Homeಕರ್ನಾಟಕಮಂಗಳೂರಿನಲ್ಲಿ ಕೋಮು ಪ್ರಚೋದನೆ: ಚೈತ್ರ ಕುಂದಾಪುರ ವಿರುದ್ದ ದೂರು ದಾಖಲು

ಮಂಗಳೂರಿನಲ್ಲಿ ಕೋಮು ಪ್ರಚೋದನೆ: ಚೈತ್ರ ಕುಂದಾಪುರ ವಿರುದ್ದ ದೂರು ದಾಖಲು

ದೈವಗಳ ಕೈಯ್ಯಲ್ಲಿ ಇರುವುದು ‘ಸುರಿಯ’ ಹೊರತು, ತಲವಾರು ಅಲ್ಲ, ತಲವಾರು ಹಿಡಿಯುವುದು ರೌಡಿಗಳು ಮತ್ತು ದುಷ್ಟರು ಎಂದು ದೂರು ನೀಡಿರುವ ಚಿತ್ತರಂಜನ್‌ ಅವರು ಹೇಳಿದ್ದಾರೆ

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನಲ್ಲಿ ಬಿಜೆಪಿ ಬೆಂಬಲಿತ ಸಂಘಟನೆಯಾದ ಭಜರಂಗದಳ ಮತ್ತು ದುರ್ಗಾವಾಹಿನಿ ಹಮ್ಮಿಕೊಂಡಿದ್ದ ಸಮಾವೇಶವೊಂದರಲ್ಲಿ, ಪ್ರಚೋದನಕಾರಿ ಮತ್ತು ಅಶ್ಲೀಲ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಚೈತ್ರ ಕುಂದಾಪುರ ಎಂಬವರ ಮೇಲೆ ಬುಧವಾರ ಸುರತ್ಕಲ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳವಾರ ನಡೆದ ಸಮಾವೇಶದಲ್ಲಿ ಚೈತ್ರ ಅವರು ಮುಸ್ಲಿಂ ಮಹಿಳೆಯರನ್ನು ಮತ್ತು ತುಳುನಾಡಿನ ದೈವಗಳಾದ ಕೋಟಿಚೆನ್ನಯ್ಯ ಅವರನ್ನು ಕೆಟ್ಟದಾಗಿ ಉದಾಹರಿಸಿ ಕೋಮುಗಲಭೆಗೆ ಪ್ರಚೋದಿಸಿದ್ದರು. ಇದರ ವಿರುದ್ದ ರಾಜ್ಯ ಕಾಂಗ್ರೆಸ್ ಸಂಯೋಜಕರಾದ ಬೊಂಡಾಲ ಚಿತ್ತರಂಜನ್‌ ಶೆಟ್ಟಿ ಅವರು ಸುರತ್ಕಲ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಚೈತ್ರ ಮತ್ತು ಕಾರ್ಯಕ್ರಮವನ್ನು ಸಂಘಟಿಸಿದವರನ್ನು ಬಂಧಿಸಬೇಕು ಎಂದು ದೂರಿನಲ್ಲಿ ವಿನಂತಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ‘ಮಾರಲ್ ಪೊಲೀಸಿಂಗ್’ – ಬಜರಂಗದಳ ಕಾರ್ಯಕರ್ತರ ಬಂಧನ

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಚಿತ್ತರಂಜನ್ ಶೆಟ್ಟಿ ಅವರು, “ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಆದರೆ ಅಲ್ಲಿನ ಇನ್ಸ್‌‌ಪೆಕ್ಟರ್ ಮೊದಲಿಗೆ ದೂರು ಸ್ವೀಕರಿಸಲು ನಿರಾಕರಿಸಿ, ‘ದೂರು ನೀಡುವ ಅವಶ್ಯಕತೆಯಿಲ್ಲ, ಈ ಬಗ್ಗೆ ದೂರು ದಾಖಲಾಗಿದೆ. ಅದೇ ದೂರಿನಲ್ಲಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು. ಆದರೆ ನಾನು ಒತ್ತಾಯ ಮಾಡಿ ದೂರು ದಾಖಲು ಮಾಡಿದ್ದೇನೆ. ಇನ್ನೂ ಎಫ್‌ಐಆರ್‌ ದಾಖಲಿಸಿಲ್ಲ, ನಾಳೆ ಕಮೀಷನ್ ಅವರನ್ನು ಭೇಟಿ ಮಾಡಲಿದ್ದೇನೆ. ನಾನು ಹೋರಾಟವನ್ನು ಮುಂದುವರೆಸಲಿದ್ದು, ಮುಖ್ಯಮಂತ್ರಿ ತನಕ ತೆರಳಲಿದ್ದೇನೆ” ಎಂದು ಹೇಳಿದರು.

