Homeಕರ್ನಾಟಕದೇವನಹಳ್ಳಿ ಚಲೋ! ಸಂತ್ರಸ್ತ ರೈತರಿಂದ ಸರ್ಕಾರಕ್ಕೆ ಫೈನಲ್‌ ನೋಟೀಸ್‌

ದೇವನಹಳ್ಳಿ ಚಲೋ! ಸಂತ್ರಸ್ತ ರೈತರಿಂದ ಸರ್ಕಾರಕ್ಕೆ ಫೈನಲ್‌ ನೋಟೀಸ್‌

- Advertisement -
- Advertisement -

ದೇವನಹಳ್ಳಿ: ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ. ಇಲ್ಲವೇ, ಕುಟುಂಬ ಸಮೇತ ನಮ್ಮನ್ನು ಜೈಲಿಗೆ ಹಾಕಿ ಎಂಬ ಶಿರೋನಾಮೆಯೊಂದಿಗೆ ಚನ್ನರಾಯಪಟ್ಟಣದ ಸಂತ್ರಸ್ತ ರೈತರೇ ಸರಕಾರಕ್ಕೆ ಫೈನಲ್ ನೋಟಿಸ್ ನೀಡಿದ್ದಾರೆ.

ಇಂದು ದೇವನಹಳ್ಳಿಯಲ್ಲಿ ನಡೆಯುತ್ತಿರುವ ದೇವನಹಳ್ಳಿ ಚಲೋ ಕಾರ್ಯಕ್ರಮದಲ್ಲಿ ಸಂತ್ರಸ್ತ ರೈತರು ಮುಖ್ಯಮಂತ್ರಿಗಳ ಮೂಲಕ ಸರಕಾರಕ್ಕೆ ತಮ್ಮ ಫೈನಲ್ ನೋಟಿಸ್ ನೀಡಿದ್ದಾರೆ.

