Homeಕರ್ನಾಟಕಈದ್ಗಾ ಮೈದಾನ ವಿವಾದ; ಬದಲಾದ ಚಾಮರಾಜಪೇಟೆಯ ಕಥನ ಭಾರತದ್ದೂ ಹೌದು!

ಈದ್ಗಾ ಮೈದಾನ ವಿವಾದ; ಬದಲಾದ ಚಾಮರಾಜಪೇಟೆಯ ಕಥನ ಭಾರತದ್ದೂ ಹೌದು!

- Advertisement -
- Advertisement -

‘ಚಾಮರಾಜಪೇಟೆಯ ಈದ್ಗಾ ಮೈದಾನ ಮುಸಲ್ಮಾನರಿಗೆ ಮಾತ್ರ ಸೇರಿದ್ದೋ? ನಮಗೂ ಪ್ರಾರ್ಥನೆಗೆ ಅವಕಾಶ ಕೊಡಿ’ ಎಂದು ಕೆಲವು ಹಿಂದುತ್ವ ಸಂಘಟನೆಗಳು ಬಿಬಿಎಂಪಿಗೆ ಕೇಳಿದ ಹಿನ್ನಯಲ್ಲಿ, ಬಿಬಿಎಂಪಿಯ
ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. “ಮೈದಾನ ಬಿಬಿಎಂಪಿಗೆ ಸೇರಿದ್ದು, ಕೋರ್ಟ್ ಆದೇಶದ ಪ್ರಕಾರ ರಂಜಾನ್ ಮತ್ತು ಬಕ್ರೀದ್ ಹಬ್ಬಗಳಲ್ಲಿ ಮುಸಲ್ಮಾನರು ಅಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ” ಎಂದು ಹೇಳಿದ್ದಾರೆ. ಆದರೆ ದಾಖಲೆಗಳ ಪ್ರಕಾರ ಇದು ಬಿಬಿಎಂಪಿಗೆ ಸೇರಿದ ಮೈದಾನವಾಗಿಲ್ಲ. ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಆಡಳಿತಾಧಿಕಾರಿಗಳು ಒಂದು ಕ್ಷುಲ್ಲಕ ವಿಷಯವನ್ನು ಅನಾವಶ್ಯಕವಾಗಿ ಕದಡಿ ರಾಡಿ ಎಬ್ಬಿಸಿರುವ ತಮ್ಮ ಅಧೀನ ಅಧಿಕಾರಿಯ ವಿರುದ್ಧ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಬೇಕು. ಇದು ರಾಜ್ಯಾದ್ಯಂತ ದ್ವೇಷ ಮತ್ತು ಕೋಮುವಾದವನ್ನು ಹರಡುತ್ತಿರುವವರ ಬೇಡಿಕೆಗಳಿಗೆ ಇದು ಪ್ರತಿಕ್ರಿಯೆಯಾಗಿರಬೇಕು.

