Homeಮುಖಪುಟನೀಲಿ-ಕೆಂಪು ಒಂದಾಗಬೇಕೆಂಬುದು ಆಕೆಯ ಆಸೆಯಾಗಿತ್ತು

ನೀಲಿ-ಕೆಂಪು ಒಂದಾಗಬೇಕೆಂಬುದು ಆಕೆಯ ಆಸೆಯಾಗಿತ್ತು

- Advertisement -
- Advertisement -

 

ಡಿ.ಉಮಾಪತಿ

ಚಿತ್ರದುರ್ಗದ ಡಿ.ಉಮಾಪತಿಯವರು ದೀರ್ಘಕಾಲ ದೆಹಲಿಯಿಂದ ಕನ್ನಡದ ಮೂರು ಪ್ರಮುಖ ದಿನಪತ್ರಿಕೆಗಳಿಗೆ (ಕನ್ನಡಪ್ರಭ, ವಿಜಯ ಕರ್ನಾಟಕ, ಪ್ರಜಾವಾಣಿ) ವರದಿ ಮಾಡಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಬಿಡಿ ಘಟನೆಗಳನ್ನು ವಿಶಾಲ ಭಿತ್ತಿಯಲ್ಲಿಟ್ಟು ನೋಡುವ ಅವರ ಸಾಂದ್ರವಾದ ಬರಹಗಳು ಓದುಗರನ್ನು ಆಳವಾಗಿ ಕಲಕುತ್ತವೆ. ಅವರ `ಡೆಲ್ಲಿ ಡೈರಿ’ ಮತ್ತು `ದೆಹಲಿ ನೋಟ’ ಅಂಕಣಗಳು ಹೆಚ್ಚು ಓದುಗರನ್ನು ಸೆಳೆದಿದ್ದವು. ಪ್ರಸ್ತುತ `ನ್ಯಾಯಪಥ’ ಪತ್ರಿಕೆಯ ಕನ್ಸಲ್ಟಿಂಗ್ ಎಡಿಟರ್ ಆಗಿದ್ದಾರೆ ಮತ್ತು ಪ್ರತಿಧ್ವನಿ ಅಂತರ್ಜಾಲ ಪತ್ರಿಕೆ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಅವರ ಬರಹಗಳು ಮುಂದುವರೆದಿವೆ.

ಮೂವತ್ತೆರಡು ವರ್ಷಗಳಷ್ಟು ಕಾಲದ ವರದಿಗಾರನ ಕಸುಬಿನಲ್ಲಿ ಇಪ್ಪತ್ತು ವರ್ಷಗಳನ್ನು ದಿಲ್ಲಿಯಲ್ಲೇ ಸವೆಸಿದ ಕಾರಣ ಗೌರಿ ಲಂಕೇಶ್ ಅವರ ಸಂಪರ್ಕ ನನಗೆ ಕೆಲಕಾಲ ಹತ್ತಿರದ್ದು ಮತ್ತು ಬಹುಕಾಲ ದೂರದ್ದೂ ಆಗಿ ಉಳಿಯಿತು.

1996ರಲ್ಲಿ ‘ಕನ್ನಡಪ್ರಭ’ ನನ್ನನ್ನು ದಿಲ್ಲಿಗೆ ಕಳಿಸುವ ತನಕ ಹನ್ನೆರಡು ವರ್ಷಗಳ ಕಾಲ ಬೆಂಗಳೂರಲ್ಲಿ ಕೆಲಸ. ಇಂಗ್ಲಿಷ್ ಪತ್ರಕರ್ತರು ಅದರಲ್ಲಿಯೂ ಹೆಣ್ಣುಮಕ್ಕಳು ಕನ್ನಡ ಪತ್ರಕರ್ತರೊಂದಿಗೆ ದೂರ ಕಾಯ್ದುಕೊಳ್ಳುತ್ತಿದ್ದರು. ಕೃತಕ ಗೋಡೆಗಳನ್ನು ಎಬ್ಬಿಸಿ ನಿಲ್ಲಿಸುತ್ತಿದ್ದರು. ಈ ಮಾತಿಗೆ ಅಪವಾದದಂತೆ ನಡೆದುಕೊಳ್ಳುತ್ತಿದ್ದ ವಿರಳರಲ್ಲಿ ಗೌರಿಯೂ ಒಬ್ಬರು. ಹೌದು, ಗೌರಿ ಇಂಗ್ಲಿಷ್ ಪತ್ರಕರ್ತೆಯಾಗಿದ್ದರು. ನಿತ್ಯದ ವರದಿಗಾರಿಕೆಯಲ್ಲಿ ಆಗಾಗ ಸಿಗುತ್ತಿದ್ದರು. ನಿಗರ್ವಿಯೂ ಸ್ನೇಹಪರರೂ ಹಾಗೂ ಸರಳ ಸ್ವಭಾವದವರೂ ಆಗಿರುತ್ತಿದ್ದರು. ಕನ್ನಡ ಇಂಗ್ಲಿಷಿನ ದೂರದಲ್ಲಿ ಅವರಿಗೆ ನಂಬಿಕೆ ಇರಲಿಲ್ಲ. ಎಂಬತ್ತರ ದಶಕ. ಆ ವೇಳೆಗಾಗಲೆ ಅವರು ದೆಹಲಿಯ ಪ್ರತಿಷ್ಠಿತ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಷನ್ ಸಂಸ್ಥೆಯಲ್ಲಿ ಓದಿ ಪದವಿ ಪಡೆದವರಾಗಿದ್ದರು. ಅವರ ಮೇಲೆ ತಂದೆ ಲಂಕೇಶರ ಪ್ರಭಾವವಿತ್ತು. ದೆಹಲಿಯ ಜೆ.ಎನ್.ಯು.ವಿನ ಸಮ ಸಮಾಜದ ಆಶಯದ ವಾತಾವರಣ ಅದನ್ನು ಗಟ್ಟಿಗೊಳಿಸಿತ್ತು.

ಲಂಕೇಶ್ ಪತ್ರಿಕೆಯ ಯಶಸ್ಸಿನ ನೆರಳಿನಿಂದ ಪ್ರಜ್ಞಾಪೂರ್ವಕವಾಗಿ ದೂರ ಉಳಿಯಬಯಸಿದ್ದರು. ಹೀಗಾಗಿ ಇಂಗ್ಲಿಷ್ ಪತ್ರಿಕೋದ್ಯಮ ಅವರ ಆಯ್ಕೆಯಾಗಿತ್ತು. Mid Day, Sunday ಆಗ ರಭಸದ ಪತ್ರಿಕೋದ್ಯಮ ನಡೆಸಿದ ಪತ್ರಿಕೆಗಳು. ಆನಂತರ Times of India, ಇಂಗ್ಲಿಷ್ ದೈನಿಕ, ETV, News Timeಗೆ ವರದಿ ಮಾಡಿದರು. ಇಂಡಿಯಾ ಟುಡೇ ಸಮೂಹದ Headlines Todayಯಲ್ಲೂ ಕೆಲಸ ಅವರ ವರದಿಗಾರಿಕೆಗೆ ಸಾಣೆ ಹಿಡಿದಿತ್ತು. ಹೊಳಪು ಹರಿತ ಎರಡೂ ದಕ್ಕಿದ್ದವು.

