Homeಮುಖಪುಟಕರ್ನಾಟಕದಲ್ಲಿ ಸಿಎಂ ಬದಲಾವಣೆ ಚರ್ಚೆ: ಸಿಎಂ ರೇಸ್‌ನಲ್ಲಿ ಹೊಸ ಹೆಸರುಗಳು

ಕರ್ನಾಟಕದಲ್ಲಿ ಸಿಎಂ ಬದಲಾವಣೆ ಚರ್ಚೆ: ಸಿಎಂ ರೇಸ್‌ನಲ್ಲಿ ಹೊಸ ಹೆಸರುಗಳು

ಅನಾರೋಗ್ಯವೋ ಮತ್ತೊಂದೊ ಕಾರಣ ನೀಡಿ ಬೊಮ್ಮಾಯಿಯವರನ್ನು ಕೆಳಗಿಳಿಸಿ ಡೈನಾಮಿಕ್ ಆದವರೊಬ್ಬರನ್ನು ತಂದು ಚುನಾವಣೆಗೆ ಹೋಗಬೇಕು ಎಂಬುದು ಬಿಜೆಪಿಯ ಹಂಬಲ.

- Advertisement -
- Advertisement -

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮುಖ್ಯಮಂತ್ರಿ ಬದಲಾವಣೆ ಎಂಬುದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಉತ್ತರಾಖಂಡ ರಾಜ್ಯದಲ್ಲಿ ಈ ಒಂದೇ ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಗುಜರಾತ್‌ನಲ್ಲಿ ಸಿಎಂ ಬದಲಾವಣೆ ಆಗಿದೆ. ಕರ್ನಾಟಕದಲ್ಲಿಯೂ ಬಿಜೆಪಿ ಆಡಳಿತದ ಎರಡು ವರ್ಷಗಳಲ್ಲಿ ಇಬ್ಬರು ಮುಖ್ಯಮಂತ್ರಿಗಳಾಗಿದ್ದು, ಇನ್ನೂ 6 ತಿಂಗಳು ಕೂಡ ಅಧಿಕಾರ ಪೂರೈಸದ ನೂತನ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಸಹ ಬದಲಿಸಲಾಗುತ್ತದೆ ಎಂಬ ಚರ್ಚೆಗಳು ಆರಂಭವಾಗಿವೆ.

