Homeಅಂತರಾಷ್ಟ್ರೀಯಒಂದೂವರೆ ವರ್ಷದ ಪ್ಯಾಲೆಸ್ತೀನಿಯನ್ ಮಗುವಿಗೆ ಸಿಗರೇಟ್‌ನಿಂದ ಸುಟ್ಟು, ಮೊಳೆ ಚುಚ್ಚಿ ಚಿತ್ರಹಿಂಸೆ ಕೊಟ್ಟ ಇಸ್ರೇಲಿ ಸೈನಿಕರು

ಒಂದೂವರೆ ವರ್ಷದ ಪ್ಯಾಲೆಸ್ತೀನಿಯನ್ ಮಗುವಿಗೆ ಸಿಗರೇಟ್‌ನಿಂದ ಸುಟ್ಟು, ಮೊಳೆ ಚುಚ್ಚಿ ಚಿತ್ರಹಿಂಸೆ ಕೊಟ್ಟ ಇಸ್ರೇಲಿ ಸೈನಿಕರು

- Advertisement -
- Advertisement -

ಗಾಝಾದ ಪ್ಯಾಲೆಸ್ತೀನಿಯನ್ ವ್ಯಕ್ತಿಯೊಬ್ಬರಿಂದ ಬಲವಂತವಾಗಿ ತಪ್ಪೊಪ್ಪಿಗೆ ಪಡೆಯಲು, ಅವರ 18 ತಿಂಗಳ ಮಗುವಿಗೆ ಇಸ್ರೇಲಿ ಸೈನಿಕರು ತೀವ್ರ ಚಿತ್ರಹಿಂಸೆ ಕೊಟ್ಟಿರುವ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ಸೋಮವಾರ (ಮಾ.23) ವರದಿ ಮಾಡಿವೆ.

ಮಾರ್ಚ್ 21ರಂದು ಮಧ್ಯ ಗಾಝಾದ ಅಲ್-ಮಘಾಝಿ ನಿರಾಶ್ರಿತರ ಶಿಬಿರದ ಬಳಿ ಕರೀಮ್ ಅಬೂ ನಾಸರ್ ಎಂಬ ಮಗು, ತನ್ನ ತಂದೆ ಒಸಾಮಾ ಅಬೂ ನಾಸರ್ ಅವರೊಂದಿಗೆ ಇದ್ದಾಗ, ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್‌) ಸಿಬ್ಬಂದಿ ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಲ್ ಜಝೀರಾ ವರದಿ ಹೇಳಿದೆ.

ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ಪ್ಯಾಲೆಸ್ತೀನ್ ಟಿವಿ ಮಾಡಿರುವ ವರದಿಯ ಪ್ರಕಾರ, ಐಡಿಎಫ್ ಸೈನಿಕರು ನಿರಾಶ್ರಿತರ ಶಿಬಿರದ ಮೇಲೆ ದಾಳಿ ಮಾಡಿದ ಬಳಿಕ, ಒಸಾಮಾ ಅಬೂ ನಾಸರ್ ಅವರಿಗೆ ತನ್ನ ಮಗುವನ್ನು ನೆಲದ ಮೇಲೆ ಬಿಟ್ಟು ಹತ್ತಿರದ ಮಿಲಿಟರಿ ಚೆಕ್‌ಪೋಸ್ಟ್‌ಗೆ ಬರುವಂತೆ ಸೂಚಿಸಿದ್ದಾರೆ. ಅಲ್ಲಿಗೆ ತೆರಳಿದ ಒಸಾಮಾ ಅವರ ಬಟ್ಟೆ ಬಿಚ್ಚಿಸಿ ತಪಾಸಣೆ ನಡೆಸಿದ್ದಾರೆ. ನಂತರ, ತಂದೆಯಿಂದ ಬಲವಂತವಾಗಿ ತಪ್ಪೊಪ್ಪಿಗೆಯನ್ನು ಪಡೆಯಲು ಮಗುವನ್ನು ಕರೆತಂದು, ಒಸಾಮಾ ಅವರ ಮುಂದೆಯೇ ಮಗುವಿಗೆ ಚಿತ್ರಹಿಂಸೆ ನೀಡಿದ್ದಾರೆ.