ನಾನು ಚಾಮರಾಜಪೇಟೆಯಲ್ಲಿ ಬೆಳೆದವನು ಮತ್ತು ಅಲ್ಲಿನ ಬೀದಿಗಳಲ್ಲಿ ಕಲಿತ ಕ್ರಿಕೆಟ್ ಕೌಶಲಗಳನ್ನು ಈದ್ಗಾ ಮೈದಾನದಲ್ಲಿ ಸುಧಾರಿಸಲು ಯತ್ನಿಸಿದವನು. ನಾವು ನಮ್ಮ ಕ್ರಿಕೆಟ್ ಆಟಗಳನ್ನು ಫೋರ್ಟ್ ಹೈಸ್ಕೂಲು ಮತ್ತು ಬೆಂಗಳೂರು ಹೈಸ್ಕೂಲು ಮೈದಾನಗಳಲ್ಲಿ ವಿವಿಧ ತಂಡಗಳ ವಿರುದ್ಧ ಆಡಿದ್ದೇವೆ. ಈದ್ಗಾ ಮೈದಾನವು ಈಗಲೂ ಇರುವಂತೆ, ಈ ಮೈದಾನಗಳು ಕೂಡ ಹಿಂದೆ ಬೇಲಿಯಿಲ್ಲದೆ, ಮುಕ್ತವಾಗಿದ್ದವು. ಅವೆಲ್ಲವೂ ನಡೆದೇ ಹೋಗಬಹುದಾದಷ್ಟು ದೂರದಲ್ಲಿದ್ದವು. ಹೀಗಿದ್ದರೂ, ಅವೆಲ್ಲಾ ಒಂದೊಂದು ಸ್ಥಳೀಯ ತಂಡಗಳ ಜೊತೆಗಿನ ಹೆಮ್ಮೆಯ ಸಂಬಂಧದಿಂದಾಗಿ ವಿಶಿಷ್ಟವಾಗಿದ್ದವು. ಒಂದು ಮೈದಾನದ ತಂಡದ ಎದುರು ಇನ್ನೊಂದು ಮೈದಾನದ ತಂಡದೊಂದಿಗೆ ನಮ್ಮ ಟೆನಿಸ್ ಬಾಲ್ ಕ್ರಿಕೆಟ್ ನಡೆಯುತ್ತಿತ್ತು. ಇವು ಕ್ರಿಕೆಟ್ ಪಾರಮ್ಯಕ್ಕಾಗಿ ನಡೆಯುತ್ತಿದ್ದ ಗಂಭೀರ ಕದನಗಳಾಗಿದ್ದು, ಅತ್ಯಂತ ಉತ್ಸಾಹ ಮತ್ತು ಸಂತೋಷವನ್ನು ನೀಡುವುದು ಮಾತ್ರವಲ್ಲದೆ, ಕೆಲವೊಮ್ಮೆ ಭಾರೀ ಬೇಗುದಿಯನ್ನೂ ಉಂಟುಮಾಡುತ್ತಿದ್ದವು. ಈದ್ಗಾ ಮೈದಾನವು ಸಂಪೂರ್ಣವಾಗಿ ಮುಸ್ಲಿಮರ ಒಂದು ಪ್ರಾರ್ಥನಾ ಸ್ಥಳ ಎಂಬುದರ ಬಗ್ಗೆ ಯಾವತ್ತೂ ಯಾವುದೇ ಗೊಂದಲಗಳಿರಲಿಲ್ಲ. ಈ ವಾಸ್ತವವನ್ನು ಪರಿಶೀಲಿಸುವ ಯಾವುದೇ ಅಗತ್ಯ ನಮಗಿರಲಿಲ್ಲ; ಯಾಕೆಂದರೆ, ಅದು ಮುಸ್ಲಿಮರು ಪ್ರಾರ್ಥನೆ ಮಾಡುವ ಜಾಗ ಎಂದು ಜನರಲ್ಲಿ ವ್ಯಾಪಕ ಗೌರವ ಹೊಂದಿತ್ತು. ಮೂಲೆಯಲ್ಲಿ ಕುರಿ ವ್ಯಾಪಾರ ನಡೆಯುತ್ತಿದ್ದ ವಾರದ ಸಂತೆಯ ಹೊರತಾಗಿಯೂ, ಅದು ಯಾವತ್ತೂ ಸ್ವಚ್ಛವಾಗಿತ್ತು.
ಯಾರೂ, ಯಾವತ್ತೂ ನಮ್ಮನ್ನು ಕ್ರಿಕೆಟ್ ಆಡದಂತೆ ತಡೆಯಲಿಲ್ಲ; ಅದು ಎಲ್ಲರೂ ಕಾಳಜಿವಹಿಸುತ್ತಿದ್ದ ಮತ್ತು ಶುಕ್ರವಾರದ ಪ್ರಾರ್ಥನೆಗಳು ಶಾಂತಿಯುತವಾಗಿ ನಡೆಯುವುದನ್ನು ಖಾತರಿಪಡಿಸುತ್ತಿದ್ದ ಜಾಗವಾಗಿತ್ತು.

ಚಾಮರಾಜಪೇಟೆಯ ಉದ್ದಗಲಕ್ಕೂ ಗೆಳೆಯರ ಭೇಟಿಗೆ ಹೋಗುತ್ತಿದ್ದಾಗ, ಅವರು ಯಾವ ಧರ್ಮ ಅಥವಾ ಜಾತಿಗೆ ಸೇರಿದವರು, ಅವರು ಎಲ್ಲಿಂದ ಬಂದವರು ಎಂಬ ಚಿಂತೆಯನ್ನು ನಾವು ಎಳ್ಳಷ್ಟೂ ಮಾಡುತ್ತಿರಲಿಲ್ಲ. ನಾವು ಒಬ್ಬರು ಇನ್ನೊಬ್ಬರ ಸಹವಾಸವನ್ನು ಸಾಧ್ಯವಿರುವ ಎಲ್ಲಾ ರೀತಿಗಳಲ್ಲಿ ಆನಂದಿಸುತ್ತಿದ್ದೆವು. ಕ್ರಿಕೆಟ್, ಕಾಮಿಕ್ ಪುಸ್ತಕಗಳು ಮತ್ತು ಆಹಾರ ಜೊತೆಸೇರಿಸುವ ಬಹುದೊಡ್ಡ ವಿಷಯಗಳಾಗಿದ್ದವು.

ಶಾಲೆ ಅಥವಾ ಕ್ರಿಕೆಟ್ ನಂತರ ನಾವು ಒಂದೊಂದು ದಿನ ಮುಜಾಹಿದನ ಮನೆಯಲ್ಲಿ ಅದ್ಭುತ ಬಿರಿಯಾನಿಯನ್ನು, ಕಿರಣ್ ಡಿಎಂನಲ್ಲಿ ಬಿಸಿಬಿಸಿಯಾಗಿ ಬಡಿಸುತ್ತಿದ್ದ ಅತ್ಯುತ್ತಮ ಬಿಸಿಬೇಳೆಬಾತನ್ನು ಚೆನ್ನಾಗಿ ಬಾರಿಸುತ್ತಿದ್ದೆವು. ಮಂಜುನಾಥನ ತಾಯಿ ಕೈಯ ಉಪ್ಪಿಟ್ಟನ್ನು ಸವಿಯುವ ಅವಕಾಶವನ್ನು ಯಾವತ್ತೂ ಕಳೆದುಕೊಳ್ಳುತ್ತಿರಲಿಲ್ಲ. ಆಗಾಗ ಭಾನುವಾರದ ಚರ್ಚ್ ಪ್ರಾರ್ಥನೆಯ ನಂತರ, ಯಾವಾಗಲೂ ಸಂಗೀತ ಪ್ರತಿಧ್ವನಿಸುತ್ತಿದ್ದ ದೇವರಾಜನ ಮನೆಯಲ್ಲಿ, ಅಸಾಧಾರಣವಾಗಿ ವರ್ಣಮಯವಾಗಿದ್ದ ನಡುಮನೆಯ ಜಾಗದಲ್ಲಿ ಆಗಾಗ ಜೊತೆ ಸೇರುತ್ತಿದ್ದೆವು. ಅಥವಾ ಕಾಶೀನಾಥ ದೀಕ್ಷಿತನ ವಠಾರದ ಮನೆಯಲ್ಲಿ. ಅವನು ತನ್ನ ಮೃದಂಗ ಪರಿಣತಿಯ ಪ್ರದರ್ಶನ ಮಾಡುವುದನ್ನು ನೋಡುತ್ತಿದ್ದೆವು.