ಕಳೆದ 1178 ದಿನಗಳಿಂದ ನಾವು ಅವಡುಗಚ್ಚಿ ಹೋರಾಟ ನಡೆಸಿದ್ದೇವೆ. ಶುದ್ಧ ಮನಸ್ಸಿನಿಂದ ಈ ಹೋರಾಟ ನಡೆಸಿದ್ದೇವೆ. ಎಲ್ಲಾ ಜಾತಿಯ ಜನ ಅಣ್ಣ ತಮ್ಮಂದಿರಂತೆ, ಅಕ್ಕತಂಗಿಯರಂತೆ ಜೊತೆಗೂಡಿ ಹೋರಾಡಿದ್ದೇವೆ. ಅಧಿಕಾರಸ್ಥರ ಮನೆಮನೆಗೆ ಅಲೆದಿದ್ದೇವೆ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಕಾಯುವಿಕೆಗೂ ಒಂದು ಕೊನೆ ಇದೆ. ಈ ಹಗ್ಗಜಗ್ಗಾಟ ಸಾಕು. ಒಂದು ಅಂತಿಮ ಇತ್ಯಾರ್ಥ ಆಗಬೇಕು. ನೀವೇ ಈ ತೀರ್ಮಾನ ತೆಗೆದುಕೊಳ್ಳಬೇಕು. ಒಂದೋ ನಮ್ಮನ್ನು ʼನಮ್ಮ ಪಾಡಿಗೆ ಬದುಕಲು ಬಿಡಬೇಕುʼ ಅಥವಾ ಕುಟುಂಬ ಸಮೇತ ನಮ್ಮನ್ನು ಶಾಶ್ವತವಾಗಿ ಜೈಲಿಗೆ ಕಳಿಸಿ ʼಕಂಪನಿಗಳೇ ನಮಗೆ ಮುಖ್ಯʼ ಎಂದು ನೀವು ಘೋಷಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಇಂದು ಮತ್ತೊಮ್ಮೆ ಕೆಲವು ಕಹಿ ಸತ್ಯಗಳನ್ನು ನಿಮಗೆ ನೆನಪಿಸಲು ಬಯಸುತ್ತೇವೆ. 2022ರ ಜನವರಿಯಲ್ಲಿ ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ನಮ್ಮನ್ನು ಒಕ್ಕಲೆಬ್ಬಿಸಿ, ಚನ್ನರಾಯಪಟ್ಟಣದ 13 ಹಳ್ಳಿಗಳಿಗೆ ಸೇರಿದ, 1777 ಎಕರೆ ಭೂಮಿಯನ್ನು ಕಂಪನಿಗಳಿಗೆ ಮಾರುವ ತೀರ್ಮಾನ ಮಾಡಿ ಅಧಿಸೂಚನೆ ನೀಡಿತ್ತು. ಈ ಭೂಮಿಯಲ್ಲಿ 800 ಕುಟುಂಬದ ಜನ ವಾಸಿಸುತ್ತಿದ್ದೇವೆ. ಬಹುತೇಕರು ಕೃಷಿಯನ್ನೇ ನಂಬಿ ಬದುಕಿದ್ದೇವೆ. ನಮ್ಮ ಪೂರ್ವಿಕರ ಸಮಾಧಿಗಳು ಈ ಭೂಮಿಗಳಲ್ಲಿವೆ. ನಮ್ಮೆಲ್ಲಾ ಜೀವಮಾನದ ದುಡಿಮೆಯನ್ನು ಇದಕ್ಕೆ ಸುರಿದು ನೀರಾವರಿ ಮಾಡಿಕೊಂಡಿದ್ದೇವೆ. ತೋಟಗಳನ್ನು ಬೆಳೆಸಿದ್ದೇವೆ. ಹೈನುಗಾರಿಕೆ, ಕೋಳಿಸಾಗಣಿಗೆ ಮುಂತಾದ ಕೃಷಿ ಸಂಬಂಧಿ ಚಟುವಟಿಕೆಗಳನ್ನು ಮಾಡಿಕೊಂಡು ಕಷ್ಟವೋ ನಷ್ಟವೋ ನಮ್ಮ ಕುಟುಂಬಗಳ ಜೊತೆ, ಬಂಧುಬಳಗದ ಜೊತೆ ಬದುಕುತ್ತಿದ್ದೇವೆ. ಈ ಬದುಕನ್ನು ಕಳೆದುಕೊಳ್ಳಲು ನಾವು ಸಿದ್ಧರಿಲ್ಲ. ಏಕೆಂದರೆ ನಮ್ಮ ಸುತ್ತಮುತ್ತವೇ ಈಗಾಗಲೇ 6,000 ಎಕರೆ ಭೂಮಿಯನ್ನು ಏರ್‌ ಪೋರ್ಟ್‌ ಮತ್ತು ಕಂಪನಿಗಳಿಗಾಗಿ ವಶಪಡಿಸಿಕೊಳ್ಳಲಾಗಿದೆ. ಭೂಮಿ ಕಳೆದುಕೊಂಡವರ ಕತೆ ಏನಾಗಿದೆ ಎಂಬುದನ್ನು ಕಣ್ಣಾರೆ ಕಂಡಿದ್ದೇವೆ. ಅನಾಥರಂತೆ ಚೆಲ್ಲಾಪಿಲ್ಲಿಯಾಗಿ ಪಡಬಾರದ ಕಷ್ಟಪಡುತ್ತಾ ಅವರು ಅಲೆಯುತ್ತಿದ್ದಾರೆ. ಈ ಪರಿಸ್ಥಿತಿಯನ್ನು ನಮ್ಮ ಕುಟುಂಬಗಳಿಗೂ ತಂದುಕೊಳ್ಳಲು ನಾವು ಸಿದ್ಧರಿಲ್ಲ, ನಮ್ಮ ಮಕ್ಕಳ ಭವಿಷ್ಯವನ್ನು ಬಲಿಕೊಡಲು ನಾವು ಸಿದ್ಧರಿಲ್ಲ. ಹಾಗಾಗಿಯೇ ನಾವು ನಮ್ಮ ಬದುಕನ್ನು ಕಾಪಾಡಿಕೊಳ್ಳಲು ಉಸಿರು ಹಿಡಿದು ಹೋರಾಡುತ್ತಾ ಬಂದಿದ್ದೇವೆ ಎಂದು ಫೈನಲ್ ನೋಟಿಸ್ ನಲ್ಲಿ ಸರಕಾರಕ್ಕೆ ಸಂತ್ರಸ್ತ ರೈತರು ತಿಳಿಸಿದ್ದಾರೆ.