ಇದೆಲ್ಲಾ ಆರಂಭವಾಗಿದ್ದು ಹೀಗೆ.. ನವೆಂಬರ್ 29ರಂದು ಬಾಗಲಕೋಟೆಯ ಬೀಳಗಿಯಲ್ಲಿನ ಸಾರ್ವಜನಿಕ ಕಾರ್ಯಕ್ರಮದಲ್ಲಿ “ನಮ್ಮ ನಾಯಕರಾದ ಮುರುಗೇಶ ನಿರಾಣಿಯವರು ಆದಷ್ಟು ಬೇಗ ಮುಖ್ಯಮಂತ್ರಿಯಾಗುತ್ತಾರೆ” ಎಂದು ಸಚಿವ ಈಶ್ವರಪ್ಪನವರು ಹೇಳಿಕೆ ನೀಡಿದರು. ಆದಾದ ನಂತರ ಡಿಸೆಂಬರ್ 18ರಂದು ಬೆಂಗಳೂರಿನ ಸಾವರ್ಕರ್ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಬಿ.ಎಲ್ ಸಂತೋಷ್, “ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸಿಎಂ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಚರ್ಚೆಯಾಗ್ತಿದೆ. ಕೆಲವು ಪತ್ರಕರ್ತರು ಸಹ ಹಾಗೆಯೇ ಭಾವಿಸಿರಬಹುದು. ಆದರೆ ವೀರ ಸಾವರ್ಕರ್ ಬಗ್ಗೆ ಸಿಎಂ ಮಾತುಗಳನ್ನು ಕೇಳಿದರೆ ಅದ್ಯಾವುದು ಇಲ್ಲ ಎಂಬುದು ಎಲ್ಲರಿಗೂ ಸ್ಪಷ್ಟವಾಗುತ್ತದೆ” ಎಂದು ಹೇಳಿದರು. ಆ ವೇದಿಕೆಯಲ್ಲಿ ಆ ಮಾತುಗಳು ಬೇಕಿರಲಿಲ್ಲ. ಆದರೂ ಉದ್ದೇಶಪೂರ್ವಕವಾಗಿ ಹೇಳಿದರು. ಡಿಸೆಂಬರ್ 19 ಭಾನುವಾರದಂದು ಬೊಮ್ಮಾಯಿ ತಮ್ಮ ತವರು ಕ್ಷೇತ್ರವಾದ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಮಾತಾಡುತ್ತಾ ಭಾವುಕರಾಗಿ, ’ಅಧಿಕಾರದ ಎಲ್ಲಾ ಸ್ಥಾನಗಳು ತಾತ್ಕಾಲಿಕ, ಯಾವುದು ಶಾಶ್ವತವಲ್ಲ’ ಎಂದಿದ್ದಾರೆ. ಆದರೆ ಅದಕ್ಕಿಂತ ಮುಖ್ಯವಾದುದೆಂದರೆ ಅದೇ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಭಾಷಣದ ನಂತರ ಮಾತನಾಡಿದ ಮುರುಗೇಶ ನಿರಾಣಿ, “ಬೊಮ್ಮಾಯಿಯವರು ಕೇಂದ್ರ ಸಂಪುಟದಲ್ಲಿ ಮಂತ್ರಿಯಾಗಲಿದ್ದಾರೆ” ಎಂದರು. ಈ ಎಲ್ಲಾ ಹೇಳಿಕೆಗಳು ಮುಖ್ಯಮಂತ್ರಿ ಬದಲಾವಣೆ ಎಂಬುದು ಕೇವಲ ಊಹಾಪೋಹವಲ್ಲ ಎಂಬುದನ್ನು ಒತ್ತಿ ಹೇಳುತ್ತಿವೆ. ಇದಿಷ್ಟೇ ಅಲ್ಲದೆ, ಶಿಗ್ಗಾಂವಿ ಸಾರ್ವಜನಿಕ ಸಭೆಗೂ ಮುಂಚಿತವಾಗಿ ಬೊಮ್ಮಾಯಿಯವರಿಗೆ ಬಂದ ಕರೆಯ ನಂತರ ಅವರ ಮುಖಚರ್ಯೆ ಬದಲಾಗಿ ಸಪ್ಪಗಾಗಿ ಹೋದರು ಎಂಬ ಗಾಳಿಮಾತುಗಳು ಕೂಡ ಇದಕ್ಕೆ ಪುಷ್ಟಿ ನೀಡುತ್ತಿವೆ. ಹೈಕಮಾಂಡ್‌ನಿಂದ ಬಂದ ಕರೆಯ ಬಗ್ಗೆ ಹಲವು ಬಗೆಯ ರೀತಿಯ ಮಾತುಗಳಿದ್ದರೂ, ಸಿಎಂ ಬದಲಾವಣೆಯ ಬಗ್ಗೆ ವಿವಿಧ ಬಣಗಳು ಆಕ್ಟಿವ್ ಆಗಿರುವುದಂತೂ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕಾರಣವೇನಿರಬಹುದು?

