Homeಕರ್ನಾಟಕನಿಮ್ಮ ಮನುಜ ನಿಷ್ಠೆ, ಧರ್ಮ ನಿಷ್ಠೆಯ ಬಗ್ಗೆ ಸಂದೇಹವಿದೆ: ಪೇಜಾವರರ ವಿರುದ್ಧ ಭುಗಿಲೆದ್ದ ಆಕ್ರೋಶ

ನಿಮ್ಮ ಮನುಜ ನಿಷ್ಠೆ, ಧರ್ಮ ನಿಷ್ಠೆಯ ಬಗ್ಗೆ ಸಂದೇಹವಿದೆ: ಪೇಜಾವರರ ವಿರುದ್ಧ ಭುಗಿಲೆದ್ದ ಆಕ್ರೋಶ

- Advertisement -
- Advertisement -

ದಶಕಗಳ ಅಯೋಧ್ಯೆ ವಿವಾದ ಬಗೆಹರಿದ ನಂತರ ರಾಮಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣದ ಕೆಲಸ ಬಿರುಸಾಗಿ ನಡೆಯುತ್ತಿದ್ದು, ಇದಕ್ಕೆ ದೇಶದಾದ್ಯಂತ ದೇಣಿಗೆ ಸಂಗ್ರಹಿಸುವ ಕೆಲಸವೂ ನಡೆಯುತ್ತಿದೆ. ಆದರೆ ಈ ದೇಣಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ ಹಲವರು ಪ್ರಶ್ನೆಗಳನ್ನು ಕೇಳುತ್ತಿದ್ದು, ಅಡ್ವಾಣಿ ನೇತೃತ್ವದಲ್ಲಿ ಸಂಗ್ರಹಿಸಿದ ಹಣ ಮತ್ತು ಇಟ್ಟಿಗೆಯ ಲೆಕ್ಕ ಏನಾಯ್ತು? ಎಂದು ಹಿಂದೂ ಸಂಘಟನೆಗಳು ಮತ್ತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಇದರ ನಡುವೆಯೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮತ್ತೊಂದು ಗಂಭೀರ ಆರೋಪವನ್ನು ಮಾಡಿದ್ದು, “ರಾಮಮಂದಿರಕ್ಕೆ ದೇಣಿಗೆ ಕೊಡದವರ ಮನೆ ಗುರುತು ಹಾಕಿಕೊಳ್ಳಲಾಗುತ್ತಿದೆಯಂತೆ” ಎಂದು ಕಳವಳ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, “ಅಯೋಧ್ಯೆಯಲ್ಲಿ ಕಟ್ಟುವ ರಾಮಮಂದಿರಕ್ಕೆ ದೇಣಿಗೆ ಕೊಡುವುದಿಲ್ಲ, ನಮ್ಮೂರಿನಲ್ಲಿ ಅಥವಾ ಬೇರೆ ಎಲ್ಲಾದರೂ ಕಟ್ಟುವ ರಾಮಮಂದಿರಕ್ಕೆ ದೇಣಿಗೆ ಕೊಡುತ್ತೇನೆ. ಇವರು ಸಂಗ್ರಹಿಸುವ ಹಣಕ್ಕೆ ರಸೀದಿ ಕೊಡುತ್ತಾರೆಯೇ? ಲೆಕ್ಕ ಕೊಡುತ್ತಾರೆಯೇ?” ಎಂದು ಪ್ರಶ್ನಿಸಿದ್ದರು. ಈ ಹೇಳಿಕೆ ವ್ಯಾಪಕ ಚರ್ಚೆಗೆ ಒಳಗಾಗಿತ್ತು.

