Homeಕರ್ನಾಟಕದೇವನಹಳ್ಳಿ ಚಲೋ! ಸಂತ್ರಸ್ತ ರೈತರಿಂದ ಸರ್ಕಾರಕ್ಕೆ ಫೈನಲ್‌ ನೋಟೀಸ್‌

ದೇವನಹಳ್ಳಿ ಚಲೋ! ಸಂತ್ರಸ್ತ ರೈತರಿಂದ ಸರ್ಕಾರಕ್ಕೆ ಫೈನಲ್‌ ನೋಟೀಸ್‌

- Advertisement -
- Advertisement -

ದೇವನಹಳ್ಳಿ: ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ. ಇಲ್ಲವೇ, ಕುಟುಂಬ ಸಮೇತ ನಮ್ಮನ್ನು ಜೈಲಿಗೆ ಹಾಕಿ ಎಂಬ ಶಿರೋನಾಮೆಯೊಂದಿಗೆ ಚನ್ನರಾಯಪಟ್ಟಣದ ಸಂತ್ರಸ್ತ ರೈತರೇ ಸರಕಾರಕ್ಕೆ ಫೈನಲ್ ನೋಟಿಸ್ ನೀಡಿದ್ದಾರೆ.

ಇಂದು ದೇವನಹಳ್ಳಿಯಲ್ಲಿ ನಡೆಯುತ್ತಿರುವ ದೇವನಹಳ್ಳಿ ಚಲೋ ಕಾರ್ಯಕ್ರಮದಲ್ಲಿ ಸಂತ್ರಸ್ತ ರೈತರು ಮುಖ್ಯಮಂತ್ರಿಗಳ ಮೂಲಕ ಸರಕಾರಕ್ಕೆ ತಮ್ಮ ಫೈನಲ್ ನೋಟಿಸ್ ನೀಡಿದ್ದಾರೆ.