ಈ ಹಿಂದೆ ಯಡಿಯೂರಪ್ಪ ಪಟ್ಟು ಹಿಡಿದ ಆಪರೇಷನ್ ಕಮಲ ನಡೆಸಿ, 75 ವರ್ಷ ದಾಟಿದ್ದರೂ ಸಹ ಪಕ್ಷದ ಅಘೋಷಿತ ಷರತ್ತನ್ನು ಧಿಕ್ಕರಿಸಿ ಮುಖ್ಯಮಂತ್ರಿಯಾದವರು. ಅದು ಬಿಜೆಪಿ ಹೈಕಮಾಂಡ್‌ಗೆ ನುಂಗಲಾರದ ತುತ್ತಾಗಿತ್ತು. ಅವರ ಮೇಲಿದ್ದ ಭ್ರಷ್ಟಾಚಾರದ ಪ್ರಕರಣಗಳು, ಆಡಳಿತದಲ್ಲಿ ಮಗ ವಿಜಯೇಂದ್ರನ ಹಸ್ತಕ್ಷೇಪ ಮತ್ತು ಭ್ರಷ್ಟಾಚಾರದ ಆರೋಪಗಳಿಂದಾಗಿ ಸರ್ಕಾರದ ಕುರಿತು ಜನರಲ್ಲಿ ನೆಗೆಟಿವ್ ಇಮೇಜ್ ಕಟ್ಟಿಕೊಟ್ಟಿದ್ದವು. ಹಾಗಾಗಿ 2023ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ದೊಡ್ಡ ರಿಸ್ಕ್ ತೆಗೆದುಕೊಂಡು ಅಂತೂಇಂತೂ ಅವರನ್ನು ಕೆಳಗಿಳಿಸಲಾಗಿತ್ತು. ಆ ಸಮಯದಲ್ಲಿ ಬೊಮ್ಮಾಯಿಯವರಿಗೆ ಕೆಲ ಸೂಚನೆಗಳನ್ನು ನೀಡಿ ಸರ್ಕಾರದ ಆ ಇಮೇಜ್ ಬದಲಿಸುವ ಟಾಸ್ಕ್‌ನೊಂದಿಗೆ ಅಧಿಕಾರ ನೀಡಲಾಗಿತ್ತು. ಅದು ಕೂಡ ಹೈಕಮಾಂಡ್ ಆಯ್ಕೆಯಾಗಿರದೆ ಯಡಿಯೂರಪ್ಪನವರ ಆಯ್ಕೆಯೇ ಆಗಿತ್ತು ಎಂಬುದು ಕೂಡ ಬಣ್ಣಿಸಲಾಗಿತ್ತು. ಆದರೆ ಹೈಕಮಾಂಡ್ ಬಯಸಿದ ಹೊಸ ಇಮೇಜ್ ಕೊಡುವಲ್ಲಿ ವಿಫಲವಾಗಿರುವ ಬೊಮ್ಮಾಯಿಯವರು ಹಳೇ ಹಾದಿಯಲ್ಲಿಯೆ ನಡೆಯುತ್ತಿದ್ದಾರೆ ಎನ್ನುತ್ತವೆ ಮೂಲಗಳು.

ಚುನಾವಣಾ ಸೋಲುಗಳು

ಇನ್ನು ಬೊಮ್ಮಾಯಿಯವರು ಮುಖ್ಯಮಂತ್ರಿ ಆದ ನಂತರ ನಡೆದ ಎರಡು ವಿಧಾನಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ನಿರೀಕ್ಷಿತ ಸಾಧನೆ ಮಾಡಿಲ್ಲ. ಬೊಮ್ಮಾಯಿ ಅವರ ತವರು ಕ್ಷೇತ್ರ ಹಾನಗಲ್‌ನಲ್ಲಿಯೇ ಬಿಜೆಪಿ ಹೀನಾಯ ಸೋಲು ಅನುಭವಿಸಿತು. ತದನಂತರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಕೇವಲ 11 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಪ್ರತಿಪಕ್ಷ ಕಾಂಗ್ರೆಸ್ ಸಹ 11 ಸ್ಥಾನ ಗೆದ್ದು ಪ್ರಬಲ ಪೈಪೋಟಿ ನೀಡಿತು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ 14 ಸ್ಥಾನ ಗೆದ್ದರೆ, ಪ್ರತಿಪಕ್ಷ ಬಿಜೆಪಿ 06 ಸ್ಥಾನ ಗೆದ್ದಿತ್ತು. ಈಗ ಬಿಜೆಪಿ ಅಧಿಕಾರದಲ್ಲಿರುವಾಗ ಆಡಳಿತ ಮತ್ತು ಪ್ರತಿಪಕ್ಷಗಳೆರಡು ತಲಾ 11 ಸ್ಥಾನ ಗೆದ್ದದ್ದು ಬೊಮ್ಮಾಯಿಯವರ ವಿಫಲತೆಯೆಂದೇ ಹೇಳಲಾಗುತ್ತಿದೆ.

