ಕಾಬೂಲ್ನ ಆಸ್ಪತ್ರೆಯ ಮೇಲೆ ಪಾಕಿಸ್ತಾನ ನಡೆಸಿದ ವಾಯುದಾಳಿಯನ್ನು ಭಾರತ ಮಂಗಳವಾರ ಖಂಡಿಸಿದೆ. ಈ ದಾಳಿಯಲ್ಲಿ ಕನಿಷ್ಠ 400 ಜನರು ಅಸ್ವಸ್ಥರಾಗಿ 250 ಜನರು ಗಾಯಗೊಂಡಿದ್ದರು. ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿಕೆಯೊಂದರಲ್ಲಿ ಈ ಕೃತ್ಯವನ್ನು “ಹೇಡಿತನ ಮತ್ತು ಅವಿವೇಕಿ” ಎಂದು ಕರೆದಿದ್ದು, ಪಾಕಿಸ್ತಾನವು “ಹತ್ಯಾಕಾಂಡವನ್ನು ಮಿಲಿಟರಿ ಕಾರ್ಯಾಚರಣೆಯಂತೆ ಬಿಂಬಿಸಲು ಪ್ರಯತ್ನಿಸುತ್ತಿದೆ” ಎಂದು ಆರೋಪಿಸಿದೆ.
“ಇದು ಹೇಡಿತನ ಮತ್ತು ವಿವೇಚನೆಯಿಲ್ಲದ ಹಿಂಸಾಚಾರವಾಗಿದ್ದು, ಮಿಲಿಟರಿ ಗುರಿಯಾಗಿ ಸಮರ್ಥಿಸಲಾಗದ ಸೌಲಭ್ಯದಲ್ಲಿ ಹೆಚ್ಚಿನ ಸಂಖ್ಯೆಯ ನಾಗರಿಕರ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಪಾಕಿಸ್ತಾನ ಈಗ ಹತ್ಯಾಕಾಂಡವನ್ನು ಮಿಲಿಟರಿ ಕಾರ್ಯಾಚರಣೆಯಂತೆ ಬಿಂಬಿಸಲು ಪ್ರಯತ್ನಿಸುತ್ತಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನೆರೆಹೊರೆಯವರ ನಡುವಿನ ಸಂಘರ್ಷದಲ್ಲಿ ತೀವ್ರ ಏರಿಕೆ ಕಂಡುಬರುತ್ತಿರುವಂತೆ ಕಂಡುಬರುತ್ತಿರುವಂತೆ, ಅಫ್ಘಾನ್ ತಾಲಿಬಾನ್ ಸರ್ಕಾರದ ವಕ್ತಾರರು ಮಂಗಳವಾರ, ಕಾಬೂಲ್ನ ಆಸ್ಪತ್ರೆಯ ಮೇಲೆ ಪಾಕಿಸ್ತಾನ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 400 ಜನರು ಸಾವನ್ನಪ್ಪಿದ್ದಾರೆ ಮತ್ತು 250 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದರು.
ಆದರೆ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಪಾಕಿಸ್ತಾನ ಈ ಹೇಳಿಕೆಯನ್ನು ಸುಳ್ಳು ಮತ್ತು ದಾರಿತಪ್ಪಿಸುವಂತದ್ದು ಎಂದು ತಿರಸ್ಕರಿಸಿದೆ. ಸೋಮವಾರ ರಾತ್ರಿ “ಮಿಲಿಟರಿ ಸ್ಥಾಪನೆಗಳು ಮತ್ತು ಭಯೋತ್ಪಾದಕ ಬೆಂಬಲಿಸುವ ಮೂಲಸೌಕರ್ಯಗಳನ್ನು ನಿಖರವಾಗಿ ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ” ಎಂದು ಹೇಳಿಕೊಂಡಿದೆ.
ಅಫ್ಘಾನಿಸ್ತಾನದ ಆಸ್ಪತ್ರೆ ಮೇಲೆ ಪಾಕಿಸ್ತಾನದಿಂದ ವಾಯುದಾಳಿ ; ಕನಿಷ್ಠ 400 ಸಾವು
ರಾಜಧಾನಿ ಕಾಬೂಲ್ನಲ್ಲಿ ಮಾದಕ ವ್ಯಸನಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯ ಮೇಲೆ ಪಾಕಿಸ್ತಾನದ ಮಿಲಿಟರಿ ವಾಯು ದಾಳಿ ನಡೆಸಿದ್ದು, ಕನಿಷ್ಠ 400 ಜನರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನ ಆರೋಪಿಸಿದೆ.
ಅಲ್-ಜಝೀರಾ ವರದಿಯ ಪ್ರಕಾರ, ಅಫ್ಘಾನಿಸ್ತಾನದ ಆರೋಪವನ್ನು ಪಾಕಿಸ್ತಾನ ತಳ್ಳಿ ಹಾಕಿದೆ. ಇದು ಸುಳ್ಳು ಮತ್ತು ಜನರನ್ನು ದಾರಿ ತಪ್ಪಿಸುವ ಹೇಳಿಕೆ ಎಂದಿದೆ. ಸೋಮವಾರ (ಮಾ.16) ಕೇವಲ ಕಾಬೂಲ್ ಮತ್ತು ನಂಗಹಾರ್ ಪ್ರಾಂತ್ಯದ ಮಿಲಿಟರಿ ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡಿರುವುದಾಗಿ ಅದು ತಿಳಿಸಿದೆ.
ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ಉಪ ವಕ್ತಾರ ಹಮ್ದುಲ್ಲಾ ಫಿತ್ರತ್ ಅವರ ಪ್ರಕಾರ, ಕಾಬೂಲ್ನ ‘ಉಮರ್ ವ್ಯಸನ ಮುಕ್ತಿ ಆಸ್ಪತ್ರೆ’ಯ (Omar Addiction Treatment Hospital) ಮೇಲೆ ಸ್ಥಳೀಯ ಕಾಲಮಾನ ಸೋಮವಾರ ರಾತ್ರಿ ಸುಮಾರು 9 ಗಂಟೆಗೆ ಪಾಕಿಸ್ತಾನ ದಾಳಿ ನಡೆಸಿದೆ.
ಆಸ್ಪತ್ರೆಯು 2,000 ಹಾಸಿಗೆಗಳ ಸಾಮರ್ಥ್ಯದ ಬೃಹತ್ ಆರೋಗ್ಯ ಸೌಲಭ್ಯವಾಗಿದ್ದು, ದಾಳಿಯಿಂದ ಆಸ್ಪತ್ರೆ ಕಟ್ಟಡದ ದೊಡ್ಡ ಭಾಗ ಸಂಪೂರ್ಣವಾಗಿ ಧ್ವಂಸಗೊಂಡಿದೆ ಎಂದು ಫಿತ್ರತ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
“ದುರದೃಷ್ಟವಶಾತ್, ಸಾವಿನ ಸಂಖ್ಯೆ ಇದುವರೆಗೆ 400ಕ್ಕೆ ತಲುಪಿದೆ. ಸುಮಾರು 250 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ರಕ್ಷಣಾ ತಂಡಗಳು ಪ್ರಸ್ತುತ ಸ್ಥಳದಲ್ಲಿದ್ದು, ಬೆಂಕಿ ನಂದಿಸಲು ಮತ್ತು ಬಲಿಪಶುಗಳ ಉಳಿದ ಮೃತದೇಹಗಳನ್ನು ಹೊರತೆಗೆಯಲು ಕೆಲಸ ಮಾಡುತ್ತಿವೆ” ಎಂದು ಫಿತ್ರತ್ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.


