Homeಕರ್ನಾಟಕದೇವನಹಳ್ಳಿ ಚಲೋ! ಸಂತ್ರಸ್ತ ರೈತರಿಂದ ಸರ್ಕಾರಕ್ಕೆ ಫೈನಲ್‌ ನೋಟೀಸ್‌

ದೇವನಹಳ್ಳಿ ಚಲೋ! ಸಂತ್ರಸ್ತ ರೈತರಿಂದ ಸರ್ಕಾರಕ್ಕೆ ಫೈನಲ್‌ ನೋಟೀಸ್‌

- Advertisement -
- Advertisement -

ದೇವನಹಳ್ಳಿ: ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ. ಇಲ್ಲವೇ, ಕುಟುಂಬ ಸಮೇತ ನಮ್ಮನ್ನು ಜೈಲಿಗೆ ಹಾಕಿ ಎಂಬ ಶಿರೋನಾಮೆಯೊಂದಿಗೆ ಚನ್ನರಾಯಪಟ್ಟಣದ ಸಂತ್ರಸ್ತ ರೈತರೇ ಸರಕಾರಕ್ಕೆ ಫೈನಲ್ ನೋಟಿಸ್ ನೀಡಿದ್ದಾರೆ.

ಇಂದು ದೇವನಹಳ್ಳಿಯಲ್ಲಿ ನಡೆಯುತ್ತಿರುವ ದೇವನಹಳ್ಳಿ ಚಲೋ ಕಾರ್ಯಕ್ರಮದಲ್ಲಿ ಸಂತ್ರಸ್ತ ರೈತರು ಮುಖ್ಯಮಂತ್ರಿಗಳ ಮೂಲಕ ಸರಕಾರಕ್ಕೆ ತಮ್ಮ ಫೈನಲ್ ನೋಟಿಸ್ ನೀಡಿದ್ದಾರೆ.

ಕಳೆದ 1178 ದಿನಗಳಿಂದ ನಾವು ಅವಡುಗಚ್ಚಿ ಹೋರಾಟ ನಡೆಸಿದ್ದೇವೆ. ಶುದ್ಧ ಮನಸ್ಸಿನಿಂದ ಈ ಹೋರಾಟ ನಡೆಸಿದ್ದೇವೆ. ಎಲ್ಲಾ ಜಾತಿಯ ಜನ ಅಣ್ಣ ತಮ್ಮಂದಿರಂತೆ, ಅಕ್ಕತಂಗಿಯರಂತೆ ಜೊತೆಗೂಡಿ ಹೋರಾಡಿದ್ದೇವೆ. ಅಧಿಕಾರಸ್ಥರ ಮನೆಮನೆಗೆ ಅಲೆದಿದ್ದೇವೆ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಕಾಯುವಿಕೆಗೂ ಒಂದು ಕೊನೆ ಇದೆ. ಈ ಹಗ್ಗಜಗ್ಗಾಟ ಸಾಕು. ಒಂದು ಅಂತಿಮ ಇತ್ಯಾರ್ಥ ಆಗಬೇಕು. ನೀವೇ ಈ ತೀರ್ಮಾನ ತೆಗೆದುಕೊಳ್ಳಬೇಕು. ಒಂದೋ ನಮ್ಮನ್ನು ʼನಮ್ಮ ಪಾಡಿಗೆ ಬದುಕಲು ಬಿಡಬೇಕುʼ ಅಥವಾ ಕುಟುಂಬ ಸಮೇತ ನಮ್ಮನ್ನು ಶಾಶ್ವತವಾಗಿ ಜೈಲಿಗೆ ಕಳಿಸಿ ʼಕಂಪನಿಗಳೇ ನಮಗೆ ಮುಖ್ಯʼ ಎಂದು ನೀವು ಘೋಷಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಇಂದು ಮತ್ತೊಮ್ಮೆ ಕೆಲವು ಕಹಿ ಸತ್ಯಗಳನ್ನು ನಿಮಗೆ ನೆನಪಿಸಲು ಬಯಸುತ್ತೇವೆ. 2022ರ ಜನವರಿಯಲ್ಲಿ ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ನಮ್ಮನ್ನು ಒಕ್ಕಲೆಬ್ಬಿಸಿ, ಚನ್ನರಾಯಪಟ್ಟಣದ 13 ಹಳ್ಳಿಗಳಿಗೆ ಸೇರಿದ, 1777 ಎಕರೆ ಭೂಮಿಯನ್ನು ಕಂಪನಿಗಳಿಗೆ ಮಾರುವ ತೀರ್ಮಾನ ಮಾಡಿ ಅಧಿಸೂಚನೆ ನೀಡಿತ್ತು. ಈ ಭೂಮಿಯಲ್ಲಿ 800 ಕುಟುಂಬದ ಜನ ವಾಸಿಸುತ್ತಿದ್ದೇವೆ. ಬಹುತೇಕರು ಕೃಷಿಯನ್ನೇ ನಂಬಿ ಬದುಕಿದ್ದೇವೆ. ನಮ್ಮ ಪೂರ್ವಿಕರ ಸಮಾಧಿಗಳು ಈ ಭೂಮಿಗಳಲ್ಲಿವೆ. ನಮ್ಮೆಲ್ಲಾ ಜೀವಮಾನದ ದುಡಿಮೆಯನ್ನು ಇದಕ್ಕೆ ಸುರಿದು ನೀರಾವರಿ ಮಾಡಿಕೊಂಡಿದ್ದೇವೆ. ತೋಟಗಳನ್ನು ಬೆಳೆಸಿದ್ದೇವೆ. ಹೈನುಗಾರಿಕೆ, ಕೋಳಿಸಾಗಣಿಗೆ ಮುಂತಾದ ಕೃಷಿ ಸಂಬಂಧಿ ಚಟುವಟಿಕೆಗಳನ್ನು ಮಾಡಿಕೊಂಡು ಕಷ್ಟವೋ ನಷ್ಟವೋ ನಮ್ಮ ಕುಟುಂಬಗಳ ಜೊತೆ, ಬಂಧುಬಳಗದ ಜೊತೆ ಬದುಕುತ್ತಿದ್ದೇವೆ. ಈ ಬದುಕನ್ನು ಕಳೆದುಕೊಳ್ಳಲು ನಾವು ಸಿದ್ಧರಿಲ್ಲ. ಏಕೆಂದರೆ ನಮ್ಮ ಸುತ್ತಮುತ್ತವೇ ಈಗಾಗಲೇ 6,000 ಎಕರೆ ಭೂಮಿಯನ್ನು ಏರ್‌ ಪೋರ್ಟ್‌ ಮತ್ತು ಕಂಪನಿಗಳಿಗಾಗಿ ವಶಪಡಿಸಿಕೊಳ್ಳಲಾಗಿದೆ. ಭೂಮಿ ಕಳೆದುಕೊಂಡವರ ಕತೆ ಏನಾಗಿದೆ ಎಂಬುದನ್ನು ಕಣ್ಣಾರೆ ಕಂಡಿದ್ದೇವೆ. ಅನಾಥರಂತೆ ಚೆಲ್ಲಾಪಿಲ್ಲಿಯಾಗಿ ಪಡಬಾರದ ಕಷ್ಟಪಡುತ್ತಾ ಅವರು ಅಲೆಯುತ್ತಿದ್ದಾರೆ. ಈ ಪರಿಸ್ಥಿತಿಯನ್ನು ನಮ್ಮ ಕುಟುಂಬಗಳಿಗೂ ತಂದುಕೊಳ್ಳಲು ನಾವು ಸಿದ್ಧರಿಲ್ಲ, ನಮ್ಮ ಮಕ್ಕಳ ಭವಿಷ್ಯವನ್ನು ಬಲಿಕೊಡಲು ನಾವು ಸಿದ್ಧರಿಲ್ಲ. ಹಾಗಾಗಿಯೇ ನಾವು ನಮ್ಮ ಬದುಕನ್ನು ಕಾಪಾಡಿಕೊಳ್ಳಲು ಉಸಿರು ಹಿಡಿದು ಹೋರಾಡುತ್ತಾ ಬಂದಿದ್ದೇವೆ ಎಂದು ಫೈನಲ್ ನೋಟಿಸ್ ನಲ್ಲಿ ಸರಕಾರಕ್ಕೆ ಸಂತ್ರಸ್ತ ರೈತರು ತಿಳಿಸಿದ್ದಾರೆ.

ನಾವು ಭೂಮಿಯನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದಾಗ ಭೂಸ್ವಾಧೀನ ಪ್ರಕ್ರಿಯೆಯ ಕಟ್ಟಳೆಯಾಗಿ ಜನಾಭಿಪ್ರಾಯ ಸಂಗ್ರಹಿಸಲೇಬೇಕಿತ್ತು. 2022ರ ಮೇ ತಿಂಗಳಿನಲ್ಲಿ ಜನಾಭಿಪ್ರಾಯ ಸಂಗ್ರಹಣೆ ನಡೆಯಿತು. KIADB ಅಧಿಕಾರಿಗಳೇ ಚನ್ನರಾಯಪಟ್ಟಣದಲ್ಲಿ ಟೇಬಲ್‌ ಹಾಕಿಕೊಂಡು ಜನಾಭಿಪ್ರಾಯ ಸಂಗ್ರಹಿಸಿದರು. ಶೇ 80 ಭಾಗದಷ್ಟು ಜನ ಭೂಮಿ ಕೊಡುವುದಿಲ್ಲ ಎಂದು ಬರೆದುಕೊಟ್ಟೆವು. ಇದರ ಅರ್ಥ ಇನ್ನು ಶೇ 20 ಭಾಗದಷ್ಟು ಜನ ಭೂಮಿ ಕೊಡಲು ಒಪ್ಪಿದರು ಎಂದೂ ಅಲ್ಲ. ಅವರು ಭೂಮಿ ಇಲ್ಲಿದ್ದರೂ ದೂರದೂರದಲ್ಲಿ ಬದುಕುತ್ತಿರುವವರು ಅವರು ತಮ್ಮ ಅಭಿಪ್ರಾಯ ನೀಡಲು ಬರಲೇ ಇಲ್ಲ ಅಷ್ಟೆ. ಕೇವಲ ಬೆರಳೆಣಿಕೆಯ ಜನ ಮಾತ್ರ ಬೇರೊಂದು ಒತ್ತಡಗಳ ಕಾರಣಕ್ಕಾಗಿ ಭೂಮಿ ಕೊಡುತ್ತೇವೆ ಎಂದು ಬರೆದುಕೊಟ್ಟಿದ್ದರು. ಇಂದು ನೀವು ಮತ್ತೆ ಜನಾಭಿಪ್ರಾಯ ಸಂಗ್ರಹಿಸಿದರೆ ಶೇ 95 ಭಾಗದಷ್ಟು ಜನ ಇದನ್ನು ತಿರಸ್ಕರಿಸುವುದು ಶತಸಿದ್ಧ. ಇದು ನಮ್ಮ 13 ಹಳ್ಳಿಗಳ ಒಕ್ಕೊರಲ ತೀರ್ಮಾನ ಎಂಬುದನ್ನು ನೀವು ಮನಸ್ಸಿಗೆ ಇಳಿಸಿಕೊಳ್ಳಬೇಕು. ಇದು ನಿಮ್ಮ ಪಕ್ಷದ ನೇತೃತ್ವದಲ್ಲಿ 2013ರಲ್ಲಿ ತರಲಾದ “ಭೂಸ್ವಾಧೀನ ಹಾಗೂ ಪುನರ್ವಸತಿ ನೀತಿ”ಯ ಸಂಪೂರ್ಣ ಉಲ್ಲಂಘನೆ ಎಂಬುದನ್ನು ನಾವು ನಿಮಗೆ ಹೇಳಬೇಕಿಲ್ಲ ಎಂದು ನೋಟಿಸ್ ನಲ್ಲಿ ರೈತರು ಉಲ್ಲೇಖಿಸಿದ್ದಾರೆ.

