ದೇಶದಲ್ಲಿ ಕೊರೊನಾ 2ನೇ ಅಲೆ ಸೃಷ್ಟಿಸಿರುವ ಸಂಕಷ್ಟದಿಂದ ಅಲ್ಪಸ್ವಲ್ಪ ಚೇತರಿಸಿಕೊಳ್ಳುತ್ತಿರುವ ನಡುವೇಯೇ ಡೆಲ್ಟಾ ಪ್ಲಸ್ ರೂಪಾಂತರಿ ಪ್ರಕರಣಗಳು ಆತಂಕಕ್ಕೆ ಕಾರಣವಾಗಿವೆ. ದೇಶದಲ್ಲಿ ಮಹಾರಾಷ್ಟ್ರ, ಕೇರಳ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಪ್ರಕರಣಗಳು ಪತ್ತೆಯಾಗಿದ್ದವು. ಈಗ ರಾಜ್ಯದಲ್ಲಿ ಡೆಲ್ಟಾ ಪ್ಲಸ್ ಮೊದಲ ಪ್ರಕರಣ ಪತ್ತೆಯಾಗಿದೆ.
ಮಂಗಳವಾರದಿಂದ ಮೈಸೂರಿನಲ್ಲಿ ಕೊರೊನಾ ರೂಪಾಂತರ ಡೆಲ್ಟಾ ಪ್ಲಸ್ ವೈರಸ್ ಇರುವ ಕುರಿತು ಊಹಾಪೋಹಗಳು ಹರಿದಾಡುತ್ತಿದ್ದವು. ಮೈಸೂರಿನಲ್ಲೂ ಡೆಲ್ಟಾ ಪ್ಲಸ್ ರೂಪಾಂತರಿ ಪ್ರಕರಣ ಪತ್ತೆಯಾಗಿದೆ ಎಂದು ಬುಧವಾರ ಆರೋಗ್ಯ ಸಚಿವ ಡಾ. ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
ಕೊರೊನಾ ಮೂರನೇ ಅಲೆಗೆ ಕಾರಣವಾಗಬಹುದು ಎನ್ನಲಾದ ಡೆಲ್ಟಾ ಪ್ಲಸ್ ವೈರಸ್ ರಾಜ್ಯಕ್ಕೂ ಕಾಲಿಟ್ಟಿದ್ದು, ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಸುಧಾಕರ್, “ಮೈಸೂರಿನಲ್ಲಿ ಒಂದು ಡೆಲ್ಟಾ ಪ್ಲಸ್ ಕೇಸ್ ಪತ್ತೆಯಾಗಿದೆ. ರೋಗಿಯನ್ನ ಐಸೋಲೇಟ್ ಮಾಡಲಾಗಿದೆ. ಅವರಿಗೆ ಯಾವುದೇ ರೋಗ ಲಕ್ಷಣ ಇಲ್ಲ. ಸೋಂಕಿತರ ಪ್ರಾಥಮಿಕ ಮತ್ತು ದ್ವೀತಿಯ ಸಂಪರ್ಕದಲ್ಲಿ ಇರುವವರಿಗೆ ಸೋಂಕು ಹರಡಿಲ್ಲ” ಎಂದು ಹೇಳಿದ್ದಾರೆ.
’ಈ ಡೆಲ್ಟಾ ಪ್ಲಸ್ ಕೇಸ್ ಬಗ್ಗೆ ಸೂಕ್ಷ್ಮವಾಗಿ ಗಮನ ಹರಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಜಿನೋಮ್ ಲ್ಯಾಬ್ ಗಳನ್ನು ಕೂಡಾ ಸೆಟಪ್ ಮಾಡಲಾಗುತ್ತಿದೆ. ರಾಜ್ಯದಲ್ಲಿ 6 ಜಿನೋಮ್ ಲ್ಯಾಬ್ ಮಾಡಲು ನಿರ್ಧಾರ ಮಾಡಿದ್ದೇವೆ. ಡೆಲ್ಟಾ ಪ್ಲಸ್ ಬಗ್ಗೆ ನಿರಂತರವಾಗಿ ಗಮನಹರಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೊರೊನಾ ಜೊತೆಗೆ ದೇಶದಲ್ಲಿ ಆತಂಕಕ್ಕೆ ಕಾರಣವಾದ ಡೆಲ್ಟಾ ಪ್ಲಸ್ ರೂಪಾಂತರಿ ಪ್ರಕರಣಗಳು
“ರಾಜ್ಯದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಪ್ರಕರಣಗಳು ಕಂಡುಬರುವ ಜಿಲ್ಲೆಗಳು ಮತ್ತು ಕ್ಲಸ್ಟರ್ಗಳಲ್ಲಿ ತಕ್ಷಣದ ನಿಯಂತ್ರಣ ಕ್ರಮಗಳು, ವರ್ಧಿತ ಪರೀಕ್ಷೆ, ಟ್ರ್ಯಾಕಿಂಗ್ ಮತ್ತು ವ್ಯಾಕ್ಸಿನೇಷನ್ ತೆಗೆದುಕೊಳ್ಳುವಂತೆ ಕೇಂದ್ರವು ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಅಲ್ಲದೆ, ಸೋಂಕಿತ ವ್ಯಕ್ತಿಗಳ ಮಾದರಿಗಳನ್ನು ತಕ್ಷಣವೇ INSACOG ನ ಗೊತ್ತುಪಡಿಸಿದ ಪ್ರಯೋಗಾಲಯಗಳಿಗೆ ಕಳುಹಿಸಲಾಗುವುದು. ಇದರಿಂದ ಕ್ಲಿನಿಕಲ್ ಸಾಂಕ್ರಾಮಿಕ ರೋಗ ಸಂಬಂಧಗಳನ್ನು ಮಾಡಬಹುದು” ಎಂದು ಸುಧಾಕರ್ ತಿಳಿಸಿದ್ದಾರೆ.
ಭಾರತ ಸೇರಿದಂತೆ ವಿಶ್ವದ 80 ದೇಶಗಳಲ್ಲಿ ಡೆಲ್ಟಾ ರೂಪಾಂತರಿ ಪತ್ತೆಯಾಗಿದೆ. ಒಂಬತ್ತು ದೇಶಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಪತ್ತೆಯಾಗಿದೆ. ಯುಎಸ್, ಯುಕೆ, ಪೋರ್ಚುಗಲ್, ಸ್ವಿಟ್ಜರ್ಲೆಂಡ್, ಜಪಾನ್, ಪೋಲೆಂಡ್, ನೇಪಾಳ, ಚೀನಾ ಮತ್ತು ರಷ್ಯಾ ದೇಶಗಳಲ್ಲಿ ಡೆಲ್ಟಾ ಪ್ಲಸ್ ಪತ್ತೆಯಾಗಿದ್ದು ಇದು ಕಳವಳಕಾರಿ ಬೆಳವಣಿಗೆಯಾಗಿದೆ ಎನ್ನಲಾಗಿದೆ
ಪ್ರಸ್ತುತ ದೇಶದಲ್ಲಿ 40 ಕ್ಕೂ ಹೆಚ್ಚು ಡೆಲ್ಟಾ ಪ್ಲಸ್ ರೂಪಂತರಿ ಪ್ರಕರಣಗಳಿವೆ, ಇದನ್ನು ಒಕ್ಕೂಟ ಸರ್ಕಾರವು “ವೇರಿಯಂಟ್ ಆಫ್ ಕನ್ಸರ್ನ್” ಎಂದು ಕರೆದಿದೆ. ಇದು ಬಹಳ ಅಪಾಯಕಾರಿ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೊಸ ರೂಪಾಂತರದಿಂದಾಗಿ ಕೊರೊನಾ ರೋಗದ ತೀವ್ರತೆಯ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
’ಭಾರತೀಯ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಎರಡೂ ಡೆಲ್ಟಾ ರೂಪಾಂತರದ ವಿರುದ್ಧ ಪರಿಣಾಮಕಾರಿಯಾಗಿವೆ. ಹೀಗಾಗಿ ಪ್ರತಿಯೊಬ್ಬರು ಶೀಘ್ರವಾಗಿ ಲಸಿಕೆ ಪಡೆಯುವುದು ಉತ್ತಮ’ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆದರೆ, ವಿಶ್ವ ಆರೊಗ್ಯ ಸಂಸ್ಥೆ (WHO) ಆಘಾತಕಾರಿ ವಿಷಯವೊಂದನ್ನು ಹೊರಹಾಕಿದೆ. ಹೊಸದಾಗಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ನ ಹೊಸ ಡೆಲ್ಟಾ ಪ್ಲಸ್ ರೂಪಾಂತರಿ ವಿರುದ್ಧ ಹೋರಾಡುವಲ್ಲಿ ಈಗಿರುವ ವ್ಯಾಕ್ಸಿನ್ಗಳು ದುರ್ಬಲವಾಗಿವೆ. ಮುಂದೆ ಹೊಸ ಹೊಸ ಕೊರೊನಾ ರೂಪಾಂತರಿಗಳು ಕಾಣಿಸಿಕೊಂಡರೆ ಅವುಗಳ ವಿರುದ್ಧ ವ್ಯಾಕ್ಸಿನ್ಗಳು ಯಾವುದೇ ಪರಿಣಾಮವನ್ನು ಬೀರದೇ ಇರುವ ಸಾಧ್ಯತೆಗಳಿವೆ ಎಂದು ವಿಶ್ವ ಆರೊಗ್ಯ ಸಂಸ್ಥೆಯು ಸೋಮವಾರ ಜೂನ್ 21 ರಂದು ತಿಳಿಸಿದೆ.
ಇದನ್ನೂ ಓದಿ: ಡೆಲ್ಟಾ ಪ್ಲಸ್ ರೂಪಾಂತರಿ ವಿರುದ್ಧ ವ್ಯಾಕ್ಸಿನ್ಗಳು ಪರಿಣಾಮ ಕಳೆದುಕೊಳ್ಳುತ್ತಿವೆ: WHO