Homeಅಂಕಣಗಳುಮಾತು ಮರೆತ ಭಾರತ-23; ಮಿರ್ಚ್‌ಪುರ ಫೈಲ್: ಊರುಬಿಟ್ಟ ದಲಿತರಿಗೆ ಧೈರ್ಯ ತುಂಬುವವರಾರು?

ಮಾತು ಮರೆತ ಭಾರತ-23; ಮಿರ್ಚ್‌ಪುರ ಫೈಲ್: ಊರುಬಿಟ್ಟ ದಲಿತರಿಗೆ ಧೈರ್ಯ ತುಂಬುವವರಾರು?

- Advertisement -
- Advertisement -

ಮಿರ್ಚ್‌ಪುರ, ಹರಿಯಾಣ ರಾಜ್ಯದ ಹಿಸಾರ್ ಜಿಲ್ಲೆಯ ಗ್ರಾಮ. ಸಿಂಧೂ ಬಯಲಿನ ನಾಗರಿಕತೆಗೆ ಸಂಬಂಧಿಸಿದ ರಾಖೀಗರಿ ಸ್ಥಳ ಇಲ್ಲಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿದೆ. ಈ ಗ್ರಾಮದಲ್ಲಿ ಜಾಟ್ ಜನಾಂಗ ಅತ್ಯಧಿಕ ಸಂಖ್ಯೆಯಲ್ಲಿದ್ದರೂ ದಲಿತರು ಸಹ ಶೇ.18ರಷ್ಟಿದ್ದಾರೆ. ದಲಿತರಲ್ಲಿ ವಾಲ್ಮೀಕಿ ಸಮುದಾಯದ (ಕರ್ನಾಟಕದ ವಾಲ್ಮೀಕಿ ಸಮುದಾಯ ಬೇರೆ) ಜನಸಂಖ್ಯೆಯೇ ಹೆಚ್ಚಿದ್ದು ಓಟ್ ಬ್ಯಾಂಕ್ ರಾಜಕಾರಣದಲ್ಲಿ ಗಮನಾರ್ಹವಾದ ಪಾತ್ರವನ್ನೇ ಹೊಂದಿದ್ದರು. ಆದರೆ ಇಂದು ಈ ವಾಲ್ಮೀಕಿ ಸಮುದಾಯದ ಒಂದು ಕುಟುಂಬವೂ ಸಹ ಮಿರ್ಚ್‌ಪುರದಲ್ಲಿ ವಾಸವಾಗಿಲ್ಲ. ಜಾಟರು ನಡೆಸಿದ ಅಮಾನವೀಯ ದೌರ್ಜನ್ಯಕ್ಕೆ ಬೇಸತ್ತು ಭಾರತದಾದ್ಯಂತ ಚದುರಿಹೋಗಿದ್ದಾರೆ. ದಲಿತರು ನೂರಾರು ವರ್ಷಗಳಿಂದ ಬಾಳಿ ಬದುಕಿದ್ದ ಊರು ಬಿಟ್ಟುಹೋಗಲು ಕಾರಣವೇನು? ಮುಂದೆ ಮಿರ್ಚ್‌ಪುರ ಫೈಲ್ ಕತೆಯನ್ನು ನೋಡೋಣ.