ಬಿಜೆಪಿ ಸರ್ಕಾರ ಭೂಸ್ವಾಧೀನದ ಅಧಿಸೂಚನೆ ಹೊರಡಿಸಿದಾಗ ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್‌ ಪಕ್ಷ ವಿರೋದಿಸಿತ್ತು. ಸದನದಲ್ಲೇ ಪ್ರಶ್ನೆ ಕೇಳಿತ್ತು. ಎಲ್ಲದಕ್ಕಿಂತ ಹೆಚ್ಚು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಖುದ್ದು 2022ರ ಸೆಪ್ಟೆಂಬರ್‌ ತಿಂಗಳಿನಲ್ಲಿ ನಮ್ಮ ಹೋರಾಟದ ಪೆಂಡಾಲಿಗೆ ಭೇಟಿ ನೀಡಿದ್ದರು. “ಸರ್ಕಾರ ಈ ರೀತಿ ಮಾಡುವುದು ಸರಿಯಲ್ಲ, ನಾನು ಮತ್ತೆ ಅಧಿಕಾರಕ್ಕೆ ಬಂದರೆ ಇದನ್ನು ರದ್ದುಪಡಿಸುತ್ತೇನೆ” ಎಂದು ಸಿದ್ದರಾಮಯ್ಯನವರೇ ನಮಗೆ ಮಾತುಕೊಟ್ಟಿದ್ದಾರೆ ಎಂದು ಈ ನೋಟಿಸ್ ನಲ್ಲಿ ನೆನಪಿಸಿದ್ದಾರೆ.

ಈ ಎಲ್ಲಾ ಕಾರಣಕ್ಕೆ 2023ರಲ್ಲಿ ನಡೆದ ಚುನಾವಣೆಯಲ್ಲಿ ನಮ್ಮಲ್ಲಿನ ಬಹುತೇಕರು ಕಾಂಗ್ರೆಸ್‌ ಪಕ್ಷವನ್ನೇ ಬೆಂಬಲಿಸಿ ಮತ ಹಾಕಿದರು. ಈ ಬಲವಂತದ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸುತ್ತಿದ್ದ ಕೆ.ಹೆಚ್.‌ ಮುನಿಯಪ್ಪನವರನ್ನು ಗೆಲ್ಲಿಸುವುದರಲ್ಲಿ ನಮ್ಮ ಹಳ್ಳಿಗಳ ಪಾತ್ರವೂ ಮುಖ್ಯವಾಗಿತ್ತು. ಗೆದ್ದನಂತರ ಅವರು ನಮ್ಮನ್ನು ಹಲವು ಬಾರಿ ಎಂ.ಬಿ. ಪಾಟೀಲರ ಬಳಿ, ತಮ್ಮ ಬಳಿ ಕರೆದುಕೊಂಡು ಬಂದರು. ನೀವು ನೋಡೋಣ, ಪರಿಶೀಲಸೋಣ, ಸಭೆ ಕರೆಯೋಣ ಎಂದು ಉತ್ತರ ಕೊಟ್ಟಿರಿ ಗಟ್ಟಿ ತೀರ್ಮಾನ ತೆಗೆದುಕೊಳ್ಳಲಿಲ್ಲ. ಎಂ.ಬಿ. ಪಾಟೀಲರು ಅಂದಿನಿಂದ ಇಂದಿನ ತನಕ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲು ಸಾಧ್ಯವೇ ಇಲ್ಲ ಎಂದು ಪಟ್ಟುಹಿಡಿಯುತ್ತಾ ಬಂದಿದ್ದಾರೆ. ಕ್ರಮೇಣ ಕೆ.ಹೆಚ್.‌ ಮುನಿಯಪ್ಪನವರೂ ಅವರ ಜೊತೆ ದನಿಗೂಡಿಸಲು ಶುರು ಮಾಡಿದ್ದಾರೆ ಎಂದು ಈ ನೋಟಿಸ್ ಹೇಳಿದೆ.