ಕಳೆದ 1178 ದಿನಗಳಿಂದ ನಾವು ಅವಡುಗಚ್ಚಿ ಹೋರಾಟ ನಡೆಸಿದ್ದೇವೆ. ಶುದ್ಧ ಮನಸ್ಸಿನಿಂದ ಈ ಹೋರಾಟ ನಡೆಸಿದ್ದೇವೆ. ಎಲ್ಲಾ ಜಾತಿಯ ಜನ ಅಣ್ಣ ತಮ್ಮಂದಿರಂತೆ, ಅಕ್ಕತಂಗಿಯರಂತೆ ಜೊತೆಗೂಡಿ ಹೋರಾಡಿದ್ದೇವೆ. ಅಧಿಕಾರಸ್ಥರ ಮನೆಮನೆಗೆ ಅಲೆದಿದ್ದೇವೆ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಕಾಯುವಿಕೆಗೂ ಒಂದು ಕೊನೆ ಇದೆ. ಈ ಹಗ್ಗಜಗ್ಗಾಟ ಸಾಕು. ಒಂದು ಅಂತಿಮ ಇತ್ಯಾರ್ಥ ಆಗಬೇಕು. ನೀವೇ ಈ ತೀರ್ಮಾನ ತೆಗೆದುಕೊಳ್ಳಬೇಕು. ಒಂದೋ ನಮ್ಮನ್ನು ʼನಮ್ಮ ಪಾಡಿಗೆ ಬದುಕಲು ಬಿಡಬೇಕುʼ ಅಥವಾ ಕುಟುಂಬ ಸಮೇತ ನಮ್ಮನ್ನು ಶಾಶ್ವತವಾಗಿ ಜೈಲಿಗೆ ಕಳಿಸಿ ʼಕಂಪನಿಗಳೇ ನಮಗೆ ಮುಖ್ಯʼ ಎಂದು ನೀವು ಘೋಷಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಇಂದು ಮತ್ತೊಮ್ಮೆ ಕೆಲವು ಕಹಿ ಸತ್ಯಗಳನ್ನು ನಿಮಗೆ ನೆನಪಿಸಲು ಬಯಸುತ್ತೇವೆ. 2022ರ ಜನವರಿಯಲ್ಲಿ ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ನಮ್ಮನ್ನು ಒಕ್ಕಲೆಬ್ಬಿಸಿ, ಚನ್ನರಾಯಪಟ್ಟಣದ 13 ಹಳ್ಳಿಗಳಿಗೆ ಸೇರಿದ, 1777 ಎಕರೆ ಭೂಮಿಯನ್ನು ಕಂಪನಿಗಳಿಗೆ ಮಾರುವ ತೀರ್ಮಾನ ಮಾಡಿ ಅಧಿಸೂಚನೆ ನೀಡಿತ್ತು. ಈ ಭೂಮಿಯಲ್ಲಿ 800 ಕುಟುಂಬದ ಜನ ವಾಸಿಸುತ್ತಿದ್ದೇವೆ. ಬಹುತೇಕರು ಕೃಷಿಯನ್ನೇ ನಂಬಿ ಬದುಕಿದ್ದೇವೆ. ನಮ್ಮ ಪೂರ್ವಿಕರ ಸಮಾಧಿಗಳು ಈ ಭೂಮಿಗಳಲ್ಲಿವೆ. ನಮ್ಮೆಲ್ಲಾ ಜೀವಮಾನದ ದುಡಿಮೆಯನ್ನು ಇದಕ್ಕೆ ಸುರಿದು ನೀರಾವರಿ ಮಾಡಿಕೊಂಡಿದ್ದೇವೆ. ತೋಟಗಳನ್ನು ಬೆಳೆಸಿದ್ದೇವೆ. ಹೈನುಗಾರಿಕೆ, ಕೋಳಿಸಾಗಣಿಗೆ ಮುಂತಾದ ಕೃಷಿ ಸಂಬಂಧಿ ಚಟುವಟಿಕೆಗಳನ್ನು ಮಾಡಿಕೊಂಡು ಕಷ್ಟವೋ ನಷ್ಟವೋ ನಮ್ಮ ಕುಟುಂಬಗಳ ಜೊತೆ, ಬಂಧುಬಳಗದ ಜೊತೆ ಬದುಕುತ್ತಿದ್ದೇವೆ. ಈ ಬದುಕನ್ನು ಕಳೆದುಕೊಳ್ಳಲು ನಾವು ಸಿದ್ಧರಿಲ್ಲ. ಏಕೆಂದರೆ ನಮ್ಮ ಸುತ್ತಮುತ್ತವೇ ಈಗಾಗಲೇ 6,000 ಎಕರೆ ಭೂಮಿಯನ್ನು ಏರ್‌ ಪೋರ್ಟ್‌ ಮತ್ತು ಕಂಪನಿಗಳಿಗಾಗಿ ವಶಪಡಿಸಿಕೊಳ್ಳಲಾಗಿದೆ. ಭೂಮಿ ಕಳೆದುಕೊಂಡವರ ಕತೆ ಏನಾಗಿದೆ ಎಂಬುದನ್ನು ಕಣ್ಣಾರೆ ಕಂಡಿದ್ದೇವೆ. ಅನಾಥರಂತೆ ಚೆಲ್ಲಾಪಿಲ್ಲಿಯಾಗಿ ಪಡಬಾರದ ಕಷ್ಟಪಡುತ್ತಾ ಅವರು ಅಲೆಯುತ್ತಿದ್ದಾರೆ. ಈ ಪರಿಸ್ಥಿತಿಯನ್ನು ನಮ್ಮ ಕುಟುಂಬಗಳಿಗೂ ತಂದುಕೊಳ್ಳಲು ನಾವು ಸಿದ್ಧರಿಲ್ಲ, ನಮ್ಮ ಮಕ್ಕಳ ಭವಿಷ್ಯವನ್ನು ಬಲಿಕೊಡಲು ನಾವು ಸಿದ್ಧರಿಲ್ಲ. ಹಾಗಾಗಿಯೇ ನಾವು ನಮ್ಮ ಬದುಕನ್ನು ಕಾಪಾಡಿಕೊಳ್ಳಲು ಉಸಿರು ಹಿಡಿದು ಹೋರಾಡುತ್ತಾ ಬಂದಿದ್ದೇವೆ ಎಂದು ಫೈನಲ್ ನೋಟಿಸ್ ನಲ್ಲಿ ಸರಕಾರಕ್ಕೆ ಸಂತ್ರಸ್ತ ರೈತರು ತಿಳಿಸಿದ್ದಾರೆ.

ನಾವು ಭೂಮಿಯನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದಾಗ ಭೂಸ್ವಾಧೀನ ಪ್ರಕ್ರಿಯೆಯ ಕಟ್ಟಳೆಯಾಗಿ ಜನಾಭಿಪ್ರಾಯ ಸಂಗ್ರಹಿಸಲೇಬೇಕಿತ್ತು. 2022ರ ಮೇ ತಿಂಗಳಿನಲ್ಲಿ ಜನಾಭಿಪ್ರಾಯ ಸಂಗ್ರಹಣೆ ನಡೆಯಿತು. KIADB ಅಧಿಕಾರಿಗಳೇ ಚನ್ನರಾಯಪಟ್ಟಣದಲ್ಲಿ ಟೇಬಲ್‌ ಹಾಕಿಕೊಂಡು ಜನಾಭಿಪ್ರಾಯ ಸಂಗ್ರಹಿಸಿದರು. ಶೇ 80 ಭಾಗದಷ್ಟು ಜನ ಭೂಮಿ ಕೊಡುವುದಿಲ್ಲ ಎಂದು ಬರೆದುಕೊಟ್ಟೆವು. ಇದರ ಅರ್ಥ ಇನ್ನು ಶೇ 20 ಭಾಗದಷ್ಟು ಜನ ಭೂಮಿ ಕೊಡಲು ಒಪ್ಪಿದರು ಎಂದೂ ಅಲ್ಲ. ಅವರು ಭೂಮಿ ಇಲ್ಲಿದ್ದರೂ ದೂರದೂರದಲ್ಲಿ ಬದುಕುತ್ತಿರುವವರು ಅವರು ತಮ್ಮ ಅಭಿಪ್ರಾಯ ನೀಡಲು ಬರಲೇ ಇಲ್ಲ ಅಷ್ಟೆ. ಕೇವಲ ಬೆರಳೆಣಿಕೆಯ ಜನ ಮಾತ್ರ ಬೇರೊಂದು ಒತ್ತಡಗಳ ಕಾರಣಕ್ಕಾಗಿ ಭೂಮಿ ಕೊಡುತ್ತೇವೆ ಎಂದು ಬರೆದುಕೊಟ್ಟಿದ್ದರು. ಇಂದು ನೀವು ಮತ್ತೆ ಜನಾಭಿಪ್ರಾಯ ಸಂಗ್ರಹಿಸಿದರೆ ಶೇ 95 ಭಾಗದಷ್ಟು ಜನ ಇದನ್ನು ತಿರಸ್ಕರಿಸುವುದು ಶತಸಿದ್ಧ. ಇದು ನಮ್ಮ 13 ಹಳ್ಳಿಗಳ ಒಕ್ಕೊರಲ ತೀರ್ಮಾನ ಎಂಬುದನ್ನು ನೀವು ಮನಸ್ಸಿಗೆ ಇಳಿಸಿಕೊಳ್ಳಬೇಕು. ಇದು ನಿಮ್ಮ ಪಕ್ಷದ ನೇತೃತ್ವದಲ್ಲಿ 2013ರಲ್ಲಿ ತರಲಾದ “ಭೂಸ್ವಾಧೀನ ಹಾಗೂ ಪುನರ್ವಸತಿ ನೀತಿ”ಯ ಸಂಪೂರ್ಣ ಉಲ್ಲಂಘನೆ ಎಂಬುದನ್ನು ನಾವು ನಿಮಗೆ ಹೇಳಬೇಕಿಲ್ಲ ಎಂದು ನೋಟಿಸ್ ನಲ್ಲಿ ರೈತರು ಉಲ್ಲೇಖಿಸಿದ್ದಾರೆ.

