ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಿ’ ಎಂಬ ಘೋಷವಾಕ್ಯದಡಿ ರಾಜ್ಯವ್ಯಾಪಿ ಅಭಿಯಾನವನ್ನು ನಡೆಸುತ್ತಿದೆ. ಆಗಸ್ಟ್ 8 ರಿಂದ ಪ್ರಾರಂಭವಾಗಿರುವ ಈ ಕಾರ್ಯಕ್ರಮವು ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ, 32 ದಿನಗಳ ಕಾಲ, 3500 ಕಿಲೋಮೀಟರ್ ಪ್ರವಾಸ ಮತ್ತು ಜನಜಾಗೃತಿ ಅಭಿಯಾನದ ಮೂಲಕ ನಡೆಯಲಿದೆ.
ಈಗಾಗಲೆ 12 ದಿನವನ್ನು ಪೂರೈಸಿರುವ ಅಭಿಯಾನವು ಪ್ರಸ್ತುತ ಲಿಂಗಸುಗೂರು ಮತ್ತು ಮಸ್ಕಿಯಲ್ಲಿದ್ದು, ಇಂದು ಅಲ್ಲಿನ ತಾಲೂಕು ಕಚೇರಿಗಳಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ.
ಅಭಿಯಾನದ ಅಂಗವಾಗಿ ಪ್ರತಿ ಜಿಲ್ಲೆಗಳ ಸರ್ಕಾರಿ ಕಚೇರಿಗಳಿಗೆ ತೆರಳಿ ಅಲ್ಲಿ, “ಲಂಚಮುಕ್ತ ಕರ್ನಾಟಕ” ಜಾಗೃತಿ ಅಭಿಯಾನವನ್ನು ನಡೆಸುತ್ತಿದೆ. ಇಷ್ಟೇ ಅಲ್ಲದೆ, ಸ್ಥಳೀಯ ಭ್ರಷ್ಟಾಚಾರಿಗಳ ವಿರುದ್ದ ಜನಜಾಗೃತಿ, ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಸಾರ್ವಜನಿಕರೊಡನೆ ಮತ್ತು ವೈದ್ಯಾಧಿಕಾರಿಗಳೊಡನೆ ಅಲ್ಲಿಯ ಮೂಲಭೂತ ಸೌಲಭ್ಯಗಳ ಕುರಿತು ಚರ್ಚೆ, ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ, ಅಕ್ರಮ ಮದ್ಯ ಮಾರಾಟ ನಿಯಂತ್ರಣಕ್ಕೆ ಆಗ್ರಹ, ಪರಿಸರ ಕಾರ್ಯಕ್ರಮಗಳು, ಪ್ರಾಮಾಣಿಕ ಹೋರಾಟಗಾರ/ರಾಜಕಾರಣಿಗಳ ಭೇಟಿ, ಭ್ರಷ್ಟರನ್ನು ರಾಜಕೀಯದಿಂದ ಹೊರಗಟ್ಟಲು ಪ್ರಾಮಾಣಿಕರು ಚುನಾವಣಾ ರಾಜಕೀಯವನ್ನು ಪ್ರವೇಶಿಸಲು ಉತ್ತೇಜನ, ಪಕ್ಷ ಸೇರ್ಪಡೆ, ಇತ್ಯಾದಿ ಕಾರ್ಯಕ್ರಮಗಳನ್ನು ಪಕ್ಷವು ಈ ಅಭಿಯಾನದ ಅಂಗವಾಗಿ ನಡೆಸುತ್ತಿದೆ.
“ತನ್ನ ನ್ಯಾಯಬದ್ದ ಕೆಲಸಕ್ಕಾಗಿ ಯಾವುದೇ ಸರ್ಕಾರಿ ಕಚೇರಿಗೆ ಭೇಟಿ ಕೊಡುವ ಜನಸಾಮಾನ್ಯನಿಗೆ ಇಂದು ಅಲ್ಲಿ ಗೌರವ ಸಿಗುತ್ತಿಲ್ಲ. ರೈತರೂ ಸೇರಿದಂತೆ ಅತಿ ಹೆಚ್ಚು ಜನರು ಭೇಟಿ ಕೊಡುವ ಕಂದಾಯ ಇಲಾಖೆಯಲ್ಲಿಯಂತೂ ಲಂಚ ಕೊಡದೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಹಾಗೂ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಬೇಕಾದ ಪೊಲೀಸ್ ಮತ್ತು ಅಬಕಾರಿ ಇಲಾಖೆಗಳು ಇಂದು ಸುಲಿಗೆಯ, ವಂಚನೆಯ, ದೌರ್ಜನ್ಯದ ಕೇಂದ್ರಗಳಾಗಿವೆ ಹಾಗೂ ಅಪರಾಧಗಳನ್ನು ಉತ್ತೇಜಿಸುವ ಕೆಲಸವನ್ನು ಮಾಡುತ್ತಿವೆ. ಇದರ ವಿರುದ್ಧ ಕೆಆರ್ಎಸ್ ಪಕ್ಷವು ಅಭಿಯಾನವನ್ನು ನಡೆಸುತ್ತಿದೆ” ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಕಛೇರಿಯಲ್ಲಿನ ಅವ್ಯವಸ್ಥೆಯ ವಿರುದ್ಧ ಪ್ರಶ್ನೆ: KRS ಪಕ್ಷದ ರವಿಕೃಷ್ಣಾ ರೆಡ್ಡಿ ಬಂಧನ
ಈ ಮಧ್ಯೆ, ದಾವಣಗೆರೆಯಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ ಘಟನೆಯು ನಡೆದಿದೆ. ಪಕ್ಷದ ರಾಜ್ಯಾಧ್ಯಕ್ಷರಾದ ರವಿಕೃಷ್ಣಾರೆಡ್ಡಿ ಅವರು ಹೇಳುವಂತೆ, “ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ಆಗುತ್ತಿದ್ದ ತೊಂದರೆಯನ್ನು ವಿಡಿಯೋ ಮಾಡುತ್ತಿದ್ದ KRS ಪಕ್ಷದ ಕಾರ್ಯಕರ್ತರ ಮೇಲೆ ಪೊಲೀಸರು ಹರಿಹಾಯ್ದಿದ್ದಾರೆ. ಅವರ ಫೋನ್ ಕಿತ್ತುಕೊಂಡು, ಅದರಿಂದ ವಿಡಿಯೋ ಡಿಲೀಟ್ ಮಾಡಿ ಖಾಸಗಿತನಕ್ಕೆ ಧಕ್ಕೆ ಉಂಟು ಮಾಡಿ, ನಂತರ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಠಾಣೆಗೂ ಎಳೆದುಕೊಂಡು ಹೋಗಿ, ಅಲ್ಲಿಯೂ ಹೆದರಿಸಿ ಬೆದರಿಸಿ ಬಲಾತ್ಕಾರದಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ.
