Homeಅಂಕಣಗಳುಮಾತು ಮರೆತ ಭಾರತ-23; ಮಿರ್ಚ್‌ಪುರ ಫೈಲ್: ಊರುಬಿಟ್ಟ ದಲಿತರಿಗೆ ಧೈರ್ಯ ತುಂಬುವವರಾರು?

ಮಾತು ಮರೆತ ಭಾರತ-23; ಮಿರ್ಚ್‌ಪುರ ಫೈಲ್: ಊರುಬಿಟ್ಟ ದಲಿತರಿಗೆ ಧೈರ್ಯ ತುಂಬುವವರಾರು?

- Advertisement -
- Advertisement -

ಮಿರ್ಚ್‌ಪುರ, ಹರಿಯಾಣ ರಾಜ್ಯದ ಹಿಸಾರ್ ಜಿಲ್ಲೆಯ ಗ್ರಾಮ. ಸಿಂಧೂ ಬಯಲಿನ ನಾಗರಿಕತೆಗೆ ಸಂಬಂಧಿಸಿದ ರಾಖೀಗರಿ ಸ್ಥಳ ಇಲ್ಲಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿದೆ. ಈ ಗ್ರಾಮದಲ್ಲಿ ಜಾಟ್ ಜನಾಂಗ ಅತ್ಯಧಿಕ ಸಂಖ್ಯೆಯಲ್ಲಿದ್ದರೂ ದಲಿತರು ಸಹ ಶೇ.18ರಷ್ಟಿದ್ದಾರೆ. ದಲಿತರಲ್ಲಿ ವಾಲ್ಮೀಕಿ ಸಮುದಾಯದ (ಕರ್ನಾಟಕದ ವಾಲ್ಮೀಕಿ ಸಮುದಾಯ ಬೇರೆ) ಜನಸಂಖ್ಯೆಯೇ ಹೆಚ್ಚಿದ್ದು ಓಟ್ ಬ್ಯಾಂಕ್ ರಾಜಕಾರಣದಲ್ಲಿ ಗಮನಾರ್ಹವಾದ ಪಾತ್ರವನ್ನೇ ಹೊಂದಿದ್ದರು. ಆದರೆ ಇಂದು ಈ ವಾಲ್ಮೀಕಿ ಸಮುದಾಯದ ಒಂದು ಕುಟುಂಬವೂ ಸಹ ಮಿರ್ಚ್‌ಪುರದಲ್ಲಿ ವಾಸವಾಗಿಲ್ಲ. ಜಾಟರು ನಡೆಸಿದ ಅಮಾನವೀಯ ದೌರ್ಜನ್ಯಕ್ಕೆ ಬೇಸತ್ತು ಭಾರತದಾದ್ಯಂತ ಚದುರಿಹೋಗಿದ್ದಾರೆ. ದಲಿತರು ನೂರಾರು ವರ್ಷಗಳಿಂದ ಬಾಳಿ ಬದುಕಿದ್ದ ಊರು ಬಿಟ್ಟುಹೋಗಲು ಕಾರಣವೇನು? ಮುಂದೆ ಮಿರ್ಚ್‌ಪುರ ಫೈಲ್ ಕತೆಯನ್ನು ನೋಡೋಣ.

