HomeUncategorizedಪೋಲಿ ಕಥೆಗೆ ಬಹುಮಾನ ಬಂದ ಕತೆ: ದೇವನೂರು ಮಹಾದೇವರ ಮಾತಲ್ಲಿ ಕೇಳಿ...

ಪೋಲಿ ಕಥೆಗೆ ಬಹುಮಾನ ಬಂದ ಕತೆ: ದೇವನೂರು ಮಹಾದೇವರ ಮಾತಲ್ಲಿ ಕೇಳಿ…

ಪ್ರಜಾವಾಣಿಯ ದೀಪಾವಳಿ ಕಥಾಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡುತ್ತ ಮೈಸೂರಿನಲ್ಲಿ ದೇವನೂರು ಆಡಿದ ಮಾತುಗಳು...

- Advertisement -
- Advertisement -

ಪ್ರಜಾವಾಣಿ ದೀಪಾವಳಿ ಸಂಚಿಕೆಯ ಕಥಾ ಕವನ ಸ್ಪರ್ಧಾ ವಿಜೇತರಿಗೆ ನಾನೀಗ ಬಹುಮಾನ ವಿತರಣೆ ಮಾಡಬೇಕಾಗಿ ಬಂದಿದೆ. ಇಲ್ಲೊಂದು ಗುಟ್ಟು ಹೇಳುವೆ. ಆದರೆ ಒಂದು ಕಂಡೀಷನ್ನು. ಕೇಳಿದ ಮೇಲೆ ಬಹುಮಾನಿತರಾದ ನೀವು- ಎಂಥವನ ಕೈಯಲ್ಲಿ ಪ್ರೈಜ್ ಪಡೆಯಬೇಕಾಗಿ ಬಂತು ಎಂದು ಪರಿತಪಿಸಬಾರದು! ಆ ಗುಟ್ಟು ಏನೆಂದರೆ- ನಾನೂ ಈ ಹಿಂದೆ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಗೆ ಎರಡು ಸಲ ಕತೆ ಕಳಿಸಿದ್ದೆ. ಪ್ರೈಜ್ ಇರಲಿ, ಮೆಚ್ಚಿಗೇನೂ ಬರಲಿಲ್ಲ. ಆದರೆ ಒಂದು ಕತೆ ಸ್ವಲ್ಪ ದಿನಗಳಾದ ಮೇಲೆ ವಾರದ ಪುರವಣಿಯಲ್ಲಿ ಪ್ರಕಟವಾಯ್ತು. ತಲೆಬರಹವೇನೋ- ‘ವೃತ್ತದಾಚೆ’ ಎಂದು ಇರಬೇಕು. ಆ ಕತೆ ಹೆಚ್ಚೂಕಮ್ಮಿ ದ್ಯಾವನೂರು ಸಂಕಲನದಲ್ಲಿನ ‘ಒಂದು ದಹನದ ಕತೆ’ ಇದೆಯಲ್ಲಾ, ಅಂಥದು.

