ದಕ್ಷಿಣ ಪಿನಾಕಿನಿ (ಪೆನ್ನೈಯಾರ್) ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವೆ ಬಾಕಿ ಇರುವ ವಿವಾದಗಳನ್ನು ಪರಿಹರಿಸಲು ನ್ಯಾಯಮಂಡಳಿ ಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಫೆ.2) ನಿರ್ದೇಶನ ನೀಡಿದೆ.
ಕೇಂದ್ರ ಸರ್ಕಾರ ಒಂದು ತಿಂಗಳೊಳಗೆ ಜಲ ವಿವಾದ ನ್ಯಾಯಮಂಡಳಿ ಸ್ಥಾಪಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಕಳೆದ ವರ್ಷ (2025) ಡಿಸೆಂಬರ್ನಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣದ ತೀರ್ಪು ಕಾಯ್ದಿರಿಸಿತ್ತು. ಇಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಎನ್ವಿ ಅಂಜಾರಿಯಾ ಅವರಿದ್ದ ಪೀಠವು ಪ್ರಕಟಿಸಿದೆ. ಸೆಪ್ಟೆಂಬರ್ 2025ರಲ್ಲಿ, ವಿವಾದದ ಪರಿಹಾರಕ್ಕಾಗಿ ನ್ಯಾಯಮಂಡಳಿಯನ್ನು ರಚಿಸುವ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.
ಸಂಕ್ಷಿಪ್ತವಾಗಿ ಹೇಳುವುದಾದರೆ, ತಮಿಳುನಾಡು ರಾಜ್ಯವು ಕರ್ನಾಟಕ ರಾಜ್ಯ ಮತ್ತು ಭಾರತ ಒಕ್ಕೂಟದ (ಕೇಂದ್ರ ಸರ್ಕಾರ) ವಿರುದ್ಧ ಸಂವಿಧಾನದ 131ನೇ ವಿಧಿಯ ಅಡಿಯಲ್ಲಿ ಮೊಕದ್ದಮೆಯ ರೂಪದಲ್ಲಿ ಈ ವಿವಾದವನ್ನು ಸುಪ್ರೀಂ ಕೋರ್ಟ್ಗೆ ತೆಗೆದುಕೊಂಡು ಹೋಗಿತ್ತು. ವಿಚಾರಣೆಯ ಸಮಯದಲ್ಲಿ, ರಾಜ್ಯಗಳ ನಡುವಿನ ಮಾತುಕತೆಗಳು ಪರಿಹಾರಕ್ಕೆ ಕಾರಣವಾಗದ ಕಾರಣ, ಕೇಂದ್ರ ಸರ್ಕಾರ ಅಗತ್ಯವಿರುವುದನ್ನು ಮಾಡಲು ನ್ಯಾಯಮಂಡಳಿ ರಚಿಸಬಹುದು ಎಂದಿತ್ತು.
ಈ ನಡುವೆ, ಕರ್ನಾಟಕದ ಹೊಸ ಸರ್ಕಾರ ತಮಿಳುನಾಡಿನೊಂದಿಗಿನ ವಿವಾದವನ್ನು ಮಾತುಕತೆಗಳ ಮೂಲಕ ಪರಿಹರಿಸುವ ಸಾಧ್ಯತೆಯನ್ನು ಮರುಪರಿಶೀಲಿಸಲು ಬಯಸುತ್ತದೆ ಎಂಬ ಮನವಿಯನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಕರ್ನಾಟಕ ಸರ್ಕಾರ ಇದನ್ನು ಬೆಂಬಲಿಸಿತ್ತು. ಮೇ 2023ರಲ್ಲಿ ಆಯ್ಕೆಯಾದ ಹೊಸ ಸರ್ಕಾರಕ್ಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ರಾಜ್ಯದೊಂದಿಗೆ ಮಾತುಕತೆ ನಡೆಸಲು ಯಾವುದೇ ಅವಕಾಶ ಸಿಕ್ಕಿಲ್ಲ ಎಂದು ವಾದಿಸಿತ್ತು. ಮತ್ತೊಂದೆಡೆ, ತಮಿಳುನಾಡು ಪರ ವಕೀಲರು, ಕೇಂದ್ರ ಸರ್ಕಾರ ನ್ಯಾಯಮಂಡಳಿಯ ರಚನೆಯ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಪ್ರತಿಪಾದಿಸುವ ಮೂಲಕ ಕರ್ನಾಟಕದ ಮನವಿಗೆ ಆಕ್ಷೇಪ ಸಲ್ಲಿಸಿದ್ದರು, ನಂತರ ಅದನ್ನು ಹಿಂತೆಗೆದುಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರ ಮಾತುಕತೆಗಳ ಮೂಲಕ ವಿವಾದವನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ನಂತರವೇ ನ್ಯಾಯಮಂಡಳಿಯನ್ನು ರಚಿಸಬಹುದು ಎಂದು ಹೇಳಿತ್ತು.