ನಾವು ಭೂಮಿಯನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದಾಗ ಭೂಸ್ವಾಧೀನ ಪ್ರಕ್ರಿಯೆಯ ಕಟ್ಟಳೆಯಾಗಿ ಜನಾಭಿಪ್ರಾಯ ಸಂಗ್ರಹಿಸಲೇಬೇಕಿತ್ತು. 2022ರ ಮೇ ತಿಂಗಳಿನಲ್ಲಿ ಜನಾಭಿಪ್ರಾಯ ಸಂಗ್ರಹಣೆ ನಡೆಯಿತು. KIADB ಅಧಿಕಾರಿಗಳೇ ಚನ್ನರಾಯಪಟ್ಟಣದಲ್ಲಿ ಟೇಬಲ್‌ ಹಾಕಿಕೊಂಡು ಜನಾಭಿಪ್ರಾಯ ಸಂಗ್ರಹಿಸಿದರು. ಶೇ 80 ಭಾಗದಷ್ಟು ಜನ ಭೂಮಿ ಕೊಡುವುದಿಲ್ಲ ಎಂದು ಬರೆದುಕೊಟ್ಟೆವು. ಇದರ ಅರ್ಥ ಇನ್ನು ಶೇ 20 ಭಾಗದಷ್ಟು ಜನ ಭೂಮಿ ಕೊಡಲು ಒಪ್ಪಿದರು ಎಂದೂ ಅಲ್ಲ. ಅವರು ಭೂಮಿ ಇಲ್ಲಿದ್ದರೂ ದೂರದೂರದಲ್ಲಿ ಬದುಕುತ್ತಿರುವವರು ಅವರು ತಮ್ಮ ಅಭಿಪ್ರಾಯ ನೀಡಲು ಬರಲೇ ಇಲ್ಲ ಅಷ್ಟೆ. ಕೇವಲ ಬೆರಳೆಣಿಕೆಯ ಜನ ಮಾತ್ರ ಬೇರೊಂದು ಒತ್ತಡಗಳ ಕಾರಣಕ್ಕಾಗಿ ಭೂಮಿ ಕೊಡುತ್ತೇವೆ ಎಂದು ಬರೆದುಕೊಟ್ಟಿದ್ದರು. ಇಂದು ನೀವು ಮತ್ತೆ ಜನಾಭಿಪ್ರಾಯ ಸಂಗ್ರಹಿಸಿದರೆ ಶೇ 95 ಭಾಗದಷ್ಟು ಜನ ಇದನ್ನು ತಿರಸ್ಕರಿಸುವುದು ಶತಸಿದ್ಧ. ಇದು ನಮ್ಮ 13 ಹಳ್ಳಿಗಳ ಒಕ್ಕೊರಲ ತೀರ್ಮಾನ ಎಂಬುದನ್ನು ನೀವು ಮನಸ್ಸಿಗೆ ಇಳಿಸಿಕೊಳ್ಳಬೇಕು. ಇದು ನಿಮ್ಮ ಪಕ್ಷದ ನೇತೃತ್ವದಲ್ಲಿ 2013ರಲ್ಲಿ ತರಲಾದ “ಭೂಸ್ವಾಧೀನ ಹಾಗೂ ಪುನರ್ವಸತಿ ನೀತಿ”ಯ ಸಂಪೂರ್ಣ ಉಲ್ಲಂಘನೆ ಎಂಬುದನ್ನು ನಾವು ನಿಮಗೆ ಹೇಳಬೇಕಿಲ್ಲ ಎಂದು ನೋಟಿಸ್ ನಲ್ಲಿ ರೈತರು ಉಲ್ಲೇಖಿಸಿದ್ದಾರೆ.

