Homeಅಂತರಾಷ್ಟ್ರೀಯಒಂದೂವರೆ ವರ್ಷದ ಪ್ಯಾಲೆಸ್ತೀನಿಯನ್ ಮಗುವಿಗೆ ಸಿಗರೇಟ್‌ನಿಂದ ಸುಟ್ಟು, ಮೊಳೆ ಚುಚ್ಚಿ ಚಿತ್ರಹಿಂಸೆ ಕೊಟ್ಟ ಇಸ್ರೇಲಿ ಸೈನಿಕರು

ಒಂದೂವರೆ ವರ್ಷದ ಪ್ಯಾಲೆಸ್ತೀನಿಯನ್ ಮಗುವಿಗೆ ಸಿಗರೇಟ್‌ನಿಂದ ಸುಟ್ಟು, ಮೊಳೆ ಚುಚ್ಚಿ ಚಿತ್ರಹಿಂಸೆ ಕೊಟ್ಟ ಇಸ್ರೇಲಿ ಸೈನಿಕರು

- Advertisement -
- Advertisement -

ಗಾಝಾದ ಪ್ಯಾಲೆಸ್ತೀನಿಯನ್ ವ್ಯಕ್ತಿಯೊಬ್ಬರಿಂದ ಬಲವಂತವಾಗಿ ತಪ್ಪೊಪ್ಪಿಗೆ ಪಡೆಯಲು, ಅವರ 18 ತಿಂಗಳ ಮಗುವಿಗೆ ಇಸ್ರೇಲಿ ಸೈನಿಕರು ತೀವ್ರ ಚಿತ್ರಹಿಂಸೆ ಕೊಟ್ಟಿರುವ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ಸೋಮವಾರ (ಮಾ.23) ವರದಿ ಮಾಡಿವೆ.

ಮಾರ್ಚ್ 21ರಂದು ಮಧ್ಯ ಗಾಝಾದ ಅಲ್-ಮಘಾಝಿ ನಿರಾಶ್ರಿತರ ಶಿಬಿರದ ಬಳಿ ಕರೀಮ್ ಅಬೂ ನಾಸರ್ ಎಂಬ ಮಗು, ತನ್ನ ತಂದೆ ಒಸಾಮಾ ಅಬೂ ನಾಸರ್ ಅವರೊಂದಿಗೆ ಇದ್ದಾಗ, ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್‌) ಸಿಬ್ಬಂದಿ ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಲ್ ಜಝೀರಾ ವರದಿ ಹೇಳಿದೆ.

ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ಪ್ಯಾಲೆಸ್ತೀನ್ ಟಿವಿ ಮಾಡಿರುವ ವರದಿಯ ಪ್ರಕಾರ, ಐಡಿಎಫ್ ಸೈನಿಕರು ನಿರಾಶ್ರಿತರ ಶಿಬಿರದ ಮೇಲೆ ದಾಳಿ ಮಾಡಿದ ಬಳಿಕ, ಒಸಾಮಾ ಅಬೂ ನಾಸರ್ ಅವರಿಗೆ ತನ್ನ ಮಗುವನ್ನು ನೆಲದ ಮೇಲೆ ಬಿಟ್ಟು ಹತ್ತಿರದ ಮಿಲಿಟರಿ ಚೆಕ್‌ಪೋಸ್ಟ್‌ಗೆ ಬರುವಂತೆ ಸೂಚಿಸಿದ್ದಾರೆ. ಅಲ್ಲಿಗೆ ತೆರಳಿದ ಒಸಾಮಾ ಅವರ ಬಟ್ಟೆ ಬಿಚ್ಚಿಸಿ ತಪಾಸಣೆ ನಡೆಸಿದ್ದಾರೆ. ನಂತರ, ತಂದೆಯಿಂದ ಬಲವಂತವಾಗಿ ತಪ್ಪೊಪ್ಪಿಗೆಯನ್ನು ಪಡೆಯಲು ಮಗುವನ್ನು ಕರೆತಂದು, ಒಸಾಮಾ ಅವರ ಮುಂದೆಯೇ ಮಗುವಿಗೆ ಚಿತ್ರಹಿಂಸೆ ನೀಡಿದ್ದಾರೆ.