ಪ್ಯಾಲೆಸ್ತೀನಿಯನ್ ಪತ್ರಕರ್ತ ಒಸಾಮಾ ಅಲ್-ಕಹ್ಲೂತ್ ಅವರು ಮಗುವಿನ ತಾಯಿಯನ್ನು ಸಂದರ್ಶಿಸಿದ್ದು, ಈ ವೇಳೆ ತಾಯಿ ಮಗುವಿನ ಮೇಲಾದ ಗಾಯಗಳನ್ನು ತೋರಿಸಿದ್ದಾರೆ. ಇಸ್ರೇಲಿ ಸೈನಿಕರು ಮಗುವಿಗೆ ಸಿಗರೇಟಿನಿಂದ ಸುಟ್ಟಿದ್ದಾರೆ ಮತ್ತು ಮಗುವಿನ ಕಾಲಿಗೆ ಮೊಳೆಯನ್ನು ಚುಚ್ಚಿದ್ದಾರೆ ಎಂದು ಅವರು ತಿಳಿಸಿದ್ದಾರೆ.

View this post on Instagram

A post shared by PalPulse (@pulseofpal)

ಟಿಆರ್‌ಟಿ ವರ್ಲ್ಡ್ ಉಲ್ಲೇಖಿಸಿದ ವೈದ್ಯಕೀಯ ವರದಿಯ ಪ್ರಕಾರ, ಮಗುವಿನ ಕಾಲಿನ ಮೇಲೆ ಸಿಗರೇಟಿನಿಂದ ಸುಟ್ಟ ಗುರುತುಗಳು ಮತ್ತು ಮೊಳೆಯಿಂದ ಚುಚ್ಚಿದ ಗಾಯಗಳು ಕಂಡು ಬಂದಿವೆ. ಇಸ್ರೇಲಿ ವಶದಲ್ಲಿ ಸುಮಾರು 10 ಗಂಟೆಗಳ ಕಾಲ ಬಂಧನದಲ್ಲಿದ್ದ ಮಗುವನ್ನು ಕೊನೆಗೆ ಇಂಟರ್‌ನ್ಯಾಷನಲ್ ಕಮಿಟಿ ಆಫ್ ರೆಡ್ ಕ್ರಾಸ್ (ಐ ಸಿಆರ್‌ಸಿ) ಮೂಲಕ ಸಂಬಂಧಿಕರಿಗೆ ಒಪ್ಪಿಸಲಾಗಿದೆ.

ಮಗುವಿನ ತಂದೆ ತಂದೆ ಒಸಾಮಾ ಅಬು ನಾಸರ್ ಇನ್ನೂ ಇಸ್ರೇಲಿ ವಶದಲ್ಲಿದ್ದಾರೆ.

ಇಸ್ರೇಲಿ ಸೈನಿಕರ ಈ ಕ್ರೂರ ಕೃತ್ಯ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಮಾನವ ಹಕ್ಕುಗಳ ಗುಂಪುಗಳು, ಹೋರಾಟಗಾರರು ಮತ್ತು ವಿವಿಧ ದೇಶಗಳ ನಾಯಕರು ಇದನ್ನು ಖಂಡಿಸಿದ್ದಾರೆ.

ಗಾಝಾದ ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶಗಳ ಕುರಿತಾದ ವಿಶ್ವಸಂಸ್ಥೆಯ ವಿಶೇಷ ವರದಿಗಾರ್ತಿ ಫ್ರಾನ್ಸೆಸ್ಕಾ ಅಲ್ಬನೀಸ್ ಅವರು ಈ ಘಟನೆಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಇಸ್ರೇಲ್ ವ್ಯವಸ್ಥಿತವಾಗಿ ಪ್ಯಾಲೆಸ್ತೀನಿಯರ ಮೇಲೆ ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆ ನೀಡುತ್ತಿರುವ ಕುರಿತು ಇತ್ತೀಚೆಗಷ್ಟೇ ವರದಿ ಬಿಡುಗಡೆ ಮಾಡಿದ್ದ ಅವರು, ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ತಂದೆಯ ಮೇಲೆ ಒತ್ತಡ ಹೇರಲು ಮಗುವಿಗೆ ಚಿತ್ರಹಿಂಸೆ ನೀಡುವ ಇವರು ಎಂತಹ ವಿಕೃತ ಅಪರಾಧಿಗಳು?” ಎಂದು ಅವರು ಬರೆದುಕೊಂಡಿದ್ದಾರೆ.

ಅಮೆರಿಕನ್-ಇಸ್ಲಾಮಿಕ್ ಸಂಬಂಧಗಳ ಮಂಡಳಿಯು (ಸಿಎಐಆರ್‌) ತನ್ನ ಹೇಳಿಕೆಯಲ್ಲಿ, ಇಸ್ರೇಲಿ ಸೈನಿಕರ ಕೃತ್ಯ “ಸಹಿಸಲಾಗದ ಅನೈತಿಕ ಅತಿರೇಕ” ಎಂದು ಕರೆದಿದೆ ಮತ್ತು ಈ ಕುರಿತು ಅಮೆರಿಕ ಕಾಂಗ್ರೆಸ್ ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

“ಯಾವುದೇ ಮಗು, ವಿಶ್ವದ ಯಾವುದೇ ಭಾಗದಲ್ಲಿ ಇಂತಹ ಕ್ರೌರ್ಯಕ್ಕೆ ಒಳಗಾಗಬಾರದು, ಅದರಲ್ಲೂ ವಿಶೇಷವಾಗಿ ಅಮೆರಿಕದ ತೆರಿಗೆದಾರರ ಹಣದಿಂದ ಇಂತಹ ಕೃತ್ಯಗಳು ನಡೆಯಬಾರದು. ಈ ಕ್ರಮಗಳು ಅಂತಾರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆ ಮತ್ತು ಮೂಲಭೂತ ಮಾನವೀಯತೆಯ ಮೃಗೀಯ ಹನನವಾಗಿದೆ” ಎಂದು ಮಂಡಳಿ ಹೇಳಿದೆ.

“ನಮ್ಮ ರಾಷ್ಟ್ರವು ಈ ಅಪರಾಧಗಳಲ್ಲಿ ತನ್ನ ಪಾಲುದಾರಿಕೆಯನ್ನು ಕೊನೆಗೊಳಿಸಬೇಕು. ಅಮೆರಿಕದ ತೆರಿಗೆದಾರರ ಹಣವು ಇನ್ನು ಮುಂದೆ ಮಕ್ಕಳ ಮೇಲಿನ ಚಿತ್ರಹಿಂಸೆ ಅಥವಾ ಹತ್ಯಾಕಾಂಡಕ್ಕೆ ಬಳಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕಾಂಗ್ರೆಸ್ ಮೇಲಿದೆ. ಆತ್ಮಸಾಕ್ಷಿಯಿರುವ ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಗಳು ನಿಯಂತ್ರಣ ತಪ್ಪಿದ ಇಸ್ರೇಲ್ ಆಡಳಿತಕ್ಕೆ ನೀಡಲಾಗುವ ಮಿಲಿಟರಿ ನೆರವನ್ನು ನಿಲ್ಲಿಸಲು ಮತ ಚಲಾಯಿಸಬೇಕು” ಎಂದು ಮಂಡಳಿಯು ಒತ್ತಾಯಿಸಿದೆ.

ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೇರ್ ಗಾಲಿಬಾಫ್ ಅವರು ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸುತ್ತಾ, “ಇರಾನ್ ಮಾನವೀಯತೆಗಾಗಿ ಹೋರಾಡುತ್ತಿದೆ. ಇಡೀ ಜಗತ್ತು ಈಗ ಎರಡರಲ್ಲಿ ಒಂದನ್ನು ಆರಿಸಿಕೊಳ್ಳಬೇಕು: ಒಂದೋ ಗಾಝಾದ ಪರವಾಗಿ ನಿಂತು ಈ ಕ್ರೂರ ಆಡಳಿತವನ್ನು ವಿರೋಧಿಸಬೇಕು, ಇಲ್ಲವೇ ಮಕ್ಕಳ ಮೇಲೆ ದೌರ್ಜನ್ಯ ಎಸಗುವವರ ಪರವಾಗಿ ನಿಲ್ಲಬೇಕು. ಇಲ್ಲಿ ತಟಸ್ಥವಾಗಿರಲು ಸಾಧ್ಯವೇ ಇಲ್ಲ” ಎಂದು ಹೇಳಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ‘ಚಿತ್ರಹಿಂಸೆ ಮತ್ತು ಜನಾಂಗೀಹತ್ಯೆ’ ಎಂಬ ವಿಶ್ವಸಂಸ್ಥೆಯ ವರದಿಯ ಪ್ರಕಾರ, ಅಕ್ಟೋಬರ್ 7, 2023ರಿಂದ ಇಸ್ರೇಲಿ ವಶದಲ್ಲಿರುವ ಪ್ಯಾಲೆಸ್ತೀನಿಯರು ‘ಅತ್ಯಂತ ಕ್ರೂರವಾದ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ’ ಒಳಗಾಗಿದ್ದಾರೆ.

