Homeಕರ್ನಾಟಕದೇವನಹಳ್ಳಿ ಚಲೋ! ಸಂತ್ರಸ್ತ ರೈತರಿಂದ ಸರ್ಕಾರಕ್ಕೆ ಫೈನಲ್‌ ನೋಟೀಸ್‌

ದೇವನಹಳ್ಳಿ ಚಲೋ! ಸಂತ್ರಸ್ತ ರೈತರಿಂದ ಸರ್ಕಾರಕ್ಕೆ ಫೈನಲ್‌ ನೋಟೀಸ್‌

- Advertisement -
- Advertisement -

ದೇವನಹಳ್ಳಿ: ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ. ಇಲ್ಲವೇ, ಕುಟುಂಬ ಸಮೇತ ನಮ್ಮನ್ನು ಜೈಲಿಗೆ ಹಾಕಿ ಎಂಬ ಶಿರೋನಾಮೆಯೊಂದಿಗೆ ಚನ್ನರಾಯಪಟ್ಟಣದ ಸಂತ್ರಸ್ತ ರೈತರೇ ಸರಕಾರಕ್ಕೆ ಫೈನಲ್ ನೋಟಿಸ್ ನೀಡಿದ್ದಾರೆ.

ಇಂದು ದೇವನಹಳ್ಳಿಯಲ್ಲಿ ನಡೆಯುತ್ತಿರುವ ದೇವನಹಳ್ಳಿ ಚಲೋ ಕಾರ್ಯಕ್ರಮದಲ್ಲಿ ಸಂತ್ರಸ್ತ ರೈತರು ಮುಖ್ಯಮಂತ್ರಿಗಳ ಮೂಲಕ ಸರಕಾರಕ್ಕೆ ತಮ್ಮ ಫೈನಲ್ ನೋಟಿಸ್ ನೀಡಿದ್ದಾರೆ.

ಕಳೆದ 1178 ದಿನಗಳಿಂದ ನಾವು ಅವಡುಗಚ್ಚಿ ಹೋರಾಟ ನಡೆಸಿದ್ದೇವೆ. ಶುದ್ಧ ಮನಸ್ಸಿನಿಂದ ಈ ಹೋರಾಟ ನಡೆಸಿದ್ದೇವೆ. ಎಲ್ಲಾ ಜಾತಿಯ ಜನ ಅಣ್ಣ ತಮ್ಮಂದಿರಂತೆ, ಅಕ್ಕತಂಗಿಯರಂತೆ ಜೊತೆಗೂಡಿ ಹೋರಾಡಿದ್ದೇವೆ. ಅಧಿಕಾರಸ್ಥರ ಮನೆಮನೆಗೆ ಅಲೆದಿದ್ದೇವೆ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಕಾಯುವಿಕೆಗೂ ಒಂದು ಕೊನೆ ಇದೆ. ಈ ಹಗ್ಗಜಗ್ಗಾಟ ಸಾಕು. ಒಂದು ಅಂತಿಮ ಇತ್ಯಾರ್ಥ ಆಗಬೇಕು. ನೀವೇ ಈ ತೀರ್ಮಾನ ತೆಗೆದುಕೊಳ್ಳಬೇಕು. ಒಂದೋ ನಮ್ಮನ್ನು ʼನಮ್ಮ ಪಾಡಿಗೆ ಬದುಕಲು ಬಿಡಬೇಕುʼ ಅಥವಾ ಕುಟುಂಬ ಸಮೇತ ನಮ್ಮನ್ನು ಶಾಶ್ವತವಾಗಿ ಜೈಲಿಗೆ ಕಳಿಸಿ ʼಕಂಪನಿಗಳೇ ನಮಗೆ ಮುಖ್ಯʼ ಎಂದು ನೀವು ಘೋಷಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಇಂದು ಮತ್ತೊಮ್ಮೆ ಕೆಲವು ಕಹಿ ಸತ್ಯಗಳನ್ನು ನಿಮಗೆ ನೆನಪಿಸಲು ಬಯಸುತ್ತೇವೆ. 2022ರ ಜನವರಿಯಲ್ಲಿ ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ನಮ್ಮನ್ನು ಒಕ್ಕಲೆಬ್ಬಿಸಿ, ಚನ್ನರಾಯಪಟ್ಟಣದ 13 ಹಳ್ಳಿಗಳಿಗೆ ಸೇರಿದ, 1777 ಎಕರೆ ಭೂಮಿಯನ್ನು ಕಂಪನಿಗಳಿಗೆ ಮಾರುವ ತೀರ್ಮಾನ ಮಾಡಿ ಅಧಿಸೂಚನೆ ನೀಡಿತ್ತು. ಈ ಭೂಮಿಯಲ್ಲಿ 800 ಕುಟುಂಬದ ಜನ ವಾಸಿಸುತ್ತಿದ್ದೇವೆ. ಬಹುತೇಕರು ಕೃಷಿಯನ್ನೇ ನಂಬಿ ಬದುಕಿದ್ದೇವೆ. ನಮ್ಮ ಪೂರ್ವಿಕರ ಸಮಾಧಿಗಳು ಈ ಭೂಮಿಗಳಲ್ಲಿವೆ. ನಮ್ಮೆಲ್ಲಾ ಜೀವಮಾನದ ದುಡಿಮೆಯನ್ನು ಇದಕ್ಕೆ ಸುರಿದು ನೀರಾವರಿ ಮಾಡಿಕೊಂಡಿದ್ದೇವೆ. ತೋಟಗಳನ್ನು ಬೆಳೆಸಿದ್ದೇವೆ. ಹೈನುಗಾರಿಕೆ, ಕೋಳಿಸಾಗಣಿಗೆ ಮುಂತಾದ ಕೃಷಿ ಸಂಬಂಧಿ ಚಟುವಟಿಕೆಗಳನ್ನು ಮಾಡಿಕೊಂಡು ಕಷ್ಟವೋ ನಷ್ಟವೋ ನಮ್ಮ ಕುಟುಂಬಗಳ ಜೊತೆ, ಬಂಧುಬಳಗದ ಜೊತೆ ಬದುಕುತ್ತಿದ್ದೇವೆ. ಈ ಬದುಕನ್ನು ಕಳೆದುಕೊಳ್ಳಲು ನಾವು ಸಿದ್ಧರಿಲ್ಲ. ಏಕೆಂದರೆ ನಮ್ಮ ಸುತ್ತಮುತ್ತವೇ ಈಗಾಗಲೇ 6,000 ಎಕರೆ ಭೂಮಿಯನ್ನು ಏರ್‌ ಪೋರ್ಟ್‌ ಮತ್ತು ಕಂಪನಿಗಳಿಗಾಗಿ ವಶಪಡಿಸಿಕೊಳ್ಳಲಾಗಿದೆ. ಭೂಮಿ ಕಳೆದುಕೊಂಡವರ ಕತೆ ಏನಾಗಿದೆ ಎಂಬುದನ್ನು ಕಣ್ಣಾರೆ ಕಂಡಿದ್ದೇವೆ. ಅನಾಥರಂತೆ ಚೆಲ್ಲಾಪಿಲ್ಲಿಯಾಗಿ ಪಡಬಾರದ ಕಷ್ಟಪಡುತ್ತಾ ಅವರು ಅಲೆಯುತ್ತಿದ್ದಾರೆ. ಈ ಪರಿಸ್ಥಿತಿಯನ್ನು ನಮ್ಮ ಕುಟುಂಬಗಳಿಗೂ ತಂದುಕೊಳ್ಳಲು ನಾವು ಸಿದ್ಧರಿಲ್ಲ, ನಮ್ಮ ಮಕ್ಕಳ ಭವಿಷ್ಯವನ್ನು ಬಲಿಕೊಡಲು ನಾವು ಸಿದ್ಧರಿಲ್ಲ. ಹಾಗಾಗಿಯೇ ನಾವು ನಮ್ಮ ಬದುಕನ್ನು ಕಾಪಾಡಿಕೊಳ್ಳಲು ಉಸಿರು ಹಿಡಿದು ಹೋರಾಡುತ್ತಾ ಬಂದಿದ್ದೇವೆ ಎಂದು ಫೈನಲ್ ನೋಟಿಸ್ ನಲ್ಲಿ ಸರಕಾರಕ್ಕೆ ಸಂತ್ರಸ್ತ ರೈತರು ತಿಳಿಸಿದ್ದಾರೆ.

ನಾವು ಭೂಮಿಯನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದಾಗ ಭೂಸ್ವಾಧೀನ ಪ್ರಕ್ರಿಯೆಯ ಕಟ್ಟಳೆಯಾಗಿ ಜನಾಭಿಪ್ರಾಯ ಸಂಗ್ರಹಿಸಲೇಬೇಕಿತ್ತು. 2022ರ ಮೇ ತಿಂಗಳಿನಲ್ಲಿ ಜನಾಭಿಪ್ರಾಯ ಸಂಗ್ರಹಣೆ ನಡೆಯಿತು. KIADB ಅಧಿಕಾರಿಗಳೇ ಚನ್ನರಾಯಪಟ್ಟಣದಲ್ಲಿ ಟೇಬಲ್‌ ಹಾಕಿಕೊಂಡು ಜನಾಭಿಪ್ರಾಯ ಸಂಗ್ರಹಿಸಿದರು. ಶೇ 80 ಭಾಗದಷ್ಟು ಜನ ಭೂಮಿ ಕೊಡುವುದಿಲ್ಲ ಎಂದು ಬರೆದುಕೊಟ್ಟೆವು. ಇದರ ಅರ್ಥ ಇನ್ನು ಶೇ 20 ಭಾಗದಷ್ಟು ಜನ ಭೂಮಿ ಕೊಡಲು ಒಪ್ಪಿದರು ಎಂದೂ ಅಲ್ಲ. ಅವರು ಭೂಮಿ ಇಲ್ಲಿದ್ದರೂ ದೂರದೂರದಲ್ಲಿ ಬದುಕುತ್ತಿರುವವರು ಅವರು ತಮ್ಮ ಅಭಿಪ್ರಾಯ ನೀಡಲು ಬರಲೇ ಇಲ್ಲ ಅಷ್ಟೆ. ಕೇವಲ ಬೆರಳೆಣಿಕೆಯ ಜನ ಮಾತ್ರ ಬೇರೊಂದು ಒತ್ತಡಗಳ ಕಾರಣಕ್ಕಾಗಿ ಭೂಮಿ ಕೊಡುತ್ತೇವೆ ಎಂದು ಬರೆದುಕೊಟ್ಟಿದ್ದರು. ಇಂದು ನೀವು ಮತ್ತೆ ಜನಾಭಿಪ್ರಾಯ ಸಂಗ್ರಹಿಸಿದರೆ ಶೇ 95 ಭಾಗದಷ್ಟು ಜನ ಇದನ್ನು ತಿರಸ್ಕರಿಸುವುದು ಶತಸಿದ್ಧ. ಇದು ನಮ್ಮ 13 ಹಳ್ಳಿಗಳ ಒಕ್ಕೊರಲ ತೀರ್ಮಾನ ಎಂಬುದನ್ನು ನೀವು ಮನಸ್ಸಿಗೆ ಇಳಿಸಿಕೊಳ್ಳಬೇಕು. ಇದು ನಿಮ್ಮ ಪಕ್ಷದ ನೇತೃತ್ವದಲ್ಲಿ 2013ರಲ್ಲಿ ತರಲಾದ “ಭೂಸ್ವಾಧೀನ ಹಾಗೂ ಪುನರ್ವಸತಿ ನೀತಿ”ಯ ಸಂಪೂರ್ಣ ಉಲ್ಲಂಘನೆ ಎಂಬುದನ್ನು ನಾವು ನಿಮಗೆ ಹೇಳಬೇಕಿಲ್ಲ ಎಂದು ನೋಟಿಸ್ ನಲ್ಲಿ ರೈತರು ಉಲ್ಲೇಖಿಸಿದ್ದಾರೆ.

ಬಿಜೆಪಿ ಸರ್ಕಾರ ಭೂಸ್ವಾಧೀನದ ಅಧಿಸೂಚನೆ ಹೊರಡಿಸಿದಾಗ ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್‌ ಪಕ್ಷ ವಿರೋದಿಸಿತ್ತು. ಸದನದಲ್ಲೇ ಪ್ರಶ್ನೆ ಕೇಳಿತ್ತು. ಎಲ್ಲದಕ್ಕಿಂತ ಹೆಚ್ಚು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಖುದ್ದು 2022ರ ಸೆಪ್ಟೆಂಬರ್‌ ತಿಂಗಳಿನಲ್ಲಿ ನಮ್ಮ ಹೋರಾಟದ ಪೆಂಡಾಲಿಗೆ ಭೇಟಿ ನೀಡಿದ್ದರು. “ಸರ್ಕಾರ ಈ ರೀತಿ ಮಾಡುವುದು ಸರಿಯಲ್ಲ, ನಾನು ಮತ್ತೆ ಅಧಿಕಾರಕ್ಕೆ ಬಂದರೆ ಇದನ್ನು ರದ್ದುಪಡಿಸುತ್ತೇನೆ” ಎಂದು ಸಿದ್ದರಾಮಯ್ಯನವರೇ ನಮಗೆ ಮಾತುಕೊಟ್ಟಿದ್ದಾರೆ ಎಂದು ಈ ನೋಟಿಸ್ ನಲ್ಲಿ ನೆನಪಿಸಿದ್ದಾರೆ.

