Homeಮುಖಪುಟಎಲ್ಲ ಸದಭಿರುಚಿ ಸಿನಿಮಾಗಳಿಗೆ ತೆರಿಗೆ ವಿನಾಯಿತಿ ಅಗತ್ಯ: ಫಿಲ್ಮ್‌ ಛೇಂಬರ್‌ ಅಧ್ಯಕ್ಷ ಭಾ.ಮ.ಹರೀಶ್‌ ಪ್ರತಿಕ್ರಿಯೆ

ಎಲ್ಲ ಸದಭಿರುಚಿ ಸಿನಿಮಾಗಳಿಗೆ ತೆರಿಗೆ ವಿನಾಯಿತಿ ಅಗತ್ಯ: ಫಿಲ್ಮ್‌ ಛೇಂಬರ್‌ ಅಧ್ಯಕ್ಷ ಭಾ.ಮ.ಹರೀಶ್‌ ಪ್ರತಿಕ್ರಿಯೆ

ಚಾರ್ಲಿ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಹಿನ್ನೆಲೆಯಲ್ಲಿ ಭಾ.ಮ.ಹರೀಶ್‌ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -
- Advertisement -

“ಸದಭಿರುಚಿಯ ಸಿನಿಮಾಗಳಿಗೆ ತೆರಿಗೆ ವಿನಾಯಿತಿಯನ್ನು ಸರ್ಕಾರ ನೀಡಬೇಕು. ಈ ಕುರಿತು ಮುಖ್ಯಮಂತ್ರಿಯವರೊಂದಿಗೆ ಮಾತನಾಡುವೆ” ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್‌ ತಿಳಿಸಿದ್ದಾರೆ.

ರಕ್ಷಿತ್ ಶೆಟ್ಟಿ ಅಭಿನಯಿಸಿ ನಿರ್ಮಾಣ ಮಾಡಿರುವ ‘ಚಾರ್ಲಿ 777’ ಸಿನಿಮಾಕ್ಕೆ ರಾಜ್ಯ ಸರ್ಕಾರ ಎಸ್‌ಜಿಎಸ್‌ಟಿ (ರಾಜ್ಯ ಸರಕು ಮತ್ತು ಸೇವಾ ತೆರಿಗೆ) ವಿನಾಯಿತಿ ನೀಡಿದೆ. ಸರ್ಕಾರದ ನಿರ್ಧಾರವನ್ನು ತೆರೆದ ಹೃದಯದಿಂದ ಸ್ವಾಗತಿಸಿರುವ ಕನ್ನಡ ಚಿತ್ರಕರ್ಮಿಗಳು ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಮಂಸೋರೆಯವರು ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆಯುತ್ತಾ ಇತರ ಚಿತ್ರಗಳಿಗೂ ತೆರಿಗೆ ವಿನಾಯಿತಿಯನ್ನು ಸರ್ಕಾರ ನೀಡಬೇಕು ಎಂದು ಮುಖ್ಯಮಂತ್ರಿಯವರಲ್ಲಿ ವಿನಂತಿ ಮಾಡಿದ ಬಳಿಕ ಚಿತ್ರರಂಗದ ಅನೇಕರು ಈ ಬೇಡಿಕೆಗೆ ದನಿಗೂಡಿಸಿದ್ದಾರೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್‌, “ಈ ವಿಚಾರವಾಗಿ ವಾರ್ತಾ ಇಲಾಖೆಯ ಆಯುಕ್ತರು ಹಾಗೂ ಮುಖ್ಯಮಂತ್ರಿಯವರ ಜೊತೆ ಚರ್ಚೆ ಮಾಡುತ್ತೇನೆ. ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿವೆ. ಮಂಸೋರೆಯಂಥವರು ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಚಾರ್ಲಿಗೆ ತೆರಿಗೆ ವಿನಾಯಿತಿ ನೀಡಿದಂತೆಯೇ ಒಳ್ಳೆಯ ಸಿನಿಮಾಗಳಿಗೆ ಸರ್ಕಾರ ತೆರಿಗೆ ವಿನಾಯಿತಿ ನೀಡಬೇಕು” ಎಂದಿದ್ದಾರೆ.

