HomeUncategorizedಮೋದಿ ಅಮಿತ್ ಷಾ ಗೆ ಕ್ಲಿನ್ ಚಿಟ್ ಪ್ರಕರಣ: ಚುನಾವಣಾ ಆಯೋಗದಲ್ಲಿ ಭುಗಿಲೆದ್ದ ಭಿನ್ನಮತ

ಮೋದಿ ಅಮಿತ್ ಷಾ ಗೆ ಕ್ಲಿನ್ ಚಿಟ್ ಪ್ರಕರಣ: ಚುನಾವಣಾ ಆಯೋಗದಲ್ಲಿ ಭುಗಿಲೆದ್ದ ಭಿನ್ನಮತ

ಈ ಎಲ್ಲಾ ವಿಚಾರಣೆಗಳ ಸಂದರ್ಭದಲ್ಲಿ ಅಶೋಕ್ ಲಾವಸಾ ಅವರು ಕ್ಲೀನ್ ಚಿಟ್ ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿ ತಮ್ಮ ವಾದ ಮಂಡಿಸಿದ್ದರು ಎನ್ನಲಾಗಿದೆ. ಆ ವಾದವನ್ನು ಅಂತಿಮ ಆದೇಶದಲ್ಲಿ ಉಲ್ಲೇಖಿಸಿರಲಿಲ್ಲ. ಅದೇ ಅವರ ಆಕ್ಷೇಪಣೆ.

- Advertisement -
- Advertisement -

| ಗಿರೀಶ್ ತಾಳಿಕಟ್ಟೆ |

ಚುನಾವಣಾ ಆಯೋಗದ ಆಂತರಿಕ ಕದನ ಬೀದಿಗೆ ಬಿದ್ದಿದೆ. ಚುನಾವಣಾ ಆಯುಕ್ತ ಅಶೋಕ್ ಲಾವಸಾ ಅವರು ಮೇ 4ರಿಂದೀಚೆಗೆ ಆಯೋಗ ನಡೆಸುವ ‘ಮಾದರಿ ನೀತಿ ಸಂಹಿತೆ’ ಸಭೆಗಳಿಂದ ದೂರ ಉಳಿಯುತ್ತಾ ಬರುವ ಮೂಲಕ ತಮ್ಮ ಪ್ರತಿರೋಧ ಹೊರಹಾಕಿದ ಘಟನೆ ಬೆಳಕಿಗೆ ಬಂದಿದೆ. ಚುನಾವಣಾ ಆಯೋಗ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ಕೇಳಿಬಂದ ಸಂಹಿತೆ ಉಲ್ಲಂಘನೆಯ ಹಲವು ಆರೋಪಗಳಿಗೆ ಕ್ಲೀನ್ ಚಿಟ್ ಕೊಟ್ಟಿದ್ದಕ್ಕೆ ಅವರ ವಿರೋಧ ಇತ್ತು ಎನ್ನಲಾಗಿದೆ.

