ಮಾನವರ ಮೇಲೆ ಪೈಪುಗಳ ಮೂಲಕ, ವಾಕ್-ಇನ್ ಸುರಂಗಮಾರ್ಗಗಳ ಮೂಲಕ ಸೋಂಕು ನಿವಾರಕ ಸಿಂಪಡಿಸುವುದನ್ನು ಎಲ್ಲೂ ಶಿಫಾರಸು ಮಾಡಲಾಗಿಲ್ಲ. ಆದರೂ ಎಲ್ಲಾ ಕಡೆ ಅವುಗಳನ್ನು ಸ್ಥಾಪಿಸಿದ್ದರೂ ಸಹ ನೀವು ಏಕೆ ಕ್ರಮ ಕೈಗೊಂಡಿಲ್ಲ ಎಂದು ಸರ್ಕಾರವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
ಹೀಗೆ ಔಷಧಿ ಸಿಂಪಡಣೆ ಮಾಡುವುದು ಮನುಷ್ಯನಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಾನಿಕಾರಕವಾಗಿದೆ ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ .ಸುಭಾಷ್ ರೆಡ್ಡಿ ಮತ್ತು ಎಂ.ಆರ್.ಶಾ ಅವರ ನ್ಯಾಯಪೀಠ ತಿಳಿಸಿದೆ.
ಕೊರೊನಾ ಸಂಕಷ್ಟದ ಸಮಯದಲ್ಲಿ ತಮ್ಮ ಊರುಗಳಿಗೆ ತೆರಳುತ್ತಿದ್ದ ವಲಸೆ ಕಾರ್ಮಿಕರ ಮೇಲೆ ಸೋಂಕು ನಿವಾರಕ ಔಷಧಿಯನ್ನು ಸಿಂಪಡಿಸಲಾಗಿತ್ತು. ಅಲ್ಲದೇ ಈಗ ಎಲ್ಲಾ ಕಚೇರಿಗಳು, ಕೆಲಸದ ಸ್ಥಳಗಳು, ರಸ್ತೆಗಳಲ್ಲಿ ಜನರ ಮೇಲೆ ಔಷಧಿ ಸಿಂಪಡಿಸಲಾಗುತ್ತಿದೆ.
ಸೋಂಕು ನಿವಾರಕ ಸಿಂಪಡಣೆ ನಿಲ್ಲುಸುವಂತೆ ಶೀಘ್ರದಲ್ಲೇ ಅಗತ್ಯ ಆದೇಶಗಳನ್ನು ಹೊರಡಿಸಲಾಗುತ್ತದೆ ಎಂದು ಸಾಲಿಟರಿ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದರು.

ಸೋಂಕುನಿವಾರಕಕ್ಕಾಗಿ ರಾಸಾಯನಿಕ ಸೋಂಕುನಿವಾರಕಗಳನ್ನು ಸಿಂಪಡಿಸುವುದು ಸೇರಿ ಸೋಂಕುಗಳ ಸುರಂಗಗಳ ಬಳಕೆ, ಸ್ಥಾಪನೆ, ಉತ್ಪಾದನೆ, ಜಾಹೀರಾತುಗಳನ್ನು ನಿಷೇಧಿಸಲು ಕೋರಿರುವ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠ ಈ ವಿಚಾರಗಳನ್ನು ಪ್ರಸ್ತಾಪಿಸಿದೆ.
ಇದನ್ನೂ ಓದಿ: ಯಾವುದೇ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿಲ್ಲ, ವೈದ್ಯನಾಗಿಯೇ ಉಳಿಯುವೆ: ಡಾ.ಕಫೀಲ್ ಖಾನ್
ನ್ಯಾಯಾಲಯದ ನೋಟಿಸ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅಫಿಡವಿಟ್ನಲ್ಲಿ, ವಾಕ್-ಇನ್ ಸುರಂಗಗಳ ಮೂಲಕ ಜನರು ಅಂತಹ ರಾಸಾಯನಿಕಗಳಿಗೆ ಒಡ್ಡಿಕೊಳ್ಳುತ್ತಾರೆ ಎಂಬ ವರದಿಗಳನ್ನು ಬಂದ ನಂತರ ಸಲಹಾ ಸಮಿತಿ ಜೊತೆಗೆ ಏಪ್ರಿಲ್ 8 ರಂದು ಸಭೆ ನಡೆಸಲಾಗಿದೆ. ಜೊತೆಗೆ ಮಾನವರ ಮೇಲೆ ಸೋಂಕು ನಿವಾರಕಗಳನ್ನು ಸಿಂಪಡಿಸುವುದನ್ನು ಯಾವುದೇ ಸಂದರ್ಭದಲ್ಲೂ ಶಿಫಾರಸು ಮಾಡುವುದಿಲ್ಲ ಮತ್ತು ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಾನಿಕಾರಕವಾಗಿದೆ ಎಂದು ಸಮಿತಿ ಹೇಳಿದೆ.
ರಾಸಾಯನಿಕಗಳು ಮಾನವನ ಚರ್ಮಕ್ಕೆ ಹಾನಿಕಾರಕ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಯಾವುದೇ ರಾಸಾಯನಿಕ ಸೋಂಕು ನಿವಾರಕವನ್ನು ಬಾಹ್ಯವಾಗಿ ಸಿಂಪಡಿಸುವುದರಿಂದ ಮೊದಲೇ ವ್ಯಕ್ತಿಯ ದೇಹಕ ಪ್ರವೇಶಿಸಿದ ವೈರಸ್ ಅನ್ನು ಕೊಲ್ಲುವುದಿಲ್ಲ ಎಂದು ಸಮಿತಿ ಏಪ್ರಿಲ್ 18 ರಂದು ನೀಡಿದ ವರದಿಯನ್ನು ನ್ಯಾಯಾಲಯದಲ್ಲಿ ಸಚಿವಾಲಯ ಪ್ರಸ್ತುತಪಡಿಸಿತು.
ಆದರೂ ಎಲ್ಲೆಡೆ ಸೋಂಕು ನಿವಾರಕಗಳನ್ನು ಅಳವಡಿಸಲಾಗುತ್ತಿದೆ. ಸರ್ಕಾರ ಏಕೆ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.