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು, ಸಿದ್ದರಾಮಯ್ಯನವರ ದೇಶನಿಷ್ಠೆಯ ಬಗ್ಗೆ ಸಂದೇಹವಾಗುತ್ತಿದೆ ಎಂದು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಸ್ವಾಮೀಜಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಪುದುಚೇರಿ: ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಕಿರಣ್ ಬೇಡಿಯನ್ನು ತೆಗೆದುಹಾಕಿದ ರಾಷ್ಟ್ರಪತಿ

ಚಿಂತಕರಾದ ನಾ ದಿವಾಕರ್ ತಮ್ಮ ಫೇಸ್‌ಬುಕ್‌ನಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, “ಸ್ವಾಮೀಜಿಯವರ ಮನುಜ ನಿಷ್ಠೆಯ ಬಗ್ಗೆ ಸಂದೇಹ ವ್ಯಕ್ತವಾಗುತ್ತಿದೆ” ಎಂದಿದ್ದಾರೆ.

ವಿನೋದ್ ಎಂಬುವವರು, “ದೇಶನಿಷ್ಠೆಯ ಮಾನದಂಡವೇನು? ಸಿದ್ಧರಾಮಯ್ಯ ದೇಶನಿಷ್ಠೆಯ ಬಗ್ಗೆ ನಮಗೆ ಸಂದೇಹವಿದೆ ಎಂದಿದ್ದಾರೆ ಪೇಜಾವರ ಶ್ರೀ! ಹಾಗೆಂದರೇನು? ದೇಶನಿಷ್ಠೆಗೆ ಇರುವ ಮಾನದಂಡವೇನು? ನಮಗೆ ಶಾಲೆ-ಕಾಲೇಜು ಎಲ್ಲಿಯೂ ದೇಶನಿಷ್ಠೆ ಬಗ್ಗೆ ಕಲಿಸಲಿಲ್ಲ. ಸಂವಿಧಾನ, ರಾಷ್ಟ್ರಗೀತೆ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದನ್ನು ಕಲಿಸಿದರಷ್ಟೇ. ಈ ಮೂರರಲ್ಲಿ ಯಾವುದಾದರೂ ಒಂದಕ್ಕೆ ಮಾಜಿ ಸಿಎಂ ಅವರು ಅಗೌರವ ತೋರಿರುವರೇ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ‘ನೆರೆಯ ರಾಷ್ಟ್ರಗಳಲ್ಲೂ ಬಿಜೆಪಿ ಸಂಘಟನೆ’ ಹೇಳಿಕೆ: ಖಂಡನೆ ವ್ಯಕ್ತಪಡಿಸಿದ ನೇಪಾಳ

ಉಡುಪಿಯ ಪೇಜಾವರ ಸ್ವಾಮಿಗೆ ಮನುವಾದದ ಪಿತ್ತ ನೆತ್ತಿಗೇರಿದೆ… ಶೂದ್ರಶಕ್ತಿಯಾಗಿ ಬೆಳೆದು ನಿಂತಿರುವ ಸಿದ್ದರಾಮಯ್ಯ ಮನುವಾದಿಗಳಿಗೆ ದೇಶದ್ರೋಹಿಯಂತೆ ಕಾಣದೆ ಮತ್ತೆ ಹೇಗೆ ಕಂಡಾರು? ಮನುವಿನ ಸಂವಿಧಾನ ಈಗ ದೇಶಭಕ್ತಿಯ ಕವಚ ತೊಟ್ಟು ಜಾರಿಯಾಗುತ್ತಿದೆ.. ಎಂದು ಯತಿರಾಜ್ ಬ್ಯಾಲಹಳ್ಳಿ ಕಿಡಿಕಾರಿದ್ದಾರೆ.

ವಿಶ್ವ ಪೂಜಾರ ಎಂಬುವವರು ಸ್ವಾಮೀಜಿಯ ಹೇಳಿಕೆಯನ್ನು ಉಲ್ಲೇಖಿಸಿ, “ಹಿರಿಯ ಸ್ವಾಮಿಗಳ ( ದಿ. ವಿಶ್ವೇಶ್ವರ ತೀರ್ಥ ಸ್ವಾಮೀಜಿ) ಹಾದಿಯಲ್ಲಿಯೇ ಸಾಗುತ್ತಿರುವ ಕಿರಿಯ ಸ್ವಾಮಿಗಳು. ನಮ್ಮ ಹೆಮ್ಮೆ” ಎಂದು ಪೇಜಾವರ ಶ್ರೀಗಳ ಕಾಲೆಳೆದಿದ್ದಾರೆ.