ದಲಿತರಾದ ವಾಲ್ಮೀಕಿ ಸಮುದಾಯದ ಜಯಪ್ರಕಾಶ ಕುಟುಂಬ ನಾಯಿಯೊಂದನ್ನು ಸಾಕಿತ್ತು. ಏಪ್ರಿಲ್ 19, 2010ರ ರಾತ್ರಿ ಊರಿಗೆ ಬೈಕಿನಲ್ಲಿ ಮರಳಿದ ಹಿಂದೂ ಮೇಲ್ಜಾತಿ ಜಾಟ್ ಯುವಕರ ಗುಂಪನ್ನು ಕಂಡು ಆ ನಾಯಿ ಬೊಗಳಿತು. ತಮ್ಮನ್ನು ಕಂಡು ಬೊಗಳಿದ ನಾಯಿ ದಲಿತರು ಸಾಕಿರುವುದೆಂದು ತಿಳಿದಿದ್ದ ಜಾಟ್ ಯುವಕರಿಗೆ ಅದನ್ನು ಸಹಿಸಲಾಗಲಿಲ್ಲ. ಹಾಗಾಗಿ ಅ ಯುವಕರಲ್ಲೊಬ್ಬ ಆ ಸಾಕುನಾಯಿಯ ಮೇಲೆ ಇಟ್ಟಿಗೆಯನ್ನು ತೂರಿಯೋಬಿಟ್ಟ. ಇದನ್ನು ಕಂಡ ದಲಿತ ಕುಟುಂಬದ ಯೋಗೇಶ್ ಆ ಯುವಕರಿಗೆ ಬುದ್ಧಿವಾದ ಹೇಳಿದ. ’ನಾಯಿ ಬೊಗಳುವುದು ಸಹಜ; ಅದಕ್ಕೆಲ್ಲ ಇಟ್ಟಿಗೆಯಿಂದ ಹೊಡೆಯುವುದ’ ಎಂದು ಪ್ರಶ್ನಿಸಿದ. ಆಗ ಅಲ್ಲಿ ಎರಡು ಗುಂಪುಗಳ ನಡುವೆ ಸಣ್ಣ ಗಲಾಟೆಯೂ ನಡೆಯಿತು. ಆದರೆ ಊರಿನವರೆಲ್ಲರೂ ಮಧ್ಯಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿ ಸಮಾಧಾನ ಪಡಿಸಿದ್ದರು.

ಇದಾದ ಮಾರನೇ ದಿನದಿಂದಲೇ ನಾಯಿ ಸಾಕಿದ್ದ ದಲಿತ ಸಮುದಾಯದವರು ತಮ್ಮ ಕ್ಷಮೆ ಕೇಳಬೇಕೆಂದು ಜಾಟ್ ಸಮುದಾಯದವರು ಒತ್ತಾಯಿಸಿದರು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದೂ ಧಮಕಿ ಹಾಕಿದರು. ಇದಕ್ಕೆ ದಲಿತ ಯುವಕರು ಒಪ್ಪಲಿಲ್ಲವಾದರೂ, ದಲಿತ ಮುಖಂಡರಾದ ವೀರ್ ಭನ್ ಮತ್ತು ಕರಣ್ ಸಿಂಗ್ ಅವರುಗಳು ಕ್ಷಮೆ ಕೇಳಲು ಜಾಟ್ ಕುಟುಂಬದ ಮನೆಗೆ ಹೋಗಿಯೇಬಿಟ್ಟರು. ಜಾಟ್ ಮುಖ್ಯಸ್ಥನ ಮನೆಯ ಮುಂದೆ ನಿಂತು ಕ್ಷಮೆ ಕೇಳಿದ ದಲಿತ ಹಿರೀಕರಿಬ್ಬರಿಗೂ ಜಾಟರು ಅಮಾನವೀಯವಾಗಿ ಥಳಿಸಿದರು. ಅವರಿಬ್ಬರಲ್ಲಿ ಒಬ್ಬರು ತೀವ್ರ ಗಾಯಗೊಂಡಿದ್ದರಿಂದ ಅವರನ್ನು ಆಸ್ಪತ್ರೆಗೂ ಸೇರಿಸಲಾಯಿತು. ಪೊಲೀಸ್ ಸ್ಟೇಷನ್ನಿನಲ್ಲಿ ದೂರನ್ನು ದಾಖಲಿಸಲಾಯಿತು.

ಇದಾದ ಮಾರನೇ ದಿನ ಅಂದರೆ ಏಪ್ರಿಲ್ 20, 2010ರಂದು ದಾರಿಯಲ್ಲಿ ಹೋಗುತ್ತಿದ್ದ ದಲಿತ ಯುವಕರನ್ನುದ್ದೇಶಿಸಿ ಜಾಟ್ ಯುವಕನೊಬ್ಬ ’ನಿಮ್ಮ ಮನೆಗಳನ್ನ ಸುಟ್ಟುಹಾಕ್ತೀವಿ ನೋಡಿ’ ಎಂದಿದ್ದನು. ಆಗಲೂ ಎರಡು ಗುಂಪುಗಳ ನಡುವೆ ಜಗಳವಾಗಿತ್ತು. ಈ ಜಗಳಕ್ಕೆ ಸಂಬಂಧಿಸಿದಂತೆ ಊರಿನ ಜಾಟ್ ಜನರೆಲ್ಲರೂ ಒಂದೆಡೆ ಸೇರಿದರು. ಅದರಲ್ಲಿ ಮಹಿಳೆಯರೂ ಭಾಗವಹಿಸಿದ್ದರು. ಈ ಜಗಳಕ್ಕೆ ಸಂಬಂಧಿಸಿದಂತೆ ’ದಲಿತರು ಜಾಟ್ ಯುವಕನೊಬ್ಬನನ್ನು ಸುಖಾಸುಮ್ಮನೆ ಥಳಿಸಿದ್ದಾರೆ’ ಎಂಬ ಸುಳ್ಳು ಸುದ್ದಿಯನ್ನು ಜಾಟರು ಊರಲ್ಲೆಲ್ಲಾ ಹಬ್ಬಿಸಿದರು.