ದೆಹಲಿಯಲ್ಲಿ ಹಲವು ವರ್ಷ ಕೆಲಸ ಮಾಡಿದ ಅವರಿಗೆ ರಾಜಧಾನಿಯ ರಾಜಕಾರಣದ ಒಳಸುಳಿಗಳ ಮೇಲೆ ಹಿಡಿತ ಸಿಕ್ಕಿತ್ತು. ಇಲ್ಲಿ ಕೂಡ ನನ್ನ ಪಾಲಿಗೆ ಅವರು ಅದೇ ಬೆಂಗಳೂರಿನ ನಿಗರ್ವಿ ಸಹೋದ್ಯೋಗಿ. ದೆಹಲಿಯಲ್ಲಿ ಕನ್ನಡ ಮೂಲದ ಮತ್ತೊಬ್ಬ ಯಶಸ್ವೀ ಇಂಗ್ಲಿಷ್ ಪತ್ರಕರ್ತ ಗಿರೀಶ್ ನಿಕ್ಕಮ್, ಗೌರಿ, ಔಟ್‍ಲುಕ್ ನಿಯತಕಾಲಿಕದ ವರದಿಗಾರ್ತಿ ಭಾವದೀಪ್ ಕಾಂಗ್ ಹೆಚ್ಚಾಗಿ ಕಲೆತು ಹರಟೆ ಹೊಡೆಯುತ್ತಿದ್ದೆವು. ದೈನಿಕ್ ಜಾಗರಣ್‍ನ ಹಿರಿಯ ವರದಿಗಾರ ನಿರ್ಮಲ್ ಪಾಠಕ್ ಒಂದು ಗುಂಪಾಗಿ ಸುದ್ದಿ ಸಂಗ್ರಹಕ್ಕೆಂದು ಅಲೆಯುತ್ತಿದ್ದೆವು. ಅನುಕೂಲಸ್ಥ ತಂದೆಯಿದ್ದಾರೆ ಎಂಬ ಭಾವದಿಂದ ಗೌರಿ ಯಾವೊತ್ತೂ ಕೆಲಸ ಕದಿಯಲಿಲ್ಲ. ಕಠಿಣ ಪರಿಶ್ರಮಕ್ಕೆ ಅಳುಕಲಿಲ್ಲ. ಅದಾಗಲೇ ಲಂಕೇಶರು ಅನಾರೋಗ್ಯಕ್ಕೆ ಒಳಗಾಗಿದ್ದರು. ತಂದೆ ಮಗಳು ಒಬ್ಬರನ್ನೊಬ್ಬರು ಬಹಳ ಹಚ್ಚಿಕೊಂಡಿದ್ದವರು. ತಂದೆಯ ಅನಾರೋಗ್ಯ ನೆನೆಸಿಕೊಂಡು ಗೌರಿ ಆಗಾಗ ಹನಿಗಣ್ಣಾಗುತ್ತಿದ್ದರು. ಬೆಂಗಳೂರಿಗೆ ತೆರಳಿ ಕೆಲ ದಿನ ಇದ್ದು ಬರುತ್ತಿದ್ದರು. ಯಾವ ಸುದ್ದಿಯನ್ನು ಕೇಳುವ ದಿನದ ಹೆದರಿಕೆಯಿತ್ತೋ ಆ ಕೆಟ್ಟ ಸುದ್ದಿ ಬಂದೇ ಬಿಟ್ಟಿತು. ಲಂಕೇಶರ ಆರೋಗ್ಯ ಬಿಗಡಾಯಿಸಿತ್ತು. ಒಮ್ಮೆ ಹೀಗೆ ಅಳುತ್ತಲೇ ಬೆಂಗಳೂರಿಗೆ ತೆರಳಿದ ಗೌರಿ ಮತ್ತೆ ದೆಹಲಿಗೆ ವಾಪಸು ಬರಲಿಲ್ಲ.

