Homeಅಂಕಣಗಳುಹಿಂದುತ್ವಕ್ಕೆ ವಿರುದ್ಧವಾದ ಧ್ರುವೀಕರಣಕ್ಕೆ ನಾಂದಿ ಹಾಡಿದ ಚುನಾವಣಾ ಫಲಿತಾಂಶ

ಹಿಂದುತ್ವಕ್ಕೆ ವಿರುದ್ಧವಾದ ಧ್ರುವೀಕರಣಕ್ಕೆ ನಾಂದಿ ಹಾಡಿದ ಚುನಾವಣಾ ಫಲಿತಾಂಶ

- Advertisement -
- Advertisement -

ನರೇಂದ್ರ ಮೋದಿಯವರು ಎರಡನೇ ಬಾರಿಗೆ ಭಾರಿ ಬಹುಮತದಲ್ಲಿ ಪ್ರಧಾನಿಯಾದ ನಂತರ ಇನ್ನು ಮಂದೆ ಬಿಜೆಪಿ ಪಕ್ಷಕ್ಕೆ ಸೋಲಿನ ಆಯ್ಕೆಯೇ ಇಲ್ಲ ಮತ್ತು ವಿರೋಧ ಪಕ್ಷಗಳ ಸಂಖ್ಯಾಬಲ ಹಾಗೂ ಜಂಘಾಬಲವೆರಡನ್ನೂ ಉಡುಗಿಸುತ್ತೇವೆಂಬ ಅಬ್ಬರದಲ್ಲಿ ತೇಲುತ್ತಿದ್ದ ಬಿಜೆಪಿಯನ್ನು ಹಲವು ರಾಜ್ಯಗಳು ಚುನಾವಣೆಗಳಲ್ಲಿ ಸೋಲಿಸಿದ್ದರೂ ಕರ್ನಾಟಕದ ಚುನಾವಣಾ ಫಲಿತಾಂಶ ಕೆಲವು ಕಾರಣಗಳಿಗೆ ಮಹತ್ವದ್ದಾಗಿದೆ. 2021ರಲ್ಲಿ ಕೇರಳದಲ್ಲಿ ಬಿಜೆಪಿ ಇದೇ ರೀತಿಯ ಅಬ್ಬರದ ಪ್ರಚಾರ ಕೈಗೊಂಡಿದ್ದರೂ ಅಲ್ಲಿ ಶೂನ್ಯ ಸಂಪಾದನೆ ಮಾಡಿತ್ತು. ಹಿಂದಿನ ಅವಧಿಯಲ್ಲಿ ಗಳಿಸಿದ್ದ ಒಂದು ಸ್ಥಾನವನ್ನೂ ಕಳೆದುಕೊಂಡಿತ್ತು. ಹಾಗೆಯೆ ಅದೇ ವರ್ಷ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಚುನಾವೆಣೆಗಳಲ್ಲೂ ಬಿಜೆಪಿ ಅಬ್ಬರಿಸಿದ್ದಕ್ಕೂ ಮತ್ತು ಅದು ಗಳಿಸಿದ ಸ್ಥಾನಗಳಗೂ ಅಜಗಜಾಂತರ ವ್ಯತ್ಯಾಸವಿತ್ತು. ಈಗ 2023 ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು 2018ಕ್ಕೆ ಹೋಲಿಸಿದರೆ ಬಿಜೆಪಿ ಪಕ್ಷ ದಯನೀಯ ಸೋಲು ಕಂಡಿದೆ. ಇಲ್ಲಿ ಉದಾಹರಿಸಿದ ರಾಜ್ಯಗಳಿಗೂ ಕರ್ನಾಟಕದ ಸೋಲಿಗೂ ಇರುವ ಮುಖ್ಯ ವ್ಯತ್ಯಾಸವೆಂದರೆ ಆ ರಾಜ್ಯಗಳಲ್ಲಿ ಬಿಜೆಪಿ ಇನ್ನೂ ನೆಲೆ ಕಂಡಿರಲಿಲ್ಲ ಅಥವಾ ಬೀಡುಬಿಟ್ಟಿರಲಿಲ್ಲ. ಅದಕ್ಕೆ ವಿರುದ್ಧವಾಗಿ ಕರ್ನಾಟಕದಲ್ಲಿ 2018ರಲ್ಲಿ ಬಿಜೆಪಿ ಪಕ್ಷ ಸುಮಾರು 36% ಮತ ಹಂಚಿಕೆ ಪ್ರಮಾಣದೊಂದಿಗೆ 104 ಸ್ಥಾನಗಳನ್ನು ಗಳಿಸಿಕೊಂಡಿತ್ತು. ನಂತರ 2019ರ ಆಪರೇಷನ್ ಕಮಲದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮತ್ತಷ್ಟು ಸಚಿವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಬಹುಮತವನ್ನು ಕೂಡ ಪಡೆದುಕೊಂಡು (ಆಗಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿ) ಸರ್ಕಾರ ರಚಿಸಿತ್ತು. 2023ರಲ್ಲಿ ತನ್ನ ಹಿಂದಿನ ಮತ ಹಂಚಿಕೆ ಪ್ರಮಾಣ 36%ಅನ್ನು ಉಳಿಸಿಕೊಂಡಿದ್ದರೂ ಗೆದ್ದ ಸೀಟುಗಳ ಸಂಖ್ಯೆ 66ಕ್ಕೆ ಕುಸಿದಿದೆ. ಇದು ಮೇಲ್ನೋಟಕ್ಕೇ ನಮಗೆ ತಿಳಿಸುವುದೇನೆಂದರೆ ಬಿಜೆಪಿಯ ವಿರುದ್ಧ ಮತ್ತು ಬಿಜೆಪಿ ಪ್ರತಿನಿಧಿಸುವ ಹಿಂದುತ್ವದ ವಿರುದ್ಧದ ವೋಟುಗಳು ಧ್ರುವೀಕರಣಗೊಂಡಿವೆ ಎಂದು. ಈ ಮತಗಳನ್ನು ತನ್ನೆಡೆಗೆ ಕ್ರೋಢೀಕರಿಸಿಕೊಳ್ಳುವುದರಲ್ಲಿ ಕಾಂಗ್ರೆಸ್ ಸಫಲವಾದಂತೆ ಕಾಣುತ್ತದೆ. ಹಿಂದೆ 2018ರಲ್ಲಿ ಗಳಿಸಿದ್ದ 38% ವೋಟ್ ಶೇರ್‌ನಿಂದ ಕಾಂಗ್ರೆಸ್ ಈ ಚುನಾವಣೆಯಲ್ಲಿ 42.9% ಮತ ಹಂಚಕೆ ಪ್ರಮಾಣವನ್ನು ಪಡೆದದೆ. ಇದು ಕಾಂಗ್ರೆಸ್ ಗೆದ್ದ ಸ್ಥಾನಗಳನ್ನು 78ರಿಂದ 135ಕ್ಕೆ ಏರಿಸಿದೆ!