ಫ್ರಾನ್ಸೆಸ್ಕಾ ಅಲ್ಬನೀಸ್ ಅವರು ಸಿದ್ಧಪಡಿಸಿದ ಈ ವರದಿಯು, “ಬಂಧನದಲ್ಲಿರುವವರ ಮೇಲೆ ನೀಡಲಾಗುತ್ತಿರುವ ಚಿತ್ರಹಿಂಸೆಯನ್ನು ಹಿಂದೆಂದೂ ಕಾಣದ ಮಟ್ಟಿಗೆ ಒಂದು ಶಿಕ್ಷೆಯಾಗಿ ಮತ್ತು ಸಾಮೂಹಿಕ ಸೇಡಿನ ರೂಪದಲ್ಲಿ ಬಳಸಲಾಗುತ್ತಿದೆ” ಎಂದು ಪ್ರತಿಪಾದಿಸಿದೆ.

ಘೋರ ಹಲ್ಲೆಗಳು, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಮಾರಣಾಂತಿಕ ಕಿರುಕುಳ, ಹಸಿವು ಮತ್ತು ಕನಿಷ್ಠ ಮಾನವೀಯ ಸೌಲಭ್ಯಗಳಿಂದ ವ್ಯವಸ್ಥಿತವಾಗಿ ವಂಚಿಸಿರುವುದು ಹತ್ತಾರು ಸಾವಿರ ಪ್ಯಾಲೆಸ್ತೀನಿಯನ್ನರ ಮತ್ತು ಅವರ ಸಂಬಂಧಿಕರ ದೇಹ ಹಾಗೂ ಮನಸ್ಸಿನ ಮೇಲೆ ಆಳವಾದ ಮತ್ತು ಶಾಶ್ವತವಾದ ಗಾಯಗಳನ್ನು ಉಂಟುಮಾಡಿದೆ” ಎಂದು ವರದಿಯು ತಿಳಿಸಿದೆ.

“ಬಂಧನದಲ್ಲಿರುವಾಗ ನೀಡುವ ಚಿತ್ರಹಿಂಸೆ ಮತ್ತು ಅದರ ಜೊತೆಗೆ ನಿರಂತರವಾಗಿ ನಡೆಸುತ್ತಿರುವ ಬಲವಂತದ ಒಕ್ಕಲೆಬ್ಬಿಸುವಿಕೆ, ಸಮೂಹ ಹತ್ಯೆಗಳು, ಮೂಲಭೂತ ಸೌಲಭ್ಯಗಳ ವಂಚನೆ ಹಾಗೂ ಜೀವನೋಪಾಯದ ಮಾರ್ಗಗಳ ನಾಶದ ಮೂಲಕ ಪುರುಷರು, ಮಹಿಳೆಯರು ಮತ್ತು ಮಕ್ಕಳ ಮೇಲೆ ದಬ್ಬಾಳಿಕೆ ನಡೆಸುವುದು ಹಾಗೂ ಶಿಕ್ಷಿಸುವುದು ಈ ಆಡಳಿತದ ಅವಿಭಾಜ್ಯ ಅಂಗವಾಗಿದೆ. ಇವೆಲ್ಲವೂ ದೀರ್ಘಕಾಲದ ಸಾಮೂಹಿಕ ನೋವು ಮತ್ತು ಸಂಕಟವನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿವೆ” ಎಂದು ವರದಿಯು ಹೇಳಿದೆ.