“ಪೊಲೀಸರ ಈ ನಡೆಯ ಬಗ್ಗೆ ಪ್ರಕರಣ ದಾಖಲಿಸಲು ಠಾಣೆಗೆ ತೆರಳಿದಾಗ ಪಕ್ಷದ ಯುವ ಮುಖಂಡನ್ನು, ‘ಪೊಲೀಸರಿಗೆ ಬ್ಲ್ಯಾಕ್ ಮೇಲ್ ಮಾಡಿದರು’ ಎಂದು ಸುಳ್ಳು ಆರೋಪ ಹೊರಿಸಿ ಠಾಣೆಯಲ್ಲಿಯೇ ಬಂಧಿಸಿ ಏಳು ಜೈಲಿನಲ್ಲಿಡಲಾಗಿತ್ತು. ಇದೀಗ ಅವರು ಜಾಮೀನಿನ ಅಡಿಯಲ್ಲಿ ಬಿಡುಗಡೆಯಾಗಿದ್ದು, ಇಂದಲ್ಲ ನಾಳೆ ದೂರುದಾರ ಪೊಲೀಸನಿಗೆ ಮಂಪರು ಪರೀಕ್ಷೆ ಮಾಡಿಸಿ ಅಮಾಯಕರ ಪ್ರಾಣ ಹಿಂಡುವ ಕಾನೂನು ಭಂಜಕ ಅಪರಾಧಿ ಮನೋಭಾವದ ಪೊಲೀಸರಿಗೆ ಪಕ್ಷವು ಪಾಠ ಕಲಿಸದೆ ಬಿಡುವುದಿಲ್ಲ” ಎಂದು ಫೇಸ್ಬುಕ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಪ್ರಕರಣದಲ್ಲಿ ಪೊಲೀಸರು ಅವರನ್ನು ಕೂಡಾ ವಿಚಾರಣೆಗೆ ಹಾಜರಾಗುವಂತೆ ನೋಟಿಸು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರವಿಕೃಷ್ಣ ರೆಡ್ಡಿ ತಾನು ಆಗಸ್ಟ್ 24 ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದು, “ಪೊಲೀಸರು ಅಂದು ಬಂಧಿಸಿದರೂ ಬಂಧಿಸಬಹುದೇನೋ! ಯಾರಿಗೆ ಗೊತ್ತು? ನಾನೂ ದಾವಣಗೆರೆ ಜೈಲು ನೋಡಿಲ್ಲ. ಈ ರಾಜ್ಯದಲ್ಲಿ ಅದೆಷ್ಟು ಸಾವಿರ, ಲಕ್ಷ ಅಮಾಯಕರು ಪೊಲೀಸರಿಂದ ಅನ್ಯಾಯಕ್ಕೆ ಒಳಗಾಗಿದ್ದಾರೋ! ಎಷ್ಟೆಲ್ಲಾ ನಿರಪರಾಧಿಗಳು ಸುಳ್ಳು ಕೇಸುಗಳಲ್ಲಿ ಜೈಲು ಪಾಲಾಗಿದ್ದಾರೋ!” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಅಭಿಯಾನ ಪ್ರಾರಂಭವಾಗಿ 12 ದಿನಗಳಷ್ಟೇ ಆಗಿದ್ದು ಈಗಾಗಲೆ ಪಕ್ಷದ ಅಭಿಯಾನವು ಸರ್ಕಾರಿ ಕಚೇರಿಗಳಲ್ಲಿನ ಹಲವು ಸಮಸ್ಯೆಗಳನ್ನು ಬಯಲಿಗೆ ಎಳೆದಿದೆ. ಅಭಿಯಾನದ ಎಲ್ಲಾ ದೃಶ್ಯಗಳನ್ನು ಪಕ್ಷವು ಫೇಸ್ಬುಕ್ ಮೂಲಕ ರಾಜ್ಯದ ಜನತೆಗೆ ತಲುಪಿಸುತ್ತಿದೆ. ಅಭಿಯಾನದ ತಂಡವು ಇನ್ನೂ ಇಪ್ಪತ್ತು ದಿನಗಳು ರಾಜ್ಯದಾದ್ಯಂತ ಸಂಚರಿಸಲಿದೆ.
ಇದನ್ನೂ ಓದಿ: ಅಕ್ಕಿಬೇಳೆಯಿಂದ ಪಿಪಿಇ ಕಿಟ್ವರೆಗೂ ಭ್ರಷ್ಟಾಚಾರ ನಡೆಯುತ್ತಿದೆ: ರವಿಕೃಷ್ಣಾರೆಡ್ಡಿ ಸಂದರ್ಶನ