ಭಜರಂಗ ದಳ ನಿಷೇಧ ಕೂಡ ಈ ರಿವರ್ಸ್ ಪೋಲರೈಸೇಷನ್‌ಗೆ ಸಹಕರಿಸಿತೇ?

ಇಂತಹ ಪ್ರಶ್ನೆಯೊಂದಕ್ಕೆ ಉತ್ತರ ಪಡೆಯಲು ಮತ ಹಂಚಿಕೆಯ ಇನ್ನೂ ಆಳವಾದ ವಿಶ್ಲೇಷಣೆ ಅಗತ್ಯವಿದ್ದರೂ ಮತದಾನಕ್ಕೂ ಮುಂಚಿತವಾಗಿ ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಭಜರಂಗ ದಳ ನಿಷೇಧದ ಪ್ರಸ್ತಾಪದ ಕಾರಣಕ್ಕೆ ಬಂದಂತಹ ಪ್ರತಿಕ್ರಿಯೆಗಳನ್ನು ನೆನಪಿಸಿಕೊಳ್ಳಿ. ಆ ಸಮಯಕ್ಕಾಗಲೇ ಹಲವು ಒಪಿನಿಯನ್ ಸರ್ವೇಗಳ ಪ್ರಕಾರ ಕಾಂಗ್ರೆಸ್ ಪಕ್ಷಕ್ಕೆ 115-135 ಸ್ಥಾನಗಳು ಬರಲಿವೆ ಎಂಬ ಅಂದಾಜಿತ್ತು. ಪ್ರಣಾಳಿಕೆ ಬಿಡುಗಡೆಯ ನಂತರ ಭಜರಂಗ ದಳದ ಸದಸ್ಯರು ಶುರು ಮಾಡಿದ ಅಭಿಯಾನದಿಂದ ಹಾಗೂ ಮೋದಿ ತಮ್ಮ ಪ್ರತಿ ಭಾಷಣದಲ್ಲಿಯೂ ಭಜರಂಗ ಬಲಿಯನ್ನು ಇನ್ವೋಕ್ ಮಾಡಲು ಆರಂಭಿಸಿದ್ದರಿಂದ ಕಾಂಗ್ರೆಸ್‌ಗೆ ಸುಮಾರು 10-15 ಸ್ಥಾನಗಳು ಕುತ್ತಾಗಲಿವೆ ಎಂಬ ವಿಶ್ಲೇಷಣೆ ಎಲ್ಲೆಡೆ ಕೇಳಿಬಂದಿತ್ತು. ಆದರೆ ಈ ಎಪಿಸೋಡ್ ಬಿಜೆಪಿಗೆ ಸಹಾಯ ಮಾಡಿತು ಅನ್ನುವುದನ್ನು ಫಲಿತಾಂಶಗಳು ಸುಳ್ಳು ಮಾಡಿದವು. ಈ ಊಹೆಗೆ ವಿರುದ್ಧವಾಗಿ ಕಾಂಗ್ರೆಸ್‌ಗೆ ಸ್ಪಷ್ಟ ಮ್ಯಾಂಡೇಟ್ ಕೊಡಬೇಕು ಅನ್ನುವ ಕಾರಣಕ್ಕೆ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಮುದಾಯದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ನಿರ್ಣಾಯಕವಾಗಿ ಮತ ನೀಡಿರುವುದನ್ನು ಕಾಣಬಹುದಾಗಿದೆ.

