‘ಕಾಂತಾರ’ ಮತ್ತು ‘ಪುಷ್ಪ’ ಸಿನಿಮಾ ಕುರಿತು ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಆಕ್ಷೇಪ ವ್ಯಕ್ತಪಡಿಸಿರುವುದನ್ನು ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಟೀಕಿಸಿದ ಬಳಿಕ ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ.
ಟ್ವಿಟರ್ನಲ್ಲಿ ವಿವೇಕ್ ಅಗ್ನಿಹೋತ್ರಿ ಮತ್ತು ಅನುರಾಗ್ ಕಶ್ಯಪ್ ನಡುವೆ ಮಾತಿನ ಸಮರ ನಡೆದಿದೆ.
ಅನುರಾಗ್ ಕಶ್ಯಪ್ ಅವರ ಸಂದರ್ಶನದ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿರುವ ವಿವೇಕ್ ಅಗ್ನಿಹೋತ್ರಿ, “ಬಾಲಿವುಡ್ನ ಏಕೈಕ ಮಾನ್ಯರ (ಮಿಲಾರ್ಡ್) ಅಭಿಪ್ರಾಯಗಳನ್ನು ನಾನು ಸಂಪೂರ್ಣವಾಗಿ ಒಪ್ಪುವುದಿಲ್ಲ. ನೀವು ಒಪ್ಪುತ್ತೀರಾ?” ಎಂದು ಬರೆದುಕೊಂಡಿದ್ದಾರೆ.
I totally totally totally disagree with the views of Bollywood’s one & only Milord.
Do you agree? pic.twitter.com/oDdAsV8xnx
— Vivek Ranjan Agnihotri (@vivekagnihotri) December 13, 2022
ಅಗ್ನಿಹೋತ್ರಿ ಹಂಚಿಕೊಂಡಿರುವ ಸ್ಕ್ರೀನ್ಶಾಟ್ನಲ್ಲಿ, “ಕಾಂತಾರ ಮತ್ತು ಪುಷ್ಪದಂತಹ ಚಲನಚಿತ್ರಗಳು ಉದ್ಯಮವನ್ನು ನಾಶಪಡಿಸುತ್ತಿವೆ: ಅನುರಾಗ್ ಕಶ್ಯಪ್” ಎಂದಿದೆ.
ಅಗ್ನಿಹೋತ್ರಿ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ ‘ಗ್ಯಾಂಗ್ಸ್ ಆಫ್ ವಾಸೇಪುರ್’ ಖ್ಯಾತಿಯ ನಿರ್ದೇಶಕ ಅನುರಾಗ್, “ಸರ್, ಇದು ನಿಮ್ಮ ತಪ್ಪಲ್ಲ. ನಿಮ್ಮ ಸಿನಿಮಾಗಳ ಸಂಶೋಧನೆಯು ನನ್ನ ಸಂಭಾಷಣೆಗಳ ಮೇಲಿನ ನಿಮ್ಮ ಟ್ವೀಟ್ಗಳಂತೆಯೇ ಇದೆ. ನಿಮ್ಮ ಸ್ಥಿತಿಯಂತೆಯೇ ನಿಮ್ಮ ಮಾಧ್ಯಮದ ಸ್ಥಿತಿಯೂ ಇರುತ್ತದೆ. ಮುಂದಿನ ಬಾರಿ ಸ್ವಲ್ಪ ಗಂಭೀರವಾದ ಸಂಶೋಧನೆ ಮಾಡಿರಿ” ಎಂದು ಕಿವಿಹಿಂಡಿದ್ದಾರೆ.
Sir aapki galti nahin hai, aap ki filmon ki research bhi aisi hi hoti hai jaise aapki mere conversations pe tweet hai. Aapka aur aapki media ka bhi same haal hai. Koi nahin next time thoda serious research kar lena .. https://t.co/eEHPrUeH9u
— Anurag Kashyap (@anuragkashyap72) December 14, 2022
‘ದಿ ಕಾಶ್ಮೀರ್ ಫೈಲ್ಸ್’ ಕುರಿತ ನಾಲ್ಕು ವರ್ಷಗಳ ಸಂಶೋಧನಾ ಕಾರ್ಯವು ಸುಳ್ಳು ಎಂದು ಸಾಬೀತುಪಡಿಸಲು ಅಗ್ನಿಹೋತ್ರಿ ಇತ್ತೀಚೆಗೆ ಹೇಳಿದ್ದರು. ‘ಕಾಶ್ಮೀರ್ಫೈಲ್ಸ್ ಒಂದು ಪ್ರೊಪಗಾಂಡ ಸಿನಿಮಾ’ ಎಂದು ಗೋವಾ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ನಲ್ಲಿ ಖ್ಯಾತ ನಿರ್ದೇಶಕ, ಫಿಲ್ಮ್ ಫೆಸ್ಟಿವಲ್ನ ಜ್ಯೂರಿ ನಡಾವ್ ಲಾಪಿಡ್ ಟೀಕಿಸಿದ್ದ ಬಳಿಕ ವಿವಾದ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ವಾಕ್ಸಮರ ಏರ್ಪಟ್ಟಿದ್ದು, ಇತ್ತೀಚೆಗೆ ಬಿಡುಗಡೆಯಾದ ಅನುರಾಗ್ ಕಶ್ಯಪ್ ಅವರ ‘ದೋಬಾರಾ’ ಚಲನಚಿತ್ರದ ಮೇಲೆ ಪರೋಕ್ಷವಾಗಿ ಟೀಕೆಯನ್ನು ವಿವೇಕ್ ಮಾಡಿದ್ದಾರೆ.