ಅದಿರಲಿ, ಕನ್ನಡದ ಕಥಾ ಕ್ಷೇತ್ರದಲ್ಲಿನ ಸೂಕ್ಷ್ಮಜ್ಞತೆ ಮತ್ತು ಸಂವೇದನಾಶೀಲತೆಯ ಸ್ತರ ಹೆಚ್ಚಾಗುವಂತಾಗಲು ಪ್ರಜಾವಾಣಿಯ ಕಥಾಸ್ಪರ್ಧೆಯ ಪಾತ್ರ ದೊಡ್ಡದು ಎಂದೆನಿಸುತ್ತದೆ. ಇದಕ್ಕೊಂದು ಉದಾಹರಣೆ ನೀಡುವೆ- ಪ್ರಜಾವಾಣಿ ಕಥಾಸ್ಪರ್ಧೆಗೆ ಸಾಮಾನ್ಯವಾಗಿ ನೂರಾರು ಕತೆಗಳು ಬರುತ್ತವೆ. 1ನೇ ರೌಂಡ್‌ನಲ್ಲಿ ಉಪಸಂಪಾದಕರೊಬ್ಬರು, ಪರಿಗಣಿಸಬಹುದಾದ ಕಥೆಗಳನ್ನು ಆಯ್ಕೆ ಮಾಡಿ ಸಂಪಾದಕರಿಗೆ ನೀಡುವುದು ಮಾಮೂಲಿ. ಯಾವ ಕತೆಗಳನ್ನು ಪರಿಗಣಿಸುವುದಿಲ್ಲವೊ ಅದಕ್ಕೆ ಒಂದು ವಾಕ್ಯದ ನಿರಾಕರಣೆಗೆ ಕಾರಣ ನೀಡಿರುತ್ತಾರೆ. ಹೀಗೊಂದು ಸಲ, ಉಪಸಂಪಾದಕರು ‘ಪೋಲಿ ಕತೆ’ ಎಂದು ಕಾಮೆಂಟ್ ಮಾಡಿ ಕತೆಯೊಂದನ್ನು ರಿಜೆಕ್ಟ್ ಮಾಡಿರುವುದು ಸಂಪಾದಕರ ಕಣ್ಣಿಗೆ ಬೀಳುತ್ತದೆ. ಏನೋ ಪೋಲಿ ಕತೆ, ಓದೇ ಬಿಡುವ ಎಂಬ ಕುತೂಹಲಕ್ಕೋ ಏನೋ ಸಂಪಾದಕರು ಆ ಕತೆ ತರಿಸಿಕೊಂಡು ಓದುತ್ತಾರೆ. ಓದಿ ಬೆರಗಾಗುತ್ತಾರೆ. ಅದೊಂದು ಅತ್ಯುತ್ತಮ ಕತೆಯಾಗಿರುತ್ತದೆ. ಎಂಥಾ ಅನ್ಯಾಯವಾಗಿ ಬಿಡ್ತು ಎಂದು ಹಣೆ ಚಚ್ಚಿಕೊಳ್ಳುತ್ತಾರೆ. ಯಾಕೆಂದರೆ ಪರಿಗಣಿಸಲ್ಪಟ್ಟ ಕತೆಗಳನ್ನು ಆಯ್ಕೆ ಸಮಿತಿಗೆ ಆಗಲೇ ಕಳಿಸಿ ಆಗಿಬಿಟ್ಟಿರುತ್ತದೆ. ಆದರೂ ಆ ಕತೆಯನ್ನು ಆಯ್ಕೆ ಸಮಿತಿಯ ಗಮನಕ್ಕೆ ಕಳಿಸಿಕೊಡುತ್ತಾರೆ.