ಮಧ್ಯ ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ, ಬಾಬಾಬುಡನ್‌ಗಿರಿಯನ್ನು ಕೋಮುವಾದೀಕರಣಕ್ಕೆ ಯೋಜನೆಗೆ ಒಳಪಡಿಸಿ ಹಿಂದುತ್ವ ರಾಜಕೀಯದಲ್ಲಿ ಬೆಳೆದ ಸಿ.ಟಿ ರವಿ ಸೋಲಿಗೆ ಶರಣಾಗಿದ್ದಾರೆ. ಭಜರಂಗ ದಳ ಎಪಿಸೋಡ್ ಆದರೂ ಇವರನ್ನು ಕಾಪಾಡಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಇಡೀ ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಬಿಜೆಪಿ ಶೂನ್ಯ ಸಂಪಾದನೆ ಮಾಡಿದೆ. 2018ರಲ್ಲಿ ಐದರಲ್ಲಿ ನಾಲ್ಕನ್ನು ಗೆದ್ದುಕೊಂಡಿದ್ದ ಬಿಜೆಪಿ ಈ ಬಾರಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸೋಲನುಭವಿಸಿದೆ. ದಾವಣಗೆರೆಯಲ್ಲಿಯೂ ಕಳೆದ ಬಾರಿ ಗೆದ್ದಿದ್ದ 5 ಸ್ಥಾನಗಳಲ್ಲಿ ಒಂದನ್ನು ಮಾತ್ರ ಬಿಜೆಪಿಗೆ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಹೊನ್ನಾಳಿಯಲ್ಲಿ ಬಿಜೆಪಿಯ ಮಾಜಿ ಸಚಿವ ರೇಣುಕಾಚಾರ್ಯ ಸೋತಿದ್ದಾರೆ. ಮಾಜಿ ಮುಖ್ಯಮಮಂತ್ರಿ ಯಡಿಯೂರಪ್ಪನವರ ಜಿಲ್ಲೆಯಾದ ಶಿವಮೊಗ್ಗದಲ್ಲಿ ತನ್ನ ಸ್ಕೋರ್‌ಅನ್ನು 6ರಿಂದ ಮೂರಕ್ಕೆ ಇಳಿಸಿಕೊಂಡಿದೆ ಬಿಜೆಪಿ. ಯಡಿಯೂರಪ್ಪನವರು ಪ್ರತಿನಿಧಿಸುತ್ತಿದ್ದ ಶಿಕಾರಿಪುರದಲ್ಲಿ ಅವರ ಪುತ್ರ ವಿಜಯೇಂದ್ರ ಬಿಜೆಪಿಯಿಂದ ಸ್ಪರ್ಧಿಸಿ ಪಕ್ಷೇತರ ಅಭ್ಯರ್ಥಿ ನಾಗರಾಜಗೌಡ ಎದುರು ಕೇವಲ 10664 ಮತಗಳ ಅಂತರದಿಂದ ಪ್ರಯಾಸಕರ ಗೆಲುವು ಸಾಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮಾಜಿ ಸಚಿವ ಕಾಂಗ್ರೆಸ್‌ನ ಆಂಜನೇಯ ಪ್ರತಿನಿಧಿಸುವ ಮೀಸಲು ಕ್ಷೇತ್ರ ಹೊಳಲ್ಕೆರೆ ಒಂದನ್ನು ಬಿಟ್ಟು ಇನ್ನೆಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ನೆಲಕಚ್ಚಿದೆ. ಹೀಗೆ ಮಧ್ಯ ಕರ್ನಾಟಕದಲ್ಲಿ 2018ರಲ್ಲಿ ಗೆದ್ದಿದ್ದ 21 ಸೀಟುಗಳಿಂದ ಬಿಜೆಪಿ 5ಕ್ಕೆ ಕುಸಿದಿದೆ. ಹಿಂದುತ್ವ ಮತ್ತು ಲಿಂಗಾಯತ ಮತಗಳು ಹೆಚ್ಚಿರುವ ಈ ಪ್ರದೇಶದಲ್ಲಿ ಬಿಜೆಪಿಗೆ ವಿರುದ್ಧವಾಗಿ ಮತದಾರರು ನಿರ್ಣಾಯಕವಾಗಿ ಮತ ಚಲಾಯಿಸಿರುವುದನು ಸ್ಪಷ್ಟವಾಗಿ ಗಮನಿಸಬಹುದಾಗಿದೆ.