ತಂದೆ ತೊರೆದು ಹೋದ ಹೊಸ ರೂಹಿನ ಪತ್ರಿಕೋದ್ಯಮದ ‘ಬೃಹತ್ ಪಾದರಕ್ಷೆ’ಗಳಲ್ಲಿ ಗೌರಿ ತಮ್ಮ ಪುಟ್ಟ ಪಾದಗಳನ್ನು ಅಳುಕದೆ ಇರಿಸಿದ ದಿಟ್ಟ ಹೆಣ್ಣುಮಗಳು. ಪತ್ರಿಕೆಯೊಂದರ ಸಂಪಾದಕಿ ಆಗುವಷ್ಟು, ಪರಿಣಾಮಕಾರಿಯಾಗಿ ಬರೆಯುವಷ್ಟು ಕನ್ನಡ ಕಲಿತರು. ಅಲ್ಲಲ್ಲಿ ನ್ಯೂನತೆಗಳನ್ನು ಎಣಿಸಲು ಬಂದೀತು, ಆದರೆ ಒಟ್ಟಾರೆ ಲಂಕೇಶರು ನಡೆಸಿದ್ದು ಕೇವಲ ಪತ್ರಿಕೋದ್ಯಮ ಮಾತ್ರ ಆಗಿರಲಿಲ್ಲ. ಸಾಮಾಜಿಕ ಎಚ್ಚರದ ಹೊಸ ಪೀಳಿಗೆಯನ್ನೇ ರೂಪಿಸಿದರು. ತಂದೆಯ ಪ್ರಖರ ಪ್ರತಿಭೆ, ಭಾಷೆಯೊಂದಿಗಿನ ಮಾಂತ್ರಿಕ ಸ್ಪರ್ಶ, ಅಪಾರ ಓದು, ಆಳದ ಸಾಮಾಜಿಕ ರಾಜಕೀಯ ಒಳನೋಟಗಳು ಮಗಳಿಗಿರಲಿಲ್ಲ ನಿಜ. ಆದರೆ ತಂದೆ ಹಾಕಿಕೊಂಡಿದ್ದ ಗೆರೆಯನ್ನು ದಾಟಿ ಮುಂದೆ ಹೋದ ಮಗಳು ಪತ್ರಿಕೆಯನ್ನು ತುಳಿಸಿಕೊಂಡ ಜನರ ನೋವಿನ ದನಿಯಾಗಿಸಲು, ಕೋಮುವಾದಿಗಳ ವಿರುದ್ಧದ ಹತಾರು ಆಗಿಸಲು ಶ್ರಮಿಸಿದರು. ಹೋರಾಟಗಾರ್ತಿ ಪತ್ರಕರ್ತೆ ಆದರು.

ತಂದೆ ಆರಂಭಿಸಿದ ಪತ್ರಿಕೆ ತಮ್ಮನ ಪಾಲಾದಾಗಲೂ ಧೃತಿಗೆಡದೆ ಮತ್ತೊಂದನ್ನು ಶುರು ಮಾಡಿದರು. ಕಾಲಾನುಕ್ರಮದಲ್ಲಿ ಬರೆಯಲು ಮಾತ್ರವೇ ಅಲ್ಲ, ಕನ್ನಡದಲ್ಲಿ ಆಲೋಚಿಸಲೂ ಕಲಿತರು. ‘ಕಂಡ ಹಾಗೆ’ ಶೀರ್ಷಿಕೆಯಡಿ ಅವರು ಬರೆದ ಸಂಪಾದಕೀಯ ಸರಳ ಸಂವಹನಕ್ಕೆ ಮಾದರಿಯಾಗಿ ರೂಪುಗೊಂಡಿತು. ಹೊಸ ಪತ್ರಿಕೆ ಪತ್ರಿಕೆಯಷ್ಟೇ ಆಗಿ ಉಳಿಯಲಿಲ್ಲ. ಅದೊಂದು ಚಳವಳಿಯಾಗಿ ಬೆಳೆಯಿತು. ಗೌರಿಯವರನ್ನೂ ಬೆಳೆಸಿತು. ಅವರ ಅಂತರಂಗವನ್ನು ಅರಳಿಸಿತು.

ತುಂಟುತನ, ಜೀವಕಾರುಣ್ಯ, ಜೀವನಪ್ರೀತಿ ಅವರನ್ನು ಸುತ್ತಮುತ್ತಲ ಕನ್ನಡ ಸಮಾಜದೊಂದಿಗೆ ಮತ್ತಷ್ಟು ಗಟ್ಟಿಯಾಗಿ ಬೆಸೆಯಿತು. ಯುವಪೀಳಿಗೆಯೊಂದಿಗೆ ಸಂವಾದಕ್ಕೆ ಅವರಷ್ಟು ತೆರೆದುಕೊಂಡ ಅವರ ಓರಗೆಯ ಮತ್ತೊಬ್ಬ ಪತ್ರಕರ್ತರನ್ನು ನಾನು ಕಂಡಿಲ್ಲ. ಅಮ್ಮನ- ಅಕ್ಕನ ವಾತ್ಸಲ್ಯ ಅವರದು.

