ಕೊರೊನಾ ಪೆಡಂಭೂತ ಇಂದು ಇಡಿ ವಿಶ್ವವನ್ನೇ ಆವರಿಸಿದೆ. ಈ ಪಿಡುಗಿನಿಂದಾಗಿ ಕಳೆದ ಮೂರು ತಿಂಗಳಿನಿಂದ ಇಡೀ ಭಾರತ ಲಾಕ್ಡೌನ್ ಆಗಿದೆ. ಪರಿಣಾಮ ಸಮಾಜದ ಕೆಳ ಮತ್ತ ಮಧ್ಯಮ ವರ್ಗದ ಜನ ಕೆಲಸ-ದುಡಿಮೆ ಇಲ್ಲದೆ ಒಪ್ಪೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ನಗರ ಪ್ರದೇಶಗಳಲ್ಲಿ ಮಾತ್ರವಲ್ಲ ಗ್ರಾಮೀಣ ಪ್ರದೇಶದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಲ್ಲ. ಭಾಗಶಃ ಭಾರತ ಹಿಂದೆಂದೂ ಇಂತಹ ಪರಿಸ್ಥಿತಿಗೆ ದೂಡಲ್ಪಟ್ಟಿರಲಿಲ್ಲವೇನೋ?
ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಲಾಕ್ಡೌನ್ ಅವಧಿಯಲ್ಲಿ ಜನರಿಗೆ ಕೆಲವು ಸವಲತ್ತುಗಳನ್ನು ನೀಡಿತ್ತು. ಬ್ಯಾಂಕ್ ಸಾಲದ ಕಂತು ಪಾವತಿಯನ್ನು 6 ತಿಂಗಳಿಗೆ ಮುಂದೂಡಿ ಬಡವರಿಗೆ ಸಹಕರಿಸಿತ್ತು. ಜನರಿಗೆ ಕೆಲಸವೇ ಇಲ್ಲದ ಮೇಲೆ ಸಾಲದ ಕಂತು ಹೇಗೆ ಸಾಧ್ಯ? ಎಂಬ ಸಾಮಾನ್ಯ ಜ್ಞಾನ ಈ ತೀರ್ಮಾನ ಹಿಂದಿತ್ತು.
ಆದರೆ, ಬಡವರ-ಕೃಷಿಕರ ರಕ್ತವನ್ನು ಹೀರುವ ಸಲುವಾಗಿಯೇ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ನಾಯಿ ಕೊಡೆಗಳಂತೆ ಬೆಳೆದುಕೊಂಡಿರುವ ಈ ಖಾಸಗಿ ಮೈಕ್ರೋ ಫೈನಾನ್ಸ್ ಕಂಪೆನಿಗಳಿಗೆ ಈ ಸಮಾನ್ಯ ಜ್ಞಾನವಿರಲಿ ಕನಿಷ್ಟ ಮಾನವೀಯತೆಯೂ ಇದ್ದಂತಿಲ್ಲ. ಅಲ್ಲದೆ, ಸರ್ಕಾರ ಮತ್ತು ಆರ್ಬಿಐ ಆದೇಶಗಳು ಈ ಕಂಪೆನಿಗಳಿಗೆ ಅನ್ವಯವಾಗುವುದಿಲ್ಲವೇ ಎಂಬುದು ಪ್ರಶ್ನೆ? ಇಂತಹ ಖಾಸಗಿ ಮೈಕ್ರೋ ಫೈನಾನ್ಸ್ ಕಂಪೆನಿಗಳ ವಿರುದ್ಧ ಇಂದು ಚಿಕ್ಕನಾಯಕ ಹಳ್ಳಿಯ ಹುಲಿಯಾರ್ ಗ್ರಾಮದ ಮಹಿಳೆಯರು ಆಕ್ರೋಶವನ್ನು ಹೊರಹಾಕಿದ್ದಾರೆ.
ನಡೆದಿದ್ದೇನು?
ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಕಟ್ಟಕಡೆಯ ಗಡಿ ಗ್ರಾಮ ಈ ಹುಲಿಯಾರ್. ಹೇಳಿಕೊಳ್ಳುವಂತಹ ನಿರಾವರಿ ಸೌಲಭ್ಯ ಇಲ್ಲದ ಈ ಹಳ್ಳಿಯಲ್ಲಿ ಕೃಷಿ ಚಟುವಟಿಕೆ ಕಡಿಮೆ. ಇದೇ ಕಾರಣಕ್ಕೆ ಈ ಭಾಗದ ಬಡ ಮತ್ತು ಕೆಳವರ್ಗದ ಜನ ಬದುಕಿಗಾಗಿ ಸಣ್ಣಪುಟ್ಟ ಕೂಲಿ ಕೆಲಸ, ಗುಜರಿ ಅಂಗಡಿ, ಸೈಕಲ್ ಅಂಗಡಿ, ಡ್ರೈವರ್ ಕೆಲಸ ಮತ್ತು ಬೀಡಿ ಕಟ್ಟುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಭಾಗದ ಬಹುತೇಕ ಶೇ.70 ರಷ್ಟು ಜನರಿಗೆ ಇಂತಹ ಸಣ್ಣಪುಟ್ಟ ಕೆಲಸವೇ ತುತ್ತು ಅನ್ನಕ್ಕೆ ಆಧಾರವಾಗಿದೆ.
ಆದರೆ, ಲಾಕ್ಡೌನ್ನಿಂದ ಕಳೆದ ಮೂರು ತಿಂಗಳಿನಿಂದ ಈ ಜನರಿಗೆ ಕೆಲಸವೇ ಇಲ್ಲದಂತಾಗಿದೆ. ಹುಲಿಯಾರ್ ಜನರನ್ನು, ಅದರಲ್ಲೂ ಮುಖ್ಯವಾಗಿ ಮುಸ್ಲಿಂ ಸಮುದಾಯದ ಜನರನ್ನು ಊರಿನ ಒಳಗೆ ಬಿಟ್ಟುಕೊಳ್ಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇಲ್ಲಿನ ಜನರಿಗೆ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಆದರೆ, ಈ ನಡುವೆ ಪ್ರತಿದಿನ ಗ್ರಾಮಕ್ಕೆ ಭೇಟಿ ನೀಡುತ್ತಿರುವ ಎಸ್ಕೆಎಸ್ ಮೈಕ್ರೋ ಫೈನಾನ್ಸ್ನವರು ಗ್ರಾಮದ ಹೆಣ್ಣು ಮಕ್ಕಳಿಗೆ “ಸಾಲ ಮರುಪಾವತಿಸಿ ಇಲ್ಲದಿದ್ದರೆ ಸಾಯಿರಿ” ಎಂದು ಒತ್ತಡ ಹೇರುತ್ತಿದ್ದು ಪರಿಣಾಮ ಇಲ್ಲಿನ ಜನ ಬದುಕುವುದೇ ದುಸ್ತರವಾಗಿದೆ. ಅನ್ನಕ್ಕೆ ಇಲ್ಲದ ಮೇಲೆ ಸಾಲ ಮರುಪಾವತಿ ಹೇಗೆ ಸಾಧ್ಯ?
