Homeಮುಖಪುಟಭೀಮಾ ಕೋರೆಗಾಂವ್ ಪ್ರಕರಣ: ಸಾಕ್ಷ್ಯ ಸಂಗ್ರಹಿಸಲು ಹೆಣಗುತ್ತಿರುವ NIA!

ಭೀಮಾ ಕೋರೆಗಾಂವ್ ಪ್ರಕರಣ: ಸಾಕ್ಷ್ಯ ಸಂಗ್ರಹಿಸಲು ಹೆಣಗುತ್ತಿರುವ NIA!

ಈಗಾಗಲೇ ಜೈಲಿನಲ್ಲಿರುವವರ ವಿರುದ್ಧ ಸುಳ್ಳು ಸಾಕ್ಷಿ ಹೇಳಿದ್ದಲ್ಲಿ ತಮ್ಮನ್ನು ಬಂಧಿಸುವುದಿಲ್ಲ ಎಂದು ಎನ್ಐಎ ಬ್ಲಾಕ್ ಮೇಲ್ ಮಾಡಿತ್ತು ಎಂದು ಮೊನ್ನೆ ಬಂಧನಕ್ಕೊಳಗಾದ ಕಬೀರ್ ಕಲಾ ಮಂಚ್ ಸದಸ್ಯರು ಹೇಳಿದ್ದಾರೆ.

- Advertisement -
- Advertisement -

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಹಲವಾರು ಜನರನ್ನು ಬಂಧಿಸಲಾಗಿದ್ದು, ತನಿಖೆಗೆ ಸಾಕ್ಷ್ಯ ಸಂಗ್ರಹಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹರಸಾಹಸ ಪಡುತ್ತಿರುವಂತೆ ಕಾಣುತ್ತಿದೆ ಎಂದು ಸ್ಕ್ರಾಲ್.ಇನ್ ವರದಿ ಮಾಡಿದೆ.

ದೇಶದ ಹಲವಾರು ಚಿಂತಕರು, ವಿದ್ವಾಂಸರು ಮತ್ತು ಹೋರಾಟಗಾರರನ್ನು ಇದೇ ಕೇಸಿನಲ್ಲಿ ಬಂಧಿಸಿರುವ ಸದರಿ ಪ್ರಕರಣದಲ್ಲಿ ಸಂಘಪರಿವಾರದ ಸಂಘಟನೆಯೊಂದು ಗಲಭೆಗೆ ಕರೆ ನೀಡಿ, ಭೀಮಾ ಕೊರೆಗಾಂವ್‌ನಲ್ಲಿ ಕೊರೆಗಾಂವ್ ವೀರರನ್ನು ಸ್ಮರಿಸಿ ವಾಪಸ್ಸು ಬರುತ್ತಿರುವವರ ಮೇಲೆ ಹಿಂಸಾಚಾರ ನಡೆದಿತ್ತು. ಆದರೆ, ಅದರ ಕೆಲವು ದಿನಗಳ ನಂತರ ಹಲ್ಲೆಗೊಳಗಾದ ಸಂಘಟನೆಯೇ ಹಿಂಸೆಗೆ ಕಾರಣವೆಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು.

ಇದೆಲ್ಲಾ ನಡೆದಾಗ ಮಹಾರಾಷ್ಟ್ರದಲ್ಲಿಯೂ ಬಿಜೆಪಿ ಸರ್ಕಾರವೇ ಅಧಿಕಾರಲ್ಲಿತ್ತು. ಅಲ್ಲಿಂದ ಮುಂದೆ, ಇದ್ದಕ್ಕಿದ್ದಂತೆ ಈ ಹಿಂಸಾಚಾರಕ್ಕೆ (ಈಗ ಬಂಧಿತವಾಗಿರುವ) ವಿದ್ವಾಂಸರು ಕಾರಣವೆಂದು ಇನ್ನೊಂದು ಪ್ರಕರಣ ದಾಖಲಿಸಿ ಬಂಧನಗಳು ಆರಂಭವಾದವು. ದೇಶದ ಮತ್ತು ಅಂತರ್ರಾಷ್ಟ್ರೀಯ ಮಟ್ಟದ ಹಲವಾರು ಚಿಂತಕರು ಈ ಬಂಧನಗಳನ್ನು ಖಂಡಿಸಿದ್ದರು. ಈಗ ಅದರ ಮುಂದುವರಿಕೆಯಾಗಿ ಈ ಬಂಧನಗಳು ನಡೆದಿವೆ.

ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂದಿಸಿದಂತೆ ಸೆಪ್ಟೆಂಬರ್ 7 ರಂದು, NIA ಕಬೀರ್ ಕಲಾ ಮಂಚ್ ಸಾಂಸ್ಕೃತಿಕ ಸಂಘಟನೆಯ ಇಬ್ಬರು ಸದಸ್ಯರಾದ ಸಾಗರ್ ಗೋರ್ಖೆ ಮತ್ತು ರಮೇಶ್ ಗೈಚೋರ್ ಅವರನ್ನು ಬಂಧಿಸಿತ್ತು. ಒಂದು ದಿನದ ನಂತರ, ಜ್ಯೋತಿ ಜಗ್ತಾಪ್ ಎನ್ನುವ ಸಂಘಟನೆಯ ಮತ್ತೊಬ್ಬ ಸದಸ್ಯೆಯನ್ನು ಬಂಧಿಸಲಾಗಿದೆ. NIA ಮಾಡಿರುವ ಇತ್ತೀಚಿನ ಈ ಬಂಧನದಿಂದ, ಪ್ರಕರಣದ ಒಟ್ಟು ಬಂಧನಗಳ ಸಂಖ್ಯೆ 15 ಕ್ಕೆ ಏರಿದೆ. ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹನಿ ಬಾಬು, ಪಾರ್ಥೋ ಸಾರಥಿ ರೇ, ವಿದ್ವಾಂಸ ಕೆ ಸತ್ಯನಾರಾಯಣ, ಪತ್ರಕರ್ತ ಕೆ.ವಿ.ಕುರ್ಮನಾಥ್, ಕಾರ್ಯಕರ್ತ ಗೌತಮ್ ನವಲಖಾ, ಆನಂದ್ ತೇಲ್ದುಂಬ್ಡೆ ಸೇರಿದಂತೆ ಇನ್ನೂ ಕೆಲವರ ಬಂಧನಕ್ಕಾಗಿ UAPA ಕಾಯ್ದೆಯನ್ನು ಬಳಸಿಕೊಂಡಿದೆ.

ಇದನ್ನೂ ಓದಿ: ಭೀಮಾ ಕೋರೆಗಾಂವ್; ಪ್ರಾಧ್ಯಾಪಕರ ಮೇಲಿನ NIA ಕಿರುಕುಳಕ್ಕೆ ವಿದ್ಯಾರ್ಥಿಗಳ ಖಂಡನೆ

ಕಾರ್ಯಕರ್ತರು ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಮಾವೋವಾದಿ) ಭಾಗವಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅವರು ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಯೋಜಿಸಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಸಂಚು ಹೂಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಂಧಿತ 15 ಜನರಲ್ಲಿ, ಸುಧಾ ಭಾರದ್ವಾಜ್ ಮತ್ತು ಶೋಮಾ ಸೇನ್ ಸೇರಿದಂತೆ ಹತ್ತು ಮಂದಿ ಕಾರ್ಯಕರ್ತರು ಎರಡು ವರ್ಷಗಳಿಂದ ಜೈಲಿನಲ್ಲಿದ್ದಾರೆ. ನ್ಯಾಯಾಲಯಗಳು ಅವರಿಗೆ ಜಾಮೀನು ನೀಡಲು ನಿರಾಕರಿಸಿದೆ. ಅವರನ್ನು ಬಿಡುಗಡೆ ಮಾಡಿದರೆ ತನಿಖೆಗೆ ಅಪಾಯವಾಗಬಹುದು ಎಂದು NIA ನ್ಯಾಯಾಲಯಗಳಿಗೆ ತಿಳಿಸಿದೆ.

ಶಿವಸೇನೆ ನೇತೃತ್ವದ ಮೈತ್ರಿಕೂಟದಲ್ಲಿ ಹೊಸದಾಗಿ ಚುನಾಯಿತರಾದ ಮಹಾರಾಷ್ಟ್ರ ಸರ್ಕಾರದ ಇಚ್ಚೆಗೆ ವಿರುದ್ಧವಾಗಿ ಜನವರಿಯಲ್ಲಿ NIA ಈ ಪ್ರಕರಣವನ್ನು ವಹಿಸಿಕೊಂಡಿತ್ತು. ಅದು ಅಧಿಕಾರ ವಹಿಸಿಕೊಳ್ಳುವ ಮೊದಲೇ, ಮಹಾರಾಷ್ಟ್ರ ಪೊಲೀಸರು ಹೇಳಿಕೊಂಡ ಇಮೇಲ್ ಮತ್ತು ಇತರ ಎಲೆಕ್ಟ್ರಾನಿಕ್ ಫೈಲ್‌ಗಳಿಗೆ ಸಂಬಂಧಿಸಿದ ಪ್ರಕರಣದ ಸಾಕ್ಷ್ಯಗಳನ್ನು ಕಾರ್ಯಕರ್ತರಿಂದ ವಶಪಡಿಸಿಕೊಳ್ಳಲಾಗಿತ್ತು. ಆದಾಗ್ಯೂ, ಈ ಸಾಕ್ಷ್ಯವನ್ನು ಸಂಗ್ರಹಿಸಿದ ವಿಧಾನದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಲಾಗಿದೆ.

ತನಿಖಾ ಸಂಸ್ಥೆಗಳು ದಾಖಲೆಗಳನ್ನು ಹಾಳುಮಾಡುತ್ತಿವೆ ಮತ್ತು ತಮ್ಮ ಪ್ರಕರಣವನ್ನು ತನಿಖೆ ನಡೆಸಲು ಅವರು ಅವಲಂಬಿಸಿರುವ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಪ್ರತಿಗಳನ್ನು ಒದಗಿಸಲು ವಿಫಲವಾಗಿವೆ ಎಂದು ಬಂಧಿತರು ಆರೋಪಿಸಿದ್ದಾರೆ.

ಸೆಪ್ಟೆಂಬರ್ 5 ರಂದು, ಕಬೀರ್ ಕಲಾ ಮಂಚ್‌ನ ಗೋರ್ಖೆ ಮತ್ತು ಗೈಚೋರ್ ಅವರು ಬಂಧನಕ್ಕೊಳಗಾಗುವ ಮೊದಲು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು ಅಧಿಕಾರಿಗಳು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದಾರೆ ಎಂಬ ಆರೋಪವನ್ನು ಸಾಬೀತುಪಡಿಸಿದ್ದಾರೆ. ಈಗಾಗಲೇ ಜೈಲಿನಲ್ಲಿರುವವರ ವಿರುದ್ಧ ಸುಳ್ಳು ಸಾಕ್ಷಿ ಹೇಳಿದ್ದಲ್ಲಿ ತಮ್ಮನ್ನು ಬಂಧಿಸುವುದಿಲ್ಲ ಎಂದು ಎನ್ಐಎ ಬ್ಲಾಕ್ ಮೇಲ್ ಮಾಡಿತ್ತು ಎಂದು ಆ ಇಬ್ಬರು ವೀಡಿಯೊದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೆ ಹೋರಾಟಗಾರ ಕೆ.ಎಲ್ ಅಶೋಕ್‌ರನ್ನು ನಿಂದಿಸಿದ ಕೊಪ್ಪ ಪೊಲೀಸರು: ಪೇದೆ, ಎಸ್‌ಐ ಅಮಾನತ್ತಿಗೆ ಆಗ್ರಹ

NIA, ಕಾರ್ಯಕರ್ತರ ವಿರುದ್ಧ ಯಾವುದೇ ವಿಶ್ವಾಸಾರ್ಹ ಪುರಾವೆಗಳನ್ನು ಕಂಡುಹಿಡಿಯಲು ಹೆಣಗಾಡುತ್ತಿರುವ ಕಾರಣ, ಅದು ಬೆದರಿಕೆಯನ್ನು ಆಶ್ರಯಿಸಿದೆ ಎಂದು ತೋರುತ್ತದೆ. NIA ಈ ಪ್ರಕರಣವನ್ನು ವಹಿಸಿಕೊಂಡು ಒಂಬತ್ತು ತಿಂಗಳುಗಳಾಗಿದ್ದರೂ, ಪುಣೆ ಪೊಲೀಸರು ಸಂಗ್ರಹಿಸಿದ ಸಾಕ್ಷ್ಯ ಗಳ ಮೇಲೆಯೇ ಇನ್ನೂ ಅವಲಂಬಿತವಾಗಿದೆ. ಉದಾಹರಣೆಗೆ, ಈ ವರ್ಷದ ಆರಂಭದಲ್ಲಿ ಕಾರ್ಯಕರ್ತರಾದ ಸುಧಾ ಭಾರದ್ವಾಜ್, ವರವರ ರಾವ್ ಮತ್ತು ಶೋಮಾ ಸೇನ್ ಅವರ ಜಾಮೀನು ಅರ್ಜಿಗಳನ್ನು ವಿರೋಧಿಸುವ NIA ಅಫಿಡವಿಟ್‌ಗಳ ವಿಷಯಗಳು 2018 ಮತ್ತು 2019 ರಲ್ಲಿ ಪುಣೆ ಪೊಲೀಸರ ಆವಿಷ್ಕಾರಗಳಿಗೆ ಹೋಲುತ್ತವೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ NIA ಸರಣಿ ಬಂಧನಗಳೊಂದಿಗೆ ಮುಂದುವರೆದಿದ್ದರೂ ಸಹ, ಈ ಅನೇಕ ಬಂಧನಗಳಲ್ಲಿ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸುವುದನ್ನು ತಪ್ಪಿಸಲು, ಈ ಸಾಂಕ್ರಾಮಿಕ ಪರಿಸ್ಥಿತಿಯನ್ನು ಬಳಸಿಕೊಂಡಿದೆ. ಜುಲೈನಲ್ಲಿ, ಆನಂದ್ ತೇಲ್ದುಂಬ್ಡೆ ಮತ್ತು ನವಲಖಾ ವಿರುದ್ಧ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಲು NIA 90 ದಿನಗಳ ವಿಸ್ತರಣೆಯನ್ನು ತೆಗೆದುಕೊಂಡಿದೆ.

NIAಯಿಂದ ಸ್ಪಷ್ಟವಾದ ಸಾಕ್ಷ್ಯಾಧಾರಗಳ ಕೊರತೆಯ ಹೊರತಾಗಿಯೂ, ನ್ಯಾಯಾಲಯಗಳು ಕಾರ್ಯಕರ್ತರಿಗೆ ಜಾಮೀನು ನೀಡಿಲ್ಲ. ಅವರಲ್ಲಿ ಕೆಲವರು ಎರಡು ವರ್ಷಗಳಿಂದ ಜೈಲಿನಲ್ಲಿದ್ದಾರೆ. NIAಯನ್ನು ಪ್ರಶ್ನಿಸಲು ನ್ಯಾಯಾಲಯಗಳು ಮಧ್ಯಪ್ರವೇಶಿಸದಿದ್ದರೆ, ಅದರ ಬೆದರಿಕೆಯ ತಂತ್ರವು ಅಬಾಧಿತವಾಗಿ ಮುಂದುವರಿದು, ಸಂಪೂರ್ಣ ವಿಚಾರಣೆಯನ್ನು ಸಮರ್ಥಿಸಿಕೊಳ್ಳುತ್ತದೆ.


ಇದನ್ನೂ ಓದಿ: ಭೀಮಾ ಕೋರೆಗಾಂವ್ ಪ್ರಕರಣ: ಮತ್ತೆ ಮೂವರನ್ನು ಬಂಧಿಸಿದ NIA

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಲಿವ್ ಇನ್ ರಿಲೇಷನ್ ಭಾರತಕ್ಕೆ ಆಮದು ಸಂಸ್ಕೃತಿ, ಕಳಂಕ’; ಛತ್ತೀಸ್‌ಗಢ ಹೈಕೋರ್ಟ್

0
'ಲಿವ್ ಇನ್ ಸಂಬಂಧವು ಭಾರತೀಯ ತತ್ವಗಳ ಸಾಮಾನ್ಯ ನಿರೀಕ್ಷೆಗಳಿಗೆ ವಿರುದ್ಧವಾದ ಆಮದು ತತ್ವವಾಗಿದೆ; ದೇಶದ ಸಂಸ್ಕೃತಿಯಲ್ಲಿ ಅದನ್ನು ಇನ್ನೂ ಕಳಂಕ ಎಂದು ಪರಿಗಣಿಸಲಾಗಿದೆ' ಎಂದು ಛತ್ತೀಸ್‌ಗಢ ಹೈಕೋರ್ಟ್ ಹೇಳಿದೆ. ಲಿವ್ ಇನ್ ಸಂಬಂಧದಿಂದ ಜನಿಸಿದ...