ಲಂಕೇಶರು ನಂಬಿದ್ದ ಲೋಹಿಯಾವಾದಿ-ಸಮಾಜವಾದ ಮತ್ತು ಗಾಂಧೀವಾದದ ಆಚೆಗೂ ಸರಿದ ಗೌರಿ, ಎಡಪಂಥೀಯ ವಿಚಾರಧಾರೆಯನ್ನು ದೂರ ಇರಿಸಲಿಲ್ಲ. ದಲಿತರು ಮತ್ತು ಎಡಪಂಥೀಯರನ್ನು ತಾವು ನಡೆಸಿದ ಪತ್ರಿಕೆಯಲ್ಲಿ ತಂದೆಗಿಂತ ಹೆಚ್ಚು ಹತ್ತಿರವಿಟ್ಟುಕೊಂಡರು. ಜನಾಂದೋಲನಗಳ ಜೊತೆ ಸಕ್ರಿಯವಾಗಿ ಬೆರೆತು ಗುರುತಿಸಿಕೊಂಡರು. ತಮ್ಮನ್ನು ‘ಆ್ಯಕ್ಟಿವಿಸ್ಟ್ ಜರ್ನಲಿಸ್ಟ್’ ಎಂದು ಹೆಮ್ಮೆಯಿಂದ ಕರೆದುಕೊಂಡರು.

ಪ್ರಚಂಡ ಕೋಮುವಾದಿ ಫ್ಯಾಸಿಸ್ಟ್ ರಾಜಕೀಯ ಎದುರಾಳಿಯ ಎದುರು ದಲಿತರ ನೀಲಿ ಮತ್ತು ಎಡಪಂಥೀಯರ ಕೆಂಪು ರಂಗುಗಳು ಎಲ್ಲ ಮತಭೇದವನ್ನೂ ಬದಿಗಿಟ್ಟು ಒಂದಾಗಬೇಕೆಂಬುದು ಅವರ ಅಚಲ ಆಶಯವಾಗಿತ್ತು. ನೀಲಿ ಮತ್ತು ಕೆಂಪು ಎರಡರ ಗೌರವವನ್ನೂ ಸಂಪಾದಿಸಿಕೊಂಡ ಪ್ರೀತಿ ವಾತ್ಸಲ್ಯದ ‘ಅಮ್ಮ’ನಾಗಿ ಹೊರಹೊಮ್ಮಿದ್ದರು. ಈ ಎರಡೂ ರಂಗುಗಳ ನಡುವೆ ನಡೆದ ವೈಚಾರಿಕ ಕದನಗಳು ಆಕೆಯ ಮನಸ್ಸನ್ನು ಘಾಸಿಗೊಳಿಸಿತ್ತು. ಅಲ್ಪಸಂಖ್ಯಾತರು, ಲೈಂಗಿಕ ಅಲ್ಪಸಂಖ್ಯಾತರ ಕುರಿತು ತಂದೆಯದೇ ಬದ್ಧತೆ, ಪ್ರೀತಿ ಅವರಿಗಿತ್ತು. ಕನ್ಹಯ್ಯಕುಮಾರ್ ಮತ್ತು ಜಿಗ್ನೇಶ್ ಮೇವಾನಿ, ಶೆಹ್ಲಾ ರಷೀದ್ ಅವರನ್ನು ತಮ್ಮ ದತ್ತುಮಕ್ಕಳೆಂದು ಬಹಿರಂಗವಾಗಿ ಕರೆದುಕೊಂಡಿದ್ದರು. ಹಂತಕರ ಗುಂಡು ಆಕೆಯನ್ನು ಬಲಿ ತೆಗೆದುಕೊಳ್ಳುವ ಕೆಲ ತಿಂಗಳುಗಳ ಹಿಂದೆ ದೆಹಲಿಗೆ ಬಂದಿದ್ದಾಗ ಕನ್ಹಯ್ಯನಿಗೆ ಹೊಸ ಉಡುಪುಗಳ ಉಡುಗೊರೆ ತಂದಿದ್ದುಂಟು.