ದ್ವಿಸದಸ್ಯ ಕ್ಷೇತ್ರಗಳಾದ ಬೆಳಗಾವಿಯಲ್ಲಿ ಬಿಜೆಪಿ 13 ಶಾಸಕರು, 3 ಸಂಸದರು ಮತ್ತು ಇಬ್ಬರು ಸಚಿವರಿದ್ದರೂ ಬಿಜೆಪಿ ಹೀನಾಯ ಸೋಲು ಕಂಡಿತು. ಮೈಸೂರಿನಲ್ಲಿ ಬಿಜೆಪಿ ಖಾತೆ ತೆರೆಯಲಾಗಲಿಲ್ಲ. ಬೀದರ್‌ನಲ್ಲಿ ಸೋಲು, ಚಿಕ್ಕಮಗಳೂರಿಲ್ಲಿ ಕೇವಲ 6 ಮತಗಳ ಗೆಲುವು, ಕೊಡಗಿನಲ್ಲಿ ಕಡಿಮೆ ಅಂತರದ ಜಯ ಬಿಜೆಪಿಯನ್ನು ಕಂಗಾಲಾಗಿಸಿದೆ. ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಸರ್ಕಾರದ ಇಮೇಜ್ ಏನೇ ಇದ್ದರೂ ಕನಿಷ್ಟ ಎಲೆಕ್ಷನ್ ಗೆಲ್ಲುತ್ತಿದ್ದದ್ದು ಕೂಡ ಈಗ ಇಲ್ಲವಾಗಿದೆ.

ಬಿಟ್‌ಕಾಯಿನ್ ಹಗರಣ

ಬಿಟ್‌ಕಾಯಿನ್ ಹಗರಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರ ಹೆಸರು ಆಗಾಗ ಕೇಳಿಬಂದಿದೆ. ಪ್ರಿಯಾಂಕ ಖರ್ಗೆಯವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿಯೂ ಬೊಮ್ಮಾಯಿಯವರ ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಅವರಿಗಿಂತಲೂ ಅವರ ಮಗನ ಮೇಲೆ ಹೆಚ್ಚು ಆರೋಪಗಳು ಕೇಳಿಬರುತ್ತಿದ್ದವು. ಆದರೆ ಬಿಟ್‌ಕಾಯಿನ್ ಭ್ರಷ್ಟಾಚಾರದಲ್ಲಿ ಈಗ ನೇರವಾಗಿ ಸಿಎಂ ಬೊಮ್ಮಾಯಿಯವರ ಹೆಸರು ಕೂಡ ಕೇಳಿಬರುತ್ತಿದೆ. ಇದು ಬಿಜೆಪಿ ಅನಿವಾರ್ಯವಾಗಿ ನಾಯಕತ್ವ ಬದಲಾವಣೆಗೆ ಕೈ ಹಾಕುವಂತೆ ಮಾಡಿದೆ ಎನ್ನಲಾಗುತ್ತಿದೆ.

ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಪ್ರಭಾವಿ ನಾಯಕರೇನಲ್ಲ. ಗೆಲ್ಲಿಸಿಕೊಂಡು ಬರುವ ಶಕ್ತಿ ಅವರಿಗಿಲ್ಲ. ಇನ್ನು ಬೊಮ್ಮಾಯಿಯವರು ಈಗಾಗಲೇ ಬಿಜೆಪಿ ಗೆಲ್ಲಿಸಲು ವಿಫಲರಾಗಿರುವ ಹಿನ್ನೆಲೆಯಲ್ಲಿ 2023ರ ಚುನಾವಣೆಗೆ ಇವರಿಬ್ಬರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವುದು ಬೇಡ ಎಂದು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗುತ್ತಿದೆ. ಕಟೀಲ್ ಅವರು ಕೆಲವು ತಿಂಗಳುಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಇರುವುದು ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವರ ಬದಲಾವಣೆಯೂ ನಿಶ್ಚಿತ ಎನ್ನಲಾಗುತ್ತಿದೆ.