ಅಶೋಕ್ ಲಾವಸಾ

ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರಿಗೆ ಪತ್ರ ಬರೆದಿರುವ ಲಾವಾಸಾ “ತನ್ನ `ಅಲ್ಪಮತ’ ಅಭಿಪ್ರಾಯವನ್ನು ಆಯೋಗದ ಅಂತಿಮ ತೀರ್ಪಿನಲ್ಲಿ ಉಲ್ಲೇಖಿಸಲಾಗುತ್ತಿಲ್ಲವಾದ್ದರಿಂದ, ನಾನು ಅನಿವಾರ್ಯವಾಗಿ ಪೂರ್ಣ ಆಯೋಗದ ಸಭೆಗಳಿಂದ ದೂರ ಉಳಿಯಬೇಕಾಗಿದೆ” ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ನೀತಿ ಸಂಹಿತೆ ದೂರುಗಳ ವಿಚಾರಣೆಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾಧಿಕಾರಿಯೂ ಸೇರಿದಂತೆ ಇನ್ನಿಬ್ಬರು ಚುನಾವಣಾ ಆಯುಕ್ತರನ್ನು ಒಳಗೊಂಡ ಮೂವರು ಅಧಿಕಾರಿಗಳ ಒಂದು ಸಮಿತಿಯಿರುತ್ತದೆ. ಯಾವುದೇ ದೂರಿನ ಬಗ್ಗೆ ಇಲ್ಲಿ ಚರ್ಚೆ ನಡೆದು ಒಮ್ಮತದ ಆದೇಶವನ್ನು ಸಾರ್ವಜನಿಕವಾಗಿ ಹೊರಹಾಕಲಾಗುವುದು. ಹಾಗೊಮ್ಮೆ ಒಮ್ಮತದ ತೀರ್ಮಾನಕ್ಕೆ ಬರಲಾಗದಿದ್ದರೆ, 2:1 ಅನುಪಾತದಲ್ಲಿ ಬಹುಮತದ ತೀರ್ಪನ್ನು ಅಂತಿಮ ಆದೇಶವಾಗಿ ಪರಿಗಣಿಸಲಾಗುತ್ತದೆ.

ಹೀಗೆ ಬಹುಮತದ ಆದೇಶಕ್ಕೆ ವ್ಯತಿರಿಕ್ತವಾಗಿ ಅಭಿಪ್ರಾಯ ಹೊರಹಾಕಿದ ಇನ್ನೊಬ್ಬ ಸದಸ್ಯರ ವಾದವನ್ನು `ಅಲ್ಪಮತ’ ಅಭಿಪ್ರಾಯ ಎಂದು ಪರಿಗಣಿಸಲಾಗುವುದು. ಇದು ಚುನಾವಣಾ ಆಯೋಗದ ನೀತಿ ಸಂಹಿತೆ ದೂರುಗಳನ್ನು ವಿಚಾರಣೆ ನಡೆಸುವ ವೈಖರಿ. ಅಶೋಕ್ ಲಾವಾಸಾ ಅವರಿಗೆ ಈ ವೈಖರಿಗೆ ಯಾವುದೇ ವಿರೋಧ ವ್ಯಕ್ತಪಡಿಸುತ್ತಿಲ್ಲ, ಬದಲಿಗೆ ಅಯೋಗದ ಬಹುಮತ ತೀರ್ಪಿನ ಆದೇಶವನ್ನು ನೀಡುವಾಗ ಅದರಲ್ಲಿ ತನ್ನ `ಅಲ್ಪಮತ’ ವಾದವನ್ನೂ ಉಲ್ಲೇಖಿಸಬೇಕಿತ್ತು ಎಂಬುದು ಅವರ ಬೇಡಿಕೆ. ಸಾಮಾನ್ಯವಾಗಿ ಬಹುಸದಸ್ಯ ನ್ಯಾಯಪೀಠಗಳು ತಮ್ಮ ತೀರ್ಪು ಹೇಳುವಾಗ ಹೀಗೆ ಬಹುಮತದ ತೀರ್ಪನ್ನೇ ಅಂತಿಮ ತೀರ್ಪಾಗಿ ಪ್ರಕಟಿಸುವಾಗಲೂ ಅದಕ್ಕೆ ವ್ಯತಿರಿಕ್ತ ವಾದ ಮುಂದಿಟ್ಟ ಪೀಠದ ಅಲ್ಪಮತ ವಾದವನ್ನೂ ಉಲ್ಲೇಖಿಸುತ್ತೇವೆ.

ಮೋದಿ ಮತ್ತು ಅಮಿತ್ ಶಾ ವಿರುದ್ಧ ಕೇಳಿ ಬಂದ ನೀತಿ ಸಂಹಿತೆ ಉಲ್ಲಂಘನೆಯ ಎಲ್ಲಾ ದೂರುಗಳ ವಿಚಾರದಲ್ಲಿ ಮೂವರು ಆಯಕ್ತರು ತ್ರಿಸದಸ್ಯ ನ್ಯಾಯಮಂಡಳಿ ಕ್ಲೀನ್ ಚಿಟ್ ನೀಡಿದ್ದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿತ್ತು.