ಇದಕ್ಕಿಂತಲೂ ಈ ರಿವರ್ಸ್ ಪೋಲರೈಸೇಷನ್‌ಅನ್ನು ಮೈಸೂರು ಭಾಗದಲ್ಲಿ ಸ್ಪಷ್ಟವಾಗಿ ಕಾಣಬಹುದು. ಈ ಬಾರಿ ಬಿಜೆಪಿ ಪಕ್ಷ ಮಂಡ್ಯ-ಮೈಸೂರು-ಚಾಮರಾಜನಗರ-ರಾಮನಗರ-ಚನ್ನಪಟ್ಟಣ ಜಿಲ್ಲೆಗಳನ್ನು ಟಾರ್ಗೆಟ್ ಮಾಡಿದ್ದು ಸ್ಪಷ್ಟವಾಗಿತ್ತು. ಟಿಪ್ಪುವನ್ನು ಕೊಂದಿದ್ದು ಒಕ್ಕಲಿಗರ ಸಮುದಾಯದ ಉರಿಗೌಡ ಮತ್ತು ನಂಜೇಗೌಡ ಎಂಬ ಕಾಲ್ಪನಿಕ ಕಥೆ; ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡಿ ಸೋಮಣ್ಣನವರನ್ನು ಅವರ ವಿರುದ್ಧ ನಿಲ್ಲಿಸಿದ್ದು; ಅಮಿತ್ ಶಾ- ಯೋಗಿ ಆದಿತ್ಯನಾಥ್- ನರೇಂದ್ರ ಮೋದಿ ಈ ಪ್ರದೇಶದಲ್ಲಿ ಹೆಚ್ಚು ಪ್ರಚಾರ ಕೈಗೊಂಡಿದ್ದು; ಸಂಸದ ಪ್ರತಾಪ್ ಸಿಂಹ ಅವರ ಪ್ರಚೋದನಾಕಾರಿ ಮಾತು ಇತ್ಯಾದಿ ಸಂಗತಿಗಳನ್ನು ಇಲ್ಲಿ ಮೆಲುಕು ಹಾಕಬಹುದು. ಅದಕ್ಕೂ ಸ್ವಲ್ಪ ಹಿಂದಕ್ಕೆ ಹೋಗಿ ನೋಡಿದರೆ ಟಿಪ್ಪು ವಿರುದ್ಧ ಅನವರತ ಅಪಪ್ರಚಾರ, ಶ್ರೀರಂಗಪಟ್ಟಣದಲ್ಲಿ ಮಸೀದಿ ಜಾಗದಲ್ಲಿ ಮಂದಿರವಿದೆ ಎಂದು ಗುಲ್ಲೆಬ್ಬಿಸಿದ್ದು, ಹನುಮ ಜಯಂತಿಯ ಹೆಸರಿನಲ್ಲಿ ಗಲಾಟೆ-ಗಲಭೆಗಳಿಗೆ ಆಸ್ಪದ ನೀಡಿದ್ದು, ರಾಮನಗರದ ರಾಮದೇವರಬೆಟ್ಟದಲ್ಲಿ ದಕ್ಷಿಣದ ಅಯೋಧ್ಯೆಯನ್ನು ನಿರ್ಮಿಸುತ್ತೇವೆ ಎಂದು ಸಿ.ಎನ್ ಅಶ್ವತ್ಥ ನಾರಾಯಣ ಹೇಳಿದ್ದು, ತಮ್ಮ ಅವಧಿಯುದ್ದಕ್ಕೂ ಸಂಸದ ಪ್ರತಾಪ್ ಸಿಂಹ ದ್ವೇಷದ ಮಾತುಗಳನ್ನು ಆಡಿಕೊಂಡು ಬಂದದ್ದು- ಹೀಗೆ ಕಳೆದ ನಾಲ್ಕೈದು ವರ್ಷಗಳಿಂದಲೂ ಒಕ್ಕಲಿಗ ಹಾಗೂ ದಲಿತ ಸಮುದಾಯಗಳ ಮತದಾರರು ಹೆಚ್ಚಿರುವ ಈ ಭಾಗವನ್ನು ಹೆಚ್ಚು ಕಮ್ಯುನಲೈಸ್ ಮಾಡಲು ಬಿಜೆಪಿ ಪಕ್ಷ ಪ್ರಯತ್ನಿಸುತ್ತಲೇ ಬಂದಿತ್ತು. ಈ ಭಾಗಗಳಲ್ಲಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುತ್ತಿದ್ದ ಜೆಡಿಎಸ್‌ಗೆ ಭಾರಿ ನಷ್ಟ ಉಂಟಾಗಿರಲು ಕಾರಣ, ಜನಸಾಮಾನ್ಯರಲ್ಲಿ ಒಡಕು ಮೂಡಿಸುವ ಹಿಂದುತ್ವ ಅಭಿಯಾನದ ವಿರೋಧಿ ವೋಟುಗಳು ಕನ್ಸಾಲಿಡೇಟ್ ಆಗಿ ಕಾಂಗ್ರೆಸ್‌ಗೆ ಬಿದ್ದಿರುವುದು. ಜೆಡಿಎಸ್‌ನ ಭದ್ರ ಕೋಟೆ ಎನ್ನಲಾಗುವ ಮಂಡ್ಯ ಜಿಲ್ಲೆಯಲ್ಲಿ ಆ ಪಕ್ಷ 6 ಸ್ಥಾನಗಳನ್ನು ಕಳೆದುಕೊಂಡಿದೆ. ಬಿಜೆಪಿ ಕೆಲವು ಕಡೆಗೆ ತನ್ನ ಮತ ಹಂಚಿಕೆ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದರೂ, ಬಿಜೆಪಿ ಪ್ರತಿನಿಧಿಸುವ ಸಿದ್ಧಾಂತದ ವಿರುದ್ಧ ಮತಗಳು ಕ್ರೋಢೀಕರಣ ಆಗಿ ಕಾಂಗ್ರೆಸ್‌ಗೆ ಒಲಿದಿರುವುದು ಎದ್ದು ಕಾಣುತ್ತದೆ. ಮುಸಲ್ಮಾನ, ದಲಿತ ಮತ್ತು ಹಿಂದುಳಿದ ಸಮುದಾಯಗಳು ಹೆಚ್ಚು ಸಂಖ್ಯೆಯಲ್ಲಿ ಕಾಂಗ್ರೆಸ್‌ಅನ್ನು ಬೆಂಬಲಿಸಿರುವುದರಿಂದ ಇದು ಸಾಧ್ಯವಾಗಿದೆ ಎಂದು ಅಂದಾಜಿಸಲಾಗುತ್ತಿದೆ. 2018ಕ್ಕೆ ಹೋಲಿಸಿದರೆ ಕಾಂಗ್ರೆಸ್ ಈ ಭಾಗದಲ್ಲಿ ಗಣನೀಯ ಸೀಟುಗಳಲ್ಲಿ ಗೆದ್ದಿದೆ. ಸಂಘ ಪರಿವಾರದ ಕೋಮು ಧ್ರುವೀಕರಣ ಯೋಜನೆಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟದ ಜೆಡಿಎಸ್‌ನ ಸೋಲಿಗೂ ಇದೊಂದು ಮುಖ್ಯ ಕಾರಣ ಎಂಬುದನ್ನು ಮನಗಾಣಬಹುದಾಗಿದೆ.

ಇವೆಲ್ಲಾ ಚರ್ಚೆಗಳ ನಡುವೆ, ಕರಾವಳಿಯಲ್ಲಿ ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಇಂತಹ ರಿವರ್ಸ್ ಪೋಲರೈಸೇಷನ್ ಯಾಕಿಲ್ಲ ಎಂಬ ಪ್ರಶ್ನೆ ತಲೆದೋರುವುದು ಸಹಜ. ಉತ್ತರ ಕನ್ನಡದಲ್ಲಿ ಒಂದು ಮಟ್ಟಕ್ಕೆ ಕಾಂಗ್ರೆಸ್ ತನ್ನ ಸೀಟುಗಳ ಸಂಖ್ಯೆಯನ್ನು ವೃದ್ಧಿಸಿಕೊಂಡಿದೆಯಾದರೂ ಅದನ್ನು ಹಿಂದುತ್ವ ವಿರೋಧಿ ಮತಗಳ ಕನ್ಸಾಲಿಡೇಶನ್ ಎಂದು ಕರೆಯಲು ಸಾಧ್ಯವಾಗದ ಸ್ಥಿತಿ ಅಲ್ಲಿದೆ. ಕರಾವಳಿಯಲ್ಲಿ ಹಿಂದುತ್ವದ ವಿರುದ್ಧ ಗಟ್ಟಿಯಾಗಿ ನಿಲ್ಲಬಲ್ಲ ಮುಂದಾಳತ್ವವನ್ನೇ ಕಾಂಗ್ರೆಸ್ ಪಕ್ಷ ಸೃಷ್ಟಿಸಿಕೊಂಡಿಲ್ಲ. ಹಿಂದುತ್ವದ ಹಿಂದೆಹಿಂದೆ ತುಸು ಲಿಬರಲ್ ಮನೋಧೋರಣೆಯ ಮೃದು ಹಿಂದುತ್ವವನ್ನು ಪಾಲಿಸುವ ನಾಯಕರೇ ಅಲ್ಲಿ ಹೆಚ್ಚು. ಉದಾಹರಣೆಗೆ ಪುತ್ತೂರು ನೋಡಿ, ಅಲ್ಲಿ ಸೆಣಸಿದ್ದ ಬಿಜೆಪಿ-ಕಾಂಗ್ರೆಸ್-ಪಕ್ಷೇತರ ಅಭ್ಯರ್ಥಿಗಳ ಮನೋಧೋರಣೆ ಬಹುತೇಕ ಸಮಾನಾಂತರ ಹಿಂದುತ್ವ. ಅಲ್ಲಿ ಕಾಂಗ್ರೆಸ್‌ನ ಹಿಂದುತ್ವ ಗೆದ್ದಿದೆಯಷ್ಟೇ. ಹೀಗೆ ಕರಾವಳಿಯಲ್ಲಿ ಬಿಜೆಪಿ ಕೋಮು ಧ್ರುವೀಕರಣದ ಯೋಜನೆಗೆ ವಿರುದ್ಧವಾಗಿ ಒಂದು ಸ್ಪಷ್ಟ ಉತ್ತರವನ್ನು ಕಂಡುಕೊಳ್ಳದೆ, ಆ ಸ್ಪಷ್ಟತೆಯನ್ನು ನಿರ್ಭಿಡೆಯಿಂದ ಪ್ರತಿಪಾದಿಸುವ ನಾಯಕರನ್ನು ಬೆಳೆಸದೇ ಇರುವುದರಿಂದ, ಇಡೀ ರಾಜ್ಯ ಒಂದು ಕಡೆಗೆ ವೋಟ್ ಮಾಡಿದ್ದರೆ, ಕರಾವಳಿ ಮಾತ್ರ ಹಾಗೆಯೇ ಹಿಂದೆಬಿದ್ದಿದೆ.

ಆರೆಸ್ಸೆಸ್ ವಿರುದ್ಧ ಗಟ್ಟಿ ನಿಲುವುಗಳನ್ನು ತಳೆದು, ಸಂಘ ಪರಿವಾರದ ದ್ವೇಷದ ವಿರುದ್ಧ ಪ್ರೀತಿ ಮತ್ತು ಸಾಮರಸ್ಯದ ಸಂದೇಶ ಹೊತ್ತು ನಡೆಸಿದ ರಾಹುಲ್ ಗಾಂಧಿ ಮುಂದಾಳತ್ವದ ಭಾರತ್ ಜೋಡೊ ಯಾತ್ರೆ ಕೂಡ ಕರ್ನಾಟಕ ಚುನಾವಣೆಯಲ್ಲಿ ಪ್ರಭಾವಿಸಿರುವ ಸಾಧ್ಯತೆಗಳನ್ನು, ಆ ಜಾಥಾ ಹೋದ ಪ್ರದೇಶಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿರುವ ಸಂಗತಿ ತೋರಿಸುತ್ತದೆ. ಇದರ ಜೊತೆಗೆ ಎದ್ದೇಳು ಕರ್ನಾಟಕ, ಬಹುತ್ವ ಕರ್ನಾಟಕದಂತಹ ನಾಗರಿಕ ಸಮಾಜ ಸಂಘಟನೆಗಳು ಕೋಮು ದ್ವೇಷವನ್ನು ಸೋಲಿಸಲು ನಡೆಸಿದ ಅಭಿಯಾನವೂ ಹಿಂದುತ್ವದ ವಿರುದ್ಧ ಮತಗಳ ಧ್ರುವೀಕರಣಕ್ಕೆ ಕೊಡುಗೆ ನೀಡಿರುವ ಸಾಧ್ಯತೆ ಹೆಚ್ಚಿದೆ. 2021ರ ಯುಎಸ್‌ಎ ಚುನಾವಣೆಯಲ್ಲಿ ಕೂಡ ಅಲ್ಲಿನ ಬಲಪಂಥೀಯ ಪಕ್ಷ ರಿಪಬ್ಲಿಕನ್‌ರ ವಿರುದ್ಧ ಮತದಾರರು ಧ್ರುವೀಕರಣಗೊಂಡು ಡೆಮಾಕ್ರಟ್ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದರು. ರಿಪಬ್ಲಿಕನ್ ಪಕ್ಷ ತನ್ನ ವೋಟ್ ಬೇಸ್‌ಅನ್ನು ಉಳಿಸಿಕೊಂಡಿತ್ತಾದರೂ ಡೆಮಾಕ್ರಟ್ ಪಕ್ಷ ಬಲಪಂಥೀಯತೆಯನ್ನು ವಿರೋಧಿಸುವ ಮತದಾರರನ್ನು ಕನ್ಸಾಲಿಡೇಟ್ ಮಾಡಿ ಟ್ರಂಪ್‌ಅನ್ನು ಸೋಲಿಸಲು ಸಾಧ್ಯವಾಗಿತ್ತು. ಈ ರಿವರ್ಸ್ ಪೋಲರೈಸೇಷನ್ ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಕೆಲಸ ಮಾಡುವ ಸಾಧ್ಯತೆಯಿದೆ. ಇದಕ್ಕೆ ವಿರೋಧ ಪಕ್ಷಗಳ ಒಗ್ಗೂಡುವಿಕೆ ಮತ್ತು ಬಲಪಂಥೀಯ ಕೋಮುವಾದದ ವಿರುದ್ಧ ಸ್ಪಷ್ಟ ಯೋಜನೆಯನ್ನು ರೂಪಿಸಿಕೊಳ್ಳುವ ಹಾಗೂ ಅದನ್ನು ಜನರ ಮುಂದೆ ಗಟ್ಟಿ ಧ್ವನಿಯಲ್ಲಿ ಪ್ರತಿಪಾದಿಸುವ ನಾಯಕತ್ವದ ಅಗತ್ಯವೂ ಇದೆ.