ಬಿಜೆಪಿ ಸರ್ಕಾರ ಭೂಸ್ವಾಧೀನದ ಅಧಿಸೂಚನೆ ಹೊರಡಿಸಿದಾಗ ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್‌ ಪಕ್ಷ ವಿರೋದಿಸಿತ್ತು. ಸದನದಲ್ಲೇ ಪ್ರಶ್ನೆ ಕೇಳಿತ್ತು. ಎಲ್ಲದಕ್ಕಿಂತ ಹೆಚ್ಚು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಖುದ್ದು 2022ರ ಸೆಪ್ಟೆಂಬರ್‌ ತಿಂಗಳಿನಲ್ಲಿ ನಮ್ಮ ಹೋರಾಟದ ಪೆಂಡಾಲಿಗೆ ಭೇಟಿ ನೀಡಿದ್ದರು. “ಸರ್ಕಾರ ಈ ರೀತಿ ಮಾಡುವುದು ಸರಿಯಲ್ಲ, ನಾನು ಮತ್ತೆ ಅಧಿಕಾರಕ್ಕೆ ಬಂದರೆ ಇದನ್ನು ರದ್ದುಪಡಿಸುತ್ತೇನೆ” ಎಂದು ಸಿದ್ದರಾಮಯ್ಯನವರೇ ನಮಗೆ ಮಾತುಕೊಟ್ಟಿದ್ದಾರೆ ಎಂದು ಈ ನೋಟಿಸ್ ನಲ್ಲಿ ನೆನಪಿಸಿದ್ದಾರೆ.

ಈ ಎಲ್ಲಾ ಕಾರಣಕ್ಕೆ 2023ರಲ್ಲಿ ನಡೆದ ಚುನಾವಣೆಯಲ್ಲಿ ನಮ್ಮಲ್ಲಿನ ಬಹುತೇಕರು ಕಾಂಗ್ರೆಸ್‌ ಪಕ್ಷವನ್ನೇ ಬೆಂಬಲಿಸಿ ಮತ ಹಾಕಿದರು. ಈ ಬಲವಂತದ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸುತ್ತಿದ್ದ ಕೆ.ಹೆಚ್.‌ ಮುನಿಯಪ್ಪನವರನ್ನು ಗೆಲ್ಲಿಸುವುದರಲ್ಲಿ ನಮ್ಮ ಹಳ್ಳಿಗಳ ಪಾತ್ರವೂ ಮುಖ್ಯವಾಗಿತ್ತು. ಗೆದ್ದನಂತರ ಅವರು ನಮ್ಮನ್ನು ಹಲವು ಬಾರಿ ಎಂ.ಬಿ. ಪಾಟೀಲರ ಬಳಿ, ತಮ್ಮ ಬಳಿ ಕರೆದುಕೊಂಡು ಬಂದರು. ನೀವು ನೋಡೋಣ, ಪರಿಶೀಲಸೋಣ, ಸಭೆ ಕರೆಯೋಣ ಎಂದು ಉತ್ತರ ಕೊಟ್ಟಿರಿ ಗಟ್ಟಿ ತೀರ್ಮಾನ ತೆಗೆದುಕೊಳ್ಳಲಿಲ್ಲ. ಎಂ.ಬಿ. ಪಾಟೀಲರು ಅಂದಿನಿಂದ ಇಂದಿನ ತನಕ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲು ಸಾಧ್ಯವೇ ಇಲ್ಲ ಎಂದು ಪಟ್ಟುಹಿಡಿಯುತ್ತಾ ಬಂದಿದ್ದಾರೆ. ಕ್ರಮೇಣ ಕೆ.ಹೆಚ್.‌ ಮುನಿಯಪ್ಪನವರೂ ಅವರ ಜೊತೆ ದನಿಗೂಡಿಸಲು ಶುರು ಮಾಡಿದ್ದಾರೆ ಎಂದು ಈ ನೋಟಿಸ್ ಹೇಳಿದೆ.

