ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯುವುದು ವ್ಯಕ್ತಿಯ ಸ್ಥಾಪಿತ ಹಕ್ಕಲ್ಲ. ಅದು, ಸೇವೆಯಲ್ಲಿ ಇರುವಾಗಲೇ ಮೃತಪಡುವ ನೌಕರನೊಬ್ಬ ಹೊಂದಿರುವ ಸೇವಾ ಷರತ್ತೂ ಅಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ (ನ.13) ಹೇಳಿದೆ.
1997ರಲ್ಲಿ ಮೃತಪಟ್ಟ ಪೊಲೀಸ್ ಕಾನ್ಸ್ಟೇಬಲ್ ಒಬ್ಬರ ಪುತ್ರನಿಗೆ ಅನುಕಂಪ ಆಧಾರಿತ ಉದ್ಯೋಗ ನೀಡಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತಿರಸ್ಕರಿಸುವ ವೇಳೆ, ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ, ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಆಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಮೇಲಿನಂತೆ ತಿಳಿಸಿದೆ.
ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯುವುದು ಯಾವುದೇ ವ್ಯಕ್ತಿಯ ಸ್ಥಾಪಿತ ಹಕ್ಕಲ್ಲ. ನಿಗದಿತ ಕಾಲ ಮಿತಿಯೊಳಗೆ ಇಂತಹ ಉದ್ಯೋಗಕ್ಕೆ ಮನವಿ ಮಾಡಿದರೆ ಪರಿಗಣಿಸಲಾಗುವುದು ಎಂದು ಪೀಠ ಹೇಳಿದೆ.
ನೇಮಕಾತಿ ನೀತಿಗೆ ವಿರುದ್ದವಾಗಿ ಮತ್ತು ಕಾನೂನು ಬಾಹಿರವಾಗಿ ಒಬ್ಬರ ಪರವಾಗಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ಅನುಕಂಪ ಆಧಾರಿತ ನೇಮಕಾತಿಯು, ಮೃತರ ಕುಟುಂಬಕ್ಕೆ ಆ ಸಮಯದಲ್ಲಿ ತುರ್ತು ಆರ್ಥಿಕ ಸಹಾಯ ಮಾಡಲು ಇರುವುದೇ ಹೊರತು, ಅದು ಅವರ ಪರಿಪೂರ್ಣ ಹಕ್ಕಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ : 1997ರಲ್ಲಿ ಜೈ ಪ್ರಕಾಶ್ ಎಂಬ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯದ ವೇಳೆ ಸಾವನ್ನಪ್ಪಿದ್ದರು. ಆಗ ಅವರ ಮಗ ಟಿಂಕು ಕೇವಲ 7 ವರ್ಷದವನಾಗಿದ್ದ. ಪ್ರಕಾಶ್ ಪತ್ನಿ ಅನಕ್ಷರಸ್ಥೆಯಾಗಿದ್ದ ಕಾರಣ, ಅನುಕಂಪದ ಆಧಾರದಲ್ಲಿ ತನಗೆ ಉದ್ಯೋಗ ಕೊಡುವಂತೆ ಅವರು ಅರ್ಜಿ ಸಲ್ಲಿಸಿರಲಿಲ್ಲ. ಬದಲಾಗಿ, ಅಪ್ರಾಪ್ತ ಮಗ ವಯಸ್ಸಿಗೆ ಬಂದಾಗ ಆತನಿಗೆ ಉದ್ಯೋಗ ಕೊಡಿ ಎಂದು ಮನವಿ ಮಾಡಿದ್ದರು.
ಅದರಂತೆ, ಟಿಂಕು ವಯಸ್ಸಿಗೆ ಬಂದ ಮೇಲೆ 2008ರಲ್ಲಿ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ. ಅದನ್ನು ತಿರಸ್ಕರಿಸಿದ್ದ ಅಧಿಕಾರಿಗಳು, ನೌಕರ ಸಾವನ್ನಪ್ಪಿ 3 ವರ್ಷದೊಳಗೆ ಅರ್ಜಿ ಸಲ್ಲಿಸಬಹುದಷ್ಟೇ ಎಂದಿದ್ದರು. ಪಂಜಾಬ್ ಹಾಗೂ ಹರಿಯಾಣ ಸರ್ಕಾರಗಳು ಕೂಡ ಉದ್ಯೋಗ ಕೋರಿದ್ದ ಮನವಿ ತಿರಸ್ಕರಿಸಿತ್ತು. ಹಾಗಾಗಿ, ಕಾನ್ಸ್ಟೇಬಲ್ ಕುಟುಂಬ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಸುಪ್ರೀಂ ಕೋರ್ಟ್ ಅರ್ಜಿ ತಿರಸ್ಕರಿಸಿ, ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.
ಇದನ್ನೂ ಓದಿ : ‘ಸ್ಮಾರಕ ವಶಕ್ಕೆ ಪಡೆಯಲು ಎಷ್ಟು ಧೈರ್ಯ ನಿಮಗೆ?’ | ದೆಹಲಿ ಕಾಲೊನಿ ಅಸೋಸಿಯೇಷನ್ ವಿರುದ್ಧ ಸುಪ್ರೀಂಕೋರ್ಟ್ ಆಕ್ರೋಶ!