ಸಿಎಂ ರೇಸ್‌ಗೆ ಮತ್ತೊಂದು ಹೆಸರು ಸೇರ್ಪಡೆ

ಮುಖ್ಯಮಂತ್ರಿ ಬದಲಾವಣೆ ಚರ್ಚೆ ಆರಂಭವಾದೊಡನೆ ಎಲ್ಲರ ಪ್ರಶ್ನೆ ಮುಂದಿನ ಸಿಎಂ ಯಾರಾಗಬಹುದು ಎನ್ನುವುದಾಗಿದೆ. ಈ ಹಿಂದೆ ಯಡಿಯೂರಪ್ಪನವರನ್ನು ಕೆಳಗಿಳಿಸಿದಾಗ ಜೋರಾಗಿ ಕೇಳಿಬಂದ ಹೆಸರು ಮುರುಗೇಶ ನಿರಾಣಿ. ಸಿಎಂ ರೇಸ್‌ನ ಅಂತಿಮ ಹಂತದವರೆಗೂ ಅವರಿದ್ದರು. ಬಿಜೆಪಿಯ ವರಿಷ್ಠರನ್ನೆಲ್ಲಾ ಭೇಟಿಯಾಗಿದ್ದರು. ಆದರೂ ಅವರಿಗೆ ಅಧಿಕಾರ ದಕ್ಕಿರಲಿಲ್ಲ. ಈ ಬಾರಿ ಪಡೆದೇ ತೀರುವುದಾಗಿ ಪಣ ತೊಟ್ಟಿದ್ದಾರೆ. ಪ್ರಬಲ ಲಿಂಗಾಯಿತ ಮಠಗಳ ಬೆಂಬಲ ಅವರಿಗಿದೆ.

ಶೋಭಾ ಕರಂದ್ಲಾಜೆ ಎಂಟ್ರಿ

ಇದು ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿರುವ ಹೆಸರಾಗಿದೆ. ಶೋಭಾರವರು ಸಿಎಂ ಆದರೆ ಯಡಿಯೂರಪ್ಪನವರ ಸಮ್ಮತಿ ಇದ್ದೆ ಇರುತ್ತದೆ, ಲಿಂಗಾಯಿತರಲ್ಲದವರು ಸಿಎಂ ಆಗುವುದರಿಂದ ಒಕ್ಕಲಿಗ ಸೇರಿ ಇತರ ಹಿಂದುಳಿದ ಮತಗಳ ಮೇಲೆ ಕಣ್ಣಿಡುವುದರ ಜೊತೆಗೆ ಲಿಂಗಾಯಿತ ಸರ್ಕಾರ ಎಂಬ ಆರೋಪದಿಂದ ಹೊರಬಂದು ಹಳೇ ಮೈಸೂರು ಪ್ರಾಂತ್ಯದಲ್ಲಿ ಪಕ್ಷದ ಪ್ರಾಬಲ್ಯವನ್ನು ಹೆಚ್ಚಿಸಬಹುದು ಎಂಬುದು ಪಕ್ಷದ ಲೆಕ್ಕಾಚಾರ. ಕರ್ನಾಟಕದ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಅಡ್ವಂಟೇಜ್ ಪಡೆದುಕೊಳ್ಳುವುದರ ಜೊತೆಗೆ ಬೊಮ್ಮಾಯಿಯಷ್ಟು ಪೇಲವ ಅಲ್ಲದ ಶೋಭಾರವರು ಡೈನಾಮಿಕ್ ಆಗಿದ್ದು ಪಕ್ಷಕ್ಕೆ ಹೊಸ ಇಮೇಜ್ ತರಬಲ್ಲರು ಎಂಬ ಆಸೆ ಬಿಜೆಪಿಯದು. ಜೊತೆಗೆ ಹಿಂದುತ್ವದ ಫೈರ್‌ಬ್ರಾಂಡ್ ಆಗಿಯೂ ಶೋಭಾ ಕೆಲಸ ಮಾಡಬಲ್ಲರು ಎಂಬುದು ಅವರ ಹೆಸರು ಮುನ್ನಲೆಗೆ ಬರಲು ಕಾರಣವಾಗಿದೆ. ಅಲ್ಲದೆ ಶೋಭಾ ಕರಂದ್ಲಾಜೆಯವರು ಸದ್ಯಕ್ಕೆ ಯಡಿಯೂರಪ್ಪ ಬಣದಲ್ಲಿ ಮಾತ್ರ ಗುರುತಿಸಿಕೊಂಡವರಲ್ಲ. ಬಿ.ಎಲ್ ಸಂತೋಷ್ ಸೇರಿದಂತೆ ಇತರರಿಗೂ ಹತ್ತಿರವಾಗಿರುವ ಅವರು ಕೇಂದ್ರ ಮಂತ್ರಿಯಾದರಲ್ಲದೆ ಉತ್ತರ ಪ್ರದೇಶ ಚುನಾವಣೆಯ ಒಂದಿಷ್ಟು ಜವಾಬ್ದಾರಿ ಸಹ ಹೊತ್ತಿದ್ದಾರೆ.

ಇದಲ್ಲದೆ ಈ ಹಿಂದೆ ಕೇಳಿಬಂದಂತೆ ಸಿ.ಟಿ ರವಿ, ಅಶ್ವಥ್ ನಾರಾಯಣ ಮತ್ತು ಜಗದೀಶ್ ಶೆಟ್ಟರ್‌ರವರು ಹೆಸರುಗಳು ಸಿಎಂ ರೇಸ್‌ನಲ್ಲಿವೆ.

ಬಿಜೆಪಿಯ ದೂರಾಲೋಚನೆಯೇನು?

ಯಾವುದೇ ರಾಜ್ಯದಲ್ಲಿ ಮಾಸ್ ಲೀಡರ್ ಆಗಿರುವವರು ಸಿಎಂ ಆಗುವುದು ಬಿಜೆಪಿಗೆ ಬೇಕಾಗಿಲ್ಲ, ಹೈಕಮಾಂಡ್ ಹೇಳಿದಂತೆ ಕೇಳುವವರು ಬೇಕು. ಇದನ್ನು ಯಡಿಯೂರಪ್ಪನವರನ್ನು ಇಳಿಸಿದ ಪ್ರಕರಣ ಸೇರಿದಂತೆ ಮಹಾರಾಷ್ಟ್ರ, ಗುಜರಾತ್‌ನಲ್ಲಿ ಕೂಡ ಕಾಣಬಹುದು. ಹಾಗೆಯೇ ಯಾವುದಾದರೂ ಪ್ರಬಲ ಸಮುದಾಯದ ನಾಯಕರಿಗಿಂತ ಅಲ್ಪಸಂಖ್ಯಾತ ಸಮುದಾಯದ, ಹೈಕಮಾಂಡ್ ಹಂಗಿನಲ್ಲಿರುವವರು ಸಿಎಂ ಇರಬೇಕೆಂದು ಮೋದಿ, ಶಾ ಬಯಸುತ್ತಾರೆ ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ಆ ಮೂಲಕ ಕೇಂದ್ರ ಬಿಜೆಪಿ ನಾಯಕರ ವರ್ಚಸ್ಸು ಮತ್ತು ಹಿಂದುತ್ವದ ಮೂಲಕ ಚುನಾವಣೆಗಳನ್ನು ಗೆಲ್ಲಬೇಕೆಂದು ಬಿಜೆಪಿ ಬಯಸುತ್ತದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಅದನ್ನು ಸಾಧಿಸಲಾಗಿದೆ. ಅದರ ಭಾಗವಾಗಿ ಕರ್ನಾಟಕದಲ್ಲಿಯೂ ಸಹ ಲಿಂಗಾಯತ ಸಮುದಾಯವೊಂದನ್ನೇ ಅವಲಂಬಿಸುವುದನ್ನು ಬಿಟ್ಟು ಹಿಂದುತ್ವದ ಮೂಲಕ ಅಧಿಕಾರಕ್ಕೇರಲು ಅದು ಹವಣಿಸುತ್ತಿದೆ. ಈ ಆರು ತಿಂಗಳಿನಲ್ಲಿ ಮತೀಯ ಗೂಂಡಾಗಿರಿ ಪ್ರಕರಣಗಳು, ಚರ್ಚ್‌ಗಳ ಮೇಲೆ ದಾಳಿಗಳು, ಗೋ ರಕ್ಷಕರ ಹಾವಳಿ ಹೆಚ್ಚಾಗಿರುವುದು ಅದನ್ನೇ ಸೂಚಿಸುತ್ತದೆ. ಮತಾಂತರ ನಿಷೇಧ ಮಸೂದೆಯಂತಹ ವಿವಾದಾತ್ಮಕ ಹಾಗೂ ಸಂವಿಧಾನ ವಿರೋಧಿ ಎನ್ನಲಾಗಿರುವ ಕಾನೂನನ್ನು ಕೂಡ ವಿಧಾನಸಭೆಯಲ್ಲಿ ಮಂಡಿಸಲು ಸರ್ಕಾರ ಸಿದ್ಧವಾಗಿದೆ.