ಬಿಜೆಪಿ ಸರ್ಕಾರ ಭೂಸ್ವಾಧೀನದ ಅಧಿಸೂಚನೆ ಹೊರಡಿಸಿದಾಗ ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್‌ ಪಕ್ಷ ವಿರೋದಿಸಿತ್ತು. ಸದನದಲ್ಲೇ ಪ್ರಶ್ನೆ ಕೇಳಿತ್ತು. ಎಲ್ಲದಕ್ಕಿಂತ ಹೆಚ್ಚು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಖುದ್ದು 2022ರ ಸೆಪ್ಟೆಂಬರ್‌ ತಿಂಗಳಿನಲ್ಲಿ ನಮ್ಮ ಹೋರಾಟದ ಪೆಂಡಾಲಿಗೆ ಭೇಟಿ ನೀಡಿದ್ದರು. “ಸರ್ಕಾರ ಈ ರೀತಿ ಮಾಡುವುದು ಸರಿಯಲ್ಲ, ನಾನು ಮತ್ತೆ ಅಧಿಕಾರಕ್ಕೆ ಬಂದರೆ ಇದನ್ನು ರದ್ದುಪಡಿಸುತ್ತೇನೆ” ಎಂದು ಸಿದ್ದರಾಮಯ್ಯನವರೇ ನಮಗೆ ಮಾತುಕೊಟ್ಟಿದ್ದಾರೆ ಎಂದು ಈ ನೋಟಿಸ್ ನಲ್ಲಿ ನೆನಪಿಸಿದ್ದಾರೆ.

ಈ ಎಲ್ಲಾ ಕಾರಣಕ್ಕೆ 2023ರಲ್ಲಿ ನಡೆದ ಚುನಾವಣೆಯಲ್ಲಿ ನಮ್ಮಲ್ಲಿನ ಬಹುತೇಕರು ಕಾಂಗ್ರೆಸ್‌ ಪಕ್ಷವನ್ನೇ ಬೆಂಬಲಿಸಿ ಮತ ಹಾಕಿದರು. ಈ ಬಲವಂತದ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸುತ್ತಿದ್ದ ಕೆ.ಹೆಚ್.‌ ಮುನಿಯಪ್ಪನವರನ್ನು ಗೆಲ್ಲಿಸುವುದರಲ್ಲಿ ನಮ್ಮ ಹಳ್ಳಿಗಳ ಪಾತ್ರವೂ ಮುಖ್ಯವಾಗಿತ್ತು. ಗೆದ್ದನಂತರ ಅವರು ನಮ್ಮನ್ನು ಹಲವು ಬಾರಿ ಎಂ.ಬಿ. ಪಾಟೀಲರ ಬಳಿ, ತಮ್ಮ ಬಳಿ ಕರೆದುಕೊಂಡು ಬಂದರು. ನೀವು ನೋಡೋಣ, ಪರಿಶೀಲಸೋಣ, ಸಭೆ ಕರೆಯೋಣ ಎಂದು ಉತ್ತರ ಕೊಟ್ಟಿರಿ ಗಟ್ಟಿ ತೀರ್ಮಾನ ತೆಗೆದುಕೊಳ್ಳಲಿಲ್ಲ. ಎಂ.ಬಿ. ಪಾಟೀಲರು ಅಂದಿನಿಂದ ಇಂದಿನ ತನಕ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲು ಸಾಧ್ಯವೇ ಇಲ್ಲ ಎಂದು ಪಟ್ಟುಹಿಡಿಯುತ್ತಾ ಬಂದಿದ್ದಾರೆ. ಕ್ರಮೇಣ ಕೆ.ಹೆಚ್.‌ ಮುನಿಯಪ್ಪನವರೂ ಅವರ ಜೊತೆ ದನಿಗೂಡಿಸಲು ಶುರು ಮಾಡಿದ್ದಾರೆ ಎಂದು ಈ ನೋಟಿಸ್ ಹೇಳಿದೆ.

ಈಗ ನಿನ್ನೆ ಇಬ್ಬರೂ ಸೇರಿ (ಮುನಿಯಪ್ಪ ಮತ್ತು ಎಂ.ಬಿ.ಪಾಟೀಲ್) ಪತ್ರಿಕಾಗೋಷ್ಟಿ ಮಾಡಿದ್ದಾರೆ. ರಿಯಲ್‌ ಎಸ್ಟೇಟ್‌ ಏಜೆಂಟರುಗಳಂತೆ ಮಾತನಾಡಿದ್ದಾರೆ. ʼಮೂರು ಹಳ್ಳಿಗಳನ್ನು ಕೈಬಿಡುವ, ಕಮರ್ಷಿಯಲ್‌ ಚಟುವಟಿಕೆಗೆ ಒಂದಿಷ್ಟು ಜಾಗ ನೀಡುವʼ ಮಾತನಾಡಿದ್ದಾರೆ. ಇದನ್ನು ನಾವು ತೀವ್ರವಾಗಿ ಒಕ್ಕೊರಲಿನ ಜೊತೆ ಖಂಡಿಸುತ್ತಿದ್ದೇವೆ. ಇದು ನಮ್ಮನ್ನು ಒಡೆದಾಳುವ ಕುತಂತ್ರ ಎಂಬುದನ್ನು ಅರ್ಥಮಾಡಿಕೊಳ್ಳಲಾರದಷ್ಟು ಮೂರ್ಖರು ನಾವಲ್ಲ. ಒಂದಿಷ್ಟು ಹಣದ ಆಸೆಗೆ ಭೂಮಿಯನ್ನು ಬರಡುಗೊಳಿಸಲು ಅವಕಾಶ ನೀಡುವಷ್ಟು ಸ್ವಾರ್ಥಿಗಳೂ ನಾವಲ್ಲ. ನಾವು ಈ ಚೌಕಾಸಿ ಡೀಲ್‌ ಅನ್ನು ಒಪ್ಪುವ ಮಾತೇ ಇಲ್ಲ ಎಂದು ಈ ನೋಟಿಸ್ ನಲ್ಲಿ ತಿಳಿಸಲಾಗಿದೆ.

ಮುಖ್ಯಮಂತ್ರಿಗಳೇ, ಈಗ ಕೊನೆಯದಾಗಿ ನಿಮ್ಮ ಬಾಗಿಲನ್ನು ಬಲವಾಗಿ ತಟ್ಟಲು ತೀರ್ಮಾನಿಸಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದ ಸಮಸ್ತ ಸಂಘಟನೆಗಳು ನಮ್ಮ ಬೆನ್ನಿಗೆ ನಿಂತು ಮರು ಉತ್ಸಾಹ ಮೂಡಿಸಿವೆ. ಸಾಹಿತಿ – ಚಿಂತಕರು, ಕಲಾವಿದರು, ಧರ್ಮಗುರುಗಳು, ಜನಸಾಮಾನ್ಯರು ನಮ್ಮ ಪರವಾಗಿ ದನಿ ಎತ್ತಿದ್ದಾರೆ. ಇಂದು ನಮ್ಮನ್ನು ಬೆಂಬಲಿಸಿ ರಾಜ್ಯದ ಮೂಲೆಮೂಲೆಗಳಿಂದ ಬಂದಿರುವ ಬಂಧುಗಳ ಕರುಳ ಮಿಡಿತಕ್ಕೆ ನಾವು ಋಣಿಗಳಾಗಿದ್ದೇವೆ. ಇವರೆಲ್ಲರ ಸಮ್ಮುಖದಲ್ಲಿ ನಾವು ನಮ್ಮ ಕೊನೆ ತೀರ್ಮಾನವನ್ನು ಘೋಷಿಸುತ್ತಿದ್ದೇವೆ. ಒಂದೇ ಮಾತಿನಲ್ಲಿ “ಸರ್ಕಾರ ಈ ಅಧಿಸೂಚನೆಯನ್ನು ರದ್ದುಗೊಳಿಸುತ್ತಿದೆ ಎಂದು ಘೋಷಿಸಿ ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ. ಅಥವಾ ನಮ್ಮೆಲ್ಲರನ್ನು ಜೈಲಿಗೆ ಹಾಕಿ ನಿಮಗೆ ಏನು ಮಾಡಬೇಕೆನಿಸುತ್ತೋ ಅದನ್ನು ಮಾಡಿ”. ಆದರೆ ನೀವೀ ಕೆಲಸವನ್ನು ನಮ್ಮನ್ನು ಸೆರೆಗೆ ಹಾಕಿಯೇ ಮಾಡಬೇಕು ಎಂದು ಈ ನೋಟಿಸ್ ನಲ್ಲಿ ಒತ್ತಾಯಿಸಿದ್ದಾರೆ.

