ದೆಹಲಿಯ ಹಾಲಿ ಲೆಫ್ಟಿನೆಂಟ್ ಗವರ್ನರ್ (ಎಲ್-ಜಿ) ವಿ.ಕೆ ಸಕ್ಸೇನಾ ಅವರು ಹೂಡಿರುವ 24 ವರ್ಷಗಳ ಹಿಂದಿನ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ಪ್ರೊಬೇಷನ್ ಬಾಂಡ್ಗಳನ್ನು ಸಲ್ಲಿಸದ ಕಾರಣ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ವಿರುದ್ಧ ದೆಹಲಿ ನ್ಯಾಯಾಲಯವು ಬುಧವಾರ (ಏ.23) ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ಪ್ರೊಬೇಷನ್ ಬಾಂಡ್ ಜಾರಿಗೊಳಿಸುವ ಪ್ರಕ್ರಿಯೆಗೆ ಎರಡು ವಾರಗಳ ತಡೆ ನೀಡಬೇಕೆಂಬ ಪಾಟ್ಕರ್ ಅವರ ಮನವಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ (ಏ.22) ತಿರಸ್ಕರಿಸಿತ್ತು.
ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಲು ಸೂಚಿಸಿತ್ತು.
“ಮುಂದಿನ ದಿನಾಂಕದಂದು, ಅಪರಾಧಿಯು 08/04/2025ರ ಶಿಕ್ಷೆಯ ಆದೇಶದ ನಿಯಮಗಳನ್ನು ಪಾಲಿಸಲು ವಿಫಲವಾದರೆ, ನ್ಯಾಯಾಲಯವು ದಯಾಪರ ಶಿಕ್ಷೆಯನ್ನು ಮರುಪರಿಶೀಲಿಸಬೇಕಾಗುತ್ತದೆ ಮತ್ತು ಶಿಕ್ಷೆಯ ಮೇಲಿನ ಆದೇಶವನ್ನು ಬದಲಾಯಿಸಬೇಕಾಗುತ್ತದೆ” ಎಂದು ಸಾಕೇತ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ಎಎಸ್ಜೆ) ವಿಶಾಲ್ ಸಿಂಗ್ ಏಪ್ರಿಲ್ 23ರ ತಮ್ಮ ಆದೇಶದಲ್ಲಿ ಹೇಳಿದ್ದಾರೆ.
“ಪ್ರೊಬೇಷನ್ ಬಾಂಡ್ ಜಾರಿ ತಡೆಯುವಂತೆ ಕೋರಿರುವ ಮೇಧಾ ಪಾಟ್ಕರ್ ಅರ್ಜಿಯು ನ್ಯಾಯಾಲಯವನ್ನು ಮೋಸಗೊಳಿಸುವ ಉದ್ದೇಶದಿಂದ ಕೂಡಿದೆ” ಎಂದು ಎಎಸ್ಜೆ ವಿಶಾಲ್ ಸಿಂಗ್ ಹೇಳಿದ್ದಾರೆ.
ಏಪ್ರಿಲ್ 8ರಂದು, ನ್ಯಾಯಾಧೀಶ ಸಿಂಗ್ ಅವರು ಮೇಧಾ ಪಾಟ್ಕರ್ ಅವರಿಗೆ ಒಂದು ವರ್ಷದ ಪ್ರೊಬೇಶನ್ ಅವಧಿಯನ್ನು ಮಂಜೂರು ಮಾಡಿದ್ದರು, ನರ್ಮದಾ ಬಚಾವೋ ಆಂದೋಲನದ (ಎನ್ಬಿಎ) ನಾಯಕಿ ಪಾಟ್ಕರ್ ಅವರು ತಾವು ಮಾಡಿರುವ ಕೆಲಸಕ್ಕಾಗಿ ಪ್ರಶಸ್ತಿಗಳನ್ನು ಪಡೆದಿದ್ದಾರೆ ಮತ್ತು ಅವರು ಮಾಡಿದ ಅಪರಾಧವು ಜೈಲು ಶಿಕ್ಷೆಗೆ ಅರ್ಹವಾದಷ್ಟು ಗಂಭೀರವಲ್ಲ ಎಂದು ಹೇಳಿದ್ದರು.
ಇದಕ್ಕೂ ಮೊದಲು, 2000ರಲ್ಲಿ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಪಾಟ್ಕರ್ ಅವರ ಶಿಕ್ಷೆಯ ವಿರುದ್ಧದ ಮೇಲ್ಮನವಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ಗುಜರಾತ್ನಲ್ಲಿ ಎನ್ಜಿಒ ಒಂದರ ಮುಖ್ಯಸ್ಥರಾಗಿದ್ದ ಸಕ್ಸೇನಾ ಅವರನ್ನು ಮೇಧಾ ಪಾಟ್ಕರ್ ‘ಹೇಡಿ’ ಎಂದು ಕರೆದಿದ್ದರು ಮತ್ತು ಹವಾಲಾ ವಹಿವಾಟಿನಲ್ಲಿ ಅವರು ಭಾಗಿಯಾಗಿದ್ದಾರೆಂದು ಆರೋಪಿಸಿದ್ದರು.