ಈ ಎಲ್ಲಾ ಕಾರಣಕ್ಕೆ 2023ರಲ್ಲಿ ನಡೆದ ಚುನಾವಣೆಯಲ್ಲಿ ನಮ್ಮಲ್ಲಿನ ಬಹುತೇಕರು ಕಾಂಗ್ರೆಸ್‌ ಪಕ್ಷವನ್ನೇ ಬೆಂಬಲಿಸಿ ಮತ ಹಾಕಿದರು. ಈ ಬಲವಂತದ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸುತ್ತಿದ್ದ ಕೆ.ಹೆಚ್.‌ ಮುನಿಯಪ್ಪನವರನ್ನು ಗೆಲ್ಲಿಸುವುದರಲ್ಲಿ ನಮ್ಮ ಹಳ್ಳಿಗಳ ಪಾತ್ರವೂ ಮುಖ್ಯವಾಗಿತ್ತು. ಗೆದ್ದನಂತರ ಅವರು ನಮ್ಮನ್ನು ಹಲವು ಬಾರಿ ಎಂ.ಬಿ. ಪಾಟೀಲರ ಬಳಿ, ತಮ್ಮ ಬಳಿ ಕರೆದುಕೊಂಡು ಬಂದರು. ನೀವು ನೋಡೋಣ, ಪರಿಶೀಲಸೋಣ, ಸಭೆ ಕರೆಯೋಣ ಎಂದು ಉತ್ತರ ಕೊಟ್ಟಿರಿ ಗಟ್ಟಿ ತೀರ್ಮಾನ ತೆಗೆದುಕೊಳ್ಳಲಿಲ್ಲ. ಎಂ.ಬಿ. ಪಾಟೀಲರು ಅಂದಿನಿಂದ ಇಂದಿನ ತನಕ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲು ಸಾಧ್ಯವೇ ಇಲ್ಲ ಎಂದು ಪಟ್ಟುಹಿಡಿಯುತ್ತಾ ಬಂದಿದ್ದಾರೆ. ಕ್ರಮೇಣ ಕೆ.ಹೆಚ್.‌ ಮುನಿಯಪ್ಪನವರೂ ಅವರ ಜೊತೆ ದನಿಗೂಡಿಸಲು ಶುರು ಮಾಡಿದ್ದಾರೆ ಎಂದು ಈ ನೋಟಿಸ್ ಹೇಳಿದೆ.

ಈಗ ನಿನ್ನೆ ಇಬ್ಬರೂ ಸೇರಿ (ಮುನಿಯಪ್ಪ ಮತ್ತು ಎಂ.ಬಿ.ಪಾಟೀಲ್) ಪತ್ರಿಕಾಗೋಷ್ಟಿ ಮಾಡಿದ್ದಾರೆ. ರಿಯಲ್‌ ಎಸ್ಟೇಟ್‌ ಏಜೆಂಟರುಗಳಂತೆ ಮಾತನಾಡಿದ್ದಾರೆ. ʼಮೂರು ಹಳ್ಳಿಗಳನ್ನು ಕೈಬಿಡುವ, ಕಮರ್ಷಿಯಲ್‌ ಚಟುವಟಿಕೆಗೆ ಒಂದಿಷ್ಟು ಜಾಗ ನೀಡುವʼ ಮಾತನಾಡಿದ್ದಾರೆ. ಇದನ್ನು ನಾವು ತೀವ್ರವಾಗಿ ಒಕ್ಕೊರಲಿನ ಜೊತೆ ಖಂಡಿಸುತ್ತಿದ್ದೇವೆ. ಇದು ನಮ್ಮನ್ನು ಒಡೆದಾಳುವ ಕುತಂತ್ರ ಎಂಬುದನ್ನು ಅರ್ಥಮಾಡಿಕೊಳ್ಳಲಾರದಷ್ಟು ಮೂರ್ಖರು ನಾವಲ್ಲ. ಒಂದಿಷ್ಟು ಹಣದ ಆಸೆಗೆ ಭೂಮಿಯನ್ನು ಬರಡುಗೊಳಿಸಲು ಅವಕಾಶ ನೀಡುವಷ್ಟು ಸ್ವಾರ್ಥಿಗಳೂ ನಾವಲ್ಲ. ನಾವು ಈ ಚೌಕಾಸಿ ಡೀಲ್‌ ಅನ್ನು ಒಪ್ಪುವ ಮಾತೇ ಇಲ್ಲ ಎಂದು ಈ ನೋಟಿಸ್ ನಲ್ಲಿ ತಿಳಿಸಲಾಗಿದೆ.

ಮುಖ್ಯಮಂತ್ರಿಗಳೇ, ಈಗ ಕೊನೆಯದಾಗಿ ನಿಮ್ಮ ಬಾಗಿಲನ್ನು ಬಲವಾಗಿ ತಟ್ಟಲು ತೀರ್ಮಾನಿಸಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದ ಸಮಸ್ತ ಸಂಘಟನೆಗಳು ನಮ್ಮ ಬೆನ್ನಿಗೆ ನಿಂತು ಮರು ಉತ್ಸಾಹ ಮೂಡಿಸಿವೆ. ಸಾಹಿತಿ – ಚಿಂತಕರು, ಕಲಾವಿದರು, ಧರ್ಮಗುರುಗಳು, ಜನಸಾಮಾನ್ಯರು ನಮ್ಮ ಪರವಾಗಿ ದನಿ ಎತ್ತಿದ್ದಾರೆ. ಇಂದು ನಮ್ಮನ್ನು ಬೆಂಬಲಿಸಿ ರಾಜ್ಯದ ಮೂಲೆಮೂಲೆಗಳಿಂದ ಬಂದಿರುವ ಬಂಧುಗಳ ಕರುಳ ಮಿಡಿತಕ್ಕೆ ನಾವು ಋಣಿಗಳಾಗಿದ್ದೇವೆ. ಇವರೆಲ್ಲರ ಸಮ್ಮುಖದಲ್ಲಿ ನಾವು ನಮ್ಮ ಕೊನೆ ತೀರ್ಮಾನವನ್ನು ಘೋಷಿಸುತ್ತಿದ್ದೇವೆ. ಒಂದೇ ಮಾತಿನಲ್ಲಿ “ಸರ್ಕಾರ ಈ ಅಧಿಸೂಚನೆಯನ್ನು ರದ್ದುಗೊಳಿಸುತ್ತಿದೆ ಎಂದು ಘೋಷಿಸಿ ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ. ಅಥವಾ ನಮ್ಮೆಲ್ಲರನ್ನು ಜೈಲಿಗೆ ಹಾಕಿ ನಿಮಗೆ ಏನು ಮಾಡಬೇಕೆನಿಸುತ್ತೋ ಅದನ್ನು ಮಾಡಿ”. ಆದರೆ ನೀವೀ ಕೆಲಸವನ್ನು ನಮ್ಮನ್ನು ಸೆರೆಗೆ ಹಾಕಿಯೇ ಮಾಡಬೇಕು ಎಂದು ಈ ನೋಟಿಸ್ ನಲ್ಲಿ ಒತ್ತಾಯಿಸಿದ್ದಾರೆ.

ಸರ್ಕಾರ ಜಾಗ ಖಾಲಿ ಮಾಡಲು ನಮಗೆ ಅಂತಿಮ ಅಧಿಸೂಚನೆ ಕಳಿಸಿಯಾಗಿದೆ. ಇಂದು ನಾವು ಈ ಪತ್ರದ ಮೂಲಕ ಸರ್ಕಾರಕ್ಕೆ ಅಂತಿಮ ನೋಟೀಸ್‌ ನೀಡುತ್ತಿದ್ದೇವೆ. ಇಲ್ಲಿಂದ 24 ಗಂಟೆಗಳ ಕಾಲ ನಾವು ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತೇವೆ. ಸ್ಪಷ್ಟ ಉತ್ತರ ಬರದಿದ್ದಲ್ಲಿ ನಾಳೆ ಇದೇ ಹೊತ್ತಿಗೆ ತೀವ್ರ ಹೋರಾಟಕ್ಕೆ ಇಳಿಯುತ್ತೇವೆ. ಅಪರಾಧವೇ ಅಧಿಕಾರವಾದಾಗ ಗಾಂಧೀಜಿಯವರೂ ತೀಕ್ಷ್ಣ ಹೆಜ್ಜೆಗಳನ್ನು ಇಟ್ಟಿದ್ದಾರೆ, ನಾವೂ ಸಹ ಅವರ ಹಾದಿಯಲ್ಲೇ ಸಾಗುತ್ತೇವೆ. ಸರ್ಕಾರದ ಪ್ರಾತಿನಿಧಿಕ ತಾಣವಾದ ತಾಲ್ಲೂಕು ಕಛೇರಿಯನ್ನು ಮುತ್ತಿಗೆ ಹಾಕುತ್ತೇವೆ. ನಿಮಗೊಂದು ನೆಪ ಸಿಗುತ್ತದೆ. ನಮ್ಮನ್ನು ಜೈಲಿಗೆ ಹಾಕಬಹುದು. ಕಂಪನಿಗಳ ದಾರಿಯನ್ನು ಸುಗಮಗೊಳಿಸಬಹುದು. ತೀರ್ಮಾನ ತಮ್ಮದು. ನಮಸ್ಕಾರ ಎಂದು ಸಂತ್ರಸ್ತ 13 ಹಳ್ಳಿಗಳ ರೈತರು ಈ ನೋಟಿಸ್ ಅನ್ನು ಸರಕಾರಕ್ಕೆ ನೀಡಿದ್ದಾರೆ.

ಸಂಜೆ 5 ಗಂಟೆಯೊಳಗೆ ಸರ್ಕಾರ ರೈತಪರ ನಿರ್ಣಯ ತೆಗೆದುಕೊಳ್ಳದಿದ್ದರೆ ಹೋರಾಟದ ಸ್ವರೂಪ ಬದಲಾಗಲಿದೆ: ಬಡಗಲಪುರ ನಾಗೇಂದ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...

ಬಿಹಾರ-ಬಂಗಾಳದ ಬಳಿಕ ಕರ್ನಾಟಕದ ಸರತಿ; ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

ಭಾಗ-1 ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡಿದ ಹಿಂದಿನ ದುರುದ್ದೇಶ ಬಿಹಾರದ ಬಳಿಕ ಈಗ ಪಶ್ಚಿಮ ಬಂಗಾಳದಲ್ಲಿ ಸಾಬೀತಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ...

ವಿಜಯ್ ಪಕ್ಷದ ಗೆಲುವಿಗೆ ಕಾರಣವಾದ ಡಿಎಂಕೆ-ಎಐಎಡಿಎಂಕೆ ಪಕ್ಷದ ವಲಸೆ ನಾಯಕರು

50 ವರ್ಷಗಳಿಂದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಎಂಬ ಎರಡು ದ್ರಾವಿಡ ಪಕ್ಷಗಳ ಅಧಿಪತ್ಯದಲ್ಲಿದ್ದ ತಮಿಳು ಮಣ್ಣಿನಲ್ಲಿ ಈಗ ಮಹತ್ವದ ಬದಲಾವಣೆ ಗಾಳಿ ಬೀಸಿದೆ. ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ...

ಪಶ್ಚಿಮ ಬಂಗಾಳದ ಬಿಜೆಪಿ ಗೆಲುವು ಎಸ್‌ಐಆರ್‌ ಕುತಂತ್ರದ ಫಲ?

ಕಳೆದ 15 ವರ್ಷದಿಂದ ಪಶ್ಚಿಮ ಬಂಗಾಳದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮಮತಾ ಬ್ಯಾನರ್ಜಿ ಆಡಳಿತಕ್ಕೆ 2026ರ ಚುನಾವಣಾ ಫಲಿತಾಂಶ ಬ್ರೇಕ್ ನೀಡಿದೆ.  ಪಶ್ಚಿಮ ಬಂಗಾಳದ ಒಟ್ಟು 293 ಕ್ಷೇತ್ರಗಳ ಪೈಕಿ 200ರಲ್ಲಿ ಬಿಜಿಪಿ...

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...