ಈಗ ನಿನ್ನೆ ಇಬ್ಬರೂ ಸೇರಿ (ಮುನಿಯಪ್ಪ ಮತ್ತು ಎಂ.ಬಿ.ಪಾಟೀಲ್) ಪತ್ರಿಕಾಗೋಷ್ಟಿ ಮಾಡಿದ್ದಾರೆ. ರಿಯಲ್‌ ಎಸ್ಟೇಟ್‌ ಏಜೆಂಟರುಗಳಂತೆ ಮಾತನಾಡಿದ್ದಾರೆ. ʼಮೂರು ಹಳ್ಳಿಗಳನ್ನು ಕೈಬಿಡುವ, ಕಮರ್ಷಿಯಲ್‌ ಚಟುವಟಿಕೆಗೆ ಒಂದಿಷ್ಟು ಜಾಗ ನೀಡುವʼ ಮಾತನಾಡಿದ್ದಾರೆ. ಇದನ್ನು ನಾವು ತೀವ್ರವಾಗಿ ಒಕ್ಕೊರಲಿನ ಜೊತೆ ಖಂಡಿಸುತ್ತಿದ್ದೇವೆ. ಇದು ನಮ್ಮನ್ನು ಒಡೆದಾಳುವ ಕುತಂತ್ರ ಎಂಬುದನ್ನು ಅರ್ಥಮಾಡಿಕೊಳ್ಳಲಾರದಷ್ಟು ಮೂರ್ಖರು ನಾವಲ್ಲ. ಒಂದಿಷ್ಟು ಹಣದ ಆಸೆಗೆ ಭೂಮಿಯನ್ನು ಬರಡುಗೊಳಿಸಲು ಅವಕಾಶ ನೀಡುವಷ್ಟು ಸ್ವಾರ್ಥಿಗಳೂ ನಾವಲ್ಲ. ನಾವು ಈ ಚೌಕಾಸಿ ಡೀಲ್‌ ಅನ್ನು ಒಪ್ಪುವ ಮಾತೇ ಇಲ್ಲ ಎಂದು ಈ ನೋಟಿಸ್ ನಲ್ಲಿ ತಿಳಿಸಲಾಗಿದೆ.

ಮುಖ್ಯಮಂತ್ರಿಗಳೇ, ಈಗ ಕೊನೆಯದಾಗಿ ನಿಮ್ಮ ಬಾಗಿಲನ್ನು ಬಲವಾಗಿ ತಟ್ಟಲು ತೀರ್ಮಾನಿಸಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದ ಸಮಸ್ತ ಸಂಘಟನೆಗಳು ನಮ್ಮ ಬೆನ್ನಿಗೆ ನಿಂತು ಮರು ಉತ್ಸಾಹ ಮೂಡಿಸಿವೆ. ಸಾಹಿತಿ – ಚಿಂತಕರು, ಕಲಾವಿದರು, ಧರ್ಮಗುರುಗಳು, ಜನಸಾಮಾನ್ಯರು ನಮ್ಮ ಪರವಾಗಿ ದನಿ ಎತ್ತಿದ್ದಾರೆ. ಇಂದು ನಮ್ಮನ್ನು ಬೆಂಬಲಿಸಿ ರಾಜ್ಯದ ಮೂಲೆಮೂಲೆಗಳಿಂದ ಬಂದಿರುವ ಬಂಧುಗಳ ಕರುಳ ಮಿಡಿತಕ್ಕೆ ನಾವು ಋಣಿಗಳಾಗಿದ್ದೇವೆ. ಇವರೆಲ್ಲರ ಸಮ್ಮುಖದಲ್ಲಿ ನಾವು ನಮ್ಮ ಕೊನೆ ತೀರ್ಮಾನವನ್ನು ಘೋಷಿಸುತ್ತಿದ್ದೇವೆ. ಒಂದೇ ಮಾತಿನಲ್ಲಿ “ಸರ್ಕಾರ ಈ ಅಧಿಸೂಚನೆಯನ್ನು ರದ್ದುಗೊಳಿಸುತ್ತಿದೆ ಎಂದು ಘೋಷಿಸಿ ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ. ಅಥವಾ ನಮ್ಮೆಲ್ಲರನ್ನು ಜೈಲಿಗೆ ಹಾಕಿ ನಿಮಗೆ ಏನು ಮಾಡಬೇಕೆನಿಸುತ್ತೋ ಅದನ್ನು ಮಾಡಿ”. ಆದರೆ ನೀವೀ ಕೆಲಸವನ್ನು ನಮ್ಮನ್ನು ಸೆರೆಗೆ ಹಾಕಿಯೇ ಮಾಡಬೇಕು ಎಂದು ಈ ನೋಟಿಸ್ ನಲ್ಲಿ ಒತ್ತಾಯಿಸಿದ್ದಾರೆ.