ದಲಿತರಾದ ವಾಲ್ಮೀಕಿ ಸಮುದಾಯದ ಜಯಪ್ರಕಾಶ ಕುಟುಂಬ ನಾಯಿಯೊಂದನ್ನು ಸಾಕಿತ್ತು. ಏಪ್ರಿಲ್ 19, 2010ರ ರಾತ್ರಿ ಊರಿಗೆ ಬೈಕಿನಲ್ಲಿ ಮರಳಿದ ಹಿಂದೂ ಮೇಲ್ಜಾತಿ ಜಾಟ್ ಯುವಕರ ಗುಂಪನ್ನು ಕಂಡು ಆ ನಾಯಿ ಬೊಗಳಿತು. ತಮ್ಮನ್ನು ಕಂಡು ಬೊಗಳಿದ ನಾಯಿ ದಲಿತರು ಸಾಕಿರುವುದೆಂದು ತಿಳಿದಿದ್ದ ಜಾಟ್ ಯುವಕರಿಗೆ ಅದನ್ನು ಸಹಿಸಲಾಗಲಿಲ್ಲ. ಹಾಗಾಗಿ ಅ ಯುವಕರಲ್ಲೊಬ್ಬ ಆ ಸಾಕುನಾಯಿಯ ಮೇಲೆ ಇಟ್ಟಿಗೆಯನ್ನು ತೂರಿಯೋಬಿಟ್ಟ. ಇದನ್ನು ಕಂಡ ದಲಿತ ಕುಟುಂಬದ ಯೋಗೇಶ್ ಆ ಯುವಕರಿಗೆ ಬುದ್ಧಿವಾದ ಹೇಳಿದ. ’ನಾಯಿ ಬೊಗಳುವುದು ಸಹಜ; ಅದಕ್ಕೆಲ್ಲ ಇಟ್ಟಿಗೆಯಿಂದ ಹೊಡೆಯುವುದ’ ಎಂದು ಪ್ರಶ್ನಿಸಿದ. ಆಗ ಅಲ್ಲಿ ಎರಡು ಗುಂಪುಗಳ ನಡುವೆ ಸಣ್ಣ ಗಲಾಟೆಯೂ ನಡೆಯಿತು. ಆದರೆ ಊರಿನವರೆಲ್ಲರೂ ಮಧ್ಯಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿ ಸಮಾಧಾನ ಪಡಿಸಿದ್ದರು.

ಇದಾದ ಮಾರನೇ ದಿನದಿಂದಲೇ ನಾಯಿ ಸಾಕಿದ್ದ ದಲಿತ ಸಮುದಾಯದವರು ತಮ್ಮ ಕ್ಷಮೆ ಕೇಳಬೇಕೆಂದು ಜಾಟ್ ಸಮುದಾಯದವರು ಒತ್ತಾಯಿಸಿದರು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದೂ ಧಮಕಿ ಹಾಕಿದರು. ಇದಕ್ಕೆ ದಲಿತ ಯುವಕರು ಒಪ್ಪಲಿಲ್ಲವಾದರೂ, ದಲಿತ ಮುಖಂಡರಾದ ವೀರ್ ಭನ್ ಮತ್ತು ಕರಣ್ ಸಿಂಗ್ ಅವರುಗಳು ಕ್ಷಮೆ ಕೇಳಲು ಜಾಟ್ ಕುಟುಂಬದ ಮನೆಗೆ ಹೋಗಿಯೇಬಿಟ್ಟರು. ಜಾಟ್ ಮುಖ್ಯಸ್ಥನ ಮನೆಯ ಮುಂದೆ ನಿಂತು ಕ್ಷಮೆ ಕೇಳಿದ ದಲಿತ ಹಿರೀಕರಿಬ್ಬರಿಗೂ ಜಾಟರು ಅಮಾನವೀಯವಾಗಿ ಥಳಿಸಿದರು. ಅವರಿಬ್ಬರಲ್ಲಿ ಒಬ್ಬರು ತೀವ್ರ ಗಾಯಗೊಂಡಿದ್ದರಿಂದ ಅವರನ್ನು ಆಸ್ಪತ್ರೆಗೂ ಸೇರಿಸಲಾಯಿತು. ಪೊಲೀಸ್ ಸ್ಟೇಷನ್ನಿನಲ್ಲಿ ದೂರನ್ನು ದಾಖಲಿಸಲಾಯಿತು.

ಇದಾದ ಮಾರನೇ ದಿನ ಅಂದರೆ ಏಪ್ರಿಲ್ 20, 2010ರಂದು ದಾರಿಯಲ್ಲಿ ಹೋಗುತ್ತಿದ್ದ ದಲಿತ ಯುವಕರನ್ನುದ್ದೇಶಿಸಿ ಜಾಟ್ ಯುವಕನೊಬ್ಬ ’ನಿಮ್ಮ ಮನೆಗಳನ್ನ ಸುಟ್ಟುಹಾಕ್ತೀವಿ ನೋಡಿ’ ಎಂದಿದ್ದನು. ಆಗಲೂ ಎರಡು ಗುಂಪುಗಳ ನಡುವೆ ಜಗಳವಾಗಿತ್ತು. ಈ ಜಗಳಕ್ಕೆ ಸಂಬಂಧಿಸಿದಂತೆ ಊರಿನ ಜಾಟ್ ಜನರೆಲ್ಲರೂ ಒಂದೆಡೆ ಸೇರಿದರು. ಅದರಲ್ಲಿ ಮಹಿಳೆಯರೂ ಭಾಗವಹಿಸಿದ್ದರು. ಈ ಜಗಳಕ್ಕೆ ಸಂಬಂಧಿಸಿದಂತೆ ’ದಲಿತರು ಜಾಟ್ ಯುವಕನೊಬ್ಬನನ್ನು ಸುಖಾಸುಮ್ಮನೆ ಥಳಿಸಿದ್ದಾರೆ’ ಎಂಬ ಸುಳ್ಳು ಸುದ್ದಿಯನ್ನು ಜಾಟರು ಊರಲ್ಲೆಲ್ಲಾ ಹಬ್ಬಿಸಿದರು.

