ನಟ ಚೇತನ್ ಅಹಿಂಸಾ ಇತ್ತಿಚೇಗೆ ಹಿಂದುತ್ವವಾದದ ಸುಳ್ಳುಗಳ ಬಗ್ಗೆ ಟ್ವೀಟ್ ಮಾಡಿ, ಜೈಲಿಗೆ ಹೋಗಿಬಂದಿದ್ದರು. ಇದಾದ ಕೆಲವೇ ದಿನಗಳಲ್ಲಿ ಚೇತನ್ ಅವರ ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ (ಒಸಿಐ) ಕಾರ್ಡ್ ಅನ್ನು ರದ್ದು ಮಾಡುವುದಾಗಿ ಕೇಂದ್ರ ಸರ್ಕಾರ ನೋಟಿಸ್ ನೀಡಿತ್ತು. ಆದರೆ ಈಗ ಈ ವಿಚಾರದಲ್ಲಿ ಚೇತನ್ ಅವರಿಗೆ ರಿಲೀಫ್ ಸಿಕ್ಕಿದೆ.
ಕೇಂದ್ರದ ನೋಟಿಸ್ ವಿರುದ್ಧ ಚೇತನ್ ಅವರು, ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ”ಜೂನ್ 2ರವರೆಗೆ ನಟ ಚೇತನ್ ವಿರುದ್ಧ ಕ್ರಮ ಬೇಡ ಎಂದು ಆದೇಶ ನೀಡಿದೆ.
ಕೇಂದ್ರ ಸರ್ಕಾರ ಚೇತನ್ ಅವರನ್ನು ಗಡಿಪಾರು ಮಾಡಲು ಮುಂದಾಗಿತ್ತು. 2018ರಲ್ಲಿ ಅವರಿಗೆ ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್ ನೀಡಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ಮತ್ತು ಸಾರ್ವಜನಿಕ ಹೇಳಿಕೆಗಳು ವಿವಾದ ಹುಟ್ಟುಹಾಕಿದ್ದರಿಂದ ಕೇಂದ್ರ ಸರ್ಕಾರವು ಒಸಿಐ ಮಾನ್ಯತೆ ರದ್ದು ಮಾಡಿತ್ತು. ಆದರೆ ಕೇಂದ್ರದ ಕ್ರಮಕ್ಕೆ ಇದೀಗ ಹೈಕೋರ್ಟ್ ತಡೆ ನೀಡಿದೆ.
ಇದನ್ನೂ ಓದಿ: ನಟ ಚೇತನ್ ವೀಸಾ ರದ್ದು: ಸರ್ಕಾರದ ನಡೆ ವಿರುದ್ಧ ನಟ ಕಿಶೋರ್ ಪೋಸ್ಟ್
ಚೇತನ್ ಅವರ ಮೇಲೆ, ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನ, ಭಾರತ ವಿರೋಧಿ ಚಟುವಟಿಕೆ ಮುಂತಾದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೋಟಿಸ್ ನೀಡಿತ್ತು. ಆ ಬಳಿಕ ಚೇತನ್ ಕೂಡ ಅವರ ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ಆದರೆ ಚೇತನ್ ನೀಡಿದ್ದ ಉತ್ತರ ಸಮಾಧಾನಕರವಾಗಿಲ್ಲ ಎಂಬ ಕಾರಣವನ್ನು ನೀಡಿ ಕೇಂದ್ರ ಸರ್ಕಾರವು ಒಸಿಐ ಕಾರ್ಡ್ ರದ್ದುಪಡಿಸಿತ್ತು.