ಅಲ್ಬನೀಸ್ ಅವರು ಕನಿಷ್ಠ 300 ಸಾಕ್ಷ್ಯಗಳು ಸೇರಿದಂತೆ ಲಿಖಿತ ಸಲ್ಲಿಕೆಗಳನ್ನು ಸಂಗ್ರಹಿಸಿರುವುದಾಗಿ ತಿಳಿಸಿದ್ದಾರೆ. ಅವರ ಪ್ರಕಾರ, ಅಕ್ಟೋಬರ್ 2023ರಿಂದ ಆಕ್ರಮಿತ ಪ್ರದೇಶದಲ್ಲಿ ಪ್ಯಾಲೆಸ್ತೀನಿಯರ ಬಂಧನವು ಭೀಕರವಾಗಿ ಹೆಚ್ಚಾಗಿದೆ. ಈ ಅವಧಿಯಲ್ಲಿ ಕನಿಷ್ಠ 1,500 ಮಕ್ಕಳು ಸೇರಿದಂತೆ ಒಟ್ಟು 18,500ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ವರದಿಯ ಪ್ರಕಾರ ಸುಮಾರು 9,000 ಪ್ಯಾಲೆಸ್ತೀನಿಯನ್ನರು ಇನ್ನೂ ಬಂಧನದಲ್ಲಿದ್ದಾರೆ ಮತ್ತು 4,000ಕ್ಕೂ ಹೆಚ್ಚು ಜನರನ್ನು ಬಲವಂತವಾಗಿ ನಾಪತ್ತೆ ಮಾಡಲಾಗಿದೆ. ಇಸ್ರೇಲ್‌ನ ಬಂಧನ ವ್ಯವಸ್ಥೆಯು ವ್ಯವಸ್ಥಿತ ಮತ್ತು ವ್ಯಾಪಕವಾದ ಅವಮಾನ, ಬಲವಂತ ಹಾಗೂ ಭಯೋತ್ಪಾದನೆಯ ಆಡಳಿತವಾಗಿ ಅಧಃಪತನಗೊಂಡಿದೆ ಎಂದು ಅಲ್ಬನೀಸ್ ಹೇಳಿದ್ದಾರೆ.










ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...

ಮಧ್ಯಪ್ರದೇಶ| ವಂದೇ ಮಾತರಂ ಹಾಡಲು ನಿರಾಕರಣೆ; ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್

ಏಪ್ರಿಲ್ 8 ರಂದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನ ಬಜೆಟ್ ಅಧಿವೇಶನದಲ್ಲಿ ಧಾರ್ಮಿಕ ಮತ್ತು ಸಾಂವಿಧಾನಿಕ ಕಾರಣಗಳನ್ನು ಉಲ್ಲೇಖಿಸಿ ವಂದೇ ಮಾತರಂ ಹಾಡಲು ನಿರಾಕರಿಸಿದ್ದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್...

ನ್ಯಾಯಾಂಗ ಸೇವೆಗಳು, ಸರ್ಕಾರಿ ಸಮಿತಿಗಳಲ್ಲಿ ಶೇ. 50 ಮಹಿಳಾ ಪ್ರಾತಿನಿಧ್ಯ ಕೋರಿ ಪಿಐಎಲ್ : ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸರ್ಕಾರಿ ಸಮಿತಿಗಳು ಮತ್ತು ನ್ಯಾಯಾಂಗ ಸೇವೆಯ ಖಾಲಿ ಇರುವ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಪ್ರಾತಿನಿಧ್ಯ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ಗುರುವಾರ...

ರಷ್ಯಾ ತೈಲ ಖರೀದಿಸಲು ಭಾರತಕ್ಕೆ ನೀಡಿದ್ದ ಕಾಲಾವಕಾಶ ವಿಸ್ತರಿಸುವುದಿಲ್ಲ: ಅಮೆರಿಕ

ಇರಾನ್ ಮತ್ತು ರಷ್ಯಾದಿಂದ ತೈಲವನ್ನು ಖರೀದಿಸಲು ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಈವರೆಗೆ ನೀಡಲಾಗಿದ್ದ ನಿರ್ಬಂಧ ಸಡಿಲಿಕೆಯನ್ನು ಇನ್ನು ಮುಂದೆ ಮುಂದುವರಿಸುವುದಿಲ್ಲ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಬುಧವಾರ (ಏ.15)...

ಬೆಂಗಳೂರಿನಲ್ಲಿ ಮಾದಕ ವಸ್ತು ಜಾಲ ಪತ್ತೆ; 10 ಜನರ ಬಂಧನ, 23.6 ಕೋಟಿ ಮೌಲ್ಯದ ಮಾದಕ ವಸ್ತು ವಶ

ಬೆಂಗಳೂರು: ಬೃಹತ್ ಮಾದಕ ವಸ್ತು ಜಾಲ ಪತ್ತೆಯಾಗಿದ್ದು, ಬೆಂಗಳೂರು ನಗರ ಪೊಲೀಸರು 10 ಜನ ಶಂಕಿತರನ್ನು ಬಂಧಿಸಿದ್ದಾರೆ ಮತ್ತು ಅಂದಾಜು 23.63 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ಕೆಲವು...

