Homeಕರ್ನಾಟಕದೇವನಹಳ್ಳಿ ಚಲೋ! ಸಂತ್ರಸ್ತ ರೈತರಿಂದ ಸರ್ಕಾರಕ್ಕೆ ಫೈನಲ್‌ ನೋಟೀಸ್‌

ದೇವನಹಳ್ಳಿ ಚಲೋ! ಸಂತ್ರಸ್ತ ರೈತರಿಂದ ಸರ್ಕಾರಕ್ಕೆ ಫೈನಲ್‌ ನೋಟೀಸ್‌

- Advertisement -
- Advertisement -

ದೇವನಹಳ್ಳಿ: ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ. ಇಲ್ಲವೇ, ಕುಟುಂಬ ಸಮೇತ ನಮ್ಮನ್ನು ಜೈಲಿಗೆ ಹಾಕಿ ಎಂಬ ಶಿರೋನಾಮೆಯೊಂದಿಗೆ ಚನ್ನರಾಯಪಟ್ಟಣದ ಸಂತ್ರಸ್ತ ರೈತರೇ ಸರಕಾರಕ್ಕೆ ಫೈನಲ್ ನೋಟಿಸ್ ನೀಡಿದ್ದಾರೆ.

ಇಂದು ದೇವನಹಳ್ಳಿಯಲ್ಲಿ ನಡೆಯುತ್ತಿರುವ ದೇವನಹಳ್ಳಿ ಚಲೋ ಕಾರ್ಯಕ್ರಮದಲ್ಲಿ ಸಂತ್ರಸ್ತ ರೈತರು ಮುಖ್ಯಮಂತ್ರಿಗಳ ಮೂಲಕ ಸರಕಾರಕ್ಕೆ ತಮ್ಮ ಫೈನಲ್ ನೋಟಿಸ್ ನೀಡಿದ್ದಾರೆ.

