ಪತ್ರಕರ್ತ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಸಿರ್ಸಾದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಅನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶನಿವಾರ (ಮಾ.7) ಖುಲಾಸೆಗೊಳಿಸಿರುವುದಾಗಿ livelaw.in ಎಂದು ವರದಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ವಿಕ್ರಮ್ ಅಗರ್ವಾಲ್ ಅವರಿದ್ದ ನ್ಯಾಯಪೀಠವು ಶಿಕ್ಷೆಯ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಗಳ ಕುರಿತು ತೀರ್ಪು ಪ್ರಕಟಿಸಿದೆ.
ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ಇತರ ಮೂವರು ಅಪರಾಧಿಗಳಾದ ಕುಲದೀಪ್, ನಿರ್ಮಲ್ ಮತ್ತು ಕ್ರಿಶನ್ ಲಾಲ್ ಅವರ ಅಪರಾಧ ಮತ್ತು ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದೆ. ಕೇಂದ್ರೀಯ ತನಿಖಾ ದಳದ (ಸಿಬಿಐ) ನ್ಯಾಯಾಲಯವು ಈ ಹಿಂದೆ ಈ ಪ್ರಕರಣದಲ್ಲಿ ರಾಮ್ ರಹೀಂ ಸಿಂಗ್ ಸೇರಿದಂತೆ ಎಲ್ಲರನ್ನೂ ಅಪರಾಧಿಗಳು ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು.
2002ರಲ್ಲಿ ನಡೆದ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಕೊಲೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಮತ್ತು ಇತರ ಮೂವರು ತಪ್ಪಿತಸ್ಥರು ಎಂದು ಸಿಬಿಐ ನ್ಯಾಯಾಲಯ 2019ರಲ್ಲಿ ತೀರ್ಪು ನೀಡಿತ್ತು.
ವಿಶೇಷ ಸಿಬಿಐ ನ್ಯಾಯಾಧೀಶ ಜಗದೀಪ್ ಸಿಂಗ್ ಅವರು ನಾಲ್ವರನ್ನು ತಪ್ಪಿತಸ್ಥರು ಎಂದು ಘೋಷಿಸಿದ್ದರು.
2002ರ ಅಕ್ಟೋಬರ್ನಲ್ಲಿ, ಸಿರ್ಸಾದಲ್ಲಿರುವ ಡೇರಾ ಪ್ರಧಾನ ಕಚೇರಿಯಲ್ಲಿ ಗುರ್ಮೀತ್ ರಾಮ್ ರಹೀಂ ಸಿಂಗ್ ಮಹಿಳೆಯರನ್ನು ಹೇಗೆ ಲೈಂಗಿಕವಾಗಿ ಶೋಷಿಸುತ್ತಿದ್ದಾನೆಂದು ವಿವರಿಸುವ ಅನಾಮಧೇಯ ಪತ್ರವನ್ನು ಛತ್ರಪತಿ ಅವರ ‘ಪೂರಾ ಸಚ್’ ಪತ್ರಿಕೆ ಪ್ರಕಟಿಸಿದ ನಂತರ ಅವರ ಮನೆಯ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿತ್ತು.
2003ರಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ನಂತರ 2006ರಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು.
ಈ ಪ್ರಕರಣದಲ್ಲಿ ರಾಮ್ ರಹೀಂ ಅನ್ನು ಪ್ರಮುಖ ಸಂಚುಕೋರ ಎಂದು ಹೆಸರಿಸಲಾಗಿತ್ತು. ಇಬ್ಬರು ಮಹಿಳಾ ಶಿಷ್ಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಂ ಪ್ರಸ್ತುತ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. 2024ರಲ್ಲಿ, ಡೇರಾ ಮ್ಯಾನೇಜರ್ ರಂಜಿತ್ ಸಿಂಗ್ ಅವರ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಹೈಕೋರ್ಟ್ ಈತನನ್ನು ಖುಲಾಸೆಗೊಳಿಸಿತ್ತು.


