ಇಂದು ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೈದರಾಬಾದ್ಗೆ ಭೇಟಿ ನೀಡಿದ್ದಾರೆ. ಆದರೆ ಅವರು ಹೈದರಾಬಾದ್ನಲ್ಲಿ ಬಂದಿಳಿದಾಗ ಅವರನ್ನು ಸ್ವಾಗತಿಸಲು ಮತ್ತು ನಂತರದ ಮೋದಿ ಜೊತೆಗಿನ ಕಾರ್ಯಕ್ರಮಗಳಿಗೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ರಾವ್ ಗೈರು ಹಾಜರಾಗಿರುವುದು ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.
216 ಅಡಿ ಎತ್ತರದ ರಾಮಾನುಜಾಚಾರ್ಯರ ಸಮಾನತೆಯ ಪ್ರತಿಮೆ ಲೋಕಾರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಇಂದು ಪ್ರಧಾನಿ ಮೋದಿ ಭಾಗವಹಿಸಿದ್ದಾರೆ. ಆದರೆ ಆ ಕಾರ್ಯಕ್ರಮ ಸೇರಿದಂತೆ ವಿಮಾನ ನಿಲ್ದಾಣದಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲು ಸಿಎಂ ಚಂದ್ರಶೇಖರ್ರಾವ್ ಬಾರದಿದ್ದುದ್ದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.
ಮುಖ್ಯಮಂತ್ರಿಗಳಿಗೆ ತೀವ್ರ ಜ್ವರವಿದ್ದು ಅನಾರೋಗ್ಯದಲ್ಲಿದ್ದಾರೆ. ಹಾಗಾಗಿ ಇಂದಿನ ಯಾವುದೇ ಕಾರ್ಯಕ್ರಮಗಳಿಗೆ ಭಾಗವಹಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಇತ್ತೀಚಿನ ಕೇಂದ್ರ ಬಜೆಟ್ ಅನ್ನು ಕೆಸಿಆರ್ರವರು ಕಟು ಶಬ್ದಗಳಲ್ಲಿ ಟೀಕಿಸಿದ್ದರಿಂದ ರಾಜಕೀಯ ಕಾರಣದಿಂದ ಅವರು ಭಾಗವಹಿಸಿಲ್ಲ ಎಂಬ ಚರ್ಚೆಗಳು ಆರಂಭವಾಗಿವೆ.
ಕೆಸಿಆರ್ ನಿರಂತರವಾಗಿ ಸಂವಿಧಾನವನ್ನು ಅವಮಾನಿಸುತ್ತಿದ್ದಾರೆ. ಈಗ ಶಿಷ್ಟಾಚಾರವನ್ನು ಉಲ್ಲಂಘಿಸಿರುವುದು ಮೂರ್ಖ ಮತ್ತು ನಾಚಿಕೆಗೇಡಿನ ಕೃತ್ಯವಾಗಿದೆ ಎಂದು ತೆಲಂಗಾಣ ಬಿಜೆಪಿ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದೆ.
KCR has been regularly Insulting Constitution.
Now violating protocol stoops is such idiotic and shameful act of KCR. #ShameOnYouKCR— BJP Telangana (@BJP4Telangana) February 5, 2022
ಕೇಂದ್ರ ಬಜೆಟ್, ಬಿಜೆಪಿ ಸುಳ್ಳುಗಳು ಮತ್ತು ನಕಲಿ ಗುಜರಾತ್ ಮಾದರಿ ಕುರಿತು ಇತ್ತೀಚಿಗಷ್ಟೇ ಕೆಸಿಆರ್ ಕಿಡಿಕಾರಿದ್ದರು. ಮೇಲೆ ಶೇರ್ವಾನಿ ತೊಟ್ಟು ಮಿಂಚುತ್ತಿರುವ ಗುಜರಾತ್ ಒಳಗೆ ಸಂಕಷ್ಟದಲ್ಲಿದೆ ಎಂದು ಟೀಕಿಸಿದ್ದರು. ಅಲ್ಲದೆ ಮೋದಿಯವರು ರವೀಂದ್ರನಾಥ್ ಠಾಗೋರ್ರಂತೆ ಗಡ್ಡ ಬಿಡುವುದರಿಂದ, ವೇಷ ಭೂಷಣ ಮಾಡುವುದರಿಂದ ದೇಶಕ್ಕೆ ಉಪಯೋಗವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಹೈಕೋರ್ಟ್ ಹಿರಿಯ ವಕೀಲ ಎಸ್.ಬಾಲನ್ ಅವರೊಂದಿಗೆ ಸಂದರ್ಶನ; ಮನುವಾದಕ್ಕೆ ಅಂಬೇಡ್ಕರ್ ಎಂದರೆ ಅಸಹನೆ