ಚೇತನ್ ವಾದ ಆಲಿಸದೇ ಕ್ರಮ ಕೈಗೊಂಡಿದ್ದು ಸರಿಯಲ್ಲ ಎಂದು ಅವರ ಪರ ವಕೀಲರು ವಾದಿಸಿದ್ದಾರೆ. ಮತ್ತೊಂದೆಡೆ ಎಎಜಿ ಅರುಣ್ ಶ್ಯಾಮ್, ಎಎಸ್ಜಿ ಶಾಂತಿಭೂಷಣ್ ಅವರು, ”ಚೇತನ್ ಅವರು ನ್ಯಾಯಾಂಗದ ವಿರುದ್ಧವೂ ಆಕ್ಷೇಪಾರ್ಹ ಹೇಳಿಕೆ ನೀಡಿರುವುದರಿಂದ ಕೇಂದ್ರದ ಕ್ರಮಕ್ಕೆ ತಡೆ ನೀಡಬಾರದು” ಎಂದು ವಾದ ಮಾಡಿದರು. ಆದರೆ ಅಂತಿಮವಾಗಿ ಚೇತನ್ ಅವರಿಗೆ ನ್ಯಾಯಾಲಯ ಷರತ್ತು ಬದ್ಧ ರಿಲೀಫ್ ನೀಡಿದೆ. ನ್ಯಾಯಾಂಗದ ಬಗ್ಗೆ ಚೇತನ್ ಟ್ವೀಟ್ ಮಾಡುವಂತಿಲ್ಲ. ವಿಚಾರಣೆಗೆ ಬಾಕಿಯಿರುವ ಕೇಸ್ಗಳ ಬಗ್ಗೆ ಕೂಡ ಅವರು ಪೋಸ್ಟ್ ಮಾಡುವಂತಿಲ್ಲ ಎಂದು ಷರತ್ತು ವಿಧಿಸಿ ಕೇಂದ್ರದ ಆದೇಶಕ್ಕೆ ತಡೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಚೇತನ್ ಅಂಹಿಸಾ ಪರ ಪೋಸ್ಟ್ ಮಾಡಿದ್ದ ನಟ ಕಿಶೋರ್:
ನಟ ಕಿಶೋರ್ ತಮ್ಮ ಇನ್ ಸ್ಟಾಗ್ರಾಮ್ನಲ್ಲಿ ಧೀರ್ಘ ಬಹರದ ಪೋಸ್ಟ್ ಹಂಚಿಕೊಂಡಿದ್ದಾರೆ. ”ಹಿಂದುತ್ವ ಎನ್ನುವ ಪದ ವರ್ತಮಾನದ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದೂ ಧರ್ಮ ಅಲ್ಲ. ನಿಜವಾದ ಹಿಂದೂ ಧರ್ಮ, ಸಕಲರನ್ನೂ ಒಳಗೊಂಡ ವಸುಧೆಯೇ ಒಂದು ಕುಟುಂಬವೆಂದು ನೋಡುವ ವಿಶಾಲ ಮನಸ್ಥಿತಿ ಇರುವಂತಹದ್ದು. ಆದರೆ ‘ಹಿಂದುತ್ವ’ ಎನ್ನುವ ಪದ ಬಳಕೆಯಾಗುತ್ತಿರುವುದು ಒಂದು ಪಕ್ಷದ, ಒಂದು ಸಂಘದ, ಅಧಿಕಾರಕ್ಕಾಗಿ ಒಡೆದಾಳುವ, ಪರದ್ವೇಷದ, ಮೂಲಭೂತವಾದಿ ವೈದಿಕ ಸಂಪ್ರದಾಯದ ಸಂಕುಚಿತ ಪರಿಕಲ್ಪನೆಯಾಗಿಯಷ್ಟೇ. ಹಾಗಾಗಿ ಈ ಜೀವ ವಿರೋಧಿ ರಾಜಕೀಯದ ಟೀಕೆಯಿಂದ ಹಿಂದೂಗಳಿಗೆಲ್ಲರಿಗೂ ಅಪಮಾನವಾಯಿತೇ ಎನ್ನುವುದು ಎಷ್ಟು ಉಚಿತ?? ಹಾಗೆ ಅವಮಾನ ಪಡಲೇಬೇಕೆಂದರೆ ವೈದಿಕ ಪರಂಪರೆ ಇಂದಿಗೂ ಪ್ರತಿಪಾದಿಸುತ್ತಿರುವ ನಮ್ಮಲ್ಲೇ ಇರುವ ಜಾತಿ ಪದ್ಧತಿ, ಅಸ್ಪೃಶ್ಯತೆ, ಲಿಂಗ ಬೇಧ ಇವುಗಳಿಂದಲ್ಲವೇ?. ಆ ನಿಟ್ಟಿನಲ್ಲಿ ನಮ್ಮನ್ನು ನಾವು ತಿದ್ದಿಕೊಂಡು ಹಿಂದೂ ಧರ್ಮವನ್ನು ಎಲ್ಲರಿಗೂ ಮಾದರಿಯಾಗಿಸಬೇಕಲ್ಲವೇ?. ನಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ನಮ್ಮದೇ ಜನರನ್ನು ನಿಂದಿಸುವ, ಆರೋಪಿಸುವ, ಜೈಲಿಗೆ ಹಾಕುವ ಅಥವಾ ಗಡಿಪಾರು ಮಾಡುವ ಅತಿರೇಕಕ್ಕೆ ಹೋಗುವ ಬದಲು?” ಎಂದು ತಿಳಿಸಿದ್ದರು.