ಕಳೆದ 1178 ದಿನಗಳಿಂದ ನಾವು ಅವಡುಗಚ್ಚಿ ಹೋರಾಟ ನಡೆಸಿದ್ದೇವೆ. ಶುದ್ಧ ಮನಸ್ಸಿನಿಂದ ಈ ಹೋರಾಟ ನಡೆಸಿದ್ದೇವೆ. ಎಲ್ಲಾ ಜಾತಿಯ ಜನ ಅಣ್ಣ ತಮ್ಮಂದಿರಂತೆ, ಅಕ್ಕತಂಗಿಯರಂತೆ ಜೊತೆಗೂಡಿ ಹೋರಾಡಿದ್ದೇವೆ. ಅಧಿಕಾರಸ್ಥರ ಮನೆಮನೆಗೆ ಅಲೆದಿದ್ದೇವೆ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಕಾಯುವಿಕೆಗೂ ಒಂದು ಕೊನೆ ಇದೆ. ಈ ಹಗ್ಗಜಗ್ಗಾಟ ಸಾಕು. ಒಂದು ಅಂತಿಮ ಇತ್ಯಾರ್ಥ ಆಗಬೇಕು. ನೀವೇ ಈ ತೀರ್ಮಾನ ತೆಗೆದುಕೊಳ್ಳಬೇಕು. ಒಂದೋ ನಮ್ಮನ್ನು ʼನಮ್ಮ ಪಾಡಿಗೆ ಬದುಕಲು ಬಿಡಬೇಕುʼ ಅಥವಾ ಕುಟುಂಬ ಸಮೇತ ನಮ್ಮನ್ನು ಶಾಶ್ವತವಾಗಿ ಜೈಲಿಗೆ ಕಳಿಸಿ ʼಕಂಪನಿಗಳೇ ನಮಗೆ ಮುಖ್ಯʼ ಎಂದು ನೀವು ಘೋಷಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಇಂದು ಮತ್ತೊಮ್ಮೆ ಕೆಲವು ಕಹಿ ಸತ್ಯಗಳನ್ನು ನಿಮಗೆ ನೆನಪಿಸಲು ಬಯಸುತ್ತೇವೆ. 2022ರ ಜನವರಿಯಲ್ಲಿ ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ನಮ್ಮನ್ನು ಒಕ್ಕಲೆಬ್ಬಿಸಿ, ಚನ್ನರಾಯಪಟ್ಟಣದ 13 ಹಳ್ಳಿಗಳಿಗೆ ಸೇರಿದ, 1777 ಎಕರೆ ಭೂಮಿಯನ್ನು ಕಂಪನಿಗಳಿಗೆ ಮಾರುವ ತೀರ್ಮಾನ ಮಾಡಿ ಅಧಿಸೂಚನೆ ನೀಡಿತ್ತು. ಈ ಭೂಮಿಯಲ್ಲಿ 800 ಕುಟುಂಬದ ಜನ ವಾಸಿಸುತ್ತಿದ್ದೇವೆ. ಬಹುತೇಕರು ಕೃಷಿಯನ್ನೇ ನಂಬಿ ಬದುಕಿದ್ದೇವೆ. ನಮ್ಮ ಪೂರ್ವಿಕರ ಸಮಾಧಿಗಳು ಈ ಭೂಮಿಗಳಲ್ಲಿವೆ. ನಮ್ಮೆಲ್ಲಾ ಜೀವಮಾನದ ದುಡಿಮೆಯನ್ನು ಇದಕ್ಕೆ ಸುರಿದು ನೀರಾವರಿ ಮಾಡಿಕೊಂಡಿದ್ದೇವೆ. ತೋಟಗಳನ್ನು ಬೆಳೆಸಿದ್ದೇವೆ. ಹೈನುಗಾರಿಕೆ, ಕೋಳಿಸಾಗಣಿಗೆ ಮುಂತಾದ ಕೃಷಿ ಸಂಬಂಧಿ ಚಟುವಟಿಕೆಗಳನ್ನು ಮಾಡಿಕೊಂಡು ಕಷ್ಟವೋ ನಷ್ಟವೋ ನಮ್ಮ ಕುಟುಂಬಗಳ ಜೊತೆ, ಬಂಧುಬಳಗದ ಜೊತೆ ಬದುಕುತ್ತಿದ್ದೇವೆ. ಈ ಬದುಕನ್ನು ಕಳೆದುಕೊಳ್ಳಲು ನಾವು ಸಿದ್ಧರಿಲ್ಲ. ಏಕೆಂದರೆ ನಮ್ಮ ಸುತ್ತಮುತ್ತವೇ ಈಗಾಗಲೇ 6,000 ಎಕರೆ ಭೂಮಿಯನ್ನು ಏರ್‌ ಪೋರ್ಟ್‌ ಮತ್ತು ಕಂಪನಿಗಳಿಗಾಗಿ ವಶಪಡಿಸಿಕೊಳ್ಳಲಾಗಿದೆ. ಭೂಮಿ ಕಳೆದುಕೊಂಡವರ ಕತೆ ಏನಾಗಿದೆ ಎಂಬುದನ್ನು ಕಣ್ಣಾರೆ ಕಂಡಿದ್ದೇವೆ. ಅನಾಥರಂತೆ ಚೆಲ್ಲಾಪಿಲ್ಲಿಯಾಗಿ ಪಡಬಾರದ ಕಷ್ಟಪಡುತ್ತಾ ಅವರು ಅಲೆಯುತ್ತಿದ್ದಾರೆ. ಈ ಪರಿಸ್ಥಿತಿಯನ್ನು ನಮ್ಮ ಕುಟುಂಬಗಳಿಗೂ ತಂದುಕೊಳ್ಳಲು ನಾವು ಸಿದ್ಧರಿಲ್ಲ, ನಮ್ಮ ಮಕ್ಕಳ ಭವಿಷ್ಯವನ್ನು ಬಲಿಕೊಡಲು ನಾವು ಸಿದ್ಧರಿಲ್ಲ. ಹಾಗಾಗಿಯೇ ನಾವು ನಮ್ಮ ಬದುಕನ್ನು ಕಾಪಾಡಿಕೊಳ್ಳಲು ಉಸಿರು ಹಿಡಿದು ಹೋರಾಡುತ್ತಾ ಬಂದಿದ್ದೇವೆ ಎಂದು ಫೈನಲ್ ನೋಟಿಸ್ ನಲ್ಲಿ ಸರಕಾರಕ್ಕೆ ಸಂತ್ರಸ್ತ ರೈತರು ತಿಳಿಸಿದ್ದಾರೆ.

