ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಿರಣ್ ಬೇಡಿಯವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ತೆಗೆದು ಹಾಕಿದ್ದಾರೆ. ಈ ಕುರಿತು ಎಎನ್ಐ ವರದಿ ಮಾಡಿದೆ.
Dr. Kiran Bedi removed as the Lieutenant Governor of Puducherry
Dr. Tamilisai Soundararajan, Governor of Telangana, given additional charge as Lieutenant Governor of Puducherry pic.twitter.com/pSOoIgcCJK
— ANI (@ANI) February 16, 2021
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಡಾ. ಕಿರಣ್ ಬೇಡಿ ಅವರನ್ನು ಪುದುಚೇರಿಯ ಲೆಫ್ಟಿನೆಂಟ್-ಗವರ್ನರ್ ಹುದ್ದೆಯಿಂದ ತೆಗೆದುಹಾಕಿದ್ದಾರೆ. ಹಾಗಾಗಿ ಪುದುಚೇರಿಯ ಲೆಫ್ಟಿನೆಂಟ್-ಗವರ್ನರ್ ಅವರ ಕಾರ್ಯಗಳನ್ನು ನಿರ್ವಹಿಸಲು ತೆಲಂಗಾಣದ ಗವರ್ನರ್ ಡಾ. ತಮಿಳಿಸೈ ಸೌಂದರರಾಜನ್ ಅವರನ್ನು ನೇಮಿಸಲಾಗಿದೆ.
ತಮಿಳಿಸೈ ಸೌಂದರರಾಜನ್ ಅವರು ತಮ್ಮ ಕೆಲಸಗಳೊಂದಿಗೆ ಈ ಹುದ್ದೆಯನ್ನೂ ನಿಭಾಯಿಸಬೇಕು ಎಂದು ರಾಷ್ಟ್ರಪತಿಗಳಿಂದ ಆದೇಶ ಬಂದಿದೆ. ಅವರು ಉಸ್ತುವಾರಿ ವಹಿಸಿಕೊಂಡ ದಿನದಿಂದ ಇದು ಜಾರಿಗೆ ಬರುತ್ತದೆ ಎಂದು ರಾಷ್ಟ್ರಪತಿ ಕಛೇರಿಯ ವಕ್ತಾರ ಅಜಯ್ ಕುಮಾರ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿರುವ ಕಿರಣ್ ಬೇಡಿ ಅವರು 2015ರ ದೆಹಲಿ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರು. 2016ರ ಮೇ 28ರಂದು ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಗಿತ್ತು.
ಸರ್ಕಾರದ ಅಭಿವೃದ್ಧಿ ಯೋಜನೆಗಳು, ಕಾರ್ಯಗಳಿಗೆ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಜನವರಿಯಲ್ಲಿ ಆರೋಪಿಸಿದ್ದರು. ಬೇಡಿ ವಿರುದ್ಧ ಅಹೋರಾತ್ರಿ ಪ್ರತಿಭಟನೆಯನ್ನೂ ನಡೆಸಿದ್ದರು. ಪುದುಚೇರಿ ಕಲ್ಯಾಣ ಸಚಿವ ಎಂ.ಕಂದಸಾಮಿ ಕೂಡ ಬೇಡಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಕಿರಣ್ ಬೇಡಿ ಅವರನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದು ಆಗ್ರಹಿಸಿ ನಾರಾಯಣಸ್ವಾಮಿ ಅವರು ಜನವರಿಯಲ್ಲಿ ಸಹಿ ಅಭಿಯಾನವನ್ನೂ ನಡೆಸಿದ್ದರು.
ಶಾಸಕ ಎ. ಜಾನ್ ಕುಮಾರ್ ಅವರು ತಮ್ಮ ರಾಜೀನಾಮೆಯನ್ನು ಸ್ಪೀಕರ್ ವಿ.ಪಿ. ಶಿವಕೋಲುಂಟು ಅವರಿಗೆ ಸಲ್ಲಿಸುವುದರೊಂದಿಗೆ ಪುದುಚೇರಿಯ ಕಾಂಗ್ರೆಸ್ ಸರ್ಕಾರ ಮಂಗಳವಾರ ವಿಧಾನಸಭೆಯಲ್ಲಿ ಬಹುಮತ ಕಳೆದುಕೊಂಡಿದೆ. ಈ ಹಿಂದೆಯೆ ಆಡಳಿತ ಪಕ್ಷದ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದರು. ಅಲ್ಲಿ ಚುನಾವಣೆಗೆ ಇನ್ನೇನು ಕೆಲವೆ ತಿಂಗಳುಗಳು ಉಳಿದಿರುವಾಗ ಈ ರಾಜಕೀಯ ಬೆಳವಣಿಗೆ ಭಾರಿ ಅಚ್ಚರಿ ಮೂಡಿಸಿದೆ.
ಇತ್ತೀಚಿನ ಬೆಳವಣಿಗೆಯಿಂದಾಗಿ, 33 ಸದಸ್ಯ ಬಲವಿರುವ ಸದನದಲ್ಲಿ ಆಡಳಿತಾರೂಢ ಕಾಂಗ್ರೆಸ್-ಡಿಎಂಕೆ ಮೈತ್ರಿ ಮತ್ತು ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟವು ತಲಾ 14 ಶಾಸಕರನ್ನು ಹೊಂದಿದೆ. ಮೂರು ನಾಮನಿರ್ದೇಶಿತ ಶಾಸಕರನ್ನು ಒಳಗೊಂಡಿರುವ ಅಸೆಂಬ್ಲಿಯಲ್ಲಿ ಪ್ರಸ್ತುತ 28 ಸಕ್ರಿಯ ಶಾಸಕರು ಇದ್ದಾರೆ.
ಈ ಹಿನ್ನೆಲೆಯಲ್ಲಿ ಕಿರಣ್ ಬೇಡಿಯವರನ್ನು ಹುದ್ದೆಯಿಂದ ತೆಗೆದುಹಾಕಿರುವುದು ರಾಜಕೀಯ ಮಹತ್ವದ ಪ್ರಕ್ರಿಯೆಯಾಗಿದೆ.
ಇದನ್ನೂ ಓದಿ: ರೈತರ ಹೋರಾಟಕ್ಕೆ ಸರ್ ಛೋಟು ರಾಮ್ ಸ್ಪೂರ್ತಿ – ರೈತ ಮುಖಂಡರು