ರಾಷ್ಟ್ರ ರಾಜಕಾರಣಕ್ಕೂ ಹೊಸ ಹುರುಪು

ಕರ್ನಾಟಕ ಚುನಾವಣೆಗಳ ಫಲಿತಾಂಶದ ಬೆನ್ನಲ್ಲೇ ಲೋಕಸಭಾ ಚುನಾವಣೆಯಲ್ಲಿ ಸೆಣೆಸಲು ವಿರೋಧ ಪಕ್ಷಗಳಿಗೆ ಹೊಸ ಹುರುಪೊಂದು ಮೂಡಿರುವುದನ್ನು ಅಲ್ಲಗಳಯುವಂತಿಲ್ಲ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕಾಂಗ್ರೆಸ್ ಬಲವಾಗಿರುವ ಕಡೆಗೆ ಟಿಎಂಸಿ ಬೆಂಬಲಿಸುವುದಾಗಿ ಹೇಳಿದ್ದಾರೆ. ಅದೇ ಬೆಂಬಲವನ್ನು ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ನೀಡಬೇಕೆಂಬ ಕಿವಿಮಾತನ್ನೂ ಸೇರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಂಪ್ರದಾಯಕ ವಿರೋಧಿಯಾದ ಮಮತಾ ಅವರಿಂದ ಈ ತರಹದ ಮಾತೊಂದು ಹೊರಬಿದ್ದಿರುವುದು ಕರ್ನಾಟಕ ಫಲಿತಾಂಶ ವಿರೋಧ ಪಕ್ಷಗಳಲ್ಲಿ ಮೂಡಿಸಿರುವ ಭರವಸೆ-ಉತ್ಸಾಹವನ್ನು ಸೂಚಿಸುತ್ತದೆ. ಇದು ಮುಂದೆ ಯಾವಯಾವ ತಿರುವುಗಳನ್ನು ಪಡೆದುಕೊಳ್ಳುತ್ತದೋ ಕಾದುನೋಡಬೇಕಿದೆ.

– ಗುರುಪ್ರಸಾದ್ ಡಿ ಎನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿ, ಶಾ ವಿರುದ್ಧ ಘೋಷಣೆ ಆರೋಪ: ತನ್ನದೇ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಮನವಿ ಮಾಡಿದ ಜೆಎನ್‌ಯು ಆಡಳಿತ ಮಂಡಳಿ

ಸೋಮವಾರ ರಾತ್ರಿ ವಿದ್ಯಾರ್ಥಿಗಳ ಗುಂಪೊಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಆ ಘೋಷಣೆಗಳು "ಪ್ರಚೋದನಕಾರಿ, ಪ್ರಚೋದನಕಾರಿ ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್‌ನ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎಸ್‌ಐಟಿ ತನಿಖೆ ಪಕ್ಷಪಾತದಿಂದ ಕೂಡಿದೆ ಎಂಬ ವಿಪಕ್ಷಗಳ ಆರೋಪ ತಿರಸ್ಕರಿಸಿದ ಕೇರಳ ಹೈಕೋರ್ಟ್

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದ ತನಿಖೆಯು ಪಕ್ಷಪಾತದಿಂದ ಕೂಡಿದೆ ಅಥವಾ ಸರ್ಕಾರದ ಒತ್ತಡದಲ್ಲಿದೆ ಎಂಬ ವಿರೋಧ ಪಕ್ಷದ ಆರೋಪಗಳನ್ನು ತಿರಸ್ಕರಿಸಿರುವ ಕೇರಳ ಹೈಕೋರ್ಟ್, ಪ್ರಸ್ತುತ ನಡೆಯುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯ...

ಆರ್‌ಎಸ್‌ಎಸ್ ಕುರಿತ ಹೇಳಿಕೆ: ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ನಲಪಾಡ್‌ಗೆ ಕೋರ್ಟ್ ನೋಟಿಸ್

ಬೆಂಗಳೂರು: ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಾನನಷ್ಟ ಮೊಕದ್ದಮೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್ ಮತ್ತು ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ಸಂಸದ/ಶಾಸಕರ...

‘ನಾನು ಹಿಂದೂ ಅಲ್ಲ, ಮನುಷ್ಯ’: ಎಸ್‌ಪಿ ನಾಯಕ ಶಿವರಾಜ್ ಸಿಂಗ್ ಯಾದವ್ ಹೇಳಿಕೆ ತಿರುಚಿ ವಿವಾದ ಸೃಷ್ಟಿಸಿದ ಬಿಜೆಪಿ ಬೆಂಬಲಿಗರು

ಸಮಾಜವಾದಿ ಪಕ್ಷದ ನಾಯಕ, ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಆಪ್ತ ಸಹಾಯಕ ಹಾಗೂ ಉತ್ತರ ಪ್ರದೇಶದ ಫಿರೋಜಾಬಾದ್‌ನ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ್ ಸಿಂಗ್ ಯಾದವ್ ‘ನಾನು ಹಿಂದೂ ಅಲ್ಲ, ನಾನು...

ಛತ್ತೀಸ್‌ಗಢ : ಎಂಟು ಮಂದಿ ಬಂಗಾಳಿ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ; ವರದಿ

ಛತ್ತೀಸ್‌ಗಢದ ರಾಯ್‌ಪುರದಲ್ಲಿ ಭಾನುವಾರ (ಜ.4) ಬಜರಂಗದಳ ಕಾರ್ಯಕರ್ತರು ಎಂಟು ಮಂದಿ ಬಂಗಾಳಿ ಮಾತನಾಡುವ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದು, ಒಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಾಯ್‌ಪುರ ಜಿಲ್ಲೆಯ ಕಟೋವಾಲಿ...