“ಕೊರೊನಾ ಬಿಕ್ಕಟ್ಟಿನ ನಂತರದಲ್ಲಿ ಚಿತ್ರರಂಗ ಸವಾಲುಗಳನ್ನು ಎದುರಿಸುತ್ತಿದೆ. ತೆರಿಗೆ ವಿನಾಯಿತಿ ನೀಡಿದರೆ ಇಡೀ ಚಿತ್ರರಂಗಕ್ಕೆ ಒಳ್ಳೆಯದಾಗುತ್ತದೆ. ಹಿರಿಯರೊಂದಿಗೆ ಚರ್ಚಿಸುವೆ” ಎಂದು ಹೇಳಿದ್ದಾರೆ.

‘ಹರಿವು’, ‘ನಾತಿಚರಾಮಿ’, ‘ಆಕ್ಟ್‌ 1978’ ಸಿನಿಮಾಗಳನ್ನು ನಿರ್ದೇಶಿಸಿರುವ ಮಂಸೋರೆಯವರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ತಮ್ಮ ಅಭಿಪ್ರಾಯ ದಾಖಲಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮಂಸೋರೆಯವರ ಪತ್ರದ ಹಿನ್ನಲೆಯಲ್ಲಿ ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಚಿತ್ರಕರ್ಮಿಗಳು ಸರ್ಕಾರದ ಮುಂದೆ ಇದೇ ಬೇಡಿಕೆಯನ್ನು ಇಟ್ಟರು. ಸದಭಿರುಚಿಯ ಸಿನಿಮಾಗಳು ಹೆಚ್ಚಾಗಬೇಕಾದರೆ ಸರ್ಕಾರ ತೆರಿಗೆ ವಿನಾಯಿತಿ ನಿರ್ಧಾರವನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿರಿ: ‘ಚಾರ್ಲಿ 777’ ಭಾವುಕತೆಯಾಚೆಗೆ ತೆರೆದುಕೊಳ್ಳದ ಸರಳರೇಖೆಯ ಸಿನಿಮಾ

ಸಮಿತಿ ರಚಿಸಿ ತೆರಿಗೆ ವಿನಾಯಿತಿಗೆ ನಿರ್ಧಾರ ಮಾಡಲಿ: ಜಯತೀರ್ಥ

‘ಒಲವೇ ಮಂದಾರ’, ‘ಬ್ಯೂಟಿಫುಲ್‌ ಮನಸುಗಳು’, ‘ಬೆಲ್‌ಬಾಟಂ’ ಸಿನಿಮಾಗಳ ನಿರ್ದೇಶಕ ಜಯತೀರ್ಥ ಅವರು ಮಾತನಾಡಿ, “ಸರ್ಕಾರ ಒಳ್ಳೆಯ ಹೆಜ್ಜೆಯನ್ನಿಟ್ಟಿದೆ. ಸದಭಿರುಚಿಯ ಸಿನಿಮಾಕ್ಕೆ ತೆರಿಗೆ ನೀಡಿದೆ. ಇದೇ ರೀತಿಯ ಒಳ್ಳೆಯ ಆಶಯ ಇರುವ ಸಿನಿಮಾಗಳಿಗೂ ಪ್ರೋತ್ಸಾಹ ನೀಡಿದರೆ ಬಹಳ ಒಳ್ಳೆಯದಾಗುತ್ತದೆ. ಅದಕ್ಕೆ ನನ್ನ ಬೆಂಬಲವೂ ಇದೆ” ಎಂದರು.