ಆ ‘ಪೋಲಿ’ ಕತೆಗೆ ಬಹುಮಾನ ಬರುತ್ತದೆ. ಕತೆ ಹೆಸರು- ಹಾಲು ಕುಡಿದ ಹುಡುಗಾ, ಬರೆದವರು- ಅಬ್ದುಲ್ ರಷೀದ್. ಈ ಕತೆ ಹೇಗಿದೆ ಅಂದರೆ- ಒಂದು ಬೆಂಕಿಪೊಟ್ಟಣದಲ್ಲಿ ಇಡಬಹುದಾಗಿದ್ದಂತಹ ಸೂಕ್ಷ್ಮ ನೇಯ್ಗೆಯ ಢಾಕಾದ ನವಿರು ಮಸ್ಲಿನ್ ಸೀರೆಯಂತೆ. ಮುಷ್ಟಿಗೆ ಸಿಗದ ಈ ಕತೆಯನ್ನು ಗುರುತಿಸುವುದು ಸಾಮಾನ್ಯ ವಿಷಯವಲ್ಲ. ಆದರೆ ಸೂಕ್ಷ್ಮಜ್ಞತೆ, ಸಂವೇದನಾಶೀಲತೆ ಇಲ್ಲದ ವಾತಾವರಣ? ಅದು ಕಣ್ಣು ಕಾಣದ ಕುರುಡು ಮತ್ತು ಸಂವೇದನಾಹೀನ ಕುಷ್ಠರೋಗದ ಆಳ್ವಿಕೆಯಲ್ಲಿ ಪ್ರಜೆಗಳೂ ಕಣ್ಣು ಕಾಣದ ಕುರುಡು ಮತ್ತು ಸಂವೇದನಾಹೀನ ಕುಷ್ಠರೋಗಿಗಳು ತುಂಬಿರುವಂತೆ. ಇದಕ್ಕೊಂದು ಉದಾಹರಣೆ ಬೇಕೆ? ನವೆಂಬರ್ 11 ರಂದು ವಾರ್ತಾಭಾರತಿ ಪತ್ರಿಕೆಯಲ್ಲಿ ಒಂದು ಸಣ್ಣ ಸುದ್ದಿ ಒಳಪುಟದಲ್ಲಾದರೂ ಪ್ರಕಟವಾಗಿದೆ. ಅದು ತುಷಾರ್ ಗಾಂಧಿ ಹೇಳಿಕೆ. ಅವರು ಹೇಳುತ್ತಾರೆ: “ಗಾಂಧಿ ಕೊಲೆ ಪ್ರಕರಣವನ್ನು ಇಂದು ಸರ್ವೋಚ್ಛ ನ್ಯಾಯಾಲಯವು ಮರು ವಿಚಾರಣೆ ನಡೆಸಿದ್ದರೆ `ಗೋಡ್ಸೆ ಕೊಲೆಗಾರ, ಆದರೆ ದೇಶಭಕ್ತ’ ಎಂದು ತೀರ್ಪು ಬರುತ್ತಿತ್ತು” ಎನ್ನುತ್ತಾರೆ. ಮುಂದೆ, “ಈ ತೀರ್ಪಿನಿಂದ ನ್ಯಾಯಾಂಗ ವ್ಯವಸ್ಥೆಗೆ ‘ನಂಬಿಕೆಯ ಅಪರಾಧ (crime of belief)’ ಎಂಬ ಹೊಸ ಕೆಟಗರಿ ಸೇರ್ಪಡೆಯಾದಂತಾಯಿತು” ಎನ್ನುತ್ತಾರೆ. ಜೊತೆಗೆ, “ತೀರ್ಪನ್ನು ಒಪ್ಪದಿದ್ದರೂ ಅದನ್ನು ಸ್ವೀಕರಿಸಬೇಕು ಹಾಗೂ ಅದಕ್ಕೆ ವಿಧೇಯರಾಗಿರಬೇಕು” ಎನ್ನುತ್ತಾರೆ. ಕನಿಷ್ಠ ನಮ್ಮ ಮಾಧ್ಯಮಗಳಾದರೂ ಸಂವೇದನಾಶೀಲತೆ ಉಳಿಸಿಕೊಂಡಿದ್ದಲ್ಲಿ ಇದು ಪತ್ರಿಕೆಗಳಲ್ಲಿ ಮುಖಪುಟದ ಸುದ್ದಿಯಾಗುತ್ತಿತ್ತು. ದೃಶ್ಯಮಾಧ್ಯಮಗಳಲ್ಲಿ ಗಂಭೀರ ಚರ್ಚೆ ವಿಷಯವಾಗುತ್ತಿತ್ತು.