ಪತ್ರಿಕೆ ನಡೆಸಲು ಆಕೆ ತನ್ನ ಕಟಿಬದ್ಧ ತಂಡದೊಂದಿಗೆ ಪಡುತ್ತಿದ್ದ ಪಡಿಪಾಟಲಿನ ಕಲ್ಪನೆಯೇ ನನಗಿರಲಿಲ್ಲ. ದೆಹಲಿ ರಾಜಕಾರಣದ ದಿಕ್ಕು ದೆಸೆಗಳನ್ನು ತಿಳಿದುಕೊಳ್ಳಲು ಆಗಾಗ ಫೋನ್ ಮಾಡುತ್ತಿದ್ದರು. ಚುನಾವಣೆಗಳ ಸಂದರ್ಭದಲ್ಲಿ ಕರ್ನಾಟಕದ ಚುನಾವಣಾ ರಾಜಕಾರಣದ ಸ್ಥಿತಿಗತಿಗಳ ವ್ಯಾಖ್ಯಾನಕಾರ್ತಿಯಾಗಿ ದೆಹಲಿಯಲ್ಲಿ ಖ್ಯಾತ ಟೀವಿ ಚಾನೆಲ್ಲುಗಳ ಪ್ಯಾನೆಲ್ ಡಿಸ್ಕಷನ್‍ಗಳಲ್ಲಿ ವಾರಗಟ್ಟಲೆ ಕುಳಿತುಕೊಳ್ಳುತ್ತಿದ್ದರು. ಅದರಿಂದ ಬಂದ ಲಕ್ಷ ರುಪಾಯಿಗೂ ಹೆಚ್ಚು ಹಣವನ್ನು ಪತ್ರಿಕೆ ನಡೆಸಲು ಬಳಸುತ್ತಿದ್ದ ವಿಚಾರ ನನಗೆ ತಿಳಿದದ್ದು ಆಕೆ ಗತಿಸಿದ ನಂತರವೇ. ಈ ದಿನಗಳಲ್ಲಿ ಊಟಕ್ಕೆ ಕುಳಿತಾಗಲೂ ಈ ಕಷ್ಟವನ್ನು ಹೇಳಿಕೊಳ್ಳದೆ ನಗುತ್ತಿದ್ದ ದೊಡ್ಡ ಹೃದಯದ ಹೆಣ್ಣುಮಗಳು ಗೌರಿ.

ಸಾಮಾಜಿಕ-ರಾಜಕೀಯ-ಧಾರ್ಮಿಕ-ವೈಚಾರಿಕ ಅಸಹಿಷ್ಣುತೆ ಅತ್ಯುಗ್ರ ರೀತಿಯಲ್ಲಿ ಪ್ರಕಟವಾದಾಗ ಪತ್ರಿಕೆಯ ಕಚೇರಿಯಲ್ಲಿ ಕುಳಿತುಕೊಳ್ಳದೆ ಬಯಲಿಗಿಳಿದು ಪ್ರವಾಸ ನಡೆಸಿ ಅದನ್ನು ಮುಖಾಮುಖಿಯಾದ ಅಪರೂಪದ ಪತ್ರಕರ್ತೆ ಆಕೆ.

ತಾವು ಗುಂಡಿಟ್ಟದ್ದು ಗೌರಿಯ ದೇಹಕ್ಕೇ ವಿನಾ ವಿಚಾರಕ್ಕಲ್ಲ ಎಂಬುದನ್ನು ದುರುಳರೂ ಮೂರ್ಖರೂ ಆದ ಹಂತಕರಿಗೆ ಈಗಲೂ ತಿಳಿದಿಲ್ಲ, ಮುಂದೆಯೂ ತಿಳಿಯುವುದಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...