ನಿರ್ದೇಶಕ ಜಯತೀರ್ಥ

“ಒಳ್ಳೆಯ ಸಿನಿಮಾ ಯಾವುದೆಂದು ನಿರ್ಧಾರ ಮಾಡಲು ಎಲ್ಲ ಸಿನಿಮಾಗಳನ್ನು ನೋಡಲು ಮುಖ್ಯಮಂತ್ರಿಯವರಿಗೆ ಸಾಧ್ಯವಾಗುವುದಿಲ್ಲ. ಮುಖ್ಯಮಂತ್ರಿಯವರಿಗೆ ಸಂಪರ್ಕದಲ್ಲಿರುವವರು ಅವರನ್ನು ಕರೆದು ಸಿನಿಮಾ ತೋರಿಸಬಹುದಷ್ಟೇ. ಆದರೆ ಯಾವುದೇ ಪ್ರಭಾವ ಇರದೇ ಇರುವ ಸಾಮಾನ್ಯ ಕಲಾವಿದರಿಗೆ, ನಿರ್ದೇಶಕರಿಗೆ, ನಿರ್ಮಾಪಕರಿಗೆ ಇದು ಸಾಧ್ಯವಾಗದು. ಅದಕ್ಕಾಗಿ ಒಂದು ಸಮಿತಿ ಮಾಡಬಹುದು. ಗುಣಾತ್ಮಕ ಸಿನಿಮಾಗಳಿಗೆ ಸಬ್ಸಿಡಿ ನೀಡಲು ವ್ಯವಸ್ಥೆ ಮಾಡಿದ್ದಾರೆ. ಆದರೆ ಈ ಸಬ್ಸಿಡಿ ಸಿನಿಮಾ ಬಿಡುಗಡೆಯಾಗಿ ವರ್ಷಗಳು ಕಳೆದ ಮೇಲೆ ಕೈಗೆ ಸಿಗುತ್ತದೆ. ಈ ರೀತಿ ಆಗಬಾರದು. ಸೆನ್ಸಾರ್‌ ಮಂಡಳಿ ಹೇಗೆ ಸಿನಿಮಾ ನೋಡುತ್ತದೆಯೇ ಹಾಗೆಯೇ ಸಿನಿಮಾ ನೋಡುವ ಸಮಿತಿಯನ್ನು ಸರ್ಕಾರ ಮಾಡಬಹುದು. ತೆರಿಗೆ ವಿನಾಯಿತಿ ನೀಡಬೇಕು ಎಂಬುದು ನಮ್ಮ ಆಶಯ” ಎಂದು ತಿಳಿಸಿದರು.

“ಪ್ರತಿಯೊಂದು ಹಂತದಲ್ಲೂ ನಿರ್ಮಾಪಕರು ಸವಾಲನ್ನು ಎದುರಿಸುತ್ತಿದ್ದಾರೆ. ದೊಡ್ಡ ದೊಡ್ಡ ಸ್ಟಾರ್‌ ನಟರ ಸಿನಿಮಾಗಳನ್ನು ಮಾಡಿದವರು ಹೇಗೋ ಸಹಿಸಿಕೊಳ್ಳಬಹುದು. ಆದರೆ ಎಲ್ಲರಿಗೂ ಇದು ಸಾಧ್ಯವಾಗದು. ಹೀಗಾದಾಗ ಸಿನಿಮಾಗಳು ಒಟಿಟಿಗೆ ಸೀಮಿತವಾಗಿಬಿಡುತ್ತದೆ. ಸಿನಿಮಾ ಸಂಸ್ಕೃತಿ ಹೊರಟು ಹೋಗುತ್ತದೆ. ಈ ಎಲ್ಲ ದೃಷ್ಟಿಕೋನದಿಂದ ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹ ದೊರಕಬೇಕಿದೆ” ಎಂದು ಒತ್ತಾಯಿಸಿದರು.