ಸರ್ಕಾರ ಜಾಗ ಖಾಲಿ ಮಾಡಲು ನಮಗೆ ಅಂತಿಮ ಅಧಿಸೂಚನೆ ಕಳಿಸಿಯಾಗಿದೆ. ಇಂದು ನಾವು ಈ ಪತ್ರದ ಮೂಲಕ ಸರ್ಕಾರಕ್ಕೆ ಅಂತಿಮ ನೋಟೀಸ್‌ ನೀಡುತ್ತಿದ್ದೇವೆ. ಇಲ್ಲಿಂದ 24 ಗಂಟೆಗಳ ಕಾಲ ನಾವು ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತೇವೆ. ಸ್ಪಷ್ಟ ಉತ್ತರ ಬರದಿದ್ದಲ್ಲಿ ನಾಳೆ ಇದೇ ಹೊತ್ತಿಗೆ ತೀವ್ರ ಹೋರಾಟಕ್ಕೆ ಇಳಿಯುತ್ತೇವೆ. ಅಪರಾಧವೇ ಅಧಿಕಾರವಾದಾಗ ಗಾಂಧೀಜಿಯವರೂ ತೀಕ್ಷ್ಣ ಹೆಜ್ಜೆಗಳನ್ನು ಇಟ್ಟಿದ್ದಾರೆ, ನಾವೂ ಸಹ ಅವರ ಹಾದಿಯಲ್ಲೇ ಸಾಗುತ್ತೇವೆ. ಸರ್ಕಾರದ ಪ್ರಾತಿನಿಧಿಕ ತಾಣವಾದ ತಾಲ್ಲೂಕು ಕಛೇರಿಯನ್ನು ಮುತ್ತಿಗೆ ಹಾಕುತ್ತೇವೆ. ನಿಮಗೊಂದು ನೆಪ ಸಿಗುತ್ತದೆ. ನಮ್ಮನ್ನು ಜೈಲಿಗೆ ಹಾಕಬಹುದು. ಕಂಪನಿಗಳ ದಾರಿಯನ್ನು ಸುಗಮಗೊಳಿಸಬಹುದು. ತೀರ್ಮಾನ ತಮ್ಮದು. ನಮಸ್ಕಾರ ಎಂದು ಸಂತ್ರಸ್ತ 13 ಹಳ್ಳಿಗಳ ರೈತರು ಈ ನೋಟಿಸ್ ಅನ್ನು ಸರಕಾರಕ್ಕೆ ನೀಡಿದ್ದಾರೆ.

ಸಂಜೆ 5 ಗಂಟೆಯೊಳಗೆ ಸರ್ಕಾರ ರೈತಪರ ನಿರ್ಣಯ ತೆಗೆದುಕೊಳ್ಳದಿದ್ದರೆ ಹೋರಾಟದ ಸ್ವರೂಪ ಬದಲಾಗಲಿದೆ: ಬಡಗಲಪುರ ನಾಗೇಂದ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನದ ಭಿವಾಡಿಯಲ್ಲಿ ಗೋ ಕಳ್ಳಸಾಗಣೆದಾರರು ಮತ್ತು ಗೋರಕ್ಷಕರ ನಡುವೆ ಘರ್ಷಣೆ: ಯುವಕ ಸಾವು

ಜೈಪುರ: ರಾಜಸ್ಥಾನದ ಭಿವಾಡಿಯಲ್ಲಿ ಸೋಮವಾರ ಬೆಳಗಿನ ಜಾವ ಗೋ ಕಳ್ಳಸಾಗಣೆದಾರರು ಮತ್ತು ಗೋರಕ್ಷಕರ ನಡುವೆ ನಡೆದ ಘರ್ಷಣೆಯಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಈ ಘಟನೆಯಿಂದಾಗಿ ಮೃತನ ಕುಟುಂಬ ಪ್ರತಿಭಟನೆ ನಡೆಸಿದ್ದು, ಆತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು...