“ಮುಂದಿನ ಬಾರಿ, ಗಂಭೀರ ಸಂಶೋಧನೆ ಮಾಡಿ” ಎಂದು ಅನುರಾಗ್ ಕಶ್ಯಪ್ ಅವರು ವಿವೇಕ್ ಅಗ್ನಿಹೋತ್ರಿಗೆ ಬುದ್ಧಿಮಾತು ಹೇಳಿದ್ದಾರೆ.
ಇದನ್ನೂ ಓದಿರಿ: ಪಡುಕೋಣೆಯವರ ‘ಪಠಾಣ್’ ಸಿನಿಮಾ ಬ್ಯಾನ್ ಮಾಡುವುದಾಗಿ ಮಧ್ಯಪ್ರದೇಶದ ಗೃಹ ಸಚಿವ ಬೆದರಿಕೆ
ಟ್ವಿಟ್ಟರ್ ವಾರ್ನಲ್ಲಿ ಒಂದಿಷ್ಟು ಮಂದಿ ಅಗ್ನಿಹೋತ್ರಿಯವರನ್ನು ಬೆಂಬಲಿಸಿದರೆ, ಮತ್ತಷ್ಟು ಮಂದಿ ಅನುರಾಗ್ ಅವರನ್ನು ಬೆಂಬಲಿಸಿದ್ದಾರೆ.
ಅಗ್ನಿಹೋತ್ರಿ ಅವರು ತಮ್ಮ ಮುಂದಿನ ಚಿತ್ರ ‘ದಿ ವ್ಯಾಕ್ಸಿನ್ ವಾರ್’ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ, ಇದು ಮುಂದಿನ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಥಿಯೇಟರ್ಗಳಿಗೆ ಬರಲಿದೆ.
ಕಶ್ಯಪ್ ಇತ್ತೀಚೆಗೆ ಸಸ್ಪೆನ್ಸ್ ಥ್ರಿಲ್ಲರ್ ‘ದೋಬಾರಾ’ವನ್ನು ನಿರ್ದೇಶಿಸಿದ್ದಾರೆ. ಇದು ತಾಪ್ಸಿ ಪನ್ನು ಮತ್ತು ಪಾವೈಲ್ ಗುಲಾಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಪ್ರೇಕ್ಷಕರನ್ನು ಮೆಚ್ಚಿಸಲು ವಿಫಲವಾಯಿತು.
‘ಕಾಶ್ಮೀರ್ ಫೈಲ್ಸ್’ಗೆ ಅಂತರಾಷ್ಟ್ರೀಯ ಮಟ್ಟದ ನಿರ್ದೇಶಕರ ಟೀಕೆ
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವು ಪ್ರೊಪಗಂಡಾ ಪ್ರೇರಿತ, ಅಶ್ಲೀಲ ಸಿನಿಮಾವಾಗಿದೆ ಎಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ತೀರ್ಪುಗಾರರ ಮುಖ್ಯಸ್ಥ, ಇಸ್ರೇಲ್ ಚಿತ್ರ ನಿರ್ದೇಶಕ ನಾದವ್ ಲ್ಯಾಪಿಡ್ ಹೇಳಿದ್ದರು. ಇದನ್ನು ಚಲನಚಿತ್ರೋತ್ಸವದ ಸಹ ತೀರ್ಪುಗಾರರು ಬೆಂಬಲಿಸಿದ್ದರು.
ಸುದಿಪ್ತೊ ಸೆನ್ ಹೊರತುಪಡಿಸಿ ಉಳಿದ ಮೂವರು ಜೂರಿಗಳಾದ ಪಾಸ್ಕೇಲ್ ಚವಾನ್ಸ್, ಜೇವಿಯರ್ ಅಂಗುಲೋ ಬಾರ್ಟುರೆನ್ ಸಹ ನಾದವ್ ಮತ್ತು ಜಿಂಕೊ ಗೊಟೆಹ್ ಲ್ಯಾಪಿಡ್ ಪರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದರು.
IFFIಯ ಐವರು ತೀರ್ಪುಗಾರರಲ್ಲಿ ಒಬ್ಬರಾದ BAFTA ವಿಜೇತೆ ಜಿಂಕೊ ಗೊಟೆಹ್ ಟ್ವೀಟ್ ಮಾಡಿ, “53ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ- ಈ ಚಿತ್ರೋತ್ಸವದ ಪ್ರಶಸ್ತಿ ಪಟ್ಟಿಗೆ 15ನೇ ಚಿತ್ರವಾಗಿ ಕಾಶ್ಮೀರ್ ಫೈಲ್ಸ್ ಬಂದಿದ್ದನ್ನು ನೋಡಿ ನಮಗೆ ಆಘಾತವಾಗಿದೆ. ಇದರಿಂದ ನಾವು ವಿಚಲಿತಗೊಂಡಿದ್ದೇವೆ. ಆ ಚಿತ್ರವು ಪ್ರೊಪಗಂಡ ಪ್ರೇರಿತ, ಅಶ್ಲೀಲ ಚಿತ್ರವಾಗಿದೆ. ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾ ವಿಭಾಗಕ್ಕೆ ಅದು ಸೂಕ್ತವಲ್ಲ ಎಂದು ಅನಿಸಿತು ಎಂದು ಬಹಿರಂಗವಾಗಿ ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತೇನೆ- ಎಂದು ತೀರ್ಪುಗಾರರ ಅಧ್ಯಕ್ಷ ನಾದವ್ ಲ್ಯಾಪಿಡ್ ಹೇಳಿದ್ದರು. ನಾವು ಅವರ ಹೇಳಿಕೆಗೆ ಬದ್ಧರಾಗಿದ್ದೇವೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದರು.