ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ಕುರಿತು ರೈತ ಮುಖಂಡರು ಮತ್ತು ಕೇಂದ್ರ ಸಚಿವರೊಂದಿಗೆ ಇಂದು ನಡೆದ 11 ನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ. 18 ತಿಂಗಳುಗಳ ಕಾಲ ಕೃಷಿ ಕಾಯ್ದೆಗಳನ್ನು ತಡೆಹಿಡಿಯುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಒಪ್ಪಿಕೊಳ್ಳುವಂತೆ ಇಂದಿನ ಸಭೆಯಲ್ಲಿ ಸಚಿವರು ಒತ್ತಾಯಿಸಿದ್ದು, ರೈತರು ಅದನ್ನು ನಿರಾಕರಿಸಿ ಮೂರು ಕಾಯ್ದೆಗಳ ಸಂಪೂರ್ಣ ರದ್ದತಿ ಮತ್ತು ಎಂಎಸ್ಪಿಗಾಗಿ ಹೊಸ ಕಾಯ್ದೆಗಾಗಿ ಆಗ್ರಹಿಸಿದ್ದಾರೆ.
ಸಚಿವರು ನಮ್ಮನ್ನು ಮೂರೂವರೆ ಗಂಟೆಗಳ ಕಾಲ ಕಾಯುವಂತೆ ಮಾಡಿದರು. ಇದು ರೈತರಿಗೆ ಮಾಡಿದ ಅವಮಾನ. ಅವರು ಬಂದ ನಂತರ ಸರ್ಕಾರದ ಕಾಯ್ದೆ ತಡೆಹಿಡಿಯುವ ಪ್ರಸ್ತಾವನೆಯನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿದರು ಮತ್ತು ಸಭೆ ಮುಗಿಸಲು ತರಾತುರಿ ಮಾಡಿದರು. ಇದನ್ನು ನಾವು ಒಪ್ಪಲಿಲ್ಲ. ಹಾಗಾಗಿ ನಮ್ಮ ಆಂದೋಲನವು ಶಾಂತಿಯುತವಾಗಿ ಮುಂದುವರಿಯುತ್ತದೆ ಎಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಎಸ್.ಎಸ್. ಪಂಧರ್ರವರ ಹೇಳಿಕೆ ಉಲ್ಲೇಖಿಸಿ ಎಎನ್ಐ ಟ್ವೀಟ್ ಮಾಡಿದೆ.
The minister made us wait for three & a half hours. This is an insult to farmers. When he came, he asked us to consider the govt's proposal & said that he is ending the process of meetings… The agitation will continue peacefully: SS Pandher, Kisan Mazdoor Sangharsh Committee pic.twitter.com/J1ppwGfHCn
— ANI (@ANI) January 22, 2021
“ಸಭೆಯಲ್ಲಿ ಕೃಷಿ ಕಾನೂನುಗಳ ಅನುಷ್ಠಾನವನ್ನು ಎರಡು ವರ್ಷಗಳ ಕಾಲ ಸ್ಥಗಿತಗೊಳಿಸುವುದಾಗಿ ಸಚಿವರು ತಿಳಿಸಿದರು. ಅಲ್ಲದೇ ಈ ಪ್ರಸ್ತಾಪವನ್ನು ರೈತ ಸಂಘಗಳು ಒಪ್ಪಿಕೊಳ್ಳಲು ಸಿದ್ಧವಾದರೆ ಮಾತ್ರ ಮುಂದಿನ ಸುತ್ತಿನ ಸಭೆ ನಡೆಯಬಹುದು ಎಂದು ಹೇಳಿದರು. ನಾವು ಅದನ್ನು ಒಪ್ಪಿಕೊಂಡಿಲ್ಲ, ಹೋರಾಟ ತೀವ್ರಗೊಳಿಸುತ್ತೇವೆ ಮತ್ತು ನಿಗಧಿಯಂತೆ ಜನವರಿ 26 ರಂದು ಟ್ರಾಕ್ಟರ್ ರ್ಯಾಲಿ ನಡೆಯುತ್ತದೆ” ಎಂದು ಭಾರತೀಯ ಕಿಸಾನ್ ಯೂನಿಯನ್ನ ವಕ್ತಾರ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ಸಭೆಯಲ್ಲಿ ಸರ್ಕಾರದ ಪ್ರತಿನಿಧಿಗಳ ಪ್ರತಿಕ್ರಿಯೆ ಗೌರವಯುತವಾಗಿರಲಿಲ್ಲ. ಹಾಗಾಗಿ ರೈತ ಮುಖಂಡರು ಟ್ರಾಕ್ಟರ್ ರ್ಯಾಲಿ ನಡೆಸುವ ಮತ್ತು ಹೋರಾಟವನ್ನು ತೀವ್ರಗೊಳಿಸುವುದಾಗಿ ಸಭೆಯಲ್ಲಿ ಪುನರುಚ್ಚರಿಸಿದ್ದಾರೆ.