ಖಮೇನಿ ಹತ್ಯೆ ಬಗ್ಗೆ ಪ್ರಧಾನಿ ಮೋದಿ ತಮ್ಮ ನಿಲುವು ತಿಳಿಸಬೇಕು: ರಾಹುಲ್ ಗಾಂಧಿ ಒತ್ತಾಯ

ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಿದ್ದಾರೆ. ಅಮೆರಿಕ ಮತ್ತು...

ಇರಾನ್‌ ಮೇಲೆ ಇಸ್ರೇಲ್ ದಾಳಿ: ಟೆಹ್ರಾನ್‌ನಿಂದ 200ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಕೋಮ್‌ಗೆ ಸ್ಥಳಾಂತರ

ನವದೆಹಲಿ: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಗಳು ತೀವ್ರಗೊಳ್ಳುತ್ತಿರುವ ಮಧ್ಯೆ, ಟೆಹ್ರಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯ ವಿದ್ಯಾರ್ಥಿಗಳನ್ನು ಕೋಮ್‌ಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ, ಆದರೆ ಭಾರತೀಯ ರಾಯಭಾರ ಕಚೇರಿಯು ಮುನ್ನೆಚ್ಚರಿಕೆ ಕ್ರಮವಾಗಿ ತನ್ನ ಪ್ರಜೆಗಳನ್ನು ಮನೆಯೊಳಗೆ ಇರುವಂತೆ...

‘ಪಿಟಿಸಿಎಲ್‌ ಕಾಯ್ದೆ’ ಸಮರ್ಪಕ ಜಾರಿಗೆ ಆಗ್ರಹಿಸಿ ಆಹೋರಾತ್ರಿ ಧರಣಿ ಸತ್ಯಾಗ್ರಹ

'ಪಿಟಿಸಿಎಲ್‌ (PTCL) ಕಾಯ್ದೆ' ಸಮರ್ಪಕ ಜಾರಿಗೆ ಆಗ್ರಹಿಸಿ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು 'ಪಿಟಿಸಿಎಲ್‌ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ' ಮುಖಂಡರು ಘೋಷಿಸಿದರು. ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ...

ರಾಜಸ್ಥಾನ| ‘ನೀವು ಕೆಳಜಾತಿಯವರು, ಎಲ್‌ಎಲ್‌ಬಿ ನಿಮಗೆ ಸೂಕ್ತವಲ್ಲ..’; ದಲಿತ ವಿದ್ಯಾರ್ಥಿನಿಗೆ ಪ್ರಾಧ್ಯಾಪಕರಿಂದ ಜಾತಿ ನಿಂದನೆ

ರಾಜಸ್ಥಾನದ ಚುರುವಿನ ಸರ್ಕಾರಿ ಕಾನೂನು ಕಾಲೇಜಿನ ಮೂರನೇ ಸೆಮಿಸ್ಟರ್ ದಲಿತ ಎಲ್‌ಎಲ್‌ಬಿ ವಿದ್ಯಾರ್ಥಿನಿಯೊಬ್ಬರು, ಇಬ್ಬರು ಪ್ರಾಧ್ಯಾಪಕರಿಂದ ಜಾತಿ ಆಧಾರಿತ ನಿಂದನೆ, ಬೆದರಿಕೆ ಮತ್ತು ತಾರತಮ್ಯ ಆರೋಪದ ಮೇಲೆ ಪೊಲೀಸ್ ದೂರು ದಾಖಲಿಸಿದ್ದಾರೆ. ಎಸ್‌ಸಿ...