ದುಡ್ಡು ಕಟ್ಟಲಾಗದಿದ್ದರೆ ಸತ್ತೋಗಿ; ಕೊರೊನಾ ಸಮಯದಲ್ಲೂ ರಕ್ತ ಹೀರುತ್ತಿರುವ ಫೈನಾನ್ಸ್ಗಳು
ದುಡ್ಡು ಕಟ್ಟಲಾಗದಿದ್ದರೆ ಸತ್ತೋಗಿ; ಕೊರೊನಾ ಸಮಯದಲ್ಲೂ ರಕ್ತ ಹೀರುತ್ತಿರುವ ಫೈನಾನ್ಸ್ಗಳು
Posted by Naanu Gauri on Friday, June 5, 2020
ಸಾಲ ಕಟ್ಟಿ, ಇಲ್ಲದಿದ್ದರೆ ಸಾಯಿರಿ ಎನ್ನುವ ಕಂಪೆನಿಗಳು:
“ಸಾಲ ಕಟ್ಟಲು ಹಣ ಇಲ್ಲ ಕೆಲಸವೂ ಇಲ್ಲ. ಹೀಗಾಗಿ ನಮಗೆ ಹಣ ಪಾವತಿ ಮಾಡಲು ಸ್ವಲ್ಪ ಸಮಯಾವಕಾಶ ನೀಡಿ” ಎಂದು ಇಲ್ಲಿನ ಮಹಿಳೆಯರು ಎಸ್ಕೆಎಸ್ ಫೈನಾನ್ಸ್ ಸಿಂಬಂದಿಯ ಬಳಿ ಮನವಿ ಮಾಡಿದ್ದಾರೆ. ಆದರೆ, ಇದಕ್ಕೆ ಕಟುವಾಗಿ ಉತ್ತರಿಸಿರುವ ಆತ, “ಇದೇ ಕಾರಣಕ್ಕೆ ನಿಮಗೆ ಲೋನ್ ನೀಡುವಾಗಲೇ ಇನ್ಯೂರೆನ್ಸ್ ಸಹ ಮಾಡಿದ್ದೇವೆ. ಸಾಲ ಕಟ್ಟಲಾಗದಿದ್ದರೆ ಸಾಯಿರಿ. ನಾವು ಆ ಡೆತ್ ಸರ್ಟಿಫಿಕೇಟ್ ಇಟ್ಟುಕೊಂಡು ನಮ್ಮ ಹಣವನ್ನು ಇನ್ಯೂರೆನ್ಸ್ ಕಂಪೆನಿಗಳಿಂದ ಹಿಂಪಡೆಯುತ್ತೇವೆ” ಎಂದು ಹೇಳುವ ಮೂಲಕ ಅಮಾನವೀಯತೆ ಮೆರೆದಿದ್ದಾನೆ.
ಪರಿಣಾಮ ಇಲ್ಲಿನ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದು “ನಮಗೆ ಹಣ ಕಟ್ಟಲು ಸಮಯ ನೀಡಿ ಅಥವಾ ಸಾಲಮನ್ನಾ ಮಾಡಿ” ಎಂದು ಮನವಿ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕಿದೆ. ಇಂತಹ ಕಂಪೆನಿಗಳಿಂದ ಮಹಿಳೆಯರಿಗೆ ಮುಕ್ತಿ ನೀಡುವ ಜೊತೆಗೆ ಮೈಕ್ರೋ ಫೈನಾನ್ಸ್ ಕಂಪೆನಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಬಡ ಜನರ ರಕ್ತ ಹೀರುತ್ತಿರುವವರು ಇವರಷ್ಟೇ ಅಲ್ಲ. ಅದೊಂದು ದೊಡ್ಡ ನೆಟ್ವರ್ಕ್ ಕರ್ನಾಟಕದಲ್ಲಿದೆ.