ಮೇ 24, 2024 ರಂದು, ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪಾಟ್ಕರ್ ಅವರ ಹೇಳಿಕೆಗಳನ್ನು ಮಾನನಷ್ಟಕರವೆಂದು ಪರಿಗಣಿಸಿ ಜುಲೈ 1ರಂದು ಅವರಿಗೆ ಐದು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಆದಾಗ್ಯೂ, ಎಎಸ್ಜೆ ಸಿಂಗ್ ಅವರು ಕಳೆದ ವರ್ಷ ಜುಲೈ 29ರಂದು ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿದ್ದರು.
2001ರಲ್ಲಿ ಪಾಟ್ಕರ್ ವಿರುದ್ಧ ಸಕ್ಸೇನಾ ಪ್ರಕರಣ ದಾಖಲಿಸಿದ್ದರು. ಆಗ ಅವರು ಅಹಮದಾಬಾದ್ ಮೂಲದ ಎನ್ಜಿಒ ನ್ಯಾಷನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟೀಸ್ನ ಮುಖ್ಯಸ್ಥರಾಗಿದ್ದರು.
ನವೆಂಬರ್ 25, 2000ದಲ್ಲಿ “ದೇಶಭಕ್ತನ ನಿಜವಾದ ಮುಖ”ಎಂಬ ಶೀರ್ಷಿಕೆಯಡಿಯಲ್ಲಿ ಪಾಟ್ಕರ್ ಅವರು ನೀಡಿದ್ದ ಪತ್ರಿಕಾ ಪ್ರಕಟಣೆಯ ವಿರುದ್ಧ ಮಾನಹಾನಿ ಆರೋಪ ಮಾಡಿ ಸಕ್ಸೇನಾ ಪ್ರಕರಣ ದಾಖಲಿಸಿದ್ದರು.
“ಹವಾಲಾ ವಹಿವಾಟಿನಲ್ಲಿ ಮುಳುಗಿರುವ ವಿಕೆ ಸಕ್ಸೇನಾ, ಸ್ವತಃ ಮಾಲೆಗಾಂವ್ಗೆ ಬಂದು ಎನ್ಬಿಎಯನ್ನು ಹೊಗಳಿ ರೂ. 40,000ರ ಚೆಕ್ ಅನ್ನು ನೀಡಿದ್ದಾರೆ. ಲೋಕ ಸಮಿತಿಯು ತ್ವರಿತವಾಗಿ ರಸೀದಿ ಮತ್ತು ಪತ್ರವನ್ನು ಕಳುಹಿಸಿದೆ. ಅದು ಪ್ರಾಮಾಣಿಕತೆ ಮತ್ತು ಉತ್ತಮ ದಾಖಲೆ ಇಟ್ಟುಕೊಳ್ಳುವುದನ್ನು ತೋರಿಸುತ್ತದೆ. ಆದರೆ, ಚೆಕ್ ನಗದೀಕರಿಸಿಲ್ಲ, ಬೌನ್ಸ್ ಆಗಿದೆ. ವಿಚಾರಣೆಯಲ್ಲಿ, ಖಾತೆಯು ಅಸ್ತಿತ್ವದಲ್ಲಿಲ್ಲ ಎಂದು ಬ್ಯಾಂಕ್ ವರದಿ ಮಾಡಿದೆ” ಎಂದು ಪಾಟ್ಕರ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದರು.
ಪಾಟ್ಕರ್ ಅವರ ಪ್ರಕಟಣೆ ದುರುದ್ದೇಶಪೂರಿತವಾಗಿದ್ದು, ಸಕ್ಸೇನಾ ಅವರ ಒಳ್ಳೆಯ ಹೆಸರನ್ನು ಹಾಳುಮಾಡುವ ಗುರಿಯನ್ನು ಹೊಂದಿತ್ತು. ಇದರಿಂದ ಅವರ ಸ್ಥಾನಮಾನ ಮತ್ತು ಕ್ರೆಡಿಟ್ಗೆ ಗಣನೀಯ ಹಾನಿಯುಂಟಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದರು.
“ಆರೋಪಿಯ ಹೇಳಿಕೆಗಳು ದೂರುದಾರರನ್ನು ಹೇಡಿ, ದೇಶಪ್ರೇಮಿ ಅಲ್ಲ ಮತ್ತು ಹವಾಲಾ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದಿದೆ. ಇದು ಮಾನಹಾನಿಕರ ಮಾತ್ರವಲ್ಲದೆ, ದೂರದಾರರ ಬಗ್ಗೆ ನಕಾರಾತ್ಮಕ ಭಾವನೆ ಹುಟ್ಟಿಸುತ್ತದೆ”ಎಂದಿದ್ದರು.
ಪಹಲ್ಗಾಮ್ ದಾಳಿ: ಪಂಜಾಬ್, ಹಿಮಾಚಲ ಮತ್ತು ಉತ್ತರಾಖಂಡದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ


