ಫೆಬ್ರವರಿ 10 ರಿಂದ ಆರಂಭವಾಗುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವನ್ನು ಬೆಂಬಲಿಸುವುದಾಗಿ CPI(M) ಪ್ರಧಾನ ಕಾರ್ಯದರ್ಶಿ ಸೀತರಾಂ ಯೆಚೂರಿ ಘೋಷಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, “ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿಯಾಗಿದೆ. ಹಾಗಾಗಿ ವಿವಿಧ ಪಕ್ಷಗಳಿಗೆ ಬೆಂಬಲ ನೀಡುತ್ತಿದ್ದೇವೆ. ಅಲ್ಲದೆ ನಮ್ಮ ಭದ್ರ ನೆಲೆ ಇರುವ ಕೆಲವೇ ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ” ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರ ಸಿಪಿಐ(ಎಂ) ಸ್ಪರ್ಧಿಸಲಿದ್ದು, ಉಳಿದ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷವನ್ನು ಬೆಂಬಲಿಸುತ್ತೇವೆ. ಏಕೆಂದರೆ ಬಿಜೆಪಿಯನ್ನು ಸೋಲಿಸುವ ಸಾಧ್ಯತೆಯಿರುವುದು ಸಮಾಜವಾದಿ ಪಕ್ಷಕ್ಕೆ ಮಾತ್ರ. ಅದೇ ರೀತಿ ಪಂಜಾಬ್ನಲ್ಲಿಯೂ ಯಾವ ಪಕ್ಷ ಬಿಜೆಪಿಯನ್ನು ಸೋಲಿಸುವ ಸಾಧ್ಯತೆ ಹೊಂದಿದೆಯೋ ಆ ಪಕ್ಷವನ್ನು ಬೆಂಬಲಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಪಕ್ಷದ ಪ್ರಾಥಮಿಕ ಅಜೆಂಡಾ ಉತ್ತರ ಪ್ರದೇಶದ ಆಡಳಿತ ಪಕ್ಷವನ್ನು ಸೋಲಿಸುವುದಾಗಿದೆ. ಹಿಂದುತ್ವದ ಅಜೆಂಡಾದ ವಿರುದ್ಧ “ಜಾತ್ಯತೀತ ಶಕ್ತಿಗಳ ಒಗ್ಗೂಡುವಿಕೆ” ಕಡೆಗೆ ಪಕ್ಷ ಕೆಲಸ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಪಕ್ಷವು ಕ್ರೋನಿ ಕ್ಯಾಪಿಟಲಿಸಂ ಅನ್ನು ಉತ್ತೇಜಿಸುತ್ತಿದೆ ಮತ್ತು ಭಾರತದಲ್ಲಿ ಸಂಪೂರ್ಣ ನಿರಂಕುಶಾಧಿಕಾರವನ್ನು ಹೇರುತ್ತಿದೆ. ನಮ್ಮ ಜಾತ್ಯತೀತ, ಪ್ರಜಾಪ್ರಭುತ್ವದ ಸಂವಿಧಾನದ ಎಲ್ಲಾ ಮೂಲಭೂತ ಸ್ತಂಭಗಳ ಮೇಲೆ ವ್ಯವಸ್ಥಿತ ದಾಳಿಯನ್ನು ನಡೆಸುತ್ತಿದೆ. ಅದನ್ನು ತಡೆಯುವುದು ನಮ್ಮ ಕರ್ತವ್ಯವಾಗಿದೆ ಎಂದು ಯೆಚೂರಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಆರ್ಜೆಡಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಉಳಿದಂತೆ ಬಿಜೆಪಿ, ಕಾಂಗ್ರೆಸ್ ಮತ್ತು ಬಿಎಸ್ಪಿ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸುತ್ತಿವೆ. ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಘೋಷಣೆಯಾಗಲಿದೆ.
ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ ಪೂರ್ವ ವಿಶ್ಲೇಷಣೆ: ಭಾಗ-2; ತಲೆಕೆಳಗಾಗುತ್ತಿರುವ ಕೇಸರಿಕೂಟದ ಲೆಕ್ಕಾಚಾರ