ಈ ಮೇಲಿನ ಮೂರೂ ಘಟನೆಗಳು ಮಿರ್ಚ್‌ಪುರದಲ್ಲಿ ದಲಿತರ ವಿರುದ್ಧ ಬಹುದೊಡ್ಡ ಸಂಚನ್ನು ರೂಪಿಸಿದವು. ಏಪ್ರಿಲ್ 21ರಂದು ಇದ್ದಕ್ಕಿದ್ದಂತೆ ಸುಮಾರು 100-150 ಜನಸಂಖ್ಯೆಯ ಜಾಟ್ ಯುವಕರ ತಂಡವೊಂದು ಲಾಠಿ, ಕಲ್ಲು, ಪೆಟ್ರೋಲ್ ಹಿಡಿದು ಗುಂಪುಗೂಡಿತು. ಅಲ್ಲೇನಾಗುತ್ತಿದೆ ಎಂಬುದನ್ನು ತಿಳಿಯುವಷ್ಟರಲ್ಲಿ ದಲಿತರ ಮನೆಗಳ ಮೇಲೆ ಕಲ್ಲುಗಳನ್ನು ತೂರಲಾಯಿತು. ಕೆಲವೇ ನಿಮಿಷಗಳಲ್ಲಿ ಜಾಟರ ಮತ್ತೊಂದು ಗುಂಪು ಸಹ ಜೊತೆಗೂಡಿಕೊಂಡಿದ್ದರಿಂದ ಅವರ ಸಂಖ್ಯೆ 400ಕ್ಕೆ ಏರಿತು. ಕೆಲವು ವರದಿಗಳ ಪ್ರಕಾರ ಅದು 1000 ಮುಟ್ಟಿತ್ತು. ಜಾಟರ ಮುಂದೆ ಜನಸಂಖ್ಯೆಯಲ್ಲಿ ಕಡಿಮೆ ಇದ್ದ ದಲಿತರ ಗುಂಪು ಸಹ ಸುಮ್ಮನೆ ಹೆದರಿ ಕುಳಿತುಕೊಳ್ಳದೆ ಅಥವಾ ಓಡಿಹೋಗದೇ ಕೈಗೆ ಸಿಕ್ಕ ಕಲ್ಲು ಮತ್ತು ಇಟ್ಟಿಗೆಗಳನ್ನು ಜಾಟರತ್ತ ತೂರಿ ತಿರುಗೇಟು ನೀಡಿತು. ಪರಿಸ್ಥಿತಿ ತಾರಕಕ್ಕೇರುತ್ತಿರುವುದನ್ನು ಕಂಡ ಹಿರಿಯ ಮುಖಂಡರುಗಳು ಎರಡೂ ಗುಂಪಿನ ಯುವಕರಿಗೆ ಬುದ್ಧಿ ಹೇಳಿ ಈಗಲೇ ಸಭೆ ಸೇರಿ ವಿಷಯ ಬಗೆಹರಿಸಿಕೊಳ್ಳೋಣವೆಂದು ತಿಳಿಸಿದರು. ಈ ರಾಜಿ ಸಂಧಾನ ಸಭೆಯನ್ನು ಪೊಲೀಸ್ ಅಧಿಕಾರಿಯೊಬ್ಬರು ನಡೆಸಿದ್ದರೆಂದೇ ಹೇಳಲಾಗುತ್ತದೆ. ಇದರ ಪರಿಣಾಮವಾಗಿ ದಲಿತ ಮತ್ತು ಜಾಟ್ ಸಮುದಾಯದ ಪುರುಷರು ಪಂಚಾಯ್ತಿ ಸೇರಿದರು. ಹೀಗೆ ಮಾತುಕತೆ ಆರಂಭಿಸುವಷ್ಟರಲ್ಲಿ ದಲಿತ ಕೇರಿಯ ಕಡೆಯಿಂದ ಮಹಿಳೆಯರ ಕೂಗು ಮುಗಿಲುಮುಟ್ಟಿತು. ಕ್ಷಣ ಮಾತ್ರದಲ್ಲಿ ದಲಿತ ಕೇರಿಯನ್ನು ಕಡುಗಪ್ಪಿನ ಹೊಗೆ ಆವರಿಸಿತ್ತು. ದಲಿತರ ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ದಲಿತರು ತಮ್ಮ ಮನೆಗಳತ್ತ ಓಡಿ ವಯಸ್ಸಾದವರನ್ನು, ಮಕ್ಕಳನ್ನು ಹಾಗೂ ಕೈಗೆ ಸಿಕ್ಕಷ್ಟು ಸಾಮಾನುಗಳನ್ನು ರಕ್ಷಿಸಿಕೊಂಡರು. ಆದರೆ 70 ವರ್ಷದ ತಾರಾ ಚಂದ್ ಹಾಗೂ ಆತನ ಪೋಲಿಯೋ ಪೀಡಿತ ಕೊನೆಯ ಮಗಳಿಬ್ಬರೂ ಮನೆಯಿಂದ ಹೊರಬರಲಾರದೇ ಜಾಟರಿತ್ತ ಬೆಂಕಿಗೆ ಗುಡಿಸಲಿನಲ್ಲಿಯೇ ಆಹುತಿಯಾಗಿದ್ದರು. ಈ ಭೀಕರ ಮಾರಣಹೋಮದಲ್ಲಿ 51 ದಲಿತರು ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದರು. ಸುಮಾರು 18 ಮನೆಗಳು ಸುಟ್ಟು ಕರಕಲಾಗಿದ್ದವು. ಹಿಂದೂ ಮೇಲ್ಜಾತಿಗಳೊಳಗೆ ತುಂಬಿರುವ ಸನಾತನ ಜಾತಿಪ್ರಜ್ಞೆಯಿಂದ, ಕ್ಷುಲ್ಲಕ ಕಾರಣಕ್ಕೆ ದಲಿತರಿಬ್ಬರನ್ನೂ ಹಾಗೂ ಮಿರ್ಚ್‌ಪುರದ ದಲಿತರು ಕಟ್ಟಿಕೊಂಡಿದ್ದ ಬದುಕನ್ನು ಸುಟ್ಟುಹಾಕಿತ್ತು.

