ಅಲೋಪತಿ ಮತ್ತು ಅಲೋಪತಿ ವೈದ್ಯರ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಹಿನ್ನೆಲೆ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಾಜ್ಯ ಘಟಕವು ನೀಡಿದ ದೂರಿನ ಮೇರೆಗೆ ಬಾಬಾ ರಾಮ್ದೇವ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಛತ್ತೀಸ್ಗಢ ಪೊಲೀಸರು ಗುರುವಾರ ತಿಳಿಸಿದ್ದಾರೆ.
“ಬಾಬಾ ರಾಮದೇವ್ ವಿರುದ್ಧ, ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ದುರು ದಾಖಲಿಸಿದ್ದೇವೆ. ಐಎಂಎ ಮತ್ತು ಛತ್ತೀಸ್ಗಢ ಆಸ್ಪತ್ರೆ ಮಂಡಳಿಯ ಅಧ್ಯಕ್ಷ ಡಾ. ರಾಕೇಶ್ ಗುಪ್ತಾ ನೀಡಿದ ದೂರಿನ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ” ಎಂದು ರಾಯಪುರದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಸಿಎಸ್ಪಿ ನಾಸರ್ ಸಿದ್ದಿಕಿ ಹೇಳಿದ್ದಾರೆ.
ಅಲೋಪತಿ ಮತ್ತು ಅಲೋಪತಿ ವೈದ್ಯರ ಕುರಿತು ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡಿದ್ದ ಕುರಿತು ದೂರು ನೀಡಲಾಗಿದೆ. ದೂರನ್ನು ಪರಿಶೀಲಿಸಿದ ನಂತರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಕುಂಭಮೇಳ: ನಕಲಿ ಕೊರೊನಾ ಪರೀಕ್ಷೆ ನಡೆಸಿದ್ದ ಪ್ರಯೋಗಾಲಯಗಳ ವಿರುದ್ಧ ಪ್ರಕರಣ
ಎಫ್ಐಆರ್ ಅನ್ನು ಐಪಿಸಿ ಸೆಕ್ಷನ್ಸ್ 186 (ಸಾರ್ವಜನಿಕ ಸೇವೆಯಲ್ಲಿರುವುವರನ್ನು ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಸ್ವಯಂಪ್ರೇರಣೆಯಿಂದ ತಡೆಯುವುದು), 188 (ಅಧಿಕೃತವಾಗಿ ಜಾರಿಗೆ ಬಂದಿರುವ ನಿಯಮಗಳನ್ನು ಪಾಲಿಸಲು ನಿರಾಕರಿಸುವುದು), 270 (ಜೀವಕ್ಕೆ ಅಪಾಯಕಾರಿಯಾಗಿರುವ ಸೋಂಕನ್ನು ಹರಡುವ ಸಾಧ್ಯತೆ ), 504 (ಶಾಂತಿಯನ್ನು ಉಲ್ಲಂಘಿಸುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಅವಮಾನ ಮಾಡುವುದು) ಮತ್ತು ವಿಪತ್ತು ನಿರ್ವಹಣಾ ಕಾಯ್ದೆ, 2005 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
“ಅಲೋಪತಿಯ ಬಗ್ಗೆ ‘ದಾರಿತಪ್ಪಿಸುವ’ ಟೀಕೆಗಳಿಗಾಗಿ ಯೋಗ ಗುರು ಬಾಬಾ ರಾಮ್ದೇವ್ ವಿರುದ್ಧ ಪೊಲೀಸ್ ದೂರನ್ನು ಈ ಹಿಂದೆಯೇ ರಾಯಪುರ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು” ಎಂದು ಛತ್ತೀಸ್ಗಢ ಆಸ್ಪತ್ರೆ ಮಂಡಳಿಯ ಅಧ್ಯಕ್ಷ ಡಾ. ರಾಕೇಶ್ ಗುಪ್ತಾ ಹೇಳಿದ್ದಾರೆ.
ತನಗೆ ಯೋಗ ಮತ್ತು ಆಯುರ್ವೇದದ ರಕ್ಷಣೆ ಇರುವುದರಿಂದ ಕೋವಿಡ್ ಲಸಿಕೆ ಅಗತ್ಯವಿಲ್ಲ ಎಂದು ಹೇಳಿದ್ದ ಯೋಗ ಗುರು ರಾಮದೇವ್, ಶೀಘ್ರದಲ್ಲೇ ಕೊರೊನಾ ಲಸಿಕೆ ಪಡೆಯುವುದಾಗಿ ಹೇಳಿದ್ದರು. ಜೊತೆಗೆ ಅಲೋಪತಿ ವೈದ್ಯರನ್ನು “ಭೂಮಿಯ ಮೇಲಿನ ದೇವದೂತರು” ಎಂದು ಹೊಗಳಿ ತಮ್ಮ ಹೇಳಿಕೆಯಿಂದ ಯೂಟರ್ನ್ ಹೊಡೆದಿದ್ದರು.
ಇದನ್ನೂ ಓದಿ: ಅಲೋಪತಿ ವೈದ್ಯರು ದೇವದೂತರು, ಲಸಿಕೆ ಪಡೆಯುವೆ; ಯೂಟರ್ನ್ ಹೊಡೆದ ಬಾಬಾ ರಾಮ್ದೇವ್