ಹಿಂದೆಯೆಲ್ಲ ನಾಯಕತ್ವ ಬದಲಾವಣೆ ವಿಷಯ ಬಂದಾಗ ಇಲ್ಲಇಲ್ಲ ಎನ್ನುತ್ತಲೇ ಬದಲಾವಣೆ ಮಾಡಿರುವ ಬಿಜೆಪಿ ಸಂಕ್ರಾಂತಿ ನಂತರ ಬೊಮ್ಮಾಯಿಯವರನ್ನು ಇಳಿಸಲು ನೋಡುತ್ತಿತ್ತು. ಅಷ್ಟರಲ್ಲಿ ಐದು ರಾಜ್ಯಗಳಲ್ಲಿ ಚುನಾವಣೆ ಘೋಷಣೆ ಆಗಿರುವುದರಿಂದ ಬಿಜೆಪಿ ಅತ್ತ ಹೆಚ್ಚು ಗಮನ ಹರಿಸಿದೆ. ಚುನಾವಣೆ ಮುಗಿದ ಕೂಡಲೇ ಅನಾರೋಗ್ಯವೋ ಮತ್ತೊಂದೊ ಕಾರಣ ನೀಡಿ ಬೊಮ್ಮಾಯಿಯವರನ್ನು ಕೆಳಗಿಳಿಸಿ ಬಿಜೆಪಿ ರಾಜಕೀಯಕ್ಕೆ ಸಹಾಯ ಮಾಡುವಂತಹ ಡೈನಾಮಿಕ್ ಆದವರೊಬ್ಬರನ್ನು ತಂದು ಒಂದು ವರ್ಷದ ನಂತರ ಚುನಾವಣೆಗೆ ಹೋಗಬೇಕು ಎಂಬುದು ಬಿಜೆಪಿಯ ಹಂಬಲ. ಇದರಲ್ಲಿ ಬಿಜೆಪಿ ಯಶಸ್ವಿಯಾಗಲಿದೆಯೇ? ಇಲ್ಲ ಇದು ಬಿಜೆಪಿಗೆ ತಿರುಗುಬಾಣವಾಗಲಿದೆಯೇ?

  • ಮುತ್ತುರಾಜು

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ಚರ್ಚೆ: ಅಧಿಕಾರ ಶಾಶ್ವತವಲ್ಲ ಎಂದ ಬಸವರಾಜ ಬೊಮ್ಮಾಯಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....