ರೈತ ಒಕ್ಕೂಟಗಳ ಕಡೆಯಿಂದ ‘ರೈತರ ಕಲ್ಯಾಣದ ಕಾಳಜಿ ಇಲ್ಲದೆ ಕಾರಣ’ ಮಾತುಕತೆ ಅನಿರ್ದಿಷ್ಟವಾಗಿತ್ತು. ನಾನು ಅದರ ಬಗ್ಗೆ ದುಃಖಿತನಾಗಿದ್ದೇನೆ. ಸರ್ಕಾರವು ಪರ್ಯಾಯಗಳನ್ನು ಹೇಳಿದರೂ, ಕಾನೂನುಗಳನ್ನು ರದ್ದುಪಡಿಸಬೇಕೆಂದು ರೈತ ಸಂಘಗಳು ಬಯಸುತ್ತವೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಭೆಯ ನಂತರ ತಿಳಿಸಿದ್ದಾರೆ.
ದೆಹಲಿ ಒಳಕ್ಕೆ ಬರುವ ರಿಂಗ್ ರೋಡ್ ನಲ್ಲಿಯೇ ರೈತರ ಟ್ರಾಕ್ಟರ್ ರ್ಯಾಲಿ ನಡೆಯುತ್ತದೆ ಮತ್ತು ಅದು ಕಿಸಾನ್ಘಾಟ್ವರೆಗೂ ಮುಂದುವರೆಯಲಿದೆ ಎಂದು ಕ್ರಾಂತಿಕಾರಿ ಕಿಸಾನ್ ಯೂನಿಯನ್ ಮುಖ್ಯಸ್ಥ ದರ್ಶನ್ ಪಾಲ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಗಣರಾಜ್ಯೋತ್ಸವ ನಡೆಯುವ ಸಮಯದಲ್ಲಿಯೇ ರೈತರ ಟ್ರಾಕ್ಟರ್ ಪೆರೇಡ್ ಸಹ ನಡೆಯಲಿದೆ. ಇಂದಿನ 11 ನೇ ಸುತ್ತಿನ ಮಾತುಕತೆಯ ನಂತರ ದೆಹಲಿ ಪೊಲೀಸ್ ಮುಖ್ಯಸ್ಥರೊಂದಿಗೆ ಟ್ರಾಕ್ಟರ್ ರ್ಯಾಲಿ ವಿಚಾರವಾಗಿ ರೈತ ಮುಖಂಡರು ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ ಎಂದಿದ್ದಾರೆ.
ನಮ್ಮ ಪೆರೇಡ್ ಕೂಡ ಗಣರಾಜ್ಯೋತ್ಸವದ ಪೆರೇಡ್ನಂತೆ ಇರಲಿದೆ. ಹೊಸ ಕೃಷಿ ಕಾಯ್ದೆಗಳ ಅಪಾಯಗಳನ್ನು ಬಿಂಬಿಸುವ ಟ್ಯಾಬ್ಲೊಗಳು, ಭಿತ್ತಿಪತ್ರಗಳನ್ನು ಟ್ಯ್ರಾಕ್ಟರ್ಗಳ ಮೇಲೆ ಪ್ರದರ್ಶಿಸಲಾಗುವುದು. ವಿವಿಧ ರಾಜ್ಯಗಳ ರೈತ ಸಂಘಟನೆಗಳು ಅಲ್ಲಿನ ರೈತರ ಸಂಕಷ್ಟಗಳನ್ನು ಬಿಂಬಿಸುವ ಭಿತ್ತಿಪತ್ರಗಳನ್ನು ಪ್ರದರ್ಶಿಸಲಿವೆ’ ಎಂದು ರೈತ ಸಂಘಟನೆಗಳು ತಿಳಿಸಿವೆ.
ಇದನ್ನೂ ಓದಿ: ದೆಹಲಿಯಾಚೆಯೇ ಟ್ಯ್ರಾಕ್ಟರ್ ರ್ಯಾಲಿ ನಡೆಸಿಯೆಂದ ಪೊಲೀಸರು: ದೆಹಲಿ ಒಳಗೇ ಶಾಂತಿಯುತ ರ್ಯಾಲಿಯೆಂದ ರೈತರು