ನಾವು ಭೂಮಿಯನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದಾಗ ಭೂಸ್ವಾಧೀನ ಪ್ರಕ್ರಿಯೆಯ ಕಟ್ಟಳೆಯಾಗಿ ಜನಾಭಿಪ್ರಾಯ ಸಂಗ್ರಹಿಸಲೇಬೇಕಿತ್ತು. 2022ರ ಮೇ ತಿಂಗಳಿನಲ್ಲಿ ಜನಾಭಿಪ್ರಾಯ ಸಂಗ್ರಹಣೆ ನಡೆಯಿತು. KIADB ಅಧಿಕಾರಿಗಳೇ ಚನ್ನರಾಯಪಟ್ಟಣದಲ್ಲಿ ಟೇಬಲ್‌ ಹಾಕಿಕೊಂಡು ಜನಾಭಿಪ್ರಾಯ ಸಂಗ್ರಹಿಸಿದರು. ಶೇ 80 ಭಾಗದಷ್ಟು ಜನ ಭೂಮಿ ಕೊಡುವುದಿಲ್ಲ ಎಂದು ಬರೆದುಕೊಟ್ಟೆವು. ಇದರ ಅರ್ಥ ಇನ್ನು ಶೇ 20 ಭಾಗದಷ್ಟು ಜನ ಭೂಮಿ ಕೊಡಲು ಒಪ್ಪಿದರು ಎಂದೂ ಅಲ್ಲ. ಅವರು ಭೂಮಿ ಇಲ್ಲಿದ್ದರೂ ದೂರದೂರದಲ್ಲಿ ಬದುಕುತ್ತಿರುವವರು ಅವರು ತಮ್ಮ ಅಭಿಪ್ರಾಯ ನೀಡಲು ಬರಲೇ ಇಲ್ಲ ಅಷ್ಟೆ. ಕೇವಲ ಬೆರಳೆಣಿಕೆಯ ಜನ ಮಾತ್ರ ಬೇರೊಂದು ಒತ್ತಡಗಳ ಕಾರಣಕ್ಕಾಗಿ ಭೂಮಿ ಕೊಡುತ್ತೇವೆ ಎಂದು ಬರೆದುಕೊಟ್ಟಿದ್ದರು. ಇಂದು ನೀವು ಮತ್ತೆ ಜನಾಭಿಪ್ರಾಯ ಸಂಗ್ರಹಿಸಿದರೆ ಶೇ 95 ಭಾಗದಷ್ಟು ಜನ ಇದನ್ನು ತಿರಸ್ಕರಿಸುವುದು ಶತಸಿದ್ಧ. ಇದು ನಮ್ಮ 13 ಹಳ್ಳಿಗಳ ಒಕ್ಕೊರಲ ತೀರ್ಮಾನ ಎಂಬುದನ್ನು ನೀವು ಮನಸ್ಸಿಗೆ ಇಳಿಸಿಕೊಳ್ಳಬೇಕು. ಇದು ನಿಮ್ಮ ಪಕ್ಷದ ನೇತೃತ್ವದಲ್ಲಿ 2013ರಲ್ಲಿ ತರಲಾದ “ಭೂಸ್ವಾಧೀನ ಹಾಗೂ ಪುನರ್ವಸತಿ ನೀತಿ”ಯ ಸಂಪೂರ್ಣ ಉಲ್ಲಂಘನೆ ಎಂಬುದನ್ನು ನಾವು ನಿಮಗೆ ಹೇಳಬೇಕಿಲ್ಲ ಎಂದು ನೋಟಿಸ್ ನಲ್ಲಿ ರೈತರು ಉಲ್ಲೇಖಿಸಿದ್ದಾರೆ.