ಪ್ಯಾಲೆಸ್ತೀನಿಯನ್ ಪತ್ರಕರ್ತ ಒಸಾಮಾ ಅಲ್-ಕಹ್ಲೂತ್ ಅವರು ಮಗುವಿನ ತಾಯಿಯನ್ನು ಸಂದರ್ಶಿಸಿದ್ದು, ಈ ವೇಳೆ ತಾಯಿ ಮಗುವಿನ ಮೇಲಾದ ಗಾಯಗಳನ್ನು ತೋರಿಸಿದ್ದಾರೆ. ಇಸ್ರೇಲಿ ಸೈನಿಕರು ಮಗುವಿಗೆ ಸಿಗರೇಟಿನಿಂದ ಸುಟ್ಟಿದ್ದಾರೆ ಮತ್ತು ಮಗುವಿನ ಕಾಲಿಗೆ ಮೊಳೆಯನ್ನು ಚುಚ್ಚಿದ್ದಾರೆ ಎಂದು ಅವರು ತಿಳಿಸಿದ್ದಾರೆ.

View this post on Instagram

A post shared by PalPulse (@pulseofpal)

ಟಿಆರ್‌ಟಿ ವರ್ಲ್ಡ್ ಉಲ್ಲೇಖಿಸಿದ ವೈದ್ಯಕೀಯ ವರದಿಯ ಪ್ರಕಾರ, ಮಗುವಿನ ಕಾಲಿನ ಮೇಲೆ ಸಿಗರೇಟಿನಿಂದ ಸುಟ್ಟ ಗುರುತುಗಳು ಮತ್ತು ಮೊಳೆಯಿಂದ ಚುಚ್ಚಿದ ಗಾಯಗಳು ಕಂಡು ಬಂದಿವೆ. ಇಸ್ರೇಲಿ ವಶದಲ್ಲಿ ಸುಮಾರು 10 ಗಂಟೆಗಳ ಕಾಲ ಬಂಧನದಲ್ಲಿದ್ದ ಮಗುವನ್ನು ಕೊನೆಗೆ ಇಂಟರ್‌ನ್ಯಾಷನಲ್ ಕಮಿಟಿ ಆಫ್ ರೆಡ್ ಕ್ರಾಸ್ (ಐ ಸಿಆರ್‌ಸಿ) ಮೂಲಕ ಸಂಬಂಧಿಕರಿಗೆ ಒಪ್ಪಿಸಲಾಗಿದೆ.

ಮಗುವಿನ ತಂದೆ ತಂದೆ ಒಸಾಮಾ ಅಬು ನಾಸರ್ ಇನ್ನೂ ಇಸ್ರೇಲಿ ವಶದಲ್ಲಿದ್ದಾರೆ.

ಇಸ್ರೇಲಿ ಸೈನಿಕರ ಈ ಕ್ರೂರ ಕೃತ್ಯ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಮಾನವ ಹಕ್ಕುಗಳ ಗುಂಪುಗಳು, ಹೋರಾಟಗಾರರು ಮತ್ತು ವಿವಿಧ ದೇಶಗಳ ನಾಯಕರು ಇದನ್ನು ಖಂಡಿಸಿದ್ದಾರೆ.

ಗಾಝಾದ ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶಗಳ ಕುರಿತಾದ ವಿಶ್ವಸಂಸ್ಥೆಯ ವಿಶೇಷ ವರದಿಗಾರ್ತಿ ಫ್ರಾನ್ಸೆಸ್ಕಾ ಅಲ್ಬನೀಸ್ ಅವರು ಈ ಘಟನೆಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಇಸ್ರೇಲ್ ವ್ಯವಸ್ಥಿತವಾಗಿ ಪ್ಯಾಲೆಸ್ತೀನಿಯರ ಮೇಲೆ ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆ ನೀಡುತ್ತಿರುವ ಕುರಿತು ಇತ್ತೀಚೆಗಷ್ಟೇ ವರದಿ ಬಿಡುಗಡೆ ಮಾಡಿದ್ದ ಅವರು, ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ತಂದೆಯ ಮೇಲೆ ಒತ್ತಡ ಹೇರಲು ಮಗುವಿಗೆ ಚಿತ್ರಹಿಂಸೆ ನೀಡುವ ಇವರು ಎಂತಹ ವಿಕೃತ ಅಪರಾಧಿಗಳು?” ಎಂದು ಅವರು ಬರೆದುಕೊಂಡಿದ್ದಾರೆ.

ಅಮೆರಿಕನ್-ಇಸ್ಲಾಮಿಕ್ ಸಂಬಂಧಗಳ ಮಂಡಳಿಯು (ಸಿಎಐಆರ್‌) ತನ್ನ ಹೇಳಿಕೆಯಲ್ಲಿ, ಇಸ್ರೇಲಿ ಸೈನಿಕರ ಕೃತ್ಯ “ಸಹಿಸಲಾಗದ ಅನೈತಿಕ ಅತಿರೇಕ” ಎಂದು ಕರೆದಿದೆ ಮತ್ತು ಈ ಕುರಿತು ಅಮೆರಿಕ ಕಾಂಗ್ರೆಸ್ ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

“ಯಾವುದೇ ಮಗು, ವಿಶ್ವದ ಯಾವುದೇ ಭಾಗದಲ್ಲಿ ಇಂತಹ ಕ್ರೌರ್ಯಕ್ಕೆ ಒಳಗಾಗಬಾರದು, ಅದರಲ್ಲೂ ವಿಶೇಷವಾಗಿ ಅಮೆರಿಕದ ತೆರಿಗೆದಾರರ ಹಣದಿಂದ ಇಂತಹ ಕೃತ್ಯಗಳು ನಡೆಯಬಾರದು. ಈ ಕ್ರಮಗಳು ಅಂತಾರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆ ಮತ್ತು ಮೂಲಭೂತ ಮಾನವೀಯತೆಯ ಮೃಗೀಯ ಹನನವಾಗಿದೆ” ಎಂದು ಮಂಡಳಿ ಹೇಳಿದೆ.

“ನಮ್ಮ ರಾಷ್ಟ್ರವು ಈ ಅಪರಾಧಗಳಲ್ಲಿ ತನ್ನ ಪಾಲುದಾರಿಕೆಯನ್ನು ಕೊನೆಗೊಳಿಸಬೇಕು. ಅಮೆರಿಕದ ತೆರಿಗೆದಾರರ ಹಣವು ಇನ್ನು ಮುಂದೆ ಮಕ್ಕಳ ಮೇಲಿನ ಚಿತ್ರಹಿಂಸೆ ಅಥವಾ ಹತ್ಯಾಕಾಂಡಕ್ಕೆ ಬಳಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕಾಂಗ್ರೆಸ್ ಮೇಲಿದೆ. ಆತ್ಮಸಾಕ್ಷಿಯಿರುವ ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಗಳು ನಿಯಂತ್ರಣ ತಪ್ಪಿದ ಇಸ್ರೇಲ್ ಆಡಳಿತಕ್ಕೆ ನೀಡಲಾಗುವ ಮಿಲಿಟರಿ ನೆರವನ್ನು ನಿಲ್ಲಿಸಲು ಮತ ಚಲಾಯಿಸಬೇಕು” ಎಂದು ಮಂಡಳಿಯು ಒತ್ತಾಯಿಸಿದೆ.

ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೇರ್ ಗಾಲಿಬಾಫ್ ಅವರು ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸುತ್ತಾ, “ಇರಾನ್ ಮಾನವೀಯತೆಗಾಗಿ ಹೋರಾಡುತ್ತಿದೆ. ಇಡೀ ಜಗತ್ತು ಈಗ ಎರಡರಲ್ಲಿ ಒಂದನ್ನು ಆರಿಸಿಕೊಳ್ಳಬೇಕು: ಒಂದೋ ಗಾಝಾದ ಪರವಾಗಿ ನಿಂತು ಈ ಕ್ರೂರ ಆಡಳಿತವನ್ನು ವಿರೋಧಿಸಬೇಕು, ಇಲ್ಲವೇ ಮಕ್ಕಳ ಮೇಲೆ ದೌರ್ಜನ್ಯ ಎಸಗುವವರ ಪರವಾಗಿ ನಿಲ್ಲಬೇಕು. ಇಲ್ಲಿ ತಟಸ್ಥವಾಗಿರಲು ಸಾಧ್ಯವೇ ಇಲ್ಲ” ಎಂದು ಹೇಳಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ‘ಚಿತ್ರಹಿಂಸೆ ಮತ್ತು ಜನಾಂಗೀಹತ್ಯೆ’ ಎಂಬ ವಿಶ್ವಸಂಸ್ಥೆಯ ವರದಿಯ ಪ್ರಕಾರ, ಅಕ್ಟೋಬರ್ 7, 2023ರಿಂದ ಇಸ್ರೇಲಿ ವಶದಲ್ಲಿರುವ ಪ್ಯಾಲೆಸ್ತೀನಿಯರು ‘ಅತ್ಯಂತ ಕ್ರೂರವಾದ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ’ ಒಳಗಾಗಿದ್ದಾರೆ.

ಫ್ರಾನ್ಸೆಸ್ಕಾ ಅಲ್ಬನೀಸ್ ಅವರು ಸಿದ್ಧಪಡಿಸಿದ ಈ ವರದಿಯು, “ಬಂಧನದಲ್ಲಿರುವವರ ಮೇಲೆ ನೀಡಲಾಗುತ್ತಿರುವ ಚಿತ್ರಹಿಂಸೆಯನ್ನು ಹಿಂದೆಂದೂ ಕಾಣದ ಮಟ್ಟಿಗೆ ಒಂದು ಶಿಕ್ಷೆಯಾಗಿ ಮತ್ತು ಸಾಮೂಹಿಕ ಸೇಡಿನ ರೂಪದಲ್ಲಿ ಬಳಸಲಾಗುತ್ತಿದೆ” ಎಂದು ಪ್ರತಿಪಾದಿಸಿದೆ.

ಘೋರ ಹಲ್ಲೆಗಳು, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಮಾರಣಾಂತಿಕ ಕಿರುಕುಳ, ಹಸಿವು ಮತ್ತು ಕನಿಷ್ಠ ಮಾನವೀಯ ಸೌಲಭ್ಯಗಳಿಂದ ವ್ಯವಸ್ಥಿತವಾಗಿ ವಂಚಿಸಿರುವುದು ಹತ್ತಾರು ಸಾವಿರ ಪ್ಯಾಲೆಸ್ತೀನಿಯನ್ನರ ಮತ್ತು ಅವರ ಸಂಬಂಧಿಕರ ದೇಹ ಹಾಗೂ ಮನಸ್ಸಿನ ಮೇಲೆ ಆಳವಾದ ಮತ್ತು ಶಾಶ್ವತವಾದ ಗಾಯಗಳನ್ನು ಉಂಟುಮಾಡಿದೆ” ಎಂದು ವರದಿಯು ತಿಳಿಸಿದೆ.

“ಬಂಧನದಲ್ಲಿರುವಾಗ ನೀಡುವ ಚಿತ್ರಹಿಂಸೆ ಮತ್ತು ಅದರ ಜೊತೆಗೆ ನಿರಂತರವಾಗಿ ನಡೆಸುತ್ತಿರುವ ಬಲವಂತದ ಒಕ್ಕಲೆಬ್ಬಿಸುವಿಕೆ, ಸಮೂಹ ಹತ್ಯೆಗಳು, ಮೂಲಭೂತ ಸೌಲಭ್ಯಗಳ ವಂಚನೆ ಹಾಗೂ ಜೀವನೋಪಾಯದ ಮಾರ್ಗಗಳ ನಾಶದ ಮೂಲಕ ಪುರುಷರು, ಮಹಿಳೆಯರು ಮತ್ತು ಮಕ್ಕಳ ಮೇಲೆ ದಬ್ಬಾಳಿಕೆ ನಡೆಸುವುದು ಹಾಗೂ ಶಿಕ್ಷಿಸುವುದು ಈ ಆಡಳಿತದ ಅವಿಭಾಜ್ಯ ಅಂಗವಾಗಿದೆ. ಇವೆಲ್ಲವೂ ದೀರ್ಘಕಾಲದ ಸಾಮೂಹಿಕ ನೋವು ಮತ್ತು ಸಂಕಟವನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿವೆ” ಎಂದು ವರದಿಯು ಹೇಳಿದೆ.

ಅಲ್ಬನೀಸ್ ಅವರು ಕನಿಷ್ಠ 300 ಸಾಕ್ಷ್ಯಗಳು ಸೇರಿದಂತೆ ಲಿಖಿತ ಸಲ್ಲಿಕೆಗಳನ್ನು ಸಂಗ್ರಹಿಸಿರುವುದಾಗಿ ತಿಳಿಸಿದ್ದಾರೆ. ಅವರ ಪ್ರಕಾರ, ಅಕ್ಟೋಬರ್ 2023ರಿಂದ ಆಕ್ರಮಿತ ಪ್ರದೇಶದಲ್ಲಿ ಪ್ಯಾಲೆಸ್ತೀನಿಯರ ಬಂಧನವು ಭೀಕರವಾಗಿ ಹೆಚ್ಚಾಗಿದೆ. ಈ ಅವಧಿಯಲ್ಲಿ ಕನಿಷ್ಠ 1,500 ಮಕ್ಕಳು ಸೇರಿದಂತೆ ಒಟ್ಟು 18,500ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ವರದಿಯ ಪ್ರಕಾರ ಸುಮಾರು 9,000 ಪ್ಯಾಲೆಸ್ತೀನಿಯನ್ನರು ಇನ್ನೂ ಬಂಧನದಲ್ಲಿದ್ದಾರೆ ಮತ್ತು 4,000ಕ್ಕೂ ಹೆಚ್ಚು ಜನರನ್ನು ಬಲವಂತವಾಗಿ ನಾಪತ್ತೆ ಮಾಡಲಾಗಿದೆ. ಇಸ್ರೇಲ್‌ನ ಬಂಧನ ವ್ಯವಸ್ಥೆಯು ವ್ಯವಸ್ಥಿತ ಮತ್ತು ವ್ಯಾಪಕವಾದ ಅವಮಾನ, ಬಲವಂತ ಹಾಗೂ ಭಯೋತ್ಪಾದನೆಯ ಆಡಳಿತವಾಗಿ ಅಧಃಪತನಗೊಂಡಿದೆ ಎಂದು ಅಲ್ಬನೀಸ್ ಹೇಳಿದ್ದಾರೆ.










ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ.​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...

ಜಿರಳೆ ಜನತಾ ಪಕ್ಷದ ಖಾತೆಗೆ ನಿರ್ಬಂಧ; ದೆಹಲಿ ಹೈಕೋರ್ಟ್‌ನಿಂದ ಕೇಂದ್ರ-ಎಕ್ಸ್‌ಗೆ ನೋಟಿಸ್

ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್ (ಮೇ 29) ಕೇಂದ್ರ ಸರ್ಕಾರ ಮತ್ತು ಸಾಮಾಜಿಕ...

“ದಲಿತ ಮುಖ್ಯಮಂತ್ರಿ” ಅರ್ಹರು ಯಾರಿಲ್ಲಿ?

ಸದ್ಯ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಗೆ ವೇದಿಕೆ ಸಜ್ಜುಗೊಂಡಿದೆ. ಸುಧೀರ್ಘಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅಹಿಂದ ರಾಜಕಾರಣದ ಕುರಿತು ಮಾತಾಡುತ್ತಿದ್ದ, ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ...

‘ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗುವವನಲ್ಲ’: ವಿದಾಯ ಭಾಷಣದಲ್ಲಿ ಸಿದ್ದರಾಮಯ್ಯ

ಹೈಕಮಾಂಡ್ ಯಾವಾಗ ಸೂಚಿಸುತ್ತದೆಯೋ ಆಗ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ 2026 ಮೇ 28 ರಂದು ಹೈಕಮಾಂಡ್ ಸೂಚನೆ ಮೇರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ...