ಜನವರಿ 2024ರಲ್ಲಿ, ಹೊಸ ಸಂಧಾನ ಸಮಿತಿಯನ್ನು ರಚಿಸುವಂತೆ ನಿರ್ದೇಶಿಸಿದ ಸುಪ್ರೀಂ ಕೋರ್ಟ್, ಅಂತಾರಾಜ್ಯ ನದಿ ನೀರು ವಿವಾದ ಕಾಯ್ದೆ, 1956 ರ ಸೆಕ್ಷನ್ 4 ರ ಅಡಿಯಲ್ಲಿ, ಕೇಂದ್ರ ಸರ್ಕಾರವು ನೀರಿನ ವಿವಾದವನ್ನು ಮಾತುಕತೆಯ ಮೂಲಕ ಇತ್ಯರ್ಥಪಡಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ನಂತರವೇ ನ್ಯಾಯಮಂಡಳಿಯನ್ನು ರಚಿಸಬಹುದು ಎಂದು ಹೇಳಿತ್ತು. ಮಾತುಕತೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಸಮಯದ ಮಿತಿಯನ್ನು ಕಾಯ್ದೆಯಲ್ಲಿ 1 ವರ್ಷ ಎಂದು ನಿರ್ದಿಷ್ಟಪಡಿಸಲಾಗಿದೆ ಎಂದಿತ್ತು.
ನವೆಂಬರ್ 2024ರಲ್ಲಿ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವಿನ ಮಧ್ಯಸ್ಥಿಕೆ ಪ್ರಕ್ರಿಯೆಯು ವಿಫಲವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.
ಪೆನ್ನೈಯಾರ್ ನದಿ (ಕರ್ನಾಟಕದಲ್ಲಿ ದಕ್ಷಿಣ ಪಿನಾಕಿನಿ) ವಿವಾದವು ಪ್ರಮುಖವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ನೀರಿನ ಹಂಚಿಕೆಗೆ ಸಂಬಂಧಿಸಿದ್ದಾಗಿದೆ.
ಈ ನದಿಯು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಹುಟ್ಟಿ, ಕೋಲಾರ ಜಿಲ್ಲೆಯ ಮೂಲಕ ಹರಿದು ತಮಿಳುನಾಡನ್ನು ಪ್ರವೇಶಿಸುತ್ತದೆ. ತಮಿಳುನಾಡಿನಲ್ಲಿ ಇದನ್ನು ‘ಪೆನ್ನೈಯಾರ್’ ಅಥವಾ ‘ತೆನ್ಪೆನ್ನೈ’ ಎಂದು ಕರೆಯಲಾಗುತ್ತದೆ.
ಕರ್ನಾಟಕವು ಈ ನದಿಯ ಉಪನದಿಯಾದ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಬಂಗಾರಪೇಟೆ ತಾಲ್ಲೂಕಿನ ಯರಗೋಳ್ ಬಳಿ ಅಣೆಕಟ್ಟು (Check Dam) ಮತ್ತು ಜಲಾಶಯಗಳನ್ನು ನಿರ್ಮಾಣ ಮಾಡುತ್ತಿರುವುದಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದೆ.
ಕರ್ನಾಟಕದ ಯೋಜನೆಗಳಿಂದ ಕೆಳಭಾಗದ ತಮಿಳುನಾಡು ಜಿಲ್ಲೆಗಳಿಗೆ ನೀರಿನ ಹರಿವು ಕಡಿಮೆಯಾಗುತ್ತದೆ ಮತ್ತು ಇದು 1892ರ ಅಂತಾರಾಜ್ಯ ಒಪ್ಪಂದದ ಉಲ್ಲಂಘನೆಯಾಗಿದೆ ಎಂಬುದು ತಮಿಳುನಾಡಿನ ವಾದವಾಗಿದೆ. ತನ್ನ ಪಾಲಿನ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಬಳಸಿಕೊಳ್ಳುವ ಹಕ್ಕು ತನಗಿದೆ ಮತ್ತು ಇದರಿಂದ ತಮಿಳುನಾಡಿಗೆ ಯಾವುದೇ ದೊಡ್ಡ ತೊಂದರೆಯಾಗುವುದಿಲ್ಲ ಎಂದು ಕರ್ನಾಟಕ ಪ್ರತಿಪಾದಿಸಿದೆ.
ಈ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಲು ಸಾಧ್ಯವಾಗದ ಕಾರಣ, ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಒಂದು ತಿಂಗಳ ಒಳಗೆ ‘ಪೆನ್ನೈಯಾರ್ ನದಿ ನೀರು ವಿವಾದ ನ್ಯಾಯಮಂಡಳಿ’ ಸ್ಥಾಪಿಸುವಂತೆ ಆದೇಶಿಸಿದೆ. ಈ ಮೂಲಕ ಕಾವೇರಿ ವಿವಾದದಂತೆ ಈ ನದಿ ವಿವಾದವೂ ಈಗ ಅಧಿಕೃತ ನ್ಯಾಯಾಂಗ ಪ್ರಕ್ರಿಯೆಗೆ ಒಳಪಡಲಿದೆ.