ಸರ್ಕಾರ ಜಾಗ ಖಾಲಿ ಮಾಡಲು ನಮಗೆ ಅಂತಿಮ ಅಧಿಸೂಚನೆ ಕಳಿಸಿಯಾಗಿದೆ. ಇಂದು ನಾವು ಈ ಪತ್ರದ ಮೂಲಕ ಸರ್ಕಾರಕ್ಕೆ ಅಂತಿಮ ನೋಟೀಸ್‌ ನೀಡುತ್ತಿದ್ದೇವೆ. ಇಲ್ಲಿಂದ 24 ಗಂಟೆಗಳ ಕಾಲ ನಾವು ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತೇವೆ. ಸ್ಪಷ್ಟ ಉತ್ತರ ಬರದಿದ್ದಲ್ಲಿ ನಾಳೆ ಇದೇ ಹೊತ್ತಿಗೆ ತೀವ್ರ ಹೋರಾಟಕ್ಕೆ ಇಳಿಯುತ್ತೇವೆ. ಅಪರಾಧವೇ ಅಧಿಕಾರವಾದಾಗ ಗಾಂಧೀಜಿಯವರೂ ತೀಕ್ಷ್ಣ ಹೆಜ್ಜೆಗಳನ್ನು ಇಟ್ಟಿದ್ದಾರೆ, ನಾವೂ ಸಹ ಅವರ ಹಾದಿಯಲ್ಲೇ ಸಾಗುತ್ತೇವೆ. ಸರ್ಕಾರದ ಪ್ರಾತಿನಿಧಿಕ ತಾಣವಾದ ತಾಲ್ಲೂಕು ಕಛೇರಿಯನ್ನು ಮುತ್ತಿಗೆ ಹಾಕುತ್ತೇವೆ. ನಿಮಗೊಂದು ನೆಪ ಸಿಗುತ್ತದೆ. ನಮ್ಮನ್ನು ಜೈಲಿಗೆ ಹಾಕಬಹುದು. ಕಂಪನಿಗಳ ದಾರಿಯನ್ನು ಸುಗಮಗೊಳಿಸಬಹುದು. ತೀರ್ಮಾನ ತಮ್ಮದು. ನಮಸ್ಕಾರ ಎಂದು ಸಂತ್ರಸ್ತ 13 ಹಳ್ಳಿಗಳ ರೈತರು ಈ ನೋಟಿಸ್ ಅನ್ನು ಸರಕಾರಕ್ಕೆ ನೀಡಿದ್ದಾರೆ.

ಸಂಜೆ 5 ಗಂಟೆಯೊಳಗೆ ಸರ್ಕಾರ ರೈತಪರ ನಿರ್ಣಯ ತೆಗೆದುಕೊಳ್ಳದಿದ್ದರೆ ಹೋರಾಟದ ಸ್ವರೂಪ ಬದಲಾಗಲಿದೆ: ಬಡಗಲಪುರ ನಾಗೇಂದ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....