ಈ ಘಟನೆಯಿಂದ ಭಯಭೀತರಾದ ದಲಿತರು ಊರುಬಿಟ್ಟು ವಾಸಕ್ಕಾಗಿ ಅಲೆದಾಡಿದರು. ಸುಮಾರು 150 ವಾಲ್ಮೀಕಿ ದಲಿತರು ಕೊನೆಗೆ ಕನ್ನಾಟ್ ನಗರದ ವಾಲ್ಮೀಕಿ ಮಂದಿರದಲ್ಲಿ ತಿಂಗಳಾನುಗಟ್ಟಲೆ ಕಾಲದೂಡಿ ಉಸಿರಾಡಿದರು. ಜಾಟರಿಂದ ಬೆದರಿಕೆಗಳು ಪದೇಪದೇ ಬರುತ್ತಿದ್ದ ಕಾರಣ 2011ರಷ್ಟೊತ್ತಿಗೆ 12 ಕುಟುಂಬಗಳು ಊರುಬಿಟ್ಟವು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 254 ವಾಲ್ಮೀಕಿ ದಲಿತ ಕುಟುಂಬಗಳು ಊರುಬಿಟ್ಟು ದೇಶದಾದ್ಯಂತ ಚದುರಿಹೋಗಿದ್ದಾರೆ. ನೂರಾರು ವರ್ಷಗಳ ಕಾಲ ಒಂದೆಡೆ ನೆಲೆಸಿ ತಮ್ಮ ಬದುಕನ್ನು ರೂಪಿಸಿಕೊಂಡಿದ್ದ ಈ ದಲಿತ ಕುಟುಂಬಗಳು ಜಾಟರ ದೌರ್ಜನ್ಯಕ್ಕೆ ಬಲಿಯಾಗಿ ತಮ್ಮ ಜನ್ಮಸ್ಥಾನವನ್ನು ಬಿಟ್ಟು ಊರೂರು ಅಲೆಯುತ್ತಿದ್ದಾರೆ.