ಇಂತಹ ವಿಷಮ ವಾತಾವರಣದಲ್ಲಿ ಒಂದು ಕುತೂಹಲ ನನಗೆ. ಆ ನವಿರು ಕತೆ ಬರೆದ ರಷೀದ್ ಈ ಕಾಲದ ಇಪ್ಪತ್ತು ವರ್ಷದ ಯುವಕನಾಗಿದ್ದರೆ, ಇಂದಿನ ವಾಟ್ಸಪ್, ಫೇಸ್‌ಬುಕ್ ಗೀಳಿನ ನಡುವೆ ಅಂಥ ಕತೆ ಬರೆಯುತ್ತಿದ್ದನೆ? ರಷೀದ್‌ನಂತಹ ಪ್ರತಿಭಾವಂತರು ಈ ಕಾಲದಲ್ಲಿ ವಾಟ್ಸಪ್, ಫೇಸ್‌ಬುಕ್‌ನಲ್ಲಿ ಮುಳುಗೇಳುತ್ತ ಕಳೆದು ಹೋಗುತ್ತಿರಬಹುದೆ? ನಾನು ಹೇಳುತ್ತಿರುವುದು ಇರಬಹುದು ಅಥವಾ ಇಲ್ಲದೇನೂ ಇರಬಹುದು. ಇಂದಿನ ವಾಟ್ಸಪ್, ಫೇಸ್‌ಬುಕ್‌ಗಳ ಕಡೆ ಕಣ್ಣಾಡಿಸಿದರೆ ಬಹುತೇಕ ಸ್ವಯ ಇಲ್ಲದ ಬಯಲು ಶೌಚಾಲಯದಂತೆ ಕಂಡುಬರುತ್ತದೆ. ಇದು ಸ್ನಾನಗೃಹವಾಗಿದ್ದರೆ ಚೆನ್ನಾಗಿತ್ತು ಅನಿಸುತ್ತದೆ. ಇದನ್ನು ಯಾಕೆ ಹೇಳಿದೆನೆಂದರೆ- ಸೂಕ್ಷ್ಮತೆ, ಸಂವೇದನಾಶೀಲತೆಯ ಅಭಿರುಚಿ ಉಂಟಾಗಲು ತನ್ನ ಕಾಣ್ಕೆ ನೀಡುತ್ತಿರುವ ಪ್ರಜಾವಾಣಿಗೆ ಒಂದು ಸಾಧ್ಯತೆಯ ಬಗ್ಗೆ ಗಮನ ಸೆಳೆಯುವುದಕ್ಕಾಗಿ. ಏನೆಂದರೆ, ಹೇಗೂ ವೆಬ್-ಪೋರ್ಟಲ್ ಇದೆ. ಅದರಲ್ಲಿ ವಾಟ್ಸಪ್, ಫೇಸ್‌ಬುಕ್‌ನಲ್ಲಿ ಪ್ರಕಟವಾಗುವ ಕಥೆ, ಕವನ, ಚುಟುಕು, ಚಿತ್ರ, ಪ್ರಬಂಧ, ವರದಿ, ಇತ್ಯಾದಿಗಳಲ್ಲಿ ಉತ್ತಮ ಗುಣಮಟ್ಟದವುಗಳನ್ನು ಆಯ್ಕೆ ಮಾಡಿ ಪ್ರಕಟಿಸುವುದಾದರೆ ಇದರಿಂದಾಗಿ ವಾಟ್ಸಪ್, ಫೇಸ್‌ಬುಕ್‌ಗಳ ಅಭಿರುಚಿ ಹೆಚ್ಚುವಂತಾಗಬಹುದೆ? ಈ ಆಸೆ ನನ್ನದು.

ಯಾಕೆಂದರೆ, ಇಂದು ನಮ್ಮ ಯುವಜನತೆ ಅಭಿವ್ಯಕ್ತಗೊಳ್ಳಬೇಕಾಗಿದೆ. ಸಮುದಾಯದ ಧ್ವನಿಯಾಗಬೇಕಾಗಿದೆ. ಭಾರತದಲ್ಲಿ ಸುಮಾರು 137 ಕೋಟಿ ಬಾಯಿಗಳಿವೆ. 137 ಕೋಟಿ ಹೊಟ್ಟೆಗಳು ಇವೆ. 274 ಕೋಟಿ ಕೈಗಳಿವೆ. ಈ ಕೈಗಳಿಗೆ ಕೆಲಸ ಸಿಗುವಂತಾಗಿ ಅವುಗಳ ಹೊಟ್ಟೆ ತುಂಬಿಸಬೇಕಾಗಿದೆ. ಇಂದು ಉದ್ಯೋಗ ಕುಸಿತವಾಗುತ್ತ ಜನರು ಉದುರಿ ಹೋಗುತ್ತಿದ್ದಾರೆ. ಇಂಥಲ್ಲಿ ಜೀವಗಳನ್ನು ಉಳಿಸುವ ಯೋಜನೆ ರೂಪಿಸಬೇಕಾಗಿದೆ. ಆದರೆ ಹೊಟ್ಟೆಗೆ ಹೊಡೆಯುವುದನ್ನೆ ಆಳ್ವಿಕೆಯು ಅಭಿವೃದ್ಧಿ ಎಂದುಕೊಂಡಿದೆ. ಇದಕ್ಕೆ ಉದಾಹರಣೆ- ಇಂದು ಇಲ್ಲಿ ಚರ್ಚಿತವಾಗುತ್ತಿರುವ ಮುಕ್ತ ವ್ಯಾಪಾರ ಒಪ್ಪಂದ- ಇಂಥವು. ಎಷ್ಟಂತ ಹೇಳುವುದು? ಭಾರತದಲ್ಲೀಗ ಆಳ್ವಿಕೆ ಮತ್ತು ಪೂತನಿ (crony) ಬಂಡವಾಳಶಾಹಿ ಜೊತೆಗೂಡಿಕೊಂಡು ಉದ್ಯೋಗನಾಶ ಯಜ್ಞ ಮಾಡುತ್ತಿವೆ. ಉದ್ಯೋಗದ ಸ್ಥಿತಿಗತಿ ಸ್ವ್ವಾತಂತ್ರ್ಯ ಪೂರ್ವ ಕಾಲದ ದಯಾನೀಯ ಸ್ಥಿತಿಗೆ ತಲುಪಲು ಧಾವಿಸುತ್ತಿದೆ. ಜನ ಸಮುದಾಯಕ್ಕೆ ಬೀದಿಗೆ ಬೀಳುವುದರ ಅರಿವು ಬಾರದಿರಲೆಂದು ಆ ಅಮಾಯಕರಿಗೆ ಭಾವನಾತ್ಮಕ ಅಫೀಮು ಕುಡಿಸಲಾಗುತ್ತಿದೆ. ಟಿಪ್ಪು ಅಂತಾರೆ, ಅಂಬೇಡ್ಕರ್ ಸಂವಿಧಾನ ಬರೆದಿಲ್ಲ ಅನ್ನುತ್ತಾರೆ, ಗೋಮಾತೆ ಅನ್ನುತ್ತಾರೆ, ಮೈಸೂರು ಪಾಕು ನಮ್ಮದು ಅನ್ನುತ್ತಾರೆ, ಪಾಕಿಸ್ತಾನದ ಭೀತಿ ತೋರಿಸುತ್ತಾರೆ, ದೇವರಿಗೆ ಹೆಡಮುರಿ ಕಟ್ಟಿ ಬೀದಿಗೆ ಎಸೆಯುತ್ತಾರೆ. ಹೀಗೆ ಹೀಗೆ ನೂರೆಂಟು ಭಾವಯಮಪಾಶಗಳನ್ನು ಎಸೆಯುತ್ತಾರೆ. ಮಾದಕಲೋಕ ಸೃಷ್ಟಿಸುತ್ತಾರೆ. ಇಂದು ವ್ಯಾಘ್ರನ ಗೋಮುಖವನ್ನು ಬಯಲಿಗೆ ಎಳೆಯಬೇಕಾಗಿದೆ. ಸರ್ಕಾರಕ್ಕೆ ನಾವು ಕೇಳಬೇಕಾಗಿದೆ- “ಒಂದು ಗ್ಯಾರಂಟಿ ಉದ್ಯೋಗ ನೀಡು, ಆಮೇಲೆ ಮಾತಾಡು” ಎಂದು ಮೊದಲು ಕೇಳಿ ಆಮೇಲೆ ಉಳಿದುದೆಲ್ಲ.

