ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಿದ ಆರೋಪ ಹೊತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು, ಅವರು ಬಾಬಾ ಸಾಹೇಬರ ಪ್ರತಿಮೆ ಮುಂದೆ ಮಂಡಿಯೂರಿ ಕ್ಷಮೆಯಾಚಿಸಬೇಕು ಎಂಬುದು ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ದಲಿತ ಸಂಘರ್ಷ ಸಮಿತಿ ಒಕ್ಕೂಟ ನಡೆಸಿದ ಬೃಹತ್ ಪ್ರತಿಭಟನಾ ರ್ಯಾಲಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯಿತು.
ಸಭಿಕರನ್ನು ಉದ್ದೇಶಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್, “ಸಂವಿಧಾನ ಮತ್ತು ಮನುವಾದದ ನಡುವಿನ ಸಂಘರ್ಷದ ತಾರ್ಕಿಕ ಹಂತಕ್ಕೆ ಬಂದು ನಿಂತಿದ್ದೇವೆ” ಎಂದರು.
“ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಅಮಿತ್ ಶಾ ಅವರ ಹೇಳಿಕೆ ವಿರೋಧಿಸಿ ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವಷ್ಟು ಬಂದ್ ಮತ್ತು ಪ್ರತಿಭಟನೆಗಳು ಬಹುಷಃ ಹಿಂದೆದೂ ನಡೆದಿಲ್ಲ; ಇದು ದಲಿತ ಚಳವಳಿಯ ತಾಕತ್ತು. ವಿವಿಧ ಜಿಲ್ಲೆಗಳಲ್ಲಿ ಜನರು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದ್ದಾರೆ. ಅವು ಯಶಸ್ವಿಯಾಗಲೇಬೇಕು ಎನ್ನುವ ಕಾರಣಕ್ಕೆ ಹಲವು ಸಮುದಾಯಗಳು ಶ್ರಮಿಸಿವೆ. ಆದ್ದರಿಂದ, ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬೇಕಾಯಿತು” ಎಂದರು.
“ಬೇರೆಬೇರೆ ಜಿಲ್ಲೆಗಳಿಂದ ಜನರು ಬಸ್ಸು, ರೈಲು ಮತ್ತು ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಿಕೊಂಡು ಬಂದಿದ್ದಾರೆ. ರಾಜ್ಯದ ವಿವಿಧ ಗ್ರಾಮ, ಕುಗ್ರಾಮ ಮತ್ತು ಹಾಡಿಗಳಿಂದ ಕಾರ್ಯಕರ್ತರು ಇಲ್ಲಿಗೆ ಬಂದಿದ್ದಾರೆ. ನೀವು ಬಂದಿರುವ ಉದ್ದೇಶ ಈಡೇರಬೇಕಾದರೆ, ನಾವೇನು ಮಾಡಬೇಕು ಎಂಬ ಸ್ಪಷ್ಟತೆ ಇರಬೇಕು. ರಾಜಕೀಯ ಪಕ್ಷಗಳು ಬಸ್ಗಳಲ್ಲಿ ಜನರನ್ನು ತುಂಬಿಕೊಂಡು ಬಂದು ಮೈದಾನಗಳಲ್ಲಿ ಬಿಟ್ಟು, ಬಿರಿಯಾನಿ ಹಾಗೂ ಐದು ನೂರು ರೂಪಾಯಿ ಕೈಗೆ ಕೊಟ್ಟರೆ ಅದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಬಾಬಾ ಸಾಹೇಬರ ಹೋರಾಟದ ರಕ್ತ ಮತ್ತು ಬೆವರಿನ ಪ್ರತಿಫಲ ಉಣ್ಣುತ್ತಿರುವ ಪ್ರತಿಯೊಂದು ಸಮುದಾಯ ಕೂಡ ಈ ವಿಚಾರವನ್ನು ಉಗ್ರವಾಗಿ ಖಂಡಿಸಬೇಕಾಗಿತ್ತು. ಆದರೆ, ಇವತ್ತು ದಲಿತ ಸಮುದಾಯ ಒಡಕಿನತ್ತ ಹೋಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.

“ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ಸೇವಾಲಾಲ್ ಸ್ವಾಮೀಜಿ ಇಂದು ಎಲ್ಲಿದ್ದಾರೆ. ಇವರೆಲ್ಲಾ ಬಾಬಾ ಸಾಹೇಬರ ಋಣ ಉಂಡವರಲ್ಲವೇ? ದಲಿತ ರಾಜಕಾರಣಿಗಳ ಬಾಯಿಗೆ ಏನಾಗಿದೆ..? ಇವರ ಬಾಯಿಗೆ ಯಾರಾದರೂ ಬೀಗ ಹಾಕಿದ್ದಾರೆಯೇ? ಬಾಬಾ ಸಾಹೇಬರಿಗೆ ಅವಮಾನ ಆದಾಗ ಪ್ರತಿಭಟಿಸಲಾರದವರಿಗೆ ಮಂತ್ರಿಗಿರಿ ಮತ್ತು ರಾಜಕೀಯ ಅಧಿಕಾರ ಯಾಕೆ ಬೇಕು, ಇವರೆಲ್ಲಾ ಅವಕಾಶ ಸಿಗದೇ ಇದ್ದಾಗ ಅಳುತ್ತಾರೆ. ಯಾವ ಸಮಾಜಕ್ಕೆ ಹುಕುಂದಾರಿಕೆ ಬರುವುದಿಲ್ಲವೋ.. ಆ ಸಮಾಜ ನರಸತ್ತ ಸಮಾಜ ಆಗಿರುತ್ತದೆ, ಅದರ ರಾಜಕಾರಣಿಗಳು ನರಸತ್ತವರಾಗಿರುತ್ತಾರೆ” ಎಂದು ಆಕ್ರೋಶ ಹೊರಹಾಕಿದರು.
“ನಾವು ಒಟ್ಟಿಗೆ ಸೇರುತ್ತೇವೆ.. ಮಾತನಾಡುತ್ತೇವೆ ಎಂದಾಗ ರಾಜಕೀಯ ಪಕ್ಷಗಳು ಹಾಗೆ ಮಾಡಬೇಡಿ ಎನ್ನುತ್ತಾರೆ. ನಾವು ಮಾತನಾಡಿದರೆ ನಿಮಗೇನು ಸಮಸ್ಯೆ? ನಮಗೆ ನಾವೇ ಹೈಕಮಾಂಡ್, ಸಂವಿಧಾನ ನಮ್ಮ ಹೈಕಮಾಂಡ್” ಎಂದರು.
“ನಮ್ಮ ವಿದ್ಯಾರ್ಥಿಗಳು ಹಾಗೂ ಯುವಜನರು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಸಂವಿಧಾನ ಮತ್ತು ಮನುವಾದದ ನಡುವಿನ ತಾರ್ಕಿಕ ಸಂಘರ್ಷಕ್ಕೆ ಬಂದು ನಿಂತಿದ್ದೇವೆ. ಮನುಸ್ಮೃತಿ ಸಾವಿರಾರು ವರ್ಷಗಳಿಂದ ಈ ದೇಶದ ದುಡಿಯುವ ಜನರನ್ನು ಹಾಗೂ ಶೂದ್ರಾತಿ ಶೂದ್ರರನ್ನು ಕಾಲಡಿಯಲ್ಲಿ ಹಾಕಿ ತುಳಿಯುತ್ತಿತ್ತು. ಅಂತ ಮನುಸ್ಮೃತಿಯ ಕಾಲನ್ನು ಮುರಿದಿದ್ದು ಬಾಬಾ ಸಾಹೇಬರ ಸಂವಿಧಾನ; ಅಂತ ಸಂವಿಧಾನದ ಮೂಲ ಆಶಯಕ್ಕೆ ಇಂದು ದಕ್ಕೆಯಾಗುತ್ತಿದೆ. ನಮ್ಮನ್ನೂ ಗೌರವಿಸುವ ಸಂವಿಧಾನ ಜಾರಿಗೆ ಬರಲಿ ಎಂದು ಉಡುಪಿ ಸ್ವಾಮಿ ಹೇಳುತ್ತಾರೆ.. ಉಡುಪಿ ಸ್ವಾಮಿಯನ್ನು ಗೌರವಿಸುವ ಸಂವಿಧಾನ ಯಾವುದು.. ಮನುಸ್ಮೃತಿನಾ” ಎಂದು ಪ್ರಶ್ನಿಸಿದರು.
“ಅಂಬೇಡ್ಕರ್ ಕುಲಸ್ತರು ಹಾಗೂ ಅಂಬೇಡ್ಕರ್ ವಿಚಾರಧಾರೆ ಎಂದರೆ ಜೇನುಗೂಡು ಇದ್ದಂತೆ, ಅಂತಹ ಜೇನುಗೂಡಿಗೆ ಕೈ ಹಾಕಿದರೆ ನಿಮ್ಮನ್ನು ಸರ್ವನಾಶ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಜೇನು ಸಿಹಿಯಾಗಿದ್ದರೂ ಅದರ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ. ನಮ್ಮ ಪೂರ್ವಿಕರು ನಮಗೆ ಅಹಿಂಸೆ ಬೋಧಿಸಿದ್ದಾರೆ. ಬುದ್ಧ, ಬಸವಣ್ಣ, ಫುಲೆ ದಂಪತಿಗಳು, ನಾಲ್ವಡಿ ಕೃಷ್ಣರಾಜ ಒಡೆಯರು ನಮಗೆ ಶಾಂತಿಮಂತ್ರ ಬೋಧಿಸಿದ್ದಾರೆ. ಆ ಶಾಂತಿಮಂತ್ರದಿಂದ ದೇಶವನ್ನು ಮುನ್ನಡೆಸುತ್ತಿದ್ದೇವೆ. ನಾವು ಅಹಿಂಸಾ ಮಾರ್ಗ ಹಿಡಿದಿದ್ದರೆ ನೀವು ಏನಾಗುತ್ತಿದ್ರಿ ಎಂಬುದನ್ನು ಕಲ್ಪನೆ ಮಾಡಿಕೊಳ್ಳಿ. ಆದ್ದರಿಂದ, ತುಂಬಾ ಎಚ್ಚರಿಕೆಯಿಂದ ನೀವು ಮಾತನಾಡಬೇಕು. ಈ ದೇಶ ಇಂದು ಸೌಖ್ಯವಾಗಿದ್ದರೆ ಅದಕ್ಕೆ ಕಾರಣ ಅಸ್ಪೃಶ್ಯ ಸಮುದಾಯಗಳು ಎಂಬುದನ್ನು ನೀವು ಮರೆಯಬಾರದು” ಎಂದು ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು.
“ಒಂದು ಕಡೆ ಗಾಂಧಿ ಕೊಂದವರನ್ನು ಆರಾಧಿಸುತ್ತಾರೆ; ಮತ್ತೊಂದು ಕಡೆ ಗಾಂಧಿಯನ್ನು ಪೂಜಿಸುತ್ತಾರೆ. ಇಂತ ಅವಿವೇಕಿಗಳ ಬಗ್ಗೆ ನಾವು ಎಚ್ಚರದಿಂದ ಇರಬೇಕು. ಇಂತವಗೆ ದಲಿತ ಸಮುದಾದಲ್ಲಿ ಗುಲಾಮರು ಹುಟ್ಟಿಕೊಳ್ಳುತ್ತಿದ್ದಾರೆ; ಆ ಗುಲಾಮರ ಬಗ್ಗೆ ಸಮುದಾಯ ಎಚ್ಚರವಾಗಿರಬೇಕು” ಎಂದು ಕಿವಿಮಾತು ಹೇಳಿದರು.
ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ನಾವು ಕಾರಣ
“ಸರ್ಕಾರ ಕೂಡ ನಮ್ಮ ಬಗ್ಗೆ, ನಮ್ಮ ಬದುಕು ಮತ್ತು ಅಭಿವೃದ್ಧಿಯ ಬಗ್ಗೆ ಯೋಚಿಸಬೇಕು. ಕೇವಲ ಭರವಸೆ ನೀಡಬಾರದು. ರಾಜ್ಯದಲ್ಲಿ ಜಾತ್ಯತೀತ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಮೂಲ ಕಾರಣ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಮಗೂ ಅಧಿಕಾರದಲ್ಲಿ ಪಾಲು ಕೊಡಬೇಕು; ಪಾಲು ಕೊಟ್ಟರೆ ಮಾತ್ರ ದಲಿತ ಸಮುದಾಯ ನಿಮ್ಮನ್ನು ಸಹಿಸಿಕೊಳ್ಳುತ್ತದೆ.. ಕೇವಲ ಓಟ್ ಹಾಕುವುದಕ್ಕೆ ಮಾತ್ರ ನಾವು ಸೀಮಿತವಾಗಿಲ್ಲ” ಎಂದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
“ಅಂಬೇಡ್ಕರ್ ಭಾರತ ರತ್ನ ಅಲ್ಲ.. ಅವರು ವಿಶ್ವ ರತ್ನವಾಗಿ ಜಗತ್ತಿನಲ್ಲಿ ರಾರಾಜಿಸುತ್ತಿದೆ. ನಾವು ಅವರ ಕುಡಿಗಳಾಗಿ ಸರಿಯಾದ ರೀತಿಯಲ್ಲಿ ಬಾಬಾ ಸಾಹೇಬರ ಚಿಂತನೆ ಮುಂದುವರಿಸಬೇಕು” ಎಂದರು.
ದಸಂಸ ರಾಜ್ಯ ಪ್ರಧಾನ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು ಅಧ್ಯಕ್ಷತೆ ವಹಿಸಿದ್ದರು, ಹಿರಿಯ ಪತ್ರಕರ್ತ ಹಾಗೂ ಹೋರಾಟಗಾರ ಇಂದೂಧರ ಹೊನ್ನಾಪುರ, ದಸಂಸ ರಾಜ್ಯ ಸಂಯೋಜಕರಾದ ವಿ.ನಾಗರಾಜ್, ಇಂದಿರಾ ಕೃಷ್ಣಪ್ಪ ಸೇರಿದಂತೆ ಹಲವಾರು ದಸಂಸ ಮುಖಂಡರು ಇದ್ದರು.
ಇದನ್ನೂ ಓದಿ; ದಲಿತ ಚಳವಳಿಯ ಪ್ರಮುಖ ಹೋರಾಟಗಾರ ಕೆ.ಎಂ. ಕೊಮ್ಮಣ್ಣ ನಿಧನ