“ಸುರತ್ಕಲ್‌‌‌ 20 ವರ್ಷದ ಹಿಂದೆ ಕೋಮು ಗಲಭೆಯಿಂದ ನಲುಗಿತ್ತು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಂಘಪರಿವಾರದವರು ಅದನ್ನು ಇನ್ನೊಮ್ಮೆ ಮರುಕಳಿಸಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ರಾಜಕೀಯ ಲಾಭ ತೆಗೆದುಕೊಂಡು ಇವರು ಇನ್ನೊಮ್ಮೆ ಶಾಸಕ, ಸಚಿವರಾಗಿ ಅಧಿಕಾರ ಹಿಡಿಯುತ್ತಾರೆ. ಆದರೆ ಬಡಪಾಯಿ ಶೂದ್ರರು, ದಲಿತರು ಕತ್ತಿ ಹಿಡಿದುಕೊಂಡು ಜೈಲು ಪಾಲಾಗುತ್ತಾರೆ, ಇದು ಇವರ ಅಜೆಂಡಾ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಭರತ್‌ ಶೆಟ್ಟಿ ಕೂಡಾ ಇದ್ದರು ಎಂಬ ಮಾಹಿತಿಯಿದೆ. ಒಬ್ಬ ಶಾಸಕರಾಗಿ ಇಂತಹ ವಿಷಯಗಳಿಗೆ ಅವರು ಬೆಂಬಲ ಕೊಡುತ್ತಾರೆ ಎಂದರೆ ನಾಚಿಕೆಗೇಡಿನ ಸಂಗತಿ ಎಂದು ಚಿತ್ತರಂಜನ್ ಶೆಟ್ಟಿ ಎಂದು ತಿಳಿಸಿದರು.

“ಕೋಟಿ ಚೆನ್ನಯ್ಯ ಅವರನ್ನು ಕೂಡಾ ಕಾರ್ಯಕ್ರಮದಲ್ಲಿ ಅವಮಾನಿಸಿದ್ದಾರೆ. ದೈವಗಳ ಕೈಯ್ಯಲ್ಲಿ ಇರುವುದು ಸುರಿಯ ಎಂಬ ಆಯುಧವೇ ಹೊರತು, ತಲವಾರು ಅಲ್ಲ. ತಲವಾರು ಹಿಡಿಯುವುದು ರೌಡಿಗಳು, ದುಷ್ಟರು. ತುಳುನಾಡಿನ ಮಹಾಪುರುಷರು ಹೋರಾಡಿದ್ದು ಆಗಿನ ಜಮೀನ್ದಾರಿ ವಿರುದ್ದವೆ ಹೊರತು ಮುಸ್ಲಿಮರ ವಿರುದ್ದ ಅಲ್ಲ. ಆದರೆ ಇವರು ದೈವಗಳ ಕುರಿತು ತಪ್ಪು ಕಲ್ಪನೆಯನ್ನು ಜನರ ತಲೆಗೆ ತುಂಬಿಸಿ ಕೋಮುಗಲಭೆಗೆ ಪ್ರಚೋದಿಸಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದನ್ನೂ ಓದಿ: ಮೋರಲ್‌ ಪೊಲೀಸಿಂಗ್‌‌: ಕರಾವಳಿ ಕರ್ನಾಟಕದಲ್ಲಿ ಆಗುತ್ತಿರುವ ನಷ್ಟವೆಷ್ಟು?