ಈ ನರಮೇಧಕ್ಕೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರು 103 ಜನ ಆರೋಪಿಗಳನ್ನು ಬಂಧಿಸಿದರು. ಅದೂ ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ಕಾರಣಕ್ಕೆ! ಜನವರಿ 2011ರಷ್ಟೊತ್ತಿಗೆ ಅವರಲ್ಲಿ 98 ಆರೋಪಿಗಳನ್ನು ತಿಹಾರ್ ಜೈಲಿಗೆ ಹಾಕಲಾಯಿತು. ಇದರ ವಿರುದ್ಧ ಜಾಟರು ಬೀದಿಗಿಳಿದು ಹೋರಾಡಿದ್ದರು. ಇದರ ಪರಿಣಾಮವಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಸೆಪ್ಟೆಂಬರ್ 24ರಂದು 82 ಜನರನ್ನು ಖುಲಾಸೆಗೊಳಿಸಿದ ಕೋರ್ಟ್ ಕೇವಲ 15 ಆರೋಪಿಗಳನ್ನು ಅಪರಾಧಿಗಳೆಂದು ತೀರ್ಮಾನಿಸಿತು. ಆದರೆ ಅವರ್‍ಯಾರಿಗೂ ಕೊಲೆ ಮಾಡಿದ್ದಕ್ಕೆ ಶಿಕ್ಷೆ ಆಗಲಿಲ್ಲ. ಆದರೆ ಹೈಕೋರ್ಟ್ ಈ ಮೇಲಿನ ತೀರ್ಪನ್ನು ಅನೂರ್ಜಿತಗೊಳಿಸಿ 12 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತು.

2017ರಲ್ಲಿ ಮತ್ತೆ 40 ವಾಲ್ಮೀಕಿ ಕುಟುಂಬಗಳು ಇದೇ ಮಿರ್ಚ್‌ಪುರವನ್ನು ಬಿಟ್ಟು ಹೊರಹೋದವು. ಇದಕ್ಕೆ ಕಾರಣ ದಲಿತ ಯುವಕ ಸೈಕಲ್ ರೇಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಟರು ಏಕಾಏಕಿ ಆತನನ್ನು ಥಳಿಸಿದ್ದಾಗಿತ್ತು. ಇಂದು ಮಿರ್ಚ್‌ಪುರದಲ್ಲಿ ವಾಸಿಸುತ್ತಿರುವ ಬೆರಳೆಣಿಕೆಯಷ್ಟು ದಲಿತ ಕುಟುಂಬಗಳೂ ಸಹ ಊರು ಬಿಡುವ ಸಿದ್ಧತೆಯಲ್ಲಿವೆ. ಕಾಶ್ಮೀರಿ ಪಂಡಿತರು ಕಾಣುವ ಕಣ್ಣುಗಳಿಗೆ ಮಿರ್ಚ್‌ಪುರದ ವಾಲ್ಮೀಕಿಗಳು ಕಾಣುವರೇ?

ಕೊನೆಯದಾಗಿ ಇನ್ನೊಂದು ವಿಚಾರವನ್ನು ನೆನಪಿಸುತ್ತೇನೆ. 2010ರಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. 2017ರಲ್ಲಿ ಬಿಜೆಪಿ ಸರ್ಕಾರವಿತ್ತು.


ಇದನ್ನೂ ಓದಿ: ಮಾತು ಮರೆತ ಭಾರತ; ಭೀಮಾ ಕೊರೆಗಾಂವ್ ಫೈಲ್: ಅಂಬೇಡ್ಕರ್ ಮನೆತನದ ಸದಸ್ಯನನ್ನೇ ಜೈಲಿಗಟ್ಟಿದ ಬಿಜೆಪಿ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...