ಇದನ್ನೂ ಓದಿರಿ: Film Review| ಜನ ಗಣ ಮನ: ಸಮೂಹ ಸನ್ನಿಗೊಂದು ಮದ್ದು

“ಕಲಾವಿದರು ಕೊಡುವ ಅನೇಕ ತೆರಿಗೆಯಿಂದ ಸರ್ಕಾರಕ್ಕೆ ಅನುಕೂಲವಾಗುತ್ತಿದೆ. ಒಂದು ಸಿನಿಮಾ ನೋಡಲು ಬರುವ ಪ್ರೇಕ್ಷಕ ಸಾಕಷ್ಟು ಹಣ ವ್ಯಯಿಸುತ್ತಾನೆ. ಪಾರ್ಕಿಂಗ್‌ ಶುಲ್ಕ ಕಟ್ಟುತ್ತಾನೆ, ಪೆಟ್ರೋಲ್ ಹಾಕಿಸಿಕೊಳ್ಳುತ್ತಾನೆ, ಮನರಂಜನಾ ತೆರಿಗೆ ಕಟ್ಟುತ್ತಾನೆ. ಹೀಗೆ ಇಷ್ಟೆಲ್ಲ ವೆಚ್ಚದ ನಡುವೆಯೂ ಫೈರಸಿ ಹಾವಳಿಯೂ ಇದೆ. ಈ ಪೈರಸಿ ಹಾವಳಿಯೂ ತಪ್ಪುತ್ತಿಲ್ಲ. ಸರ್ಕಾರದಿಂದಲೂ ಬೆಂಬಲ ಸಿಗುತ್ತಿಲ್ಲ” ಎಂದು ವಿಷಾದಿಸಿದರು.

ರಾಜನ ಭಾವನೆಗೆ ತಕ್ಕಂತೆ ಸಿನಿಮಾ ಮಾಡಬೇಕೆ: ಬಿ.ಎಂ.ಗಿರಿರಾಜ್‌

‘ಜಟ್ಟ’, ‘ನವಿಲಾದವರು’, ‘ಮೈತ್ರಿ’, ‘ಅಮರಾವತಿ’, ‘ಕನ್ನಡಿಗ’ ಸಿನಿಮಾಗಳ ನಿರ್ದೇಶಕ ಬಿ.ಎಂ.ಗಿರಿರಾಜ್‌ ಮಾತನಾಡಿ, “ನಾವು ಕಷ್ಟಪಟ್ಟು ಸಿನಿಮಾ ಮಾಡಿರುತ್ತೇವೆ. ನಿಮಗೆ ಇಷ್ಟವಾಗಲು ಅಥವಾ ಆಗದಿರಲು ನಿಮ್ಮದೇ ಆದ ಕಾರಣಗಳಿರುತ್ತವೆ. ಮುಖ್ಯಮಂತ್ರಿಯವರ ನಾಯಿ ತೀರಿಕೊಂಡಿದ್ದರಿಂದ ‘ಚಾರ್ಲಿ’ ಸಿನಿಮಾ ಅವರಿಗೆ ಹೆಚ್ಚು ಕನೆಕ್ಟ್ ಆಯಿತು. ಟ್ಯಾಕ್ಸ್‌ ಫ್ರೀ ಎಂದರು. ಯಾವುದೇ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡುವುದು ಒಳ್ಳೆಯದು. ಆದರೆ ಈ ಪ್ರಕರಣ ಹೇಗಿದೆ ಎಂದರೆ, ಒಬ್ಬ ರಾಜ ಅಥವಾ ಒಡೆಯನ ಮನವೊಲಿಸಿ, ಆತನ ಮನಸ್ಸಿನ ಭಾವಕ್ಕೆ ತಕ್ಕಂತೆ ಸಿನಿಮಾ ಮಾಡಿದರೆ ಮಾತ್ರ ಉಳಿಗಾಲ ಎಂಬಂತಿದೆ” ಎಂದು ವಿವರಿಸಿದರು.

ನಿರ್ದೇಶಕ ಬಿ.ಎಂ.ಗಿರಿರಾಜ್‌

“ಕನ್ನಡ ಸಿನಿಮಾಗಳಿಗೆ ಮೊದಲು ತೆರಿಗೆ ವಿನಾಯಿತಿ ಇತ್ತು. ಇಲ್ಲಿನ ತಂತ್ರಜ್ಞರು, ಕಾರ್ಮಿಕರನ್ನು ಬಳಸಿಕೊಂಡು ಸಿನಿಮಾ ಮಾಡಬೇಕು ಎಂಬ ನಿಯಮಗಳಿದ್ದವು. ಆದರೆ ಜಿಎಸ್‌ಟಿ ಜಾರಿ ಬಳಿಕ ಬದಲಾಯಿತು. ಕೇಂದ್ರದ ವ್ಯಾಪ್ತಿಗೆ ಹೋದ ಮೇಲೆ ತೆರಿಗೆ ವಿನಾಯಿತಿ ಕಳೆದುಕೊಂಡೆವು” ಎಂದು ಹೇಳಿದರು.

“ಒಬ್ಬ ನಿರ್ಮಾಪಕ ಕಷ್ಟಪಟ್ಟು 10 ಕೋಟಿ ರೂ. ವೆಚ್ಚದಲ್ಲಿ ಒಂದು ಸಿನಿಮಾ ಮಾಡುತ್ತಾನೆ ಎಂದುಕೊಳ್ಳೋಣ. ಅದರಲ್ಲಿ 18 % ಜಿಎಸ್‌ಟಿ ಎಂದರೆ 1 ಕೋಟಿ 80 ಲಕ್ಷ ರೂ.ಗಳಾಗುತ್ತದೆ. ಬಡ್ಡಿ ಮೇಲೆ ಹಣ ತಂದಿರುತ್ತಾರೆ. ಹೀಗಿರುವಾಗ 1 ಕೋಟಿ 80 ಲಕ್ಷ ರೂ. ಮೊದಲೇ ಕಟ್ಟಿ ಎನ್ನುವುದು ಬಹಳ ಭಾರವಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಅತಿ ಹೆಚ್ಚು ಸಿನಿಮಾ ಬಿಡುಗಡೆ ಮಾಡಿದ ರಾಜ್ಯ ನಮ್ಮದು. ಒಂದು ರಾಜ್ಯಕ್ಕೆ ತೆರಿಗೆ ವಿನಾಯಿತಿ ನೀಡಿದರೆ ಮತ್ತೊಂದು ರಾಜ್ಯವೂ ಕೇಳುತ್ತದೆ ಎಂಬ ವಾದವನ್ನು ಮಂಡಿಸುತ್ತಾರೆ. ಆದರೆ ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದರು.

ಇದನ್ನೂ ಓದಿರಿ: ಪೊಲೀಸ್ ವ್ಯವಸ್ಥೆಯ ವಾಸ್ತವಗಳತ್ತ ತಮಿಳು, ಮಲಯಾಳಂ ಚಿತ್ರರಂಗ

ವಿನಾಯಿತಿ ನೀಡಿದರೆ ಪ್ರೇಕ್ಷಕರು ಹೆಚ್ಚುತ್ತಾರೆ: ಕಿಶೋರ್‌‌ ಪತ್ತಿಕೊಂಡ

ಪುನೀತ್‌ ರಾಜ್‌ಕುಮಾರ್‌ ಅವರ ಕೊನೆಯ ಸಿನಿಮಾ ‘ಜೇಮ್ಸ್‌’ನ ನಿರ್ಮಾಪಕ ಹಾಗೂ ಹಂಚಿಕೆದಾರರೂ ಆಗಿರುವ ಕಿಶೋರ್ ಪತ್ತಿಕೊಂಡ ಮಾತನಾಡಿ, “ಕನ್ನಡ ಚಿತ್ರರಂಗ ಬೆಳೆಯುತ್ತಿದೆ. ಸರ್ಕಾರ ತೆರಿಗೆ ವಿನಾಯಿತಿ ನೀಡಿದರೆ ಬಹಳ ಅನುಕೂಲವಾಗುತ್ತದೆ. ಮೊದಲೆಲ್ಲ ತೆರಿಗೆ ಇರಲಿಲ್ಲ. ಆದರೆ ಈಗ ಪ್ರೇಕ್ಷಕರಿಗೂ ಭಾರವಾಗುತ್ತಿದೆ. ತೆರಿಗೆ ವಿನಾಯಿತಿ ನೀಡಿದರೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

ನಿರ್ಮಾಪಕ ಕಿಶೋರ್‌ ಪತ್ತಿಕೊಂಡ

“ಚಿತ್ರಮಂದಿರಗಳಿಂದ ಬರುವ ಆದಾಯ ಹೆಚ್ಚಾದರೆ, ಮೂವತ್ತು ದಿನಕ್ಕೆ ಓಟಿಟಿಗೆ ಹೋಗುವ ಸಿನಿಮಾ ಐವತ್ತು ದಿನಕ್ಕೆ ಹೋಗುತ್ತದೆ. ದುರಾದೃಷ್ಟವಶಾತ್‌ ಬಹಳಷ್ಟು ಚಿತ್ರಮಂದಿರಗಳು ಮುಚ್ಚಿಹೋಗುತ್ತಿವೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಅನುಭವವೇ ಬೇರೆ. ಇಂದು ಚಿತ್ರಮಂದಿರಗಳು ಉಳಿಯಬೇಕಾದರೆ ತೆರಿಗೆ ವಿನಾಯಿತಿ ಅಗತ್ಯವಿದೆ. ಚಾರ್ಲಿಗೆ ಎಸ್‌ಜಿಎಸ್‌ಟಿ ವಿನಾಯಿತಿ ನೀಡಿದ್ದು ಖುಷಿ ತಂದಿದೆ. ಇದೇ ಕ್ರಮವನ್ನು ಎಲ್ಲ ಸಿನಿಮಾಗಳಿಗೆ ಅನ್ವಯಿಸುವ ಅಗತ್ಯವಿದೆ” ಎಂದು ಮನವಿ ಮಾಡಿದರು.

ತೆರಿಗೆ ವಿನಾಯಿತಿ ವಿಸ್ತರಿಸಿ: ಮಂಸೋರೆ

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಮಂಸೋರೆಯವರು, “ತೆರಿಗೆ ವಿನಾಯಿತಿ ನೀಡಿದರೆ ಮಧ್ಯಮ ಹಾಗೂ ಕಡಿಮೆ ಬಜೆಟ್ ಸಿನಿಮಾ ಮೇಕರ್ಸ್‌‌ಗಳಿಗೆ ಬಹಳ ಅನುಕೂಲವಾಗುತ್ತದೆ. ಚಾರ್ಲಿಗೆ ಕೊಟ್ಟಿರುವ ವಿನಾಯಿತಿಯನ್ನು ಎಲ್ಲ ಸಿನಿಮಾಗಳಿಗೆ ವಿಸ್ತರಿಸಬೇಕು” ಎಂದು ಆಗ್ರಹಿಸಿದರು.

“ಜಿಎಸ್‌ಟಿ ಬಂದ ಮೇಲೆ ಕೇಂದ್ರದ ಹಿಡಿತಕ್ಕೆ ಸಿಲುಕಿ ರಾಜ್ಯ ಸರ್ಕಾರಗಳ ಕೈಕಾಲು ಕತ್ತರಿಸಿದಂತಾಗಿದೆ. ಒಟ್ಟಾಗಿ ಕೂತು ಮಾತನಾಡಿ, ವಿನಾಯಿತಿ ನೀಡಬೇಕಾಗಿದೆ. ಒಳ್ಳೆಯ ಸಿನಿಮಾ ಯಾವುದೆಂದು ವಾರ್ತಾ ಇಲಾಖೆ ನಿರ್ಧರಿಸಬೇಕಿದೆ. ಹಳೆಯ ಪದ್ಧತಿಯನ್ನು ಜಾರಿಗೆ ತರಬೇಕಾಗಿದೆ” ಎಂದು ಹೇಳಿದರು.

ನಿರ್ದೇಶಕ ಮಂಸೋರೆ

ಅಭಿಪ್ರಾಯ ನೀಡಲು ನಿರಾಕರಿಸಿದ ರಾಕ್‌ಲೈನ್‌

ಕನ್ನಡ ಚಿತ್ರರಂಗದ ನಟ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್ ಅವರು ಈ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. “ತೆರಿಗೆ ವಿನಾಯಿತಿ ಬಗ್ಗೆ ಕಮೆಂಟ್‌ ಮಾಡಲು ಹೋಗಲ್ಲ” ಎಂದು ಹೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...