ಮತ್ತೊಮ್ಮೆ ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟಿದೆ. ಭಾರತದ ಗಡಿ ದಾಟಿ ಚೀನಿ ಸೈನಿಕರು ಒಳನುಗ್ಗಿದ್ದನ್ನು ಭಾರತದ ಸೈನಿಕರು ಹಿಮ್ಮೆಟ್ಟಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘರ್ಷ ಏರ್ಪಟ್ಟು ಹಲವು ಸೈನಿಕರಿಗೆ ಗಾಯಗಳಾಗಿವೆ. ಘಟನೆ ನಡೆದ ಎರಡು ದಿನಗಳ ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿದರೆ ಆಡಳಿತ ಪಕ್ಷ ಅದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ.
ಡಿಸೆಂಬರ್ 9 ರ ಶುಕ್ರವಾರದಂದು, ಅರುಣಾಚಲ ಪ್ರದೇಶದ ತವಾಂಗ್ನ ಯಾಂಗ್ಟ್ಸೆಯಲ್ಲಿನ ಲೈನ್ ಆಫ್ ಕಂಟ್ರೋಲ್ (ಎಲ್ಎಸಿ) ಬಳಿ ಚೀನೀ ಸೈನಿಕರು ಭಾರತದ ಭೂಪ್ರದೇಶ ಆಕ್ರಮಿಸಲು ಯತ್ನಿಸಿದ್ದಾರೆ. ಅವರು ಒಳನುಗ್ಗಿದ್ದಾಗ ಭಾರತೀಯ ಸೈನಿಕರು ಹಿಮ್ಮೆಟ್ಟಿಸಿದ್ದಾರೆ.
ಈ ಕುರಿತು ಸರ್ಕಾರ ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ಪ್ರತಿಪಕ್ಷಗಳು ಈ ಬಗ್ಗೆ ಪ್ರಶ್ನೆ ಎತ್ತಿವೆ. ಮುಖ್ಯವಾಗಿ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ‘ವಿಪಕ್ಷಗಳು ದೇಶ ಮತ್ತು ಸೇನೆಯ ಬೆಂಬಲಕ್ಕಿವೆ. ಆದರೆ ನಮ್ಮ ಸೈನಿಕರ ಕಾಳಜಿಯ ಬಗ್ಗೆ ಸರ್ಕಾರ ಮಾಹಿತಿ ನೀಡಬೇಕು. ಗಡಿಯಲ್ಲಿ ತಂಟೆ ನಿಲ್ಲಿಸುವಂತೆ ಚೀನಾದ ಮೇಲೆ ಒತ್ತಡ ಹೇರಬೇಕೆಂದು” ಒತ್ತಾಯಿಸಿದ್ದರು.
ಅಲ್ಲದೆ ಗಡಿ ಚರ್ಚೆಗೆ ಸದನದಲ್ಲಿ ಅವಕಾಶ ನೀಡಬೇಕೆಂದು ವಿಪಕ್ಷಗಳ ಸಭೆ ಕರೆದಿದ್ದರು. ಈ ಸಭೆಗೆ ಆಪ್ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ಸೇರಿ ಹಲವು ಪಕ್ಷಗಳು ಭಾಗವಹಿಸಿದ್ದವು.
ತದನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಮಾತನಾಡಿ, ಚೀನಿಯರು “ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸಲು ಪ್ರಯತ್ನಿಸಿದರು. ಆದರೆ ಭಾರತೀಯ ಸೇನಾ ಕಮಾಂಡರ್ಗಳ ಸಮಯೋಚಿತ ಹಸ್ತಕ್ಷೇಪದಿಂದಾಗಿ, ಚೀನಾದ ಸೈನಿಕರು ತಮ್ಮ ಸ್ಥಳಗಳಿಗೆ ಮರಳಿದರು. ಕಮಾಂಡರ್ಗಳ ಸಭೆಯಲ್ಲಿ ಇಂತಹ ಕ್ರಮಗಳಿಂದ ದೂರವಿರಿ ಮತ್ತು ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವಂತೆ ಚೀನೀಯರನ್ನು ಕೇಳಲಾಯಿತು. ಘಟನೆಯನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕವೂ ಪರಿಹರಿಸಲು ಯತ್ನಿಸಲಾಗುತ್ತಿದೆ” ಎಂದು ಹೇಳಿದ್ದರು.