ಹಬ್ಬಗಳು ಬಂದರಂತೂ-ಯಾವ ಹಬ್ಬವಾದರೂ ಸರಿ- ನೆರೆಹೊರೆಯವರು ವಿನಿಮಯ ಮಾಡುತ್ತಿದ್ದ- ಕಡುಬು, ಲಾಡುಗಳು, ಒಬ್ಬಟ್ಟು, ಪೊಂಗಲ್ (ಅದರಲ್ಲೂ ಸಿಹಿ ಪೊಂಗಲ್) ಮುಂತಾದ ತಿಂಡಿಗಳನ್ನು ಆದರದಿಂದ ಸ್ವಾಗತಿಸುತ್ತಿದ್ದೆವು! ಯಾರ ಮನೆಯ ಅಡಿಗೆ ಕೌಶಲ ಉತ್ತಮ ಎಂದು ಚರ್ಚೆ ಮಾಡುತ್ತಿದ್ದೆವು (ನಮ್ಮ ಅಹಂಕಾರ ನೋಡಿ!)

ನನ್ನ ಕುಟುಂಬದ ಸರದಿ ಬಂದಾಗ, ನನ್ನ ಪುಟ್ಟ ತಂಗಿಗೆ ಒಳ್ಳೆಯ ಬಟ್ಟೆ ತೊಡಿಸಿ ದೊಡ್ಡಕ್ಕನ ಜೊತೆ ಅವರಿವರೆನ್ನದೇ ಪ್ರತಿಯೊಬ್ಬರ ಮನೆಗೆ ಭೇಟಿ ನೀಡಿ, ನಾವು ತಡರಾತ್ರಿಯವರೆಗೂ ಕುಳಿತು ತಯಾರಿಸುತ್ತಿದ್ದ ಕ್ರಿಸ್ಮಸ್ ಸಿಹಿತಿಂಡಿಗಳನ್ನು ತುಂಬಿ, ಕಸೂತಿ ಮಾಡಿದ ಬಿಳಿ ವಸ್ತ್ರದಿಂದ ಮುಚ್ಚಿದ ಟ್ರೇಗಳನ್ನು ಹಂಚುತ್ತಿದ್ದೆವು.

ಕ್ರಿಸ್ಮಸ್ ಹತ್ತಿರ ಬರುತ್ತಿದ್ದಂತೆ ಕ್ರೈಸ್ತರು ಮಾತ್ರವಲ್ಲ; ಈ ಸಂತೋಷಾಚರಣೆ ನಡೆಯುತ್ತಿದ್ದ ತಡರಾತ್ರಿಯಲ್ಲಿ ತೆರೆದಿದ್ದ ಎಲ್ಲಾ ಮನೆಗಳಿಗೂ ಹೋಗಿ ಕೆರೋಲ್ (ಸಮೂಹಗಾನ) ಹಾಡುತ್ತಿದ್ದೆವು. ಶಬರಿಮಲೆ ಯಾತ್ರೆಯ ಸಮಯದಲ್ಲಿ ಪ್ರತಿಯೊಬ್ಬರೂ ಅಲ್ಲಿ ಇಲ್ಲಿ ಏಳುತ್ತಿದ್ದ ಚಪ್ಪರಗಳಿಗೆ ಹೋಗಿ ಅಯ್ಯಪ್ಪ ಭಜನೆಗಳಿಗೆ ಸೇರುತ್ತಿದ್ದೆವು.

ಜಾನ್ ನೆಪೋ ಕ್ರೂಸ್ ಮೈಸೂರು ರಸ್ತೆಯಲ್ಲಿ ತನ್ನ ಕುಟುಂಬದ ಜೊತೆ ವಾಸಿಸುತ್ತಿದ್ದ. ಅವನ ಅಕ್ಕ ಮಾಡ್ತಾ ಅತ್ಯುತ್ತಮ ಶಿಕ್ಷಕಿಯಾಗಿದ್ದು, ನಂತರ ಬೆಂಗಳೂರಿನ ಬ್ರಿಯಾಂಡ್ ಸ್ಕ್ವೇರಿನ ಸೆಂಟ್ ಜೋಸೆಫ್ಸ್ ಶಾಲೆಯ ಮುಖ್ಯೋಪಾಧ್ಯಾಯರಾದರು. ನೆಪೋ ಹೆಗಲಲ್ಲೊಂದು ಗಿಟಾರ್ ನೇತುಹಾಕಿ ತನ್ನ ಗಡುಸು ಧ್ವನಿಯಲ್ಲಿ ಒಂದರ ನಂತರ ಇನ್ನೊಂದರಂತೆ ಹಾಡುಗಳನ್ನು ಹಾಡುತ್ತಾ, ನಮಗೆ ಬೀಟಲ್ಸ್ (ಪ್ರಖ್ಯಾತ ಸಂಗೀತ ಗುಂಪು) ಪರಿಚಯಿಸಿ, ಹೇಗೆ ’ಕಲ್ಪನಾ’ ಲೋಕಕ್ಕೆ ಜಾರಬೇಕೆಂದು ಕಲಿಸಿದವನು. ನಾವು ನೆಲದ ಮೇಲೇ ಕುಳಿತು ಕೇಳುತ್ತಿದ್ದೆವು ಮತ್ತು ಕೆಲವೊಮ್ಮೆ ಜೊತೆಗೆ ಗುನುಗುನುಗಿಸುತ್ತಿದ್ದೆವು.

ನೀರೋನ ದೊಡ್ಡಣ್ಣ ನಿಕೋಲಸ್ ಡಿ’ಕ್ರೂಸ್ ನಮಗೆ ಇತಿಹಾಸ ಕಲಿಸಿದರು. ಅವರು ನಮಗೆ ಕಲಿಸಿದ ಮೊದಲ ವಿಷಯ ಎಂದರೆ, ನಾವು ಪಠ್ಯ ಎಂದು ಕರೆಯುತ್ತಿದ್ದ ಕಳಪೆ ಪುಸ್ತಕಗಳನ್ನು ಬದಿಗಿಡಿ ಎಂಬುದು. ಆಗ ಅವರು ಹೇಳುತ್ತಿದ್ದ ಇತಿಹಾಸದ ಕತೆಗಳನ್ನು ನಾವು ತೀರಾ ಗಮನವಿಟ್ಟು ಕೇಳುತ್ತಿದ್ದೆವು. ಚಲನಚಿತ್ರಗಳಂತೆ ಮೂಡುತ್ತಿದ್ದ ಅವರ ವಿವರಗಳಲ್ಲಿ ವಿಶ್ವಯುದ್ಧ, ಅಥವಾ ದೇಶ ವಿಭಜನೆಯ ಭಯಾನಕತೆಗಳು, ಭಗತ್ ಸಿಂಗರ ಶೌರ್ಯ ಮತ್ತು ಸ್ವಾತಂತ್ರ್ಯ ಚಳವಳಿಯ ಹಿರಿಮೆಯನ್ನು ಕಣ್ಣಿಗೆ ಕಟ್ಟಿಕೊಡುತ್ತಿತ್ತು. ಅಕ್ಬರನ ಆಸ್ಥಾನವಿರಲಿ, ಅಶೋಕನ ಯುದ್ಧಗಳೇ ಇರಲಿ, ಅವರು ನಮಗೆ ಹೇಳಲು ಆಯ್ಕೆ ಮಾಡಿದ ಕತೆಯ ಕಾಲಕ್ಕೇ ನೇರವಾಗಿ ನಮ್ಮನ್ನು ರವಾನಿಸುತ್ತಿದ್ದ ಶಿಕ್ಷಕರಾಗಿದ್ದರು ಅವರು.

ವಾರಾಂತ್ಯದಲ್ಲಿ ನಾವು ಈದ್ಗಾ ಮೈದಾನದಿಂದ ಒಂದೇ ಬ್ಲಾಕ್ ದೂರವಿರುವ ನಗರ ಕೇಂದ್ರ ಗ್ರಂಥಾಲಯದಲ್ಲಿ ಕಳೆಯುತ್ತಿದ್ದೆವು. ಇದು ಒಂದು ಉದ್ದವಾದ ಮನೆಯಲ್ಲಿ ಇದ್ದು, ಎಲ್ಲಾ ರೀತಿಯ ಪುಸ್ತಕಗಳಿಂದ ತುಂಬಿದ ಹೊಸಹೊಸ ಕೋಣೆಗಳು ತೆರೆಯುತ್ತಲೇ ಇದ್ದವು. ಇದು ನಮಗೆ ಒಂದು ಪ್ರಪಂಚದ ನಂತರ ಇನ್ನೊಂದು ಪ್ರಪಂಚವನ್ನು ತೆರೆಯುತ್ತಲೇ ಇತ್ತು.

ಇದೇ ಜಾಮರಾಜಪೇಟೆಯಲ್ಲೇ 1970ರ ದಶಕದ ಒಂದು ಬೆಳಗ್ಗೆ ನಾನು ಎದ್ದಾಗ ಕೋಮುಗಲಭೆಯ ಭೀಕರತೆಯನ್ನು ಕಂಡೆ. ಶುಕ್ರವಾರದ ಪ್ರಾರ್ಥನೆಗೆ ಸ್ವಲ್ಪವೇ ಮುಂಚೆ ಯಾರೋ ಈದ್ಗಾ ಮೈದಾನಕ್ಕೆ ಹಂದಿಯ ಮೃತದೇಹವನ್ನು ಎಸೆದಿದ್ದರು ಎಂಬ ವದಂತಿ ಹರಡಿತ್ತು. ಕೆಲವರು ಭಯಂಕರವಾಗಿ ಸತ್ತರು. ಹಲವು ದಿನಗಳ ಕಾಲ ಶಾಲೆಗಳು ಮುಚ್ಚಿದ್ದು, ನಮ್ಮ ಗೆಳೆಯರ ಬಗ್ಗೆ ಚಿಂತಿಸುತ್ತಾ, ಅವರು ಸುರಕ್ಷಿತವಾಗಿರಲೆಂದು ಆಶಿಸುತ್ತಾ ಮನೆಗಳಲ್ಲೇ ಕಳೆದೆವು. ಗಾಳಿಯಲ್ಲಿ ಅಶ್ರುವಾಯುವಿನ ವಾಸನೆ ಸುಳಿದಾಡುತ್ತಿತ್ತು. ಕಣ್ಣುಗಳು ಉರಿಯುತ್ತಾ, ಮೂಗು ಸುರಿಯುತ್ತಾ ಈ ಘಾಟು ವಾಸನೆಯನ್ನು ಸಹಿಸುವುದು ಅನಿವಾರ್ಯವಾಗಿತ್ತು. ಅದು ಹೇಗೋ ನಾವು ಈರುಳ್ಳಿಗಳನ್ನು ಮೂಸುವುದರಿಂದ ಉಸಿರಾಟ ಸುಲಭವಾಗುವುದು ಎಂದು ನಂಬಿದ್ದೆವು.

ಉಬ್ಬಸದಿಂದ ನರಳುತ್ತಿದ್ದ ನನ್ನ ಸಹೋದರ, ಪೊಲೀಸರು ಈ ಗಲಭೆಗಳನ್ನು ತಣಿಸಲು ಅಶ್ರುವಾಯು ಸಿಡಿಸಿದಾಗಲೆಲ್ಲಾ ನಿಜವಾಗಿಯೂ ತುಂಬಾ ಕಷ್ಟಪಟ್ಟ. ಸಾಕಷ್ಟು ಪ್ರಮಾಣದ ಅಸ್ತಾಲಿನ್ ಔಷಧಿ ಇರಲೆಂದು ನಾವು ಆಶಿಸುತ್ತಿದ್ದೆವು. ಅದನ್ನು ಕರ್ಫ್ಯೂ ನಡುವೆ ಸಣ್ಣಗೆ ತೆರೆದ ಮೆಡಿಕಲ್ ಶಾಪಿನ ಬಾಗಿಲ ಸಂದಿಯಿಂದ ಕೊಡುತ್ತಿದ್ದರು. ಅಲ್ಲಿಗೆ ಬಾಣದಂತೆ ಓಡಿ, ಪೊಲೀಸ್ ಲಾಠಿಯ ಗೌರವಕ್ಕೆ ಪಾತ್ರರಾಗದೆ ಮರಳಿ ಬರುವುದು ಒಂದು ಕಲೆಯಾಗಿತ್ತು.

ಈ ಹತ್ಯಾಕಾಂಡ ನಿಂತಾಗ, ಹಲವಾರು ಮುಸ್ಲಿಂ ಮಾಲಕತ್ವದ ಅಂಗಡಿಗಳನ್ನು- ಮುಖ್ಯವಾಗಿ ನಾವು ಹಾಸಿಗೆಯಂಗಡಿಗಳೆಂದು ಕರೆಯುತ್ತಿದ್ದ ಅಂಗಡಿಗಳನ್ನು ಗುರಿಮಾಡಿ ಬೆಂಕಿ ಹಚ್ಚಿರುವುದನ್ನು ಕಂಡೆವು. ಇಲ್ಲಿ ಹಾಸಿಗೆಗಳನ್ನು ಮತ್ತು ಪೀಠೋಪಕರಣಗಳನ್ನು ತಯಾರಿಸುತ್ತಿದ್ದ ಹಲವಾರು ಅಂಗಡಿಗಳಿದ್ದವು. ಅವೆಲ್ಲವೂ ನಾಶವಾಗಿದ್ದವು. ಆ ಅಂಗಡಿ ಮಾಲೀಕರು ಪರಿಚಿತ ಮುಖಗಳಾಗಿದ್ದು, ಬೆಂಕಿ ಹೊಗೆಯಾಡುತ್ತಿದ್ದ ಅವಶೇಷಗಳ ನಡುವೆ ಬೆದಕುತ್ತಾ, ಉಳಿದಿರಬಹುದಾದದ್ದನ್ನು ಹುಡುಕುವ ದೃಶ್ಯ ದುಃಖಮಯವಾಗಿತ್ತು.