‘ಉಮರ್ ಮತ್ತು ಶಾರ್ಜಿಲ್ ಜಾಮೀನು ನಿರಾಕರಣೆ’: ಶಾಸಕಾಂಗ, ನ್ಯಾಯಾಂಗದ ಕಾರ್ಯವೈಖರಿಯಲ್ಲಿನ ವೈರುಧ್ಯಗಳಿಗೆ ಉದಾಹರಣೆ: ಶ್ರೀಪಾದ್ ಭಟ್

ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿನ ವರದಿಯ ಪ್ರಕಾರ ಈ ಪ್ರಕರಣದ ವಿಚಾರಣೆಯಲ್ಲಿರುವ ಮುಖ್ಯ ಪ್ರಶ್ನೆ: ಬಂಧನವಾಗಿ ಐದು ವರ್ಷಗಳಾದರೂ ಸಹ ಇನ್ನೂ ವಿಚಾರಣೆ ಆರಂಭವಾಗಿಲ್ಲ. ದೀರ್ಘಕಾಲದ ಜೈಲುವಾಸವನ್ನು ಭಯೋತ್ಪಾದಕ ವಿರೋಧಿ ಕಾನೂನಿನ ಅಡಿಯಲ್ಲಿ ಸಮರ್ಥಿಸಬಹುದೇ?...

ಉತ್ತರ ಪ್ರದೇಶ SIR : ಮತದಾರರ ಪಟ್ಟಿಯಿಂದ 2.89 ಕೋಟಿ ಹೆಸರು ಡಿಲೀಟ್

ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐರ್‌) ಬಳಿಕ ಸುಮಾರು 2.89 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ನವದೀಪ್ ರಿನ್ವಾ...

ಕರೂರ್ ಕಾಲ್ತುಳಿತ ಪ್ರಕರಣ: ಟಿವಿಕೆ ನಾಯಕ ವಿಜಯ್‌ಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್

ಕರೂರ್ ಕಾಲ್ತುಳಿತ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಟಿವಿಕೆ ನಾಯಕ ವಿಜಯ್ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ ಎಂದು ಪಿಟಿಐ ಮಂಗಳವಾರ ವರದಿ ಮಾಡಿದೆ. ಸೆಪ್ಟೆಂಬರ್ 27 ರಂದು ನಟ-ರಾಜಕಾರಣಿ ವಿಜಯ್ ಅವರ ತಮಿಳಗ...

ಲಂಡನ್‌ನಲ್ಲಿ ಪ್ಯಾಲೆಸ್ತೀನ್ ರಾಯಭಾರ ಕಚೇರಿ ಉದ್ಘಾಟನೆ : ‘ಐತಿಹಾಸಿಕ ಕ್ಷಣ’ ಎಂದ ರಾಯಭಾರಿ ಹುಸಾಮ್ ಝೊಮ್ಲೋಟ್

ಲಂಡನ್‌ನಲ್ಲಿ ಪ್ಯಾಲೆಸ್ತೀನ್ ದೇಶದ ರಾಯಭಾರಿ ಕಚೇರಿ ಅಧಿಕೃತವಾಗಿ ಉದ್ಘಾಟನೆಯಾಗಿದ್ದು, ಯುಕೆಯ ಪ್ಯಾಲೆಸ್ತೀನ್‌ ರಾಯಭಾರಿ ಇದನ್ನು 'ಐತಿಹಾಸಿಕ ಕ್ಷಣ' ಎಂದು ಬಣ್ಣಿಸಿದ್ದಾರೆ. ಸೋಮವಾರ (ಜ.5) ಪಶ್ಚಿಮ ಲಂಡನ್‌ನ ಹ್ಯಾಮರ್‌ಸ್ಮಿತ್‌ನಲ್ಲಿ ನಡೆದ ರಾಯಭಾರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ...

ಬಾಂಗ್ಲಾದೇಶದಲ್ಲಿ ಹಿಂದೂ ಉದ್ಯಮಿ ಮತ್ತು ಪತ್ರಕರ್ತನಾಗಿದ್ದ ರಾಣಾ ಪ್ರತಾಪ್ ಬೈರಾಗಿ ತಲೆಗೆ ಗುಂಡಿಕ್ಕಿ ಹತ್ಯೆ 

ಬಾಂಗ್ಲಾದೇಶದ ಜೆಸ್ಸೋರ್ ಜಿಲ್ಲೆಯಲ್ಲಿ ಸೋಮವಾರ 38 ವರ್ಷದ ರಾಣಾ ಪ್ರತಾಪ್ ಬೈರಾಗಿ ಅವರ ತಲೆಗೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ.  ಬೈರಾಗಿ ಒಬ್ಬ ಹಿಂದೂ ಉದ್ಯಮಿ ಮತ್ತು...