ಈ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ, ಗಡಿಯಲ್ಲಿನ ಚೀನಾದ ಆಕ್ರಮಣದ ಬಗ್ಗೆ ಚರ್ಚೆ ನಡೆಸುವಂತೆ ವಿಪಕ್ಷಗಳು ಒತ್ತಾಯಿಸಿದವು. ಆದರೆ ಉಪಸಭಾಪತಿ ಹರಿವಂಶ್ ಅದಕ್ಕೆ ಆಸ್ಪದ ಕೊಡಲಿಲ್ಲ. ಹಾಗಾಗಿ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಸದ್ಯಸರು ಸಭಾತ್ಯಾಗ ಮಾಡಿದರು. ಅಲ್ಲದೆ ಎನ್ಸಿಪಿ, ಟಿಎಂಸಿ, ಆರ್ಜೆಡಿ, ಜೆಎಂಎಂ, ಶಿವಸೇನೆ, ಸಮಾಜವಾದಿ ಪಕ್ಷದ ಸಂಸದರು ಸಹ ಅಧಿವೇಶನ ಬಹಿಷ್ಕರಿದ್ದಾರೆ.
ಮೋದಿ ಸರ್ಕಾರ ಚರ್ಚೆಗೆ ಅವಕಾಶ ಮಾಡಿಕೊಡದಿರುವುದನ್ನು ಮಲ್ಲಿಕಾರ್ಜುನ ಖರ್ಗೆಯವರು ಕಟುವಾಗಿ ಟೀಕಿಸಿದ್ದಾರೆ. ಮೋದಿ ಸರ್ಕಾರದ “ಕೆಂಪು ಕಣ್ಣು” ಚೀನಾದ ಕನ್ನಡಕದಿಂದ ಮುಚ್ಚಲ್ಪಟ್ಟಿದೆ ಎಂದು ತೋರುತ್ತದೆ. ಭಾರತದ ಸಂಸತ್ತಿನಲ್ಲಿ ಚೀನಾದ ವಿರುದ್ಧ ಮಾತನಾಡಲು ಅವಕಾಶವಿಲ್ಲವೇ? ಎಂದು ಇಂದು ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಮೋದಿ ಸರ್ಕಾರ ಕೆಂಪು ಕಣ್ಣು ಬಿಟ್ಟು ಚೀನಾವನ್ನು ಎದುರಿಸುತ್ತಿದೆ ಎನ್ನುವ ಬಿಜೆಪಿ ಹೇಳಿಕೆಯನ್ನು ಖರ್ಗೆಯವರು ವ್ಯಂಗ್ಯವಾಡಿದ್ದಾರೆ.
ऐसा प्रतीत होता है कि मोदी सरकार की “लाल आँख” पर चीनी चश्मा लग गया है।
क्या भारतीय संसद में चीन के विरूद्ध बोलने की अनुमति नहीं है ?
— Mallikarjun Kharge (@kharge) December 15, 2022
2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ಮತ್ತು ಲಡಾಖ್ನ ಪಾಂಗಾಂಗ್ ಸರೋವರದ ಬಳಿ ಭಾರತ ಮತ್ತು ಚೀನಿ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಅಲ್ಲಿ ಮತ್ತು ಅರುಣಾಚಲ ಪ್ರದೇಶದಲ್ಲಿ ಗಡಿ ಪ್ರವೇಶಿಸಿರುವ ಚೀನಾ ಸೇನೆ ಕೆಲ ಹಳ್ಳಿಗಳನ್ನು, ಸೇತುವೆಗಳನ್ನು ನಿರ್ಮಾಣ ಮಾಡಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಮತ್ತೊಂದು ಗ್ರಾಮ ನಿರ್ಮಿಸಿರುವ ಚೀನಾ!