ಆ ಬಳಿಕ ಸಾಮಾನ್ಯ ಸ್ಥಿತಿ ಮರಳಲಿಲ್ಲ. ನಾವು ಮರಳಿದ್ದು ಹೊಸ ಸಾಮಾನ್ಯ ಸ್ಥಿತಿಗೆ ಮಾತ್ರವೇ! ಚಾಮರಾಜಪೇಟೆ ಮತ್ತು ಶಂಕರಪುರಂ ಪ್ರದೇಶಗಳಲ್ಲೇ ಇದ್ದ ಆರೆಸ್ಸೆಸ್ ಕಚೇರಿಗಳು ಸಂಶಯಾಸ್ಪದ ಚಟುವಟಿಕೆಗಳಿಂದ ಗಿಜಿಗುಡುತ್ತಿದ್ದವು. ಅದು ತುರ್ತುಪರಿಸ್ಥಿತಿಯ ಸಂದರ್ಭವಾಗಿದ್ದು, ನಾವು ಅವರ ಮುದ್ರಣಾಲಯಗಳ ಸಂದಿಗಳಲ್ಲಿ ಇಣುಕಿ ಒಳಗೆ ಏನು ನಡೆಯುತ್ತಿದೆ ಎಂದು ಅಚ್ಚರಿಪಡುತ್ತಿದ್ದೆವು. ಒಮ್ಮೆ ಏನಾಯಿತೆಂದರೆ, ಒಂದು ಮುದ್ರಣಾಲಯದ ಒಳಗಿದ್ದ ಕಾಗದವೆಲ್ಲ ಹೊತ್ತಿ ಉರಿಯಿತು. ನಾವು ಹತ್ತಿರದ ಕಟ್ಟಡಗಳ ಮೇಲಿನಿಂದ ನೋಡುತ್ತಿದ್ದಂತೆ ಮೇಲಿನ ಅಸ್ಬೆಸ್ಟೋಸ್ ಛಾವಣಿಯು ಒಳಗಿನ ದ್ವೇಷ ತುಂಬಿದ ಬೆಂಕಿಯ ಒತ್ತಡದಿಂದ ಸ್ಫೋಟಿಸಿ ಹಾರಿಹೋಯಿತು.

ಈ ಬಾರಿ ನಾವು ಎಂತೆಂತಹ ದ್ವೇಷ ತುಂಬಿದ ಸುಳ್ಳು ಕಥಾನಕಗಳನ್ನು ಹಾದಿಬೀದಿಗಳಲ್ಲಿ ಕೇಳಿದೆವು! (ಪ್ರಪಂಚದಾದ್ಯಂತ ಮುಸ್ಲಿಮರ ಕೋಪವನ್ನು, ಅದರಲ್ಲೂ ಧರ್ಮಾಧಾರಿತ ಮುಸ್ಲಿಂ ರಾಷ್ಟ್ರಗಳನ್ನು ಸಮಾಧಾನಪಡಿಸಲು ಭಾರತವು ಹೆಣಗಬೇಕಾಯಿತು.) ಇಂದಿರಾ ನೇತೃತ್ವದ ಕಾಂಗ್ರೆಸ್ ಮತ್ತೆ ಮರುಜೀವ ಪಡೆದು ಬಹುತೇಕ ಎಲ್ಲಾ ಕಡೆ ಅಧಿಕಾರಕ್ಕೆ ಬಂದ ತಕ್ಷಣವೇ ಈ ವಿದ್ಯಮಾನಗಳೆಲ್ಲವೂ ತಣ್ಣಗಾದವು. ಪತ್ರಿಕೆಗಳ ಮುಖಪುಟಗಳೆಲ್ಲಾ ಖಾಲಿಸ್ತಾನ ಚಳವಳಿ, ಪಂಜಾಬಿನ ಹತ್ಯೆಗಳು, ಸ್ವಲ್ಪ ಮಹಾಭಾರತದ ಅಣ್ಣತಮ್ಮಂದಿರ ಕಾಳಗದಂತೆಯೇ ಕಾಣುವ ಇರಾನ್-ಇರಾಕ್ ನಡುವಿನ ಎಂಟು ವರ್ಷಗಳ ಯುದ್ಧದ ಸುದ್ದಿಗಳೇ ತುಂಬಿರುತ್ತಿದ್ದ ಕಾಲವೂ ಅದಾಗಿತ್ತು.

ಎಂಭತ್ತರ ದಶಕದ ಆರಂಭದಲ್ಲಿ ನನ್ನ ಕುಟುಂಬವು ಚಾಮರಾಜಪೇಟೆಯಿಂದ ದೂರ ಹೋಯಿತು. ನಾವೀಗ ಬೆಂಗಳೂರಿನ ದಕ್ಷಿಣದ ಅಂಚಿನಲ್ಲಿ, ಈಗ ತುಂಬಿತುಳುಕುತ್ತಿರುವ ಬನಶಂಕರಿಯಲ್ಲಿ- ಒಂದು ಡಜನ್‌ಗಿಂತ ಸ್ವಲ್ಪ ಹೆಚ್ಚು ಕುಟುಂಬಗಳ ನಡುವೆ ವಾಸಿಸಲು ಆರಂಭಿಸಿದಾಗ ನಾವು ಚಾಮರಾಜಪೇಟೆಯ ಗೆಳೆಯರನ್ನೆಲ್ಲಾ ತುಂಬಾ ನೆನಪು ಮಾಡಿಕೊಳ್ಳುತ್ತಿದ್ದೆವು.

ನಾನು ಬೆಳೆದ ನೆರೆಹೊರೆಗಳಿಗೆ ಮತ್ತೆ ಭೇಟಿ ನೀಡುವುದು ಒಂದು ರೀತಿಯಲ್ಲಿ ಸ್ವಲ್ಪ ಭ್ರಾಮಕ ಅನುಭವವಾಗಿತ್ತು. ಅದು ದಟ್ಟಣೆಯಿಂದ ಕಿಕ್ಕಿರಿದಂತೆ ಕಾಣುತ್ತಿತ್ತು. ಒಳಗೊಳಗೆ ಕೋಮು ಉದ್ವಿಗ್ನತೆ ಧುಮುಗುಡುತ್ತಿದ್ದು, ಯಾವಾಗ ಬೇಕಾದರೂ ಮೇಲಕ್ಕೆ ಬರಬಹುದು ಎಂಬಂತೆ ಕಾಣುತ್ತಿತ್ತು.

ಎಲ್.ಕೆ. ಆಡ್ವಾಣಿ, ಅಶೋಕ್ ಸಿಂಘಾಲ್ ಮತ್ತು ಮುರಳಿ ಮನೋಹರ ಜೋಶಿಯಂತ ನಾಯಕರು ದೇಶದಾದ್ಯಂತ ಸುತ್ತಾಡುತ್ತಾ ಬಾಬ್ರಿ ಮಸೀದಿಯ ನಾಶಕ್ಕೆ ಪ್ರಚೋದಿಸುತ್ತಾ, ಅದರ ಕೆಳಗೆಯೇ ರಾಮ ಜನ್ಮಸ್ಥಾನ ಇದೆಯೆಂದೂ, ಅದೇ ಜಾಗದಲ್ಲಿ ರಾಮ ಮಂದಿರ ಕಟ್ಟುವೆವು ಎಂದು ಹೇಳುತ್ತಿರುವ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಪರಿಷತ್ ಎಗ್ಗಿಲ್ಲದೇ ಸಕ್ರಿಯವಾಗಿತ್ತು.

ನಾನು ಮತ್ತು ನನ್ನ ಗೆಳೆಯರು ಬೆಳೆಯುತ್ತಿದ್ದೆವು ಮತ್ತು ಬೇರೆಯೇ ರೀತಿಯಲ್ಲಿ ಕೇಳುವ ಹೊಸ ಭಾಷೆಯನ್ನು ಮಾತಾಡಲು ಆರಂಭಿಸಿದ್ದೆವು. ಬುದ್ಧಿವಂತ ಮತ್ತು ಪ್ರೀತಿಪಾತ್ರ ಗೆಳೆಯರು “CAN KAM” – Can Kill All Muslims. (ಎಲ್ಲಾ ಮುಸ್ಲಿಮರನ್ನು ಕೊಲ್ಲಬಹುದು) ಇತ್ಯಾದಿ ಅಭಿವ್ಯಕ್ತಿಗಳನ್ನು ಗಿಳಿಗಳಂತೆ ಮಾತಾಡುವುದು ವಿಕ್ಷಿಪ್ತವಾಗಿ ಕಾಣುತ್ತಿತ್ತು. ನಮ್ಮಲ್ಲಿ ಕೆಲವು ಗೆಳೆಯರು ಇಂತಹ ಮಾತುಗಳನ್ನು ಹೇಳುವುದನ್ನು ಕೇಳಿ ಹೇವರಿಸುತ್ತಿದ್ದೆವು. ನಾವು ತಡರಾತ್ರಿಯವರೆಗೂ ಆ ರಾಜಕಾರಣಿ ಅಥವಾ ಈ ರಾಜಕಾರಣಿ ನೀಡಿದ ಹೇಳಿಕೆಗಳ ಗುಣದೋಷಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು.

ನಮ್ಮಲ್ಲಿ ಕೆಲವು ಗೆಳೆಯರು, ಮುಖ್ಯವಾಗಿ ಜಯನಗರದ ವಿಜಯ ಕಾಲೇಜಿನಲ್ಲಿ ಕಲಿಯುತ್ತಿದ್ದವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೇರಿದಾಗ, ನಮ್ಮ ಜೀವನದ ವಿನ್ಯಾಸವೇ ಬೇರೆಯಾಯಿತು. ನಾವಿನ್ನೂ ಜೊತೆಯಾಗಿಯೇ ತಿರುಗಾಡುತ್ತಿದ್ದುದರಿಂದ ಅವರ ಗುರುವಾಗಿದ್ದ ಪ್ರೊಫೆಸರ್ ಕೆ. ಎಂ. ಶ್ರೀಧರ್ ಎಂಬವರನ್ನು ಭೇಟಿಯಾಗುವ ಅವಕಾಶ ನನಗೂ ಸಿಕ್ಕಿತ್ತು. (ಇತ್ತೀಚೆಗೆ ಹೊಸ ಶಿಕ್ಷಣ ನೀತಿಯನ್ನು ರೂಪಿಸಿದವರಲ್ಲಿ ಆವರೂ ಒಬ್ಬರು.) ಅದು ಹೇಗೋ ಅವರಿಗೆ ನಾನು ಮೆಚ್ಚಿಗೆಯಾಗಿದ್ದುದರಿಂದ ಆವರು ನನ್ನನ್ನು ಅವರ ಕೆಲವು ಸಭೆಗಳಿಗೆ ಸೇರಿಸಿಕೊಳ್ಳುತ್ತಿದ್ದರು. ನನಗೆ ತಿಳಿಯುವ ಮೊದಲೇ ಕೆಲವು ತಿಂಗಳುಗಳು ಕಳೆದುಹೋಗಿದ್ದವು.