ಈಗ ನಿನ್ನೆ ಇಬ್ಬರೂ ಸೇರಿ (ಮುನಿಯಪ್ಪ ಮತ್ತು ಎಂ.ಬಿ.ಪಾಟೀಲ್) ಪತ್ರಿಕಾಗೋಷ್ಟಿ ಮಾಡಿದ್ದಾರೆ. ರಿಯಲ್‌ ಎಸ್ಟೇಟ್‌ ಏಜೆಂಟರುಗಳಂತೆ ಮಾತನಾಡಿದ್ದಾರೆ. ʼಮೂರು ಹಳ್ಳಿಗಳನ್ನು ಕೈಬಿಡುವ, ಕಮರ್ಷಿಯಲ್‌ ಚಟುವಟಿಕೆಗೆ ಒಂದಿಷ್ಟು ಜಾಗ ನೀಡುವʼ ಮಾತನಾಡಿದ್ದಾರೆ. ಇದನ್ನು ನಾವು ತೀವ್ರವಾಗಿ ಒಕ್ಕೊರಲಿನ ಜೊತೆ ಖಂಡಿಸುತ್ತಿದ್ದೇವೆ. ಇದು ನಮ್ಮನ್ನು ಒಡೆದಾಳುವ ಕುತಂತ್ರ ಎಂಬುದನ್ನು ಅರ್ಥಮಾಡಿಕೊಳ್ಳಲಾರದಷ್ಟು ಮೂರ್ಖರು ನಾವಲ್ಲ. ಒಂದಿಷ್ಟು ಹಣದ ಆಸೆಗೆ ಭೂಮಿಯನ್ನು ಬರಡುಗೊಳಿಸಲು ಅವಕಾಶ ನೀಡುವಷ್ಟು ಸ್ವಾರ್ಥಿಗಳೂ ನಾವಲ್ಲ. ನಾವು ಈ ಚೌಕಾಸಿ ಡೀಲ್‌ ಅನ್ನು ಒಪ್ಪುವ ಮಾತೇ ಇಲ್ಲ ಎಂದು ಈ ನೋಟಿಸ್ ನಲ್ಲಿ ತಿಳಿಸಲಾಗಿದೆ.

ಮುಖ್ಯಮಂತ್ರಿಗಳೇ, ಈಗ ಕೊನೆಯದಾಗಿ ನಿಮ್ಮ ಬಾಗಿಲನ್ನು ಬಲವಾಗಿ ತಟ್ಟಲು ತೀರ್ಮಾನಿಸಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದ ಸಮಸ್ತ ಸಂಘಟನೆಗಳು ನಮ್ಮ ಬೆನ್ನಿಗೆ ನಿಂತು ಮರು ಉತ್ಸಾಹ ಮೂಡಿಸಿವೆ. ಸಾಹಿತಿ – ಚಿಂತಕರು, ಕಲಾವಿದರು, ಧರ್ಮಗುರುಗಳು, ಜನಸಾಮಾನ್ಯರು ನಮ್ಮ ಪರವಾಗಿ ದನಿ ಎತ್ತಿದ್ದಾರೆ. ಇಂದು ನಮ್ಮನ್ನು ಬೆಂಬಲಿಸಿ ರಾಜ್ಯದ ಮೂಲೆಮೂಲೆಗಳಿಂದ ಬಂದಿರುವ ಬಂಧುಗಳ ಕರುಳ ಮಿಡಿತಕ್ಕೆ ನಾವು ಋಣಿಗಳಾಗಿದ್ದೇವೆ. ಇವರೆಲ್ಲರ ಸಮ್ಮುಖದಲ್ಲಿ ನಾವು ನಮ್ಮ ಕೊನೆ ತೀರ್ಮಾನವನ್ನು ಘೋಷಿಸುತ್ತಿದ್ದೇವೆ. ಒಂದೇ ಮಾತಿನಲ್ಲಿ “ಸರ್ಕಾರ ಈ ಅಧಿಸೂಚನೆಯನ್ನು ರದ್ದುಗೊಳಿಸುತ್ತಿದೆ ಎಂದು ಘೋಷಿಸಿ ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ. ಅಥವಾ ನಮ್ಮೆಲ್ಲರನ್ನು ಜೈಲಿಗೆ ಹಾಕಿ ನಿಮಗೆ ಏನು ಮಾಡಬೇಕೆನಿಸುತ್ತೋ ಅದನ್ನು ಮಾಡಿ”. ಆದರೆ ನೀವೀ ಕೆಲಸವನ್ನು ನಮ್ಮನ್ನು ಸೆರೆಗೆ ಹಾಕಿಯೇ ಮಾಡಬೇಕು ಎಂದು ಈ ನೋಟಿಸ್ ನಲ್ಲಿ ಒತ್ತಾಯಿಸಿದ್ದಾರೆ.

ಸರ್ಕಾರ ಜಾಗ ಖಾಲಿ ಮಾಡಲು ನಮಗೆ ಅಂತಿಮ ಅಧಿಸೂಚನೆ ಕಳಿಸಿಯಾಗಿದೆ. ಇಂದು ನಾವು ಈ ಪತ್ರದ ಮೂಲಕ ಸರ್ಕಾರಕ್ಕೆ ಅಂತಿಮ ನೋಟೀಸ್‌ ನೀಡುತ್ತಿದ್ದೇವೆ. ಇಲ್ಲಿಂದ 24 ಗಂಟೆಗಳ ಕಾಲ ನಾವು ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತೇವೆ. ಸ್ಪಷ್ಟ ಉತ್ತರ ಬರದಿದ್ದಲ್ಲಿ ನಾಳೆ ಇದೇ ಹೊತ್ತಿಗೆ ತೀವ್ರ ಹೋರಾಟಕ್ಕೆ ಇಳಿಯುತ್ತೇವೆ. ಅಪರಾಧವೇ ಅಧಿಕಾರವಾದಾಗ ಗಾಂಧೀಜಿಯವರೂ ತೀಕ್ಷ್ಣ ಹೆಜ್ಜೆಗಳನ್ನು ಇಟ್ಟಿದ್ದಾರೆ, ನಾವೂ ಸಹ ಅವರ ಹಾದಿಯಲ್ಲೇ ಸಾಗುತ್ತೇವೆ. ಸರ್ಕಾರದ ಪ್ರಾತಿನಿಧಿಕ ತಾಣವಾದ ತಾಲ್ಲೂಕು ಕಛೇರಿಯನ್ನು ಮುತ್ತಿಗೆ ಹಾಕುತ್ತೇವೆ. ನಿಮಗೊಂದು ನೆಪ ಸಿಗುತ್ತದೆ. ನಮ್ಮನ್ನು ಜೈಲಿಗೆ ಹಾಕಬಹುದು. ಕಂಪನಿಗಳ ದಾರಿಯನ್ನು ಸುಗಮಗೊಳಿಸಬಹುದು. ತೀರ್ಮಾನ ತಮ್ಮದು. ನಮಸ್ಕಾರ ಎಂದು ಸಂತ್ರಸ್ತ 13 ಹಳ್ಳಿಗಳ ರೈತರು ಈ ನೋಟಿಸ್ ಅನ್ನು ಸರಕಾರಕ್ಕೆ ನೀಡಿದ್ದಾರೆ.

ಸಂಜೆ 5 ಗಂಟೆಯೊಳಗೆ ಸರ್ಕಾರ ರೈತಪರ ನಿರ್ಣಯ ತೆಗೆದುಕೊಳ್ಳದಿದ್ದರೆ ಹೋರಾಟದ ಸ್ವರೂಪ ಬದಲಾಗಲಿದೆ: ಬಡಗಲಪುರ ನಾಗೇಂದ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...