ಪಶ್ಚಿಮ ಬಂಗಾಳ| ಬಕ್ರೀದ್‌ ಹಬ್ಬಕ್ಕೂ ಮುನ್ನ ರೈತರಿಗೆ ಸಂಕಷ್ಟ; ಜಾನುವಾರು ಮಾರುಕಟ್ಟೆಗಳು ನಿರ್ಜನ

ಈದ್ ಅಲ್-ಅಧಾ ಹಬ್ಬದ ಮುನ್ನ ಉತ್ತರ ಬಂಗಾಳದಾದ್ಯಂತ ಜಾನುವಾರು ಮಾರುಕಟ್ಟೆಗಳು ಹೆಚ್ಚಾಗಿ ನಿರ್ಜನವಾಗಿದ್ದವು. ವ್ಯಾಪಾರಿಗಳು ಮತ್ತು ರೈತರು ಜಾನುವಾರು ಮಾರಾಟದ ಮೇಲಿನ ನಿರ್ಬಂಧಗಳಿಂದಾಗಿ ವ್ಯಾಪಾರದಲ್ಲಿ ಪ್ರಮುಖ ಕುಸಿತ ಕಂಡುಬಂದಿದೆ ಎಂದು ಅವಲತ್ತುಕೊಂಡಿದ್ದಾರೆ. ಮಾಲ್ಡಾ...

ಅತ್ಯಾಚಾರ – ಮಕ್ಕಳ ಮೇಲಿನ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣ: ಸ್ವಯಂ ಘೋಷಿತ ದೇವಮಾನವ ಅಸಾರಾಂ ಖುಲಾಸೆ

ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಅವರನ್ನು ಭಾರತೀಯ ದಂಡ ಸಂಹಿತೆ, ಪೋಕ್ಸೋ ಕಾಯ್ದೆಯಡಿಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಮಕ್ಕಳ ಮೇಲಿನ ಸಾಮೂಹಿಕ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪಗಳಿಂದ ಖುಲಾಸೆಗೊಳಿಸಲಾಗಿದೆ. ಮೇ 27...

ಸಿದ್ದರಾಮಯ್ಯ ಅವರ ಮನವೊಲಿಸಿದ ಕಾಂಗ್ರೆಸ್‌ ಹೈಕಮಾಂಡ್; ಮುಖ್ಯಮಂತ್ರಿ ಸ್ಥಾನಕ್ಕೆ ನಾಳೆ ರಾಜೀನಾಮೆ?

ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯ ಸುತ್ತಲಿನ ತೀವ್ರ ರಾಜಕೀಯ ನಾಟಕವು ಅಂತಿಮವಾಗಿ ನಿರ್ಣಾಯಕ ಹಂತ ತಲುಪಿದೆ. ನವದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ನ ನಿರಂತರ ಒತ್ತಡ ಮತ್ತು ಮಾತುಕತೆಗಳ ನಂತರ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲು...

“ಎಚ್.ಎಸ್. ದೊರೆಸ್ವಾಮಿ ಭೌತಿಕವಾಗಿ ಇಲ್ಲದಿದ್ದರೂ ನಮ್ಮನ್ನು ಸದಾ ಪ್ರೇರೇಪಿಸುತ್ತಾರೆ”: ತೀಸ್ತಾ ಸೆಟಲ್ವಾಡ್

ಬೆಂಗಳೂರು: "ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ದಿ. ಎಚ್.ಎಸ್. ದೊರೆಸ್ವಾಮಿ ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಹೋರಾಟದ ಹಾದಿ ಮತ್ತು ಆದರ್ಶಗಳು ನಮ್ಮನ್ನು ಸದಾ ಪ್ರೇರೇಪಿಸುತ್ತಲೇ ಇರುತ್ತವೆ" ಎಂದು ಪ್ರಮುಖ ಮಾನವ ಹಕ್ಕುಗಳ ಹೋರಾಟಗಾರ್ತಿ...