ಏಪ್ರಿಲ್ 21ರಂದು ಗುಜರಾತ್‍ನ ಪಟಣ್‍ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಾ ಮೋದಿಯವರು “ನಮ್ಮ ಸರ್ಕಾರ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರಿಂದಲೇ ಅದು ನಮ್ಮ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಬಿಟ್ಟುಕಳಿಸಿತ್ತು” ಎಂದು ಹೇಳುವ ಮೂಲಕ ಸೇನೆಯನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದರು. ಈ ಕುರಿತು ವಿಚಾರಣೆ ನಡೆಸಿದ ಚುನಾವಣಾ ಆಯೋಗ ಮೇ 4ರಂದು ಇದು ನೀತಿ ಸಂಹಿತೆಯ ಉಲ್ಲಂಘನೆಯಲ್ಲ ಎಂದು ಕ್ಲೀನ್ ಚಿಟ್ ನೀಡಿತ್ತು.

ಅದು, ಹೀಗೆ ಮೋದಿಯವರಿಗೆ ಕೊಟ್ಟ ಆರನೇ ಕ್ಲಿನ್‍ಚಿಟ್ ಆಗಿತ್ತು. ಇದಕ್ಕೂ ಮೊದಲು ಅವರು ನಾಂದೇಡ್‍ನಲ್ಲಿ ಮಾಡಿದ್ದ ಭಾಷಣದಲ್ಲಿ “ಕಾಂಗ್ರೆಸ್ ಒಂದು ಮುಳುಗುತ್ತಿರುವ ಟೈಟಾನಿಕ್” ಎಂದು ಉಲ್ಲೇಖಿಸಿದ್ದು ಸಹಾ ನೀತಿ ಸಂಹಿತೆ ಉಲ್ಲಂಘನೆಯಲ್ಲ ಎಂದು ಆಯೋಗ ಅಭಿಪ್ರಾಯ ಪಟ್ಟಿತ್ತು. ಏಪ್ರಿಲ್ 1ನೇ ತಾರೀಕು ವಾದ್ರಾದಲ್ಲಿ ಭಾಷಣ ಮಾಡುತ್ತಾ ರಾಹುಲ್ ಗಾಂಧಿ ಅಲ್ಪಸಂಖ್ಯಾತರು (ಮುಸ್ಲಿಂ) ಹೆಚ್ಚಾಗಿರುವ ಕೇರಳದ ವಯನಾಡಿನಲ್ಲಿ ಸ್ಪರ್ಧಿಸಿದ್ದನ್ನು ಮೋದಿ ಧಾರ್ಮಿಕ ತುಲನೆಯಲ್ಲಿ ಮತಾಡಿದ್ದಕ್ಕೂ ಆಯೋಗ ಕ್ಲೀನ್ ಚಿಟ್ ನೀಡಿತ್ತು. ಜೊತೆಗೆ, `ಮೊದಲ ಬಾರಿಗೆ ಮತ ಚಲಾಯಿಸುತ್ತಿರುವವರು ತಮ್ಮ ಮೊದಲ ಮತವನ್ನು ಪುಲ್ವಾಮಾದಲ್ಲಿ ಹುತಾತ್ಮರಾದವರಿಗೆ ಸಲ್ಲಿಸಲಾರರೆ?’ ಎಂದು ಮಾಡಿದ್ದ ಮೋದಿ ಭಾಷಣಕ್ಕೂ ಕ್ಲೀನ್‍ಚಿಟ್ ಪ್ರಾಪ್ತವಾಗಿತ್ತು.

ಈ ಎಲ್ಲಾ ವಿಚಾರಣೆಗಳ ಸಂದರ್ಭದಲ್ಲಿ ಅಶೋಕ್ ಲಾವಸಾ ಅವರು ಕ್ಲೀನ್ ಚಿಟ್ ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿ ತಮ್ಮ ವಾದ ಮಂಡಿಸಿದ್ದರು ಎನ್ನಲಾಗಿದೆ. ಆ ವಾದವನ್ನು ಅಂತಿಮ ಆದೇಶದಲ್ಲಿ ಉಲ್ಲೇಖಿಸಿರಲಿಲ್ಲ. ಅದೇ ಅವರ ಆಕ್ಷೇಪಣೆ.

ಈ ಕುರಿತು ಮುಖ್ಯ ಚುನಾವಣಾ ಆಯುಕ್ತ ಸನೀಲ್ ಅರೋರಾ ಅವರನ್ನು ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದಾಗ “ಇದು ಚುನಾವಣೆ ನಡೆಯುತ್ತಿರುವ ಸಂದರ್ಭವಾಗಿರುವುದರಿಂದ ಇಂಥಾ ಚರ್ಚೆಯನ್ನು ಮುಂದುವರೆಸುವುದು ನನಗೆ ಇಷ್ಟವಿಲ್ಲ. ಈ ಹಂತದಲ್ಲಿ, ಮೌನವಾಗಿರುವುದು ನಿಜಕ್ಕೂ ತ್ರಾಸದಾಯಕ. ಆದರೂ ಚುನಾವಣೆಗಳು ಸುಸೂತ್ರವಾಗಿ ನಡೆಯಬೇಕೆಂಬ ಕಾರಣಕ್ಕೆ ನಾನು ಮೌನವಾಗಿರುತ್ತೇನೆ” ಎಂದಿದ್ದಾರೆ.

ಸುನೀಲ್ ಅರೋರ

ಜೊತೆಗೆ, “ಲಾವಸಾ ಅವರ ವಾದ ನನ್ನ ಗಮನಕ್ಕೆ ಬಂದಿದೆ. ಚುನಾವಣಾ ನೀತಿ ಸಂಹಿತೆಗೆ ಸಂಬಂಧಿಸಿದ ದೂರುಗಳ ತೀರ್ಪು `ಎಕ್ಸಿಕ್ಯೂಟಿವ್ ತೀರ್ಮಾನ’ಗಳಾಗಿರುತ್ತವೆಯೇ `ಕ್ವಾಸಿಜ್ಯುಡಿಸಿಯಲ್’ ತೀರ್ಮಾನಗಳಲ್ಲ. ಅವರು ಹೇಳುವಂತೆ ಅಲ್ಪಮತ ವಾದವನ್ನು ಉಲ್ಲೇಖಿಸುವ ಅವಕಾಶ ಕ್ವಾಸಿ ಜ್ಯುಡಿಸಿಯಲ್ ತೀರ್ಮಾನಗಳಲ್ಲಿ ಸಾಧ್ಯವಿದೆ, ಆದರೆ ಎಕ್ಸಿಕ್ಯೂಟಿವ್ ತೀರ್ಮಾನಗಳಲ್ಲಿ ಅಲ್ಲ” ಎಂದು ಸ್ಪಷ್ಟಣೆ ನೀಡಿದ್ದಾರೆ.

ಚುನಾವಣಾ ಆಯೋಗದ ಆಂತರಿಕ ಕಾನೂನುಗಳ ದೃಷ್ಟಿಯಲ್ಲಿ, ಯಾವುದೇ ಪ್ರಕರಣದ ವಿಚಾರಣೆಯ ನಂತರ ಬಾಧಿತ ಪಕ್ಷಗಳಿಗೆ ತಮ್ಮ ದೂರುಗಳಿಗೆ ಪೂರಕವಾದ ಸಾಕ್ಷ್ಯಗಳನ್ನು ಸಲ್ಲಿಸಲು ಅವಕಾಶ ಮಾಡಿಕೊಟ್ಟು ಒಂದು ಸಂಪೂರ್ಣ ತನಿಖೆಗೆ ಆದೇಶಿಸುವ ಸಾಧ್ಯತೆಯಿರುವ ಪ್ರಕರಣಗಳನ್ನು ಕ್ವಾಸಿಜ್ಯುಡಿಸಿಯಲ್ ಪ್ರಕರಣಗಳೆಂದು ಪರಿಗಣಿಸಲಾಗುತ್ತದೆ. ಆದರೆ ಚುನಾವಣಾ ನೀತಿ ಸಂಹಿತೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಅಂತಹ ತನಿಖೆಯ ಅವಶ್ಯಕತೆ ಇರುವುದಿಲ್ಲ, ಬದಲಿಗೆ ಪ್ರಾಥಮಿಕ ಸಾಕ್ಷ್ಯಗಳನ್ನು ಆಧರಿಸಿ, ಚುನಾವಣೆ ಮುಗಿಯುವುದರೊಳಗೇ ಬಾಧಿತವಾಗುವಂತೆ ಸಂಬಂಧಪಟ್ಟ ವ್ಯಕ್ತಿ ಅಥವಾ ಪ್ರಕರಣಕ್ಕೆ ಸೂಕ್ತ ಶಿಕ್ಷೆ, ನಿರ್ಬಂಧ ಹೇರಲಾಗುವುದು. ಹಾಗಾಗಿ ಅವು `ಎಕ್ಸಿಕ್ಯೂಟಿವ್ ತೀರ್ಪು’ಗಳು ಎನಿಸಿಕೊಳ್ಳುತ್ತವೆ. ಹಾಗಾಗಿ ಇಂಥಾ ಎಕ್ಸಿಕ್ಯೂಟಿವ್ ತೀರ್ಪುಗಳಲ್ಲಿ `ಅಲ್ಪಮತ’ದ ವಾದವನ್ನೂ ಉಲ್ಲೇಖಿಸಬೇಕೆಂಬ ನಿಯಮವಿಲ್ಲ ಎಂಬುದು ಚುನಾವಣಾ ಆಯೋಗದ ವಾದ.

ಇದನ್ನು ಓದಿ: ಚುನಾವಣಾ ನೀತಿಸಂಹಿತೆಯನ್ನೇ ಧಿಕ್ಕರಿಸಿದ ‘ಮೋದಿ’ ಸಿನಿಮಾ ತಂಡದ ಬೆನ್ನಿಗೆ ಯಾರಿದ್ದಾರೆ?

ಅದೇನೆ ಇರಲಿ, ಚುನಾವಣಾ ಆಯೋಗ ಏಕಪಕ್ಷೀಯವಾಗಿ ವರ್ತಿಸುತ್ತಿದೆ ಎಂಬ ಸಾರ್ವಜನಿಕ ಅಭಿಪ್ರಾಯ ದಟ್ಟವಾಗುತ್ತಿರುವ ಸಮಯದಲ್ಲೇ ಈ ಪ್ರಕರಣ ಹೊರಬಂದಿರುವುದು ಇಡೀ ಆಯೋಗದ ಪಾರದರ್ಶಕ, ಪ್ರಾಮಾಣಿಕತೆಗಳನ್ನೆ ಪ್ರಶ್ನಿಸುವಂತೆ ಮಾಡಿದೆ. ಕಳೆದ ವರ್ಷದ ಡಿಸೆಂಬರ್ 2ರಂದು ಮೋದಿಯವರ ಸರ್ಕಾರ ಸುನೀಲ್ ಅರೋರಾ ಅವರನ್ನು ಮುಖ್ಯ ಚುನಾವಣಾಧಿಕಾರಿಯಾಗಿ ನೇಮಕ ಮಾಡಿದಾಗಲೇ ಹಲವು ಚರ್ಚೆಗಳು ಹುಟ್ಟಿಕೊಂಡಿದ್ದವು. 1980ರ ರಾಜಸ್ಥಾನ್ ಕ್ಯಾಡರ್‍ನ ಐಎಎಸ್ ಅಧಿಕಾರಿಯಾದ ಸನೀಲ್ ಅರೋರಾ ಆಡಳಿತಾತ್ಮಕ ಮೇಲ್ದರ್ಜೆಯ ಹುದ್ದೆಗೇರಿಸಲ್ಪಟ್ಟದ್ದು ಎನ್‍ಡಿಎ ಅಧಿಕಾರದ ಅವಧಿಗಳಲ್ಲೇ. ರಾಜಸ್ಥಾನದ ರಾಜ್ಯ ಸರ್ಕಾರದ ಹುದ್ದೆಗಳಲ್ಲಿದ್ದ ಅರೋರಾ ಅವರನ್ನು 1999ರಲ್ಲಿ ವಾಜಪೇಯಿಯವರ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ನಾಗರಿಕ ವಿಮಾನಯಾನ ಖಾತೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡುವ ಮೂಲಕ ಕೇಂದ್ರ ಸೇವೆಯ ಮೇಲ್ದರ್ಜೆಗೇರಿಸಲಾಗಿತ್ತು. ಅಲ್ಲದೇ ಇಂಡಿಯನ್ ಏರ್‍ಲೈನ್ಸ್‍ನ ಛೀಫ್ ಮ್ಯಾನೇಜಿಂಗ್ ಡೈರೆಕ್ಟರ್ ಆಗಿಯೂ ನೇಮಕಗೊಂಡಿದ್ದರು. ಎನ್‍ಡಿಎ ಸರ್ಕಾರ ಅಧಿಕಾರ ಕಳೆದುಕೊಂಡು ಯುಪಿಎ ಅಧಿಕಾರಕ್ಕೆ ಬಂದ ನಂತರ, ಅರೋರ ಅವರ ಬಿಜೆಪಿ ಸಖ್ಯವನ್ನು ಸೂಕ್ಷ್ಮವಾಗಿ ಗಮನದಲ್ಲಿರಿಸಿಕೊಂಡೇ ಅವರನ್ನು ಕೇಂದ್ರ ಸೇವೆಯಿಂದ ಬಿಡುಗಡೆಗೊಳಿಸಿ ಮರಳಿ ರಾಜಸ್ಥಾನ ರಾಜ್ಯ ಸೇವೆಗೆ ನಿಯೋಜಿಸಲಾಗಿತ್ತು. ಅದಾದ ಒಂದು ದಶಕದ ನಂತರವಷ್ಟೇ ಮೋದಿಯವರು ಅಧಿಕಾರಕ್ಕೇರಿದ ತರುವಾಯ 2017ರಲ್ಲಿ ಅವರನ್ನು ರಾಜ್ಯ ಸೇವೆಯಿಂದ ಮತ್ತೆ ಕೇಂದ್ರ ಸೇವೆಗೆ ನಿಯೋಜಿಸಿಕೊಂಡು ಚುನಾವಣಾ ಆಯೋಗದ ಆಯುಕ್ತ ಹುದ್ದೆ ನೀಡಲಾಗಿತ್ತು.

ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಸುಪ್ರೀಂ ಕೋರ್ಟ್, ಸಿಬಿಐ, ಆರ್‍ಬಿಐನಂತಹ ಸಾಂವಿಧಾನಿಕ ಸಂಸ್ಥೆಗಳು ತಮ್ಮ ಆಂತರಿಕ ಕಚ್ಚಾಟದಿಂದ ಬೀದಿಗೆ ಬೀಳುತ್ತಿರುವ ಸಾಲಿಗೆ ಚುನಾವಣಾ ಆಯೋಗವೂ ಸೇರ್ಪಡೆಗೊಂಡಂತಾಗಿದೆ.

ಇದನ್ನು ಓದಿ: ಪ್ರಗ್ಯಾಸಿಂಗ್ ಸರಿ, ತೇಜ್‍ಬಹಾದ್ದೂರ್ ತಪ್ಪು: ಹುಟ್ಟು ಹಾಕಿರುವ ಪ್ರಶ್ನೆಗಳು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...