ಬಿಜೆಪಿ ಸರ್ಕಾರ ಭೂಸ್ವಾಧೀನದ ಅಧಿಸೂಚನೆ ಹೊರಡಿಸಿದಾಗ ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್‌ ಪಕ್ಷ ವಿರೋದಿಸಿತ್ತು. ಸದನದಲ್ಲೇ ಪ್ರಶ್ನೆ ಕೇಳಿತ್ತು. ಎಲ್ಲದಕ್ಕಿಂತ ಹೆಚ್ಚು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಖುದ್ದು 2022ರ ಸೆಪ್ಟೆಂಬರ್‌ ತಿಂಗಳಿನಲ್ಲಿ ನಮ್ಮ ಹೋರಾಟದ ಪೆಂಡಾಲಿಗೆ ಭೇಟಿ ನೀಡಿದ್ದರು. “ಸರ್ಕಾರ ಈ ರೀತಿ ಮಾಡುವುದು ಸರಿಯಲ್ಲ, ನಾನು ಮತ್ತೆ ಅಧಿಕಾರಕ್ಕೆ ಬಂದರೆ ಇದನ್ನು ರದ್ದುಪಡಿಸುತ್ತೇನೆ” ಎಂದು ಸಿದ್ದರಾಮಯ್ಯನವರೇ ನಮಗೆ ಮಾತುಕೊಟ್ಟಿದ್ದಾರೆ ಎಂದು ಈ ನೋಟಿಸ್ ನಲ್ಲಿ ನೆನಪಿಸಿದ್ದಾರೆ.

ಈ ಎಲ್ಲಾ ಕಾರಣಕ್ಕೆ 2023ರಲ್ಲಿ ನಡೆದ ಚುನಾವಣೆಯಲ್ಲಿ ನಮ್ಮಲ್ಲಿನ ಬಹುತೇಕರು ಕಾಂಗ್ರೆಸ್‌ ಪಕ್ಷವನ್ನೇ ಬೆಂಬಲಿಸಿ ಮತ ಹಾಕಿದರು. ಈ ಬಲವಂತದ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸುತ್ತಿದ್ದ ಕೆ.ಹೆಚ್.‌ ಮುನಿಯಪ್ಪನವರನ್ನು ಗೆಲ್ಲಿಸುವುದರಲ್ಲಿ ನಮ್ಮ ಹಳ್ಳಿಗಳ ಪಾತ್ರವೂ ಮುಖ್ಯವಾಗಿತ್ತು. ಗೆದ್ದನಂತರ ಅವರು ನಮ್ಮನ್ನು ಹಲವು ಬಾರಿ ಎಂ.ಬಿ. ಪಾಟೀಲರ ಬಳಿ, ತಮ್ಮ ಬಳಿ ಕರೆದುಕೊಂಡು ಬಂದರು. ನೀವು ನೋಡೋಣ, ಪರಿಶೀಲಸೋಣ, ಸಭೆ ಕರೆಯೋಣ ಎಂದು ಉತ್ತರ ಕೊಟ್ಟಿರಿ ಗಟ್ಟಿ ತೀರ್ಮಾನ ತೆಗೆದುಕೊಳ್ಳಲಿಲ್ಲ. ಎಂ.ಬಿ. ಪಾಟೀಲರು ಅಂದಿನಿಂದ ಇಂದಿನ ತನಕ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲು ಸಾಧ್ಯವೇ ಇಲ್ಲ ಎಂದು ಪಟ್ಟುಹಿಡಿಯುತ್ತಾ ಬಂದಿದ್ದಾರೆ. ಕ್ರಮೇಣ ಕೆ.ಹೆಚ್.‌ ಮುನಿಯಪ್ಪನವರೂ ಅವರ ಜೊತೆ ದನಿಗೂಡಿಸಲು ಶುರು ಮಾಡಿದ್ದಾರೆ ಎಂದು ಈ ನೋಟಿಸ್ ಹೇಳಿದೆ.