ಸ್ವ ಸಹಾಯ ಸಂಘಗಳ ರಕ್ತ ಹೀರುತ್ತಿರುವ ಫೈನಾನ್ಸ್ಗಳು
ದುಡ್ಡು ಕಟ್ಟಲಾಗದಿದ್ದರೆ ಸತ್ತೋಗಿ; ಕೊರೊನಾ ಸಮಯದಲ್ಲೂ ರಕ್ತ ಹೀರುತ್ತಿರುವ ಫೈನಾನ್ಸ್ಗಳುಸ್ವ ಸಹಾಯ ಸಂಘಗಳ ರಕ್ತ ಹೀರುತ್ತಿರುವ ಫೈನಾನ್ಸ್ಗಳು
Posted by Naanu Gauri on Friday, June 5, 2020
ಸ್ವಾವಲಂಬಿ ಹೆಸರಲ್ಲಿ ಮಹಿಳೆಯರ ರಕ್ತ ಹೀರುತ್ತಿವೆ ಈ ಕಂಪೆನಿಗಳು:
ಮಹಿಳೆಯರನ್ನು ಸ್ವ-ಉದ್ಯೋಗ ಮಾಡಿ ಸ್ವಾವಲಂಬಿಗಳನ್ನಾಗಿಸಲು ನಾವು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತೇವೆ ಎಂಬ ಟ್ಯಾಗ್ಲೈನ್ನೊಂದಿಗೆ ಕರ್ನಾಟಕದ ಎಲ್ಲಾ ಹಳ್ಳಿಗಳಲ್ಲೂ ವಿವಿಧ ಖಾಸಗಿ ಮೈಕ್ರೋ ಫೈನಾನ್ಸ್ ಕಂಪೆನಿಗಳು ಕಾಲಿಟ್ಟಿವೆ.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘಟನೆ, ಹೆಚ್ಡಿಎಫ್ಸಿ ಮೈಕ್ರೋ ಫೈನಾನ್ಸ್, ಉಜ್ಜೀವನ ಫೈನಾನ್ಸ್, ಎಸ್ಕೆಎಸ್ ಮೈಕ್ರೋ ಫೈನಾನ್ಸ್, ಮುತ್ತುಟ್ಟು ಮೈಕ್ರೋ ಫೈನಾನ್ಸ್, ಬಿ ಕೆ ಮೈಕ್ರೋ ಫೈನಾನ್ಸ್, ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಇತ್ಯಾದಿ..ಇತ್ಯಾದಿ..ಹೀಗೆ ನಾನಾ ಹೆಸರಿನಲ್ಲಿ ಗ್ರಾಮಗಳಿಗೆ ಕಾಲಿಡುತ್ತಿರುವ ಈ ಕಂಪೆನಿಗಳಿಗೆ ಬಡ ಹೆಣ್ಣು ಮಕ್ಕಳೇ ಟಾರ್ಗೆಟ್. ಈ ಮೂಲಕ ಈ ಕಂಪೆನಿಗಳು ಬಡವರನ್ನು ಅಕ್ಷರಶಃ ಕೊಳ್ಳೆ ಹೊಡೆಯುತ್ತಿವೆ, ರಕ್ತ ಹೀರುತ್ತಿವೆ ಎಂದರೆ ತಪ್ಪಾಗಲಾರದು.
ರಾಜ್ಯದ 170 ತಾಲೂಕಿನ ಸುಮಾರು 5 ಲಕ್ಷ ಗ್ರಾಮಗಳಲ್ಲಿ ಈ ಎತ್ತುವಳಿ ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಭಾಗದ ಭಾಗಶಃ ಶೇ.80ರಷ್ಟು ಮಹಿಳೆಯರು ತಮ್ಮ ಊರಿನಲ್ಲೇ ಸಂಘ (ಮಹಿಳೆಯರ ಗುಂಪು) ಕಟ್ಟಿಕೊಂಡುಈ ಕಂಪೆನಿಗಳಲ್ಲಿ ಭಾಗೀದಾರರಾಗಿದ್ದಾರೆ. ಅಧಿಕೃತ ಬ್ಯಾಂಕುಗಳಿಂದ ಸಾಲ ಪಡೆಯಲು ಸಾಧ್ಯವಾಗದ ಮಹಿಳೆಯರು ತಮ್ಮ ಹಳ್ಳಿಯಲ್ಲೇ ಒಂದು ಗುಂಪುಗಳನ್ನು ಕಟ್ಟಿಕೊಂಡು ಇಂತಹ ತಲೆ ಮಾಸಿದ ಮೈಕ್ರೋ ಫೈನಾನ್ಸ್ಗಳಿಂದ ಸುಲಭಕ್ಕೆ ಸಾಲ ಪಡೆಯುತ್ತಾರೆ.
ಆದರೆ, ಸಾಲದ ಕಂತು ಬ್ಯಾಂಕಿನಂತೆ ತಿಂಗಳಿಗೊಮ್ಮೆ ಇರುವುದಿಲ್ಲ. ಬದಲಾಗಿ ಪ್ರತಿ ವಾರ ಕಟ್ಟಬೇಕು. ಮನೆಯಲ್ಲಿ ಯಾರಾದರು ಮೃತರಾಗಿದ್ದರೂ ಸಹ ಆ ವಾರದ ಕಂತು ಕಟ್ಟಲೇಬೇಕು ತಪ್ಪಿಸುವಂತಿಲ್ಲ. ಹಾಗೆ ತಪ್ಪಿಸಿದರೆ ಅದಕ್ಕೆ ಮತ್ತೆ ದಂಡ ಕಟ್ಟಬೇಕಾಗುತ್ತದೆ ಎಂದರೆ ಈ ಸಂಘಗಳ ರಕ್ತಪಿಪಾಸು ತನವನ್ನು ನೀವೆ ಒಮ್ಮೆ ಊಹಿಸಿ.
ದುಡ್ಡು ಕಟ್ಟಲಾಗದಿದ್ದರೆ ಸತ್ತೋಗಿ; ಸ್ವಸಹಾಯ ಸಂಘಗಳಿಗೆ ತೊಂದರೆ
ದುಡ್ಡು ಕಟ್ಟಲಾಗದಿದ್ದರೆ ಸತ್ತೋಗಿ; ಸ್ವಸಹಾಯ ಸಂಘಗಳಿಗೆ ತೊಂದರೆ
Posted by Naanu Gauri on Friday, June 5, 2020
ಇವರು ಹೇಳುವುದಷ್ಟೇ ಕಡಿಮೆ ಬಡ್ಡಿ ದರ. ಆದರೆ, ಅದನ್ನು ಹೇಗೆ ಲೆಕ್ಕ ಹಾಕಿದರೂ ಸಹ ಯಾವ ಮೀಟರ್ ಬಡ್ಡಿ ದಂಧೆಗಿಂತ ಈ ದಂಧೆ ಕಡಿಮೆ ಏನಲ್ಲ. ಇದಕ್ಕೆ ಧರ್ಮಸ್ಥಳದ ಮಂಜುನಾಥನೂ ಹೊರತಲ್ಲ. ಇದೇ ಕಾರಣಕ್ಕೆ ಒಂದೆಡೆ ಸಾಲ ಕಟ್ಟಲಾಗದೆ ಮತ್ತೊಂದಡೆ ಈ ಕಂಪೆನಿಗಳ ಉಪಟಳ ತಡೆಯಲಾರದೆ ಊರು ಬಿಟ್ಟು ಬೆಂಗಳೂರಿನಂತಹ ಮಹಾ ನಗರಗಳಿಗೆ ಓಡಿ ಬಂದ ಜನರ ಸಂಖ್ಯೆಯೂ ಕಡಿಮೆ ಏನಲ್ಲ.
ಅದೇನೆ ಇರಲಿ ಈ ಕಂಪೆನಿಗಳು ಲಾಕ್ಡೌನ್ ಸಂದರ್ಭದಲ್ಲೂ ಗ್ರಾಮೀಣ ಭಾಗದ ಮಹಿಳೆಯರ ಮೇಲೆ ಸಾಲ ಮರುಪಾವತಿ ಮಾಡಲು ಒತ್ತಡ ಹೇರುತ್ತಿರುವುದು ಸರಿಯಲ್ಲ. ಇಂತಹ ಕೃತ್ಯಗಳನ್ನು ಮಾನವೀಯ ಸಮಾಜ ಎಂದಿಗೂ ಒಪ್ಪುವುದಿಲ್ಲ. ಹೀಗಾಗಿ ಶೀಘ್ರದಲ್ಲಿ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗಮನ ವಹಿಸಿ ಸೂಕ್ತ ಕ್ರಮ ಜರುಗಿಸಬೇಕಿದೆ.
ಓದಿ: ಸಮಸ್ಯೆಗೆ ಪರಿಹಾರ ಕಾಣದ ಕೇಂದ್ರ ಸರ್ಕಾರಕ್ಕೆ ಕೊರೊನಾ ನೆಪ !