‘ಮತ ಚಲಾಯಿಸದವರನ್ನು ಶಿಕ್ಷಿಸಲು ಸಾಧ್ಯವಿಲ್ಲ’: ಮತದಾನ ಕಡ್ಡಾಯಗೊಳಿಸಲು ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಮತ ಚಲಾಯಿಸುವುದನ್ನು ಕಡ್ಡಾಯಗೊಳಿಸಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಸುಪ್ರೀಂ ಕೋರ್ಟ್ ಗುರುವಾರ (ಏ. 16) ವಜಾಗೊಳಿಸಿದೆ ಮತ್ತು ಉದ್ದೇಶಪೂರ್ವಕವಾಗಿ ಮತದಾನದಿಂದ ದೂರ ಉಳಿಯುವ ನಾಗರಿಕರಿಗೆ ದಂಡ ವಿಧಿಸಲು...

ಆರ್‌ಎಸ್‌ಎಸ್‌ಗೆ 100 ವರ್ಷ; ಮುದ್ರಣ ಮಾಧ್ಯಮ ಜಾಹೀರಾತಿಗೆ 76.13 ಲಕ್ಷ ರೂ. ಖರ್ಚು ಮಾಡಿದ ಕೇಂದ್ರ ಸರ್ಕಾರ

ಅಧಿಕೃತವಾಗಿ ನೊಂದಣಿಯಾಗದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ದ 100ನೇ ವರ್ಷಾಚರಣೆಯ ಜಾಹೀರಾತುಗಳಿಗಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯವು 76.13 ಲಕ್ಷ ರೂ.ಗಳನ್ನು ಖರ್ಚು ಮಾಡಿದೆ ಎಂದು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಿಂದ ತಿಳಿದುಬಂದಿದೆ. ಹಿಂದೂ...

ಡಿಲಿಮಿಟೇಶನ್‌ಗೆ ಲಿಂಕ್ ಮಾಡದೆ ‘ಮಹಿಳಾ ಮೀಸಲಾತಿ’ ಜಾರಿ ಮಾಡಿ: ಗೌರವ್ ಗೊಗೊಯ್

"ಮಹಿಳಾ ಮೀಸಲಾತಿಯನ್ನು ಪ್ರಸ್ತುತ ಲೋಕಸಭೆಯ 543 ಸದಸ್ಯರ ಬಲದ ಮೇಲೆ ಜಾರಿಗೆ ತರಬೇಕು, ಅದನ್ನು ಡಿಲಿಮಿಟೇಷನ್ (ಕ್ಷೇತ್ರ ಪುನರ್‌ ವಿಂಗಡಣೆ) ಸೀಮಿತಗೊಳಿಸಬಾರದು" ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಹೇಳಿದರು. "ಸರ್ಕಾರವು ಮಸೂದೆಗಳನ್ನು...

ಕ್ಷೇತ್ರ ಮರುವಿಂಗಡನೆ, ಮಹಿಳಾ ಮೀಸಲಾತಿ : ಲೋಕಸಭೆಯಲ್ಲಿ ಮೂರು ಪ್ರಮುಖ ಮಸೂದೆಗಳ ಮಂಡನೆ

ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರಲು ಮತ್ತು ಕ್ಷೇತ್ರ ಮರುವಿಂಗಡಣಾ ಆಯೋಗವನ್ನು ಸ್ಥಾಪಿಸಲು ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್ ಮತ್ತು ಅಮಿತ್ ಶಾ ಅವರು ಗುರುವಾರ (ಏ.16) ಲೋಕಸಭೆಯಲ್ಲಿ ಮೂರು ವಿಧೇಯಕಗಳನ್ನು...

ಮತಾಂತರ ವಿರೋಧಿ ಕಾನೂನನ್ನು ಪೊಲೀಸರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ: ಅಲಹಾಬಾದ್ ಹೈಕೋರ್ಟ್

ಉತ್ತರ ಪ್ರದೇಶದಲ್ಲಿ 2021 ರ ಕಾನೂನುಬಾಹಿರ ಧರ್ಮ ಮತಾಂತರ ನಿಷೇಧ ಕಾಯ್ದೆಯಡಿಯಲ್ಲಿ ದಾಖಲಾಗಿರುವ ಹಲವಾರು "ಸುಳ್ಳು, ನಕಲಿ ಮತ್ತು ಕ್ಷುಲ್ಲಕ ಎಫ್‌ಐಆರ್"ಗಳನ್ನು ಅಲಹಾಬಾದ್ ಹೈಕೋರ್ಟ್ ಗುರುತಿಸಿದೆ. "ಪೊಲೀಸರು ಮತ್ತು ದೂರುದಾರರು ಕಾನೂನನ್ನು ದುರುಪಯೋಗಪಡಿಸಿಕೊಳ್ಳುವ...