ಈಗ ನಿನ್ನೆ ಇಬ್ಬರೂ ಸೇರಿ (ಮುನಿಯಪ್ಪ ಮತ್ತು ಎಂ.ಬಿ.ಪಾಟೀಲ್) ಪತ್ರಿಕಾಗೋಷ್ಟಿ ಮಾಡಿದ್ದಾರೆ. ರಿಯಲ್‌ ಎಸ್ಟೇಟ್‌ ಏಜೆಂಟರುಗಳಂತೆ ಮಾತನಾಡಿದ್ದಾರೆ. ʼಮೂರು ಹಳ್ಳಿಗಳನ್ನು ಕೈಬಿಡುವ, ಕಮರ್ಷಿಯಲ್‌ ಚಟುವಟಿಕೆಗೆ ಒಂದಿಷ್ಟು ಜಾಗ ನೀಡುವʼ ಮಾತನಾಡಿದ್ದಾರೆ. ಇದನ್ನು ನಾವು ತೀವ್ರವಾಗಿ ಒಕ್ಕೊರಲಿನ ಜೊತೆ ಖಂಡಿಸುತ್ತಿದ್ದೇವೆ. ಇದು ನಮ್ಮನ್ನು ಒಡೆದಾಳುವ ಕುತಂತ್ರ ಎಂಬುದನ್ನು ಅರ್ಥಮಾಡಿಕೊಳ್ಳಲಾರದಷ್ಟು ಮೂರ್ಖರು ನಾವಲ್ಲ. ಒಂದಿಷ್ಟು ಹಣದ ಆಸೆಗೆ ಭೂಮಿಯನ್ನು ಬರಡುಗೊಳಿಸಲು ಅವಕಾಶ ನೀಡುವಷ್ಟು ಸ್ವಾರ್ಥಿಗಳೂ ನಾವಲ್ಲ. ನಾವು ಈ ಚೌಕಾಸಿ ಡೀಲ್‌ ಅನ್ನು ಒಪ್ಪುವ ಮಾತೇ ಇಲ್ಲ ಎಂದು ಈ ನೋಟಿಸ್ ನಲ್ಲಿ ತಿಳಿಸಲಾಗಿದೆ.

ಮುಖ್ಯಮಂತ್ರಿಗಳೇ, ಈಗ ಕೊನೆಯದಾಗಿ ನಿಮ್ಮ ಬಾಗಿಲನ್ನು ಬಲವಾಗಿ ತಟ್ಟಲು ತೀರ್ಮಾನಿಸಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದ ಸಮಸ್ತ ಸಂಘಟನೆಗಳು ನಮ್ಮ ಬೆನ್ನಿಗೆ ನಿಂತು ಮರು ಉತ್ಸಾಹ ಮೂಡಿಸಿವೆ. ಸಾಹಿತಿ – ಚಿಂತಕರು, ಕಲಾವಿದರು, ಧರ್ಮಗುರುಗಳು, ಜನಸಾಮಾನ್ಯರು ನಮ್ಮ ಪರವಾಗಿ ದನಿ ಎತ್ತಿದ್ದಾರೆ. ಇಂದು ನಮ್ಮನ್ನು ಬೆಂಬಲಿಸಿ ರಾಜ್ಯದ ಮೂಲೆಮೂಲೆಗಳಿಂದ ಬಂದಿರುವ ಬಂಧುಗಳ ಕರುಳ ಮಿಡಿತಕ್ಕೆ ನಾವು ಋಣಿಗಳಾಗಿದ್ದೇವೆ. ಇವರೆಲ್ಲರ ಸಮ್ಮುಖದಲ್ಲಿ ನಾವು ನಮ್ಮ ಕೊನೆ ತೀರ್ಮಾನವನ್ನು ಘೋಷಿಸುತ್ತಿದ್ದೇವೆ. ಒಂದೇ ಮಾತಿನಲ್ಲಿ “ಸರ್ಕಾರ ಈ ಅಧಿಸೂಚನೆಯನ್ನು ರದ್ದುಗೊಳಿಸುತ್ತಿದೆ ಎಂದು ಘೋಷಿಸಿ ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ. ಅಥವಾ ನಮ್ಮೆಲ್ಲರನ್ನು ಜೈಲಿಗೆ ಹಾಕಿ ನಿಮಗೆ ಏನು ಮಾಡಬೇಕೆನಿಸುತ್ತೋ ಅದನ್ನು ಮಾಡಿ”. ಆದರೆ ನೀವೀ ಕೆಲಸವನ್ನು ನಮ್ಮನ್ನು ಸೆರೆಗೆ ಹಾಕಿಯೇ ಮಾಡಬೇಕು ಎಂದು ಈ ನೋಟಿಸ್ ನಲ್ಲಿ ಒತ್ತಾಯಿಸಿದ್ದಾರೆ.

ಸರ್ಕಾರ ಜಾಗ ಖಾಲಿ ಮಾಡಲು ನಮಗೆ ಅಂತಿಮ ಅಧಿಸೂಚನೆ ಕಳಿಸಿಯಾಗಿದೆ. ಇಂದು ನಾವು ಈ ಪತ್ರದ ಮೂಲಕ ಸರ್ಕಾರಕ್ಕೆ ಅಂತಿಮ ನೋಟೀಸ್‌ ನೀಡುತ್ತಿದ್ದೇವೆ. ಇಲ್ಲಿಂದ 24 ಗಂಟೆಗಳ ಕಾಲ ನಾವು ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತೇವೆ. ಸ್ಪಷ್ಟ ಉತ್ತರ ಬರದಿದ್ದಲ್ಲಿ ನಾಳೆ ಇದೇ ಹೊತ್ತಿಗೆ ತೀವ್ರ ಹೋರಾಟಕ್ಕೆ ಇಳಿಯುತ್ತೇವೆ. ಅಪರಾಧವೇ ಅಧಿಕಾರವಾದಾಗ ಗಾಂಧೀಜಿಯವರೂ ತೀಕ್ಷ್ಣ ಹೆಜ್ಜೆಗಳನ್ನು ಇಟ್ಟಿದ್ದಾರೆ, ನಾವೂ ಸಹ ಅವರ ಹಾದಿಯಲ್ಲೇ ಸಾಗುತ್ತೇವೆ. ಸರ್ಕಾರದ ಪ್ರಾತಿನಿಧಿಕ ತಾಣವಾದ ತಾಲ್ಲೂಕು ಕಛೇರಿಯನ್ನು ಮುತ್ತಿಗೆ ಹಾಕುತ್ತೇವೆ. ನಿಮಗೊಂದು ನೆಪ ಸಿಗುತ್ತದೆ. ನಮ್ಮನ್ನು ಜೈಲಿಗೆ ಹಾಕಬಹುದು. ಕಂಪನಿಗಳ ದಾರಿಯನ್ನು ಸುಗಮಗೊಳಿಸಬಹುದು. ತೀರ್ಮಾನ ತಮ್ಮದು. ನಮಸ್ಕಾರ ಎಂದು ಸಂತ್ರಸ್ತ 13 ಹಳ್ಳಿಗಳ ರೈತರು ಈ ನೋಟಿಸ್ ಅನ್ನು ಸರಕಾರಕ್ಕೆ ನೀಡಿದ್ದಾರೆ.

ಸಂಜೆ 5 ಗಂಟೆಯೊಳಗೆ ಸರ್ಕಾರ ರೈತಪರ ನಿರ್ಣಯ ತೆಗೆದುಕೊಳ್ಳದಿದ್ದರೆ ಹೋರಾಟದ ಸ್ವರೂಪ ಬದಲಾಗಲಿದೆ: ಬಡಗಲಪುರ ನಾಗೇಂದ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...