ರಾಷ್ಟ್ರ ಕಟ್ಟುವ ವಿಷಯ, ದೇಶಪ್ರೇಮ, ಸಾಮಾಜಿಕ ಸವಾಲುಗಳನ್ನು ಎದುರಿಸಲು ಶಿಸ್ತು ಮತ್ತು ತರಬೇತಿ ಇತ್ಯಾದಿ ಈ ಸಭೆಗಳಲ್ಲಿ ನಿಜಕ್ಕೂ ಆಸಕ್ತಿಕರ ವಿಷಯಗಳಾಗಿದ್ದವು. ಸರಳ ಜೀವನ ನಡೆಸುತ್ತಿದ್ದ, ಶಿಸ್ತಿನ, ದೃಢ ಸಂಕಲ್ಪದ ವ್ಯಕ್ತಿಗಳನ್ನು ಭೇಟಿಯಾಗಲು ಅವಕಾಶವಾಗುತ್ತಿತ್ತು. ಅವರು ನಮ್ಮ ಪ್ರೇರಕರು ಅನಿಸಿಕೊಳ್ಳುತ್ತಿದ್ದರು. ಅವರಲ್ಲಿ ಒಬ್ಬರು, ಅನಂತ ಕುಮಾರ್ ಹೆಗ್ಡೆ! ನನ್ನನ್ನು ತರಬೇತಿಗೊಳಿಸುವುದರಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು ಎಂದು ನನಗನಿಸುತ್ತದೆ.

Courtesy: Facebook

ಈ ಚರ್ಚೆಗಳು ಮುಸ್ಲಿಮರನ್ನು ಗುರಿ ಮಾಡುತ್ತಿದ್ದುದರಿಂದ ನನಗೆ ಈ ಸಭೆಗಳಲ್ಲಿ ಭಾಗವಹಿಸುವುದು ಸಾಧ್ಯವೇ ಇಲ್ಲ ಎಂಬಂತಾಯಿತು. ನಾನು ಬಿಟ್ಟುಬಿಟ್ಟೆ. ಹೀಗೆ ಬಿಟ್ಟದ್ದರಿಂದ ನಾನು ನನ್ನ ಬಾಲ್ಯದ ಹಲವಾರು ಗೆಳೆಯರಿಂದ ದೂರವಾಗಬೇಕಾಯಿತು. ಅವರು ಎಬಿವಿಪಿಯಲ್ಲೇ ಮುಂದುವರಿದರು. ನಾವೀಗ ಒಂದೇ ಹಾದಿಯಲ್ಲಿ ನಡೆಯುತ್ತಿರಲಿಲ್ಲ. ಅದು ಇನ್ನಷ್ಟು ಕಷ್ಟದ ವಿಷಯವಾಗಿತ್ತು. ನಾನು ನನ್ನ ಗೆಳೆಯರತ್ತ ನೋಡಿದಾಗ, ಅವರ ಜೊತೆ ಯಾವುದೇ ಸಮಾಧಾನಕರ ಮಾತುಕತೆ ನಡೆಸುವುದು ಕಷ್ಟವೆಂಬಂತೆ ಕಂಡಿತು.

ಆದುದರಿಂದ, ಈಗ ಬೇಕೆಂದೇ ಕಲಕಿ ಎಬ್ಬಿಸಲಾಗುತ್ತಿರುವ ಈ ಈದ್ಗಾ ಮೈದಾನದ ಪ್ರಶ್ನೆಯ ಬಗ್ಗೆ ಕೇಳಿದಾಗ, ನಾವು ಚಾಮರಾಜಪೇಟೆಯ ಮೂಲ ಗುಣಸ್ವಭಾವವೇ ಆಗಿದ್ದ ಸಹಬಾಳ್ವೆಯ ಹಾದಿಯಲ್ಲೇ ಮುಂದುವರಿದಿದ್ದರೆ, ಒಂದು ಸಮಾಜವಾಗಿ, ಒಂದು ದೇಶವಾಗಿ ನಾವು ಏನನ್ನೆಲ್ಲಾ ಸಾಧಿಸಬಹುದಿತ್ತು ಎಂದು ಚಿಂತಿಸುತ್ತೇನೆ. ರೂಪಕವಾಗಿ ನಾನು ಈದ್ಗಾ ಮೈದಾನ ಅಥವಾ ಫೋರ್ಟ್ ಹೈಸ್ಕೂಲು ಮೈದಾನ ಅಥವಾ ಕನ್ನಡ ಸಾಹಿತ್ಯ ಪರಿಷತ್ತಿನ ಹತ್ತಿರವೇ ಇರುವ ಹಿಂದೂ ಮಠವೊಂದರ ಮೈದಾನದಲ್ಲಿ ಕ್ರಿಕೆಟ್ ಆಡುತ್ತಾ ಬೆಳೆದ ಆ ಚಾಮರಾಜ ಪೇಟೆಗಾಗಿ ಹಂಬಲಿಸುತ್ತೇನೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಲಿಯೋ ಎಫ್. ಸಾಲ್ಡಾನಾ

ಲಿಯೋ ಎಫ್. ಸಾಲ್ಡಾನಾ
ಬೆಂಗಳೂರಿನಲ್ಲಿ ವಾಸಿಸುತ್ತಿರುವ ಲಿಯೋ, ಪರಿಸರ ಬೆಂಬಲ ಗುಂಪುಗಳ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ನ್ಯಾಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ.


ಇದನ್ನೂ ಓದಿ: ಮಸೀದಿ-ಮಂದಿರ ವಿವಾದಗಳಲ್ಲಿ ನ್ಯಾಯಾಲಯಗಳು ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತಿವೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...