ಈ ಮೇಲಿನ ಮೂರೂ ಘಟನೆಗಳು ಮಿರ್ಚ್‌ಪುರದಲ್ಲಿ ದಲಿತರ ವಿರುದ್ಧ ಬಹುದೊಡ್ಡ ಸಂಚನ್ನು ರೂಪಿಸಿದವು. ಏಪ್ರಿಲ್ 21ರಂದು ಇದ್ದಕ್ಕಿದ್ದಂತೆ ಸುಮಾರು 100-150 ಜನಸಂಖ್ಯೆಯ ಜಾಟ್ ಯುವಕರ ತಂಡವೊಂದು ಲಾಠಿ, ಕಲ್ಲು, ಪೆಟ್ರೋಲ್ ಹಿಡಿದು ಗುಂಪುಗೂಡಿತು. ಅಲ್ಲೇನಾಗುತ್ತಿದೆ ಎಂಬುದನ್ನು ತಿಳಿಯುವಷ್ಟರಲ್ಲಿ ದಲಿತರ ಮನೆಗಳ ಮೇಲೆ ಕಲ್ಲುಗಳನ್ನು ತೂರಲಾಯಿತು. ಕೆಲವೇ ನಿಮಿಷಗಳಲ್ಲಿ ಜಾಟರ ಮತ್ತೊಂದು ಗುಂಪು ಸಹ ಜೊತೆಗೂಡಿಕೊಂಡಿದ್ದರಿಂದ ಅವರ ಸಂಖ್ಯೆ 400ಕ್ಕೆ ಏರಿತು. ಕೆಲವು ವರದಿಗಳ ಪ್ರಕಾರ ಅದು 1000 ಮುಟ್ಟಿತ್ತು. ಜಾಟರ ಮುಂದೆ ಜನಸಂಖ್ಯೆಯಲ್ಲಿ ಕಡಿಮೆ ಇದ್ದ ದಲಿತರ ಗುಂಪು ಸಹ ಸುಮ್ಮನೆ ಹೆದರಿ ಕುಳಿತುಕೊಳ್ಳದೆ ಅಥವಾ ಓಡಿಹೋಗದೇ ಕೈಗೆ ಸಿಕ್ಕ ಕಲ್ಲು ಮತ್ತು ಇಟ್ಟಿಗೆಗಳನ್ನು ಜಾಟರತ್ತ ತೂರಿ ತಿರುಗೇಟು ನೀಡಿತು. ಪರಿಸ್ಥಿತಿ ತಾರಕಕ್ಕೇರುತ್ತಿರುವುದನ್ನು ಕಂಡ ಹಿರಿಯ ಮುಖಂಡರುಗಳು ಎರಡೂ ಗುಂಪಿನ ಯುವಕರಿಗೆ ಬುದ್ಧಿ ಹೇಳಿ ಈಗಲೇ ಸಭೆ ಸೇರಿ ವಿಷಯ ಬಗೆಹರಿಸಿಕೊಳ್ಳೋಣವೆಂದು ತಿಳಿಸಿದರು. ಈ ರಾಜಿ ಸಂಧಾನ ಸಭೆಯನ್ನು ಪೊಲೀಸ್ ಅಧಿಕಾರಿಯೊಬ್ಬರು ನಡೆಸಿದ್ದರೆಂದೇ ಹೇಳಲಾಗುತ್ತದೆ. ಇದರ ಪರಿಣಾಮವಾಗಿ ದಲಿತ ಮತ್ತು ಜಾಟ್ ಸಮುದಾಯದ ಪುರುಷರು ಪಂಚಾಯ್ತಿ ಸೇರಿದರು. ಹೀಗೆ ಮಾತುಕತೆ ಆರಂಭಿಸುವಷ್ಟರಲ್ಲಿ ದಲಿತ ಕೇರಿಯ ಕಡೆಯಿಂದ ಮಹಿಳೆಯರ ಕೂಗು ಮುಗಿಲುಮುಟ್ಟಿತು. ಕ್ಷಣ ಮಾತ್ರದಲ್ಲಿ ದಲಿತ ಕೇರಿಯನ್ನು ಕಡುಗಪ್ಪಿನ ಹೊಗೆ ಆವರಿಸಿತ್ತು. ದಲಿತರ ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ದಲಿತರು ತಮ್ಮ ಮನೆಗಳತ್ತ ಓಡಿ ವಯಸ್ಸಾದವರನ್ನು, ಮಕ್ಕಳನ್ನು ಹಾಗೂ ಕೈಗೆ ಸಿಕ್ಕಷ್ಟು ಸಾಮಾನುಗಳನ್ನು ರಕ್ಷಿಸಿಕೊಂಡರು. ಆದರೆ 70 ವರ್ಷದ ತಾರಾ ಚಂದ್ ಹಾಗೂ ಆತನ ಪೋಲಿಯೋ ಪೀಡಿತ ಕೊನೆಯ ಮಗಳಿಬ್ಬರೂ ಮನೆಯಿಂದ ಹೊರಬರಲಾರದೇ ಜಾಟರಿತ್ತ ಬೆಂಕಿಗೆ ಗುಡಿಸಲಿನಲ್ಲಿಯೇ ಆಹುತಿಯಾಗಿದ್ದರು. ಈ ಭೀಕರ ಮಾರಣಹೋಮದಲ್ಲಿ 51 ದಲಿತರು ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದರು. ಸುಮಾರು 18 ಮನೆಗಳು ಸುಟ್ಟು ಕರಕಲಾಗಿದ್ದವು. ಹಿಂದೂ ಮೇಲ್ಜಾತಿಗಳೊಳಗೆ ತುಂಬಿರುವ ಸನಾತನ ಜಾತಿಪ್ರಜ್ಞೆಯಿಂದ, ಕ್ಷುಲ್ಲಕ ಕಾರಣಕ್ಕೆ ದಲಿತರಿಬ್ಬರನ್ನೂ ಹಾಗೂ ಮಿರ್ಚ್‌ಪುರದ ದಲಿತರು ಕಟ್ಟಿಕೊಂಡಿದ್ದ ಬದುಕನ್ನು ಸುಟ್ಟುಹಾಕಿತ್ತು.

ಈ ಘಟನೆಯಿಂದ ಭಯಭೀತರಾದ ದಲಿತರು ಊರುಬಿಟ್ಟು ವಾಸಕ್ಕಾಗಿ ಅಲೆದಾಡಿದರು. ಸುಮಾರು 150 ವಾಲ್ಮೀಕಿ ದಲಿತರು ಕೊನೆಗೆ ಕನ್ನಾಟ್ ನಗರದ ವಾಲ್ಮೀಕಿ ಮಂದಿರದಲ್ಲಿ ತಿಂಗಳಾನುಗಟ್ಟಲೆ ಕಾಲದೂಡಿ ಉಸಿರಾಡಿದರು. ಜಾಟರಿಂದ ಬೆದರಿಕೆಗಳು ಪದೇಪದೇ ಬರುತ್ತಿದ್ದ ಕಾರಣ 2011ರಷ್ಟೊತ್ತಿಗೆ 12 ಕುಟುಂಬಗಳು ಊರುಬಿಟ್ಟವು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 254 ವಾಲ್ಮೀಕಿ ದಲಿತ ಕುಟುಂಬಗಳು ಊರುಬಿಟ್ಟು ದೇಶದಾದ್ಯಂತ ಚದುರಿಹೋಗಿದ್ದಾರೆ. ನೂರಾರು ವರ್ಷಗಳ ಕಾಲ ಒಂದೆಡೆ ನೆಲೆಸಿ ತಮ್ಮ ಬದುಕನ್ನು ರೂಪಿಸಿಕೊಂಡಿದ್ದ ಈ ದಲಿತ ಕುಟುಂಬಗಳು ಜಾಟರ ದೌರ್ಜನ್ಯಕ್ಕೆ ಬಲಿಯಾಗಿ ತಮ್ಮ ಜನ್ಮಸ್ಥಾನವನ್ನು ಬಿಟ್ಟು ಊರೂರು ಅಲೆಯುತ್ತಿದ್ದಾರೆ.

ಈ ನರಮೇಧಕ್ಕೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರು 103 ಜನ ಆರೋಪಿಗಳನ್ನು ಬಂಧಿಸಿದರು. ಅದೂ ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ಕಾರಣಕ್ಕೆ! ಜನವರಿ 2011ರಷ್ಟೊತ್ತಿಗೆ ಅವರಲ್ಲಿ 98 ಆರೋಪಿಗಳನ್ನು ತಿಹಾರ್ ಜೈಲಿಗೆ ಹಾಕಲಾಯಿತು. ಇದರ ವಿರುದ್ಧ ಜಾಟರು ಬೀದಿಗಿಳಿದು ಹೋರಾಡಿದ್ದರು. ಇದರ ಪರಿಣಾಮವಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಸೆಪ್ಟೆಂಬರ್ 24ರಂದು 82 ಜನರನ್ನು ಖುಲಾಸೆಗೊಳಿಸಿದ ಕೋರ್ಟ್ ಕೇವಲ 15 ಆರೋಪಿಗಳನ್ನು ಅಪರಾಧಿಗಳೆಂದು ತೀರ್ಮಾನಿಸಿತು. ಆದರೆ ಅವರ್‍ಯಾರಿಗೂ ಕೊಲೆ ಮಾಡಿದ್ದಕ್ಕೆ ಶಿಕ್ಷೆ ಆಗಲಿಲ್ಲ. ಆದರೆ ಹೈಕೋರ್ಟ್ ಈ ಮೇಲಿನ ತೀರ್ಪನ್ನು ಅನೂರ್ಜಿತಗೊಳಿಸಿ 12 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತು.

2017ರಲ್ಲಿ ಮತ್ತೆ 40 ವಾಲ್ಮೀಕಿ ಕುಟುಂಬಗಳು ಇದೇ ಮಿರ್ಚ್‌ಪುರವನ್ನು ಬಿಟ್ಟು ಹೊರಹೋದವು. ಇದಕ್ಕೆ ಕಾರಣ ದಲಿತ ಯುವಕ ಸೈಕಲ್ ರೇಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಟರು ಏಕಾಏಕಿ ಆತನನ್ನು ಥಳಿಸಿದ್ದಾಗಿತ್ತು. ಇಂದು ಮಿರ್ಚ್‌ಪುರದಲ್ಲಿ ವಾಸಿಸುತ್ತಿರುವ ಬೆರಳೆಣಿಕೆಯಷ್ಟು ದಲಿತ ಕುಟುಂಬಗಳೂ ಸಹ ಊರು ಬಿಡುವ ಸಿದ್ಧತೆಯಲ್ಲಿವೆ. ಕಾಶ್ಮೀರಿ ಪಂಡಿತರು ಕಾಣುವ ಕಣ್ಣುಗಳಿಗೆ ಮಿರ್ಚ್‌ಪುರದ ವಾಲ್ಮೀಕಿಗಳು ಕಾಣುವರೇ?

ಕೊನೆಯದಾಗಿ ಇನ್ನೊಂದು ವಿಚಾರವನ್ನು ನೆನಪಿಸುತ್ತೇನೆ. 2010ರಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. 2017ರಲ್ಲಿ ಬಿಜೆಪಿ ಸರ್ಕಾರವಿತ್ತು.


ಇದನ್ನೂ ಓದಿ: ಮಾತು ಮರೆತ ಭಾರತ; ಭೀಮಾ ಕೊರೆಗಾಂವ್ ಫೈಲ್: ಅಂಬೇಡ್ಕರ್ ಮನೆತನದ ಸದಸ್ಯನನ್ನೇ ಜೈಲಿಗಟ್ಟಿದ ಬಿಜೆಪಿ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...