ಎಂ ಆರ್ ಕೃಷ್ಣ ಎಂಬುವವರು ತಮ್ಮ ಪೋಸ್ಟ್‌ನಲ್ಲಿ, “ಇವರಿಗೆಲ್ಲಾ ಮಠಾಧಿಪತಿ ಅಂತ ಎಲ್ಲರೂ ಮರ್ಯಾದೆ ಕೊಡುತ್ತಾರೆ, ಆದರೆ ನಾಲಿಗೆ ಹರಿಬಿಡುವ ಇಂತಹವರು ಟೆಂಪಲ್ ಇಂಡಸ್ಟ್ರಿ ನಡೆಸುತ್ತಿದ್ದು ಟನ್‌ಗಟ್ಟಲೆ ಹಣ ಸಂಗ್ರಹಿಸುತ್ತಾರೆ, ಜನರಿಂದ, ರಾಜಕಾರಣಿಗಳಿಂದ, ಉದ್ಯಮಿಗಳಿಂದ ಮತ್ತು ಸರ್ಕಾರದಿಂದ ಕೂಡಾ. ಮಠಗಳು ರಾಜಕೀಯ ಮಾಡುವುದರಿಂದ ಈಗಾಗಲೆ ಸಮಾಜದ ವ್ಯವಸ್ಥೆ ಕೆಟ್ಟಿದೆ, ಇವರಿಗಿಲ್ಲದ ದೇಶಭಕ್ತಿ ಬಗ್ಗೆ ಹೇಳಿದರೆ ಇಲ್ಲಿ ಕೇಳುವರಾರು ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ದಿಶಾ ರವಿ ಬಂಧನ ಖಂಡಿಸಿದ ‘ಭಾರತದ ಗ್ರೇಟಾ ಥನ್‌ಬರ್ಗ್’ ರಿಧಿಮಾ ಪಾಂಡೆ

ರೇಣುಕಾರಾಧ್ಯ ಎಂಬುವವರು ವಿದ್ಯಾಭೂಷಣರ ಆತ್ಮಕತೆ ‘ ನೆನಪೇ ಸಂಗೀತ’ ಪುಸ್ತಕದಲ್ಲಿನ ವಿಷಯವನ್ನ ಉಲ್ಲೇಖಿಸಿ, “ಈ ವ್ಯಕ್ತಿ ಉತ್ತಾರಾಧಿಕಾರಿಯಾಗಿ ಆಯ್ಕೆಯಾದಾಗ ಹತ್ತು ಹನ್ನೆರಡು ವರ್ಷ ಇರಬೇಕೇನೋ ಆಗ ಮಠಕ್ಕೆ ಹೋಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಈತನನ್ನು ಕಂಡು “ಅಯ್ಯೋ ಪಾಪ ಹುಡುಗ” ಅಂದಿದ್ದರಂತೆ… ಮಾಸ್ತಿ ಅವತ್ತು ಅಯ್ಯೋ ಪಾಪ ಯಾಕಂದ್ರು ಅಂತ ಈ ಸ್ವಾಮಿಗೆ ಅವತ್ತು ಅರ್ಥ ಆಗಿದ್ರೆ ಚೆನ್ನಾಗಿರ್ತಿತ್ತು… ಸ್ವಾಮಿ ಆಗಿ ಮಠಕ್ಕೂ ದೇಶಕ್ಕೂ ವ್ಯತ್ಯಾಸ ಗೊತ್ತಿಲ್ಲ… ಅಯ್ಯೊ ಪಾಪ…. – ವಿದ್ಯಾಭೂಷಣರ ಆತ್ಮಕತೆ ‘ ನೆನಪೇ ಸಂಗೀತ’ ದಲ್ಲಿ ಈ ಬಗ್ಗೆ ವಿವರಗಳಿವೆ” ಎಂದು ವ್ಯಂಗ್ಯವಾಡಿದ್ದಾರೆ.