ಕೊನೆಗೊಂದು ಮಾತು. ಆಸೆಯೇ ದುಃಖಕ್ಕೆ ಕಾರಣ ಎಂಬ ಪ್ರಸಿದ್ಧ ಮಾತಿದೆ. ಇದು ಬುದ್ಧನ ನುಡಿಗಳು. ಪಾಳಿಯಲ್ಲಿ ಆಸೆ ಎನ್ನುವುದಕ್ಕೆ ‘ತನ್ಹಾ’ ಎಂದಿದೆ. ಸಂಸ್ಕೃತದಲ್ಲಿ ‘ತೃಷ್ಣೆ’ ಎಂದಿದೆ. ಇಂಗ್ಲೀಷ್‌ನಲ್ಲಿ craving ಎಂದಿದೆ. ಇದನ್ನು ನೋಡಿದಾಗ ‘ಆಸೆ’ ಪದ ಸಾಲದು ಅನ್ನಿಸುತ್ತದೆ. ಸಿಗರೇಟ್ ಇಲ್ಲದಿದ್ದಾಗ ನಾನು ತಹತಹಿಸುವುದು ಆಸೆ ಅಲ್ಲ, ಅದು craving. ಇದಕ್ಕೆ ಹತ್ತಿರದ ಪದ ಹುಡುಕುತ್ತ ಕಂಡದ್ದು- ‘ದಾಹ’. ‘ದಾಹ’ ಅಂದರೆ ‘ದಹಿಸುವುದು’ ಎಂದೂ ಅರ್ಥವಂತೆ. ಸದ್ಯಕ್ಕೆ ದಾಹವೇ ದುಃಖಕ್ಕೆ ಕಾರಣ- ಎಂದಿಟ್ಟುಕೊಳ್ಳಬಹುದೇನೊ.

ಇಂದು ಭೂಮಿಯೇ ಮನುಷ್ಯನ ದಾಹಕ್ಕೆ ಸಿಲುಕಿ ದಹಿಸುತ್ತಿದೆ. ಭೂಮಿ ಬಾಯಾರಿಕೆಯನ್ನು ನೀಗಿಸಬಹುದು, ದಾಹವನ್ನಲ್ಲ. ಇಂದಿನ ಮನುಷ್ಯನ ದಾಹದಿಂದಾಗಿ ತಾಪಮಾನ ಹೆಚ್ಚಾಗಿ- ಹಿಮಗಡ್ಡೆ ಕರಗುತ್ತಿವೆ. ಸಮುದ್ರದ ಮಟ್ಟ ಏರುತ್ತಿದೆ. ಸೈಕ್ಲೋನ್‌ಗಳು ಅಪ್ಪಳಿಸುತಿವೆ. ಹುಚ್ಚು ಮಳೆ ಬರುತ್ತಿದೆ. ಭೂಮಿ ಕುಸಿಯುತ್ತಿದೆ. ಎಲ್ಲವೂ ಕೊಚ್ಚಿಹೋಗುತ್ತಿದೆ. ವಿಪರ್ಯಾಸವೆಂದರೆ ಒಂದು ಕಡೆ ಪ್ರವಾಹ. ಅದರ ಪಕ್ಕದಲ್ಲೆ ನೀರಿಲ್ಲದ ಬರ. ಬದುಕುವುದೆಂತು?

ಪುಣ್ಯಕ್ಕೆ, ಭೂಮಿತಾಯಿಯೇ ಸ್ವೀಡನ್‌ನ ಹದಿನಾರು ವರ್ಷದ ಬಾಲೆ ಗ್ರೆಟಾ ಥನ್ಬರ್ಗ್‌ಳ ಮೈಮೇಲೆ ಬಂದು ನುಡಿಸಿದಂತೆ ಗ್ರೆಟಾ ನುಡಿಯುತ್ತಿದ್ದಾಳೆ. ಈ ಅನಾಹುತಗಳಿಗೆಲ್ಲಾ ಕಾರಣರಾದ ಜಗತ್ತಿನ ನಾಯಕರಿಗೆ “how dare you?” ಎಂದು ಕೇಳುತ್ತಿದ್ದಾಳೆ. ಹೀಗೆ ಕೇಳಬಹುದಾದ ಬಾಲಕ-ಬಾಲಕಿಯರು ಇಲ್ಲೂ ಇರಬಹುದು. ಎಲ್ಲೆಲ್ಲೂ ಇರಬಹುದು. ಅವರೀಗ ಮಾತಾಡಬೇಕಾಗಿದೆ. ಯಾಕೆಂದರೆ ಅವರು ಉಳಿಯಬೇಕಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...

ಬೆಂಗಳೂರು ಚಲೋ: ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಚಿವ ಮಹದೇವಪ್ಪ: ಸಿಎಂ ಜೊತೆ ಚರ್ಚಿಸುವ ಭರವಸೆ 

ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ‘ಬೆಂಗಳೂರು ಚಲೋ’...

ಛತ್ತೀಸ್‌ಗಢ : ಬಿಜಾಪುರದಲ್ಲಿ 41 ಮಾವೋವಾದಿಗಳು ಶರಣಾಗತಿ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಬುಧವಾರ (ನವೆಂಬರ್ 26) 41 ಮಂದಿ ನಕ್ಸಲರು ಶರಣಾಗಿದ್ದು, ಈ ಪೈಕಿ 32 ಮಂದಿಯ ತಲೆಗೆ ಒಟ್ಟು 1.19 ಕೋಟಿ ರೂಪಾಯಿ ಬಹುಮಾನ ಘೋಷಣೆಯಾಗಿತ್ತು ಎಂದು ವರದಿಯಾಗಿದೆ. ಸರ್ಕಾರದ ಹೊಸ...

ಬೆಂಗಳೂರು ಚಲೋ: ಧರಣಿ ಸ್ಥಳಕ್ಕೆ ಬಾರದ ಸಚಿವರು, ಕೋಪಗೊಂಡು ರಸ್ತೆಗಿಳಿದ ಪ್ರತಿಭಟನಾಕಾರರು

ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೃಹತ್ 'ಬೆಂಗಳೂರು ಚಲೋ' ಬುಧವಾರ (ನವೆಂಬರ್ 26) ಫ್ರೀಡಂ...