ಚಿತ್ರರಂಜನ್ ಅವರ ದೂರಿನ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಸುರತ್ಕಲ್ ಠಾಣೆಯ ಇನ್ಸ್‌ಪೆಕ್ಟರ್‌ ಚಂದ್ರಪ್ಪ ನಾಯಕ್, “ಮಂಗಳೂರಿಗೆ ನಾಳೆ ರಾಷ್ಟ್ರಪತಿ ಆಗಮಿಸುತ್ತಿರುವುದರಿಂದ ಈಗ ಅದರ ಬಂದೋಬಸ್ತಿನಲ್ಲಿ ಇದ್ದೇನೆ. ದೂರು ನೀಡಿದ್ದಾರೆ, ಇನ್ನೂ ಎಫ್‌ಐಆರ್‌ ಆಗಿಲ್ಲ, ಆಗಬಹುದು. ಠಾಣೆಗೆ ತೆರಳಿ ದೂರಿನ ಬಗ್ಗೆ ಪರಿಶೀಲಿಸುತ್ತೇನೆ” ಎಂದು ತಿಳಿಸಿದರು.

ಚೈತ್ರ ಕುಂದಾಪುರ ಅವರು ಮಂಗಳವಾರ ನಡೆದ ಸಭೆಯಲ್ಲಿ, “70% ದಷ್ಟು ಇರುವ ಹಿಂದೂಗಳು, ಮುಸ್ಲಿಂ ಹೆಣ್ಣು ಮಕ್ಕಳನ್ನು ಮತಾಂತರ ಮಾಡುವುದಕ್ಕೆ ಎರಡು ದಿನ ಸಾಕು. ಭಜರಂಗದಳದ ಕಾರ್ಯಕರ್ತರು ಮುಸ್ಲಿಂ ಹೆಣ್ಣು ಮಕ್ಕಳನ್ನು ಲವ್ ಮಾಡೋಕೆ ಹೊರಟರೆ, ಮುಸ್ಲಿಮರ ಮನೆಯಲ್ಲಿ ಬುರ್ಖಾ ಕಾಣುವುದಿಲ್ಲ. ಪ್ರತೀ ಮನೆಯ ಮುಸ್ಲಿಂ ಹೆಣ್ಣುಮಕ್ಕಳ ಹಣೆಗೆ ಕುಂಕುಮ ಇಟ್ಟು ಕರೆದುಕೊಂಡು ಬರುತ್ತೇವೆ. ನಮಗೆ ತಲವಾರು ಹಿಡಿಯಲು ಕಲಿಸಿದ್ದು ಕೋಟಿ ಚೆನ್ನಯ್ಯ..” ಎಂದು ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದರು. ಜೊತೆಗೆ, ಕಾಂಗ್ರೆಸ್‌ ನಾಯಕರೊಬ್ಬರ ಮಗಳನ್ನು ವೈಯಕ್ತಿವಾಗಿ ನಿಂದಿಸಿದ್ದರು.

ಸುರತ್ಕಲ್‌ನಲ್ಲಿ ಇತ್ತೀಚೆಗೆ, ಕಾರಿನಲ್ಲಿ ಜೊತೆಯಾಗಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳನ್ನು, ಬಿಜೆಪಿ ಬೆಂಬಲಿತ ಸಂಘಟನೆಯಾದ ಬಜರಂಗದಳ ಕಾರ್ಯಕರ್ತರು ತಡೆದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದರು. ಘಟನೆ ವಿರೋಧಿಸಿ ರಾಷ್ಟ್ರಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಐವರನ್ನು ಬಂಧಿಸಲಾಗಿತ್ತು. ಆದರೆ ಅವರಿಗೆ ಠಾಣೆಯಲ್ಲೇ ಜಾಮೀನು ನೀಡಿ ಬಿಡುಗಡೆ ಮಾಡಲಾಗಿತ್ತು. ಇದನ್ನು ಕೂಡಾ ಸಾರ್ವಜನಿಕರು ಪ್ರಶ್ನಿಸಿದ್ದರು. ಆದರೆ ಬಜರಂಗದಳ ಈ ಘಟನೆಯನ್ನು ಬೆಂಬಲಿಸಿ ಮಂಗಳವಾರ ಸಮಾವೇಶವನ್ನು ನಡೆಸಿತ್ತು. ಇದರಲ್ಲಿ ಚೈತ್ರ ಕುಂದಾಪುರ ಅವರು ಭಾಷಣ ಮಾಡಿದ್ದರು.

ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ಮರುಕಳಿಸುತ್ತಿದೆ ಧರ್ಮಾಧಾರಿ ಪೊಲೀಸ್‌ಗಿರಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...