ನಿತಿನ್ ಎಂಬುವವರು, “ಇಂದಿಗೂ ಕೃಷ್ಣಮಠದಲ್ಲಿ ಪಂಕ್ತಿಭೇದದ ಮೂಲಕ ಹಿಂದೂ ಧರ್ಮದ ಕೆಳವರ್ಗದವರನ್ನು ಶೋಷಣೆ ಮಾಡುವ ನಿಮ್ಮ ಧರ್ಮನಿಷ್ಠೆಯ ಬಗ್ಗೆ ನನಗೆ ಸಂದೇಹವಿದೆ ಪೇಜಾವರ ಶ್ರೀಗಳೇ.. ಶ್ರೀಗಳು ತಮ್ಮ ಇತಿ-ಮಿತಿಗಳನ್ನು ಅರಿತು ಸಂನ್ಯಾಸ ಧರ್ಮ ಪಾಲನೆಯೊಂದಿಗೆ ಯಾವುದೇ ಪಕ್ಷದ ವಕ್ತಾರನಂತೆ ವರ್ತಿಸದಿದ್ದರೆ ಒಳ್ಳೆಯದು ಎಂಬುದು ನನ್ನ ಭಾವನೆ..” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಾನವಹಕ್ಕುಗಳ ರಕ್ಷಕ ಅಮ್ನೆಸ್ಟಿ ಸಂಸ್ಥೆಯ ಹಣ ಮುಟ್ಟುಗೋಲು: ಭಾರತ ಸರ್ಕಾರ ಕಿರುಕುಳ ನೀಡುತ್ತಿದೆ ಎಂದಿದ್ದ ಸಂಸ್ಥೆ

ಭರತ್ ಹೆಬ್ಬಾಳ್ ತಮ್ಮ ಪೋಸ್ಟ್‌ನಲ್ಲಿ, ಈ ಹಿಂದೆ ಪೇಜಾವರ ಶ್ರೀ ರೈತರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದನ್ನು ಉಲ್ಲೇಖಿಸಿ “ರೈತರು ಹೊಲಗದ್ದೆಗಳಲ್ಲಿ ಕಷ್ಟಪಟ್ಟು ದುಡಿದು ತಂದು ಹಾಕಿದ ಬೆಳೆಗಳನ್ನು ಎಳ್ಳಷ್ಟೂ ಕೆಲಸ ಮಾಡದೆ ಜಾತಿವಾದಿ ಪಂಕ್ತಿ ಭೋಜನದಲ್ಲಿ ದನ ತಿನ್ನೊಂಗೆ ತಿಂದು, ಪ್ರತಿಭಟನೆ ಮಾಡುತ್ತಿರುವವರು ರೈತರೊ ಇಲ್ಲವೋ ಎಂಬ ಸಂಶಯ ವ್ಯಕ್ತಪಡಿಸುವುದು.. ತಿಂದ ಬಿಟ್ಟಿ ಊಟ ಜೀರ್ಣವಾಗದಿದ್ದಲ್ಲಿ ಇನ್ನೊಬ್ಬರ ದೇಶಭಕ್ತಿಯನ್ನು ಪ್ರಶ್ನಿಸುವುದು..” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಹೀಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೇಜಾವರ ಶ್ರೀಗಳ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾರತ ದೇಶ ಎಂದರೆ ಬ್ರಾಹ್ಮಣ್ಯ, ಭಾರತ ದೇಶ ಎಂದರೆ ಬಿಜೆಪಿ, ಭಾರತ ದೇಶ ಎಂದರೆ ‘ಇವರು ಮಾತ್ರ’ ಎನ್ನುವುದು ಕೆಲವು ಮೂಲಭೂತವಾದಿಗಳ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಭಾರತ ಎಂದರೆ ಬಹುತ್ವದ, ಬಹುಜನರ, ಸರ್ವ ಸಂಸ್ಕೃತಿಗಳ ದೇಶ ಎಂದು ಒಪ್ಪುವುದಕ್ಕೆ ಇವರು ತಯಾರಿಲ್ಲ.

ಈ ಮನಸ್ಥಿತಿಗಳೇ ಇಂದು, ರಾಮಮಂದಿರಕ್ಕೆ ದೇಣಿಗೆ ನೀಡದವರನ್ನು ದೇಶ ಭಕ್ತರಲ್ಲ ಎಂದು ಬಿಂಬಿಸುತ್ತದೆ. ಅವರ ಮನೆಯನ್ನು ಗುರುತು ಮಾಡಿಕೊಳ್ಳಲಾಗುತ್ತದೆ. ಬಿಜೆಪಿ ಸರ್ಕಾರವನ್ನು ಟೀಕಿಸಿದರೆ, ಇದು ದೇಶದ್ರೋಹ ಎಂದು ಪ್ರಕರಣ ದಾಖಲಿಸಲಾಗುತ್ತದೆ. ಬಿಜೆಪಿಯ ವಿರುದ್ಧ ಪ್ರತಿಭಟನೆ ಮಾಡಿದರೆ, ಪ್ರಶ್ನಿಸಿದರೆ ಅವರೆಲ್ಲರೂ ದೇಶದ್ರೋಹಿಗಳಾಗುತ್ತಾರೆ. ಇದು ಈ ದೇಶದ ವಿಪರ್ಯಾಸವಲ್ಲದೆ ಮತ್ತೇನು?


ಇದನ್ನೂ ಓದಿ: ಸರ್ವಾಧಿಕಾರಿ ಸರ್ಕಾರ ಭಯಭೀತವಾಗಿದೆ: ಮಹುವಾ ಮೊಯಿತ್ರಾರನ್ನು ಬೆಂಬಲಿಸಿದ ಶಿವಸೇನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಯಾರೆಲ್ಲಾ ಮನುವಾದವನ್ನು ವಿರೋಧಿಸುತ್ತಾರೋ, ಅವರೆಲ್ಲರೂ ಮನುವಾದಿಗಳ ಪ್ರಕಾರ “ದೇಶದ್ರೋಹಿಗಳು”. ಮಾನವತೆಯ ವಿರೋಧಿಗಳಾಗಿರುವ ಈ ಮನುವಾದಿಗಳು ದೇಶಪ್ರೇಮದ ಹೆಸರಿನಲ್ಲಿ ಮಾಡಬಾರದ್ದನ್ನೆಲ್ಲಾ ಮಾಡುತ್ತಿದ್ದಾರೆ. ದೇಶಪ್ರೇಮಕ್ಕಿಂತಲೂ ಮಿಗಿಲಾದುದು ಮಾನವತಾಪ್ರೇಮ ಎಂಬುದನ್ನು ಈ ಅವಿವೇಕಿಗಳು ಮೊದಲು ತಿಳಿದುಕೊಳ್ಳುವುದು ಒಳ್ಳೆಯದು.

LEAVE A REPLY

Please enter your comment!
Please enter your name here

- Advertisment -

Must Read

ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರಂಟಿ ಯೋಜನೆ’ ಬಗ್ಗೆ ತೇಜಸ್ವಿ...

0
ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಪಂಚ ಗ್ಯಾರಂಟಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕೋಟ್ಯಾಂತರ ಜನರಿಗೆ ಆಶ್ರಯವಾದ ಗ್ಯಾರಂಟಿ ಯೋಜನೆಗಳನ್ನು 'ಮತಿ ಹೀನ ಉಚಿತ ಕೊಡುಗೆ'...