ಬೆಂಗಳೂರು: ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ: ಮಹಿಳೆ ಸಾವು, ಮೂವರ ರಕ್ಷಣೆ

ಬೆಂಗಳೂರು: ಸೋಮವಾರ ರಾತ್ರಿ ಉತ್ತರ ಬೆಂಗಳೂರಿನಲ್ಲಿರುವ ಮನೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಮೃತರನ್ನು 55 ವರ್ಷದ ಸವಿತಾ ಎಂದು ಗುರುತಿಸಲಾಗಿದೆ. ಅವರ ಪತಿ ಗುತ್ತಿಗೆದಾರ ರಮೇಶ್...

ಲಕ್ನೋ | 12 ವರ್ಷದ ಬಾಲಕ ಉನೈಝ್ ಗುಂಡೇಟಿಗೆ ಬಲಿ : ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂದ ಕುಟುಂಬ

ಉತ್ತರ ಪ್ರದೇಶದ ಲಕ್ನೋದಲ್ಲಿ 12 ವರ್ಷದ ಬಾಲಕನೊಬ್ಬ ಗುಂಡೇಟಿನಿಂದ ಮೃತಪಟ್ಟಿದ್ದು, ಆತನನ್ನು ಕೊಲೆ ಮಾಡಲಾಗಿದೆ. ಕೃತ್ಯವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆ ದೇಶದ ಗಮನ ಸೆಳೆದಿದ್ದು, ಸಾಮಾಜಿಕ...

ಕೇರಳ: ಪೊಲೀಸರ ‘ದುರುದ್ದೇಶಪೂರಿತ ಮೊಕದ್ದಮೆ’ಗಾಗಿ ನಿವೃತ್ತ ಸೇನಾ ಅಧಿಕಾರಿಗೆ ಕೇರಳ ನ್ಯಾಯಾಲಯದಿಂದ 5 ಲಕ್ಷ ರೂ. ಪರಿಹಾರ ಘೋಷಣೆ

ಕೊಲ್ಲಂ, ಕೇರಳ: ಪೊಲೀಸರ "ದುರುದ್ದೇಶಪೂರಿತ ಮೊಕದ್ದಮೆ"ಗಾಗಿ ನಿವೃತ್ತ ಸೇನಾ ಅಧಿಕಾರಿಯೊಬ್ಬರಿಗೆ ಕೇರಳ ನ್ಯಾಯಾಲಯವು 5 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದೆ.  ಪ್ರಿನ್ಸಿಪಲ್ ಮುನ್ಸಿಫ್ ರಾಗಿ ಎಸ್. ಅವರು, 54 ವರ್ಷದ ನಿವೃತ್ತ ನಾಯಕ್ ಸುಬೇದಾರ್...

ಮಧ್ಯಪ್ರದೇಶ: ಇಂದೋರ್‌ನಲ್ಲಿ ಒಳಚರಂಡಿಗೆ ಇಳಿದು ಇಬ್ಬರು ಪೌರ ಕಾರ್ಮಿಕರು ಸಾವು: ವಿಷಕಾರಿ ಅನಿಲ ಶಂಕೆ

ಇಂದೋರ್‌ನ ಚೋಯಿತ್ರಮ್ ಆಸ್ಪತ್ರೆ ಬಳಿ ಸೋಮವಾರ ಒಳಚರಂಡಿ ಒಳಗೆ ಇಳಿದ ಕಾರಣ ಕರಣ್ ಮತ್ತು ಅಜಯ್ ಎಂದು ಗುರುತಿಸಲಾದ ಇಂದೋರ್ ಮಹಾನಗರ ಪಾಲಿಕೆಯ ಇಬ್ಬರು ಪೌರ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.  ವಲಯ 13ರ...

‘ಅತೃಪ್ತ ಆತ್ಮಗಳ ಹತಾಶ ಹೇಳಿಕೆ’ : ವಿಪಕ್ಷ ನಾಯಕರ ಫೋನ್ ಕದ್ದಾಲಿಕೆ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಪೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಮತ್ತು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಯವರ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ....